ಸೌದಿ ಅರೇಬಿಯಾದ ಕಿಂಗ್ ಸೌದ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿರುವ ಕನಕರಾಜು ಮೂಲತಃ ಚಿತ್ರದುರ್ಗ ಜಿಲ್ಲೆಯ ಆರನಕಟ್ಟೆಯವರು.ಅರಬಿ ನಾಡಿನ ಕುರಿತ ಅವರ ಕಥಾ ಪ್ರಸಂಗಗಳು ಇನ್ನು ಮುಂದೆ ಕೆಂದಸಂಪಿಗೆಯಲ್ಲಿ ನಿಯಮತವಾಗಿ ಕಾಣಿಸಿಕೊಳ್ಳಲಿವೆ.
ಲಿಬಿಯಾದಲ್ಲಿ ಒಂದು ವರ್ಷ ದುಡಿದ ನಾನು ಸೌದಿ ಅರೇಬಿಯಾಕ್ಕೆ ಹೊರಟಾಗ ಕೆಲವು ಗೆಳೆಯರು ಹುಬ್ಬೇರಿಸಿದರು. ಅವರ ಪ್ರಕಾರ ನಾನು ಹೋಗುತ್ತಿದ್ದುದು ಕಟ್ಟರ್ ಸಂಪ್ರದಾಯವಾದಿ ಕಠಿಣ ಕಾನೂನುಗಳ ದೇಶವೊಂದಕ್ಕೆ. ಅವರ ಅಭಿಪ್ರಾಯಗಳನ್ನು ಕೇಳಿ ನಕ್ಕು ಸುಮ್ಮನಾಗಿದ್ದೆ. ಈಜಿಪ್ಟಿನ ಬರಹಗಾರ್ತಿಯಾದ ನವ್ವಲ್ ಅಲ್ ಸಾದವಿಯ ಒಂದು ಬರಹ ನಾ ಲಿಬಿಯಾದಲ್ಲಿದ್ದಾಗ ಸಿಕ್ಕಿತ್ತು. ಆಕೆಯ ಒಂದು ಮಾತನ್ನು ನಾ ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದೆ. ಅದು ಹೀಗಿದೆ: "ನನಗೆ ಏನೊಂದು ಬೇಕಾಗಿಲ್ಲ. ನನಗೆ ಯಾವುದರಲ್ಲೂ ನಂಬಿಕೆಯಿಲ್ಲ. ನನಗೆ ಯಾವುದರ ಮೇಲೂ ಭಯವಿಲ್ಲ. ಆದ್ದರಿಂದಲೆ ನಾ ಸ್ವತಂತ್ರಳಾಗಿದ್ದೇನೆ. ಏಕೆಂದರೆ, ಬದುಕಿನಲ್ಲಿ ನಮ್ಮ ಆಸೆಗಳು, ನಂಬಿಕೆಗಳು, ಭಯಗಳು ನಮ್ಮನ್ನು ಗುಲಾಮರನ್ನಾಗಿಸುತ್ತವೆ". ಆಕೆ ದಿಟ್ಟ ಬರಹಗಾತಿ. ಆಕೆಯ ಬರಹಗಳನ್ನು ಓದಲು ಹುಡುಕಿ ಸುಸ್ತಾಗಿ ಆಕೆಯನ್ನು ಮರತೇ ಹೋದನೇನೋ ಎನ್ನುವಷ್ಟರಲ್ಲಿ ಮೊನ್ನೆ ಚೆನ್ನೈನಿಂದ ತರಿಸಿಕೊಂಡ ತಮಿಳಿನ ನವ್ಯೋತ್ತರ ಬರಹಗಾರರಾದ ಚಾರು ನಿವೇದಿತರ ಪುಸ್ತಕಗಳಲ್ಲಿ "ಊರಿನ್ ಮಿಗ ಅಳಗಾನ ಪೆಣ್" ( ಊರಿನ ಅತಿ ಸುಂದರ ಹೆಣ್ಣು) ಎಂಬ ಅನುವಾದಿತ ಕಥಾ ಸಂಕಲನದಲ್ಲಿ ಸಾದವಿಯನ್ನು ಕಂಡು ಹಿರಿಹಿರಿ ಹಿಗ್ಗಿದೆ....