ನಾನು ನನ್ನ ರಾಯಭಾರಿ ಹುದ್ದೆಗೆ ರಾಜಿನಾಮೆ ನೀಡಿದ ಮೇಲೆ ೧೯೪೩ರಲ್ಲಿ ಸ್ಯಾಂಟಿಯಾಗೊಗೆ ಮರಳಿದೆ. ಅಲ್ಲಿ ಕಂತಿನ ಮೇಲೆ ಮನೆಯೊಂದನ್ನು ಕೊಂಡುಕೊಂಡೆ. ಸುತ್ತಲೂ ಬೃಹತ್ ಮರಗಳಿಂದ ಕೂಡಿದ್ದ ಆ ಮನೆಯಲ್ಲಿ ನನ್ನ ಪುಸ್ತಕಗಳನ್ನೆಲ್ಲಾ ಜೋಡಿಸಿ ಮತ್ತೊಮ್ಮೆ ಕಷ್ಟದ ಬದುಕಿಗೆ ಅಣಿಯಾದೆ.
ನನ್ನ ದೇಶ ಹಿಂದಿನಂತೆಯೇ ಹಾಗೆಯೇ ಇತ್ತು. ಅದರ ಚಂದ, ಅಲ್ಲಿನ ಚಂದದ ಹೆಂಗಸರು, ಪ್ರಕೃತಿಯ ಮನಮೋಹಕ ರಮ್ಯತೆ, ಕ್ಲಬ್ಬುಗಳಲ್ಲಿ ಮೋಜು ಮಾಡುವ ಮಂದಿ ಒಂದೆಡೆಗಾದರೆ, ಮತ್ತೊಂದೆಡೆ ಕಿತ್ತು ತಿನ್ನುವ ಬಡತನವನ್ನೇ ಹಾಸಿ ಮಲಗಿದ್ದ ಅದೇ ಹಳ್ಳಿಗಳು, ಅದೇ ಗಣಿ ಪ್ರಾಂತ್ಯಗಳು. ಇವೆರೆಡರ ನಡುವೆ ಒಂದು ನನ್ನ ಆಯ್ಕೆಯಾಗಬೇಕಿತ್ತು. ಆಗ ನನ್ನ ಆಯ್ಕೆ ಗಣಿ ಪ್ರಾಂತ್ಯವಾಗಿತ್ತು.
ಕಾಲಿಗೆ ಚಪ್ಪಲಿಗಳಿಲ್ಲದ, ಸ್ಕೂಲುಗಳ ಮುಖವನ್ನೇ ಕಾಣದ ಇದೇ ಈ ಬಡ ಜನರು ೧೯೪೫ರಲ್ಲಿ ನನ್ನನ್ನು ಸೆನೆಟರ್ ಆಗಿ ಆಯ್ಕೆ ಮಾಡಿದರು. ಚಿಲಿಯ ಅತ್ಯಂತ ಅನಾದಾರಕ್ಕೊಳಗಾಗಿದ್ದ ತಾಮ್ರ ಮತ್ತು ನೈಟ್ರೇಟ್ ಗಣಿ ಪ್ರಾಂತ್ಯದ ಸಾವಿರಾರು ಜನರು ನನ್ನ ಪರವಾಗಿ ಮತ ಚಲಾಯಿಸಿ ಗೆಲ್ಲಿಸಿದ್ದರ ಬಗ್ಗೆ ನನಗೆ ಇಂದಿಗೂ ತುಂಬಾ ಅಭಿಮಾನವಿದೆ.
ಈ ಪಾಂಪಾ ಗಣಿಗಾರಿಕೆಯ ನೆಲದಲ್ಲಿ ಬದುಕುವುದಿರಲಿ ತಿರುಗಾಡುವುದೇ ತುಂಬಾ ಪ್ರಾಯಾಸದ ಸಂಗತಿ. ಹೆಚ್ಚೂ ಕಡಿಮೆ ಕಳೆದ ಅರ್ಧ ಶತಮಾನದಿಂದಲೂ ಅಲ್ಲಿ ಮಳೆಯಾಗಿಲ್ಲ. ಸಾಲದ್ದಕ್ಕೆ ಆ ಸುಡುವ ಮರಳಗಾಡು ಅಲ್ಲಿನ ಜನರನ್ನು ಹೈರಾಣಾಗಿಸಿದೆ. ಆ ಕಮರಿದ ಮುಖಛರ್ಯೆ, ಅವರ ಆ ಏಕಾಂತ ಹಾಗೂ ಅನಾದಾರಕ್ಕೊಳಪಟ್ಟ ಭಾವ, ಅವರ ಕಪ್ಪು ಕಣ್ಣುಗಳೊಳಗಿನ ನಿರಂತರ ಭಾವವಾಗಿಬಿಟ್ಟಿದೆ....