“ಅಶೋಕರೇ ಲಕ್ಷದ್ವೀಪಗ್ ಬರ್ಪರೇ” ಆ ಸಂಜೆ ಅಂಗಡಿಗೆ ಬಂದ ಪ್ರಸನ್ನ ಅರೆ-ಕುಶಾಲಿನಲ್ಲೇ ಕೇಳಿದ. ನಾನೂ ಅಷ್ಟೇ ಹಗುರವಾಗಿ “ಹಾಂ, ಪೋಯಿ” ಎಂದವನು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಸರಕಾರವೇ ನಡೆಸುತ್ತಿರುವ ಪ್ರವಾಸೋದ್ಯಮ ಇಲಾಖೆಯ  ‘ಸಮುದ್ರಂ’ ಎಂಬ ಪೂರ್ವಯೋಜಿತ (ಮತ್ತು ಪೂರ್ಣ ಯೋಜಿತವೂ ಹೌದು) ಪ್ರವಾಸಕ್ಕೆ ನಾವು ಅತ್ಯುನ್ನತ ವಜ್ರ ವರ್ಗದಲ್ಲಿ ತಲಾ ರೂ. ೨೦,೮೫೦ ತುಂಬಿಯೇ ಬಿಟ್ಟೆ. ವಿವಿಧೆಡೆಗಳಿಂದ ಸ್ವಂತ ವ್ಯವಸ್ಥೆಯಲ್ಲಿ (ಮತ್ತು ಖರ್ಚಿನಲ್ಲಿ) ಎರ್ನಾಕುಲಂ ಉರುಫ್ ಕೊಚ್ಚಿ ತಲಪಿದವರಿಗೆ ಹದಿನೇಳರ ಬೆಳಿಗ್ಗೆಯಿಂದ ಇಪ್ಪತ್ತೊಂದರ ಬೆಳಗ್ಗಿನವರೆಗೆ ಯಾನ, ದೃಶ್ಯ, ಉಣಿಸು ಮತ್ತು ವಾಸ ಇಲಾಖೆಯದೇ. ಮತ್ತು ಪ್ರವಾಸಿಗಳಿಗೆ ತೀರಾ ನಿಯಮಿತ ವಸತಿ ಮತ್ತು ಸಾರಿಗೆ ವ್ಯವಸ್ಥೆಯಿರುವ ಲಕ್ಷದ್ವೀಪ ದರ್ಶನಕ್ಕೆ ಈ ಕೆಲವೇ ಸಾವಿರ ರೂಪಾಯಿಗಳ ಯೋಜನೆ ನಿಜದಲ್ಲಿ ಅಪೇಕ್ಷಣೀಯವೂ ಹೌದು. 

ಲಕ್ಷದ್ವೀಪ ನೈಜಾರ್ಥದಲ್ಲಿ ದ್ವೀಪಗಳಲ್ಲ (ಮಣ್ಣು ಕಲ್ಲಿನ ಭೂಭಾಗ ಎಂಬ ಅರ್ಥದಲ್ಲಿ), ಕೇವಲ ಹವಳದ ದಿಬ್ಬಗಳು (atolls). ಶುದ್ಧಾಶುದ್ಧಗಳನ್ನು ಎಣಿಸದಿದ್ದರೆ ಇಲ್ಲಿ ಸುಮಾರು ಮೂವತ್ತಾರು ದ್ವೀಪಗಳಿವೆ. ಬಿಡಿಬಿಡಿಸಿದರೆ ಹನ್ನೆರಡರಷ್ಟೇ ಮನುಷ್ಯ ವಾಸಯೋಗ್ಯ. ಅದರಲ್ಲೂ ಹತ್ತರಲ್ಲಿ ಮಾತ್ರ ಇಂದು ಜನವಸತಿ ಇದೆ. ಉಳಿದವುಗಳಲ್ಲಿ ಕೆಲವು ಕೇವಲ ಮರಳ ತೀರಗಳು, ಮತ್ತುಳಿದವು ಸಮುದ್ರದ ಇಳಿತದ ಸಂದರ್ಭದಲ್ಲಷ್ಟೇ ಪ್ರಕಟವಾಗುವ ಗಟ್ಟಿನೆಲೆಗಳು. ಜನವಸತಿ ಇರುವಲ್ಲೂ ನಮ್ಮ ಯೋಜಕರು ತೋರಿಸಲಿದ್ದದ್ದು ಕೇವಲ ಮೂರು. ಕ್ರಮವಾಗಿ ಕಲ್ಪೆನಿ, ಮಿನಿಕಾಯ್ ಮತ್ತು ದ್ವೀಪ ಸಮೂಹದ ರಾಜಧಾನಿ – ಕವರೆಟ್ಟಿ. ಭಾರತದ ಮುಖ್ಯ ನೆಲದ ಪಶ್ಚಿಮ ಕರಾವಳಿಯ ಸುಮಾರು ಮಂಗಳೂರಿನಿಂದ ಕೊಚ್ಚಿವರೆಗಿನ ಹರಹಿನಲ್ಲಿ ನೇರ ಪಶ್ಚಿಮಕ್ಕೆ ಅರಬ್ಬೀ ಸಮುದ್ರದಲ್ಲಿ ಹರಡಿಕೊಂಡಿರುವ ಇವುಗಳಿಗೆ ಸ್ವತಂತ್ರ ಮಾರಿಷಸ್ ದ್ವೀಪರಾಜ್ಯ ನೆರೆಮನೆ. ಕೊಚ್ಚಿಯಿಂದ ಸುಮಾರು ಹನ್ನೆರಡು ಗಂಟೆಗಳ ಯಾನ ಸಮಯದ ದೂರದಲ್ಲಿದೆ ಕವರೆಟ್ಟಿ (ಇನ್ನೂರಕ್ಕೂ ಮಿಕ್ಕು ಕಿಮೀ). ಹಾಗೇ ಪರಸ್ಪರ ಅಂತರದಲ್ಲೂ ಈ ದ್ವೀಪಗಳು ಆರೆಂಟು ಗಂಟೆಯ ಯಾನ ಸಮಯ ಕೇಳುತ್ತವೆ. ತೀರಾ ಸಣ್ಣ ಜನಸಂಖ್ಯೆ ಮತ್ತು ಯಾವುದೇ ಮಹಾ ಆರ್ಥಿಕ ವಹಿವಾಟಿನ ಜಂಝಡಗಳಿಲ್ಲದ  ಈ ನಾಡಿಗೆ ಸಹಜವಾಗಿ ಸಾರಿಗೆ ಮತ್ತು ಆತಿಥ್ಯ ವ್ಯವಸ್ಥೆ ತೀರಾ ಪ್ರಾಥಮಿಕ ಹಂತದಲ್ಲೇ ಇರುವುದರಿಂದ ನಮಗೆ ಹೆಚ್ಚಿನ ಆಯ್ಕೆಗೆ ಸ್ವಾತಂತ್ರ್ಯವಿಲ್ಲ ಎಂದು ಒಪ್ಪಿಕೊಂಡೇ ಹೊರಟಿದ್ದೆವು.

ಹದಿನಾರರ ಸಂಜೆ ಮಲ್ಬಾರ್ ಎಕ್ಸ್‌ಪ್ರೆಸ್ (ಮಲಬಾರದ ರೈಲು?) ಏರಿ, ಅಪರಾತ್ರಿ ಮೂರೂವರೆಗೆ ಎರ್ನಾಕುಲಂ (ಅಥವಾ ಕೊಚ್ಚಿ) ತಲಪಿದೆವು. ಪ್ರಸನ್ನನ ವ್ಯವಸ್ಥೆಗಳೆಲ್ಲ ಪ್ರಶಸ್ತವಾಗಿದ್ದದ್ದಕ್ಕೆ ಕಾದಿದ್ದ ವ್ಯಾನೇರಿ, ಎಂಜಿ ರಸ್ತೆಯಲ್ಲಿ ಕಾಯ್ದಿರಿಸಿದ್ದ ಹೋಟೆಲ್ (ಅನಂತ ಲಾಜ್) ಜಟ್ಪಟ್ ಸೇರಿ ವಿಶ್ರಾಂತರಾದೆವು. ಆದರೆ ಸರ್ಕಾರಿ ವ್ಯವಸ್ಥೆಗಳು ಹಾಗಲ್ಲ, (ಸಾಮಾನ್ಯವಾಗಿ ಜನಸ್ನೇಹಿಯೂ ಅಲ್ಲ) ಎನ್ನುವುದಕ್ಕೆ ಹೊಸ ಸಾಕ್ಷಿ ಬೆಳಿಗ್ಗೆ ಒದಗಿತು. ಇಲಾಖೆ ಕೊಟ್ಟ ಕಾಲಪಟ್ಟಿಯಂತೆ ಸುಮಾರು ಒಂಬತ್ತು ಗಂಟೆಗೆ ನಾವು ಕೊಚ್ಚಿ ಬಂದರಿನಲ್ಲಿ ಹಾಜರಿರಬೇಕಿತ್ತು. ಪ್ರಸನ್ನ ಹಿಂದಿನ ದಿನದಿಂದಲೇ ಫೋನಿನ ಮೇಲೆ ಫೋನ್ ಹಚ್ಚಿ ಸೋತ ಎನ್ನುವಾಗ ತಿಳಿಯಿತು ಹಡಗು ಮೂರೂವರೆಗೆ ಮುನ್ನ ಹೊರಡುವುದಿಲ್ಲ. ನಮ್ಮನ್ನು ಹಡಗಿಗೇರಿಸಲು ಬಂದ ವ್ಯಾನನ್ನು ಅರ್ಧ ದಿನ ಕೊಚ್ಚಿ ದರ್ಶನಕ್ಕೆ ಬಳಸಿಕೊಂಡೆವು.

ಮಹಾ ಗೋಲ್ಡ್ ರೋಡ್‌ನ (ಎಂಜಿ ರೋಡ್. ಅಲ್ಲಿನ ಮಹಾತ್ಮ ಗಾಂಧಿ ರಸ್ತೆಯುದ್ದಕ್ಕಿರುವ ಚಿನ್ನದ ಮಳಿಗೆಗಳ ವೈಭವ ನೋಡಿದವರ್ಯಾರೂ ನನ್ನ ಅಧಿಕಪ್ರಸಂಗವನ್ನು ಪ್ರಶ್ನಿಸರು!) ವಾಹನ ಸಮ್ಮರ್ದ ಪಾರುಗಾಣಿಸಿಕೊಂಡು ಕೊಚ್ಚಿಯ ಬಂದರಿನ ಬಳಿ ಹೋದೆವು. ಅಲ್ಲಿ ಮೀನು ಹಿಡಿಯಲು ಸ್ಥಾಪಿಸಿದ್ದ ಸರಣಿ ಚೀನೀ ಬಲೆಗಳನ್ನು ನೋಡಿ, ಸಣ್ಣದೊಂದು ದೋಣೀಯಾನಕ್ಕೆ ಸೇರಿಕೊಂಡೆವು. ಹಳೆ ದೋಣಿತಂಗುದಾಣಗಳು, ಮೀನುಗಾರಿಕಾ ಬಂದರಿನ ಗೊಂದಲ, ಕೊಚ್ಚೆ, ಹಾಯ್ದು ಅಳಿವೆ ಬಾಗಿಲಿಗೆ ಸೇರಿದೆವು. ಅಲ್ಲಿ ಬಂದರು ಆಡಳಿತ ಕಛೇರಿ ಕಟ್ಟಡ (ಆಧುನಿಕ ಬಹುಮಹಡಿ ಕಟ್ಟಡಕ್ಕೆ ಪ್ರಾದೇಶಿಕ ವಾಸ್ತು ವಿನ್ಯಾಸ ಸೇರಿಸಿದ್ದರು) ಮತ್ತು ಪಂಚತಾರಾ ತಾಜ್ ಹೋಟೆಲಿನ ಕಟ್ಟಡ ನಮ್ಮ ದೃಷ್ಟಿ ಸೆಳೆಯುತ್ತಿದ್ದವು. ಆದರೆ ಅವನ್ನೂ ಮೀರಿದ ಆಕರ್ಷಣೆಯಾಗಿ ಸಂಜೆ ನಮ್ಮನ್ನು ಹೊರಲಿದ್ದ ಹಡಗು – ಎಂ.ವಿ ಕವರಟ್ಟಿ, ತಂಗಿದ್ದು ಕಾಣಿಸಿತು.

ಶುಭ್ರ ಬಿಳಿಯ, ಐದಾರು ಮಾಳಿಗೆ ಎತ್ತರದ (ಜಲಮಟ್ಟದಿಂದ ಸುಮಾರು ಐವತ್ತು ಮೀಟರ್ ಎತ್ತರ) ಹಾಕಿ ಮೈದಾನದ ಉದ್ದದ (ಸುಮಾರು ನೂರಾ ಇಪ್ಪತ್ತು ಮೀಟರ್) ಅದರಲ್ಲಿ ನರಹುಳುಗಳು ಸಂಚರಿಸುತ್ತಿದ್ದದ್ದು ಕಾಣಿಸಿತು. ೨೦೦೮ರಲ್ಲಿ ಲಕ್ಷದ್ವೀಪಗಳಿಗೇ ಸಮರ್ಥ ಸಂಪರ್ಕ ಸಾಧನವಾಗಿ ಭಾರತ ಸರಕಾರ ನೀರಿಗಿಳಿಸಿದ ಅದ್ಭುತವಿದು. (ಹಳಗಾಲದವರಿಗೆ ಎಂವಿ ಟಿಪ್ಪುಸುಲ್ತಾನ ಮಾತ್ರ ಪರಿಚಿತ) ಅಂತರ್ಜಾಲದಲ್ಲಿ ಬೆದಕಿ ಅಂಕಿ ಸಂಕಿಗಳನ್ನು ನೋಡಿದರೆ  ಇದು ಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ಸೌಕರ್ಯದೊಡನೆ ಮೂರು ವರ್ಗಗಳಲ್ಲಿ ಒಟ್ಟಾರೆ ಏಳ್ನೂರು ಜನರನ್ನೂ ಪ್ರತ್ಯೇಕ ಸರಕು ಸಾಗಾಣಿಕೆಯ ಲೆಕ್ಕದಲ್ಲಿ ಇನ್ನೂರು ಟನ್ನಿಗೂ ಮಿಕ್ಕ ಹೊರೆಯನ್ನೂ ನಿಶ್ಚಿಂತ ಹೊರಬಲ್ಲುದು. ಸಾಮಾನ್ಯ ಪರಿಸ್ಥಿತಿಗಳಲ್ಲಿ ಹದಿನೇಳು ನಾಟಿಕಲ್ ಮೈಲ್ ವೇಗದಲ್ಲಿ ಸಾಗಬಲ್ಲ ಈ ದೈತ್ಯ, ಮಳೆಗಾಲದ ಸಾಗರದಲ್ಲೂ ಸ್ಥಿರತೆಗೆ ಇನ್ನೊಂದು ಹೆಸರಂತೆ. ಇದರ ಮೈತುಂಬಾ ಮುನ್ನೂರು (ಬರಿಯ ಮೀಟರ್ ಅಲ್ಲ ಸ್ವಾಮೀ) ಕಿಲೋಮೀಟರ್ ಉದ್ದದ ವಯರು, ಐವತ್ತು ಕಿಮೀ ಉದ್ದದ ನೀರಕೊಳವೆಗಳು ಎಂದೆಲ್ಲಾ ಲೆಕ್ಕ ಬೆಳೆಯುತ್ತಿದ್ದಂತೆ ನಮ್ಮ ಬೋಟ್ ಏನೂ ಅಲ್ಲ ಎನಿಸಿತು; ಇಲ್ಲಿರುವುದು ಸುಮ್ಮನೆ, ಅಲ್ಲಿದೆ ನಮ್ಮ ಮನೆ! 

ಕೊಚ್ಚಿಯ ವೆಲ್ಲಿಂಗ್ಟನ್ ಬಂದರು ಭಾರೀ ಹಡಗುಗಳಿಗೆ ಕಡಲ ಹಿನ್ನೀರಲ್ಲಿ ಮನುಷ್ಯಕೃತ ಸರೋವರ. ಈ ಹಿನ್ನೀರಿನ ಇನ್ನೊಂದೇ ಸಹಜ ದಂಡೆಯಲ್ಲಿ ನಮ್ಮ ವಿಹಾರ ಮುಗಿಯಿತು. ಜ್ಯೂ ಜನಾಂಗದವರು ಐತಿಹಾಸಿಕ ಕಾರಣಗಳಿಂದ ತಮ್ಮ ತಾಯ್ನೆಲವನ್ನು ಬಿಟ್ಟು ಭದ್ರ ನೆಲೆಗಾಗಿ ಜಗತ್ತಿನಾದ್ಯಂತ ವಲಸೆಹೋದ ಕಥೆ ಕೇಳಿದ್ದೇವೆ. ಆ ಕಾಲದಲ್ಲಿ ಹಾಗೆ ಬಂದವರು ಸ್ಥಳೀಯ ರಾಜರ ಕೃಪೆಯಿಂದ ನೆಲೆಸಿ, ವಹಿವಾಟು ನಡೆಸಿ, ನಾಗರಿಕಗೊಳಿಸಿದ ದ್ವೀಪ ಅದು. ಇಂದು ಅದಕ್ಕೆ ಮುಖ್ಯ ನೆಲದಿಂದ ಸಮರ್ಪಕ ಸೇತು-ಸಂಪರ್ಕ ಬೆಳೆದು ದ್ವೀಪ ಸ್ವರೂಪಕ್ಕೆ ಭಂಗ ಬಂದಿದೆಯಾದರೂ ನೆಲೆಗೊಂಡ ಜ್ಯೂಗಳ ಸಾಂಸ್ಕೃತಿಕ ರಚನೆಗಳಿಂದ ಜ್ಯೂಸ್ ಐಲ್ಯಾಂಡ್ ಪ್ರವಾಸಿ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿದೆ. ಅಲ್ಲಿನ ಪ್ರಧಾನ ಆಕರ್ಷಣೆ ೧೫೬೮ರಲ್ಲೇ ರಚಿತವಾದ ಜ್ಯೂಯಿಷ್ ಪ್ರಾರ್ಥನಾಮಂದಿರ – ಸೆನೆಗೋಗ್. ನಾಲ್ಕು ಶತಮಾನಗಳನ್ನು ಕಳೆದೂ ದೃಢವಾಗಿದೆ ಮತ್ತು ಬಳಕೆಯಲ್ಲೂ ಇದೆ. ಇದಕ್ಕೆ ಬರುವ ಪ್ರವಾಸಿಗಳ ಪ್ರವಾಹ ನೋಡಿಕೊಂಡು ಆ ಪುಟ್ಟಪೇಟೆಯ ಕಿರಿದಾದ ಬೀದಿಗಳು ಸಾಂಪ್ರದಾಯಿಕ ಸ್ಮರಣಿಕೆಗಳ ಬಲುದೊಡ್ಡ ಬಜಾರಾಗಿಯೇ ಬೆಳೆದಿರುವುದು ಕುತೂಹಲಕಾರಿಯಾಗಿದೆ.

ಪೂರ್ವಾಹ್ನದಲ್ಲಿ ಹನ್ನೆರಡೂವರೆಗೆ ಮುಚ್ಚುವ ಜ್ಯೂಸ್ ದೇವಾಲಯ ‘ತೆರೆದಿರಲಿ ದೇವರೇ’ ಎಂದು ಪ್ರಸನ್ನ ಹಾರೈಸಿ ಧಾವಿಸಿದ. (ನಾವೂ ಯಥಾನುಶಕ್ತಿ ಹಿಂಬಾಲಿಸಿದೆವು) ಹನ್ನೆರಡೂಕಾಲಕ್ಕೆ ದೋಣಿಯಿಳಿದು ಓಡುತ್ತಿದ್ದವನಿಗೆ ಇಚ್ಛಾಪೂರ್ತಿ ಮಾಡಲು ದೇವರು ಖಂಡಿತಾ ಪ್ರಯತ್ನಿಸುತ್ತಿದ್ದನೋ ಏನೋ. ಆದರೆ ಅಂದು ಶನಿವಾರ, ಅಂದರೆ ಸೆನೆಗೋಗಿನ ವಾರದ ರಜಾದಿನವೂ  ಆಗಿದ್ದಕ್ಕೆ ಭಕ್ತವತ್ಸಲ ಕೈಚೆಲ್ಲಬೇಕಾಯ್ತು! ಈ ಎಲ್ಲಾ ಗೊಂದಲದ ಮಧ್ಯೆ ಅಲ್ಲಿವರೆಗೆ ನಾವು ಗಟ್ಟಿಯಾಗಿ ಹೇಳಲು ಹಿಂಜರಿದಿದ್ದ ‘ಜ್ಯೂಸ್’ ಶಬ್ದ ಲೀಕಾಗಿ, ಪ್ರಸನ್ನನ ಕಿರಿಮಗಳು – ಪ್ರಜ್ಞಾಳ (೩-೪ರ ಹರಯ) ಕಿವಿ ಸೇರಿ, ಆಕೆ ವರಾತ ಹಚ್ಚಿದ್ದು ತಮಾಷೆಯಿತ್ತು. ಅವಳು ಗಂಟಲು ನೋವು ಹಿಡಿಸಿಕೊಂಡಿದ್ದರೂ ಐಸ್ಕೋಲ್ಡ್ ಜ್ಯೂಸ್ (ಹಣ್ಣಿನರಸ) ದಕ್ಕುವವರೆಗೆ ಪುರಾಣ ಖ್ಯಾತಿಯ ಚಂಡಿಯೇ ಆದದ್ದು ಇತರ ಮಕ್ಕಳಿಗೂ ವರವಾಯ್ತು, ಉರಿಬಿಸಿಲಿನಲ್ಲಿ ಬಾಯ್ಕಟ್ಟಿದ್ದ ಕೆಲವರಾದರೂ ಹಿರಿಯ ಚಪಲಿಗರಿಗೂ ಒಳ್ಳೇ ನೆಪವಾಯ್ತು!

ಪೂರ್ವ ಸೂಚನೆಯಂತೆ ಸುತ್ತು ಬಳಸಿನ ದಾರಿ ಮತ್ತು ಸೇತುವೆಯಲ್ಲಿ ಬಂದ ನಮ್ಮ ವ್ಯಾನ್ ಜ್ಯೂಸ್ ದ್ವೀಪದಲ್ಲಿ ಕಾದಿತ್ತು. ಮತ್ತೆ ಅದರ ಚಾಲಕನ ಸಲಹೆ ಮೇರೆಗೆ ಭಾರತ್ ಟೂರಿಸ್ಟ್ ಹೋಮಿನ ಖ್ಯಾತ ಊಟ ಮುಗಿಸಿಕೊಂಡು ನೇರ ಬಂದರಕ್ಕೇ ಹೋದೆವು. ಸರಳ ಕೆಲಸಗಳನ್ನು ಜಿಡುಕುಗೊಳಿಸುವುದೇ ಸರಕಾರೀ ಕ್ರಮ. ಪೂರ್ವ ಸೂಚನೆಯಂತೇ ಊಟಕ್ಕೂ ಮೊದಲೇ ಪ್ರಸನ್ನ ಒಮ್ಮೆ ಪ್ರವಾಸೀ ಏಜಂಟರ ಕಛೇರಿಗೆ ಧಾವಿಸಿ ಕಡೇ ಮಿನಿಟಿಗೆ ಲಭ್ಯವಾಗುವ ಬೋರ್ಡಿಂಗ್ ಪಾಸ್ (ತಿಂಗಳ ಮೊದಲೇ ಹಣ ಪಡೆದಾಗಲೇ ಟಿಕೇಟ್ ರೂಪದಲ್ಲಿ ಕೊಟ್ಟಿದ್ದರೆ ಇವರ ಗಂಟೇನು ಹೋಗುತ್ತಿತ್ತೋ ಗೊತ್ತಿಲ್ಲ) ಸಂಗ್ರಹಿಸಿಕೊಂಡು ಬಂದಿದ್ದ. ಈಗ ಬಂದರ್ ಗೇಟಿನ ಹೊರಗೇ ಒಂದು ಕಿಷ್ಕಿಂದೆಯಲ್ಲಿ ನೂರಾರು (ಹಡಗಿನ ಪೂರ್ಣ ತಾಕತ್ತಿನ ಮೇಲೆ ಅದು ಏಳ್ನೂರರವರೆಗೂ ಹೋಗಬಹುದು) ಜನ, ತಮ್ಮ ಚಿಳ್ಳೆಪಿಳ್ಳೆಗಳನ್ನು ಸಾವಿರಾರು ಗಂಟುಗದಡಿಗಳನ್ನು ಸುಧಾರಿಸಿಕೊಂಡು ಭದ್ರತಾ ತಪಾಸಣೆಗೆ ಒಳಪಡಬೇಕಾಯ್ತು. ಮತ್ತೆ ಪ್ಯಾಸೆಂಜರ್ರು ಲಗ್ಗೇಜುಗಳನ್ನು ಕೇರ್ಫುಲ್ಲಾಗಿ ಸೆಪರೇಟಿಸಿ, ಟ್ರಾನ್ಸ್‌ಪೋರ್ಟಿಸಿ, ಬೋರ್ಡಿಂಗ್ ಮಾಡಿಸುವುದು ನಿಯಮ. ಹಾಗೇ ಜನಕ್ಕೆ ಬಸ್ಸೂ, ಸಾಮಾನುಗಳಿಗೆ ಲಾರಿಯೂ ಅಲ್ಲಿತ್ತು. ಆದರೆ ತಪಾಸಣೆಗೊಳಗಾದವರೂ ಇತರರ ಸಂಪರ್ಕಕ್ಕೆ ಬಾರದ ಸ್ಥಿತಿ ಅಲ್ಲಿರಲಿಲ್ಲ. ಮತ್ತೆ ತನಿಖೆಯ ಶಾಸ್ತ್ರಕ್ಕೊಳಪಟ್ಟ ಗಂಟುಗದಡಿಗಳು (ವಿಮಾನ ನಿಲ್ದಾಣದಂತೆ) ನಮ್ಮ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳುವ ಸಿಬ್ಬಂದಿ ಬಲವೂ ಅಲ್ಲಿರಲಿಲ್ಲ. ಸಂತೆಯಲ್ಲಿ ನಮ್ಮ ಚೀಲಗಳನ್ನು ನಾವೇ ಲಾರಿಗೆ ಹಾಕಿ, ಗುದ್ದಾಡಿ ಬಸ್ಸೇರಿ, ಹಡಗಿನ ಬುಡದಲ್ಲಿ ಮತ್ತೆ ಚೀಲಗಳನ್ನು ಎಳೆದಾಡಿ, ಬೋರ್ಡಿಂಗ್ ಪಾಸಿನ ತಪಾಸಣೆ ಮುಗಿಸಿ ಅಂತೂ ಇಂತೂ ತಣ್ಣನೆಯ ಕವರಟ್ಟಿ ಗರ್ಭ ಸೇರುವಾಗ… ಸುಮಾರು ಮೂರು ಗಂಟೆಗಳ ಕಾಲ ಸೋರಿಹೋಗಿತ್ತಾ, ಆಗ ಸಂಜಿಯಾಗಿತ್ತಾ.

ಲಕ್ಷದ್ವೀಪಯಾನ ೨:ಕಡುನೀಲಿಯ ತೆಳುತೆರೆಗಳ ಮೇಲೆ ಹಡಗಿನ ದೀಪ

ಎಂ.ವಿ ಕವರಟ್ಟಿಯ ಮೂರನೆಯ ಮಾಳಿಗೆಯ (Deck. ಈ ಶಬ್ದಕ್ಕೆ ಮೈವಿವಿನಿಲಯದ ನಿಘಂಟು ದಕ್ಕ ಎನ್ನುತ್ತದೆ. ಕನ್ನಡ ಕೋಶಗಳು ಬಂದರುಗಟ್ಟೆಯನ್ನು ಮಾತ್ರ ಧಕ್ಕೆ ಎನ್ನುತ್ತವೆ, ದಕ್ಕ ದಕ್ಕಿಸಿಕೊಂಡಿಲ್ಲ. ವಾಸ್ತವದಲ್ಲಿ ನಮ್ಮ ಹೆಚ್ಚಿನ ಕೋಶಕಾರರು ಬಯಲು ಸೀಮೆಯವರು, ಸಮುದ್ರದೂರರು. ನಿಘಂಟು ಬೆಳೆಸಲು ಕ್ಷೇತ್ರಕಾರ್ಯ ಆದಂತಿಲ್ಲ. ಸದ್ಯದ ಗೊಂದಲ ತಪ್ಪಿಸಲು ನಾನು ಬಹುಮಹಡಿ ಕಟ್ಟಡದ ಶಬ್ದಗಳನ್ನೇ ಬಳಸುತ್ತಿದ್ದೇನೆ) ಹೊರಜಗುಲಿ ಹಡಗಿಗೆ ಸದಾ ಮುಕ್ತ ದ್ವಾರ. ಅದರ ಎತ್ತರಕ್ಕೇರಿಸಿಕೊಳ್ಳಲು ಇಲ್ಲಿ ಬಲವಾದ ಏಣಿ ಇದೆ. (ನೀನೇರಲೇ ಬೇಕು ನಾನಿರುವ ಎತ್ತರಕೆ). ಅಲ್ಲೇ ಕಡಲ ಆಕಸ್ಮಿಕಗಳಲ್ಲಿ ಒದಗುವಂತೆ ಎರಡು ಮಗ್ಗುಲು ಸೇರಿದಂತೆ ನಾಲ್ಕು ದೋಣಿಗಳನ್ನು ಭದ್ರವಾಗಿ ನೇತುಬಿಟ್ಟಿದ್ದಾರೆ. ಮೂರನೆಯ ಮಾಳಿಗೆಯ ಎತ್ತರದ ಬಳಕೆ ಒಮ್ಮೆ ನಮ್ಮನ್ನು ಹತ್ತಿಸಿಕೊಳ್ಳುವಾಗ ಮತ್ತೊಮ್ಮೆ ಒಟ್ಟು ಪ್ರವಾಸ ಮುಗಿದು ಇಳಿಸುವಾಗ ಕೊಚ್ಚಿಯಲ್ಲಿ ಮಾತ್ರ ಆಯ್ತು. ಬಹುಶಃ ಹಡಗೇ ಸ್ಥಿರ ಬಂದರು ಕಟ್ಟೆಗೆ ಬಂದಾಗ ಮಾತ್ರ ಇದನ್ನು ಬಳಸುತ್ತಾರೆ. ದ್ವೀಪಸ್ತೋಮದಲ್ಲೆಲ್ಲೂ ಎಂವಿ ಕವರಟ್ಟಿಗೊಪ್ಪುವ ಆಳದ ಬಂದರುಗಟ್ಟೆಗಳಿರಲಿಲ್ಲ. ಅಲ್ಲೆಲ್ಲಾ ನಾವು ನೀರಮಟ್ಟಕ್ಕೆ ತೀರಾ ಹತ್ತಿರದ ಅಂದರೆ ಹಡಗಿನ ಒಂದನೇ ಮಾಳಿಗೆಗೇ ಇಳಿದು, ಸಣ್ಣ ದೋಣಿಗಳಿಗೆ ಹತ್ತಿ ದಂಡೆ-ಯಾತ್ರೆ ನಡೆಸಬೇಕಾಗುತ್ತಿತ್ತು. ಒಂದನೇ ಮಾಳಿಗೆಯ ಎರಡೂ ಬದಿಗಳಲ್ಲಿ ಎರಡೆರಡು ಪುಟ್ಟ ಕಿಂಡಿಗಳಿವೆ. ಇವಕ್ಕೆ ಎತ್ತರದ ಹೊಸಿಲು, ತಗ್ಗು ದಾರಂದ ಮತ್ತು ಸದಾ ಮುಚ್ಚಿರುವ ಜಲನಿರ್ಬಂಧೀ ಬಾಗಿಲುಗಳಿವೆ. ಅದನ್ನು ತೆರೆದು ಮುಚ್ಚುವ ನಿಯಂತ್ರಕ ನೇರ ಆರನೇ ಮಾಳಿಗೆಯಲ್ಲಿ ಕುಳಿತ ಕಪ್ತಾನ.

ಹಡಗಿನ ಹೊಟ್ಟೆಯಲ್ಲಿ ಉದ್ದಕ್ಕೋಡುವ ಎರಡು ಓಣಿಗಳಿವೆ. ಇವು ಅಲ್ಲಲ್ಲಿ ಪರಸ್ಪರ ಅಡ್ಡಕ್ಕೆ ಸಂಪರ್ಕ ಓಣಿ ಪಡೆಯುವುದಿದೆ, ವಿವಿಧ ಮಾಳಿಗೆಗಳಿಗೇರಿ ಇಳಿಯಲು ಮೆಟ್ಟಿಲ ಸಾಲು ತೋರುವುದಿದೆ ಮತ್ತು ಹಡಗಿನ ಹೊರಮೈಗೆ ಬರಲು ಪ್ರತಿ ಮಾಳಿಗೆಯಲ್ಲೂ ಬಲವಾದ ಎರಡೆರಡು ಕವಾಟಗಳ (ಬಾಗಿಲು ಎನ್ನುವುದು ತೀರಾ ಸೌಮ್ಯವಾಗುತ್ತದೆ!) ದ್ವಾರಗಳನ್ನೂ ತೋರುತ್ತವೆ. ಒಂದರಿಂದ ಮೂರನೇ ಮಾಳಿಗೆಯವರೆಗೆ ಸಾರ್ವಜನಿಕ ಸರಕು ಸಾಗಾಣಿಕೆ, ಸಾಮಾನ್ಯ ಪ್ರಯಾಣಿಕರ ಮಲಗು ಅಟ್ಟಳಿಗೆ, ಪ್ರಾರ್ಥನಾ ಮಂದಿರ, ಸಾರ್ವಜನಿಕ ಭೋಜನಾಲಯ ಹಾಗೇ ಸ್ತ್ರೀಪುರುಷರಿಗೆ ಪ್ರತ್ಯೇಕಿಸಿದಂತೆ ‘ಇನ್ನೊಂದರ’ ವ್ಯವಸ್ಥೆ, ಮಾಹಿತಿ ಕೇಂದ್ರ ಎಲ್ಲಾ ಕ್ರಮವಾಗಿ ಹರಡಿದ್ದವು. ಮಾಳಿಗೆಗಳಲ್ಲಿ ಮೂರನೆಯ ಮಾಳಿಗೆಯಿಂದ ಮೇಲಿನ ಈ ಓಣಿಗಳ ಉದ್ದಕ್ಕೆ ಎರಡು ಪಕ್ಕಗಳಲ್ಲಿ ಮುಖ್ಯವಾಗಿ ವಸತಿ (ಸ-ಶೌಚ = attached bath) ಮತ್ತು ವಿವಿಧ ಅವಶ್ಯಕತೆಗಳಿಗನುಗುಣವಾಗಿ (ನೌಕರವರ್ಗದ ಕೋಣೆಗಳು, ಕ್ಯಾಂಟೀನ್, ಪ್ರಾರ್ಥನಾ ಮಂದಿರ (ಇದು ಬೇಕಾಗಿರಲಿಲ್ಲ), ವೈದ್ಯಕೀಯ ಸವಲತ್ತು ಇತ್ಯಾದಿ) ಕೋಣೆಗಳು ಹಂಚಿಹೋಗಿವೆ.

ನಾಲ್ಕನೆಯ ಮಾಳಿಗೆಯ ಹಿಂದಿನ ಕೊನೆಯಲ್ಲಿ ‘ಮೇಲ್ವರ್ಗದ’ ವಿಸ್ತಾರ ಊಟದ ಮನೆಯೂ ಮುಂದಿನ ಕೊನೆಯಲ್ಲಿ ಸಾರ್ವಜನಿಕ ರಂಜನೆಗೇ ಮೀಸಲಾದ ಪುಟ್ಟ ಹಾಲೂ ಇದೆ. ಹೆಸರಿನಲ್ಲಿ ರಂಜನೆ ಇದ್ದರೂ ಅಲ್ಲಿನ ದೊಡ್ಡ ಕೊರತೆ ಎರಡು ಸಜೀವ ಟಿವಿ ಮತ್ತೆ ಜಾಗ ಉಳಿಯದಂತೆ ಎದುರು ಹತ್ತೈವತ್ತು ಕುರ್ಚಿ. (ಅರುಂಧತೀ ರಾಯ್ ದಾಂತೇವಾಡ ವಲಯದ ನಕ್ಸಲ್ ಕುರಿತು ಬರೆದ ಲೇಖನ ಮಾಲೆಯಲ್ಲಿ ಮೂಲವಾಸಿಗಳ ಸಂಘ ಶಕ್ತಿಯನ್ನು, ಸಂಸ್ಕೃತಿಯನ್ನು ನಿರ್ವೀರ್ಯಗೊಳಿಸಲು ಪ್ರಸ್ತಾಪಗೊಂಡ ಪ್ರಮುಖ ತಂತ್ರ ಅವರಿಗೆಲ್ಲ ಟಿವಿ ಕೊಡುವುದು- ನೆನಪಿಸಿಕೊಳ್ಳಿ) ಈ ವಲಯದ ಹಳೆಯ ಹುಲಿ- ಎಂವಿ ಟಿಪ್ಪುಸುಲ್ತಾನಿನಲ್ಲಿ ಟೀವೀ ಇದ್ದರೂ ಇತರ ಚಟುವಟಿಕೆಗಳಿಗೆ ಖಾಲೀ ವೇದಿಕೆ ಇರುವುದೂ ಸಹಯಾನಿಗಳ ಪ್ರತಿಭಾ ಪರಿಚಯಕ್ಕೆ ಅವಕಾಶ ಒದಗುವುದೂ ಉಷಾ ಪಿ. ರೈ ಅವರ ಪ್ರವಾಸ ಕಥನದಲ್ಲಿ (ಲಕ್ಷ ದ್ವೀಪಕ್ಕೆ ಲಗ್ಗೆ ಇಟ್ಟಾಗ) ತಿಳಿಯುತ್ತದೆ. ಬಿಸಿಲೇ ಕಾಡಿನಲ್ಲಿ, ದೇವಂದಬೆಟ್ಟದ ಕೊಡಿಯಲ್ಲಿ, ಜಲಕನ್ಯೆಯರ ಕುದುರಿನಲ್ಲೆಲ್ಲಾ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿದ ದಿನೇಶ ಹೊಳ್ಳರಿಗೇನಾದರೂ ‘ಕಡಲ ಕನವರಿಕೆ’ ಅಭಿವ್ಯಕ್ತವಾದರೆ ಅನಾವರಣಕ್ಕೆ ಎಂವಿ ಟಿಪ್ಪು ನೋಡಿ ಎನ್ನಬಹುದೇನೋ! 

ಹಡಗಿನ ಆರನೇ ಮಾಳಿಗೆ ವಾಸ್ತವದಲ್ಲಿ ಬೋಳು ತಾರಸಿ. ಅದರ ಮುಂದಿನ ತುದಿಯಲ್ಲಿ ಮುಖ್ಯ ಅಧಿಕಾರಿ (ಇಲ್ಲಿ ಕ್ಯಾಪ್ಟನ್ ಅಥವಾ ಕಪ್ತಾನ ಎನ್ನುವುದಿಲ್ಲ- ಮಾಸ್ಟರ್ ಅಂತೆ. ತಮಾಷೆ ಗೊತ್ತಾ -ಕುಡ್ಲದ ಸಿಟಿಬಸ್ ಕಂಡಕ್ಟರಿಗೆ ಪ್ರಯಾಣಿಕರೆಲ್ಲ ಮೇಸ್ಟ್ರೇ) ಮತ್ತು ನಿಯಂತ್ರಣ ಕೇಂದ್ರವಿದೆ. ನಡುವೆ ಹಡಗಿನಗಲಕ್ಕೂ ಹಬ್ಬಿದಂತೆ ಆಳದಿಂದೆದ್ದ ಅನಿವಾರ್ಯ ಯಂತ್ರ ಭಾಗಗಳು, ಮುಖ್ಯವಾಗಿ ಕಾಣುವಂತೆ ಹೊಗೆ ನಳಿಕೆ. ಉಳಿದಂತೆ ಮುಂದಷ್ಟು ಹಿಂದಷ್ಟು ವಿಸ್ತಾರವಾದ ಮತ್ತು ಸಾರ್ವಜನಿಕರಿಗೆ ಮುಕ್ತವಾದ ತಾರಸಿ. ಇದಕ್ಕೂ ಹೆಚ್ಚಿನ ಹಡಗಿನ ವಿನ್ಯಾಸ ವಿವರಿಸುವುದಿರಲಿ, ಗ್ರಹಿಸುವುದಕ್ಕೂ ನಮ್ಮ ನಾಲ್ಕು ರಾತ್ರಿ ಮೂರು ಹಗಲೇ ಸಣ್ಣದಾಯ್ತೆಂದ ಮೇಲೆ ನೀವು ಓದಿ ಮಾಡುವುದು ಅಷ್ಟರಲ್ಲೇ ಇದೆ.

ಸಂಜೆ ಚಾ, ಬಿಸ್ಕತ್ತಿನೊಡನೆ ಹಡಗಿನ ಸಾರ್ವಜನಿಕ ವಕ್ತಾರನ ಮುಖ ಪರಿಚಯವಾಯ್ತು. ಆತ ಹಡಗು, ಪ್ರವಾಸ ಮತ್ತು ಆಪತ್ಕಾಲೀನ ಕ್ರಮಗಳ ಬಗ್ಗೆ ಆಸಕ್ತರಿಗೆ ತಿಳಿಸುವ ಕಾರ್ಯಕ್ರಮವನ್ನು ಟೀವೀ ಕೋಣೆಯಲ್ಲಿಟ್ಟುಕೊಂಡಿದ್ದಾನೆಂದು ನಮಗೆ ತಿಳಿಯುವಾಗ ತಡವಾಗಿತ್ತು. ಆದರೂ ಅಪಾರ ಸಹನಾಶೀಲನಾಗಿ ಲೇಟ್-ಲತೀಫ್‌ಗಳಾದ ನಮ್ಮ ಕೇಳಿದಷ್ಟೂ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವನ್ನು ಕೊಡುವವನಿದ್ದ. ಆದರೆ ಅಲ್ಲಿದ್ದ ಎರಡೂ ಟೀವೀಗಳು ಐಪಿಎಲ್ ಆಟದ ನೇರಪ್ರಸಾರ ಕೊಡಲು ಸುರುಮಾಡಿದಾಗ ಎಲ್ಲರ ಮನಸ್ಥಿತಿಯೂ ಹೋಂ ಎವೇ ಫ್ರಂ ಹೋಂ ಆಗಿತ್ತು. ಕ್ಯಾಂಟೀನಿನಿಂದ ಕುರುಕಲು ತಂದು, ಕಾಲು ಎಲ್ಲೆಂದರಲ್ಲಿ ಎಸೆದು ಕೂತು, ಕಮೆಂಟರಿಗೆ ಸಮತೂಕದ ಮೊಮೆಂಟರಿ ಉದ್ಗಾರಗಳನ್ನು ಹೊಡೆಯುವವರನ್ನು ಬಿಟ್ಟು ನಾವು ತಾರಸಿಗೋಡಿದೆವು. (ಇಂದು ಬಹುಜನರ ಭಾರೀ ಹಾಬಿ- ಟೀವೀ ವೀಕ್ಷಣೆ!) ಅಲ್ಲಿ ಬೀಳ್ಕೊಡುವ ಕೊಚ್ಚಿ, ಸ್ವಾಗತಿಸುವ ಅರಬೀ ಸಮುದ್ರಕ್ಕೆ ಕಣ್ಣಾಗುವವರು ಹೆಚ್ಚಿರಲಿಲ್ಲ. ದಿನದ ಚಿತ್ತಾರ ಮುಗಿಸಿದ ಸೂರ್ಯನ ಬ್ರಷ್ ತೊಳೆದ ನೀರು ದಿಗಂತದಲ್ಲಿ ಹರಡಿದ್ದರೆ, ಆಕಾಶ ಒಣ ಒರೆಸಿಕೊಂಡ ವಿಸ್ತಾರ ಚಿಂದಿ. ನಮ್ಮ ಸಣ್ಣ ಗ್ರಹಿಕಾ ಮಿತಿಯಲ್ಲಿ ಎಂವಿ ಕವರಟ್ಟಿಯ ತಿರುಗಣಿ ಹುಟ್ಟು ಸಪ್ತಸಾಗರಗಳಿಗೆ ಹಾಕಿದ ಮಹಾ ಕಡೆಗೋಲಾಗಿ ಏನದ್ಭುತಗಳನ್ನು ತರಲಿದೆಯೋ ಎಂದು ನಿರುಕಿಸುತ್ತಲೇ ಇದ್ದೆವು. ಹಡಗಿನ ಸುವ್ಯವಸ್ಥಿತ ಸಾರ್ವಜನಿಕ ಘೋಷಣಾ ಜಾಲದಲ್ಲಿ ಊಟದ ಕರೆ ಕೇಳದಿದ್ದರೆ ಊಟ, ನಿದ್ರೆಯ ಪರಿವೆಯೂ ಇರುತ್ತಿರಲಿಲ್ಲವೋ ಏನೋ!

ಹಡಗಿನ ನಮ್ಮ ಊಟದ ಮನೆಯಲ್ಲಿ ಸಸ್ಯಾಹಾರೀ ಮಾಂಸಾಹಾರೀ ಪ್ರತ್ಯೇಕ ಬಡಿಸು ಕಟ್ಟೆಗಳಿದ್ದವು, ಧಾರಾಳ ಕುರ್ಚಿ ಮೇಜುಗಳಿದ್ದವು. ಬೆಳಿಗ್ಗೆ ಆರರಿಂದ ಆರೂವರೆಯವರೆಗೆ ಬಿಸ್ಕತ್, ಚಾ/ ಕಾಫಿ, ಏಳೂವರೆಯಿಂದ ಎಂಟರವರೆಗೆ ತಿಂಡಿ. ಬ್ರೆಡ್, ಬೆಣ್ಣೆ, ಜ್ಯಾಂ ಮತ್ತು ಒಂದು ಹಣ್ಣು (ಬಾಳೆ/ ಮೊಸುಂಬಿ) ಎಷ್ಟೂ ಇತ್ತು. ಮೇಲೆ ನಮಗೆ ನಾಲ್ಕೂ ಬೆಳಿಗ್ಗೆಗಳಿಗೆ ಪ್ರತ್ಯೇಕ ತಿಂಡಿಗಳೂ ಇದ್ದವು. ಒಂದು ದಿನ ಇಡ್ಲಿ, ಇನ್ನೊಮ್ಮೆ ಸೆಟ್ ದೋಸೆ, ಮತ್ತೊಮ್ಮೆ ಮಸಾಲೆದೋಸೆಯಾದರೆ ಕೊನೆ ದಿನ ಉಪ್ಪಿಟ್ಟು. ನಮ್ಮ ಊಟಕ್ಕೆ ಕಟ್ಸಾರು (ಸೂಪ್), ಕೊಚ್ಚುಸಳ್ಳಿ (ಸೌತೆ ನೀರುಳ್ಳಿ ನಿಂಬೆ ಇತ್ಯಾದಿಗಳ ಹಸಿ ಚೂರುಗಳ ಮಿಶ್ರಣ- ವೆಜಿಟೆಬಲ್ ಸಲಾಡ್), ಚಪಾತಿ, ಅನ್ನ, ಹಪ್ಪಳ, ತೊವ್ವೆ, ಕಡಲೆಗಸಿ, ಪಲ್ಯ, ಸಾಂಬಾರ್, ಮೊಸರು, ಪಾಯಸ, ಉಪ್ಪುಪ್ಪಿನಕಾಯಿ, ಬಿಸಿಬಿಸಿಯಾಗಿ ರುಚಿಕರವಾಗಿ ಮತ್ತು ಅಕ್ಷಯವಾಗಿ ಒಡ್ಡಿಕೊಳ್ಳುತ್ತಿದ್ದವು. ಮಾಂಸಾಹಾರಿಗಳಿಗೆ ಮೊಟ್ಟೆ, ಕಡಲ ಮೀನಿನ ಅದರಲ್ಲೂ ಲಗೂನ್‌ಗಳ ವಿಶಿಷ್ಟ ರುಚಿಗಳು ಸ್ಥಳೀಯ ಪಾಕದ ವೈಶಿಷ್ಟ್ಯದೊಡನೇ ಲಭಿಸಿತ್ತು ಮತ್ತು ಸ್ಮರಣೀಯವಾಗಿತ್ತು ಎಂದು ಮಿತ್ರರು ಹೇಳಿದರು. ಮೂರೂ ಮಧ್ಯಾಹ್ನದೂಟಗಳು ಮತ್ತು ಸಂಜೆಯ ಕಾಫಿ ದ್ವೀಪಗಳಲ್ಲಿ ಆಗುತ್ತಿದ್ದರೂ ವ್ಯವಸ್ಥೆ ಮತ್ತು ವೈವಿಧ್ಯ ಕೊರತೆಯಾದದ್ದಿಲ್ಲ. ಎಲ್ಲೆಡೆಗಳಲ್ಲಿ ಬಡಿಸಲು ವಿನಯವಂತ ಮತ್ತು ಧಾರಾಳೀ ಸಹಾಯಕರಿರುತ್ತಿದ್ದರು, ನಾವೇ ಬೇಕಾದ್ದನ್ನು, ಬೇಕಾದಷ್ಟು ಹಾಕಿಕೊಳ್ಳುವ ಸ್ವಾತಂತ್ರ್ಯವೂ ಇತ್ತು. ಆದರೆ ಕೆಲವರು ತಿನಿಸುಗಳನ್ನು ಅನಾವಶ್ಯಕ ರಾಶಿ ಹಾಕಿಕೊಂಡು, ಅನಂತರ ತಮ್ಮ ರುಚಿ ಸೂಕ್ಷ್ಮವನ್ನೋ ಕೋಮಲ ಆರೋಗ್ಯವನ್ನೋ ಕಾಳಜಿಪೂರ್ಣವಾಗಿ ಕಾಪಾಡಿಕೊಳ್ಳಲು ಅಷ್ಟಿಷ್ಟು ಬಿಸಾಡಿ ಹೋಗುತ್ತಿದ್ದದ್ದು ಕಾಣುತ್ತಿತ್ತು; ಎಷ್ಟಿದ್ದರೂ ನಮ್ಮದು ಮೇಲ್ವರ್ಗ.

ನಮ್ಮ ಇಪ್ಪತ್ತೊಂದು ಜನಕ್ಕೆ ಟಿಕೇಟ್ ದರದಲ್ಲಿ ಅರ್ಧ, ಇಡೀ ಇದ್ದರೂ ಇಬ್ಬರಿಗೆ ಒಂದರಂತೆ ಸಜ್ಜುಗೊಂಡ ಕೋಣೆಗಳನ್ನು ಧಾರಾಳ ಕೊಟ್ಟಿದ್ದರು. ಕೆಲವರದು ನಾಲ್ಕನೆಯ ಮಾಳಿಗೆ, ನಮ್ಮದು ಐದನೆಯದು. ಎರಡಂತಸ್ತಿನ ಮಂಚ, ಹಾಸಿಗೆ, ರಗ್ಗು, ಕಪಾಟು, ಮೇಜು, ಕುರ್ಚಿ, ಫ್ಯಾನು, ಬಿಗಿಮುಚ್ಚಿದ ಕನ್ನಡಿ ಕಿಟಕಿ ಹೆಚ್ಚೇನೂ ಬೇಡವೆನ್ನುವಂತಿತ್ತು. ಪ್ರತಿ ಕೋಣೆಗೂ ಸೇರಿದಂತಿದ್ದ ಪುಟ್ಟ ಬಚ್ಚಲಿನಲ್ಲಿ ಎಲ್ಲ ಹೊತ್ತಿಗೂ ಬೇಕಾದ ಬಿಸಿಯ ನೀರಿನ ವ್ಯವಸ್ಥೆಯೊಡನೆ ವಾಶ್ ಬೇಸಿನ್, ಕಮೋಡ್, ಸ್ನಾನದ ವ್ಯವಸ್ಥೆಯೂ ಸಾಬೂನು, ಟವೆಲಿನವರೆಗೆ ಒಪ್ಪವಾಗಿತ್ತು. ಇಲ್ಲಿನ ಬಾಗಿಲುಗಳಿಗೆ ಒಳಗಿನಿಂದ ಅಗುಳಿಯಿದೆಯಾದರೂ ಹೊರಗಿನಿಂದ ಬೀಗವಿಲ್ಲ!  ಹಗಲಿನ ಚಟುವಟಿಕೆಗಳಿಗೆ ನಾವು ಹಡಗು ಬಿಟ್ಟು ಹೋಗಿ ಮರಳುವಾಗ ಕೋಣೆ ಮಡಿಗೊಳಿಸುತ್ತಾರೆ. ದ್ವೀಪಗಳಲ್ಲೂ ನಾವು ನಮ್ಮೆಲ್ಲಾ ಸೊತ್ತುಗಳನ್ನು ಎಲ್ಲೆಂದರಲ್ಲಿ ಬಿಟ್ಟು ದಿನಪೂರ್ತಿ ನಿರ್ಯೋಚನೆಯಿಂದ ವಿಹರಿಸಿ ಮರಳಿದರೂ ಕಳ್ಳತನದ ಸೊಲ್ಲು ಬರಲೇ ಇಲ್ಲ. ಒಟ್ಟು ಪ್ರವಾಸವೇ ಆಶ್ಚರ್ಯಕರವಾಗಿ ಯಾನಿ-ಸಿಬ್ಬಂದಿಗಳ ಮೇಲಿನ ಅಪಾರ ವಿಶ್ವಾಸದಿಂದ ನಡೆಯುತ್ತದೆ. ಇದು ಆಕಸ್ಮಿಕವಲ್ಲ, ಸಿಬ್ಬಂದಿ ಸ್ಪಷ್ಟವಾಗಿ ಘೋಷಿಸಿ ಹಾಗೇ (ಈ ಕಾಲದಲ್ಲೂ) ನಡೆಸಿಕೊಂಡು ಬರುತ್ತಿರುವ ವಾಸ್ತವ.

ಕೊಚ್ಚಿಯಿಂದ ಕಲ್ಪೆನಿಗೆ ಸುಮಾರು ಹದಿಮೂರು ಗಂಟೆಯ ಯಾನವಂತೆ. ಹಡಗಿನ ಸೌಮ್ಯ ಏಕನಾದದಲ್ಲಿ, ಸಣ್ಣ ಒಲೆತದ ಸಂತಸದಲ್ಲಿ (ಅವರಿವರು ಹೇಳಿದ ಸೀ-ಸಿಕ್ನೆಸ್ ಅಥವಾ ಕಡಲ-ಕಾಯಿಲೆ ಕಾಡಿಸಬಹುದಾದ ಸಮುದ್ರದ ಆಟೋಪ ನಮಗೆ ಸಿಗಲೇ ಇಲ್ಲ), ಕಲ್ಪಿತ ಚಳಿಗೆ ಬಿಸಿ ರಗ್ಗಿನ ಆಳಕ್ಕಿಳಿದು ನಿದ್ರಿಸಿದೆವು. ರಾತ್ರಿ ಆಗೀಗ ಎದ್ದರೂ ಕಿಂಡಿಯಾಚೆಗೆ ಹಡಗಿನದೇ ಬೆಳಕಿನಲ್ಲಿ ನೊರೆನೀರ ಮೊತ್ತ ಹಿಂದೆ ಸರಿಯುವ ಚಂದ ಕಾಣುತ್ತಿತ್ತು. ನಗರದ ಬೆಳಕಿಲ್ಲದೆ, ಚಂದ್ರನೂ ವಿಶೇಷ ಆಕ್ರಮಿಸದೆ (ಅಮಾವಾಸ್ಯೆ ಕಳೆದು ಎರಡೇ ದಿನವಾಗಿತ್ತು), ಯಾವ ಚೌಕಾಸಿಯಿಲ್ಲದೆ ಎಲ್ಲಾ ದಿಕ್ಕುಗಳಲ್ಲೂ ದಿಗಂತದವರೆಗೆ ಹಬ್ಬಿ ನಿಂತ ರಾತ್ರಿಯಾಕಾಶದ ಕಲ್ಪನೆ ನನ್ನ ತಂದೆ(ಜಿಟಿನಾ)ಗೆ (ನಕ್ಷತ್ರ ವೀಕ್ಷಣೆಗೆ) ಪುಳಕ ತರಿಸುತ್ತಿತ್ತು. ನಾನು ಅವರ ಕಿಂಚಿದಂಶ ಮಾತ್ರವಾದ್ದರಿಂದ ನಿದ್ದೆಗೇಡು, ಕತ್ತುನೋವು ಇಲ್ಲದೇ ನಿದ್ದೆ ಮುಂದುವರಿಸಿದೆ. ಹಾಗೆಂದ ಮಾತ್ರಕ್ಕೆ ನಮ್ಮ ಅತಿ ಹತ್ತಿರದ ನಕ್ಷತ್ರ- ಸೂರ್ಯನನ್ನೂ ಮರೆತು ಮಲಗುವುದುಂಟೇ? ಅದು ಹೊದಿಕೆ ಝಾಡಿಸುವುದರಿಂದ ಹಿಡಿದು ಮೇಲೇಳುವವರೆಗೆ ಎಲ್ಲಾ ನೋಡಬೇಕೆಂದು ನಾನು, ದೇವಕಿಯೂ ಐದು ಗಂಟೆಗೇ ಮೇಲಿನ ಧಕ್ಕೆಗೆ ಓಡಿದೆವು.

ಕಡುನೀಲಿಯ ತೆಳುತೆರೆಗಳ ಮೇಲೆ ಹಡಗಿನ ದೀಪವಾಡುತ್ತಿತ್ತು. ಸೀಳೋಟದ ಬಿಳಿನೊರೆಗಳ ಜಾಡಿರಲಿಲ್ಲ. ಹಡಗಿನ ಏಕನಾದದಲ್ಲಿ ತೀವ್ರತೆ ಇಳಿದಿದ್ದಿರಬೇಕು (ಗುರುತಿಸುವುದು ನನ್ನಿಂದಾಗಲಿಲ್ಲ), ಹಡಗು ನಿಂತಿತ್ತು. ನೀರು ಆಕಾಶದ ಗಡಿರೇಖೆ ಗುರುತಿಸಲಾಗದ ಸ್ಥಿತಿಗೆ ತುಸುವೇ ಭಂಗ ತರುವಂತೆ ಹಡಗಿನ ನೇರ ಎದುರು ಬಲು ದೂರದಲ್ಲಿ ಪುಟ್ಟ ದೀಪವೊಂದು ಬಿಟ್ಟು ಬಿಟ್ಟು ಹೊಳೆಯುವುದು ಕಾಣಿಸಿತು. ಓ, ಕಲ್ಪೆನಿಯ ಸ್ಥಿರ ನೆಲದ ಮೇಲಿನ ದೀಪಸ್ತಂಭವಿರಬೇಕೆಂದು ಊಹಿಸಿದೆವು. ಕಣ್ಣು ಚೂಪು ಮಾಡಿದಾಗ ಅದರ ಆಜುಬಾಜಿನಲ್ಲಿ ಇನ್ನೂ ಕೆಲವು ಮಸಕು ಸ್ಥಿರ ದೀಪಗಳು- ಕಲ್ಪೆನಿಯ ಬೀದಿ ದೀಪಗಳೇ ಇರಬೇಕು, ಮುಂದುವರಿಯಿತು ನಮ್ಮ ಕಲ್ಪೆನಿಯ ಕಲ್ಪನಾ ಸಾಹಿತ್ಯ. ಆದರೆ ಮಿನಿಟುಗಳು ಉರುಳುತ್ತಿದ್ದಂತೆ  ಆ ದೀಪ ಸಮೂಹ ನಮ್ಮ ಎಡಮಗ್ಗುಲಿಗೆ ಸರಿಯುತ್ತಾ ಹೋಯ್ತು. ಅರೆ, ಯಾವುದೋ ಹಡಗಿರಬಹುದು. ಅಂದರೆ ನಮ್ಮದು ನಿಂತದ್ದು ಯಾಕೆ? ಗೊಂದಲಗಳ ಮೂಟೆ ದೊಡ್ಡದಾಗದಂತೆ ಆ ದೀಪ ಸಮೂಹದ ಹಿನ್ನೆಲೆಯಲ್ಲಿ ಸ್ವತಃ ಸೂರ್ಯನೇ ಮುಂಬೆಳಕು ಚೆಲ್ಲಿದ. ನಿಧನಿಧಾನಕ್ಕೆ ಬೆಳಕಿನ ಹುಡಿ ಹೆಚ್ಚುತ್ತಿದ್ದಂತೆ ಅವೆಲ್ಲ ನಮ್ಮ ಎಡಮಗ್ಗುಲಿನಿಂದಲೂ ಎಡಕ್ಕೆ ಸರಿಯುತ್ತಿರುವುದಲ್ಲ, ನಮ್ಮ ಹಡಗೇ ಪಶ್ಚಿಮಮುಖಿಯಾಗುವಂತೆ ತಿರುಗುತ್ತಿದೆಯೆಂಬ ಅರಿವು ಬಂತು. ಹಡಗಿನ ಬಲಮಗ್ಗುಲ ಅಂಚಿನಲ್ಲಿ ನಿಂತು ಎಡ ಅಂಚಿನಾಚೆಗೆ ಖಚಿತಗೊಂಡ ಕಲ್ಪೆನಿಯನ್ನು ನೋಡನೋಡುತ್ತಾ ಹಡಗಿನ ತೂಗಾಟವನ್ನೂ ಗುರುತಿಸುವ ಸಂತೋಷವನ್ನೂ ಅನುಭವಿಸುತ್ತಾ ಸೂರ್ಯೋದಯಕ್ಕೆ ಅನಿಮಿಷರಾದೆವು.

ಸೂರ್ಯೋದಯದ ಚಂದವನ್ನು ಸಾವಿರ ಮಾತಿನ ಸೋಲಿನಲ್ಲಿ ಕಾಣುವುದಕ್ಕಿಂತ ಗೆಳೆಯ ಕೃಶಿ ತೆಗೆದ ಚಿತ್ರ ಸರಣಿಯಲ್ಲಿ ನೀವೇ ಅನುಭವಿಸುವುದು ಲೇಸು. ಅಲ್ಲಿ ಕೃಶಿ ಕಂತು-ಕಥನದಲ್ಲಿ ನನ್ನಿಂದ ದಿನ ಮುಂದೆ ಓಡಿದ್ದರೆ, ಇತ್ತ ಮೈಸೂರಿನಲ್ಲಿ ರುಕ್ಮಿಣಿ ತನ್ನ ಮಾಲಾಲಹರಿ ಬ್ಲಾಗಿನಲ್ಲಿ ಇನ್ನಷ್ಟು ಆತುರದಲ್ಲಿ ಇಡಿಯ ಪ್ರವಾಸವನ್ನೇ ಮುಗಿಸಿಬಿಟ್ಟಿದ್ದಾಳೆ. ಅಲ್ಲೆಲ್ಲಾ ‘ಕ್ವಿಕ್ಕೀ’ ಸಿಕ್ಕಿತೆಂದು ನನ್ನ ಸಹ-ಯಾನ ಮರೆಯಬೇಡಿ. ಇದುವರೆಗಿನ ಕೊರೆತಕ್ಕೆ ನಿಮ್ಮ ಚಡಪಡಿಕೆ, ಮುಂದಿನ ಭೈರಿಗೆಗೆ ನಿಮ್ಮ ಹಾರೈಕೆ ಕೊಡುತ್ತೀರಲ್ಲಾ?

(ಮುಂದುವರಿಯುವುದು)
(ಚಿತ್ರಗಳು: ಕೃಶಿ)
(ಕೃಪೆ;ಲೇಖಕರ ಅತ್ರಿ ಬ್ಲಾಗ್ ನಿಂದ)