ಬಹಳ ಹಿಂದೆಯೇ ತೀರಿಹೋಗಿರುವ ಮತ್ತು ಬಹಳಷ್ಟು ವಿಖ್ಯಾತರಾಗಿರುವ ಕನ್ನಡದ ಲೇಖಕರೊಬ್ಬರ ಕುರಿತು ಮೊನ್ನೆ ಹಿರಿಯರೊಬ್ಬರು ಮಾತನಾಡುತ್ತಿದ್ದರು. ಅವರದೊಂದು ತರಹ ಗುಟ್ಟಿನ ವಿಷಯವನ್ನು ಜೋರು ದನಿಯಲ್ಲಿ ಮಾತನಾಡುವ ಶೈಲಿ. ಇವರನ್ನು ಸುಮಾರು ಮೂವತ್ತು ವರ್ಷಗಳಿಂದ ಬಲ್ಲೆ. ಆಗಲೂ ಇವರು ಹೀಗೆಯೇ ಇದ್ದರು. ದೂರದಿಂದ ನೋಡಿದರೆ ಯೋಗಿಯ ಹಾಗೆ, ಹತ್ತಿರಕ್ಕೆ ತೆರಳಿದರೆ ಸ್ವಲ್ಪ ಪಂಡಿತನ ಹಾಗೆ, ಇನ್ನೂ ಹತ್ತಿರಕ್ಕೆ ಹೋದರೆ ಮಹಾ ತಂಟೆಕೋರ ತುಂಟನ ಹಾಗೆ ಆಗಿನಿಂದಲೂ ಇರುವವರು. ನಾವು ಕಾಲೇಜಿನಲ್ಲಿ ಓದುತ್ತಿರುವಾಗ ಮಹಾ ಕ್ರಾಂತಿಕಾರಿಗಳ ಹಾಗೆ ಓಡಾಡುತ್ತಿರುವುದನ್ನು ಕಂಡು ಬೈದು ಕಳಿಸಿದ್ದರು.

ಅದು ಚುನಾವಣೆಯ ಸಮಯ. ಮೈಸೂರಿನ ರಾಜವಂಶದ ಯುವರಾಜರೂ ಓಟಿಗೆ ನಿಂತಿದ್ದರು. ಆಗ ಒಂದು ರೀತಿಯ ವಿಕ್ಷಿಪ್ತತೆಯಲ್ಲಿ ಕುದಿಯುತ್ತಿದ್ದ ನಾವು ಚುನಾವಣಾ ರಾಜಕೀಯವನ್ನು ಬಹಿಷ್ಕರಿಸಿ ಎಂದು ಹಳ್ಳಿಹಳ್ಳಿಯಲ್ಲಿ ಹಾಡುಹೇಳುತ್ತಾ ತಮಟೆ ಬಡಿಯುತ್ತಾ ಓಡಾಡುತ್ತಿದ್ದೆವು. ಮಹಾರಾಜರ ಚುನಾವಣಾ ಪ್ರಚಾರದ ಕಾರು ಅಲ್ಲಿಂದ ತೆರಳಿದ ಬಳಿಕ ನಮ್ಮ ಹಾಡು ಮತ್ತು ತಮಟೆ ಮತ್ತು ಭಾಷಣ.ಹಳ್ಳಿಯವರೆಲ್ಲರು ಈ ಓಟು ಎಂಬುದು ಬಂದು ಯಾರದೆಲ್ಲ ಏನೆಲ್ಲ ಮಾತುಗಳನ್ನೆಲ್ಲ ಕೇಳಬೇಕಾಯ್ತಲ್ಲ ಎಂದು ತಲೆಕೆರಕೊಳ್ಳುತ್ತ ಆಕಳಿಸುತ್ತಿದ್ದರು. ನಮ್ಮ ಈ ಚುನಾವಣಾ ಬಹಿಷ್ಕಾರದ ಸುಳಿವು ತಿಳಕೊಂಡ ಈ ಹಿರಿಯರು ಹತ್ತಿರಕ್ಕೆ ಕರೆದು ‘ನೀವು ಉದ್ದಾರ ಆಗಕ್ಕಿಲ್ಲ ಕಣ್ರೋ’ ಎಂದು ಬೈದಿದ್ದರು.

‘ಯಾಕ್ಸಾ?’ ಎಂದು ಕೇಳಿದರೆ ‘ನೀವು ಮಾಡುತ್ತಿರುವುದು ಒಂದು ರೀತಿಯಲ್ಲಿ ಮುಷ್ಟಿಮೈಥುನ ಕಣ್ರೋ, ನಯಾ ಪೈಸೆ ಪ್ರಯೋಜನವಿಲ್ಲ’ ಎಂದು ಒಗಟಿನಂತೆ ಹೇಳಿದ್ದರು. ಅದು ನಮ್ಮಲ್ಲಿ ಬಹುತೇಕರು ಕದ್ದು ಮುಚ್ಚಿ ಮುಷ್ಟಿಮೈಥುನ ಮಾಡುತ್ತಿದ್ದ ಕಾಲ. ನಮ್ಮಲ್ಲಿ ಬಹುತೇಕರಿಗೆ ಅದು ಅಗ್ಗವೂ, ಆಹ್ಲಾದಕರವೂ ಆಗಿದ್ದಂತಹ ಸಮಯ. ಆದರೆ ಈ ಹಿರಿಯರು ಎಲ್ಲರೆದುರಿಗೆ ಅದನ್ನು ಸೈದ್ಧಾಂತಿಕವಾಗಿ ಸಮೀಕರಿಸಿ ಅದರ ಗುಟ್ಟಿನ ಆ ಆಹ್ಲಾದವೇ ಕೆಲಕಾಲ ಹೊರಟು ಹೋಗುವಂತೆ ಬೈದು ಕಳಿಸಿದ್ದರು. ಆದರೆ ಕೆಲಕಾಲದ ನಂತರ ನಾವು ಅದನ್ನೂ ಚುನಾವಣಾ ಬಹಿಷ್ಕಾರವನ್ನೂ ಮತ್ತೆ ಮುಂದುವರಿಸಿದ್ದೆವು.

ಮೊನ್ನೆಯೂ ಹೀಗೆಯೇ ಆಯಿತು. ಈ ಹಿರಿಯರು ಮಾತನಾಡುತ್ತಿದ್ದುದು ಕನ್ನಡದ ವಿಖ್ಯಾತ ಕವಿಗಳೊಬ್ಬರ ಸೌಂದರ್ಯ ಪ್ರಜ್ಞೆ ಮತ್ತು ಮಾನವೀಯ ನೆಲೆಗಟ್ಟಿನ ಕುರಿತಾಗಿತ್ತು. ಈ ವಿಷಯವನ್ನು ಎತ್ತಿದ್ದೂ ಅವರೇ. ಆಮೇಲೆ ಕವಿಗಳನ್ನು ಬೈಯ್ಯಲು ಶುರುಮಾಡಿದ್ದೂ ಅವರೇ. ನಾನು ಸುಮ್ಮನೇ ಇದರಲ್ಲಿ ನನ್ನದೇನೂ ಪಾತ್ರವಿಲ್ಲವೆಂದು ಪಾಪದವನ ಹಾಗೆ ಕೇಳಿಸಿಕೊಳ್ಳುತ್ತಿದ್ದೆ. ಅವರು ಹೇಳುತ್ತಿದ್ದುದು ಆ ಕವಿಗಳ ಮನೆಯ ಕಂಪೌಂಡಿನಲ್ಲಿರುವ ಸೀಬೆಯ ಮರದ ಕುರಿತಾಗಿತ್ತು. ಈ ಸೀಬೆಯ ಮರವೂ ಆ ಕವಿಗಳ ಕಾವ್ಯದಲ್ಲಿ ಆಗಾಗ ಸುಳಿದು ಅಮರವಾಗಿದೆ. ಈ ಸೀಬೆಯ ಮರದ ಹಾಗೆಯೇ ಕವಿಗಳ ಆ ಕಂಪೌಂಡಿನಲ್ಲಿ ಸಪೋಟದ ಮರವೂ, ಮಾವಿನ ಮರವೂ ಇದೆ. ನಾವೂ ಕಾಲೇಜಿನಲ್ಲಿ ಹೋಗುತ್ತಿರುವಾಗ ಈ ಮರಗಳ ಕೆಳಗೆ ಚುಮುಚುಮು ಬಿಸಿಲಿನಲ್ಲಿ ಹೊಳೆಯುತ್ತಾ ಕುಳಿತಿರುತ್ತಿದ್ದ ಕವಿಗಳನ್ನು ಅಚ್ಚರಿ ಗೌರವಗಳಿಂದ ನೋಡುತ್ತಾ ನಿಂತಿರುತ್ತಿದ್ದುದೂ ನನಗೆ ನೆನಪಿದೆ.

‘ಹಿರಿಯರಾದ ಆಕವಿಗಳ ಸೌಂದರ್ಯ ಪ್ರಜ್ಞೆಯ ಕುರಿತಾಗಿ ನನ್ನದೇನೂ ತಕರಾರಿಲ್ಲ. ಅದು ಆ ಕವಿಗಳ ಪೂರ್ವಜನ್ಮದ ಸುಕೃತಕ್ಕಿಂತಲೂ ದೊಡ್ಡದು. ಆದರೆ ನನಗೆ ತಕರಾರಿರುವುದು ಆ ಕವಿಗಳ ಮಾನವೀಯ ನೆಲೆಗಟ್ಟಿನ ಕುರಿತು. ಆ ಕುರಿತು ಯಾರು ಏನು ಹೇಳಿದರೂ ನಾನು ಮಾತ್ರ ಒಪ್ಪುವುದಿಲ್ಲ’ ಎಂದು ಜೋರುದನಿಯಲ್ಲಿ ಹೂಂಕರಿಸಿದ ಅವರು ಅವರ ಸಿಟ್ಟಿಗೆ ಸಾಕ್ಷಿಯೋ ಎಂಬಂತೆ ಸೀಬೆ ಕದ್ದ ಅಪವಾದಕ್ಕೆ ಒಳಗಾದ ಮಾಲಿಯ ಉದಾಹರಣೆಯನ್ನು ಹೇಳಿದರು.

ಸರಕಾರದ ಉನ್ನತ ಹುದ್ದೆಯಲ್ಲಿದ್ದ ಈ ಕವಿಗಳು ತಮ್ಮ ಕಂಪೌಂಡಿನೊಳಗಿನ ತೋಟವನ್ನೂ ಹೂಗಿಡಗಳನ್ನೂ ಸರಕಾರೀ ನೌಕರನಾದ ತಮ್ಮ ಖಚೇರಿಯ ಮಾಲಿಯಿಂದಲೇ ನಿರ್ವಹಿಸುತ್ತಿದ್ದರು. ಖಚೇರಿಯಲ್ಲಿದ್ದರೇನು, ಮನೆಯಲ್ಲಿದ್ದರೇನು ತನ್ನ ಖಾವಂದರು ಎಂದಿಗೂ ದೇವರು ಎಂದೇ ಅಂದುಕೊಂಡಿದ್ದ ಆ ಮಾಲಿ, ಸಾಹೇಬರ ಕಂಪೌಂಡಿನ ತೋಟವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದನು. ಅಲ್ಲಿದ್ದ ಸೀಬೆಯ ಮರವೂ, ಸಪೋಟದ ಗಿಡವೂ, ಮಾವಿನ ಸಸಿಯೂ ಆ ಮಾಲಿಯ ನಿರ್ವಾಜ್ಯವಾದ, ಭಕ್ತಿಪೂರ್ಣವಾದ ಆರೈಕೆಯಿಂದ ಹಸುರಾಗಿ ಹಣ್ಣುಗಳಿಂದ ತುಂಬಿಕೊಂಡು ನಳನಳಿಸುತ್ತಿದ್ದವು. ಆ ಹಸಿರಿನ ನಡುವೆ ನಿರ್ಮಲಚಿತ್ತದಲ್ಲಿ ಯೋಚಿಸುತ್ತಾ ಕುಳಿತ ಆ ಕವಿಗಳೂ ದೂರದಿಂದ ನೋಡಿದರೆ ಭಾವಸಮುದ್ರದಲ್ಲಿ ವಿಹರಿಸುತ್ತಿರುವ ವಿರಾಗಿಯಂತೆ ಕಾಣಿಸುತ್ತಿದ್ದರು.

ಆದರೆ ಈ ಹಿರಿಯರು ಆ ಕವಿಗಳನ್ನು ಬೈಯ್ಯುತ್ತಿದ್ದುದು ಅವರು ವಿರಾಗಿಯಂತೆ ಕಾಣಿಸುತ್ತಿದ್ದ ಕಾರಣಕ್ಕಲ್ಲ. ಬದಲಾಗಿ ಕವಿಗಳು ತಮ್ಮ ಮಾಲಿಯನ್ನು ಸೀಬೆಹಣ್ಣು ಕದ್ದ ಅಪವಾದಕ್ಕೆ ಸಿಲುಕಿಸಿ ಆತನ ಸಂಬಳದಿಂದ ಎರಡು ರೂಪಾಯಿಗಳನ್ನು ದಂಡದ ರೂಪದಲ್ಲಿ ವಸೂಲು ಮಾಡಿದ್ದಕ್ಕೆ. ಇದು ಸುಮಾರು ಐವತ್ತು ವರ್ಷಗಳ ಹಿಂದೆ ನಡೆದ ಘಟನೆಯಾಗಿತ್ತು. ಆಗ ಆ ಮಾಲಿಗೆ ಸಿಗುತ್ತಿದ್ದುದು ತಿಂಗಳಿಗೆ ಸುಮಾರು ನಲವತ್ತು ರೂಪಾಯಿಗಳು. ಅದೂ ಅಲ್ಲದೆ ಆ ಮಾಲಿಯು ಸೀಬೆಹಣ್ಣನ್ನು ಕದ್ದು ತಿಂದಿರಲಿಲ್ಲ.ಬದಲಾಗಿ ನೆಲದಲ್ಲಿ ಬಿದ್ದಿದ್ದ ಸೀಬೆಹಣ್ಣನ್ನು ಎತ್ತಿಕೊಂಡು ಕೈಯಲ್ಲಿ ಹಿಡಕೊಂಡಿದ್ದ ಅಷ್ಟೇ!. ಆತನು ಕೈಯಲ್ಲಿ ಸೀಬೆಹಣ್ಣು ಹಿಡಿದುಕೊಂಡು ನಿಂತಿದ್ದಂತೆ ಕವಿಗಳು ಖಚೇರಿಯಿಂದ ಮರಳಿ ಗೇಟುತೆರೆದು ಒಳಬಂದರು. ಬಂದವರಿಗೆ ಮಾಲಿಯು ಸೀಬೆಹಣ್ಣನ್ನು ಕದ್ದು ಮುಚ್ಚಿಟ್ಟುಕೊಳ್ಳುತ್ತಿರುವಂತೆ ಕಂಡಿತು. ಕಂಡವರು ಕೆಂಡಾಮಂಡಲವಾಗಿ ಮಾಲಿಯನ್ನು ತರಾಟೆಗೆ ತೆಗೆದುಕೊಂಡರು.

ಮಾಲಿಯು ‘ಇಲ್ಲ ಬುದ್ದೀ. ನೆಲದಲ್ಲಿ ಬಿದ್ದಿತ್ತು. ಅಳಿಲುಕುಂಚ ತಿಂದುಹಾಕಬಹುದು ಎಂದು ಒಳಗೆ ಮಕ್ಕಳಿಗೆ ಕೊಡಲು ಎತ್ತಿಕೊಂಡೆ ಅಷ್ಟು ಹೊತ್ತಿಗೆ ನೀವು ಬಂದಿರಿ. ನೀವು ನನ್ನ ದೇವರು. ದೇವರ ಮರದ ಫಲವನ್ನು ಕದ್ದು ಯಾವ ಪಾಪ ಕಟ್ಟಿಕೊಳ್ಳಲಿ. ಈ ಬಡವನಿಗೆ ದಂಡ ಹಾಕಬೇಡಿ ಬುದ್ದೀ’ ಎಂದು ಎಷ್ಟು ಅಲವತ್ತುಕೊಂಡರೂ ಕವಿಗಳ ಮನ ಕರಗಲಿಲ್ಲವಂತೆ. ಆತನ ತಿಂಗಳ ಸಂಬಳದಿಂದ ಎರಡು ರೂಪಾಯಿಗಳನ್ನು ಕಟ್ ಮಾಡಿಸಿಯೇ ಬಿಟ್ಟಿದ್ದರು. ‘ಹಾಗಾಗಿ ನೀವು ಬೇರೆ ಏನು ಬೇಕಾದರೂ ಮಾಡಿ. ಆದರೆ ಆ ಕವಿಗಳ ಮಾನವೀಯ ನೆಲೆಗಟ್ಟಿನ ಕುರಿತ ನನ್ನ ತಕರಾರು ನಾನು ಸತ್ತು ಹೋದರೂ ಈ ಗಾಳಿಯಲ್ಲಿ ಇದ್ದೇ ಇರುತ್ತದೆ’ ಎಂದು ಹಿರಿಯರು ತಣ್ಣಗೆ ಹೇಳುತ್ತಲೇ ಇದ್ದರು.

ಆ ಕವಿಗಳ ಬರಹದಲ್ಲಿ ಬರುವ ಒರತೆಯಂತಹ ಮನುಷ್ಯ ಪ್ರೀತಿಯ ಕುರಿತ ಭಯಂಕರ ಅಭಿಮಾನಿಯಾಗಿರುವ ನಾನು ‘ಇಲ್ಲ ಗುರುಗಳೇ ನೀವು ಹಾಗನ್ನಬೇಡಿ. ಕವಿಯು ಬದುಕಿರುವುದಕ್ಕೂ, ಕವಿಯು ಬರೆಯುವುದಕ್ಕೂ ನೀವು ಹಾಗೆ ಸ್ಕೇಲು ಎಳೆದು ಅಳತೆ ನೋಡಬಾರದು. ಕವಿಗಳಿಗೆ ಬೇರೆಯ ಕೆಲಸವೂ ಇರುತ್ತದೆ. ಅವರು ಹಿರಿಯ ಅಧಿಕಾರಿಗಳಾಗಿದ್ದವರು.ಕೈಕೆಳಗೆ ಇರುವವರು ಕಳ್ಳತನ ಮಾಡದ ಹಾಗೆ, ಮೈಗಳ್ಳತನ ರೂಡಿಸಿಕೊಳ್ಳದ ಹಾಗೆ ನೋಡಿಕೊಳ್ಳುವ ಕಾನೂನುಬದ್ಧ ಕರ್ತವ್ಯಗಳೂ ಅವರಿಗೆ ಇರುತ್ತವೆ. ಹಾಗಾಗಿ ನೀವು ಏನು ಹೇಳಿದರೂ ನಾನು ಕವಿಗಳ ಪರವೇ’ ಎಂದು ಸುಳ್ಳುಸುಳ್ಳಾಗಿ ವಾದ ಹೂಡುತ್ತಿದ್ದೆ. ‘ನೀವು ಬಿಡಿ ಇವರೇ, ನೀವೂ ಸರಕಾರೀ ನೌಕರರೇ, ಅವರನ್ನು ಸಮರ್ಥಿಸಿಕೊಳ್ಳದೆ ಇನ್ನೇನು ತಾನೇ ಮಾಡುತ್ತೀರಿ’ ಎಂದು ಅವರು ಗಡ್ಡದಲ್ಲೇ ನಗುತ್ತಾ ಗೊಣಗುತ್ತಾ ಹೊರಟು ಹೋದರು. ಮೂವತ್ತು ವರ್ಷಗಳ ನಂತರವೂ ಅದೇ ಸಿಟ್ಟಿನ ಹಠಮಾರಿ ಮುದುಕ!

ಇಂದು ಬೆಳಗ್ಗೆ ಮಗನ ಸೈಕಲ್ಲು ರಿಪೇರಿ ಮಾಡಿಸಲು ಸೈಕಲ್ಲು ದೂಡಿಕೊಂಡು ಆ ಕವಿಗಳ ಮನೆಯ ಮುಂದೆ ಹೋಗುತ್ತಿದ್ದೆ. ಮಳೆ ನಿಂತ ನೆಲದಲ್ಲಿ ಹೊಳೆಯುತ್ತಿರುವ ಅದೇ ಮುದಿ ಸೀಬೆ ಮರ. ಹತ್ತಾರು ಇಣಚಿಗಳೂ, ಹಕ್ಕಿಗಳೂ ಯಾವುದೇ ಎಗ್ಗಿಲ್ಲದೆ ಗೆಲ್ಲುಗಳ ಮೇಲೆ ಹರಿದಾಡಿಕೊಂಡು ಕಳಿತ ಸೀಬೆಹಣ್ಣುಗಳನ್ನು ಮೆಲ್ಲುತ್ತಿದ್ದವು. ಈಗ ಹಕ್ಕಿಗಳಿಗೂ, ಅಳಿಲುಗಳಿಗೂ ಅಗ್ಗದ ಮತ್ತು ಆಹ್ಲಾದಕರವಾದ ಸೀಬೆಹಣ್ಣುಗಳು ಎಂದುಕೊಂಡು ಮುಂದೆ ಹೋದೆ.