“ಅಂದು ನಾನು ಆಸ್ಪತ್ರೆಯಲ್ಲಿದ್ದೆ.ನನ್ನ ಮಂಚದ ಎದುರಿಗೆ ರಕ್ತದ ಕ್ಯಾನ್ಸರಿನಿಂದ ತೀವ್ರವಾಗಿ ಬಳಲುತ್ತಿದ್ದ ಸುಂದರ ಬಾಲಕನನ್ನು ನೋಡಿದಾಗ ನನಗಿಂತಲೂ ಅಧಿಕ ದಾರುಣ ಸ್ಥಿತಿಯಲ್ಲಿರುವವರು ಇದ್ದಾರೆನ್ನುವ ಸತ್ಯ ನನ್ನರಿವಿಗೆ ಬಂತು. ಆಗ ನನಗನ್ನಿಸಿತು – ನನ್ನ ಸ್ಥಿತಿ ಅಷ್ಟೇನೂ ಅಸಹನೀಯವಲ್ಲವೆಂದು. ಇಂದಾದರೂ ಅಷ್ಟೇ, ಯಾವಾಗ ನಾನು ನನ್ನ ಸ್ಥಿತಿ ಬಗ್ಗೆ ಪರಿತಪಿಸಲು ಪ್ರಾರಂಭಿಸುತ್ತೇನೋ, ಅಂದು ನಾನು ಆ ಹುಡುಗನನ್ನು ನೆನೆಸಿ ಮತ್ತೆ ಜಾಗೃತನಾಗುತ್ತೇನೆ.”

ನಿನ್ನೆ ತಾನೇ ತೀರಿಹೋದ ಸ್ಟೀಫನ್ ಹಾಕಿಂಗ್ ಕುರಿತು ಎ.ಪಿ ರಾಧಾಕೃಷ್ಣ ಈ ಹಿಂದೆ ಬರೆದಿದ್ದ ಲೇಖನ.

೨೦೦೧ ಜನವರಿಯಲ್ಲಿ ಮುಂಬೈಯ ಟಾಟಾ ಮೂಲಭೂತ ಸಂಶೋಧನಾಲಯದಲ್ಲಿ  ‘ಎಳೆ ಸಿದ್ಧಾಂತ’ದ (String Theory) ಬಗ್ಗೆ ಏಪ೯ಡಿಸಲಾಗಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾರತಕ್ಕೆ ಹಾಕಿಂಗ್ ಭೇಟಿ ನೀಡಿದ ಸಂದರ್ಭದಲ್ಲಿ ಸ್ಟೀಫೆನ್ ಹಾಕಿಂಗ್ ಅವರ ಉಪನ್ಯಾಸವನ್ನು ದೂರದಶ೯ನ ನೇರ ಪ್ರಸಾರಿಸಿತು. ಆ ಕಾರ್ಯರ್ಕಮ ಅನಿರ್ವಚನೀಯ ಅನುಭವ ನೀಡಿತು. ಆ ತನಕ ಛಾಯಾಚಿತ್ರಗಳಲ್ಲಿ, ಪುಸ್ತಕಗಳಲ್ಲಷ್ಟೇ ಕಂಡ ಸ್ಟೀಫೆನ್ ಹಾಕಿಂಗ್ ಅಂದು ಟಿವಿ ಪರದೆ ಮೇಲೆ ಕಾಣಿಸಿಕೊಂಡರು. ಗಾಲಿ ಕುಚಿ೯ಗಂಟಿತ್ತು ಅವರ ಕೃಶಕಾಯ. ಹೆಗಲ ಮೇಲೆ ವಾಲಿಕೊಂಡ ತಲೆ; ವಾರೆಯಾಗಿ ತುಸು ತೆರೆದುಕೊಂಡ ಬಾಯಿ. ಒಂದೆಡೆಗೆ ತಿರುಚಿಕೊಂಡ ಕಾಲುಗಳು, ಮುರುಟಿಕೊಂಡ ಕೈಗಳು. ಗಾಲಿ ಕುರ್ಚಿಯಲ್ಲಿ ಒಂದು ಗುಪ್ಪೆಯಾಗಿ ಕುಳಿತ ದೇಹ. ದಪ್ಪ ಕನ್ನಡಕದೊಳಗಿಂದ ಕಣ್ಣು ಮಿಟುಕಿಸದೇ ಹೋದರೆ, ವಿಚಿತ್ರ ಗೊಂಬೆಯೊಂದು ಅಲ್ಲಿರುವಂತೆ ಭಾಸವಾದರೆ ಅಚ್ಚರಿಯಿಲ್ಲ. ಅವರು ಈ ಗಾಲಿ ಕುರ್ಚಿಗಂಟಿ ವರ್ಷಗಳೇ ಉರುಳಿಹೋಗಿವೆ. ನಲವತ್ತು ವರ್ಷಗಳಷ್ಟು ಹಿಂದೆ ಅವರು ಗಾಲಿ ಕುರ್ಚಿಗೇರಿದರು – ನಡೆದಾಡುವುದಕ್ಕೆ ಸಂಪೂರ್ಣ ಅಸಮರ್ಥರಾದಾಗ.

ಅಂದ ಹಾಗೆ ಹಾಕಿಂಗ್ ಅಂಟಿಕೊಂಡ ಗಾಲಿ ಕುರ್ಚಿ ಸಾಮಾನ್ಯವಾದದ್ದಲ್ಲ. ಅದರಲ್ಲೊಂದು ಕಂಪ್ಯೂಟರ್ ಇದೆ. ಅದರ ಕೀ ಬೋರ್ಡಿನ ಮೇಲೆ ಹಾಕಿಂಗ್ ಬೆರಳುಗಳು ಕಷ್ಟದಲ್ಲಿ ಓಡಾಡಿದಂತೆ – ಕಂಪ್ಯೂಟರಿಗೆ ಊಡಿದ ಆ ಸಂದೇಶಗಳು ಧ್ವನಿಯಾಗಿ ಹೊಮ್ಮುತ್ತದೆ. ಅಂದರೆ ನಾವು ಆಲಿಸುವ ತೀರ ಏಕತಾನತೆಯ ಆ ಧ್ವನಿ ಹಾಕಿಂಗ್ ಅವರದಲ್ಲ. ಏಕೆಂದರೆ ಅವರು ಧ್ವನಿ ಹೊರಡಿಸಲೂ ಅಶಕ್ತರು! ಅವರು ಗಾಲಿ ಕುರ್ಚಿಗೇರಿ ಸುಮಾರು ನಲವತ್ತು ವರ್ಷಗಳೇ ಕಳೆದಿರಬಹುದು.

ಜನವರಿ ೮, ೨೦೦೨. ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸಡಗರವೋ ಸಡಗರ. ಅಂದು ಇಪ್ಪತ್ತನೇ ಶತಮಾನದ ಶ್ರೇಷ್ಠ ಖಗೋಳ ವಿಜ್ಞಾನಿಗಳಲ್ಲೊಬ್ಬರಾದ ಸ್ಟೀಫೆನ್ ಹಾಕಿಂಗ್ ಅವರ ಷಷ್ಟ್ಯಬ್ದ ಸಮಾರಂಭ – ಅರವತ್ತನೇ ಹುಟ್ಟುಹಬ್ಬದ – ಆಚರಣೆಗೆ ಸಿದ್ದಗೊಳ್ಳುತ್ತಿತ್ತು ಕೇಂಬ್ರಿಡ್ಜ್. ಆ ಪ್ರಯುಕ್ತ ಹಾಕಿಂಗ್ ಅವರ ವೈಜ್ಞಾನಿಕ ಸಂಶೋಧನೆ ಮತ್ತು ಕೊಡುಗೆಗಳ ಬಗ್ಗೆ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಅಮೇರಿಕದ ಖಗೋಳ ವಿಜ್ಞಾನಿಗಳಾದ ಮಾರ್ಟಿನ್ ರೀಸ್,  ಕಿಪ್ ತೋರ್ನ್ ಮತ್ತು ಗಣಿತಶಾಸ್ಟ್ರಜ್ಞ ರೋಜರ್ ಪೆನ್ ರೋಸ್ ಭಾಗವಹಿಸಿದರು. ಸ್ಟೀಫೆನ್ ನಮ್ಮ ಕಾಲದ ಉತ್ಕೃಷ್ಠ ಖಗೋಳ ವಿಜ್ಞಾನಿ. ಕೃಷ್ಣ ವಿವರಗಳ (Black Holes) ಬಗ್ಗೆ ನಡೆಸಿದ ಸಂಶೋಧನೆಗಳ ಮೂಲಕ ಗುರುತ್ವ ಬಲದ ಬಗ್ಗೆ ಅವರು ನೂತನ ಅರಿವು ಮೂಡಿಸಿದ್ದಾರೆ ಎಂದು ರೀಸ್ ಹೇಳಿದರೆ, ವಿಶ್ವದ ಬಗ್ಗೆ ನಮ್ಮ ದೃಷ್ಟಿಗೆ ನೂತನ ಆಯಾಮ ಕಲ್ಪಿಸಿದ ಹಾಕಿಂಗ್ ಅವರಿಗೆ ನಾವು ಕೃತಜ್ಞರಾಗಿರಬೇಕು ಎಂದು ಪೆನ್ ರೋಸ್ ನುಡಿದರು.

ಆದರೆ ಯಾರು ಗ್ರಹಿಸಿದ್ದರು – ಹಾಕಿಂಗ್ ತಮ್ಮ ಅರವತ್ತನೇ  ಹುಟ್ಟುಹಬ್ಬವನ್ನು ಆಚರಿಸಲು ಶಕ್ತರಾದಾರೆಂದು? ಏಕೆಂದರೆ ಅಪರೂಪದಲ್ಲಿ ಅತ್ಯಪರೂಪದ ವ್ಯಾಧಿಗೆ ತುತ್ತಾದವರು ಇವರು. ಕಳೆದ ಮೂವತ್ತು ವರ್ಷಗಳಿಂದ ಗಾಲಿಕುರ್ಚಿಗೆ ಅಂಟಿಕೊಂಡಂತಿರುವ ಇವರು ವೈದ್ಯರ ನಿರೀಕ್ಷೆ ಮೀರಿ ಬದುಕಿದ್ದಾರೆ. ಬದುಕಿದ್ದಷ್ಟೇ ಅಲ್ಲ, ಖಭೌತ ವಿಜ್ಞಾನದಲ್ಲಿ ಬೆರಗು ಹುಟ್ಟಿಸುವ ಸಾಧನೆ ಮಾಡಿ ಅಸಾಧಾರಣ ಮನೋಬಲ ಮತ್ತು ಸ್ಥೈರ್ಯದ ಪ್ರತೀಕವಾಗಿದ್ದಾರೆ ಅವರು.

ಸ್ಟೀಫೆನ್ ಹಾಕಿಂಗ್ ಹುಟ್ಟಿನಿಂದ ಹೀಗಿರಲಿಲ್ಲ. ಇವರು ಹುಟ್ಟಿದ್ದು ೧೯೪೨ ಜನವರಿ ೮ ರಂದು ಇಂಗ್ಲೆಂಡಿನ ಲಂಡನ್ ಸಮೀಪದ ಆಕ್ಸಫರ್ಡಿನಲ್ಲಿ. ತಂದೆ ಫ್ರಾಂಕ್ ಹಾಕಿಂಗ್ ವೃತ್ತಿಯಲ್ಲಿ ವೈದ್ಯ. ತಾಯಿ ಇಸಾಬೆಲ್ ಗೃಹಿಣಿ. ಮನೆಯಲ್ಲಿ ಸುಸಂಕೃತ ಪರಿಸರ. ಇ೦ಗ್ಲೆಂಡಿನ ಅತ್ಯುತ್ತಮ ಶಾಲೆಯಾದ ಸೆಂಟ್ ಅಲ್ಬಾನ್ಸಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಗಣಿತ ಮತ್ತು ಭೌತ ವಿಜ್ಞಾನಗಳಲ್ಲಿ ಇವರ ನಿಶ್ಚಿತ ಪ್ರತಿಭೆ ಶಾಲಾ ದಿನಗಳಲ್ಲೇ ಗುರುತಿಸಲ್ಪಟ್ಟಿತು. ಯಾವುದೇ ಗಣಿತ ಅಥವಾ ಭೌತ ವಿಜ್ಞಾನದ ಕ್ಲಿಷ್ಟ ಸಮಸ್ಯೆಗಳಿಗೆ  ಹಾಕಿಂಗ್ ಲೀಲಾಜಾಲವಾಗಿ ಉತ್ತರ ಪಡೆಯುತ್ತಿದ್ದರು.

ಕಾಲೇಜಿಗೆ ಸೇರುವ ಹಂತದಲ್ಲಿ ತಂದೆ ಮತ್ತು ಮಗನ ಮಧ್ಯೆ ವಾಗ್ವಿವಾದ ನಡೆಯಿತಂತೆ. ಫ್ರಾಂಕ್ ಗೆ ತನ್ನ ಮಗ ದೊಡ್ಡ ವೈದ್ಯನಾಗಬೇಕೆಂಬ ಆಸೆಯಾದರೆ, ಸ್ಟೀಫೆನ್‌ಗೆ ತಾನೊಬ್ಬ ಭೌತ ವಿಜ್ಞಾನಿಯಾಗಬೇಕೆಂಬ ಗುರಿ. ಕೊನೆಯಲ್ಲಿ ಗೆದ್ದದ್ದು – ಸ್ಟಿಫೆನ್. ತಮ್ಮ ೧೮ನೇ ವಯಸ್ಸಿನಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದರು – ಬ್ರಹ್ಮಾಂಡೀಯ ವಿಜ್ಞಾನದಲ್ಲಿ (Cosmology) ಸಂಶೋಧನ ವಿದ್ಯಾರ್ಥಿಯಾಗಿ. ಸ್ಪುರದ್ರೂಪಿ ತರುಣ ಹಾಕಿ೦ಗ್ – ಎಲ್ಲ ತರುಣರ೦ತೆ – ಅತ್ಯುತ್ಸಾಹದ ಬುಗ್ಗೆಯಾಗಿದ್ದರು. ವಿಶ್ವದ ಹುಟ್ಟು ಮತ್ತು ವಿಕಾಸದ ಬಗೆಗಿನ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರ ಅರಸುತ್ತ ಅವರು ಹೊರಟಿದ್ದರು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು.

೧೯೬೨ರ ಕ್ರಿಸ್ಮಸ್ ದಿನ ತನ್ನ ಸ್ನೇಹಿತರಿಗೆ ಔತಣ ಕೂಟ ಏಪ೯ಡಿಸಲು ಹಾಕಿಂಗ್ ನಿಶ್ಚಯಿಸಿದರು. ಆದರೆ ವಾರದ ಮೊದಲು ತೀವ್ರವಾಗಿ ಅಸ್ವಸ್ಥರಾದರು. ಕೈಕಾಲು ಗಂಟುಗಳಲ್ಲಿ ನೋವು ಮತ್ತು ನಿಶ್ಯಕ್ತಿ. ಮಾತು ತೊದಲಾಯಿತು. ಕೂಟ ಅನಿವಾರ್ಯವಾಗಿ ರದ್ದಾಯಿತು. ಹಾಕಿಂಗ್ ಆಸ್ಪತ್ರೆ ಸೇರಿದರು. ಕೋಟಿಗೊಬ್ಬ ಮನುಷ್ಯನಿಗೆ ಬರಬಹುದಾದ ಅತ್ಯಪರೂಪದ ಮಾರಕ ವ್ಯಾಧಿಗೆ ಹಾಕಿಂಗ್ ಬಲಿಯಾಗಿದ್ದಾರೆಂದು ತಜ್ಞ ವೈದ್ಯರ ತಂಡ ಕೂಲಂಕುಷ ತಪಾಸಣೆ ನಡೆಸಿ ಹೇಳಿತು.

ಸ್ಟೀಫೆನ್ ಹಾಕಿಂಗ್ ಅವರಿಗೆ ಬಂದ ವ್ಯಾಧಿಯ ಹೆಸರು – ನ್ಯೂರೋಮೋಟರ್ ಡಿಸೀಸ್ – ಇಲ್ಲಿ ವ್ಯಕ್ತಿಯ ಅವಯವಗಳನ್ನು ನಿಯಂತ್ರಿಸುವ ಕೇಂದ್ರ ನರಮಂಡಲ ನಿಧಾನವಾಗಿ ನಿಷ್ಕ್ರಿಯಗೊಳ್ಳುತ್ತ ಹೋಗುತ್ತದೆ; ದಿನದಿಂದ ದಿನಕ್ಕೆ ನಿಶ್ಯಕ್ತನಾಗುತ್ತ ಪಾಶ್ವ೯ವಾಯುವಿಗೆ (paralysis)  ತುತ್ತಾಗುತ್ತಾನೆ. ಇಷ್ಟೆಲ್ಲ ಆದರೂ – ಆಶ್ಚರ್ಯವೆಂದರೆ ಆತನ ಮೆದುಳಿನಲ್ಲಿ ಚಿಂತನಾ ವಿಭಾಗ ಅಥವಾ ಬೌದ್ಧಿಕ ಪ್ರಜ್ಞೆಯನ್ನು ಜಾಗೃತಿಯಲ್ಲಿಡುವ ಭಾಗ ಮಾತ್ರ ಎಂದಿನಂತೆ ತನ್ನ ಕೆಲಸ ಮಾಡುತ್ತಿರುತ್ತದೆ!! ನಡೆದಾಡಲು ಸಾಧ್ಯವಾಗದೇ ಹೋದರೂ ಚಿಂತನೆ ಮಾಡುವ ಸಾಮರ್ಥ್ಯ ಚೆನ್ನಾಗಿಯೇ ಉಳಿದಿರುತ್ತದೆ. ಈ ಘೋರ ವ್ಯಾಧಿಗೆ ಚಿಕಿತ್ಸೆ ಎಂಬುದಿಲ್ಲ. ಯಾತನೆಯಿಂದ ವಿಮುಕ್ತಿ ಹೊಂದುವುದು ಸಾವಿನಲ್ಲಿ ಮಾತ್ರ.

ಆಸಾಧಾರಣ ಸ್ಥೈರ್ಯ

ತನಗೆರಗಿದ ವ್ಯಾಧಿಯ ಬಗ್ಗೆ ತಿಳಿದಾಗ ಹಾಕಿಂಗ್ ತೀವ್ರ ಮಾನಸಿಕ ಕ್ಲೇಶಕ್ಕೆ ಒಳಗಾದರು. ಎಲ್ಲದರಲ್ಲೂ ನಿರಾಸಕ್ತಿ. ಕೆಕ್ಕರಿಸಿ ನೋಡುತ್ತಿರುವ ಮರಣದ ಬಗ್ಗೆ ಚಿಂತೆ ಹೆಚ್ಚಿತು. ಇಂಥ ಸಂದರ್ಭದಲ್ಲಿ ನಡೆದ ಘಟನೆಯೊಂದು ಅವರ ಬದುಕಿಗೆ ಹೊಸ ದೃಷ್ಟಿ ಒದಗಿಸಿತು. ಆ ಘಟನೆ ಬಗ್ಗೆ ಸ್ವಯಂ ಹಾಕಿಂಗ್ ಬರೆಯುತ್ತಾರೆ.

“ಅಂದು ನಾನು ಆಸ್ಪತ್ರೆಯಲ್ಲಿದ್ದೆ. ಎಲ್ಲಡೆಯೂ ಒಂದಲ್ಲ ಒಂದು ರೋಗಕ್ಕೆ ತುತ್ತಾಗಿ ಜರ್ಝರಿತರಾದವರು. ನನ್ನ ಮಂಚದ ಎದುರಿಗೆ ರಕ್ತದ ಕ್ಯಾನ್ಸರಿನಿಂದ ತೀವ್ರವಾಗಿ ಬಳಲುತ್ತಿದ್ದ ಸುಂದರ ಬಾಲಕನನ್ನು ನೋಡಿದಾಗ ನನಗಿಂತಲೂ ಅಧಿಕ ದಾರುಣ ಸ್ಥಿತಿಯಲ್ಲಿರುವವರು ಇದ್ದಾರೆನ್ನುವ ಸತ್ಯ ನನ್ನರಿವಿಗೆ ಬಂತು. ಆಗ ನನಗನ್ನಿಸಿತು – ನನ್ನ ಸ್ಥಿತಿ ಅಷ್ಟೇನೂ ಅಸಹನೀಯವಲ್ಲವೆಂದು. ಇಂದಾದರೂ ಅಷ್ಟೇ, ಯಾವಾಗ ನಾನು ನನ್ನ ಸ್ಥಿತಿ ಬಗ್ಗೆ ಪರಿತಪಿಸಲು ಪ್ರಾರಂಭಿಸುತ್ತೇನೋ, ಅಂದು ನಾನು ಆ ಹುಡುಗನನ್ನು ನೆನೆಸಿ ಮತ್ತೆ ಜಾಗೃತನಾಗುತ್ತೇನೆ.”

ಇದೇ ಸಂದರ್ಭದಲ್ಲಿ ಹಾಕಿಂಗ್‌ಗೆ ಜೀವನದಲ್ಲಿ ಹೊಸ ಉತ್ಸಾಹ ಮೂಡಲು ಕಾರಣವಾದದ್ದು ಜೇನ್ ಎನ್ನುವ ಸುಂದರ ತರುಣಿ. ವಷ೯ದ ಹಿಂದೆ ಸಂತೋಷ ಕೂಟವೊಂದರಲ್ಲಿ ಆದ ಪರಿಚಯ ಸ್ನೇಹವಾಗಿ ಪ್ರೇಮಕ್ಕೆ ತಿರುಗಿತು. ಸ್ಟೀಫೆನ್ ಮಾರಕ ವ್ಯಾಧಿಯಿಂದ ಜೀವಚ್ಛವ ಆಗುತ್ತಾನೆನ್ನುವುದು ತಿಳಿದರೂ, ಜೇನ್ ಪ್ರೀತಿಯಿಂದ ವಿಮುಖಳಾಗಲಿಲ್ಲ – ಬದಲಾಗಿ ಒಲವು ಮತ್ತಷ್ಟು ಗಾಢವಾಯಿತು. ೧೯೬೩ ರಲ್ಲಿ ಇಬ್ಬರೂ ಮದುವೆಯಾದರು. ಕೆಲವು ವಷ೯ಗಳಲ್ಲಿ ಜೇನ್ ಎರಡು ಮಕ್ಕಳ ತಾಯಿಯಾದಳು. ಮುಂದೊಂದು ದಿನ ಜೇನ್ ಮತ್ತು ಹಾಕಿಂಗ್ ನಡುವೆ ಮನಸ್ತಾಪವಾಗಿ ವಿಚ್ಚೇದನವೂ ಆದದ್ದು ಬೇರೆಯೇ ಕಥೆ.

ಡಾಕ್ಟರೇಟ್ ಪದವಿಗಾಗಿ ಪ್ರಾರಂಭಿಸಿದ ಸಂಶೋಧನೆಯನ್ನು ಪೂರ್ಣಗೊಳಿಸಲು ದೈಹಿಕ ಕಾರಣದಿಂದಾಗಿ ಹಾಕಿಂಗ್ ಗೆ ಸಾಧ್ಯವಾಗಲಾರದೆಂದು ವೈದ್ಯರು ಬಹಿರಂಗವಾಗಿ ಹೇಳದೇ ಹೋದರೂ, ಆಪ್ತ ವಲಯದಲ್ಲಿ ಗುಟ್ಟಾಗಿ ಉಸುರಿದರು. ಸ್ವತ: ಹಾಕಿಂಗ್ ಅವರ ಮಾಗ೯ದರ್ಶಿ ಪ್ರೊ. ಡೆನ್ನಿಸ್ ಸ್ಕೀಮಾ ಅವರಿಗೂ ನಂಬುಗೆ ಇರಲಿಲ್ಲ. ಏಕೆಂದರೆ ಹಾಕಿಂಗ್ ದೈಹಿಕ ತ್ರಾಣ ಕುಸಿಯುತ್ತಿತ್ತು. ಆದರೆ ಸ್ಟೀಫೆನ್ ಹಾಕಿಂಗ್ ಅವರ ಮಾನಸಿಕ ಸ್ಥೈಯ೯ ವೈದ್ಯರ ನಿರೀಕ್ಷೆಯನ್ನು ಸುಳ್ಳಾಗಿಸಿತು.

ಹಾಕಿಂಗ್ ರೇಡಿಯೇಷನ್ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಹಾಕಿಂಗ್

ತನ್ನ ಅನಾರೋಗ್ಯದಲ್ಲೂ ಡಾಕ್ಟರೇಟ್ ಪದವಿಗಾಗಿ ಹಾಕಿಂಗ್ ಆಯ್ಡುಕೊಂಡ ವಿಷಯ – ಈ ವಿಶ್ವದ ಹುಟ್ಟಿನ ವೈಚಿತ್ರ್ಯದ ಬಗ್ಗೆ. ವಿಶ್ವ ಹುಟ್ಟಿದ ಬಗೆಯನ್ನು ಹಾಕಿಂಗ್ ಚಿಂತನೆಗೆ ತೊಡಗಿದರು. ಸಂಶೋಧನೆಯ ಆ ದಿನಗಳಲ್ಲಿ ರೋಜರ್ ಪೆನ್ರೋಸ್ ಎನ್ನುವ ಪ್ರತಿಭಾವಂತ ಗಣಿತಜ್ಞನ ಪರಿಚಯ ಇವರಿಗಾಯಿತು ಮತ್ತು ಆ ಪರಿಚಯ ಮುಂದೆ ಗಾಢ ಸ್ನೇಹಕ್ಕೆ ತಿರುಗಿತು. ಪೆನ್ರೋಸ್ ಕೃಷ್ಣ ವಿವರಗಳಿಗೆ  ಸಂಬಂಧಿಸಿದಂತೆ ಆಗಷ್ಟೇ ಹೊಸದೊಂದು ಪರಿಕಲ್ಪನೆಯನ್ನು ಮಂಡಿಸಿದ್ದರು.

ಸೂಯ೯ನ ದ್ರವ್ಯರಾಶಿಗಿಂತ ಸುಮಾರು ಐದು ಪಟ್ಟು ಅಥವಾ ಹೆಚ್ಚಿಗೆ ದ್ರವ್ಯರಾಶಿ ಇರುವ ಬೃಹನ್ನಕ್ಷತ್ರಗಳು ತಮ್ಮ ಅಗಾಧ ದ್ರವ್ಯರಾಶಿಯ ಕಾರಣದಿಂದ ಗುರುತ್ವ ಕುಸಿತಕ್ಕೆ – ಸಂಕೋಚನಕ್ಕೆ – ಒಳಗಾಗಿ ತಲಪುವ ಅಂತಿಮ ಸ್ಥಿತಿಯೇ ಕೃಷ್ಣ ವಿವರ ಅಥವಾ ಕಪ್ಪುರಂದ್ರ. ಇದು ಹೇಗಾಗುತ್ತದೆ ಇತ್ಯಾದಿ ವಿವರಗಳನ್ನು ಬಿತ್ತರಿಸಲು ಬೇರೊಂದು ಲೇಖನ ಬೇಕಾದೀತು. ಇಂಥ ರೋಚಕ ಕಾಯದ್ದು ಅತ್ಯಂತ ಚಿಕ್ಕ ಗಾತ್ರ, ಅಧಿಕ ಸಾಂದ್ರತೆ, ಊಹಾತೀತ ಗುರುತ್ವ ಬಲ. ಸನಿಹದಲ್ಲಿ ಬಂದ ಎಲ್ಲವನ್ನೂ ನುಂಗುತ್ತದೆ. ಆದರೆ ಇದರ ಬಂಧನದಿ೦ದ ಯಾವುದೂ ತಪ್ಪಿಸಿಕೊಂಡು ಹೊರ ಹೋಗಲಾರದು – ಬೆಳಕಿನ ಕಿರಣ ಕೂಡ. ಅಂದರೆ ಆಕಾಶದ ಅಸೀಮ ವಿಸ್ತಾರದಲ್ಲಿ ಕೃಷ್ಣ ವಿವರಗಳಿದ್ದರೂ ನಮಗೆ ಗೋಚರಿಸಲಾರವು – ಪ್ರಶಾಂತವಾಗಿ ಹರಿಯುತ್ತಿರುವ ನದಿಯಲ್ಲಿರುವ ಅಪಾಯಕಾರಿ ಸುಳಿಗಳು ಹೇಗೆ ಗೋಚರಿಸಲಾರವೋ ಹಾಗೆಯೇ. ಪೆನ್ರೋಸ್ ಹೇಳುವ ಪ್ರಕಾರ ತೀವ್ರ ಗುರುತ್ವ ಕುಸಿತಕ್ಕೆ ಒಳಗಾದ ಕೃಷ್ಣ ವಿವರದ ಕೇಂದ್ರದಲ್ಲಿ ಅದರ ದ್ರವ್ಯವೆಲ್ಲ ಒಂದು ಸೂಕ್ಷ್ಮವಾದ ಬಿ೦ದುವಿನ ರೂಪದಲ್ಲಿ ಹಿಡಿದಿರುತ್ತದೆ. ಅನಂತ ಸಾಂದ್ರತೆಯ ಈ ಬಿಂದುವನ್ನು ಪೆನ್ರೋಸ್ ‘ಸಿಂಗ್ಯುಲಾರಿಟಿ’ (sisingularitty)  ಎಂದು ಕರೆದರು.

ರೋಸ್ ಅವರ ನೂತನ ಸಿದ್ಧಾಂತದ ಬಗ್ಗೆ ಹಾಕಿಂಗ್ ಆಕರ್ಷಿತರಾದರು. ಆದರೆ ಹಾಕಿಂಗ್ ಚಿಂತನೆ ಬೇರೆಯೇ ಜಾಡಿನಲ್ಲಿ – ವಿರುದ್ಧ ದಿಕ್ಕಿನಲ್ಲಿ ಸಾಗಿತು – ವಿಶ್ವ ಸೃಷ್ಟಿಯ ವೈಚಿತ್ರ್ಯವನ್ನು ವಿವರಿಸುವತ್ತ. ಈ ವಿಶ್ವದ ಸೃಷ್ಟಿಯನ್ನು ವಿವರಿಸುವ ಸಿದ್ಧಾಂತಗಳಲ್ಲಿ ಅತ್ಯಂತ ಸಮಪ೯ಕವಾದದ್ದೆಂದು ಪರಿಗಣಿಸಲ್ಪಟ್ಟಿರುವ ” ಮಹಾಸ್ಫೋಟ ಸಿದ್ಧಾಂತ” (Big Bang) ಹೇಳುವ ಪ್ರಕಾರ ಸುಮಾರು ೧೫ ಬಿಲಿಯನ್ ( ೧೫೦೦ ಕೋಟಿ) ವಷ೯ಗಳ ಹಿಂದೆ ಇವತ್ತಿನ ವಿಶ್ವದ ಎಲ್ಲ ದ್ರವ್ಯಗಳು ಒಟ್ಟೈಸಿದ್ದ ಒಂದು ಅಂಡ ವಿಶ್ವವಿದ್ದಿರಬೇಕು. ಆ ವಿಶ್ವ ಗುರುತ್ವ ಸಂಕೋಚನಕ್ಕೆ ಒಳಗಾಗಿ ಕುಗ್ಗುತ್ತ ಕುಗ್ಗುತ್ತ ಒಂದು ಹಂತದಲ್ಲಿ ಆಂತರಿಕ ಒತ್ತಡ ಸಹಿಸಿಕೊಳ್ಳದೇ ಮಹಾ ಸ್ಫೋಟಕ್ಕೊಳಗಾಗಿರಬೇಕು. ಇಂಥ ಸ್ಪೋಟದಲ್ಲಿ ದ್ರವ್ಯ ಎಲ್ಲೆಡೆ ಎರಚಿ ಹೋಗಿ, ಕಾಲಾಂತರದಲ್ಲಿ ವರ್ತಮಾನ ವಿಶ್ವ ಸೃಷ್ಟಿಯಾಗಿರಬೇಕು. ಹಾಕಿಂಗ್ ತಮ್ಮ ಚಿಂತನೆಯನ್ನು ಇನ್ನೂ ಹಿಂದಕ್ಕೆ ವಿಸ್ತರಿಸಿದರು. ಕಾಲ ಮತ್ತು ಅಕಾಶಗಳೆಲ್ಲವೂ ಏಕೀಭವಿಸಿದ್ದ ಬಿಂದು ಒಂದು ಕಾಲದಲ್ಲಿ ಇದ್ದಿರಬೇಕೆಂದು ಪ್ರತಿಪಾದಿಸಿದರು. ಈ ಸಿದ್ಧಾಂತವನ್ನು ಮಂಡಿಸಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಾಗ ಹಾಕಿಂಗ್ – ಊರುಗೋಲಿನ ಸಹಾಯವಿಲ್ಲದೇ ನಡೆಯಲು ಸಾಧ್ಯವಾಗದ ಇಪ್ಪತ್ತೈದರ ತರುಣ.

೧೯೭೪ ರಲ್ಲಿ ಕೃಷ್ಣ ವಿವರಗಳಿಗೆ ಸಂಬಧಿಸಿದಂತೆ ಆಕ್ಸ್‍ ಫರ್ಡ್ ನಲ್ಲಿ  ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಿತು. ಅಲ್ಲಿ ಹಾಕಿಂಗ್ ಪ್ರಮುಖ ಆಕಷ೯ಣೆ. ಅವರಿಂದ ಹೊಸತನ್ನು ನಿರೀಕ್ಷಿಸಿದ ಮಂದಿಗೆ ನಿರಾಸೆಯಾಗಲಿಲ್ಲ. ಅವರು ತಮ್ಮ ನೂತನ ಸಿದ್ಧಾಂತವನ್ನು ವಿದ್ಯಾಥಿ೯ಯ ಸಹಾಯದಿಂದ ಮ೦ಡಿಸುತ್ತ ಮಹಾಸ್ಫೋಟದ ಸಂದರ್ಭದಲ್ಲಿ ಸುಮಾರು ಹತ್ತು ಸಾವಿರ ಕೋಟಿ ಟನ್ ದ್ರವ್ಯರಾಶಿ ಇರುವ, ಆದರೆ ಪ್ರೋಟಾನ್, ನ್ಯೂಟ್ರಾನುಗಳಂಥ ಸೂಕ್ಷ್ಮ ಕಣಗಳ ಗಾತ್ರದ ಚಿಕ್ಕ ಚಿಕ್ಕ ಕೃಷ್ಣ ವಿವರಗಳು ಸೃಷ್ಟಿಯಾಗಿರಬೇಕೆಂದು ಪ್ರತಿಪಾದಿಸಿ ಶ್ರೋತೃಗಳನ್ನು ದಂಗುಪಡಿಸಿದರು. ಈ ಚಿಕ್ಕ ಗಾತ್ರದ ಕೃಷ್ಣ ವಿವರಗಳ ಗುರುತ್ವವನ್ನು ವಿವರಿಸಲು ಐನ್‌ಸ್ಟೈನರ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತವನ್ನೂ (General Theory of Relativity) , ಗುಣಲಕ್ಷಣಗಳನ್ನು ವಿವರಿಸಲು ಮ್ಯಾಕ್ಸ್ ಪ್ಲಾಂಕ್ ಪ್ರಣೀತ ಕ್ವಾಂಟಂ ಸಿದ್ಧಾ೦ತವನ್ನು (Quantum Mechanics) ಬಳಸಿಕೊಂಡರು. ಸೂಕ್ಷ್ಮ ಪ್ರಪಂಚದ – ಉದಾಹರಣೆಗೆ ಪರಮಾಣು ಅಥವಾ ನ್ಯೂಕ್ಲಿಯರ್ ಪ್ರಪಂಚದ ವಿದ್ಯಮಾನಗಳನ್ನು ವಿವರಿಸಲು ಕ್ವಾಂಟಂ ಸಿದ್ದಾಂತ ಅನಿವಾರ್ಯ. ಆದರೆ ಭೂಮ ಗಾತ್ರದ ನಕ್ಷತ್ರಗಳ ವಿವರಣೆಗೆ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತ ಅಗತ್ಯ. ಹಾಕಿಂಗ್ ಮಾಡಿದ್ದು –  ೨೦ನೇ ಶತಮಾನದ ಈ ಎರಡು ಮಹಾನ್ ಸಿದ್ಧಾಂತಗಳನ್ನು ಏಕೀಕರಿಸುವ ಅಭೂತಪೂವ೯ ಪ್ರಯತ್ನ.

“ಕೃಷ್ಣ ವಿವರದ ಗುರುತ್ವ ಯಾವ ಬಗೆಯದ್ದೆಂದರೆ, ತನ್ನ ಸನಿಹದ ಎಲ್ಲ ದ್ರವ್ಯವನ್ನು ದೂಷಿಸುತ್ತದೆ; ಆಕಾಶ ಮತ್ತು ಕಾಲವನ್ನು ಹೊಸಕಿ ತಿರುಚಿಹಾಕುತ್ತದೆ. ಗುರುತ್ವ ಬಲದ ಈ ಅಸಾಮಾನ್ಯ ಒತ್ತಡದಲ್ಲಿ ಕಣ ಮತ್ತು ಪ್ರತಿಕಣಗಳು ಸೃಷ್ಠಿಯಾಗುತ್ತವೆ” ಎಂದು ಹಾಕಿಂಗ್ ಸೈದ್ಧಾಂತಿಕವಾಗಿ ನಿರೂಪಿಸಿದರು. ಪ್ರತಿಕಣವೆಂದರೆ ಅದು ಕಣದ ತದ್ರೂಪಿ – ಪ್ರತಿಬಿಂಬ. ಉದಾಹರಣೆಗೆ, ವಿದ್ಯುದಂಶದ ಹೊರತಾಗಿ (ಧನ ವಿದ್ಯುದಂಶ) ಮತ್ತೆಲ್ಲ ರೀತಿಯಲ್ಲಿ ಎಲೆಕ್ಟ್ರಾನಿನಂತಿರುವ ಪಾಸಿಟ್ರಾನ್ – ಎಲೆಕ್ಟ್ರಾನಿನ ಪ್ರತಿಕಣ. ಪಾಸಿಟ್ರಾನಿನ ಅಸ್ತಿತ್ವನ್ನು ಮೊದಲ ಬಾರಿಗೆ (೧೯೨೪) ಬ್ರಿಟಿಷ್ ಭೌತ ವಿಜ್ಞಾನಿ ಪಾಲ್ ಡಿರಾಕ್ (೧೯೦೨-೧೯೮೪) ಸೈದ್ಧಾಂತಿಕವಾಗಿ ಪ್ರತಿಪಾದಿಸಿದರೆ, ಪ್ರಾಯೋಗಿಕ ಪುರಾವೆಯನ್ನು ೧೯೩೧ ರಲ್ಲಿ ಅಮೇರಿಕದ ಕಾರ್ಲ್ ಡೇವಿಡ್ ಅಂಡರ್ಸ್‌ನ್ (೧೯೦೫ -) ಒದಗಿಸಿದರು. ನಂತರದ ವರ್ಷಗಳಲ್ಲಿ ಹೆಚ್ಚಿನ ಎಲ್ಲ ಕಣಗಳ (ಪ್ರೋಟಾನ್, ನ್ಯೂಟ್ರಾನ್, ನ್ಯೂಟ್ರಿನೊ) ಪ್ರತಿಕಣಗಳನ್ನು ಪ್ರಾಯೋಗಿಕವಾಗಿ ಪತ್ತೆಮಾಡಲಾಗಿದೆ.

ತನ್ನ ಚಿಂತನೆಯನ್ನು ಇನ್ನಷ್ಟು ವಿಸ್ತರಿಸಿದ ಸ್ಟೀಫೆನ್ ಹಾಕಿಂಗ್, ಕೃಷ್ಣ ವಿವರದ ಬಾಹ್ಯ ಆವರಣದಲ್ಲಿ ಸೃಷ್ಠಿಯಾಗುವ ಕಣ ಮತ್ತು ಪ್ರತಿಕಣಗಳು ಪರಸ್ಪರ ಸಂಯೋಗವಾಗಿ ಗ್ಯಾಮಾ ವಿಕಿರಣ ಸೃಷ್ಟಿಯಾಗುತ್ತದೆಂದು ಹೇಳಿದರು. ಅಂದರೆ ಎಲ್ಲಿಂದ ಅಗಾದ ಪ್ರಮಾಣದಲ್ಲಿ ಗ್ಯಾಮಾ ವಿಕಿರಣ ಬರುತ್ತದೋ ಅಲ್ಲಿ ಕೃಷ್ಣ ವಿವರ ಇರಬಹುದೆಂದು ಹಾಕಿಂಗ್ ತರ್ಕವಾಗಿತ್ತು.

ಕೃಷ್ಣ ವಿವರಗಳಲ್ಲಿ ಸೃಷ್ಠಿಯಾಗುವ ಕಣ ಮತ್ತು ಪ್ರತಿಕಣಗಳಲ್ಲಿ ಕಣಗಳು ವಿವರದ ಅಂತರಾಳಕ್ಕೆ ಸಾಗಿದರೆ, ಪ್ರತಿಕಣಗಳು ವಿರುದ್ಧ ದಿಶೆಯಲ್ಲಿ ಸಾಗುತ್ತ ಅಂತಿಮವಾಗಿ ಹೊರ ಪ್ರಪಂಚಕ್ಕೆ ಉತ್ಸರ್ಜನೆಯಾಗುತ್ತವೆ ಎಂದು ಹಾಕಿಂಗ್ ತಮ್ಮ ಸಂಶೋಧನ ಲೇಖನ ಮಂಡಿಸುತ್ತ ಸಾರಿದರು. ಇದೊಂದು ಸಂಪೂರ್ಣ ನವೀನ ಪರಿಕಲ್ಪನೆಯಾಗಿತ್ತು. ಯಾವುದು ಯಾವುದನ್ನೂ ಹೊರ ಸಾಗಲು ಬಿಡದು ಎಂದು ನಂಬಲಾಗಿತ್ತೋ, ಅದನ್ನು ಧಿಕ್ಕರಿಸಿ, ವಿಕಿರಣ ಉತ್ಸರ್ಜನೆಯಾಗುತ್ತದೆಂದು ಹೇಳುವ ಹಾಕಿಂಗ್ ವಾದ ಅಲ್ಲಿ ನೆರೆದಿದ್ದ ಘಟಾನುಘಟಿಗಳನ್ನು ಕೂಡ ಅಪ್ರತಿಭರನ್ನಾಗಿಸಿತು.

ಹಾಕಿಂಗ್ ಮತ್ತಷ್ಟು ಮುಂದುವರಿದು  ‘ವಿಕಿರಣ ಉತ್ಸಜ೯ನೆಗೊಳ್ಳುತ್ತ’ ಅಂತಿಮವಾಗಿ ಕೃಷ್ಣ ವಿವರ ಕೂಡ ಮಹಾಸ್ಫೋಟಕ್ಕೆ ಒಳಗಾಗುತ್ತದೆಂದು ಘೋಷಿಸಿ ನೆರೆದಿದ್ದ ಖಗೋಳ ವಿಜ್ಞಾನಿಗಳನ್ನು ಇನ್ನಷ್ಟು ದಿಗ್ಭ್ರಮೆಗೊಳಿಸಿದರು. ಆ ಸಂಕಿರಣದಲ್ಲಿ ಭಾಗವಹಿಸಿದ್ದ ಖಗೋಳ ಮತ್ತು ಗಣಿತ ವಿಜ್ಞಾನಿ ಟೇಲರ್ ಹೇಳಿದರು “ಮಾನ್ಯ ಹಾಕಿಂಗ್, ಕ್ಷಮಿಸಬೇಕು. ನೀವು ಇದೆಲ್ಲವೂ ಅಸಂಬದ್ಧ”.

‘ಸ್ಫೋಟಗೊಳ್ಳುವ ಕೃಷ್ಣವಿವರಗಳು’ ಎಂಬ ಶೀರ್ಷಿಕೆ ಹೊತ್ತ ಹಾಕಿಂಗ್ ಅವರ ಸುದೀರ್ಘ ಲೇಖನ ಪ್ರತಿಷ್ಠಿತ ಸಂಶೋಧನ ಪತ್ರಿಕೆಯಾದ ‘ನೇಚರ್’ ನಲ್ಲಿ ಪ್ರಕಟವಾಯಿತು. ನಾವು ಗಮನಿಸಬೇಕಾದದ್ದು – ಯಾವುದೇ ಹೊಸ ವಾದವನ್ನು, ಹೊಸ ಭಾವನೆಗಳನ್ನು ವಿಜ್ಞಾನ ಪ್ರಪಂಚ ಎಚ್ಚರಿಕೆ ಮತ್ತು ಸಂಶಯಗಳಿಂದ ಸ್ವಾಗತಿಸುತ್ತದೆ. ವಿಮರ್ಶೆಯ ನಿಷ್ಕರ್ಷದಲ್ಲಿ ತೇರ್ಗಡೆಯಾದ ಮೇಲಷ್ಟೇ ಮನ್ನಣೆ ದೊರೆಯುತ್ತದೆ. ಹಾಕಿಂಗ್ ಸಿದ್ಧಾಂತ ಕೂಡ ಇದಕ್ಕೆ ಹೊರತಲ್ಲ. ಸಿದ್ದಾಂತದ ಗಣಿತದಲ್ಲಿ ಮತ್ತು ಪರಿಕಲ್ಪನೆಯ ತರ್ಕದಲ್ಲಿ ದೋಷವಿಲ್ಲವೆನ್ನುವ ಅಂಶ ಸ್ಪಷ್ಟವಾದ ಮೇಲೆ ಖಭೌತ ವಿಜ್ಞಾನ ಈ ನೂತನ ಸಿದ್ಧಾಂತವನ್ನು ಒಪ್ಪಿಕೊಂಡಿತು. ಇಂದು ಹಾಕಿಂಗ್ ವಿಕಿರಣದ ಪತ್ತೆಗೆ ಪ್ರಯತ್ನ ಸಾಗಿದೆ. ಆದರೆ ಇನ್ನೂ ಸಫಲವಾಗಿಲ್ಲ. ಕಾಲ ಪಕ್ವವಾಗಬೇಕಷ್ಟೆ!

ಹೆಚ್ಚಿನ ಬ್ರಹ್ಮಾಂಡಗಳ ಕೇಂದ್ರ ಭಾಗದಲ್ಲಿ ಬೃಹದ್ರಾಶಿಯ ಕೃಷ್ಣವಿವರ ಇರುವ ಬಗ್ಗೆ ಇತ್ತೀಚಿನ ಸಂಶೋಧನೆಗಳು ಸಾರುತ್ತಿವೆ. ನಮ್ಮ ಬ್ರಹ್ಮಾಂಡವಾದ ಆಕಾಶಗಂಗೆಯಲ್ಲೂ ಕೂಡ. ಇಲ್ಲಿ ಸಿಗ್ನಸ್ ನಕ್ಷತ್ರ ಪುಂಜದಲ್ಲಿದೆಯಂತೆ ಒಂದು ಕೃಷ್ಣ ವಿವರ. ಸಿಗ್ನಸ್-x1 ರಲ್ಲಿ ಕೃಷ್ಣವಿವರ ಇದೆಯೇ ಇಲ್ಲವೆ ಎಂಬ ಬಗ್ಗೆ ರೋಜರ್ ಪೆನ್ರೋಸ್ ಮತ್ತು ಸ್ಟಿಫೆನ್ ಹಾಕಿಂಗ್ ಎಪ್ಪತ್ತರ ದಶಕದಲ್ಲಿ ಬಾಜಿ ಕಟ್ಟಿದರು. ಹಾಕಿಂಗ್ ಅಲ್ಲಿ ಕೃಷ್ಣ ವಿವರವಿಲ್ಲ ಎಂದರೆ ಪೆನ್ರೋಸ್ ಪ್ರಕಾರ ಅಲ್ಲೊಂದು ಕೃಷ್ಣ ವಿವರ ಹುದುಗಿದೆ. ಹಾಕಿಂಗ್ ಹೇಳುವಂತೆ  “ಈ ಬಾಜಿ ನನಗೆ ಒಂದು ಬಗೆಯ ವಿಮೆ ಇದ್ದ ಹಾಗಿತ್ತು. ಕೃಷ್ಣ ವಿವರದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ ನನಗೆ ಅದು ಅಲ್ಲಿ ಇರದೇ ಹೋದರೆ ಇಲ್ಲಿಯ ತನಕದ ನನ್ನೆಲ್ಲ ಶ್ರಮ ನಿರರ್ಥಕವಾದ ಬಗ್ಗೆ ದು:ಖ. ಆದರೆ ಬಾಜಿಯ ಶರತ್ತಿನಂತೆ ‘Private Eye’ ಎಂಬ ಪತ್ರಿಕೆಯ ನಾಲ್ಕು ವರ್ಷಗಳ ಚಂದಾವನ್ನು ನಾನು  ಪೆನ್ರೋಸರಿಂದ ಪಡೆಯುತ್ತಿದ್ದೆ ಎಂಬ ಬಗ್ಗೆ ತುಸು ಸಮಾಧಾನ! ಒಂದು ವೇಳೆ ಅದು ಅಲ್ಲಿ ಇರುವುದೇ ಆದರೆ ನಾನು ಪೆನ್ರೋಸರಿಗೆ ‘Private Eye’ ಪತ್ರಿಕೆಯ ವಾರ್ಷಿಕ ಚಂದಾ ನೀಡಬೇಕಾಗಿತ್ತು. ೧೯೭೫ರಲ್ಲಿ ಬಾಜಿ ಕಟ್ಟಿದಾಗ ನಮಗಿಬ್ಬರಿಗೂ ಸಿಗ್ನಸ್ ಪುಂಜದಲ್ಲಿ ಕೃಷ್ಣ ವಿವರ ಇರುವ ಬಗ್ಗೆ ಶೇಕಡಾ ಎಂಬತ್ತರಷ್ಟು ಖಾತ್ರಿ ಇತ್ತು. ಆದರೆ ಇತ್ತೀಚೆಗೆ ಕೃಷ್ಣವಿವರ ಅಲ್ಲಿರುವ ಬಗ್ಗೆ ಶೇಕಡಾ ೯೫ರಷ್ಟು ಖಾತ್ರಿಯಾಗಿದೆ (೧೯೯೦).” ಆದರೆ ಪೆನ್ರೋಸ್ ತಮ್ಮ ಇತ್ತೀಚೆಗಿನ ಪುಸ್ತಕದಲ್ಲಿ ಬರೆದಿದ್ದಾರೆ. ನಾನು ರಷ್ಯಾಕ್ಕೆ ಹೋಗಿದ್ದಾಗ ಹಾಕಿಂಗ್ ನನ್ನ ಕಛೇರಿಗೆ ಬಂದು ಇತ್ತೀಚೆಗಿನ ಮಾಹಿತಿಗಳಂತೆ ಸಿಗ್ನಸ್-x1 ರಲ್ಲಿ ಕೃಷ್ಣ ವಿವರ ಇರುವ ಬಗ್ಗೆ ನನಗೆ ಕಿಂಚಿತ್ತೂ ಸಂಶಯವಿಲ್ಲ, ನಾನು ಬಾಜಿಯಲ್ಲಿ ಸೋತಿದ್ದೇನೆ ಎಂದು ಬಾಜಿಯ ಪತ್ರದಲ್ಲಿ ಸಹಿ ಹಾಕಿ ಹೋಗಿದ್ದಾರೆ! (೨೦೦೭)”

ಪ್ರಸ್ತುತ ಸ್ಟೀಫೆನ್ ಹಾಕಿಂಗ್ ಸಂಶೋಧನೆ ಬೇರೆ ದಿಸೆಯಲ್ಲಿ ಸಾಗಿದೆ. ಕ್ವಾಂಟಮ್ ಸಿದ್ಧಾಂತ ಮತ್ತು ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತವನ್ನು ಏಕೀಕರಿಸಿ ವಿಶ್ವದೆಲ್ಲ ವಿದ್ಯಮಾನಗಳನ್ನು ವಿವರಿಸಲು ಶಕ್ತವಾಗುವ “ಏಕೀಕೃತ ಕ್ಷೇತ್ರ ಸಿದ್ಧಾಂತವನ್ನು ( GUT – Grand Unified Theory) ರೂಪಿಸುವತ್ತ ಪ್ರಯತ್ನಿಸುತ್ತಿದ್ದಾರೆ. ಐನ್ ಸ್ಟೈನ್ ತಮ್ಮ ಬಾಳಿನ ಕೊನೆಯ ಹತ್ತಿಪ್ಪತ್ತು ವಷ೯ಗಳಲ್ಲಿ ಇಂಥ ಅಸಾಮಾನ್ಯ ಸಿದ್ಧಾಂತವೊಂದರ ಸೃಷ್ಟಿಗೆ ವಿಫಲಯತ್ನ ನಡೆಸಿದ್ದರು. ಇಂದು ಹಲವು ವಿಜ್ಞಾನಿಗಳು ಈ ದಿಸೆಯಲ್ಲಿ ಕಾರ್ಯ ನಿರತರಾಗಿದ್ದಾರೆ ಮತ್ತು ‘ಎಳೆ ಸಿದ್ದಾಂತ’ (String Theory) ಈ ದಿಶೆಯಲ್ಲಿ ಮುಖ್ಯ ಘಟ್ಟ. ಅಮೆರಿಕದ ವಿಟ್ಟನ್ ಮತ್ತು ಹಾಕಿಂಗ್ ಇದರ ಪ್ರವರ್ತಕರಲ್ಲಿ  ಪ್ರಮುಖರು.

ಮಾತು ಉಡುಗಿತು 

ಪ್ರಾರಂಭದ ವಷ೯ಗಳಲ್ಲಿ – ಅಂದರೆ ೬೦-೭೦ ರ ದಶಕದಲ್ಲಿ –  ಹಾಕಿಂಗ್ ಊರುಗೋಲಿನ ಸಹಾಯದಿಂದ ಓಡಾಡುತ್ತಿದ್ದರು. ಆದರೆ ಚಲನೆ ಅಸಹನೀಯ ಹಂತ ಮುಟ್ಟಿದ ಮೇಲೆ ೩೦ ರ ತರುಣ ಹಾಕಿಂಗ್ ಗಾಲಿ ಕುರ್ಚಿಗೇರಿದರು –  ೧೯೭೧ ರಲ್ಲಿ. ಅ೦ದಿನಿಂದ ಇಂದಿನ ತನಕವೂ ಆ ಕುರ್ಚಿ ಇವರ ಸಂಗಾತಿ. ಮೋಟರ್ ಚಾಲಿತ ಈ ಗಾಲಿ ಕುಚಿಯಲ್ಲಿ ಕೇಂಬ್ರಿಡ್ಜ್‌ನ ಓಣಿಗಳಲ್ಲಿ ಸಾಗುವ ವೇಗ ಆತಂಕ ಹುಟ್ಟಿಸುತ್ತದಂತೆ!

೧೯೮೦ ರಲ್ಲಿ ಹಾಕಿಂಗ್ ಅಮೇರಿಕಕ್ಕೆ ಹೋಗಿದ್ದಾಗ ಅವರಿಗೆ ನ್ಯೂಮೋನಿಯಾ ಸೋಂಕು ತಗುಲಿತು. ಅವರ ದೇಹ ಸ್ಥಿತಿ ಹದಗೆಟ್ಟಿತು. ವೈದ್ಯರು ಭರವಸೆ ಕಳಕೊಂಡರು. ಕೊನೆಯ ಪ್ರಯತ್ನವಾಗಿ ಅವರ ಒಂದು ಶ್ವಾಸ ಕೋಶ ಮತ್ತು  ನಿಷ್ಕ್ರಿಯವಾದ ಧ್ವನಿ ಪೆಟ್ಟಿಗೆಯನ್ನು ತೆಗೆದರು. ಅಲ್ಲಿಗೆ ಹಾಕಿಂಗ್ ತಮ್ಮ ಧ್ವನಿಯನ್ನು ಶಾಶ್ವತವಾಗಿ ಕಳಕೊಂಡರು. ಆದರೆ ಹಾಕಿಂಗ್ ಧೃತಿಗೆಡಲಿಲ್ಲ. ಭಾವನೆಗಳನ್ನು ಕಂಪ್ಯೂಟರ್ ಮೂಲಕ ಧ್ವನಿಯಾಗಿಸುವ ಉಪಕರಣ ಇವರ ನೆರವಿಗೆ ಬಂತು.

ಸಾಮಾನ್ಯವಾಗಿ ಒಬ್ಬ ಪ್ರಥಮ ದರ್ಜೆ ವಿಜ್ಞಾನಿ ಶ್ರೇಷ್ಟ ಬರಹಗಾರನೂ ಆಗಿರುತ್ತಾನೆ. ಐನ್‌ಸ್ಟೈನ್, ಜೇಮ್ಸ್ ಜೀನ್ಸ್, ಜಾರ್ಜ್ ಗ್ಯಾಮೋ, ಪೈನ್‌ಮನ್, ಸಿವಿ ರಾಮನ್ ಇದಕ್ಕೆ ನಿದರ್ಶನಗಳು. ಹಾಕಿಂಗ್ ಕೂಡ ಇದೇ ಪರಂಪರೆಗೆ ಸೇರಿದವರು. ೧೯೭೦ ರಲ್ಲಿ ಹಾಕಿಂಗ್ ‘Large Scale Structures of Space and Time’ ಎಂಬ ಉದ್ಗ್ರಂಥವನ್ನು ರಚಿಸಿದರು. ಉನ್ನತ ಸೈದ್ಧಾಂತಿಕ ಖಗೋಳ ವಿಜ್ಞಾನಿಗಳಷ್ಟೇ ಅರ್ಥೈಸಬಲ್ಲ ಗ್ರಂಥವಿದು.

೧೯೭೯, ಐನ್‌ಸ್ಟೈನ್ ಜನ್ಮ ಶತಾಬ್ಡ ವರ್ಷ. ಕಬ್ಬಿಣದ ಕಡಲೆ ಎಂಬ ಪ್ರತೀತಿಗೆ ಪಾತ್ರವಾದ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಬಗ್ಗೆ ಮತ್ತು ಅವರ ಒಟ್ಟು ಕೊಡುಗೆಗಳ ಬಗ್ಗೆ ಹಾಕಿಂಗ್ ಪುಸ್ತಕ ಬೆಳಕು ಕಂಡಿತು. ೧೯೮೮ ರಲ್ಲಿ ಇವರ ಇನ್ನೊಂದು ಪುಸ್ತಕ  ‘Brief History of Time’ (ಕಾಲದ ಸ೦ಕ್ಷಿಪ್ತ ಇತಿಹಾಸ) ಪ್ರಕಟವಾಯಿತು. ವಿಜ್ಞಾನಾಸಕ್ತ ಜನಸಾಮಾನ್ಯರಿಗಾಗಿ ಬರೆದ ಈ ಪುಸ್ತಕದ ಮಿಲಿಯಗಟ್ಟಲೆ ಪ್ರತಿಗಳು ಬಿರುಸಿನಿಂದ ಮಾರಾಟವಾಗಿ ಸಾರ್ವಕಾಲಿಕ ದಾಖಲೆಯನ್ನೇ ನಿರ್ಮಿಸಿತು. ಬಿಬಿಸಿ(BBC) ಹಾಕಿಂಗ್ ಅವರ ಜೀವನ ಮತ್ತು ಸಾಧನೆ ಬಗ್ಗೆ ಸಾಕ್ಷ್ಯ ಚಿತ್ರ ತೆಗೆದರೆ, ಇವರ ಪುಸ್ತಕ ಚಲನಚಿತ್ರವಾಗಿ ತೆರೆ ಕಂಡು ಇನ್ನಷ್ಟು ಜನರನ್ನು ತಲಪಿತು. ಸ್ಟೀಫೆನ್ ಹಾಕಿಂಗ್ ಜನಪ್ರಿಯತೆಯ ತುತ್ತ ತುದಿಗೇರಿದರು; ದಂತಕಥೆಯಾದರು.

ಅವರ ತೀರ ಇತ್ತೀಚೆಗಿನ ಪುಸ್ತಕ – The Universe in a Nutshell. ಇಲ್ಲಿ ವಿಶ್ವದ ಉಗಮ ಮತ್ತು ಬೆಳವಣಿಗೆಗಳ ಬಗ್ಗೆ ಸರಸ ಮತ್ತು ಸುಂದರ ಶೈಲಿಯಲ್ಲಿ ಹಾಕಿಂಗ್ ವಿವರಿಸುತ್ತ  ವಿಶ್ವದ ಭವ್ಯ ಚಿತ್ರವನ್ನು ಓದುಗನಿಗೆ ಸಾಕ್ಷಾತ್ಕರಿಸುವ ಪರಿ ಅನ್ಯಾದೃಶವಾದುದು. ಹಾಕಿಂಗ್ ಗೆ ಸಂದಿರುವ ಪ್ರಶಸ್ತಿಗಳು, ಗೌರವಗಳು ಅನೇಕ. ೧೯೭೪ ರಲ್ಲಿ ಬ್ರಿಟಿಷ್ ರಾಯಲ್ ಸೊಸೈಟಿ ಇವರನ್ನು ತನ್ನ ಸದಸ್ಯನನ್ನಾಗಿ ಆರಿಸಿದಾಗ ಇವರಿಗಿನ್ನೂ ೩೨ ವರ್ಷ. ನ್ಯೂಟನ್, ಮ್ಯಾಕ್ಸವೆಲ್, ಪ್ಲಾಂಕ್, ಬೋರ್, ಐನ್ ಸ್ಟೈನ್ ಮೊದಲಾದ ಮಹಾನ್ ವಿಜ್ಞಾನಿಗಳು ಸದಸ್ಯರಾಗಿದ್ದ ರಾಯಲ್ ಸೊಸೈಟಿಯ ಇತಿಹಾಸದಲ್ಲಿ ಇಷ್ಟು ಚಿಕ್ಕ ಪ್ರಾಯದವರಾರೂ ಸದಸ್ಯರಾಗಿರಲಿಲ್ಲ. ೧೯೭೭ ರಲ್ಲಿ ಕೇಂಬ್ರಿಡ್ಜಿನ ಗುರುತ್ವ ಸಂಶೋಧನ ಕೇಂದ್ರದ ನಿರ್ದೇಶಕರಾದರು. ೧೯೭೯ ರಲ್ಲಿ ಕ್ಯಾಂಬ್ರಿಡ್ಜ್ ವಿಶ್ವ ವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ಲ್ಯೂಕೇಸಿಯನ್ ಎಂಬ ಹುದ್ದೆಯಲ್ಲಿ ಪ್ರಾಧ್ಯಾಪಕರಾಗುವ ಅವಕಾಶ ಇವರನ್ನು ಅರಸಿಕೊಂಡು ಬಂತು. ಇದೇ ಹುದ್ದೆಯನ್ನು ೩೦೦ ವರ್ಷಗಳಷ್ಟು ಹಿಂದೆ ನ್ಯೂಟನ್ ಅಲಂಕರಿಸಿದ್ದನೆನ್ನುವುದು ಇಲ್ಲಿ ಉಲ್ಲೇಖನೀಯ. ಹಾಕಿಂಗ್ ಇಂದಿಗೂ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಅವರೇ ಹೇಳುವಂತೆ  ‘ನ್ಯೂಟನ್ ನನ್ನ ಕುರ್ಚಿಯಲ್ಲಿದ್ದ. ಆದರೆ ಅದಕ್ಕೆ ಆಗ ಇನ್ನೂ ಮೋಟರ್ ಜೋಡಿಸಿರಲಿಲ್ಲ!!’

ಸ್ಟೀಫೆನ್ ಹಾಕಿಂಗ್ ಗೆ ಇನ್ನು ದೊರೆಯಬೇಕಾಗಿರುವುದು – ನೋಬೆಲ್ ಪ್ರಶಸ್ತಿಯೊಂದೇ. ನಾಲ್ಕು ಬಾರಿ ಪ್ರಶಸ್ತಿಗೆ ಇವರ ಹೆಸರು ಸೂಚಿಸಲ್ಪಟ್ಟರೂ ಪುರಸ್ಕೃತರಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ – ಇವರ ಸಿದ್ದಾಂತ ಗಣಿತೀಯವಾಗಿ ಅದೆಷ್ಟು ಸುಂದರವಾಗಿದ್ದರೂ, ತಾರ್ಕಿಕವಾಗಿ ಸಮಂಜಸವೆನಿಸಿದರೂ ಪ್ರಾಯೋಗಿಕ ಸಮರ್ಥನೆ ಇನ್ನೂ ದೊರಕಿಲ್ಲ. ಕಾಲ ಪ್ರಾಯಶ: ಇನ್ನೂ ಪಕ್ವವಾಗಿಲ್ಲ!

ನಾಸ್ತಿಕ ಹಾಕಿಂಗ್

ಸ್ಟೀಫೆನ್ ಹಾಕಿಂಗ್ ಎಂದೂ ತಮ್ಮ ದೈಹಿಕ ಅಸಾಮರ್ಥ್ಯವನ್ನು ಅಸಾಮಥ್ಯವೆಂದೇ ಪರಿಗಣಿಸಿಲ್ಲ. ಅವರು  ಹಾಸ್ಯ ಮಾಡುತ್ತಾರೆ –  ” ಪ್ರಾಯಶ: ನನಗೆ ಗಾಲಿ ಕುರ್ಚಿಗಂಟಿಕೊಂಡಿರಬೇಕಾದ ನಿರ್ಬಂಧ ವಿಫುಲ ಸಮಯಾವಕಾಶ ನೀಡಿದೆ – ವಿಶ್ವ ರಹಸ್ಯಗಳ ಬಗ್ಗೆ ಸ್ವಚ್ಚಂದವಾಗಿ ಚಿಂತಿಸಲು.”

ಇವರು ಪರಿಶುದ್ಧ ನಾಸ್ತಿಕರು. ದೇವರ ಬಗ್ಗೆ ಒಂದೆಡೆ ಹೇಳುತ್ತಾರೆ “ಕೋಟ್ಯಾಂತರ ಬ್ರಹ್ಮಾಂಡಗಳಲ್ಲಿ ಸಾಮಾನ್ಯವಾದ ನಮ್ಮ ಆಕಾಶಗಂಗೆಯ ಒಂದು ಅಂಚಿನಲ್ಲಿರುವ ಸಾಮಾನ್ಯ ನಕ್ಷತ್ರದ ಸುತ್ತ ಪರಿಭ್ರಮಿಸುತ್ತಿರುವ ಅತಿ ಸಮಾನ್ಯ ಗ್ರಹವೊಂದರ ಮೇಲಿರುವ ಕ್ಷುಲ್ಲಕರು ನಾವು. ನಮ್ಮ ಬಗ್ಗೆ ಕಾಳಜಿಯನ್ನು ತೋರುವುದಿರಲಿ, ನಮ್ಮ ಅಸ್ತಿತ್ವವನ್ನು ಕೂಡ  ಇರಬಹುದಾದ ದೇವರು ಗಮನಿಸಿಯಾನೆಂದು ನನಗನ್ನಿಸದು”

ತನ್ನ ಜೀವನದ ದೃಷ್ಟಿ ಬಗ್ಗೆ ಸ್ಟೀಫೆನ್ ಇನ್ನೊಂದು ಕಡೆ ಬರೆಯುತ್ತಾರೆ  ” ನಾವು ಬಂದದ್ದು ಎಲ್ಲಿಂದ? ಈ ವಿಶ್ವ ಜನಿಸಿದ್ದು ಹೇಗೆ? ಇದಕ್ಕೆ ಅಂತ್ಯ ಇದೆಯೇ? – ಇಡೀ ನನ್ನ ಜೀವನ ಇಂಥ ರೋಚಕ ಪ್ರಶ್ನೆಗಳಿಗೆ ಉತ್ತರ ಅರಸುವುದರಲ್ಲಿ ಮುಡಿಪಾಗಿದೆ. ನನ್ನ ಹಾಗೆ ನೀವು ಕೂಡ ನಕ್ಷತ್ರಗಳ ಕಡೆಗೆ ದೃಷ್ಟಿ ಚಾಚಿದಲ್ಲಿ ಮತ್ತು ಆ ವೀಕ್ಷಣೆಗೆ ತಾರ್ಕಿಕ ವಿವರಣೆ ಕೊಡಲು ಪ್ರಯತ್ನಿಸಿದಲ್ಲಿ ನಿಮಗೂ ಹೊಸ ಕಾಣ್ಕೆ ದೊರಕುತ್ತದೆ. ಈ ಪ್ರಶ್ನೆಗಳಾದರೋ ನೇರ, ಸರಳ. ಆದರೆ ಉತ್ತರ ಮಾತ್ರ ಕ್ಲಿಷ್ಟ, ಪ್ರಗಲ್ಭ – ನಮ್ಮಳವಿಗೆ ಎ೦ದಿಗೂ ಬರಲಾರದೆಂದು ಅನ್ನಿಸುತ್ತದೆ.”

ಒಮ್ಮೆ ಐನ್ ಸ್ಟೈನ್ ಹೇಳಿದ್ದರು “ನನ್ನ ಹಾಗಿರುವ ಒಬ್ಬ ಮನುಷ್ಯ ಅಸ್ತಿತ್ವದಲ್ಲಿರುವುದಾದರೆ ಅವನ ಚಿಂತನೆ ಯಾವುದರ ಬಗ್ಗೆ ಎನ್ನುವುದು ಮುಖ್ಯವಾಗುತ್ತದೆಯೇ ಹೊರತು, ಆತ ಏನು ಮಾಡುತ್ತಾನೆ ಮತ್ತು ಯಾವೆಲ್ಲ ತೊಂದರೆಗಳಿಂದ ಬಳಲುತ್ತಿದ್ದಾನೆನ್ನುವುದರ ಮೇಲಲ್ಲ” ಇದು ಹಾಕಿಂಗ್ ಗೆ ಎಲ್ಲ ರೀತಿಯಲ್ಲೂ ಅನ್ವಯಿಸುತ್ತದೆ.

ಖಭೌತ ವಿಜ್ಞಾನಕ್ಕೆ ತಮ್ಮ ಚಿಂತನೆಗಳಿಂದ, ಬರಹಗಳಿಂದ ನೂತನ ಆಯಾಮ ಕಲ್ಪಿಸುತ್ತಿರುವ, ವರ್ತಮಾನದ ಶ್ರೇಷ್ಟ ಸೈದ್ಧಾಂತಿಕ ಖಭೌತ ವಿಜ್ಞಾನಿ ಸ್ಟೀಫೆನ್ ಹಾಕಿಂಗ್ ಎಂದರೆ ಒಂದು ಅದ್ಭುತ – ಅಲ್ಲ, ಪರಮಾದ್ಭುತ.