ಶನಿವಾರದ ಇಳಿಮಧ್ಯಾಹ್ನ ಕಣ್ಣುಬಿಟ್ಟಾಗ ಬಿಸಿಲಲ್ಲಿ ಆ ಅನಾಡಿ ಅಣ್ಣ ತಂಗಿಯರು ಉಯ್ಯಾಲೆಯಾಡುತ್ತಿದ್ದವರು ನನ್ನ ಕಂಡೊಡನೆ ಗಾಬರಿಯಲ್ಲಿ ಅಲ್ಲಿಂದ ಎದ್ದು ಬಂದು ‘ಅಣ್ಣಾ ಸ್ವಲ್ಪ ಉಯ್ಯಾಲೆ ಆಡ್ತೀವಿ ಓಡಿಸ್ಬೇಡಿ ಅಣ್ಣಾ ಪ್ಲೀಸ್. ಅಣ್ಣಾ ಪ್ಲೀಸ್’ ಅಂತ ಸ್ವಲ್ಪ ಹೆಚ್ಚೇ ನಾಟಕೀಯವಾಗಿ ಗೋಗರೆಯಲು ತೊಡಗಿದರು. ‘ಉಯ್ಯಾಲೆ ಇರೋದೇ ಮಕ್ಕಳಿಗೆ ತಾನೇ ಆಡಿಕೊಳ್ಳಿ’ ಅಂತ ನಾನೂ ನಾಟಕೀಯವಾಗಿ ಡಯಲಾಗ್ ಹೊಡೆದೆ. ‘ಇಲ್ಲ ಅಣ್ಣಾ ನಿಮ್ಮ ಬಿಲ್ಡಿಂಗ್ ವಾಚ್ ಮೇನ್ ಒದ್ದು ಹೊರಗೆ ಓಡಿಸ್ತಾನೆ ಅಣ್ಣಾ ಪ್ಲೀಸ್’ ಮುದ್ದು ಮುದ್ದು ಕಣ್ಣುಗಳ ಕೆದರಿದ ಕೂದಲಿನ ಆ ಬಾಲಕಿ ಹತ್ತಿರ ಬಂದು ನೃತ್ಯ ಮಾಡುವವಳಂತೆ ಮತ್ತೆ ಗೋಗರೆಯಲು ತೊಡಗಿದಳು. ಅವಳ ಕೋರಿಕೆಯ ವೈಖರಿಯನ್ನು ಅವಳ ಅಣ್ಣ ಮೆಚ್ಚುಗೆಯಿಂದ ನೋಡುತ್ತಿದ್ದ. ಯಾರೋ ಬಿಸಾಕಲಾರದೆ ಕೊಟ್ಟಿರಬಹುದಾದ ಹರಿದು ಹೋದ ಬ್ರಾಂಡೆಡ್ ಟೀ ಶರ್ಟ್, ಎಡಗೈಯಲ್ಲಿ ಐವತ್ತು ರೂಪಾಯಿ ಬೆಲೆಬಾಳಬಹುದಾದ ರಸ್ತೆ ಬದಿಯ ಡಿಜಿಟಲ್ ಕೈಗಡಿಯಾರ. ಹರಿದು ಹೋಗಿದ್ದ ದೊಡ್ಡ ಸೈಜಿನ ಪ್ಯಾಂಟನ್ನು ಹಳೆಯ ಪ್ಲಾಸ್ಟಿಕ್ ಬೆಲ್ಟಿನಿಂದ ಬಿಗಿದುಕಟ್ಟಿದ್ದ ಆ ಹುಡುಗ ‘ ಸ್ವಲ್ಪ ಹೊತ್ತು ಆಡಿಹೋಗಲಿ ಬಿಡಿ ಅಣ್ಣ. ನನ್ನ ತಂಗಿಗೆ ಉಯ್ಯಾಲೆ ಅಂದ್ರೆ ಆಶೆ’ ಅಂತ ಹತ್ತಿರ ಬಂದು ನಿಂತುಕೊಂಡ. ಅವಳು ಆಡಲು ಓಡಿಹೋದಳು.

ಅಣ್ಣ ಹತ್ತಿರ ಬಂದವನು ‘ಏನಾದ್ರೂ ಸಣ್ಣ ಪುಟ್ಟ ಕೆಲ್ಸ ಇದ್ರೆ ಹೇಳಿ ಸಾರ್. ದುಡ್ಡೂ ಕಾಸೂ ಏನೂ ಬೇಡ ಸಾರ್. ಏನಾದ್ರೂ ಹಳೇದೂ, ಚಪ್ಲೀ, ಶೂ, ಬೆಲ್ಟೂ. ಟಾರ್ಚೂ, ವಾಚೂ ಏನಾದ್ರೂ ಕೊಟ್ರೇ ಸಾಕು. ಹಸಿವಿಗೆ ಊಟಾ ಕೊಟ್ರೂ ಪರವಾಗಿಲ್ಲ’ ಅಂದ. ‘ಏನೆಲ್ಲಾ ಕೆಲ್ಸಾ ಮಾಡ್ತಿಯಾ ಹೀರೋ?’ ಅಂತ ಕೇಳಿದೆ. ‘ಗಿಡಕ್ಕೆ ನೀರೂ, ಶೂ ಒರ್ಸೋದೂ. ಸೈಕಲ್ಲು ಬೈಕು. ಕಾರು ಒರ್ಸೋದೂ. ನೀವು ಕೇಳಿದ್ರೆ ಕನ್ನಡ ಪಿಚ್ಚರ್ ಸಾಂಗಿಗೆ ಡ್ಯಾನ್ಸ್ ಕೂಡಾ ಮಾಡ್ತೀವಿ’ ಅಂದ. ಡ್ಯಾನ್ಸ್ ಅನ್ನೋ ಪದ ಕೇಳಿದ ತಕ್ಷಣ ಉಯ್ಯಾಲೆ ಜೀಕುತ್ತಿದ್ದ ತಂಗೀನೂ ಓಡಿಬಂದು ‘ಅಣ್ಣ, ಡ್ಯಾನ್ಸ್ ಮಾಡಿದ್ರೆ ಹಸಿದವರಿಗೆ ಊಟ ಹಾಕ್ತೀರಾ?’ ಎಂದು ಮುದ್ದು ಬರುವಂತೆ ಕೇಳಿದಳು. ಒಂದು ಕೋನದಲ್ಲಿ ಹಳೆಯ ಬೇಬಿ ಶ್ಯಾಮಿಲಿಯಂತೆ ಕಾಣುತ್ತಿದ್ದ ಬಾಲಕಿ. ಯಾರೋ ಹುಟ್ಟು ಹಬ್ಬಕ್ಕೆ ಅಂತ ತಮ್ಮ ಮುದ್ದು ಮಗಳಿಗೆ ತಂದುಕೊಟ್ಟಿದ್ದ ಬಂಗಾರದ ಬಣ್ಣದ ಜಂಪರು ತೀರಾ ಹರಿದು ಹೋದ ಮೇಲೆ ಬಿಸಾಕಬೇಕಲ್ಲಾ ಅಂತ ಇವಳಿಗೆ ಕೊಟ್ಟಿರಬೇಕು. ಆ ಹರಿದ ಕೊಳೆ ತುಂಬಿದ ಹಳೆಯ ಜಂಪರಿನಲ್ಲೂ ರಾಜಕುಮಾರಿಯಂತೆ ಕಾಣಿಸುತ್ತಿದ್ದಳು.

‘ಕೆಲಸಾನೂ ಬೇಡಾ, ಡ್ಯಾನ್ಸೂ ಬೇಡ ಊಟ ಮಾಡಿ’ ಎಂದು ಇಬ್ಬರಿಗೂ ಬಡಿಸಿದೆವು. ಇಬ್ಬರೂ ಖುಷಿಯಲ್ಲಿ ಊಟ ಮಾಡಿದರು. ಈಗ ನಿಮ್ಮ ಕಥೆ ಹೇಳಿ. ಯಾರು ನೀವು? ಎಲ್ಲಿಂದ ಬಂದಿರಿ ನಿಮ್ಮ ಅಪ್ಪ ಮ್ಮ ಅಜ್ಜ ಅಜ್ಜಿ ಊರು ಕುಲ ಕೇರಿ ಎಲ್ಲ ಹೇಳಿ’ ಎಂದು ಕೇಳಿದೆವು. ಅವರು ಹೇಳಿದರು. ಅವರು ಹೇಳುತ್ತಿದ್ದಂತೆ ನನಗೆ ಎಲ್ಲಾ ಸಿನೆಮಾ ರೀಲಿನಂತೆ ಗೊತ್ತಾಗುತ್ತಾ ಹೋಯಿತು. ‘ಏ ನಿಮ್ಮ ಅಪ್ಪನ ಹೆಸರು ರಾಜಕುಮಾರ್ ಅಲ್ವಾ’ ಅಂತ ಕೇಳಿದೆ. ‘ಅಣ್ಣಾ ನಿಮಗೆ ಹೇಗೆ ಗೊತ್ತಾಯಿತು?’ ಅಂತ ಕೇಳಿದಳು. ‘ಅಮ್ಮ ಮಾಲಾಶ್ರೀ ಅಲ್ವಾ?’ ಅಂತ ಕೇಳಿದೆ. ಅವರಿಗೆ ಇನ್ನೂ ಅಚ್ಚರಿಯಾಯಿತು. ‘ನಿಮ್ಮ ಚಿಕ್ಕಪ್ಪ ಅಂಬರೀಶ್ ಅವರೂ ಗೊತ್ತು’ ಅಂದೆ. ಅವರಿಗೆ ಗಾಬರಿಯಾಗಿ ಹೆದರಿಕೆಯಾಗಲು ತೊಡಗಿತು.‘ ಅಣ್ಣಾ ನಮ್ಮ ಅಪ್ಪ ಅಮ್ಮ ಚಿಕ್ಕಪ್ಪ ಎಲ್ಲಾ ನಿಮಗೆ ಹೇಗೆ ಗೊತ್ತು’ ಅಂತ ಕೇಳಿದರು. ‘ಎಲ್ಲಾ ಗೊತ್ತು ನಿಮ್ಮ ಅಪ್ಪ ಅಮ್ಮ ಚಿಕ್ಕಪ್ಪ ಅವರ ಎಲ್ಲರ ಫೋಟೋ ಹಾಡು ಡ್ಯಾನ್ಸು ಎಲ್ಲಾ ನನ್ನ ಹತ್ತಿರ ಇದೆ’ ಅಂತ ಕಂಪ್ಯೂಟರ್ ತೆರೆದು ತೋರಿಸುತ್ತಾ ಹೋದೆ. ಬೇಬಿ ಶ್ಯಾಮಿಲಿಯಂತಹ ಆ ಬಾಲಕಿ ಅವಳ ಅಮ್ಮನ ಫೋಟೋ ನೋಡಿ ‘ಹಾ ನನ್ನ ಅಮ್ಮ’ ಅಂತ ಅಳಲು ಶುರು ಮಾಡಿದಳು.

ಅವಳು ಅಪ್ಪ ಅಮ್ಮನ ನೋಡದೆ ತಿಂಗಳುಗಟ್ಟಲೆ ಆಗಿತ್ತು. ಅವರ ಅಪ್ಪ ಅಮ್ಮ ಕನ್ನಡ ಪಿಚ್ಚರ್ ಸಾಂಗಿಗೆ ಡ್ಯಾನ್ಸು ಮಾಡುತ್ತಾ ಊರೂರು ಅಲೆಯುತ್ತಾ ನೆರೆದವರಿಂದ ಐದ್ರುಪಾಯಿ ಹತ್ರುಪಾಯಿ ವಸೂಲು ಮಾಡುತ್ತಾ ಆಂದ್ರದ ಗಡಿ ತನಕ ತಲುಪಿದ್ದವರು ಅಲ್ಲಿಂದ ವಾಪಾಸು ಪಾವಗಡ ಅರಸೀಕೆರೆಗಾಗಿ ಈ ಕಡೆ ಹೊರಟಿದ್ದವರು ಆಮೇಲೆ ಮೊಬೈಲು ಹಾಳಾಗಿ ಎಲ್ಲದ್ದಾರೆ ಎಂದು ನನಗೆ ಗೊತ್ತಿರಲಿಲ್ಲ. ಈಗ ‘ಹೇ ರಾಜಕುಮಾರ ನಿನ್ನ ಪುಟ್ಟ ಕಂದಮ್ಮಗಳು ಉಯ್ಯಾಲೆ ಆಡಲು ಬಂದವರು ನಮ್ಮ ಮನೆಗೂ ಬಂದು ಊಟಮಾಡಿ ಕಥೆ ಹೇಳುತ್ತಾ ಕುಳಿತಿದ್ದಾರೆ’ ಅಂತ ಹೇಳಬೇಕು ಅಂದುಕೊಂಡರೆ ನೀವು ಕರೆಮಾಡಿದ ಗ್ರಾಹಕರು ಸಧ್ಯಕ್ಕೆ ಸೇವೆಯಲ್ಲಿಲ್ಲ ಅಂತ ಬರುತ್ತಿತ್ತು. ಅವರ ಅಪ್ಪ ಅಮ್ಮ ಚಿಕ್ಕಪ್ಪ ಎಲ್ಲ ನನಗೆ ಗೊತ್ತು ಅಂತ ಗೊತ್ತಾದಾಗ ಆ ಅಣ್ಣ ತಂಗಿಗೆ ಸ್ವಲ್ಪ ಕಳವಳ ಶುರುವಾದಂತೆ ಅನಿಸಿತು.

ತುಂಬ ಬಡವನಾದರೂ ಅಪಾರವಾದ ಸ್ವಾಭಿಮಾನ ಇರುವ ಅವರ ತಂದೆತಾಯಿಗೆ ಅವರು ಹೀಗೆ ಬೇರೆಯವರ ಮನೆಯಲ್ಲಿ ಹಸಿವಿಗೆ ಅನ್ನ ಕೇಳಿದ್ದು ಗೊತ್ತಾದರೆ ಅಪ್ಪ ರಾಜಕುಮಾರ ಮತ್ತು ಚಿಕ್ಕಪ್ಪ ಅಂಬರೀಶ್ ಇಬ್ಬರೂ ಸೇರಿ ಹಾವಿಗೆ ಹೊಡೆದು ಸಾಯಿಸುವ ಹಾಗೆ ಹೊಡೆಯುತ್ತಾರೆ ಅಂತ ಅವರಿಗೆ ಗೊತ್ತಾದ ಹಾಗೆ ಅನಿಸಿತು.
ಅದಕ್ಕೆ ಜಾಣನಾದ ಅಣ್ಣ ‘ಸಾರ್ ನಮಗೆ ಮನೆಯಲ್ಲಿ ಏನೂ ಕಷ್ಟ ಇಲ್ಲ.ನಮ್ಮ ಅಪ್ಪ ಅಮ್ಮ ಒಂದು ಊರಲ್ಲಿ ಡ್ಯಾನ್ಸ್ ಮಾಡಿದ್ದೆ ನೂರು ರೂಪಾಯಿಯ ಹತ್ತು ನೋಟು ಸಿಗುತ್ತದೆ. ಹಾಗೆ ಹತ್ತು ಊರಲ್ಲಿ ಮಾಡಿದ ಮೇಲೆ ನಮ್ಮ ಅಜ್ಜಿಗೆ ನೂರು ರೂಪಾಯಿಯ ಹತ್ತು ನೋಟು ಕೊಟ್ಟು ಕಳಿಸುತ್ತಾರೆ. ಅದರಲ್ಲಿ ನಮ್ಮ ಅಜ್ಜಿ ನಮ್ಮನ್ನು ಸಾಕ್ತಾರೆ.ನಮ್ಮ ಅಜ್ಜಿಗೆ ಕಣ್ಣು ಕಾಣ್ಸೋದಿಲ್ಲ. ಕುರುಡಿ. ಅವಳ ಕಣ್ಣು ತಪ್ಪಿಸಿ ಓಡಿ ಬಂದಿದ್ದೇವೆ. ಗೊತ್ತಾದರೆ ನಮ್ಮ ಅಪ್ಪ ಚಿಕ್ಕಪ್ಪ ಬಡುದು ಸಾಯಿಸ್ತಾರೆ.ನಾವು ಹೋಗ್ತೀವಿ ಪ್ಲೀಸ್ ಸಾರ್.ಬಿಡಿ ಸಾರ್ ’ ಅಂತ ಗೋಗರೆಯಲು ಶುರು ಮಾಡಿದ.
ಬೇಬಿ ಶ್ಯಾಮಿಲಿಯಂತಹ ಅವನ ಪುಟ್ಟ ತಂಗಿಯೂ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ‘ಸಾರ್ ಪ್ಲೀಸ್ ಬಿಡಿ ಸಾರ್’ ಅಂತ ಮುದ್ದು ಮುದ್ದಾಗಿ ಅಳಲು ಶುರುಮಾಡಿದಳು. ‘ನಿಮ್ಮ ಅಜ್ಜೀನೂ ನಂಗೆ ಗೊತ್ತು.ಅವರ ಹೆಸರು ಸರೋಜಾದೇವಿ ಅಲ್ವಾ’ ಅಂದೆ. ‘ಅಯ್ಯೋ ಅಜ್ಜೀನೂ ಗೊತ್ತು. ಅಪ್ಪಾನೂ ಗೊತ್ತು ಚಿಕ್ಕಪ್ಪಾನೂ ಗೊತ್ತು ಎಲ್ಲಾ ಗೊತ್ತು ನಿಮಗೆ. ಪ್ಲೀಸ್ ಅಂಕಲ್ ಬಿಡಿ ಅಂಕಲ್’ ಅಂತ ಅವರಿಬ್ಬರೂ ಅರ್ದ ಹೆದರಿಕೆಯಲ್ಲಿ ಕಾಲು ನಾಚುಕೆಯಲ್ಲಿ ಉಳಿದ ಕಾಲು ಸಂಭ್ರಮದಲ್ಲಿ ಗೋಗರೆಯಲು ಶುರುಮಾಡಿದರು.
ಇರಿ ಬೈಕಲ್ಲಿ ನಿಮ್ಮನ್ನು ಬಿಡುತ್ತೇನೆ ಎಂದು ಇಬ್ಬರನ್ನೂ ರಾಜ್ಕುಮಾರ ರಾಜ್ಕುಮಾರಿಯರಂತೆ ಸಂಭ್ರಮದಲ್ಲಿ ಕೂರಿಸಿಕೊಂಡು ಅವರ ಗುಡಿಸಿಲಿನ ಬಳಿ ಬಿಟ್ಟುಬಂದೆ.

ಗುಡಿಸಿಲಿನ ಒಳಗೆ ಹೋಗಲು ನನಗೆ ಧೈರ್ಯವಿರಲಿಲ್ಲ. ಏಕೆಂದರೆ ಅವರ ಅಜ್ಜಿ ಸರೋಜಾದೇವಿ ಕುರುಡಿಯಾದರೂ ಧ್ವನಿಯಿಂದಲೇ ನನ್ನನ್ನು ಗುರುತಿಸಿ ಕೋಲುಬೀಸುತ್ತಾ ನನ್ನನ್ನು ಬಾಯಿಗೆ ಬಂದ ಹಾಗೆ ಬೈಯ್ಯಲು ಶುರುಮಾಡುತ್ತಿತ್ತು. ಏಕೆಂದರೆ ಈ ಅಜ್ಜಿಯ ಸವತಿಯಾದ ಇನ್ನೊಬ್ಬಳು ಅಜ್ಜಿಗೆ ನನ್ನಿಂದಾಗಿಯೇ ಸರಕಾರದಿಂದ ತಿಂಗಳಿಗೆ ಸಾವಿರದಂತೆ ವೃದ್ಧಾಪ್ಯ ವೇತನ ಸಿಕ್ಕಿತೆಂದು ಯಾರಿಂದಲೋ ಅರಿತ ಈ ಅಜ್ಜಿ ಕುರುಡಿಯಾದರೂ ಕೋಲು ಊರಿಕೊಂಡು ನನ್ನ ಬಳಿ ಬಂದು ‘ನನ್ನ ಸವತೀಗೆ ಮಾಡಿಕೊಟ್ಟಿದ್ಯಲ್ಲ ನನಗೂ ಪಿಂಚಣಿ ಮಾಡಿಕೊಡು ಮಗಾ’ ಅಂತ ದುಂಬಾಲುಬಿದ್ದು ವರುಷಗಳೇ ಕಳೆದಿತ್ತು.
ನನ್ನಿಂದ ನಯಾ ಪೈಸೆ ಪ್ರಯೋಜನವಾಗಿರಲಿಲ್ಲ.
ಹಾಗಾಗಿ ಆ ಅಜ್ಜಿ ರೇಡಿಯೋದಲ್ಲಿ ನನ್ನ ಧ್ವನಿಕೇಳಿಸಿದಾಗಲೆಲ್ಲ ಬಾಯಿಗೆ ಬಂದಂತೆ ಬಯ್ಯುತ್ತಿತ್ತು.

ಹಾಗಾಗಿ ನಾನು ಈ ಮಕ್ಕಳಿಗೆ ಅಲ್ಲಿಂದಲೇ ಟಾಟಾ ಹೇಳಿ ಬಿಟ್ಟು ಬಂದೆ.

ಕೊನೆಯಲ್ಲಿ ಓದುಗರಲ್ಲಿ ಒಂದು ವಿನಂತಿ. ಈ ಮೇಲೆ ಬರೆದಿರುವ ಬೇಬಿ ಶ್ಯಾಮಿಲಿಯೂ ಅವಳ ಅಣ್ಣನೂ ಅಪ್ಪ ರಾಜಕುಮಾರನೂ ಚಿಕ್ಕಪ್ಪ ವಿಷ್ಣುವೂ, ತಾಯಿ ಮಾಲಾಶ್ರೀಯೂ, ಅಜ್ಜಿ ಸರೋಜಾದೇವಿಯೂ ಮತ್ತು ಇದೇ ತರಹದ ನೂರಾರು ಪರ್ಯಾಯ ಸಿನೆಮಾದ ಅಭಿನೇತ್ರರೂ ನೇತ್ರೆಯರೂ ಮೈಸೂರಿನ ಏಕಲವ್ಯ ನಗರ ಎಂಬ ಕೊಳೆಗೇರಿಯೊಂದರಲ್ಲಿ ಬದುಕುತ್ತಿದ್ದಾರೆ.
ಸಾಧ್ಯವಾದರೆ ಅವರಿಗೆ ಸಹಾಯ ಮಾಡಿ.