ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ: ವಿಯಟ್ನಾಮಿ ಹೇಳಿದ ಕಥೆ    
ಸುದರ್ಶನ್
ಶುಕ್ರವಾರ, 20 ಮಾರ್ಚ್ 2009 (04:54 IST)
ಒಂದು ಐತಿಹಾಸಿಕ ಚಿತ್ರ
ಇರಾಕಿನ ಯುದ್ಧ, ಆಫ್ಗಾನಿಸ್ತಾನದ ಯುದ್ಧ ಹಲವಾರು ಜಾಗತಿಕ ಟೀಕಾಕಾರರಿಗೆ ವಿಯೆಟ್ನಾಂ ಯುದ್ಧದಲ್ಲಿ ಅಮೇರಿಕದ ಪರದಾಟವನ್ನು ನೆನಪಿಸಿದೆ. ವೈರಿಯ ಕೈಯಲ್ಲಿರುವ ಬಾಂಬು ಗನ್ನುಗಳ ಮೇಲೆ ಮಾತ್ರ ಅಮೇರಿಕಕ್ಕೆ ಕಣ್ಣಿರುತ್ತದೆ. ಎಷ್ಟೋ ವೇಳೆ, ಅದು ವೈರಿಯ ಕೈಗೆ ಬರಲು ತಾನೇ ಕಾರಣ ಆಗಿರಬಹುದು ಎಂದೂ ಮರೆತು ಹೋಗಿರುತ್ತದೆ. ಹಾಗೆ ಮರೆತಾಗ ವೈರಿಯ ಹಿಂದಿನ ಶಕ್ತಿ, ಮುಖ್ಯವಾಗಿ ಒಳಗಿನ ಶಕ್ತಿ ಅದರ ಕಣ್ಣಿಗೆ ಕಾಣುವುದಿಲ್ಲ. ಇರಾಕಿನ ಯುದ್ಧ ಶುರುವಾಗಿ ಇನ್ನೂ ವರ್ಷ ಕಳೆಯುವ ಮುನ್ನವೇ ಯುದ್ಧ ದಿರಿಸು ತೊಟ್ಟು, ಅಮೇರಿಕದ ಯುದ್ಧಹಡಗಿನ ಮೇಲೆ ನಿಂತು "ವಿ ಹ್ಯವ್ ಪ್ರಿವೇಲ್ಡ್" ಎಂದು ಬುಷ್ ಸೊಟ್ಟನಗೆ ನಕ್ಕಿದ್ದು ನಿಮಗೆ ನೆನಪಿರಬಹುದು. ಆ ನಗೆಯ ನಂತರವೇ ನಿಜವಾದ ಯುದ್ಧ ಶುರುವಾಯಿತು ಎಂದೂ ಹಲವರು ಹೇಳಿದ್ದಾರೆ. ಇರಲಿ, ಇದೆಲ್ಲಾ ಯಾಕೆ ನೆನಪಾಯಿತೆಂದರೆ ಮೊನ್ನೆ ಟೀವಿಯಲ್ಲಿ ವಿಯಟ್ನಾಂ ಹಾಗು ಇನ್ನಿತರ ದೇಶಗಳಿಂದ ನಿರಾಶ್ರಿತರಾಗಿ ಬಂದ ಹೆಂಗಸರಿಗೆ ಈಜು ಕಲಿಸುವ ಬಗ್ಗೆ ಹೇಳುತ್ತಿದ್ದರು. ದೋಣಿಯಲ್ಲಿ ತಪ್ಪಿಸಿಕೊಂಡು ಬಂದ ಹಲವರಿಗೆ ನೀರಿನ ಬಗೆಗಿನ ದಿಗಿಲನ್ನು ಗೆಲ್ಲುವುದು ಮುಖ್ಯ ಎಂಬುದು ಅದರ ಹಿಂದಿನ ಕಾಳಜಿ.

ವಿಯೆಟ್ನಾಂ ಯುದ್ಧದ ಕತೆಗಳನ್ನು, ಅಮೇರಿಕಾದ ಕಾರ್ಪೆಟ್ ಬಾಂಬಿಂಗು ಹಾಗು ವಿಯೆಟ್-ಕಾಂಗಿನ ಆಕ್ರೋಶದ ನಡುವೆ ನಲುಗಿದ ಜನರ ಕತೆಯನ್ನು ಆಗಾಗ ಕೇಳಿಯೇ ಇರುತ್ತೇವೆ. ಆ ಯುದ್ಧದ ಹಲವಾರು ಚಿತ್ರಗಳಲ್ಲಿ ನನ್ನನ್ನು ಒಂದು ಮಗುವಿನ ಚಿತ್ರ ಯಾವಾಗಲೂ ಕಾಡುತ್ತದೆ. ನೇಪಾಮ್ ಬಾಂಬಿಂಗಿನಲ್ಲಿ ಮೈ ಸುಟ್ಟುಕೊಂಡು, ಗದ್ದೆ ನಡುವಿನ ರಸ್ತೆಯಲ್ಲಿ ಕೈಚಾಚಿಕೊಂಡು, ಅಳುತ್ತಾ ಓಡಿಬರುತ್ತಿರುವ ಹುಡುಗಿಯ ಚಿತ್ರ ಇಂದೂ ನೋಡಿದವರಿಗೆ ಪ್ರಶ್ನೆಗಳನ್ನು ಕೇಳುತ್ತವೆ. ಇದೆಲ್ಲಾ ಯಾಕೆ, ನನಗೇಕೆ ಹೀಗೆ ಮಾಡಿದಿರಿ, ನಾನೇನು ಮಾಡಿದೆ... ಹೀಗೆ. ಇಂತಹ ಸಂಗತಿಗಳು ಪುಸ್ತಕ ಪತ್ರಿಕೆಗಳಿಂದ ಜಿಗಿದು ಎದುರಿಗೆ ಬಂದು ನಿಂತಾಗ ನಮ್ಮನ್ನು ಆಳವಾಗಿ ಅಲ್ಲಾಡಿಸುವುದೂ ನಿಮಗೆ ಗೊತ್ತಿರಬಹುದು.

ಇದೆಲ್ಲದರ ನಡುವೆ ವಿಯಟ್ನಾಮಿನ ನನ್ನ ಗೆಳೆಯನೊಬ್ಬನ ನೆನಪಾಯಿತು. ಅವನು ಬೇರೆ ಕಂಪನಿಯಿಂದ ಬಂದು ಕೆಲವು ದಿನಗಳ ಮಟ್ಟಿಗೆ ನನ್ನ ಜತೆ ಕೆಲಸ ಮಾಡುತ್ತಿದ್ದ. ಅವನು ಹೇಳಿದ ತನ್ನ ಕತೆ ಹಲವು ಸಲ ಮತ್ತೆ ಮತ್ತೆ ನನಗೆ ನೆನಪಾಗುತ್ತದೆ. ಒಂದು ಮಧ್ಯಾಹ್ನ ನಗುನಗುತ್ತಾ ಊಟ ಮಾಡುತ್ತಿದ್ದೆವು. ನಾನು ಇಂಡಿಯದಿಂದ ಬಂದ ಕತೆ, ಕೆಲಸ ಸಿಕ್ಕದೆ ಪರದಾಡಿದ ಕತೆ ಎಲ್ಲ ಹೇಳಿಕೊಂಡಿದ್ದೆ. ಎಲ್ಲವನ್ನೂ ನಗುತ್ತಾ ಕೇಳಿದ ಅವನು ತನ್ನ ಕತೆಯನ್ನೂ ಹೇಳಿಕೊಂಡಿದ್ದ. ಅವರ ಅಪ್ಪ ಅಮ್ಮಂದಿರಿಗೆ ಅವರು ನಾಕು ಜನ ಮಕ್ಕಳಂತೆ. ಇವನು ಕಡೆಯವನಂತೆ. ಆಸ್ಟ್ರೇಲಿಯಕ್ಕೆ ಅವರು ಬಂದಾಗ ಇವನು ಪುಟ್ಟ ಮಗುವಂತೆ. ಅವನ ಅಪ್ಪನಿಗೆ ತುಂಬಾ ವಯಸ್ಸಾಗಿದೆಯಂತೆ. ಬದುಕಿನಲ್ಲಿ ತುಂಬಾ ಕಷ್ಟ ನಷ್ಟ ಅನುಭವಿಸಿದ್ದಾರಂತೆ. ಈಗೀಗ ತುಸು ನಿರಾಳದಿಂದ ಇದ್ದಾರಂತೆ. ಆದರೂ ಒಂದು ನೆನಪು ಮಾತ್ರ ಅವರನ್ನು ಈಗಲೂ ಬಿಟ್ಟು ಹೋಗದೆ ಕಾಡುತ್ತದಂತೆ.

ಅವನ ಅಪ್ಪ-ಅಮ್ಮ ಯುದ್ಧದ ಮತ್ತು ಯುದ್ಧದ ನಂತರದ ಹಿಂಸೆಯಿಂದ ತಪ್ಪಿಸಿಕೊಂಡು ವಿಯಟ್ನಾಮಿನಿಂದ ಓಡಿಹೋಗಬೇಕಾಯಿತಂತೆ. ತಮ್ಮ ಸಂಸಾರವನ್ನು ಕಾಪಾಡಿಕೊಳ್ಳಲು ಅದೊಂದೇ ದಾರಿಯಾಗಿತ್ತಂತೆ. ತಮ್ಮ ಬೇಸಾಯದ ಭೂಮಿಯನ್ನೆಲ್ಲಾ ಯುದ್ಧದಲ್ಲಿ ಕಳಕೊಂಡಿದ್ದರು. ಅನಾಥರಾಗಿ ಪೇಟೆಯಲ್ಲಿ ಭಿಕ್ಷೆ ಬೇಡುವುದು ಅವರಿಗೆ ಇಷ್ಟವಿರಲಿಲ್ಲ. ತಲೆಯೆತ್ತಿ ಬದುಕಿದ್ದವರ ಸ್ವಾಭಿಮಾನಕ್ಕೆ ಅದೆಂತಹ ಧಕ್ಕೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಬೇರೆ ಎಲ್ಲಾದರೂ ಹೋಗಿ ಹೊಸ ಬದುಕನ್ನು ಕಟ್ಟಿಕೊಳ್ಳುವುದೇ ಅವರಿಗೆ ಸರಿ ಕಂಡ ದಾರಿ.

ನಾಲ್ಕಾರು ಜನರ ಜತೆ ಸೇರಿಕೊಂಡು ಪುಟ್ಟ ಬೋಟಿನಲ್ಲಿ ಹೊರಟರಂತೆ. ಆ ಬೋಟೂ ಇವರನ್ನೆಲ್ಲ ಸಮುದ್ರ ದಾಟಿಸಿ ಆಸ್ಟ್ರೇಲಿಯಾ ತಲುಪಿಸಲು ಶಕ್ತವೇ ಎಂದು ಗಮನಿಸಿರಲಿಲ್ಲವಂತೆ. ಯುದ್ಧದ ದಿನಗಳೇ ಹಾಗಲ್ಲವೆ? ಮುಂಚೆ ಹೊರಟ ದೋಣಿಗಳು ಮುಳುಗಿ ಸತ್ತ ಜನರ ಸುದ್ದಿಯನ್ನು ಉಳಕೊಂಡವರಿಂದ ಕೇಳಿದ್ದರೂ - ತಮಗೆ ಹಾಗಾಗುವುದಿಲ್ಲ ಎಂಬ ಸಮಜಾಯಿಷಿ ಇದ್ದೇ ಇರುತ್ತದೆ. ಹೀಗೆಲ್ಲಾ ಧೈರ್ಯಮಾಡಿಕೊಂಡು ಕಡೆಗೂ ಇಲ್ಲಿ ಬಂದು, ಹೊಸ ಬದುಕು ಕಟ್ಟಿ, ಮಕ್ಕಳನ್ನು ಚೆನ್ನಾಗಿ ಬೆಳಸಿ, ಓದಿಸಿ ಈಗ ನಿರಾಳರಾಗಿದ್ದಾರೆ ಎಂದು ಹೇಳಿ ಅವನು ಕೊಂಚ ತಡೆದ.

ತನ್ನ ತಂದೆಯ ಹಳೆಕಾಲದ ವಾದಗಳಿಗೆ ಬೇಸತ್ತು ಇವನು ಆಗಾಗ ಅವರ ಜತೆ ಜಗಳವಾಡುವುದು ಇದೆಯಂತೆ. ಹಾಗೆ ಜಗಳವಾಡಿದ ಒಂದು ಸಲ ಅವನ ತಂದೆ ತಮ್ಮ ಕನಸ್ಸನ್ನು ಹೇಳಿದರಂತೆ. ಈಗಲೂ ಮುಂಜಾವದಲ್ಲಿ ಅವನ ತಂದೆ ಆ ಕನಸಿನಿಂದ ನಡುಗುತ್ತಾ ಎದ್ದು ಕೂರುತ್ತಾರಂತೆ. ತಂದೆ ಹೇಳಿದ್ದಿಷ್ಟಂತೆ : "ನಾವು ವಿಯಟ್ನಾಮಿನಿಂದ ತಪ್ಪಿಸಿಕೊಂಡು ಹೊರಟ ದಿನಗಳು ಈಗಲೂ ದಿಗಿಲು ಮೂಡಿಸುತ್ತದೆ. ದೊಡ್ಡ ಸಾಗರದ ನಡುವಲ್ಲಿ ಯಾವ ದಿಕ್ಕಲ್ಲೂ ನೆಲ ಕಾಣುತ್ತಿರಲಿಲ್ಲ. ಅಂತಲ್ಲಿ ನಾವೆಲ್ಲಾ ಪುಟ್ಟ ದೋಣಿಯಲ್ಲಿರುವ ಕನಸು ಬೀಳುತ್ತದೆ. ನೀವು ನಾಕು ಜನ ಪುಟ್ಟ ಮಕ್ಕಳನ್ನೂ ಬಿಗಿದು ಹಿಡಕೊಂಡಿರುತ್ತೇನೆ. ನೀವೆಲ್ಲಿ ಆ ಪುಟ್ಟ ದೋಣಿಯಿಂದ ಜಾರಿ ನೀರಿಗೆ ಬೀಳುತ್ತೀರೋ ಅಂತ ಹೆದರಿಕೆ. ಕೊನೆಯಿಲ್ಲದಂತಹ ಯಾತ್ರೆ ಅನಿಸುತ್ತದೆ. ನಿಮ್ಮನ್ನು ಹಿಡಿದ ಕೈಗೆ ಸುಸ್ತಾಗುತ್ತದೆ. ನನ್ನ ಶಕ್ತಿ ಉಡುಗಿ ಕೈ ಹಿಡಿತ ಸಡಿಲಾಗುವಂತೆ ಆಗುತ್ತದೆ. ನೋಡ ನೋಡುತ್ತಿದ್ದಂತೆಯೇ ನೀವು ನನ್ನ ಕೈಯಿಂದ ಜಾರಿ ನೀರುಪಾಲು ಆದಂತೆ ಅನಿಸುತ್ತದೆ. ಅಪ್ಪಾ! ಹಿಡಕೋ ಅಪ್ಪಾ ಬಿಡಬೇಡ! ಎಂದು ನೀವೆಲ್ಲಾ ಅಳುತ್ತಾ ಕೂಗುತ್ತಿರುತ್ತೀರ. ನಿಮ್ಮ ಮುಖಗಳಲ್ಲಿ ನಾನೆಂದೂ ಕಂಡಿರದ ದಿಗಿಲು ಕಾಣುತ್ತದೆ. ಸಹಿಸಾಲಾಗದೆ ಕನಸಿಂದ ಧಿಗ್ಗನೆ ಎದ್ದು ಕೂರುತ್ತೇನೆ. ಆಗ ಕಿಟಕಿಯ ಹೊರಗೆ ಮುಂಜಾನೆಯ ಬೆಳಕಿರುತ್ತದೆ. ನನ್ನ ಹಣೆ ಬೆವರಿನಿಂದ ಒದ್ದೆಯಾಗಿರುತ್ತದೆ. ನಡುಗುವ ಮೈ ಮತ್ತೆ ಸರಿ ಹೋಗಲು ಒಂದೆರಡು ಗಂಟೆ ಹಿಡಿಯುತ್ತದೆ".

ತಂದೆಯ ಕನಸು ಹೇಳಿದ ಗೆಳೆಯ "ಅಲ್ಲಿಗೆ ನಮ್ಮ ಜಗಳ ನಿಂತಿತು" ಎಂದು ವಿಚಿತ್ರವಾಗಿ ನಗುತ್ತಾ ನನ್ನನ್ನೇ ನೋಡಿದ. ಅವನ ಪುಟ್ಟಪುಟ್ಟ ಹಲ್ಲುಗಳ ಸಾಲು ಸಣ್ಣ ಮಗುವಿನ ಹಲ್ಲುಗಳಂತೆ ಕಂಡಿತು.
ಪುಟದ ಮೊದಲಿಗೆ
 
Votes:  9     Rating: 3.67    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು