|
 |
| ಕಮಲಾದಾಸರ ‘ಬಾಲ್ಯದ ನೆನಪುಗಳು’ |
 |
ಭಾರತೀಯ ಕಾದಂಬರಿ ಸಾಹಿತ್ಯದ ಇತಿಹಾಸದಲ್ಲಿ ಕಮಲಾದಾಸ್ ಯಾನೆ ಮಾಧವಿ ಕುಟ್ಟಿ ಯಾನೆ ಕಮಲಾ ಸುರಯ್ಯಾ ಒಂದು ಅವಿಸ್ಮರಣೀಯ ಹೆಸರು. ತನ್ನ ಬದುಕನ್ನು ಆಧಾರವಾಗಿಟ್ಟುಕೊಂಡು ಕಥೆ, ಕವನ, ಕಾದಂಬರಿಗಳನ್ನು ಈ ಮಟ್ಟಿಗೆ ಸತ್ಯಕ್ಕೆ ಹತ್ತಿರವಾಗಿ, ಆದರೆ ಆತ್ಮಕಥೆ ಎಂಬುದಾಗಿ ಹೇಳಲಾಗದ ರೀತಿಯಲ್ಲಿ, ಕಾದಂಬರಿಯೆಂದು ಪೂರ್ಣಪ್ರಮಾಣದಲ್ಲಿ ಒಪ್ಪಿಕೊಳ್ಳಲಾಗದ ರೀತಿಯಲ್ಲಿ ಕೃತಿ ರಚನೆ ಮಾಡುತ್ತ -ಇದೀಗ ದೂರಕ್ಕೆ- ಸಾಗಿದವರು.
ತನ್ನ ಕಥೆಯಾಗಲಿ, ಬಾಲ್ಯದ ನೆನಪುಗಳಾಗಲಿ ಶಿರೋನಾಮೆಯ ಮೂಲಕ ಅವು ಯಾವ ಸಾಲಿಗೆ ಸೇರಬಹುದೆಂದು ಅರಿಯಬಹುದಾದರೂ ಅವು ಪ್ರಕಟಪಡಿಸುವ ಶೈಲಿ ಕಾದಂಬರಿಯದ್ದು. ‘ಬಾಲ್ಯದ ನೆನಪುಗಳು’ ಕೃತಿಯಲ್ಲಿ ಕೃತಿಕಾರ್ತಿ ತನ್ನ ಬಾಲ್ಯದಲ್ಲಿ ಘಟಿಸಿಹೋದ ಅನೇಕ ಚದುರಿದ ಚಿತ್ರಗಳನ್ನು ಒಂದೆಡೆ ಶಿಸ್ತಾಗಿ ಪೋಣಿಸಿ ಕೊಡುವ ಪ್ರಯತ್ನ ಮಾಡುತ್ತಾರೆ. ಶಾಲಾದಿನಗಳು ಕೊಲ್ಕತ್ತಾದಲ್ಲಿ ಕಳೆದುದರಿಂದ ನಗರ ಸಂಸ್ಕೃತಿಯ ಅಂಶಗಳೂ, ಕೂಸಾಗಿದ್ದಾಗ ಅಥವಾ ರಜಾ ದಿವಸಗಳಲ್ಲಿ ತಾಯಿಯ ಮನೆಯಲ್ಲಿ ಸಾಕಷ್ಟು ಕಾಲ ಕಳೆದದ್ದರಿಂದ ಹಳ್ಳಿಯ ಸಂಸ್ಕೃತಿಯೂ ಇದರಲ್ಲಿ ಮಿಳತಗೊಳ್ಳುವುದು ಸಾಧ್ಯವಾಗಿದೆ.
ಮುಖ್ಯವಾಗಿ ಎರಡು ಮನೆತನಗಳನ್ನು ಆಧಾರವಾಗಿಟ್ಟುಕೊಂಡು ನಾಡ ಘಟನೆಗಳನ್ನು ಹೆಣೆಯಲಾಗಿದೆ. ಒಂದು ಕಮಲಾ ದಾಸ್ ಹುಟ್ಟಿದ ನಾಲಪ್ಪಾಟ್ಟ್ ಮನೆತನ. ಇನ್ನೊಂದು, ತಾನು ಆಮೇಲೆ ಮದುವೆಯಾಗಿ ಹೋಗಿ ಸೇರಿದ ಅಂಬಾಳತ್ತ್ ಮನೆತನ. ಎರಡೂ ಅಕ್ಕಪಕ್ಕದಲ್ಲೇ ಇದ್ದುದರಿಂದ ಕಮಲಾದಾಸ್ ಅವರೆಲ್ಲರ ಮಧ್ಯದಲ್ಲಿಯೇ ಬೆಳೆದರು.
ಕಮಲಾದಾಸ್ ಘಟನೆಗಳನ್ನು ಪೋಣಿಸುವ ರೀತಿನಿಮಿತ್ತವಾಗಿ ಎಲ್ಲೂ ಓದುಗರಿದೇ ಆಯಾಸವೆನ್ನಿಸುವುದಿಲ್ಲ. ಸರಳ, ನೇರ ಅವರ ಬರವಣಿಗೆಯ ರೀತಿ. ಚಿಕ್ಕವಳಿದ್ದಾಗ ಅವರ ಮನೆಗೆ ಬಳೆ ಮಾರಿಕೊಂಡು ಬರುತ್ತಿದ್ದಾತ ಬಗೆಬಗೆಯ ಬಳೆಗಳಿಂದ ಆಕೆಯನ್ನು ಸಿಂಗರಿಸುತ್ತಿದ್ದುದು, ಓಟ್ಟಂತುಳ್ಳಲ್ ಪ್ರದರ್ಶಿಸಲೆಂದು ಬಂದಾತ ಆಕೆಯ ಕೈಯಿಂದಲೇ ಒಂದು ಬಳೆಯನ್ನು ನೆನಪಿಗೆ ಎಂದು ಬಿಡಿಸಿ ತೆಗೆದುಕೊಂಡದ್ದು, ಆ ವಿಚಿತ್ರ ವರ್ತನೆಯ ಕುರಿತು ಮನೆಯ ವಾತಾವರಣ ಕಲುಷಿತಗೊಂಡದ್ದು, ಆಕೆಯ ಹಲ್ಲು ತೆಗೆಯುವ ಪ್ರಸಂಗ ಮತ್ತು ಅದರ ಹಿನ್ನೆಲೆಯ ಮೂಢನಂಬಿಕೆ ಕುರಿತಾದ ಚರ್ಚೆ, ಕೊರವಂಜಿ ಬಂದಾಗಿನ ಆಕೆಯ ಕುತೂಹಲ, ಕೊರವಂಜಿಯ ಬದುಕಿನ ಝಲಕು- ಇಂತಹ ಅನೇಕ ಘಟನೆಗಳ ಜೊತೆಗೆ ಬದುಕು ಸಾಗುವ ವಿಧಾನವನ್ನು ಕಮಲಾ ದಾಸ್ ಕುತೂಹಲಕ್ಕೆ ಚ್ಯುತಿ ಬರದ ಹಾಗೆ ವಿಶದಪಡಿಸುತ್ತಾರೆ.
ಮಕ್ಕಳು ಆಡುತ್ತಿದ್ದ ರಾತ್ರಿಪೆಟ್ಟು ಎಂಬ ಹೆಸರಿನ ಆಟ. ಕತ್ತಲಾದ ಮೇಲೆ ಮಕ್ಕಳೆಲ್ಲ ಬೇರೆಬೇರೆ ಕಡೆಗಳಲ್ಲಿ ಅಡಗಿಕುಳಿತು ತಾನು ಸಿಕ್ಕಿಬೀಳದಂತೆ ಎಚ್ಚರವಹಿಸುತ್ತ ಇನ್ನೊಬ್ಬನಿಗೆ ಏಟು ಕೊಡುವುದು, ಚಿಮುಟುವುದು ಇತ್ಯಾದಿ. ಮಕ್ಕಳೆಲ್ಲ ಸೇರಿ ಹೊನ್ನೆಕಾಯಿಯಲ್ಲಿ ಸೆಂಟ್ ತಯಾರಿಸಿದ್ದಂತೂ ಬಹುರೋಚಕ ಘಟನೆ. ಕಮಲಾದಾಸ್ ಚಿಕ್ಕವಳಿದ್ದಾಗ ಪ್ರಶ್ನೆಗಳ ಸುರಿಮಳೆ ಮೂಲಕ ಮನೆಮಂದಿಯನ್ನು ತಬ್ಬಿಬ್ಬುಗೊಳಿಸುವ ಹಲವಾರು ಘಟನೆಗಳು ಅಲ್ಲಲ್ಲಿ ಎಡತಾಕುತ್ತವೆ.
ಇದು ಒಂದು ಮಗ್ಗುಲಾದರೆ ಕೊಲ್ಕತ್ತಾದಲ್ಲಿನ ಆಕೆಯ ಬದುಕು ಅನೇಕ ಸಿಕ್ಕುಗಳಿಂದ ಕೂಡಿದ್ದುದಾಗಿ ಚಿತ್ರಿತವಾಗಿದೆ. ಆರು ಕೋಣೆಯ ಕೊಲ್ಕತ್ತಾದ ಮನೆ. ಕೆಲಸದವರೇ ಎಲ್ಲದಕ್ಕೂ. ಆ ಕೆಲಸದವರ ಪ್ರಣಯ, ತನ್ನ ಎತ್ತರದ ಕೊಠಡಿಯಿಂದ ರಸ್ತೆ ನೋಡುತ್ತಿದ್ದ ಹುಡುಗಿ ಕಮಲಾಳನ್ನು ನಿತ್ಯವೂ ನೋಡುತ್ತಿದ್ದ ಕಾಷಾಯ ವಸ್ತ್ರಧಾರಿಯೊಬ್ಬ ಅಲ್ಲಿಂದಲೇ ಮಾಡಿ ತೋರಿಸುತ್ತಿದ್ದ ಕೆಲವು ಆಂಗಿಕ ಚೇಷ್ಟೆಗಳು, ಅದನ್ನು ಕಂಡ ಕೆಲಸದಾಕೆ ತಬ್ಬಿಬ್ಬಾಗಾಗುವುದು, ಹಳ್ಳಿಯಿಂದ ನಗರಕ್ಕೆ ಬಂದ ಅದೆಷ್ಟೋ ಮಂದಿ ಬದುಕು ನಿಭಾಯಿಸಲು ಹೆಣಗುವುದು, ಕಮಲಾದಾಸರ ತಂದೆಯ ಮರ್ಜಿ, ತಂದೆಗೆ ಹೆದರಿ ಬದುಕು ನಿಭಾಯಿಸುವ ಪರಿ- ಇತ್ಯಾದಿಗಳನ್ನು ಹೂವಿನಂತೆ ಆರಳಿಸುವ ಪರಿ ಚೇತೋಹಾರಿಯಾಗಿದೆ.
‘ಬಾಲ್ಯಕಾಲ ಸ್ಮರಣಗಳ್’ ಎಂಬ ಮಲಯಾಳ ಹೆಸರುಳ್ಳ ಈ ಕೃತಿಯನ್ನು ನ್ಯಾಷನಲ್ ಬುಕ್ ಟ್ರಸ್ಟ್ ‘ಬಾಲ್ಯದ ನೆನಪುಗಳು’ ಎಂಬ ಹೆಸರಿತ್ತು ಕನ್ನಡದಲ್ಲಿ ಪ್ರಕಟಿಸಿದೆ. ಕಮಲಾ ಸುರಯ್ಯಾ ಎಂಬ ಹೆಸರು ಬಂದ ಹೊಸತರಲ್ಲಿ ಈ ಕನ್ನಡಾನುವಾದ ಮುದ್ರಣಗೊಂಡುದೊಂದು ಕಾಕತಾಳೀಯ ವಿಚಾರ.
|