ಇಲ್ಲಿ ಆಸ್ಟ್ರೇಲಿಯದಲ್ಲಿ ಜುಲೈ ಒಂದು ಹೊಸ ಆರ್ಥಿಕ ವರ್ಷದ ಪ್ರಾರಂಭ. ಜನವರಿ ಒಂದರಂದು ಕಳೆದ ಕೆಟ್ಟ ವರ್ಷವನ್ನು ಮರೆಯುವ ಪ್ರಯತ್ನದಲ್ಲಿ ಹೊಸ ವರ್ಷಕ್ಕೆ ಆತಂಕದಿಂದ ಎದುರು ನೋಡುವುದು ಹಳೆಯ ಸಂಪ್ರದಾಯ. ನ್ಯೂ ಇಯರ್ ಪಾರ್ಟಿಯೆಂದು ವರ್ಷ ಜಾರುವುದನ್ನು ಮತ್ತಿನಲ್ಲಿ ಕಳೆಯುವುದು ಕೆಟ್ಟ ಗಳಿಗೆಗಳಲ್ಲಿ ಸಮಂಜಸವೇನೋ ಅನಿಸುತ್ತದೆ. ಆದರೆ ಆರ್ಥಿಕ ಹೊಸವರ್ಷಕ್ಕೆ ಮೋಜು, ಕುಣಿತ, ಕುಡಿತವಿರಲಿ ಕಾಲುಗಳು ಅದುರುತ್ತಿದೆ, ತಿಂದದ್ದು ನುಂಗಲಾಗುತ್ತಿಲ್ಲ, ಕುಡಿದದ್ದು ಒಳಗಿಳಿಯುತ್ತಿಲ್ಲ. ತೊಂಡುದನದಂತೆ ಹಾಯಬೇಕಾಗಿದ್ದ ಕನಸುಗಳೂ ಕಂಗೆಟ್ಟು ಕೂತಿವೆ. ಇಂತಹ ಹೊಸ ತಿಂಗಳು ಕೆಂಡಸಂಪಿಗೆಗೆ ‘ಅತಿಥಿ ಸಂಪಾದಕ’ನಾಗಿ ಏನೇನು ಮಾಡಬೇಕು, ಮಾಡಬಹುದು, ಏನು ಮಾಡಿದರೆ ಚೆಂದ ಎಂಬೆಲ್ಲಾ ಗೊಂದಲದಲ್ಲೇ ನಗುತ್ತಾ ಬರುತ್ತಿದ್ದೀನಿ.
ಗೊಂದಲದಲ್ಲಿ ಸ್ಪಷ್ಟವಾಗಿ ನುಡಿಯುವವರು ಜಾಣರಾಗಿ ಕಾಣುತ್ತಾರೆ. ಅವರು ಹೇಳುತ್ತಿರುವುದು ಜಾಣ ಮಾತಾಗಲಿ, ನಿಜವಾಗಲಿ ಆಗಬೇಕಾಗೇನೂ ಇರುವುದಿಲ್ಲ. ಏಕೆಂದರೆ ಈಗೀಗಲಂತೂ ದಿಟ್ಟವಾಗಿ ಹೇಳುವುದನ್ನೇ ಬಂಡವಾಳ ಮಾಡಿಕೊಂಡವರು ನಿಮಗೆ ಸುತ್ತಲೂ ಕಂಡೇ ಕಾಣುತ್ತಾರೆ. ಗೊಂದಲ, ಜಾಣತನ, ದಿಟ್ಟತನ, ನಿಜನುಡಿ ಇವೆಲ್ಲದರ ಆಚೆ ಏನೆಲ್ಲಾ ಪರಿಗಣಿಸಿ ವಿವೇಕದ ಮಾತಾಡುತ್ತಿದ್ದಾರೆ ಅನ್ನುವುದು ಮುಖ್ಯವಾಗುತ್ತದೆ. ಹಲವು ಸಲ ಮಾತುಗಳ ಅವಶ್ಯಕತೆ ಹಾಗು ಪ್ರಾಮುಖ್ಯದ ಅಳತೆಗೋಲಿಗೆ ದಿಟ್ಟನಕ್ಕಿಂತ - ಅನುಮಾನ ಉಳಿಸಿಕೊಂಡ ವಿವೇಕವೇ ಹೆಚ್ಚು ಸಮಂಜಸ ಅನಿಸುತ್ತದೆ. ಇಲ್ಲದಿದ್ದರೆ ಮಾತುಗಳ ಆರ್ಭಟ ಕಿವಿ ತುಂಬಿ ನಮ್ಮ ಉಳಿದ ಇಂದ್ರೀಯಗಳು ಹಿಮ್ಮೆಟ್ಟಿಬಿಡುವ ಸಾಧ್ಯತೆ ಹೆಚ್ಚಾಗುತ್ತದೆ. ಸೋಂಕು, ನೋಟ, ರುಚಿ ಹಾಗು ಎಲ್ಲಕ್ಕಿಂತ ಅತಿ ಹೆಚ್ಚು ಪರಿಣಾಮಕಾರಿ ಹಾಗು ದೀರ್ಘಕಾಲ ಉಳಿಯುವ ಪರಿಮಳಕ್ಕೆ ಕುರುಡಾಗಿ ಬಿಡುವಲ್ಲಿಗೆ ಬಂದು ನಿಲ್ಲುತ್ತೇವೆ. ಅಂತಹ ಘೋರ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಕೆಂಡಸಂಪಿಗೆ ಮುಖ್ಯವಾಗುತ್ತದೆ.
ಜಾಗತಿಕ ಪರಿಸರದ ಎಲ್ಲ ಸವಲತ್ತುಗಳನ್ನೂ ಬಳಸಿಕೊಂಡು ಅದರ ದಬ್ಬಾಳಿಕೆಗೆ ಅಧೀನರಾಗದ ಹಾಗೆ ಇರುವುದು ದೊಡ್ಡ ಸವಾಲೇ ಎನ್ನಬೇಕು. ಆ ಸವಲತ್ತುಗಳು ಯಾರೊಬ್ಬರ ಸ್ವತ್ತೂ ಅಲ್ಲದಿರುವುದರಿಂದ ಅದನ್ನು ಸಾಮೂಹಿಕವಾಗಿ ವಿವೇಕದಿಂದ ಬಳಸಿಕೊಳ್ಳುವುದು ನಮ್ಮ ಜವಾಬ್ದಾರಿ. ಇದನ್ನು ಕೆಂಡಸಂಪಿಗೆಯ ಮೂಲಕ ಹೇಗೆ ನಿಭಾಯಿಸುತ್ತೇವೆ ಎಂದು ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗಿದೆ. ಕೂಗಾಡುವ ಇಂದಿನ ಮಾಧ್ಯಮಗಳಿಗೆ ದಿಟ್ಟವಾಗಿರುವುದು ಮುಖ್ಯ. ಹೇಳುತ್ತಿರುವುದು ಸುಳ್ಳೇ ಆಗಿರಬಹುದು. ಆದರೆ ಕೆಂಡಸಂಪಿಗೆಯಂತಹ ಅಂತರ್ಜಾಲ ತಾಣಗಳಲ್ಲಿ - ಅದು ಓದುಗರಿಗೆ ಕೊಡುವ ದನಿಯಿಂದಾಗಿ ಅತ್ಯಂತ ಮಹತ್ವವಿರುತ್ತದೆ. ಮಾಧ್ಯಮದ ಸುಳ್ಳು, ದಬ್ಬಾಳಿಕೆ, ಕುಟಿಲತೆ ಇಲ್ಲಿ ನಡೆಯುವುದಿಲ್ಲ. ಓದುಗರು ನಡೆಯಗೊಡುವುದಿಲ್ಲ. ಕೆಂಡಸಂಪಿಗೆಯಂತಹ ತಾಣ ನಮ್ಮ ಎಚ್ಚರದ ಮನಸ್ಸಿಗೆ ಬೆಂಬಲವಾಗಬೇಕಾದರೆ ಅದರಲ್ಲಿ ಬರಹಗಾರರಷ್ಟೇ ಜವಾಬ್ದಾರಿ ಓದುಗರಿಗೂ ಇರುವುದನ್ನು ಮನಗಾಣಬೇಕಾಗುತ್ತದೆ.
ಜಗತ್ತಿನ ಮೂಲೆ ಮೂಲೆಯಿಂದ ಅಂಕಣಕಾರರನ್ನು ಒಟ್ಟುಗೂಡಿಸಿ, ಇಂಡಿಯದ ಹಳ್ಳಿ ಊರು ನಗರದ ಬರಹಗಾರರ ಜತೆ ಬರೆಯುವ ಅವಕಾಶ ಕೊಡುವುದು ನನ್ನಂತಹ ಅನಿವಾಸಿಗಳಿಗೆ ಅತ್ಯಂತ ಮಹತ್ವಪೂರ್ಣವಾದ್ದು. ಹಾಗೆಯೇ ಓದುವವರಿಗೂ ಇದು ಕೊಡುವ ಹರಹು ಬಹುಶಃ ಕೆಂಡಸಂಪಿಗೆಯಂತಹ ಅಂತರ್ಜಾಲ ಪತ್ರಿಕೆಯಿಂದ ಮಾತ್ರ ಸಾಧ್ಯ. ಇದು ಬಹುಶಃ ೨೧ನೇ ಶತಮಾನದ ವಿಶಿಷ್ಟ ಕೊಡುಗೆ ಎಂದರೆ ತಪ್ಪಾಗಲಾರದು. ಆದರೆ ಈ ಕೊಡುಗೆಯನ್ನು ಲೋಲುಪತೆಗೆ ಹಾಗು ವಿಜೃಂಭಣೆಗೆ ಬಳಸಿಕೊಂಡರೆ ಒಂದು ಐತಿಹಾಸಿಕ ಅವಕಾಶದಿಂದ ನಾವು ವಂಚಿತರಾಗುತ್ತೇವೆ. ಬೇರುಗಳನ್ನು ಹುಡುಕಿಕೊಳ್ಳುವಷ್ಟೇ ಮುಖ್ಯವಾಗಿ ಟಿಸಲಿನ ದಿಕ್ಕುಗಳಿಗೂ ಮನಸ್ಸುಕೊಡುವುದಕ್ಕೆ ಮರೆಯಬಾರದು. ಆ ನಿಟ್ಟಿನಲ್ಲಿ ದಾಖಲಾಗದೇ ಅಳಿಯಬಹುದಾದ ಯತ್ನಗಳಿಗೆ ಕೆಂಡಸಂಪಿಗೆ ದನಿಯಾಗುವುದು ಮುಖ್ಯವಾಗುತ್ತದೆ.
|