ಮುಲ್ಲಾ ನಾಸಿರುದ್ದೀನ್ ಒಬ್ಬ ಸೂಫಿ ಸಂತ ಎನ್ನುವುದನ್ನು ಹೊರತು ಪಡಿಸಿದರೆ ಆತ ಯಾರು ಎನ್ನುವುದು ಯಾರಿಗೂ ಗೊತ್ತಿಲ್ಲ ಎನ್ನುವ ಅಭಿಪ್ರಾಯ ಸೂಫಿಗಳ ಕುರಿತು ಬಹಳಷ್ಟು ಸಂಶೋಧನೆಗಳನ್ನು ನಡೆಸಿದ ಇದ್ರಿಸ್ ಶಾನದ್ದು. ಈತ ಸೂಫಿ ಸಂತರ ದರ್ವೇಶ್ ಪಂಥದ ಅನುಭಾವಿಗಳ ಸೃಷ್ಟಿ ಎಂಬ ಮತ್ತೊಂದು ವಾದವೂ ಇದೆ. ಮುಲ್ಲಾ ಇದ್ದನೇ ಇಲ್ಲವೇ ಎಂಬುದನ್ನು ಹೀಗೆ ವಾದಗಳನ್ನಿಟ್ಟುಕೊಂಡು ನಿರ್ಧರಿಸಲು ಸಾಧ್ಯವೇ ಇಲ್ಲ. ಏಕೆಂದರೆ ಸೂಫಿ ಸಂತರಿಗೆ ಮುಖ್ಯವಾಗುವುದು ಸಂದೇಶವೇ ಹೊರತು ಸಂದೇಶ ನೀಡುವವನಲ್ಲ. ಮುಲ್ಲಾ ಇದ್ದಿದ್ದರೂ ತನ್ನ ಬಗ್ಗೆ ಹೆಚ್ಚೇನೂ ಹೇಳಿಕೊಂಡಿರಲಾರ. ಇಂಥ ಅನೇಕ ಸಮಸ್ಯೆಗಳಿದ್ದರೂ ಮುಲ್ಲಾ ನಾಸಿರುದ್ದೀನ್ಗೂ ಒಂದು ಇತಿಹಾಸವಿದೆ. ಮುಲ್ಲಾ ‘ವಿದ್ವಾಂಸ’ರನ್ನು ತಮಾಷೆ ಮಾಡಲು ಬಳಸುವ ಪರಿಕರಗಳನ್ನು ಬಳಸಿಕೊಂಡು ಕಂಡುಕೊಳ್ಳಲು ‘ಇತಿಹಾಸದ ವಿದ್ವಾಂಸರು’ ಪ್ರಯತ್ನಿಸಿದ್ದಾರೆ. ಈ ಪ್ರಯತ್ನಗಳ ಪರಿಣಾಮವಾಗಿ ಮುಲ್ಲಾನ ಕಾಲ, ಆತನಿಗೊಂದು ಸಮಾಧಿ ಮುಂತಾದುವುಗಳೆಲ್ಲಾ ಸೃಷ್ಟಿಯಾಗಿವೆ. ಈ ಪ್ರಯತ್ನ ಮುಲ್ಲಾನಿಗೇ ಹೃದಯ ತುಂಬಿ ಬರಲು ಕಾರಣವಾಗಿತ್ತಂತೆ. ಒಬ್ಬರು ವಿದ್ವಾಂಸರ ಪ್ರಕಾರ ಮುಲ್ಲಾನದ್ದು ಉಲ್ಟಾ ಜಗತ್ತು. ಹಾಗಾಗಿ ಮುಲ್ಲಾನ ಸಮಾಧಿ ಕಲ್ಲಿನ ಮೇಲಿರುವ ಬರೆಹದಲ್ಲಿ ೩೮೬ ಎಂದು ಬರೆದಿರುವುದನ್ನು ೬೮೩ ಎಂದು ಓದಬೇಕು. ಮತ್ತೊಬ್ಬರು ವಿದ್ವಾಂಸರು ಈ ಸಂಖ್ಯೆಯನ್ನೇ ಇಟ್ಟುಕೊಂಡು ಮತ್ತೊಂದು ವಾದ ಮಂಡಿಸಿದ್ದಾರೆ. ಈ ಸಂಖ್ಯೆ ಅರಾಬಿಕ್ನಲ್ಲಿ ಬರೆದದ್ದಾಗಿದ್ದರೆ ಅವುಗಳನ್ನು ತಿರುಗು ಮುರುಗಾಗಿಸಾದಾಗ ೨೭೪ ಆಗುತ್ತದಂತೆ. ಈ ವಾದಗಳನ್ನು ಕೇಳಿ ಬೇಸತ್ತ ದರ್ವೇಶ್ ಪಂಥದ ಸಂತನೊಬ್ಬ ‘ಒಂದು ಜೇಡವನ್ನು ಶಾಯಿಯಲ್ಲಿ ಮುಳುಗಿಸಿ ಕಾಗದದ ಮೇಲೆ ಬಿಟ್ಟರೆ ಸರಿಯಾದ ದಿನಾಂಕವನ್ನು ಬರೆಯಬಹುದು. ಅಥವಾ ಸರಿಯಾದುದೇನನ್ನಾದರೂ ತೋರಿಸಬಹುದು ಅಥವಾ ಸರಿಯಾದ ಏನನ್ನಾದರೂ ತೋರಿಸಬಹುದು’ ಎಂದಿದ್ದ.
ಈ ಎಲ್ಲಾ ವಾದಗಳನ್ನು ಬಿಟ್ಟು ನೋಡಿದರೂ ಮುಲ್ಲಾ ಒಬ್ಬ ಬರೆಹಗಾರ ಎಂಬ ತೀರ್ಮಾನಕ್ಕೆ ನಾವಂತೂ ಬರಬಹುದು. ಏಕೆಂದರೆ ಮುಲ್ಲಾನ ಕಥೆಗಳು ನಮ್ಮೆದುರು ಇವೆ. ಮುಲ್ಲಾನ ಕಥೆಗಳನ್ನು ನಾವು ಚಂದಮಾಮದಿಂದ ಆರಂಭಿಸಿ ಎಸ್ಎಂಎಸ್ ಜೋಕ್ಗಳ ವರೆಗೆ ಎಲ್ಲೆಲ್ಲಾ ಓದಿದ್ದರೂ ಅವುಗಳ ಲೇಖಕ ಇಂಥವನೆಂದು ನಮಗೆ ತಿಳಿದಿದೆಯೇ? ಇಲ್ಲ. ಹಾಗಿರುವುದರಿಂದ ಇವುಗಳ ಲೇಖಕ ಮುಲ್ಲಾನೇ ಸರಿ!
ಮುಲ್ಲಾ ನಾಸಿರುದ್ದೀನ್ ಕೇವಲ ಸರ್ದಾರ್ಜಿಯಂತೆ ನಗೆಹನಿಯ ಪಾತ್ರವಲ್ಲ. ಮುಲ್ಲಾ ಕಥೆಗಳನ್ನು ಕೇವಲ ನಗೆಹನಿಯಾಗಿ ಓದಬಹುದಾದರೂ ಅವುಗಳು ಆಧ್ಯಾತ್ಮಿಕ ಅರ್ಥಗಳನ್ನೂ ಹೊಂದಿವೆ. ಒಂದು ಕಥೆಯನ್ನು ಅಧ್ಯಾತ್ಮದ ಪರಿದಿಯಲ್ಲಿ ಚರ್ಚಿಸಲು ಪ್ರಯತ್ನಿಸೋಣ.
ಮುಲ್ಲಾ ಕತ್ತೆಗೆ ಬುದ್ಧಿ ಕಲಿಸಿದ ಈ ಕಥೆ ಹೆಚ್ಚಿನವರಿಗೆ ಗೊತ್ತಿದೆ. ಮುಲ್ಲಾ ಕತ್ತೆಯ ಮೇಲೆ ಉಪ್ಪು ಹೇರಿಕೊಂಡು ಸಂತೆಗೆ ಹೊರಟ. ದಾರಿಯಲ್ಲೊಂದು ಹೊಳೆ ಸಿಕ್ಕಿತು. ಉಪ್ಪು ನೀರಿನಲ್ಲಿ ನೆನೆಯುವಂತೆ ನದಿ ದಾಟಿತು. ನದಿಯಿಂದ ಮೇಲೇರುವಷ್ಟರಲ್ಲಿ ಉಪ್ಪಿನಲ್ಲಿ ಬಹಳಷ್ಟು ಭಾಗ ಕರಗಿ ಹೋಗಿ ಅದರ ಹೊರೆ ಕಡಿಮೆಯಾಯಿತು. ಕತ್ತೆ ಹೊಸತೊಂದು ವಿದ್ಯೆ ಕಲಿತೆ ಎಂದು ಸಂತೋಷಿಸಿತು. ಆದರೆ ಉಪ್ಪು ಕರಗಿ ಹೋದದ್ದರಿಂದ ಮುಲ್ಲಾನಿಗೆ ಕೋಪ ಬಂತು.
ಮರುದಿನ ಮುಲ್ಲಾ ಕತ್ತೆಯ ಮೇಲೆ ಉಣ್ಣೆಯನ್ನು ಹೇರಿದ. ಕತ್ತೆ ಹಿಂದಿನಂತೆಯೇ ನದಿ ದಾಟುವಾಗ ಉಣ್ಣೆಯನ್ನೂ ನೀರಿನಲ್ಲಿ ಮುಳುಗಿಸಿತು. ಈ ಬಾರಿ ಹೊರೆ ಇಳಿಯುವುದರ ಬದಲಿಗೆ ಹೆಚ್ಚಿತು. ನದಿ ದಾಟಿ ಬಹಳ ಕಷ್ಟದಿಂದ ಮಾರುಕಟ್ಟೆಯವರೆಗೆ ಸಾಗಿತು.
ಈ ಕಥೆಯಲ್ಲಿ ಎರಡು ಸೂಫೀ ಪಾರಿಭಾಷಿಕಗಳಿವೆ. ಒಂದು ‘ಉಪ್ಪು’ ಮತ್ತೊಂದು ‘ಉಣ್ಣೆ’. ಉಪ್ಪನ್ನು ಸೂಫಿ ಪರಿಭಾಷೆಯಲ್ಲಿ ಒಳ್ಳೆಯವನಾಗಿರುವುದರ ರೂಪಕವಾಗಿ ಬಳಸಲಾಗುತ್ತದೆ. ಕತ್ತೆ ಇಲ್ಲಿ ಮನುಷ್ಯನ ರೂಪಕ. ಮನುಷ್ಯ ಈ ಒಳ್ಳೆಯತನದ ಹೊರೆಯನ್ನು ಸದಾ ಹೊತ್ತು ಸಾಗುತ್ತಿರುತ್ತಾನೆ. ಒಳ್ಳೆಯತನದ ಹೊರೆಯನ್ನು ಕಳಚಿಕೊಂಡಾಗ ಆತನಿಗೆ ಯಾವುದೋ ಬಿಡುಗಡೆ ಸಿಕ್ಕ ಸಂತೋಷವಾಗುತ್ತದೆ. ಆದರೆ ಇದರ ಪರಿಣಾಮವಾಗಿ ಆತ ತನ್ನ ಆಹಾರವನ್ನೇ ಕಳೆದುಕೊಳ್ಳುತ್ತಾನೆ. ಅಂದರೆ ಉಪ್ಪನ್ನು ಮಾರಿ ಮುಲ್ಲಾ ಕತ್ತೆಗೆ ಬೇಕಾದ ಹುಲ್ಲು ಖರೀದಿಸಬೇಕಿತ್ತು. ‘ಉಣ್ಣೆ’ ಸೂಫಿಗಳ ಹೆಸರಿನೊಂದಿಗೇ ಸಂಬಂಧ ಇಟ್ಟುಕೊಂಡಿರುವ ಪದ. ಒಂದು ರೀತಿಯಲ್ಲಿ ಇದು ಸೂಫಿ ಎಂಬುದಕ್ಕೆ ಸಮಾನಾರ್ಥಕ. ಮರದಿನದ ಪ್ರಯಾಣದಲ್ಲಿ ಕತ್ತೆ ಉಣ್ಣೆಯನ್ನು ನೀರಿನಲ್ಲಿ ಮುಳುಗಿಸಿ ತನ್ನ ಮೇಲಿನ ಹೊರೆಯನ್ನು ಹೆಚ್ಚಿಸಿಕೊಂಡಿತು. ಒಳ್ಳೆಯತನ ಎಂಬ ಹೊರೆ ತನಗೆ ಆಹಾರವನ್ನು ಒದಗಿಸುತ್ತದೆ ಎಂದು ಅರಿವಾದ ಮನುಷ್ಯ ಅದನ್ನು ಮತ್ತೆ ಗಳಿಸಿಕೊಳ್ಳಲು ಗುರುವಿನ ಮೊರೆ ಹೋಗುತ್ತಾನೆ. ಅಂದರೆ ತನ್ನ ಹೊರೆಯನ್ನು ಹೆಚ್ಚಿಸಿಕೊಳ್ಳುತ್ತಾನೆ. ಈ ಹೆಚ್ಚುವರಿ ಹೊರೆ ಹೊತ್ತ ಕತ್ತೆ ಕಷ್ಟ ಪಟ್ಟು ಮಾರುಕಟ್ಟೆ ತಲುಪುತ್ತದೆ. ಆದರೆ ಅಂತ್ಯ ಇಲ್ಲಿ ಸುಖದ್ದು. ಏಕೆಂದರೆ ಅದಕ್ಕೆ ಬೇಕಿರುವ ಆಹಾರ ದೊರೆಯುತ್ತದೆ. ಮನುಷ್ಯನೂ ಹಾಗೆಯೇ ಗುರುವಿನ ಹೊರೆಯನ್ನು ಹೊತ್ತು ಸಾಗುವುದು ಕಷ್ಟವಾದರೂ ಅದು ಅವನಿಗೆ ಒಳಿತನ್ನೇ ನೀಡುತ್ತದೆ. ನೀರಿನಲ್ಲಿ ಒದ್ದೆಯಾಗುವ ಉಣ್ಣೆ ಭಾರ ಹೆಚ್ಚಿಸಿಕೊಂಡದ್ದರಿಂದ ಹೆಚ್ಚು ಹಣವನ್ನೂ ಗಳಿಸಿಕೊಟ್ಟಿತು ಎಂಬ ಅಂಶವನ್ನು ಗಮನಿಸಬೇಕು.
ಇದು ಮುಲ್ಲಾನ ಕಥೆಗಳ ಸೂಫೀ ಓದು. ಆತನ ಎಲ್ಲಾ ಕಥೆಗಳಲ್ಲೂ ಹೀಗೊಂದಷ್ಟು ಗೂಢಾರ್ಥಗಳಿರುತ್ತವೆ. ಅಷ್ಟೇನೂ ಪ್ರಸಿದ್ಧವಲ್ಲದ ಕಥೆಗಳು ಇಲ್ಲಿವೆ. ಓದಿ, ಹಾಗೆಯೇ ಧ್ಯಾನಿಸಿ, ಹೊಸ ಅರ್ಥಗಳು ಹೊಳೆದರೆ ನಮಗೂ ಬರೆದು ತಿಳಿಸಿ.
*****
ಮುಲ್ಲಾ ತನ್ನ ಗೆಳೆಯ ವಿದ್ವಾಂಸರ ಜತೆ ಚರ್ಚಿಸುತ್ತಿದ್ದ. ಒಬ್ಬಾತ ಮುಲ್ಲಾನಿಗೊಂದು ಪ್ರಶ್ನೆ ಎಸೆದ.
‘ಪ್ರಾಪಂಚಿಕ ವಸ್ತುಗಳು ಮತ್ತು ಪರಲೋಕದ ವಸ್ತುಗಳ ನಡುವಣ ಸಂಬಂಧ ವಿವರಿಸುತ್ತೀಯಾ?’
‘ಸರಿ, ನೀನು ರೂಪಕಗಳನ್ನು ಅರ್ಥ ಮಾಡಿಕೊಳ್ಳಬೇಕು’
‘ನಿನ್ನ ಒಗಟು ಬೇಡ- ಪ್ರಾಯೋಗಿಕವಾದ ಏನನ್ನಾದರೂ ತೋರಿಸು. ಉದಾಹರಣಗೆ ಸ್ವರ್ಗದ ಸೇಬು’
ಮುಲ್ಲಾ ಅಲ್ಲೇ ಇದ್ದ ಹಣ್ಣುಗಳ ರಾಶಿಯಿಂದ ಒಂದು ಸೇಬನ್ನು ತೆಗೆದು ಪ್ರಶ್ನೆ ಕೇಳಿದಾತನಿಗೆ ಕೊಟ್ಟ.
ಇದನ್ನು ತೆಗೆದುಕೊಂಡ ಪ್ರಶ್ನಿಸಿದಾತ ‘ಇದು ಒಂದು ಕಡೆ ಕೆಟ್ಟಿದೆ. ಸ್ವರ್ಗದ ಸೇಬು ಪರಿಪೂರ್ಣವಾಗಿರಲೇಬೇಕು’ ಎಂದ.
ಮುಲ್ಲಾನ ಉತ್ತರ ಬಂತು ‘ಸ್ವರ್ಗದ ಸೇಬು ಪರಿಪೂರ್ಣವೇ. ಈ ಭ್ರಷ್ಟ ಜಗತ್ತಿನಲ್ಲಿ, ಭ್ರಷ್ಟವಾಗಿ ಹೋಗಿರುವ ಪ್ರಜ್ಞೆಯನ್ನು ಇಟ್ಟುಕೊಂಡು ಸ್ವರ್ಗದ ಸೇಬು ಹೇಗಿರಬೇಕು ಎಂದು ತೀರ್ಮಾನಿಸಬಹುದಾದರೆ ಇದು ನಿನಗೆ ಸಿಗಬಹುದಾದ ಅತ್ಯುತ್ತಮ ಸ್ವರ್ಗದ ಸೇಬು’.
*****
ಮುಲ್ಲಾ ನಾಸಿರುದ್ದೀನ್ ಖಾಝಿಯಾಗಿದ್ದ ದಿನಗಳವು. ಇಬ್ಬರು ವ್ಯಾಜ್ಯವೊಂದನ್ನು ತಂದರು. ವಾದಿ ಆರೋಪಿಸಿದ ‘ಆತ ನನ್ನ ಕಿವಿಯನ್ನು ಕಚ್ಚಿ ಹರಿದ’
ಪ್ರತಿವಾದಿ ಹೇಳಿದ ‘ನಾನು ಕಚ್ಚಲೂ ಇಲ್ಲಿ, ಹರಿಯಲೂ ಇಲ್ಲ. ಆತನೇ ಕಿವಿ ಕಚ್ಚಿ ಹರಿದುಕೊಂಡಿದ್ದಾನೆ.’
ನಾಸಿರುದ್ದೀನ್ ಅಂದು ವಿಚಾರಣೆಯನ್ನು ಅಲ್ಲಿಗೇ ಮುಗಿಸಿ ಅವರನ್ನು ಮರುದಿನ ಹಾಜರಾಗಲು ತಿಳಿಸಿದ. ಮನೆಗೆ ಹೋದ ನಾಸಿರುದ್ದೀನ್ ತನ್ನ ಕಿವಿಯನ್ನು ತಾನೇ ಕಚ್ಚಲು ಪ್ರಯತ್ನಿಸಿ ಸೋತ. ಇದರ ಪರಿಣಾಮವಾಗಿ ಹಣೆಯಲ್ಲಿ ಗಾಯವಾಯಿತು.
ಮರುದಿನ ವಿಚಾರಣೆ ಆರಂಭಗೊಂಡಿತು. ವಾದಗಳನ್ನು ಆಲಿಸಿದೆ ಭಟರಿಗೆ ಆದೇಶಿಸಿದ. ‘ಕಿವಿ ಹರಿದುಕೊಂಡವನನ್ನು ಪರೀಕ್ಷಿಸಿ. ಅವನ ಹಣೆಯಲ್ಲಿ ಗಾಯವಾಗಿದ್ದರೆ ಅವನ ಕಿವಿಯನ್ನು ಅವನೇ ಕಚ್ಚಿಕೊಂಡಿದ್ದಾನೆ. ಇಲ್ಲದಿದ್ದರೆ ಮತ್ತೊಬ್ಬ ಕಚ್ಚಿದ್ದಾನೆ. ಕಚ್ಚಿಸಿಕೊಂಡವನಿಗೆ ಮೂರು ಬೆಳ್ಳಿ ನಾಣ್ಯಗಳ ಪರಿಹಾರವನ್ನು ನೀಡಲಿ’.
****
ಒಬ್ಬಾತ ಮುಲ್ಲಾನಿಗೆ ಒಂದು ಸವಾಲೊಡ್ಡಿದ: ‘ನನ್ನ ಮುಷ್ಠಿಯಲ್ಲಿ ಇರುವುದು ಏನು ಎಂದು ಹೇಳಲು ಸಾಧ್ಯವೇ.’
‘ಒಂದು ಸುಳಿವು ಕೊಡು’
‘ಒಂದೇಕೆ ನೂರು ಕೊಡುವೆ’
‘ಸರಿ’
‘ಅದು ಗುಂಡಗಿದೆ, ಬಿಳಿಯಾಗಿದೆ, ಹೊರ ಕವಚ ಗಟ್ಟಿಯಾಗಿದೆ, ಒಳಗೆ ಬಿಳಿಯಾದ ದ್ರವದೊಳಗೆ ತೇಲುವ ಹಳದಿ ವಸ್ತುವಿದೆ, ಇದು ಬೇಯಿಸುವ ಮೊದಲು ದ್ರವವಾಗಿದ್ದು ಬೇಯಿಸಿದ ನಂತರ ಗಟ್ಟಿಯಾಗುತ್ತದೆ....ಇದನ್ನು ಹೇಂಟೆ..’
ಇಷ್ಟಾಗುವಾಗ ಮುಲ್ಲಾ ‘ನಿಲ್ಲಿಸು ಅದೇನೆಂದು ಗೊತ್ತಾಯಿತು’ ಎನ್ನುತ್ತಾನೆ.
ಸವಾಲೊಡ್ಡಿದವನು ಉತ್ತರ ಆಲಿಸಲು ಸಿದ್ಧತೆ ನಡೆಸುವಾಲೇ ಮುಲ್ಲಾನ ಉತ್ತರ ಸಿಡಿಯಿತು
‘ಅದು ಕೇಕ್ ಆಗಿರಬಹುದು!’.
****
ಮುಲ್ಲಾ ಒಂದು ಅಂಗಡಿಗೆ ನುಗ್ಗಿದ. ಅಂಗಡಿಯಾತ ಮುಲ್ಲಾನನ್ನು ಸ್ವಾಗತಿಸಿ ವ್ಯಾಪಾರಕ್ಕೆ ಸಿದ್ಧನಾದ.
ಮುಲ್ಲಾ ಹೇಳಿದ ‘ವ್ಯಾಪಾರ ಮತ್ತೆ. ಕೆಲವು ಪ್ರಶ್ನೆಗೆ ಮೊದಲು ಉತ್ತರಿಸು’
ಅಂಗಡಿಯಾತ ‘ಆಗಬಹುದು’ ಎಂದ.
‘ನಾನು ಅಂಗಡಿ ಬಂದದ್ದನ್ನು ನೋಡಿದೆಯಾ?’
‘ಖಂಡಿತವಾಗಿಯೂ ಸ್ವಾಮಿ’
‘ಈ ಮೊದಲು ಎಂದಾದರೂ ನನ್ನನ್ನು ನೋಡಿದ್ದೆಯಾ?’
‘ಖಂಡಿತವಾಗಿಯೂ ಇಲ್ಲಾ ಸ್ವಾಮಿ’
‘ಹಾಗಾದರೆ ಅಂಗಡಿಗೆ ಬಂದದ್ದು ‘ನಾನೇ’ ಎಂದು ನಿನಗೆ ಹೇಗೆ ಗೊತ್ತಾಯಿತು?’
*****
ಮುಲ್ಲಾನನ್ನು ಆತನ ಶಿಷ್ಯನೊಬ್ಬ ತನ್ನ ಊರಿಗೆ ಕರೆದೊಯ್ದ. ಸಂಜೆ ಊರು ನೋಡಲು ಗುರುವನ್ನು ಕರೆದೊಯ್ದ ಆತ ಸುತ್ತಮುತ್ತೆಲ್ಲಾ ಪ್ರಸಿದ್ಧವಾಗಿದ್ದ ಆ ಊರಿನ ಬೆಟ್ಟದ ತಪ್ಪಲಲ್ಲಿ ಸರೋವರ ಇರುವ ಸುಂದರ ದೃಶ್ಯವನ್ನು ತೋರಿಸಿದ.
‘ಎಷ್ಟು ಸುಂದರ’ ಎಂದು ಉದ್ಗರಿಸಿದ ಶಿಷ್ಯ.
‘ಎಷ್ಟು ಸುಂದರ, ಆದರೆ....’ ಎಂದು ರಾಗವೆಳೆದ ಮುಲ್ಲಾ
‘ಯಾಕೆ’ ಶಿಷ್ಯನ ಪ್ರಶ್ನೆ.
‘ಏನಿಲ್ಲ, ಅದರೊಳಗೆ ನೀರು ತುಂಬಿಸದೇ ಇದ್ದಿದ್ದರೇ ನಿಜಕ್ಕೂ ಸುಂದರ...' ಎಂದ ಮುಲ್ಲಾ.
*****
ಒಂದು ದಿನ ಮುಲ್ಲಾ ಹೆಂಡತಿಯನ್ನು ಕರೆದು ಹಲ್ವಾ ತಯಾರಿಸಲು ಹೇಳಿದ. ಅದಕ್ಕೆ ಬೇಕಾದ ಎಲ್ಲಾ ಸಾಮಾನನ್ನೂ ತಂದುಕೊಟ್ಟ. ಆಕೆ ಹಲ್ವಾ ತಯಾರಿಸಿದಳು. ಅದರಲ್ಲಿ ಬಹುಪಾಲನ್ನು ಮುಲ್ಲಾ ತಿಂದು ಮಲಗಿದ.
ಮಧ್ಯರಾತ್ರಿ ಇದ್ದಕ್ಕಿದ್ದಂತೆ ಎದ್ದು ಕುಳಿತ ಮುಲ್ಲಾ ಹೆಂಡತಿಯನ್ನೂ ಎಬ್ಬಿಸಿದ. ಆಕೆ ಏನೆಂದು ಕೇಳಿದಳು.
‘ಏನಿಲ್ಲ, ಒಂದು ಹೊಸ ಚಿಂತನೆ’.
‘ಏನದು’
‘ಹಲ್ವಾ ಉಳಿದಿದ್ದರೆ ಅದನ್ನು ತಾ ಆಮೇಲೆ ಹೇಳುತ್ತೇನೆ’ ಎಂದ ಮುಲ್ಲಾ.
ಹೆಂಡತಿ ಹಲ್ವಾ ತಂದುಕೊಟ್ಟಳು.
ಅದನ್ನು ತಿಂದು ಮುಗಿಸಿದ ಮುಲ್ಲಾ ಹೇಳಿದ ‘ಅಂದು ಮಾಡಿದ ಹಲ್ವಾವನ್ನು ಅಂದೇ ತಿಂದು ಮುಗಿಸು!’
[ಚಿತ್ರಗಳು-ಸಂಗ್ರಹದಿಂದ]