ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ.ಆದರೆ ಇವೆಲ್ಲವೂ ಕನ್ನಡದ ಕವಿತೆಗಳು.ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ. ಈ ದಿನ ಮರಾಠಿ ಕವಿ ನಾಮದೇವ್ ಧಸಾಲ್ ರ ಒಂದು ಕವಿತೆ ಇದೆ. ಕನ್ನಡಕ್ಕೆ ಅನುವಾದಿಸಿದ್ದಾರೆ ಡಾ.ಅನುಪಮಾ ಎಚ್.ಎಸ್.
ಅವಳು ತೊರೆದ ದಿನ
ಅವಳು ಹೋದ ದಿನ
ನನ್ನ ಮುಖಕ್ಕೆ ಕರಿ ಬಳಿದುಕೊಂಡೆ
ಕ್ರೂರಿ ಹುಚ್ಚು ಗಾಳಿಯ ಕಪಾಳಕ್ಕೆ ಬಾರಿಸಿದೆ.
ನನ್ನ ಬದುಕಿನ ಸಣ್ಣಸಣ್ಣ ಚೂರುಗಳ ಹೆಕ್ಕಿ
ಒಡೆದ ಕನ್ನಡಿಯೆದುರು ನಗ್ನನಾಗಿ ನಿಂತೆ.
ನನ್ನ ಮೇಲೆ ನಾನೇ ಪ್ರತೀಕಾರ ತೆಗೆದುಕೊಳ್ಳಲು ಬಿಟ್ಟೆ.
ಸೂರ್ಯನತ್ತ ಕರುಣೆದೋರಿ ದಿಟ್ಟಿಸಿ ಹೇಳಿದೆ, ‘ಓ ಮೊಳೆಯ ಚೆಂಡೆ!’
ಬಣ್ಣದ ಕನಸ ನೇಯುವ ಕಲಾವಿದರಿಗೆಲ್ಲ ಹುಡುಹುಡುಕಿ ಶಾಪ ಹಾಕಿದೆ;
ಪೂರ್ವದಿಂದ ಪಶ್ಚಿಮದೆಡೆಗೆ ನಡೆದೆ;
ದಾರಿಯಲ್ಲಿ ಬಿದ್ದ ಕಲ್ಲನೆತ್ತಿ ನನ್ನತ್ತಲೇ ಒಗೆದೆ.
ಗಹಗಹಿಸಿ ನಗುವ ನೀರು ಎಷ್ಟು ಭೋರ್ಗರೆದು ಹರಿಯುತ್ತಿದೆ
ಬೆಟ್ಟ ಕಣಿವೆಗಳ ಸುತ್ತುತ್ತಾ.
ಯಾವ ಕಡಲ ಕೂಡಲು ನೋಡುತ್ತಿದೆ?
ಅಥವಾ ಕಡಲಾಳದ ನೆಲದ ಮಣ್ಣಮೇಲಿಳಿಯುವುದೇ?
ಅಂದು ಅವಳು ಹೋದ ದಿನ
ನಾನು ನನ್ನವನಾಗಿಯಾದರೂ ಇದ್ದೆನೆ?
ಅವಳ ಹೆಣವನ್ನೂ ಅಪ್ಪಿಕೊಳ್ಳಲಾಗಲಿಲ್ಲ ನನಗೆ
ಮನ ತುಂಬಿ ಅಳಲಿಕ್ಕೂ ಆಗಲಿಲ್ಲ.
ಅವಳು ತೊರೆದು ಹೋದ ದಿನ
ನಾನು ನನ್ನ ಮುಖಕ್ಕೆ ಮಸಿ ಬಳಿದುಕೊಂಡೆ.
ಮರಾಠಿ ಮೂಲ: ನಾಮದೇವ್ ಧಸಾಲ್
ಕನ್ನಡಕ್ಕೆ: ಅನುಪಮಾ ಎಚ್.ಎಸ್.