ಬೀದರನಿಂದ ಹುಮನಾಬಾದ್ ಕಡೆಗೆ ಅಂದರೆ 'ಹೊತ್ತು ಮುಣುಗೋ ಮಾರಿ' ಕಡೆಗೆ (ಪಶ್ಚಿಮ ದಿಕ್ಕಿನಲ್ಲಿ) ಚಲಿಸಿದರೆ 30 ಕಿ.ಮೀ. ಹಳ್ಳಿಖೇಡ (ಬಿ) ಎಂಬ ಪುಟ್ಟ ಪಟ್ಟಣ ಸಿಗುತ್ತದೆ. ಹಾಲಹಳ್ಳಿ, ಬ್ಯಾಲಹಳ್ಳಿ ಎಂಬ ಗ್ರಾಮಗಳನ್ನು ದಾಟಿ ಹಳ್ಳಿಖೇಡ ತಲುಪುವ ಮುನ್ನವೇ ಎಡಕ್ಕೆ ಹೊರಳಿದರೆ ರಂಜೋಳದ ರಸ್ತೆ ಸಿಗುತ್ತದೆ. ಹಾಗೆಯೇ ಹುಮನಾಬಾದನಿಂದ ಹೈದರಾಬಾದ್ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂದರೆ 'ಹೊತ್ತು ಹೊಂಡೋ ಮಾರಿ' ಕಡೆಗೆ (ಪೂರ್ವ ದಿಕ್ಕಿನೆಡೆಗೆ) ಬರುವ ಉಡಬಾಳ ಎಂಬ ಪುಟ್ಟ ಹಳ್ಳಿಯ ಹತ್ತಿರ ಬಲಕ್ಕೆ ತಿರುಗಿ ಕೂಡ ರಂಜೋಳ ತಲುಪಬಹುದು.
ಐತಿಹಾಸಿಕ ಮಹತ್ವ ಇರುವ ಊರಿನ ಜನಸಂಖ್ಯೆ ಸರಿಸುಮಾರು ಐದು ಸಾವಿರ. ಪ್ರಾಥಮಿಕ ಆರೋಗ್ಯ ಕೇಂದ್ರ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಅಂಗನವಾಡಿ ಕೇಂದ್ರ ಇದ್ದವು. ಕೇವಲ ಅಂದರೆ ಮೂರು ವರ್ಷಗಳ ಹಿಂದೆ ಅಂದರೆ ಮಾಜಿ ಪ್ರಧಾನಿ ದೇವೇಗೌಡರು ನೈಸ್ ವಿರುದ್ಧ ಸಮರ ಆರಂಭಿಸಿದ ದಿನಗಳವು. ಆಗ ದ ಹಿಂದೂ ಪತ್ರಿಕೆಯಲ್ಲಿ ಬೀದರ ವರದಿಗಾರ ಆಗಿದ್ದ ರಿಷಿಕೇಶ್ 'ನಂದಿ ಇನ್ಫಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್' (ನೈಸ್) ವ್ಯವಸ್ಥಾಪಕ ಮುಖ್ಯಸ್ಥ ಅಶೋಕ ಖೇಣಿ ಬೀದರ ತಾಲ್ಲೂಕಿನ ಖೇಣಿ ರಂಜೋಳದವರು ಎಂಬ ವಿಷಯ 'ಪತ್ತೆ' ಹಚ್ಚಿದರು. ರಂಜೋಳಕ್ಕೆ ಹೋಗಿ ಸ್ಟೋರಿ ಮಾಡಬ
ಹುದು ಎಂದು ವೃತ್ತಿಬಾಂಧವರನ್ನು ಕರೆದರು. ಆದರೆ, ನಿತ್ಯದ ಜಂಜಾಟದಲ್ಲಿ ನಿರತರಾದವರಿಗೆ ಬಿಡುವಿರಲಿಲ್ಲ. ಎರಡ್ಮೂರು ಜನ ರಿಷಿಕೇಶ್ ಅವರ ಕಡುನೀಲಿ ಬಣ್ಣದ ಓಮ್ನಿ ವ್ಯಾನ್ ಹತ್ತಿ ಹೊರಡುವಾಗ ಏನು ಕಥೆ? ಎಂಬ ಕಲ್ಪನೆಯೂ ಇರಲಿಲ್ಲ.
'ಹಳ್ಳಿಖೇಡ್ ಕಡೆಯಿಂದ ಹೋಗ್ಲಾಕ್ ರೋಡ್ ಸರಿ ಇಲ್ರಿ. ಅದಕ್ಕ ಮನ್ನಾಏಖೇಳಿ ಕಡೆಯಿಂದ ಹೋಗೋಣ್ರಿ' ಎಂದು ನಮ್ಮನ್ನು ಕರೆದುಕೊಂಡು ಹೋಗಬೇಕಾಗಿದ್ದ ಮಾರ್ಗದರ್ಶಕ ಹೇಳಿದಾಗಲೇ ನಾವು ಹೊರಟದ್ದು ರಸ್ತೆಯ ಸರಿಯಾದ ವ್ಯವಸ್ಥೆಯೇ ಇಲ್ಲದ ಗ್ರಾಮಕ್ಕೆ ಎಂದು. ಆಗ ಅದು ಕೇವಲ ರಂಜೋಳಕ್ಕೆ ಮಾತ್ರವಲ್ಲ ಬೀದರ ಜಿಲ್ಲೆಯ ಯಾವ ಗ್ರಾಮಕ್ಕೂ ಸಂಪರ್ಕ ಕಲ್ಪಿಸುವ ರಸ್ತೆಗಳ ಸ್ಥಿತಿ ಚೆನ್ನಾಗಿರಲಿಲ್ಲ. ಈಗ ಪರಿಸ್ಥಿತಿ ಮೊದಲಿನ ಹಾಗಿಲ್ಲ ಎಂಬುದು ನಿಟ್ಟುಸಿರು ಬಿಡಬಹುದಾದ ಸಂಗತಿ.
ವ್ಯಾನ್ ಉಡಬಾಳ ಕ್ರಾಸಿನಿಂದ ಗಂಗಿ ಮಾರಿ ಕಡೆಗೆ (ಉತ್ತರ ದಿಕ್ಕು) ತಿರುಗಿದಾಗ ನಾಲ್ಕು ಕಿ.ಮೀ. ದೂರದ ರಂಜೋಳ ತಲುಪುವುದು ಎಷ್ಟೊಂದು ಕಷ್ಟ ಎಂಬುದು ಅರಿವಿಗೆ ಬಂತು. ಪಶ್ಚಿಮದ ದೇಶಗಳಲ್ಲಿ 'ಎಕ್ಸ್ಪ್ರೆಸ್ ಹೈವೇ ಕಾರಿಡಾರ್' ನಿರ್ಮಿಸುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ವ್ಯಕ್ತಿಯ ಊರಿಗೆ ಇದ್ದ ರಸ್ತೆಯ ಬಗೆಗಿನ ಮಾತುಕತೆಯೇ ಅಂದಿನ ಚರ್ಚೆಗೆ ಕಾರಣವಾಗಿತ್ತು. ಊರು ತಲುಪಿದಾಗ ಅಂತಹ ಆಶಾದಾಯಕ ಪ್ರತಿಕ್ರಿಯೆ ಏನೂ ಸಿಗಲಿಲ್ಲ. ಅಶೋಕ ಖೇಣಿ ಊರು ಬಿಟ್ಟು ಹೋಗಿ ಐದು ದಶಕ ಕಳೆದದ್ದರಿಂದ ಅವರ ಹೆಸರು ಕೇಳಿದ ಗ್ರಾಮಸ್ಥರ ಸಂಖ್ಯೆ ಬೆರಳೆಣಿಕೆಯಷ್ಟೂ ಇರಲಿಲ್ಲ. 'ನಾವು ದಾರಿ ತಪ್ಪಿ ಬಂದಿದ್ದೇವೆ' ಎನ್ನಿಸತೊಡಗಿತು. ಅಶೋಕ ಖೇಣಿ ಅವರ ತಂದೆ ಶಂಕರ ಖೇಣಿ ಮತ್ತು ವಿಧಾನ ಪರಿಷತ್ ಸದಸ್ಯರಾಗಿದ್ದ ಚಿಕ್ಕಪ್ಪ ನರೇಂದ್ರ ಖೇಣಿ ಅವರ ಹೆಸರುಗಳು ಮಾತ್ರ ಗ್ರಾಮದ ಎಲ್ಲರಿಗೂ ಗೊತ್ತಿದ್ದವು. ಅವರಿಗೆ ನೈಸ್, ಬಿಎಂಐಸಿ, ಅಶೋಕ ಖೇಣಿ ಹೀಗೆ ವಿವರಿಸುವ ಕೆಲಸವನ್ನು ರಿಷಿಕೇಶ್ ಶ್ರದ್ಧೆಯಿಂದಲೇ ಮಾಡಿದರು. 'ದಾರಿ'ಯೇ ಕಾಣಿಸದಿರುವಾಗ ಎಕ್ಸ್ಪ್ರೆಸ್ ಕಾರಿಡಾರ್ ಬಗ್ಗೆ ಹೇಳುವ ಅಸಂಗತ ಜೊತೆಗಿದ್ದ ಪತ್ರಕರ್ತರಿಗೇ ಕಿರಿಕಿರಿ ಅನ್ನಿಸಿತ್ತು. ಅಂತಹದ್ದರಲ್ಲಿ ರಂಜೋಳದ ಜನರಿಗೆ ಯಾವುದೋ ಕಾಲದಲ್ಲಿ ಊರು ಬಿಟ್ಟು ಹೋದ ವ್ಯಕ್ತಿಯನ್ನು ಕೇಳಿಕೊಂಡು ಬಂದು 'ಕಥೆ' ಹೇಳುತ್ತಿರುವ ಜನರನ್ನು ನೋಡಿ ಬೆರಗಾಗಿರಬಹುದು. ಇದೆಂತಹ ವಿಚಿತ್ರ ಪ್ರಾಣಿಗಳು ಎಂಬಂತೆ ಕೆಲವರು ನೋಡಿದರೆ ಮತ್ತೆ ಕೆಲವರು ಈ 'ಪತ್ರಕರ್ತರಿಗೆ ಬೇರೆ ಕೆಲಸ ಇಲ್ಲಂತ ಕಾಣಿಸ್ತದ' ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಅಂದಹಾಗೆ ಖೇಣಿ ರಂಜೋಳದಿಂದ ನಡೆದುಕೊಂಡು ಹೋಗುವಷ್ಟು ದೂರದಲ್ಲಿ ಹುಚಕನಹಳ್ಳಿ ಎಂಬ ಗ್ರಾಮ ಇದೆ. ಅದು ಆಗಷ್ಟೇ ಜನತಾದಳದ (ಜಾತ್ಯತೀತ)= ಜೆಡಿಎಸ್ ರಾಜ್ಯ ಅಧ್ಯಕ್ಷರಾಗಿದ್ದ ದಿ ಗ್ರೇಟ್ ಮೆರಾಜುದ್ದೀನ್ ಪಟೇಲ್ರ ಹುಟ್ಟೂರು. ಪತ್ರಕರ್ತರು ಎಂದರೆ ರಾಜಕಾರಣಿಗಳು, ಜನಪ್ರತಿನಿಧಿಗಳ ಸುತ್ತ ನೆರೆದಿರುವವರು ಮತ್ತು ಅದನ್ನೇ ಸುದ್ದಿ ಮಾಡುವವರು ಎಂದು ಅಲ್ಲಿಯ ಜನರ ನಂಬಿಕೆ
ಆಗಿತ್ತು ಅಂತ ಕಾಣಿಸುತ್ತದೆ. ಎರಡು ಅವಧಿಗೆ ಸಚಿವರಾಗಿದ್ದ ಮೆರಾಜುದ್ದೀನ್ ಸಾಹೇಬರ ಊರು ಹುಡುಕಿ ಹೊರಟು ದಾರಿ ತಪ್ಪಿ ಬಂದಿರಬಹುದು? ಎಂಬ ಶಂಕೆ ಅವರದಾಗಿತ್ತು. ಅವರ ಶಂಕೆ- ಅನುಮಾನಗಳಿಗೆ ಉತ್ತರ ಕೊಡುವುದು ಸಾಧ್ಯವಿರಲಿಲ್ಲ.
ನಮ್ಮ ಮಾರ್ಗದರ್ಶಿಯು ಪ್ರಕಾಶ ಕೊಳ್ಳೂರು ಎಂಬುವವರ ಮನೆಯವರೆಗೂ ಕರೆದೊಯ್ದು 'ಖೇಣಿಗೆ ಸಂಬಂಧಿಸಿದಂತೆ ಏನು ಬೇಕಿದ್ದರೂ ಇವರನ್ನು ಕೇಳಿ' ಎಂದು ತನಗೂ ಇಡೀ ವ್ಯವಹಾರಕ್ಕೂ ಸಂಬಂಧವೇ ಇಲ್ಲದಂತೆ ಹೊರಟು ಹೋದ. ಬೀದರ್ ನಲ್ಲಿ ಇರುವ ಗಣ್ಯರು ಮನೆ ಬಾಗಿಲಿಗೆ ಬಂದಿದ್ದಾರೆ ಎಂದು ಪ್ರಕಾಶ ತನ್ನ ಮನೆಯಲ್ಲಿಯೇ ಚಹಾದ ವ್ಯವಸ್ಥೆ ಮಾಡಿಸಿ, ಮನೆಯಲ್ಲಿದ್ದ ಹುಡುಗನನ್ನು ಖೇಣಿಯವರ ಮನೆಯ 'ಚಾವಿ ತರು'ವುದಕ್ಕಾಗಿ ಓಡಿಸಿದರು. ರಂಜೋಳ ಗ್ರಾಮದಲ್ಲಿ ನಡೆದು ಹೋಗುತ್ತಿರುವಾಗಲೇ ಗ್ರಾಮೀಣ ಜನರ ಕಲಾಪ್ರಜ್ಞೆ, ಬಾಗಿಲುಗಳ ಕೆತ್ತನೆ ಮತ್ತು ಅವುಗಳ ಮಹತ್ವ, ಹೈದರಾಬಾದ್ ಕರ್ನಾಟಕದ ಜಾನಪದ ಶಿಲ್ಪ ಹೀಗೆ ಜೊತೆಗಿದ್ದ ಸ್ನೇಹಿತರ ಜೊತೆ ಮಾತು, ಚರ್ಚೆ, ಹರಟೆ ನಡೆದಿದ್ದವು. ಪ್ರಕಾಶ ಅವರ ಮನೆಯಲ್ಲಿದ್ದ ಒಂದು ಪೇಂಟಿಂಗ್ ನನ್ನ ಗಮನ ಸೆಳೆಯಿತು. ಅದು ಆತ ಫೋಟೋ ಮತ್ತು ಚಿತ್ರಗಳನ್ನು ಸೇರಿಸಿ ಮಾಡಿದ ಕೋಲಾಜ್ ನಂತಿತ್ತು. 'ಏನದು?' ಎಂದು ಕೇಳಿದಾಗ ಪ್ರಕಾಶ 'ನನ್ನ ಅಜ್ಜನ ಫೋಟೊ' ಎಂದು ಉತ್ತರಿಸಿದರು. ಹತ್ತಿರ ಹೋಗಿ ನೋಡಿದರೆ ಕಲಾವಿದನೊಬ್ಬ ಮುಖದ ಭಾಗಕ್ಕೆ ಫೋಟೊ ಬಳಸಿ ಸುತ್ತಲಿನ ಅವಕಾಶದಲ್ಲಿ ತನ್ನ ಕುಂಚದ ಪ್ರೌಢಿಮೆ ಮೆರೆದಿದ್ದ. ಛಾಯಾಗ್ರಹಣದ ತಂತ್ರಜ್ಞಾನ ಬಂದ ಆರಂಭದ ದಿನಗಳಲ್ಲಿ ಹೊಸ ಸವಾಲನ್ನು ಎದುರಿಸಲಾಗದ ಕಲಾವಿದರು ನೈಜ ಮುಖದ ಚಿತ್ರ ಬಳಸಿ ಅದರಲ್ಲಿ ಕಲೆಯ ಪ್ರಮಾಣವೂ ಇರುವಂತೆ ಹದವಾಗಿ ಬೆಸೆಯಲು ಆರಂಭಿಸಿದ ಚಿತ್ರಗಳವು. ಹಳೆ ಮೈಸೂರು ಭಾಗದಲ್ಲಿ ಇಂತಹ ಚಿತ್ರಗಳಿರುವ ಬಗ್ಗೆ ವಿದ್ವಾಂಸರೊಬ್ಬರು ಬರೆದದ್ದನ್ನು ಓದಿದ್ದೆ. ಹಾಗೆಯೇ ಗುಲ್ಬರ್ಗ ಜಿಲ್ಲೆಯ ಸುರಪುರದಲ್ಲಿಯೂ ಇಂತಹ ಪ್ರಯೋಗ ನಡೆದ ಬಗ್ಗೆ ಕೇಳಿದ್ದೆ. ಬೀದರ್ ಜಿಲ್ಲೆಯ ಹಳ್ಳಿಯಲ್ಲಿ ಅದನ್ನು ಹೋಲುವಂತಹ ಪೇಂಟಿಂಗ್ ಇದ್ದದ್ದು ನೋಡಿ ಸಹಜವಾಗಿಯೇ ಖುಷಿ ಮತ್ತು ಕುತೂಹಲ ಮೂಡಿತು. ಆ ಪೇಂಟಿಂಗನ್ನು ಕ್ಯಾಮರಾದಲ್ಲಿ ಸೆರೆ ಹಿಡಿದೆವು. ಅದನ್ನು ನೋಡಿದ ಪ್ರಕಾಶ್ 'ಸಾಹೇಬ್ರೆ ನಮ್ಮ ಮನೆಯಲ್ಲಿ ಇದೊಂದೆ ಇದೆ. ದೊರಿಗಳ ಮನ್ಯಾಗ 3-4 ಇವೆ' ಎಂದ. ಕ್ಷಣ ಕಾಲ ಏನೆಂದು ಗೊತ್ತಾಗದೇ ತಬ್ಬಿಬ್ಬಾಯಿತು. ದೊರಿ- ದೊರೆಗಳು ಎಂದರೆ ಯಾರು? ತಿಳಿಯಲಿ
ಲ್ಲ. ಅನುಮಾನ ಬಂದರೆ ಕೇಳದೇ ಇರಬಾರದು ಎಂದು ಎಚ್ಚೆತ್ತುಕೊಂಡು ಕೇಳಿದರೆ ರಂಜೋಳದಲ್ಲಿ 'ಖೇಣಿ' ಕುಟುಂಬ ಮತ್ತು ಅದಕ್ಕೆ ಸೇರಿದವರನ್ನು ದೊರೆಗಳು ಎಂದು ಕರೆಯುತ್ತಾರೆ ಎಂದು ಗೊತ್ತಾಯಿತು.
ಹುಡುಗ ಚಾವಿ ತಂದು ಕೊಟ್ಟ ಮೇಲೆ 'ಅರಮನೆ'ಯತ್ತ ಪಾದಯಾತ್ರೆ ಮಾಡಿದೆವು. ಅದು ಅಶೋಕ್ ಖೇಣಿ ಅವರ ಚಿಕ್ಕಪ್ಪ ನರೇಂದ್ರ ಖೇಣಿ ಅವರ ಮನೆ. ಸುಮಾರು ವರ್ಷಗಳಿಂದ ಜನ ವಾಸಿಸದೇ ಇದ್ದದ್ದರಿಂದ 'ಹಾಳು ಸುರಿಯುತ್ತಿದ್ದ ಬಂಗಲೆ' ಅದಾಗಿತ್ತು. ಕೆಲಸದವರು ಬಾಗಿಲು ತೆಗೆದು ಕಸಗುಡಿಸಿ ದೀಪ ಹಚ್ಚುತ್ತಿದ್ದರು. ಆದರೂ ಒಡೆಯನಿಲ್ಲದ ಕಾರಣಕ್ಕಾಗಿ ಹೊಸ್ತಿಲಲ್ಲಿ ರಜ ತುಂಬಿಕೊಂಡಿತ್ತು. ಆಗ ಕೆಲಸದ ಒಬ್ಬ ಹುಡುಗನನ್ನು ಕರೆದು 'ರಜಗೀಲ' ತಗೊಂಡ ರಜ ತೆಗಿ ಎಂದು ಹೇಳಿದ. ಜೊತೆಗಿದ್ದವರಿಗೆ 'ರಜಗೀಲ' ಎಂದರೇನು ಎಂದು ಗೊತ್ತಾಗಲಿಲ್ಲ. ಅದಕ್ಕೆ ಕೆಲಸದವ 'ರಜಗೀಲ ಅಂದ್ರೆ ಕಸಬರಿಗೆ, ಝಾಡು ಅಂತಾರಲ್ರಿ' ಅದು ಎಂದು ಸಮಜಾಯಿಷಿ ನೀಡಿದ. ಬೃಹತ್ ಗಾತ್ರದ ಕಟ್ಟಿಗೆ ತೋಳುಗಳಿಂದ ಕೂಡಿದ ಆಕರ್ಷಕ ಕೆತ್ತನೆ ಇರುವ ಬಾಗಿಲು ಅದಾಗಿತ್ತು. ತೆಗೆದು ಒಳ ಪ್ರವೇಶಿಸುತ್ತಿದ್ದಂತೆ ಚಲಿಸುತ್ತಿದ್ದ ಕಾಲ ನಿಂತ ಅನುಭವ. ದೊಡ್ಡ ವರಾಂಡ, ಗುಲಾಬಿ ಹೂವಿನ ಗಿಡಗಳು, ಗೋಡೆಯ ಮೇಲೆ ಪೇಂಟಿಂಗ್ ಗಳು, ದೇಶದ- ರಾಜ್ಯದ ಪ್ರಮುಖ ರಾಜಕಾರಣಿಗಳ ಚಿತ್ರಗಳು ಕಾಣಿಸಿದವು. ನಾವು ಹುಡುಕಿ ಬಂದದ್ದು ಸಿಕ್ಕಿದೆ ಎಂದು ಆಗ ಅನ್ನಿಸತೊಡಗಿತು.