ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಈ ಬಾರಿಯ ನೊಬೆಲ್ ಪುರಸ್ಕೃತ Tomas Transtromer ಅವರ ಎರಡು ಕವಿತೆಗಳ ಅನುವಾದ ಭಾವನಾ ರಾವ್ ಅವರಿಂದ
ಹಿತ್ತಲಿನಲ್ಲಿ ಹುಟ್ಟುವ ಸೂರ್ಯ
ಬೀದಿಯ ಮಧ್ಯೆ ಬಂದು ನಿಲ್ಲುತ್ತಾನೆ.
ನಮ್ಮನ್ನ ಉಸಿರಾಡುತ್ತಾನೆ
ತನ್ನ ಆರಕ್ತ ಮಾರುತಗಳಿಂದ
ಇನ್ಸ್ಬ್ರಕ್, ನಾನಿನ್ನ ಬಿಡಬೇಕಿದೆ.
ನಾಳೆ..
ಬೂದಿ ಮುಚ್ಚಿದ ಅರೆ ಬರುಡಾದ ಕಾಡಿನಲ್ಲಿ
ಸೂರ್ಯ ಮತ್ತೆ ಪ್ರಕಾಶಿಸುತ್ತಾನೆ.
ಅಲ್ಲಿ ನಾವೆಲ್ಲ ದುಡಿಯಬೇಕು ಮತ್ತು ಬದುಕಬೇಕು.
(ಇನ್ಸ್ಬ್ರಕ್, ದಕ್ಷಿಣ ಆಸ್ಟ್ರೇಲಿಯಾ ಬಳಿಯ ಒಂದು ಪಟ್ಟಣ)
***
ಏಪ್ರಿಲ್ ಮತ್ತು ನಿಶ್ಯಬ್ಧ
ವಿಕ್ಷಿಪ್ತ ವಸಂತ
ಕಾಳ ರಾತ್ರಿಯ ಕಂದಕಗಳು ನನ್ನೆಡೆಗೆ
ನಿರ್ಭಿಡೆಯಿಂದ ಅಂಬೆಗಾಲಿಕ್ಕುತಿವೆ.
ಹೊಳೆಯುತ್ತಿರುವುದೆಲ್ಲ ಹಳದಿ ಹೂ ಗಳು ಮಾತ್ರ.
ಕಪ್ಪು ಪೆಟ್ಟಿಗೆಯೊಳಗೆ ಬಚ್ಚಿಟ್ಟ ವಯಲಿನ್ ನಂತೆ
ನನ್ನನ್ನೂ ನನ್ನ ನೆರಳು ಹೊತ್ತೊಯ್ಯುತಿದೆ.
ಕೊನೆಗೂ ನಾ ಹೇಳಬೇಕಾದ್ದಿಷ್ಟೇ:
ಕೈಗೆಟುಕದ ನಕ್ಷತ್ರಗಳು ಮಾರವಾಡಿ
ಅಂಗಡಿಯ ಬೆಳ್ಳಿ ಬಟ್ಟಲಿನಂತೆ.