ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ನಕ್ಷತ್ರದಾಸ ಬರೆದ ಎರಡು ಕವಿತೆಗಳು.
(೧)
ಮುಗಿದ ನಂತರ
ಇದೆಲ್ಲ ಸಹಜ
ಯಾವುದೊ ರೋಷದಿಂದಲೊ
ಭೋರ್ಗರೆವ ಬಯಕೆಯಿಂದಲೊ
ಬಂದು
ನೀನು ಅಪ್ಪಳಿಸಿದೆ.
ಕೆಲ ಕ್ಷಣ
ಕುಪ್ಪಳಿಸಿತಲ್ಲ ಮನ
ಎಲ್ಲ ಮರೆತು.
ಮುಗಿಯಿತು ಅಲ್ಲಿಗೆ!
ಇದೆಲ್ಲ ಹೀಗೆಯೇ
ಸರಿ ಅನ್ನುತ್ತಿಲ್ಲ
ತಪ್ಪು
ಅನ್ನಲು ಮನಸ್ಸಾಗುತ್ತಿಲ್ಲ
ನೋಡು,
ಹಕ್ಕಿಗಳು ಹೇಗೆ
ಚಕ್ಕಂದವಾಡುತ್ತಿವೆ
ದುಂಬಿಯ ಝೇಂಕಾರದಲ್ಲಿ
ಮುಗಿಲ ಮುತ್ತಿಕ್ಕುತ್ತಿವೆ
ಮರಗಿಡಗಳು.
ಮಳೆ ಎಲ್ಲಾದರೂ
ಯಾವಾಗಲೂ ಹೊಯ್ಯಬಹುದು...
ಹೀಗೆಯೆ ಇದೆಲ್ಲ...
(೨)
ಕಡಲ ಒಡಲುಕಡಲು
ಅಪ್ಪಳಿಸುವ ತೆರೆಯಂತೆ
ಮೊಲೆಯ ಹೊಡೆತ!
ಮುಳುಗುವಾಗ ಮುತ್ತು
ರತ್ನಗಳು
ತೊಡೆಯಲ್ಲಿ ಹಿಡಿದು ಬಡಿವಾಗ
ಸುಖದ ಸುರಿಮಳೆ
ಆರಂಭದಲ್ಲಿ
ಕಡಲ ದಡದಲಿ ನಿಧಾವಾಗಿ
ಒಂದೊಂದೆ ಹೆಜ್ಜೆಯಿಡುತ್ತ
ನಡೆಯಬೇಕು
ಆಳದಲ್ಲಿ ಎಷ್ಟೊತ್ತು
ಇರಲಾಗುತ್ತದೆ?
ತಳ
ಮಳವೂ ಇದೆ
ಇಲ್ಲಿ ಎಷ್ಟೊ ಹಡಗುಗಳು
ಮುಳುಗಿ ಹೋಗಿವೆ
ಕೆಲವರು ಈಸಿ
ದಡ ಸೇರಿದ್ದಾರೆ
ಎಂಬ ಸುದ್ದಿಯಿದೆ.