ಕವಿತೆ ಅಂದರೆ ಏನು ಎನ್ನುವ ಪ್ರಶ್ನೆ ಮತ್ತು ನಾನು ಯಾಕೆ ಬರೆಯುತ್ತೇನೆ ಎನ್ನುವ ಪ್ರಶ್ನೆ ಪ್ರತಿ ಕವಿಗೂ ಕಾಡುವಂತಹದ್ದು. ಅದೊಂದು ಲೌಕಿಕವಾದ ಕ್ರಿಯೆಯೇ. ಹೌದು. ಆದರೆ ಅಷ್ಟೇ ಅಲ್ಲ; ಅಲೌಕಿಕವಾ? ಇದನ್ನು ಒಪ್ಪಿದರೆ ಕವಿಗಳು ಯಾರು ಮನುಷ್ಯರೇ ಅಲ್ಲ. ಹಾಗೂ, ಹುಲುಮಾನವ ಸಹಜ ಕ್ರಿಯೆಯಲ್ಲಿ ನಂಬಿಕೆಯನ್ನೇ ಕಳೆದುಕೊಂಡಂತಾಗುತ್ತದೆ. ದರ್ಜಿಯ ಕೆಲಸದಂತೆ, ಬಡಗಿಯ ಕೆಲಸದಂತೆ ಅಥವಾ ಅಮ್ಮ ಮನೆಯಲ್ಲಿ ಮುದ್ದೆ ಉಪ್ಪೆಸರು ಮಾಡುವಂತಹ ಸಹಜವಾದ ಕ್ರಿಯೆ. ಪದಾರ್ಥ ಲೋಕದ್ದು. ಆದರೆ ಉಪ್ಪೆಸರು ಮುದ್ದೆಯ ಪರಿಮಳ ಅಲೌಕಿಕದ್ದೇನೋ (ಅಂದರೆ ಭಾಷೆಗೂ ನಿಲುಕದ್ದು!) ಅನ್ನಿಸುವಂತಿರುತ್ತದೆ. ಇಲ್ಲಿಯೇ ಗೊತ್ತಾಗುತ್ತೆ ಕವಿತೆ ಅಂದರೆ ಏನು ಅಥವಾ ನಾನು ಯಾಕೆ ಬರೆಯುತ್ತೇನೆ ಎಂದು ನಿಖರವಾಗಿ ಹೇಳುವ ಬದಲು ಏನೇನೋ ಸಬೂಬು, ಹೋಲಿಕೆಗಳನ್ನು ಕೊಟ್ಟು ಅವಸರದಲ್ಲಿ ಕೈ ತೊಳೆದುಕೊಂಡ ಹಾಗೆ ಆಗುತ್ತೆ. ಕಾಣುವ ವಸ್ತುಗಳಲ್ಲೇ ಆಳವಾಗಿ ಅದರೊಳಗಿಳಿದು ಹೊಸದೇನನ್ನೋ ಗ್ರಹಿಸುವುದು ಹೊಳೆಯಿಸುವುದು. ಅಗಾಧ ಅವಕಾಶವನ್ನು ಅಂಗೈಯಲ್ಲಿಡುವ ಧಾರ್ಷ್ಯ್ಟತೆ ಕವಿತೆಯದು. ಇದು ಅಹಂನ ಮಾತಲ್ಲ. ಬದಲಿಗೆ ವಿಶ್ವಾಸದ ಮಾತು. ಸಮವಸ್ತ್ರವನ್ನು ಧರಿಸಿ ದೇಶ ಭಕ್ತಿಯನ್ನು ತೋರ್ಪಡಿಸುವುದಕ್ಕಿಂತಲೂ ಕವಿತೆಯ ಮೂಲಕ ಮಾನವೀಯ ಸಂಬಂಧಗಳನ್ನು ಬೆಸೆಯುವುದು ಶ್ರೇಷ್ಠವಾದುದು ಮತ್ತು ಕವಿತೆಯೇ ಒಂದು ಧರ್ಮ ಎಂದು ನಂಬುವೆ. ಕವಿತೆ ಅಂದರೆ ಅದೊಂದು ದೃಷ್ಟಿಕೋನ. ಪ್ಲೇಟೋ ಕವಿಗಳನ್ನು ಸಮಾಜದಿಂದ ಹೊರಗಿಡಬೇಕು; ಅವರು ಬರೀ ಸುಳ್ಳನ್ನೇ ಹೇಳುತ್ತಾರೆ ಎಂದು ಮತ್ತೊಮ್ಮೆ ಸ್ವರ್ಗದಿಂದಲೋ ಅಥವಾ ನರಕದಿಂದಲೋ ಕೂಗಿಕೊಂಡು ಹೇಳಿದರೂ, ಹೌದು, ಅವರು ಸುಳ್ಳು ಹೇಳುತ್ತಾರೆ ಸತ್ಯ ಹೇಳುವುದಕ್ಕಾಗಿ ಎಂದು ಮೆಸೇಜ್ ಮಾಡುವೆ ಅವನು ಮೊಬೈಲ್ ನಂಬರ್ ಕೊಟ್ಟರೆ!
ಗುಲಾಬಿ ತೋಟದಲಿ ಅದು ಮುಗಿದೇ ಹೋಯಿತು
ಗುಲಾಬಿ ತೋಟದಲಿ ನೆತ್ತರು ಹೂವ ದಳವಾಗಿ ಚೆಲ್ಲಿದೆ
ಅದ ಸೀಳು ನಾಯಿಗಳು ಹರಿದು ಮುಕ್ಕಿ ಹಬ್ಬ
ಲೋಕದವರು ಸುಮ್ಮನೆ ಸರಿದಿಹರು ನೆತ್ತರು ಗುಲಾಬಿಯೇ ಎಂದು.
ಧುತ್ತನೆ ಆಸ್ಫೋಟಿಸಿದ ಬಿರುಗಾಳಿಗೆ ಸಿಕ್ಕ ನವೇದನೆ ಚಿಂದಿ.
ಈಗ ಬರಬಹುದು ಆಗ ಬರಬಹುದು
ಇನ್ನೇನು ಹಿಡಿದು ಕೈಯ ನಡೆಯಬಹುದು
ಅನ್ನುವಷ್ಟರಲಿ
ಗುಲಾಬಿ ತೋಟದಲಿ ಅದು ಮುಗಿದೇ ಹೋಯಿತು.
ದಳದಳಕೂ ಅಂಟಿದೆ ಕಾಣದೆ
ನಿಟ್ಟುಸಿರು
ನಿದ್ರೆಯ ಕಳೆದುಕೊಂಡ ರಾತ್ರಿಗಳು ತುಟಿಗಳು
ಕಣ್ಣ ಒತ್ತಿ ಮುತ್ತಿಟ್ಟು
ಧಗ್ಗನೆ ಮಿಂಚಿದ ಬೆಳಕ ಕುಡಿದು ನಶ್ವರದ ಕ್ಷಣಗಳಲಿ ಅಮರತ್ವ.
ಹಕ್ಕಿಯ ರೆಕ್ಕೆಯಾಗಿ ಮನ ದಿಗದಿಗಂತಗಳ ಆಚೆ.
ನಕ್ಷತ್ರಗಳೂ ಅದರಲಿ ಮಿಂದು ಹೊಳಪು.
ಹೂವ ಬದಲಿಗೆ ನೆತ್ತರಲೇ ಬರೆದು ನಿವೇದನೆ;
ಬಿರುಬಿಸಿಲಲಿ ನಿಂತು ನಿಂತಲ್ಲೇ ಒಣಗಿದ ಮರವಾಗಿ.
ಅವಳ ಗಾಜುಕಣ್ಣುಗಳ ಮುಂದೆ
ವಿದೇಶಿ ಸೋಪಿನಿಂದ ಮೈಯತೊಳೆದುಕೊಂಡು ಸಿಂಪಡಿಸಿಕೊಂಡು ಅತ್ತರ ಹೋಗುತ್ತಿದ್ದಾರೆ ವೇಗ ಅತ್ತ ತಿರುಗಿ ನಗುತ್ತ ಕುಹಕದಲಿ ಮಾಡುತ್ತ ಗೇಲಿ ಅವನು ಮಾತ್ರ ಅವಳ ಗಾಜುಕಣ್ಣುಗಳ ಮುಂದೆ ಸ್ನಾನ ಮಾಡುತ್ತಿದ್ದಾನೆ ಆಕಾಶದೊಡಲಿಂದ ಉದುರಿತ್ತಿರುವ ಮಳೆಯ ನೀರಲ್ಲಿ. ಹಿಮಾಲಯವ ಸುತ್ತಿ ಅದು ಕರಗಿದಂತೆ ತಾನೂ ಕರಗಿ ತೊಟ್ಟ ಕಾವಿಯ ಕಳಚಿ ಇಟ್ಟು ಬೆಂಕಿ ನೋಡುತ್ತಿದ್ದಾನೆ ಬೆತ್ತಲಾಗಿ
ಅಥವಾ
ಧ್ಯಾನಿಸುತ್ತಿದ್ದಾನೆ
ಅವಳ ಗಾಜುಕಣ್ಣುಗಳ ಮುಂದೆ ಆಕಾಶದೊಡಲಿಂದ
ಉದುರುತ್ತಿರುವ ಮಳೆ ನೀರಲ್ಲಿ ಸ್ನಾನ ಮಾಡುತ್ತಿರುವವನ ಮುಂದೆ.
ಆಚೆ ಬಿದಿಯಿಂದ ತೂರಿದ ಗುಂಡು ಅವಳ ಎದೆಯನ್ನು ಹೊಕ್ಕಿ ನೆತ್ತರು ಅವನು ಸ್ನಾನ ಮಾಡುತ್ತಿರುವ ನೀರಲ್ಲಿ ನೀರಾಗಿ ಹರಿಯುತ್ತಿದೆ ಭೂಮಿಯ ಕೆಂಪಗಾಗಿಸುತ. ಗುಲಾಬಿ ತೋಟಗಳಂತೂ ನೆತ್ತರ ನೀರ ಹೀರಿ ನೆತ್ತರೇ ಆಗಿ ಅರಳುತಿವೆ. ಲೋಕದವರು ಅಲೌಕಿಕ ಸೌಂದರ್ಯವೆಂದು ಕುಣಿದು ಕುಪ್ಪಳಿಸುತ್ತಿದ್ದಾರೆ ನೋಡುತ್ತಾ.
ಒಂದು ಅವಾಸ್ತವ ಅನುಭವ
ಅವನು ಅವನ ವಿಗ್ರಹವನ್ನು ಒಂದೊಂದೇ ಹೋಳು ಸೀಳಿ ಒಲೆಯ ಬೆಂಕಿ ಉರಿಸುತ್ತಿದ್ದಾನೆ. ಮೇಲೆ ಬೇಯುತ್ತಿದೆ ಅನ್ನ. ಕೊತ ಕೊತ ಬೇಯುವ ಅದರೊಳಗೆ ಅವನು ನಗುತ್ತಿದ್ದಾನೆ. ಇಷ್ಟಿಷ್ಟೇ ಅಗುಳು ಒಳ ಇಳಿದಂತೆ ಒಡಲು ನದಿ. ಜಲಚರಗಳ ಪುಳುಕ್ ಪುಳುಕ್ ಆಟ. ಕಣ್ಣೊಳಗೆ ಬೀಜ ಮೊಳೆತು ಅಂಕುರಿಸುವಂತೆ ಮುದ. ತಾಗಿದೆ ಆಕಾಶ. ಅವನು ಅವನ ವಿಗ್ರಹ ಸೀಳಿ ಆಹಾರವ ಬೇಯಿಸುವ ಧಗ್ಗೆನ್ನುವ ಝಳದಲಿ ಅವಳ ನೆನಪು ಮಾತು ಮೌನ ನೋಟ ಹೆಜ್ಜೆ ಮಿರ ಮಿರ. ಇಟ್ಟರೆ ಕೈ ಬೊಬ್ಬೆ . ಅವಳು ಅವು ಝಳದೊಳಗೆ. ಅವನು ಅವನು ವಾಸ್ತವವ ಪಾದಗಳಿಂದ ಬಡಿಯುತ ಸವರುತ ಕೂತಿಹರು. ಇವರ ಮುಂದೆ ರೋದಿಸುತಿಹರು ನರಳುತ ಹೂವ ಬದಲಿಗೆ ಮುಳ್ಳು ಕಿತ್ತು ರಣಗಾಯ ಮಾಡಿಕೊಂಡು. ಸುಲಿಗೆ ವಂಚನೆ ಹಸಿವು ಯಥಾಪ್ರಕಾರ ತಮ್ಮ ಪಾಡಿಗೆ ತಾವು ಮುಂದುವರೆಯುತ್ತಲಿವೆ. ಸಾವದುಃಖವ ಅದುಮಿಟ್ಟುಕೊಂಡರೂ ಕೊಲೆಗಳು ಬೆಚ್ಚಿಬೀಳಿಸುತ್ತಿವೆ. ಕೊಲೆಗಳಲಿ ನೆತ್ತರಸೋನೆ ಹತಾರಗಳ ತಿಕ್ಕಿ ತೊಳೆದು ಹೊಳಪಿಸುತ್ತಿದೆ. ಋತುಗಳು ಹೋಗುತ್ತಿವೆ ಹಾಗೋ ಈಗೋ ಮಾಗಿಯ ರೆಂಬೆಕೊಂಬೆಗಳಿಗೆ ಚಳಿಯ ಮೆತ್ತುತ್ತಾ. ನಡುಗುತ್ತ ಹಕ್ಕಿಗಳು. ಅವನು ಅವನು ಕೂತಿಹರು.
ದನಿ
ನಳನಳಿಸುವ ಅವಳ ಕಣ್ಣುಗಳೇ ಆಗಿದ್ದಂತಹ ಇಬ್ಬನಿ ಇನ್ನೂ ತಬ್ಬಿ ಮಲಗಿದ್ದಂತಹ ಹೂವುಗಳ
ಸುಡಲಾಯಿತು. ಸುಟ್ಟ ಬೆಂಕಿಯ ಹೊಗೆ ಹಬ್ಬಿ ಕೂಗುತಿದ್ದ ಕೋಗಿಲೆಯ ಅಲ್ಲ ಅವಳ ಅಳುವೇ
ಗಂಟಲ ಹೊಕ್ಕು ಅದುಮಿತು.
ಎದೆಯಲಿನ್ನೂ ಹರಿಯುತಲಿದೆ ಅವಳೆದೆಗೆ ಕಿವಿಗೊಟ್ಟು
ಕೇಳಿಸಿಕೊಂಡ ನೋವು
ಅಪ್ಪ ಸತ್ತ. ಅಮ್ಮನೂ.ತಮ್ಮ ಬಾವಿಗೆ ಬಿದ್ದು.
ಅಜ್ಜ ಅಜ್ಜಿ ಎದೆಯೊಡೆದು. ಕಣ್ಣೀರೇ ಬತ್ತಿಹೋಗುವಷ್ಟು ಸಾವು ಸಾಲು.
ದೀಪ ಹಚ್ಚದ ಮನೆ ಕತ್ತಲು.
ಅವಳು ಜೊತೆ ಸಾಗಿ ಹಿಡಿದು ಕೈಯ
ಮುತ್ತಿಕ್ಕಿ ಚಂದ್ರಗನ್ನಡಿಯಲಿ ತೋರಿಸಿ ನಗುವ
ಮಾರಿ ಹಬ್ಬದ ಮಾಂಸ ಕೊಯ್ದ ಕುಡಗೋಲಲಿ ಹೂವ ಕೊಯ್ದು
ದೈವ ಸಿಂಗಾರ.
ಈಗ ಹೂವಿಲ್ಲ. ಹೂವುಗಳ ಸುಡಲಾಗಿದೆ.
ಎಳೆದು ಕೊಳ್ಳುವ ಉಸಿರಲೂ
ಹತಾರಗಳ ಸದ್ದು. ಆ ಲೋಹಗಳ ಸದ್ದಿನಾಳದಲೆಗಳಲಿ
ಅವಳ ದನಿ
ಕಣ್ಣುಗಳಲ್ಲಿ ನಾನಿನ್ನೂ ಹಾದಿಯಲ್ಲೇ ಇದ್ದೇನೆ
ಇನ್ನೂ ನೆನಪಿದೆ ಅವರು ತಂದಿದ್ದ ಕತ್ತಿಗಳು
ಬಾಕುಗಳು
ಕನ್ನಡಿಗಳಾಗಿ
ನಿನ್ನನ್ನು ಅಲೆಅಲೆಯಾಗಿ ತೇಲಿಸುತ್ತಿದ್ದವು
ಕೊಲೆಯಾಗುವುದಕ್ಕೂ ಮುನ್ನ.
ಕೊಲೆಯಾದಮೇಲೂ
ನಿನ್ನ ಸ್ಪರ್ಶದ ಹೂವು ನನ್ನ ಜೊತೆ
ಮಣ್ಣಾಗಿದೆ.
ಅವರಿಗೆ ಹೇಳು
ಅಂದು ಮಧ್ಯಾಹ್ನ ದೇವಗನ್ನಿಕೆಯರು
ಹೋಗುತ್ತಿದ್ದಾಗ
ಒದ್ದೆಕಾಲುಗಳಲ್ಲಿ ನೆಲವ ಒದ್ದೆಮಾಡುತ್ತ
ನಾನು ಅವಸರದಲಿ ಓಡುತ್ತಿದ್ದುದು
ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದ ಅಪ್ಪನನ್ನು
ಕಾಣಲು.
ಅಪ್ಪನ ಕಣ್ಣುಗಳಲ್ಲಿ ನಾನಿನ್ನೂ ಹಾದಿಯಲ್ಲೇ
ಇದ್ದೇನೆ.