ಮೇ ೨೩, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕರಡಿ ಆಡಿಸುವವರ ಮೂಲ ಹುಡುಕುತ್ತಾ: ಕೆಂಬಾವುಟ ಹಿಡಿದ ಖಲಂದರರು    
ಎಸ್.ಬಾಬು ಕೌದೆನಹಳ್ಳಿ
ಗುರುವಾರ, 15 ಮಾರ್ಚ್ 2012 (03:20 IST)

ನಾಗರಿಕ ಅಂತ ಕೊಂಡಿರುವ ಸಮಾಜ ಮತ್ತದರ ವ್ಯವಸ್ಥೆಗಳು ತಮ್ಮ ಮೂಗಿನ ನೇರಕ್ಕೆ ಇಲ್ಲದರ ವಿರುದ್ಧ ಒಂದಲ್ಲ ಒಂದು ರೀತಿಯಲ್ಲಿ ಅವಹೇಳನ ಮಾಡುತ್ತವೆ ಇಲ್ಲವೇ ಹೊಸ ಹೊಸ ಕಾಯ್ದೆ ಕಾನೂನುಗಳ ಮೂಲಕ ತಮ್ಮ ’ಸರಿ’ಗಳನ್ನು ಸಮುದಾಯಗಳ ಮೇಲೆ ಹೇರಿಬಿಡುತ್ತವೆ. ಈ ನೆಲದ ಅನುಭಗಳನ್ನು ಬಿಚ್ಚುಗಣ್ಣಿಂದ ನೋಡುವ ಬದಲು ಬಣ್ಣದ ಕನ್ನಡಕದ ಮೂಲಕ ನೋಡಲು ಆರಂಭಿಸಿಬಿಡುತ್ತವೆ. ನಮ್ಮ ಖಲಂದರರು ಸಹ ನಾಗರಿಕ ಸಮಾಜ ಮತ್ತು ಅದರ ವ್ಯವಸ್ಥೆಗಳ ಮರ್ಜಿಗೆ ತಕ್ಕಂತೆ ಕುಣಿಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ೨೦೦೦ದ ದಶಕದಲ್ಲಿ ಆರಂಭವಾಯಿತು. ಖಂಡಿತವಾಗಿಯೂ ದೊಡ್ಡಮಟ್ಟದ ದನಿಯಿಲ್ಲ, ಸರ್ಕಾರಿ ನೌಕರಿಯಂತೂ ಬಹುದೂರದ ಮಾತು, ಅಕ್ಷರಲೋಕದಿಂದ ಬಹುದೂರ ಉಳಿದ ಈ ಸಮುದಾಯಕ್ಕೆ ತನ್ನ ಬಗ್ಗೆ ಆಗುತ್ತಿರುವ ಕುತಂತ್ರಗಳ ಅರಿವು ಇರಲು ಹೇಗೆ ಸಾಧ್ಯ. ರಾಜಾ ಹುಸೇನ್ ಜೊತೆ ಮಾತನಾಡುವ ಸಂದರ್ಭದಲ್ಲಿ ಆತ ಹೇಳಿದ್ದ, ಅಲ್ರಿ ಸರ, ನಮ್ಮ ಕರಡಿ ಆಡಿಸೋರ ಬಗ್ಗೆ ಬರೆದ ಪದ ಐತಲ್ರಿ ಅದನ್ನ ಅದ್ಯಾರೋ ಮೇಷ್ಟ್ರು, ಕರಡಿ ಆಡಿಸೋದು ತಪ್ಪು ಅಂತ ಪಾಠ ಮಾಡಿದ್ನಂತ, ನನ್ ಮಗ ಬಂದು, ಅದೇನಪ್ಪ, ಕರಡಿ ಆಡಿಸೋದು ತಪ್ಪಂತೆ ಅಂತ ಏನೋ ಹೇಳ್ತಾ ಇದ್ದರಿ, ಹಿಂಗ್ ನಮ್ ಬದುಕನ್ನ, ಕೆಟ್ಟದಾಗಿ ಮಾತಾಡಿದ್ರೆ ನಮ್ ಮಕ್ಕಳು ಸಾಲಿಗ್ ಹ್ಯಾಂಗ್ರಿ ಹೊಕ್ಕಾವ, ಇಡೀ ಶಿಕ್ಷಣ ವ್ಯವಸ್ಥೆ ಹೇಗೆ ವ್ಯವಸ್ಥಿತವಾಗಿ ಇಂಥ ಸಮುದಾಯಗಳನ್ನು ತನ್ನಿಂದ ದೂರತಳ್ಳಿಬಿಡುತ್ತದೆ, ತನ್ನ ಬದುಕನ್ನು ಹಿಯಾಳಿಸುವ ತಪ್ಪು ಎಂದು ಪದೇ ಪದೇ ಹೇಳುವ ವ್ಯವಸ್ಥೆಯಿಂದ ವಿಮುಖವಾಗಿ, ಶಾಲೆಯಿಂದ ದೂರ ಉಳಿಯಲು ಕಾರಣವಾಗಿರುವ ಮಜಬೂತಾದ ಸತ್ಯವನ್ನು ಒಂದೇ ಮಾತಿನಲ್ಲಿ ರಾಜಹುಸೇನ್ ಹೇಳಿದ, ನನಗಂತೂ ತೀರಾ ಗೊಂದಲವಾಗಿತ್ತು. ಅಕ್ಷರ ಕಲಿಕೆಯೇ ನಮ್ಮಂಥವರಿಗೆ ಇರುವ ಮೊಟ್ಟಮೊದಲ ಬಿಡುಗಡೆಯ ಸಾಧನ ಎಂಬ ಸತ್ಯ ಒಂದು ಕಡೆಯಾದರೆ, ಅಕ್ಷರಗಳನ್ನೇ ಗುರಾಣಿಯನ್ನಾಗಿ, ತಂತ್ರ ಮಂತ್ರಗಳನ್ನಾಗಿ ಮಾಡಿಕೊಂಡು ನಮ್ಮ ತಳಸಮುದಾಯಗಳನ್ನು ದಂಡಿಸುವ ದುರಂತ ಮತ್ತೊಂದು ಕಡೆ. ಹಿರಿಯಜ್ಜ ಮಹಬೂಬ್ ಸಾಬ್ ಒಮ್ಮೆ ಅದೇನ್ ಬಿಡಪ, ಅದೇಂತದೋ, ಪೇಪರ್ ಕೊಟ್ರು, ಅದನ್ನ  ಸರ್ಸಿಪಿಕೆಟ್ ಅಂದ್ರು, ಅಮ್ಯಾಗ ಅದು ಅದಲ್ಲ, ಇದು ಅಂತ ಹೇಳಿದ್ರು, ಅದೇನ್ ಕಾಗಜ, ಅದರ ಅತಾ ಪತಾ ಹ್ಯಾಂಗ್ರಿ ಗೊತ್ತಾಕ್ಕೈತೆ ಭೋಳೆ ಮಂದಿಗೆ, ತಿಳಿದ ಮಂದಿ ನಿಮಗ ಗೊತ್ತಿದ್ದಿರಬೇಕು ಬಿಡ್ರಿ ಅಂತ ಹೇಳಿದಾಗ, ಒಂದು ಕಾಗದ ಇಡೀ ಸಮುದಾಯಕ್ಕೆ ಹೇಗೆ ಗುರಾಣಿಯಾಗಿ ಚುಚ್ಚಿತು, ದಿಕ್ಕಾಪಾಲು ಮಾಡಲು ಒಂದೇ ಒಂದು ಪೇಪರ್ ಅದರ ಮೇಲೊಂದು ಸಹಿ ಸಾಕಲ್ಲ ಇದು ನನ್ನನ್ನು ನಾನೇ ಕನ್ನಡಿಯಲ್ಲಿ ಮತ್ತೊಮ್ಮೆ, ಮಗದೊಮ್ಮೆ ನೋಡಿಕೊಳ್ಳುವಂತೆ ಮಾಡಿತ್ತು.

೯೦ರ ದಶಕದಲ್ಲಿ ಖಲಂದರರನ್ನು ಬೆದರಿಸುವ, ಬಂಧಿಸುವ ಆಟ ಶುರುವಾಗಿತ್ತು, ಹಾಗೋ ಹೀಗೋ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ನಮ್ಮ ರಾಜ್ಯದಲ್ಲಿ ಆಗಿನ ಸಂದರ್ಭದಲ್ಲಿ ಬಂಧಿಸುತ್ತಿರಲಿಲ್ಲ. ಇವರು ಬೇರೆ ರಾಜ್ಯಗಳಿಗೆ ಹೋದಾಗ ಹಲವಾರು ಬಾರಿ ಬಂಧನಕ್ಕೊಳಗಾಗುವ ಘಟನೆಗಳು ಜರುಗಿವೆ. ಪ್ರಮುಖ ಕಾರಣವೆಂದರೆ, ಕರಡಿ ಆಡಿಸಲು ಆಯಾ ರಾಜ್ಯಗಳ ಅನುಮತಿ ಪತ್ರ ಅಥವಾ ಲೈಸೆನ್ಸ್ ಇಲ್ಲ ಅನ್ನುವ ನೆಪ.   

ಖಲಂದರರು ಹೇಳಿದ ಬಂಧನಕ್ಕೊಳಗಾದ ಕೆಲವು ಪ್ರಸಂಗಗಳು:
    ೧೯೯೫ರಲ್ಲಿ, ಹೈದರಾಬಾದಿನಲ್ಲಿ ರಾಜ ಹುಸೇನ್ ಮತ್ತು ೨ ಕರಡಿಗಳನ್ನು  ಬಂಧಿಸಲಾಗಿತ್ತು.
    ೧೯೯೭ರಲ್ಲಿ ರಾಜ ಹುಸೇನ್, ಕರಡಿ ಆಡಿಸುವ ಪರವಾನಗಿ ಮುಗಿದ ಕಾರಣಕ್ಕಾಗಿ ಬಂಧಿಸಿ ಮದ್ರಾಸ್ ಸೆಂಟ್ರಲ್ ಜೈಲಿನಲ್ಲಿ ೧೩ ದಿನ ಇಡಲಾಗಿತ್ತು.
    ೧೯೯೯ರಲ್ಲಿ ತಮಿಳುನಾಡಿನ ರಾಮನಾಥಪುರಂನಲ್ಲಿ ಜಮೀರ್ ಮತ್ತು ಇಮಾಮ್‌ರನ್ನು ಕರಡಿ ಆಡಿಸಿದ್ದಕ್ಕಾಗಿ ಬಂಧಿಸಿ, ೩-೪ ತಿಂಗಳು ಜೈಲಿನಲ್ಲಿ ಇಡಲಾಗಿತ್ತು. ಕೇಸ್ ಈಗಲೂ ನಡೆಯುತ್ತಿದೆ.

೨೦೦೦ದ ದಶಕದಲ್ಲಿ ಮೇನಕಾ ಗಾಂಧಿ ಕೇಂದ್ರ ಸಚಿವೆಯಾದ ಮೇಲೆ ಜಾರಿಮಾಡಿದ ಕಾನೂನಿನಿಂದಾಗಿ, ನಮ್ಮ ರಾಜ್ಯದಲ್ಲೂ ಖಲಂದರರನ್ನು ಬಂಧಿಸುವ ಕಾರ್ಯ ಆರಂಭವಾಯಿತು. ಕಾನೂನು ಜಾರಿಯಾಗುವ ಸಂದರ್ಭದ ರಾಜ್ಯಸಭೆಯ ಚರ್ಚೆಯಲ್ಲಿ ಬಿಹಾರದ ರಾಜ್ಯಸಭಾ ಸದಸ್ಯ ಜೆ.ಡಿ.ಯುನ ಅಲಿಅನ್ವರ್ ಬಿಟ್ಟರೆ ಖಲಂದರರ ಪರವಾಗಿ ಯಾವ ಸದಸ್ಯನೂ ಮಾತಾಡಲಿಲ್ಲ. ಅಲಿ ಅನ್ವರ್ ಕೊನೆಯಪಕ್ಷ ಸಮುದಾಯಕ್ಕೆ ಬೇಕಾದ ಪರಿಹಾರದ ಬಗ್ಗೆ ಮಾತಾಡಿದರು ಅನ್ನುವುದೇ ಸಂತೋಷದ ವಿಷಯ, ಇವರಿಗೂ ಫೋನ್ ಮಾಡಿ ಮಾತಾಡಿದ್ದೆ, ಬಾ ದೆಲ್ಲಿಗೆ ಅಂತ ಕರೆದರು, ರಾಜ ಹುಸೇನ್ ಮತ್ತು ಟೀಂ ದೆಹಲಿಗೆ ಹೋದಾಗ ಮಾತಾಡಿಸಿಕೊಂಡು ಬಂದದ್ದನ್ನು ಸ್ಮರಿಸಿಕೊಂಡರು. ಒಟ್ಟಾರೆ, ಕಾಗದದಲ್ಲಿ ಸಹಿ ಬಿದ್ದಿತ್ತು, ಸಮುದಾಯವೊಂದಕ್ಕೆ ಗೊತ್ತಿಲ್ಲದೇ ಕಾನೂನು ಜಾರಿಯಾಗಿತ್ತು. ನನಗೆ ರಾಜ್ಯಸಭೆಯಲ್ಲಿ ಈ ರೀತಿಯ ಚರ್ಚೆ ಆಗಿತ್ತು ಎನ್ನುವ ವಿಚಾರ ಗೊತ್ತಾಗಿದ್ದು ಸಹ ಬಹಳ ತಡವಾಗಿ.

ಚರ್ಚೆಗೆ ಸಂಬಂಧಪಟ್ಟಿದ್ದನ್ನೆಲ್ಲಾ ಓದಿದ ಮೇಲೆ ನನ್ನ ಮೇಲೆ ನನಗೆ ತೀರ ಅಸಹನೆ, ಕೋಪ ಬಂದಿತ್ತು ಕಾರಣ, ಕೆಲವು ಬುದ್ಧಿಜೀವಿಗಳ ಜೊತೆಗೆ ಆಗಾಗ ಮಾತನಾಡುತ್ತಿದ್ದೆ ಇಂಗ್ಲಿಷು ಮತ್ತು ಕಂಪ್ಯೂಟರ್‌ಗಳು ಬಂಡವಾಳಶಾಹಿಯ ಸಂಕೇತಗಳು ಎಂದು ಅವರೆಲ್ಲಾ ಸೇರಿ ನನ್ನಂಥವರನ್ನು ಯಾಮಾರಿಸಿದ್ದರು, ಅರ್ಧ ಹಳ್ಳಿ ಅರ್ಧ ಸ್ಲಂ ನಿವಾಸಿಯಾದ ನನಗೆ, ಇವರು ಹೇಳಿದ್ದೆಲ್ಲಾ ಸುಳ್ಳು ಎಂದು ಗೊತ್ತಾಗಿದ್ದು, ಇವರ ಮಕ್ಕಳು ಇಂಗ್ಲಿಷ್ ಮೀಡಿಯಂ ಓದಿ, ಅಮೆರಿಕದಲ್ಲೋ, ಮತ್ತೆಲ್ಲೋ ಸಾಫ್ಟ್‌ವೇರ್ ಇಂಜಿನಿಯರುಗಳಾದ ಸುದ್ದಿ ತಿಳಿದಾಗಲೇ. ಇರಲಿ ಬಿಡಿ, ಅದೆಲ್ಲ ದೊಡ್ಡವರ ದೊಡ್ಡತನ. ಆಮೇಲೆ, ಕಂಪ್ಯೂಟರ್ ಕಲಿತದ್ದು ಇತಿಹಾಸ. ಇಂಗ್ಲಿಷ್ ಪತ್ರಿಕೆಗಳಿಂದ, ಕಂಪ್ಯೂಟರ್‌ಗಳಿಂದ ದೂರವಿದ್ದದ್ದರಿಂದ ಖಲಂದರರ ಬಗ್ಗೆ ಬರುತ್ತಿರುವ ಸುದ್ದಿಗಳು ತೀರಾ ತಡವಾಗಿ ಗೊತ್ತಾಗುತ್ತಿದ್ದುದು ಮುಜುಗರಕ್ಕೀಡು ಮಾಡುತ್ತಿತ್ತು. ಕರ್ನಾಟಕದಲ್ಲಿ ಖಲಂದರರನ್ನು ಬಂಧಿಸುವ, ಕರಡಿಗಳನ್ನು ತಮ್ಮ ಸುಪರ್ದಿಗೆ ಪಡೆಯುವ ಕೆಲಸ ವ್ಯವಸ್ಥಿತವಾಗಿ ಆರಂಭವಾಗಿದ್ದು ೨೦೦೦ದ ಈಚೆಗೆ.

ರಾಜಹುಸೇನ್ ಮತ್ತವನ ಸಂಗಡಿಗರು ಹೇಳಿದ ಕೆಲವು ಘಟನೆಗಳು ಹೀಗಿವೆ:
    ೨೦೦೨ರಲ್ಲಿ  ಮಂಡ್ಯದಲ್ಲಿ ಕರಡಿ ಆಡಿಸಿದ್ದಕ್ಕಾಗಿ ಖಾಸಿಂನನ್ನು ಬಂಧಿಸಿ ೧೫-೨೦ದಿನ ಜೈಲಿನಲ್ಲಿಡಲಾಗಿತ್ತು.
    ಇದೇ ವರ್ಷದಲ್ಲಿ ಭೀಮನೂರ್ ಹುಸೇನ್‌ರನ್ನು ಗುಲ್ಬರ್ಗಾದಲ್ಲಿ ಬಂಧಿಸಿ ಜೈಲಿನಲ್ಲಿಡಲಾಗಿತ್ತು.
    ೨೦೦೩ರಲ್ಲಿ ಬೆಂಗಾಲಿಯಿಂದ ತೆಲುಗು ಸಿನಿಮಾಗಳಿಗೆ ಹಾರಿದ, ಹಾಗೆಯೇ ತೆಲುಗಿನ ಖ್ಯಾತನಟನೊಬ್ಬನ ಎರಡನೇ ಪತ್ನಿಯಾಗಿರುವ ನಟಿಯೊಬ್ಬಳ ಚೇಲಾಗಳು ಹೈದರಬಾದಿನಲ್ಲಿ ನಮ್ಮ ಗಿಡ್ಡಶಾಮೀದನ ಕರಡಿಯನ್ನು ವಶಪಡಿಸಿಕೊಂಡರು. ಆ ನಂತರ ಇದೇ ಗುಂಪು ೬ ಕರಡಿಗಳನ್ನು ಸೆರೆಹಿಡಿದಿರುವುದಾಗಿ ಆಂಧ್ರದ ಖಲಂದರರು ಹೇಳಿರುವುದಾಗಿ ಸುದ್ದಿಯಿದೆ.
    ೨೦೦೪ರಲ್ಲಿ ರಾಜ ಸಾಬ್‌ನ ಕರಡಿಯನ್ನು ಸಹ ವಶಪಡಿಸಿಕೊಳ್ಳಲಾಯಿತು.
    ೨೦೦೫ರಲ್ಲಿ ರಾಜಸಾಬ್‌ನ ೨ ಕರಡಿಗಳನ್ನು ಗೋವಾದಲ್ಲಿ ವಶಪಡಿಸಿಕೊಳ್ಳಲಾಯಿತು.
    ೨೦೦೬ರಲ್ಲಿ ಹಾಸನದ ಅರಕಲಗೂಡು ವಲಯದಲ್ಲಿ ಕರಡಿ ಆಡಿಸುವವರನ್ನು ಇಡೀ ದಿನ ಬಂಧಿಸಲಾಗಿತ್ತು.

೨೦೦೬ರಲ್ಲಿ ಆರಂಭವಾದ ನೇರದಾಳಿಯಿಂದ ನಲುಗಿಹೋದ ಖಲಂದರರು ಪ್ರತಿ ನಿತ್ಯವೂ ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಯೋಚಿಸುವ ಮತ್ತು ಅದಕ್ಕೆ ಕಾರಣಗಳನ್ನು ಹುಡುಕುವ ದಿಸೆಯಲ್ಲಿ ಯೋಚಿಸತೊಡಗಿದರು. ಶಾಮೀದ್, ಗೋಕಾರ್‌ಸಾಬ್, ಇಮಾಂಸಾಬ್, ರಾಜಾ ಸಾಬ್ ಬಂಧನಗಳಿಗೊಳಪಟ್ಟ ಇವರೆಲ್ಲರ ನೋವು ಕೇವಲ ವೈಯಕ್ತಿಕವಾಗಿರದೇ ಇಡೀ ಸಮುದಾಯ ಅನುಭವಿಸುತ್ತಿರುವ ತಲ್ಲಣಗಳೇ ಆಗಿದ್ದವು. ಇದಕ್ಕೆಲ್ಲಾ ಒಂದು ಉತ್ತರ ಬೇಕಿತ್ತು, ಸಮಸ್ಯೆಗಳನ್ನೆಲ್ಲಾ ಮನಗಂಡು ಅರ್ಥಮಾಡಿಕೊಳ್ಳಲು ಆರಂಭಿಸಿತು, ಬೀದಿಗಿಳಿದು ಹೋರಾಟ ಮಾಡದೇ ಏನೂ ದಕ್ಕುವುದಿಲ್ಲ ಎಂಬ ಸತ್ಯ ಮನದಟ್ಟಾಗುತ್ತಾ ಹೋಯಿತು. ಇದಕ್ಕೆಲ್ಲ ಉತ್ತರವಾಗಿ; ಸಮುದಾಯ ತನ್ನದೇ ಆದ ಒಂದು ಸಂಘಟನೆಯನ್ನು ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದಕಾಗಿ ಕಟ್ಟಿಕೊಂಡಿತು. ಶೋಷಣೆಗೆ ಒಳಗಾಗುವ ಸಮುದಾಯಕ್ಕೆ ಇರುವ ಮೊದಲ ಹಾಗೂ ಕೊನೆಯ ಪರ್ಯಾಯವೆಂದರೆ, ಸಂಘಟನೆಯೇ. ಅದು ಗಟ್ಟಿಯಾಗಿದ್ದಷ್ಟೂ ಶೋಷಣೆ ಕಡಿಮೆ ಇರುತ್ತದೆ ಎಂಬ ನಂಬಿಕೆ. ನಾನು ಮಾತನಾಡುತ್ತಿರುವುದು ಸಮಾಜದ ಕಟ್ಟಕಡೆಯ ಸಮುದಾಯಗಳ ಬಗ್ಗೆ ಕಂಡು. ಯಾವ ಯಾವ ಉದ್ದೇಶಗಳಿಗಾಗಿ ಎಂಥವೆಲ್ಲಾ ಸಂಘಟನೆಗಳಿವೆ ಎಂದು ಬೇರೆ ಹೇಳಬೇಕಾಗಿಲ್ಲ. ನಮ್ಮ್ಮ ಖಲಂದರರು ಕೊನೆಯ ಮೂರುನಂಬರುಗಳ ಮೂಲಕ ಎಲ್ಲರನ್ನು ಕರೆಂiiತೊಡಗಿದರು. ಗುಂಪು ದೊಡ್ಡದಾಗುತ್ತಾ ಹೋಯಿತು. ಕೆಲವರು ಬಸ್‌ಗೆ ಕಾಸಿಲ್ಲದೇ ನೀವು ಏನೇ ಮಾಡಿ ನಿಮ್ಮ್ಮ ಜೊತೆ, ಸಾಯುವ ತನಕ ಇರುತ್ತೇವೆ ಎಂಬ ಭರವಸೆಯನ್ನು ಕೊಟ್ಟರು.

ಅಖಿಲ ಕರ್ನಾಟಕ ಕರಡಿ ಆಡಿಸುವವರ ಪರಿಹಾರ ಹೋರಾಟ ಸಮಿತಿ. ಸಂಘಟನೆ ಅಸ್ತಿತ್ವಕ್ಕೆ ಬಂದದ್ದು ಆಗಸ್ಟ್ ೫, ೨೦೦೬ ರಲ್ಲಿ. ಹೊಸಪೇಟೆ ಹಂಪಿನಕಟ್ಟೆಯ ಮೆಹಬೂಸಾಬ್ ಕರಡಿ- ಹಂಪಿನ ಕಟ್ಟೆ ಗೌರವ ಅಧ್ಯಕ್ಷರಾಗಿಯೂ, ಕೊಪ್ಪಳದ ಮಂಗಳಾಪುರದ ರಾಜಹುಸೇನ್‌ಸಾಬ್‌ಕರಡಿ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಈ ಎಲ್ಲಾ ಚರ್ಚೆಗಳಲ್ಲಿ ನಾನು ಭಾಗವಹಿಸಿದ್ದೆ, ನನ್ನನ್ನು ಸಹ ಲೀಡರ್ ಆಗು ಎಂದು ರಾಜಹುಸೇನ್ ಬಲವಂತ ಮಾಡಿದ್ದ, ಗೊಂದಲಗೊಂಡೆ, ಕಾಲೇಜಿನ ಕೊನೆಯಭಾಗಕ್ಕೆ ಕೈಯಲ್ಲಿ ಕೆಂಬಾವುಟ ಮತ್ತು ಆಗಾಗ ನೀಲಿ ಬಾವುಟ ಹಿಡಕೊಂಡ ಅನುಭವ, ಆ ಬಾವುಟ ಯೂನಿವರ್ಸಿಟಿ ಮುಗಿಸುಷ್ಟರಲ್ಲಿ ನೀಲಿಬಣ್ಣಕ್ಕೆ ತಿರುಗಿತ್ತು. ಕೆನ್ನೀಲಿ ಬಣ್ಣದವನಾವನಾದ ನಾನು, ಇಲ್ಲೋ ಮಾರಾಯ, ಅದು ನಿಮ್ಮ್ಮ ಸಂಘಟನೆ, ನಾನು ಅದಕ್ಕೆ ಕಾರ್ಯಕರ್ತನಾಗಿ ಹಾಗೂ ಬೆಂಬಲಿಗನಾಗಿ ಇರ್ತೀನಿ ಅಂತ ಖಡಾಖಂಡಿತವಾಗಿ ಹೇಳಿದೆ, ನಮ್ಮ ಕೋಟಿಗಾನಹಳ್ಳಿ ರಾಮಯ್ಯ ಹೇಳಿದ ಮಾತು ಸಹ ನೆನೆಪಿಸಿಕೊಂಡೆ, ಎರೆಹುಳ ಆಗಿ, ಭೂಮೀನ ಹಸನು ಮಾಡ್ರಿ, ಬೆಳೆ ತಾನಾಗೆ ಚೆನ್ನಾಗಿ ಬರುತ್ತೆ ಅಂತ. ರಾಜಹುಸೇನನಿಗೆ ನನ್ನ ದ್ವಂದ್ವ ಅರ್ಥ ಆಗಲಿಲ್ಲ ಅದೇನ್ರಿ ನೀವು ಅಂತ ಹೇಳಿ ಸುಮ್ಮಗಾದ.  

ನಮ್ಮ ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕರಡಿ ಆಟಗಾರರ ಸಮಸ್ಯೆಗಳ ಬಗ್ಗೆ ಆಗಸ್ಟ್ ೬, ೨೦೦೬ರಂದು ಕೊಪ್ಪಳದಲ್ಲಿ ಪತ್ರಿಕಾಗೋಷ್ಟಿ ನಡೆಯಿತು. ಕೊಪ್ಪಳದ ಜಿಲ್ಲಾಧಿಕಾರಿಯವರಿಗೆ ತಮ್ಮ ಹಕ್ಕುಗಳ ಬಗ್ಗೆ ಪ್ರತಿಭಟನೆ ನಡೆಸಿ ಮನವಿ ಪತ್ರವನ್ನು ಆಗಸ್ಟ್ ೭ ೨೦೦೬ ರಂದು ಸಲ್ಲಿಸಲಾಯಿತು. ಖಲಂದರರ ಸಂಘಟನೆ, ಎಡಪಂಥೀಯ ಸಂಘಟನೆಯಾದ ಎ.ಐ.ಟಿ.ಯು.ಸಿ ಯ ಭಾಗವಾಯಿತು. ಇದಕ್ಕೆ ಬೆಂಬಲವಾಗಿ ರೈತ ಸಂಘ ಮತ್ತು ದಲಿತ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳು ಮತ್ತು ವಿಚಾರವಾದಿಗಳು ಸಾಮಾಜಿಕ ಕಾರ್ಯಕರ್ತರು ಈ ಸಮುದಾಯದ ಹಕ್ಕುಗಳ ಪರವಾಗಿ ಹೋರಾಟಕ್ಕೆ ಇಳಿದರು. ದಿನಾಂಕ ೧೭ ಆಗಸ್ಟ್ ೨೦೦೬ ರಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರದ ಸಚಿವರಾದ ಚೆನ್ನಿಗಪ್ಪರವರಿಗೆ ಮನವಿಯನ್ನು ಕೊಡಲಾಯಿತು. ಈ ಬಗ್ಗೆ ೧೮ ಆಗಸ್ಟ್ ೨೦೦೬ ರ ಪತ್ರಿಕೆಗಳಲ್ಲಿ ಸುದ್ದಿಯೂ ಆಯಿತು. ಕರಡಿ ಹಿಡಿದ ಸಂದರ್ಭದಲ್ಲಿ ಅರಣ್ಯಸಚಿವರ ಭೇಟಿಗೆ ಬೆಳಿಗ್ಗೆ ಆರುಗಂಟೆಯ ಹೊತ್ತಿಗೆ, ನಮ್ಮ್ಮ ರಾಜಾಹುಸೇನ್ ಮತ್ತಿತರ ಸ್ನೇಹಿತರೊಂದಿಗೆ ಹೋದಾಗ, ಸುಮಾರು ಹತ್ತುಗಂಟೆಗೆ ಹೊರಗೆ ಬಂದು, ದೇವರ ಫೋಟೆಗೆ ನಮಸ್ಕರಿಸಿ, ನಮ್ಮ್ಮತ್ತ ತಿರುಗಿಯೂ ನೋಡದೆ ಹೋಗಿದ್ದು ಇನ್ನು ನೆನಪಿದೆ, ಅದು ಯಾರೋ ಪತ್ರಕರ್ತ ಹೆಣ್ಣುಮಗಳು ಬಂದು ಕೇಳಿದ್ದಕ್ಕೆ ಒಳಗೆ ಕರೆದು ಮಾತನಾಡಿಸಿದ ಆಯಪ್ಪ, ನಾಳೆ ಬರ್ರಿ, ಇವತ್ತು ಅರ್ಜೆಂಟ್ ಮೀಟಿಂಗ್ ಐತೆ ಅಂತ ಕಾರನ್ನೇರಿ ಹೊರಟೇಬಿಟ್ಟ. ಇದಕ್ಕೂ ಮುಂಚೆ, ಕಾದು ಕಾದು ತೀರಾ ಸುಸ್ತಾಗಿ, ನಾನು ರಾಜ ಹುಸೇನ್ ಕಾಲಿನ ಮೇಲೆ ಕಾಲು ಹಾಕಿ ಕೂತಿದ್ದನ್ನ ಕಂಡ ಆಯಪ್ಪನ ಬಲಗೈ ಬಂಟನೊಬ್ಬ ಏನ್ ಅಂದ್ಕಂಡಿದ್ದೀರಾ, ಕಾಲ ಕೆಳಗೆ ಮಾಡ್ರಿ, ನಿಮ್ಮಪ್ಪನ ಮನೆ ಅಂದ್ಕಂಡಿದ್ದೀರಾ ಅಂತ ರೋಪು ಬೇರೆ ಹೊಡೆದ, ಕೋಪಬಂದರೂ ನಮ್ಮ್ಮ ಜನ ಎಂಥೆಂಥವರನ್ನು ಆರಿಸುತ್ತಾರಲ್ಲ ಶಭಾಷ್!

ಇದಕ್ಕಿಂತ ತೀರಾ ಅವಮಾನಪಟ್ಟ ಘಟನೆಯೊಂದು ಜರುಗಿತು, ಕೊಪ್ಪಳದವನೇ ಆದ ಎಂ.ಎಲ್.ಎ ಹಾಗೂ ಪ್ರಭಾವಿ ಮಂತ್ರಿ ಮತ್ತು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರ ತೀರಾ ಹತ್ತಿರದವನಾಗಿದ್ದ ಈ ಯಪ್ಪನ ಹೆಸರು ಹೇಳುವುದಕ್ಕೂ ಮುಜುಗರವಾಗುತ್ತಿದೆ. ಹೆಸರು ಹೇಳುವಷ್ಟೂ ಒಂದು ಸಣ್ಣ ಒಳಿತನ್ನು ನಮ್ಮ ಖಲಂದರರರಿಗೆ ಬಯಸದ ಲೀಡರ್‌ಗಳ ಹೆಸರೇಳಿ ಪ್ರಯೋಜನವಿಲ್ಲ ಬಿಡಿ. ಆತ ಮುಸ್ಲಿಂ ಬೇರೆ. ಮುಸ್ಲಿಂ ಪಕ್ಕಕ್ಕಿರಲಿ, ಅಟ್‌ಲೀಸ್ಟ್ ಜನ ತನ್ನ ಕ್ಷೇತ್ರದವರು ಅಂತ ಏನಾದರೂ ಮಾಡಬಹುದಿತ್ತು ಆದರೆ ಮಾಡಲು ಮನಸ್ಸಿದ್ದರೆ ತಾನೆ.  ರಾಜಾಹುಸೇನ್ ಮತ್ತು ಐದಾರು ಮಂದಿ ಸೇರಿ ಆ ಮಂತ್ರಿಯವರನ್ನು ಕಾಣಲು ಹೋದರು, ಮನವಿಯನ್ನು ಕೊಟ್ಟು ನೋಡ್ರೀ ಸರ ತುಂಬಾ ಸಂಕಷ್ಟದಲ್ಲಿದ್ದೀವಿ, ನೀವು ಏನಾರ ಮಾಡ್ರಿ ಅಂದ್ರು. ಮಂತ್ರಿಯವರ ಖಾಸಾ ಬಂಟನೊಬ್ಬ, ಕರಡಿಯವರಿಗೆ ಪರಿಹಾರನ? ಜೋರಾಗಿ ನಕ್ಕಿದ್ದ, ಆ ಮಂತ್ರಿಯವರಂತೋ, ನೋಡೋ ಈ ಕರಡಿ ಆಡಿಸೋರಿಗೆ ಪರಿಹಾರ ಬೇಕಂತೆ, ಅಂತ ಕಿಚಾಯಿಸಿದ್ದರು. ಹೋಗ್ರೊ, ಹೋಗ್ರೋ ಅಂತ ಗದರಿಸಿ ಕಳಿಸಿಕೊಟ್ಟರು. ಈ ಬಗ್ಗೆ ಫೋನ್ ಮಾಡಿ ನೋವನ್ನು ಹಂಚಿಕೊಂಡಿದ್ದ ರಾಜಹುಸೇನ್. 

ಆಶ್ಚರ್ಯಕರ ಘಟನೆಯೊಂದು, ಸರಕಾರ ಬಿದ್ದು ಚುನಾವಣೆ ಬಂದಾಗ ನಡೆದಿತ್ತು. ನಮ್ ಮಂದಿ ನನ್ ಕೈ ಬಿಡಾಕಿಲ್ಲ ಬಿಡ್ರಿ ಅಂತ ನಂಬಿಕೆಯಲ್ಲಿದ್ದ ಮಂತ್ರಿಗೆ, ಜನ ತಮ್ಮ ಪವರ್ ತೋರಿಸಿದರು, ಒಬ್ಬ ಖಲಂದರನು ಈ ಮಂತ್ರಿಗೆ ಓಟು ಹಾಕಲಿಲ್ಲ. ಕಡಿಮೆ ಮಾರ್ಜಿನ್‌ನಲ್ಲಿ  ಆ ಮಂತ್ರಿ ಸೋತಿದ್ದ. ಖಲಂದರರ ಕೋಪವೆಲ್ಲಾ ಆಗ ಹೊರಗೆ ಬಂದಿತ್ತು. ನಾವು ಮಂದಿ ಕಮ್ಮಿ ಇದ್ದೀವಿ ಅಂತ, ನಮ್ಮ  ಕಡೆ ನೋಡದ ಮಂದಿ ಕತೀರಿ ಇದು, ಹೋದ ಸರ್ತಿ ಓಟ್ ಹಾಕಿ ಸೋತ್ವಿ, ಈ ಸರ್ತಿ ಓಟ್ ಹಾಕದೆ ಗೆದ್ವಿ, ಅಂತ ತಾನೆ ಎಂ.ಎಲ್.ಎ ಆದನೇನೋ ಅನ್ನುವ ಹಾಗೆ, ಗಂಗಾವತಿಯ ಹುಲಿಹೈದರದಿಂದ ಯಾರೋ ಫೋನ್ ಮಾಡಿದ್ದರು. ಬಂಗಾರದ ಸೂಜಿ ಅಂತ ಕಣ್ ಚುಚ್ಚಿಕ್ಕೊಳ್ಳಾಕ್ಕಾಕ್ಕೈತೇನ? ಅಂತ ಕೊನೆಯಲ್ಲಿ ಹೇಳಿದ ಡೈಲಾಗ್ ತುಂಬಾ ಚೆನ್ನಾಗಿತ್ತು. ಸಮುದಾಯದ ನೋವುಗಳಿಗೆ ಸ್ಪಂದಿಸದ ಯಾವುದೇ ರಾಜಕಾರಣಿ, ಒಂದು ಸಲವೋ ಎರಡು ಸಲವೊ ಯಾಮಾರಿಸಬಹುದು. ಅದರಲ್ಲೂ ದನಿ ಇಲ್ಲದ, ಯಾರೂ ಕೇಳದ ಸಮುದಾಯವನ್ನು ದುರ್ಬಳಕೆ ಮಾಡಿಕೊಳ್ಳ್ಳುವ ವ್ಯವಸ್ಥೆ ನಮ್ಮ್ಮ ದೇಶದ ಒಂದು ಪ್ರಮುಖ ಲಕ್ಷ್ಷಣವೇನೋ ಎಂಬ ಅನುಮಾನವಂತೂ ಇದ್ದೇ ಇದೆ.

ಇದೇ ಸಂದರ್ಭದಲ್ಲಿ ಎಸ್.ಎಸ್.ಡಿ (ಸಮತಾ ಸೈನಿಕ ದಳ) ನೇತೃತ್ವದಲ್ಲಿ ಈ ಎಲ್ಲಾ ಸಮುದಾಯಗಳ ಪರವಾಗಿ ಅದರಲ್ಲೂ ವಿಶೇಷವಾಗಿ ಹಾವಾಡಿಗರ ಪರವಾಗಿ ನಡೆದ ಪ್ರತಿಭಟನಾ ಧರಣಿಯ ಬಗ್ಗೆ ಪ್ರಜಾವಾಣಿ ಪತ್ರಿಕೆಯ ಮೊದಲ ಪುಟದಲ್ಲೇ ವಿಶೇಷ ವರದಿ ಆಗಿದ್ದು ಸಹ ಕಾಕತಾಳೀಯ. ದಿನಾಂಕ ೧೧ ಆಗಸ್ಟ್ ೨೦೦೬ ಜರುಗಿದ ಪ್ರತಿಭಟನೆಯ ಬಗ್ಗೆ ವಿಶೇಷವಾಗಿ ವರದಿಗಳು ಪತ್ರಿಕೆಗಳಲ್ಲಿ ಕಾಣಿಸಿದವು. ಸೆಪ್ಟೆಂಬರ್ ೨೭, ೨೦೦೬ರಂದು, ಅರಣ್ಯ ಇಲಾಖೆಯ ಅಧಿಕಾರಿಗಳ ಸಲಹೆಯ ಮೇರೆಗೆ ಕರಡಿಯ ಮಾಲಿಕತ್ವದ ಬಗ್ಗೆ ಅರ್ಜಿಗಳನ್ನು ಸಲ್ಲಿಸಲಾಯಿತು. ಹಲವಾರು ತಿಂಗಳು ಅರಣ್ಯ ಇಲಾಖೆಯನ್ನು ಎಡತಾಕಿ ಕೊನೆಗೂ ತನಿಖೆ ನಡೆಸಿದ ಅರಣ್ಯ ಇಲಾಖೆ, ಮಾಲಿಕತ್ವ ಕೊಡಲು ನಿರಾಕರಿಸಿತು. ಆದರೆ ಪರಿಹಾರದ ಬಗ್ಗೆ ಯೋಚಿಸುವುದಾಗಿ ಹೇಳಿತು. ಈ ಸಂಬಂಧ ಬಳ್ಳಾರಿಯ ಜಿಲ್ಲಾಧಿಕಾರಿಯವರಿಗೆ ಪರಿಹಾರದ ಯೋಜನೆಯನ್ನು ಸಲ್ಲಿಸಲು ಪತ್ರ ಬರೆಯಿತು. ಮಾಲಿಕತ್ವದ ಪರವಾನಗಿ ಪತ್ರಕ್ಕಾಗಿ ಕರ್ನಾಟಕದಾದ್ಯಂತ ಹರಡಿ ಹೋಗಿರುವ ಸಮುದಾಯದ ಜನರನ್ನು ಸಂಪರ್ಕಿಸಿ ಅರ್ಜಿಗಳನ್ನು ಸಲ್ಲಿಸಲಾಯಿತು, ದುರಂತವೆಂದರೆ, ಅದುವರೆಗೂ ಎಷ್ಟು ಮಂದಿ ಖಲಂದರರಿದ್ದಾರೆ ಎನ್ನುವ ಬಗ್ಗೆ ಅರಣ್ಯ ಇಲಾಖೆಗೂ ಗೊತ್ತಿರಲಿಲ್ಲ. ಈ ಅರ್ಜಿಗಳು ಅರಣ್ಯ ಇಲಾಖೆ ಮತ್ತು ಪ್ರಾಣಿದಯೆ ತೋರಿಸುವ ರಾಷ್ಟ್ರ ನಾಯಕರ ಕೃಪಾಪೋಷಿತ ನಾಟಕಮಂಡಳಿಗಳಿಗೆ ಖಲಂದರರ ಎದೆ ಸೀಳಲು ಸ್ವತಃ ಕೈಯಿಂದ ಕೊಟ್ಟ ಗುರಾಣಿ, ಈಟಿ, ಬಿಲ್ಲು, ಖಡ್ಗಗಳಾದವು. ಸಮುದಾಯದ ಮೇಲೆ ಮತ್ತೆ ದಾಳಿ ಮಾಡಲು, ಕರಡಿಗಳನ್ನು ವಶಪಡಿಸಿಕೊಳ್ಳುವಲ್ಲಿ ದುರುಪಯೋಗಗೊಂಡವು!

ರಾಜಹುಸೇನ್, ಅವನ ತಮ್ಮ ರಾಜಸಾಬ್, ಗೋಕಾರ್‌ಸಾಬ್, ಗಿಡ್ಡ ಶಾಮೀದ್ ಮತ್ತು ನಾನು ಖಲಂದರರು ಇದ್ದ ಎಲ್ಲಾ ಹಳ್ಳಿಗಳನ್ನು ಸುತ್ತಾಡಿ ಎಲ್ಲರ ಮಾಹಿತಿ ಪಡೆದೆವು. ಆಗಿನ ನನ್ನ ಸಂದರ್ಭ ತೀರ ಇಕ್ಕಟ್ಟಿನದು, ಮನೆಯಲ್ಲಿ ಊಟಕ್ಕೂ ಲಾಟರಿ! ಅದ್ಯಾರ್ಯಾರನ್ನೋ ನಂಬಿಕೊಂಡು ಎಲ್ಲವನ್ನು ಕಳಕೊಂಡು ಬರಿಗೈಲಿ ನಿಂತಿದ್ದೆ. ಪರಿಸ್ಥಿತಿ ಯಾವ ಮಟ್ಟ ತಲುಪಿತೆಂದರೆ, ನನ್ನ ಪುಟ್ಟಮಗಳು ಹೊಟ್ಟೆಹಸಿವು ತಾಳಲಾರದೆ, ತಟ್ಟೆ ತೆಗೆದುಕೊಂಡು ಎದುರು ಮನೆಗೆ ಅನ್ನ ಕೇಳಲು ಹೋಗಿದ್ದಳು. ಸಾಕು ಸಂಘಟನೆಗಳ ಸಹವಾಸ, ಮನೆಯಲ್ಲಿ ನನ್ನನ್ನು ಇನ್ನು ಬರಗೊಡುವುದಿಲ್ಲ, ಸಣ್ಣ ಪುಟ್ಟ ಅಂಗಡಿಯನ್ನಾದರೂ ಇಟ್ಟುಕೊಂಡು ಬದುಕು ಸಾಗಿಸಬೇಕು ಎಂದುಕೊಂಡಿದ್ದೆ, ನನ್ನ ಸಮಸ್ಯೆಗಳ ಅರಿವಿದ್ದ ರಾಜಹುಸೇನ್, ಗೋಕಾರ್‌ಸಾಬ್ ನೊಂದಿಗೆ ಮನೆಗೆ ಬಂದ, ಒಂದು ತಿಂಗಳಿಗಾಗುವಷ್ಟು, ರೇಷನ್, ನನ್ನ ಹೆಂಡತಿಯ ಕೈಗೆ ಒಂದು ಸಾವಿರ ರೂಪಾಯಿ ಕೊಟ್ಟು ಭಾಬಿ, ಅಣ್ಣನನ್ನ ಇನ್ನು ಹದಿನೈದ್ ನಮ್ಮೂರ್ ಕಡೆ ಕರೆದುಕೊಂಡು ಹೋಗ್ತೀವಿ ಏನಾದ್ರು ಬೇಕಿದ್ರೆ ಫೋನ್ ಮಾಡ್ರಿ ಅಂತ, ನನ್ನನ್ನು ಕರೆದುಕೊಂಡು ಹೊರಟೇ ಬಿಟ್ಟ. ನನ್ನ ಹೆಂಡತಿಗೆ ಹಣ ತೆಗೆದುಕೊಳ್ಳುವುದಕ್ಕೆ ಇರುಸು ಮುರುಸು, ತಗೋ ಅಂತ ತಲೆ ಆಡಿಸಿದೆ, ನನ್ನನ್ನೊಮ್ಮೆ ದೂರುಗುಟ್ಟಿ ನೋಡಿದಳು, ಭೂಮಿ ನನ್ನನ್ನು ನುಂಗಿದಂಗಾಯಿತು.

ಪರಿಚಯಸ್ಥ ಸ್ನೇಹಿತರಿಗೆ ಖಲಂದರರ ಬಗ್ಗೆ ಹೇಳಿದ್ದೆ ಅವರ ಮೂಲಕ ಅಗ್ನಿಯಲ್ಲಿ ಕರಡಿ ಆಡಿಸುವ ಮತ್ತು ಹಾವಾಡಿಸುವವರ ಬಗ್ಗೆ ವಿಶೇಷ ವರದಿ ಪ್ರಕಟಗೊಂಡಿತು. ಗೌರಿಲಂಕೇಶ್ ನೇತೃತ್ವದ ಲಂಕೇಶ್ ಪತ್ರಿಕೆಯೂ ಸಹ ಈ ಬಗ್ಗೆ ಬರೆಯಿತು. ಪ್ರಜಾವಾಣಿ ತನ್ನ ಕರ್ನಾಟಕ ದರ್ಶನದಲ್ಲಿ ಈ ಸಮುದಾಯದ ಬಗ್ಗೆ ವಿವರವಾದ ದಾಖಲೆಯನ್ನು ಮಾಡಿತು. ಆಶ್ಚರ್ಯವೆಂದರೆ, ಇದೇ ಸಂದರ್ಭದಲ್ಲಿ ಮೃತಪಟ್ಟ ಕ್ರೊಕೋಡೈಲ್ ಹಂಟರ್ ಇರ್ವಿನ್ ಬಗ್ಗೆ ಪುಟಗಟ್ಟಲೇ ಬರೆದು ಅವನ ಹಿಂಸಾತ್ಮಕ ಪ್ರಾಣಿದಯೆಯನ್ನು ನಿಜವಾದ ಪ್ರಾಣಿದಯೆಯೆಂದು, ಅವನಿಗೆ ಅಪಾರ ಹಣ ಮತ್ತು ಯಶಸ್ಸು ತಂದುಕೊಟ್ಟಂತಹ ಹಿಂಸಾತ್ಮಕ ದಯೆಯ ಬಗ್ಗೆ ಪುಟಗಟ್ಟಲೇ ಬರೆದು ಹಲವರು ಮೊಸಳೆ ಕಣ್ಣೀರು ಸುರಿಸಿದರು. ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆಯೆಂದರೆ, ಕನ್ನಡದ ದಿನಪತ್ರಿಕೆಯೊಂದು ’ಕೋಲೆ ಬಸವ’ ಅಥವಾ ’ಗಂಗೆತ್ತು’ ಆಡಿಸುವುದನ್ನು ನಮ್ಮ ಸಂಸ್ಕೃತಿಯ ವೈಶಿಷ್ಟ್ಯ ಎಂದು ಫೋಟೋ ಪ್ರಕಟಿಸಿದ ಪತ್ರಿಕೆ ಮಾರನೆಚಿi ದಿನ ಅದೇ ಬಳಗದ ಮತ್ತೊಂದು ಪತ್ರಿಕೆಯಲ್ಲಿ, ಕೋಲೆ ಬಸವ ಆಡಿಸುವ ಸುಮಾರು ೨೪ ಜನರನ್ನು ಭಿಕ್ಷಾಟನೆಗಾಗಿ ಪ್ರಾಣಿಗಳನ್ನು ಬಳಸುವವರನ್ನು ಬಂಧಿಸಲಾಗಿದೆಯೆಂಬ ವರದಿಯನ್ನು ಸಹ ಪ್ರಕಟಿಸಿತು. ಇದಕ್ಕೆ ಏನೆನ್ನ ಬೇಕು?

೨೦೦೬ರಲ್ಲಿ ಪತ್ರಿಕೆಗಳ ಮೂಲಕ ಸಂಗ್ರಹಿಸಿದ ಬಂಧನಕ್ಕೊಳಪಟ್ಟ ಕರಡಿಗಳು ಮತ್ತು ಅವುಗಳ ವಿವರ:

ಜುಲೈ ೨, ೨೦೦೬                ೬ ಕರಡಿಗಳು
ಜುಲೈ ೩೧, ೨೦೦೬                ೧ ಕರಡಿ
ಆಗಸ್ಟ್ ೨೪, ೨೦೦೬                ೫ ಕರಡಿಗಳು
ಅಕ್ಟೋಬರ್ ೧೨, ೨೦೦೬            ೧ ಕರಡಿ

ಏನು ಮಾಡಿದರೂ ಸಮಸ್ಯೆ ಪರಿಹಾರವಾಗುವ ಲಕ್ಷಣಗಳು ಕಾಣಲಿಲ್ಲ. ಕೊಪ್ಪಳದಲ್ಲ್ಲೊಂದು ಜಿಲ್ಲಾಮಟ್ಟದ ಹೋರಾಟವನ್ನು ಮಾಡಲಾಯಿತು. ಎ.ಐ.ಟಿ.ಯು.ಸಿ ವತಿಯಿಂದ ದೆಹಲಿಯವರೆಗೂ ಹೋಗಿ ಬಂದರು, ಅಲ್ಲಿನ ಎಂ.ಪಿ.ಗಳಿಗೆ ಮನವಿ ಸಲ್ಲಿಸಿ ಬಂದರು. ಪಾರ್ಲಿಮೆಂಟಿನಲ್ಲಿ ಈ ಬಗ್ಗೆ ಚರ್ಚೆಯಾಗಲೇ ಇಲ್ಲ. ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಮುದಾಯಕ್ಕೆ ಒಂದೇ ಒಂದು ಕೊರತೆ, ಅದು ತಾನು ಇಲ್ಲಿನ ದೊಡ್ಡ ಜಾತಿಯ ಭಾಗವಾಗದಿರುವುದು. ದೊಡ್ಡಜಾತಿಯ ಮಚ್ಚೆ ಇರುತ್ತಿದ್ದರೆ ಇವರಿಗೆ ಸರಕಾರ ಬೇಡವೆಂದರೂ ಸಹ ಪರಿಹಾರದ ಪ್ಯಾಕೇಜ್ ಸಿಗುತ್ತಿತ್ತು.

ಹೋರಾಟ ಚುರುಕುಗೊಂಡಾಗಲೆಲ್ಲಾ, ದನಿ ಅಡಗಿಸುವ ಕೆಲಸಗಳು ಆಗಿವೆ, ಹೊಸಪೇಟೆಯ ವಕೀಲನೊಬ್ಬ ತನ್ನ ರಾಜಕೀಯಕ್ಕಾಗಿ, ಚೌಕಾಸಿಗಾಗಿ ಇವರ ಹೆಸರೇಳಿದ್ದು ಆಗಿದೆ. ಸಂಘಟನೆ ಗಟ್ಟಿಯಾಗಿ ಕೂಗು ಹಾಕುವಾಗಲೇ ಸಂಘಟನೆಯನ್ನು ಒಡೆಯುವುದಕ್ಕಾಗಿ ಇದೇ ಸಮುದಾಯದ ಜನರನ್ನು ಇಬ್ಭಾಗ ಮಾಡುವ ಕೆಲಸ ಇಂದಿನವರೆಗೂ ನಡೆದುಕೊಂಡು ಬರುತ್ತಲೇ ಇದೆ. ಸಂಘಟನೆಗೆ ಎಲ್ಲರೂ ಸೇರಿದ್ದರೂ ಸಹ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಂಡವಾಳಮಾಡಿಕೊಂಡು ತಮಗೆ ಬೇಕಾದವರಿಗೆ ಐದೈದು ಸಾವಿರಕೊಟ್ಟು ತಮ್ಮ್ಮ  ಕಡೆಸೆಳೆಯುವ ಮಂದಿ ಇದ್ದಾರೆ. ಇದನ್ನೆಲ್ಲಾ ನೋಡಿ ರೋಸಿ ಹೋದ ಬುಡಾನ್ ಸಾಬ್ ಕೆಲಸ ಬಿಟ್ಟು ಬಂದಿದ್ದಾನೆ. ಹೋರಾಟದ ಮುಖ್ಯ ಜಯವೊಂದಿದೆ; ಪರಿಹಾರ ರೂಪದಲ್ಲಿ ಹಣ ಸ್ವಲ್ಪ ಬೇಗ ಬಂದಿದೆ. ಎಲ್ಲರಿಗೂ ಚುರುಕು ಮುಟ್ಟಿದೆ. ಸದ್ಯಕ್ಕೆ ಎಡಪಂಥೀಯರಿಂದ ದೂರವಾಗಿ ತಮ್ಮ್ಮದೇ ರೀತಿಯಲ್ಲಿ ಜನ ಸಂಘಟಿತರಾಗುತ್ತಿದ್ದಾರೆ, ಈ ಸುದ್ದಿ ಮುಟ್ಟಿದ ಕೂಡಲೇ ಕೆಲವರಿಗೆ ಐದೈದು ಸಾವಿರದ ಪರಿಹಾರ ಮನೆಗೆ ಹುಡುಕಿಕೊಂಡು ಬಂದಿದೆ.

ದುರಂತದ ಸುದ್ದಿಯೆಂದರೆ, ದಿನಾಂಕ ಮಾರ್ಚ್ ೭, ೨೦೧೨ ರಂದು ಸುವರ್ಣವಾಹಿನಿ ರನ್ನಿಂಗ್ ನ್ಯೂಸ್‌ನಲ್ಲಿ, ಸಂಸ್ಥೆಯ ಸುಪರ್ದಿಯಲ್ಲಿದ್ದ ಕರಡಿಗಳಲ್ಲಿ ಕಳೆದ ೮ ತಿಂಗಳಲ್ಲಿ ೧೮ ಕರಡಿಗಳು ಸತ್ತ ಸುದ್ದಿ ಬಿತ್ತರಿಸಿತು. ಬಹುಪಾಲು ಕರಡಿಗಳು ನಮ್ಮ ಖಲಂದರರ ಹತ್ತಿರದಿಂದ ಕಾನೂನಿನ ಕಾರಣವನ್ನಿಟ್ಟು ಸೆರೆಹಿಡಿದ ಕರಡಿಗಳೇ ಆಗಿರುವುದು ಕಾಕತಾಳೀಯವೇನಲ್ಲ ಬಿಡಿ. ಇದಕ್ಕೂ ಮುಂಚೆ ದಿನಾಂಕ ೧ ಮಾರ್ಚ್ ೨೦೧೨ ರಂದು ಪ್ರಜಾವಾಣಿಯಲ್ಲಿ ಕಳೆದ ೭ ತಿಂಗಳಲ್ಲಿ ೧೪ ಕರಡಿಗಳು ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಕರಡಿಧಾಮದಲ್ಲಿ ಸಾವನ್ನಪ್ಪಿವೆ ಎಂಬ ಸುದ್ದಿ ಎರಡನೇ ಪುಟದಲ್ಲಿ ಬಂದಿದೆ. ಸಾವಿಗೆ ಸಾವಿರ ಕಾರಣಗಳಿರಬಹುದು, ನಮ್ಮ ಖಲಂದರ ಬಳಿ ಸತ್ತಿದ್ದರೆ ಅದು ಮಗ ಅಥವಾ ಅಪ್ಪನ ಸಾವಾಗಿರುತ್ತಿತ್ತು ಸಾವಿಗೂ ಒಂದು ಘನತೆ ಇರುತ್ತಿತ್ತು. ಅನಾಥವಾಗಿ ಸತ್ತದ್ದು ಮಾತ್ರ ತೀರ ನೋವನ್ನುಂಟುಮಾಡುವ ಸಂಗತಿ. ಸತ್ತರವರ ಜೊತೆ ಯಾರೂ ಸಾಯುವುದಿಲ್ಲ ಬಿಡಿ ಯಾಕೆಂದರೆ, ಸಾವು ಯಾವಾಗಲೂ ಅನಾಥವಾಗಿಯೇ ಇರುತ್ತದೆ. ಸತ್ತವರೂ ಸತ್ತಮೇಲೆ ಅನಾಥರಾಗಿಬಿಡುತ್ತಾರೆ.

ಪುಟದ ಮೊದಲಿಗೆ
 
Votes:  4     Rating: 4.5    
 
 
ಸಂಬಂಧಿಸಿದ ಲೇಖನಗಳು
  ಮೂಲದ ಮಾಣಿಯೂ ಕೋಣವೂ ದೈವಗಳಾದವು:ಲಕ್ಷ್ಮೀಪ್ರಸಾದ್ ಸರಣಿ
  ಶ್ರೀನಿವಾಸ ಹಾವನೂರರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ರಕ್ಷಾನ ಬಾಲ್ಯಕಾಲ:ಪೆಜತ್ತಾಯರ ಸರಣಿ
  ರಾಜೇಶ್ವರಿ ಕಥನ:ಕಾಡೆಂಬ ಕಡಲಿನ ಮೂರನೇ ಕಂತು
  ಭೂತದೈವಗಳ ಲೋಕದಲ್ಲಿ ಲಕ್ಷ್ಮೀಪ್ರಸಾದ್ ಪಯಣ ಆರಂಭ
  ಗಿರೀಶ್ ಶ್ರೀಧರ ದೀಕ್ಷಿತರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ‘ನಂಗೆ ಅಮ್ಮ ಹೇಳಿದ್ದು’ ಕಥನ ೩:ಕಾಡೆಂಬ ಕಡಲಿನಲ್ಲಿ ೨
  ಶಿಶುಪಾಲನೆಯ ಸವಿ ನೆನಪುಗಳು:ಪೆಜತ್ತಾಯರ ‘ರಕ್ಷಾ’ ಸರಣಿ
  ಸಂಶೋಧನೆಗಳ ಕುರಿತು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಪೆಜತ್ತಾಯರು ಬರೆದ ‘ನಮ್ಮ ರಕ್ಷಕ ರಕ್ಷಾ’ ಆರಂಭವಾಯಿತು
  ರಾಜೇಶ್ವರಿ ತೇಜಸ್ವಿ ಕಥನ ೨:ಕಾಡೆಂಬ ಕಡಲಿನಲ್ಲಿ
  ಡಾ. ಬಿ ಎ. ಸಾಲ್ತೊರೆ:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಭಗವತಿಯ ಲಯಾಂಗ, ಭಗವತಿಯ ಭೋಗಾಂಗ:ತೋಳ್ಪಾಡಿ ಲಹರಿ
  ರಾಜೇಶ್ವರಿ ತೇಜಸ್ವಿ ಕಥನ ೧:ಝರಿಯೂ ರಾಜ ಕಾಗೆಯೂ
  ಬಾ.ರಾ. ಗೋಪಾಲರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಊರದೈವಗಳ ಸಂಗದಲ್ಲಿ:ಪೆಜತ್ತಾಯರ ರೈತ ಪುಟಗಳು
  ದೇವತೆಗಳ ಆಸೆಬುರುಕತನಗಳು:ತೋಳ್ಪಾಡಿ ಸೌಂದರ್ಯ ಲಹರಿ ೪೧
  ಅಗ್ರಹಾರದ ಲಕ್ಷ್ಮಿ ನರಸಿಂಹನ್:ಅಪ್ಪಾಜಿರಾಯರ ಸರಣಿ
  ಜ್ಯೋತಿರಾಜನ ಪ್ರೇಮ ತಿರಸ್ಕಾರದ ಕಥನ:ಮುದನೂರ್ ಸರಣಿ
  ಕೆ.ಟಿ ಹೇಳಿದ ತೇಜಸ್ವಿಯವರ ಕೀಟಲೆಯ ಕಥೆಗಳು:ಹೆತ್ತೂರು ಸರಣಿ
  ನೆಂಟರಾಗಿ ಬಂದ ಕಾಡಿನ ವಾರಸುದಾರರು:ಪೆಜತ್ತಾಯರ ಪುಟಗಳು
  ಮಂಜೇಶ್ವರ ಗೋವಿಂದ ಪೈಗಳು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಕರ್ವಾಲೊಗೆ ಡ್ರಾಯಿಂಗ್ ಮಾಡಿದ್ದು:ಕೆ.ಟಿ ಸರಣಿ
  ಎಲ್ಲಿಹುದು ಎನ್ನ ದೋಣಿ?:ಪೆಜತ್ತಾಯರ ರೈತಪುಟಗಳು
  ಅಂಜಲಿ ಕುಂಭಮೇಳ ಕಥಾನಕದ ಕೊನೆಯ ಕಂತು
  ತೇಜಸ್ವಿಯ ತೋರಿಸಿಕೊಟ್ಟ ಪ್ರೊಫೆಸರ್:ಕೆ.ಟಿ ಸರಣಿ
  ಕೇಸರಿಯ ವನವಾಸದ ಮೊದಲ ದಿನಗಳು:ಪೆಜತ್ತಾಯರ ಪುಟಗಳು
  ಸ್ವಚ್ಛ ಕನ್ನಡಿಯಂತಿರುವ ಪ್ರಜ್ಞಾಸ್ಥಿತಿ:ಸೌಂದರ್ಯ ಲಹರಿ ೪೦
  ದೇವಮಾನವರ ವಿಕೃತಿಗಳು:ಮುಂದುವರಿದ ಅಂಜಲಿ ಕುಂಭಮೇಳ ಕಥೆ
  ಕಲ್ಲಪ್ಪ ಕುಂದಣಗಾರ:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಕೇಸರಿಗೇ ಒದ್ದ ನಾಟಿದನ:ಪೆಜತ್ತಾಯರ ಪುಟಗಳು
  ಕೆ.ಟಿ.ಮಾಡಿಕೊಂಡ ತೇಜಸ್ವಿ ನೆನಪುಗಳು:ಹೆತ್ತೂರು ಸರಣಿ
  ಬತ್ತಲೆ ನಾಗಾ ಬಾಬಾಗಳ ಜೊತೆ:ಅಂಜಲಿ ಕುಂಭಮೇಳ ಕಥೆ
  ಡಾ. ಗೋವಿಂದ ಸ್ವಾಮಿರಾವ್ ಗಾಯಿ: ಅಪ್ಪಾಜಿರಾಯರ ಸರಣಿ
  ಪವರ್ ಟಿಲ್ಲರು ಸೆಗಣಿ ಹಾಕುವುದಿಲ್ಲ:ಪೆಜತ್ತಾಯರ ಪುಟಗಳು
  ದ್ವಾರಕಾನಗರಿಯಲಿ ನವಿಲುಗರಿಧಾರಿ:ಅಂಜಲಿ ಕುಂಭಮೇಳ ಕಥೆ ೪
  ಆರ್.ಎಸ್.ಪಂಚಮುಖಿಯವರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ನಾಗ ಐತಾಳರ ಅಮೆರಿಕಾ ಸರಣಿ ಕೊನೆಯ ಕಂತು
  ನಾನು ಉಣ್ಣುವುದೆಲ್ಲ ನಿನ್ನದೇ:ತೋಳ್ಪಾಡಿ ಸೌಂದರ್ಯ ಲಹರಿ
  ಅಂತೂ ಬಂತು ಪವರ್ ಟಿಲ್ಲರ್:ಪೆಜತ್ತಾಯರ ಪುಟಗಳು
  ನಾಭಿ ಹಿಂಡುವಷ್ಟು ಅಳು:ಅಂಜಲಿ ಕುಂಭಮೇಳ ಕಥೆ ೩
  ಪಿ.ಬಿ. ದೇಸಾಯಿ: ಅಪ್ಪಾಜಿ ರಾಯರ ಹಸ್ತಪ್ರತಿ ಸರಣಿ
  ಕಾಡ ಬದಿಯ ಪುಟ್ಟ ಗುಡಿಸಲು:ಪೆಜತ್ತಾಯರ ಪುಟಗಳು
  ಸೊರಗಿದ್ದ ಕನ್ನಡ ಯೋಗಗುರು:ಅಂಜಲಿ ಕುಂಭಮೇಳ ಕಥೆ
  ಕೋಟೆಯಲ್ಲಿ ಕಾಯುತ್ತಿದ್ದಾಕೆ:ಮುದನೂರ್ ಕೋತಿರಾಜ್ ಸರಣಿ
  ಮೈಸೂರುಹಟ್ಟಿ ಕೃಷ್ಣ ಅಯ್ಯಂಗಾರರು: ಅಪ್ಪಾಜಿರಾಯರ ಸರಣಿ
  ಪಂಚನಬೆಟ್ಟು ಎಂಬ ಶಹರ:ಪೆಜತ್ತಾಯರ ಪುಟಗಳು
  ಕುಂಭ ಮೇಳ ನೋಡಿ ಬಂದು ಅಂಜಲಿ ಬರೆವ ಕಥೆಯ ಮೇಳ:೧
  ಹೊಸಕೋಟೆ ಕೃಷ್ಣ ಶಾಸ್ತ್ರಿಗಳು:ಅಪ್ಪಾಜಿರಾಯರ ಸರಣಿ
  ಅನಿವಾಸಿ ಕನ್ನಡ ಕಲರವ:ಐತಾಳರ ಅಮೇರಿಕಾ ಸರಣಿ
  ಇನ್ನು ಮುಂದೆ ಇದು ಗೋಟ್ನವಲ್ಲ ಫಾರ್ಮು:ಪೆಜತ್ತಾಯರ ಪುಟಗಳು
  ರುದ್ರಪಟ್ಟಣಂ ಶಾಮಾಶಾಸ್ತ್ರಿ:ಅಪ್ಪಾಜಿರಾಯರ ಸರಣಿ
  ಬೆಟ್ಟದ ಜೀವ ಹೊತ್ತಿಸಿದ ಚಾರಣದ ಕಿಚ್ಚು:ಪೆಜತ್ತಾಯರ ಪುಟಗಳು
  ಅಂತಕನ ಅಂತ್ಯದ ಕುರಿತು:ತೋಳ್ಪಾಡಿ ಲಹರಿ
  ಆರ್. ನರಸಿಂಹಾಚಾರ್ಯರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ