`ಮರೀಬ್ಯಾಡರಿ ಮತ್ತ, ಇವತ್ತ ರಾತ್ರಿ ಮನಸೂರ ಅವರ ಹಾಡಿನ ಪ್ರೋಗ್ರಾಮ್ ಐತಿ. ಹಿಂಗಾಗಿ ಶೆರೆ-ಗಿರೆ ಕುಡಿಯೋ ಐಡಿಯಾನೂ ತಲ್ಯಾಗ ಹಾಕ್ಕೋಬ್ಯಾಡರಿ` ಎಂದು ಜಾಡರ ತಾಕೀತು ಮಾಡಿದ. ನಾನು ಮತ್ತು ಅಪ್ಪಿ ‘ಛೆ ಛೆ’ ಎಂದು ತಲೆ ಅಲ್ಲಾಡಿಸಿದೆವು. ಹಾಗೆಯೇ ಇವನೆಂಥ ಡಫರ್ ನನ್ ಮಗ ಎಂದು ಮೂಕ ವಿಷಾದದಿಂದ ಅವನ ಕಡೆಗೆ ನೋಡಿದೆವು. ನಮ್ಮ ಉಸ್ತಾದ ಮಲ್ಲಿಕಾರ್ಜುನ ಮನಸೂರರು ಹಾಡುವುದೆಂದರೇನು? ನಾವು ಹಾಡು ಕೇಳಲು ಶೆರೆ ಕುಡಿದುಕೊಂಡು ಹೋಗುವುದೆಂದರೇನು?
ಮನಸೂರರ ಖಾಯಂ ಭಕ್ತರಾದ ನಾವು ಅವರ ಸಂಗೀತವನ್ನು ಎಂದೂ ತಪ್ಪಿಸಿಕೊಳ್ಳುತ್ತಿದ್ದಿಲ್ಲ. ಅದರಲ್ಲೂ ಅವರ ಗುರುಗಳ ಹೆಸರಿನಲ್ಲಿ ಅವರು ಇಡೀ ರಾತ್ರಿ ನಡೆಸುತ್ತಿದ್ದ ಸಂಗೀತ ಗೋಷ್ಠಿಯನ್ನು ತಪ್ಪಿಸಿಕೊಂಡಿದ್ದೇ ಇಲ್ಲ. ಅಲ್ಲಿಯವರೆಗೂ ಆಕಾಶವಾಣಿ ಕಚೇರಿಯಿಂದ ಆಚೆಗಿದ್ದ ಅವರ ಮನೆಯಲ್ಲಿ ಸಣ್ಣ ಪ್ರಮಾಣದಲ್ಲಿ ಆ ಕಾರ್ಯಕ್ರಮ ನಡೆಯುತ್ತಿತ್ತು. ಅಷ್ಟೇನೂ ದೊಡ್ಡಮನೆ ಅಲ್ಲದ್ದರಿಂದ ನಾವು ಕಿಟಕಿಯ ಹೊರಗೆ ನಿಂತು ಕೇಳುತ್ತಿದ್ದೆವು. ಸಭ್ಯತನದ ಕಿಂಚಿತ್ತೂ ಲಕ್ಷಣಗಳು ನಮ್ಮಲ್ಲಿ ಕಾಣುತ್ತಿರಲಿಲ್ಲವಾದ್ದರಿಂದ ನಾವು ಸಂಗೀತ ಕೇಳಲು ಬಂದಿದ್ದೇವೆಂದು ಅವರ ಮಗ ರಾಜಶೇಖರ ಮನಸೂರರು ನಂಬುತ್ತಿರಲಿಲ್ಲ. ಆದರೂ ಅವರಿಂದ ಬೈಸಿಕೊಂಡರೂ ನಮ್ಮ ಉಸ್ತಾದರ ಹಾಡಿಗಾಗಿ ನಿಂತೇ ಕೇಳುತ್ತಿದ್ದೆವು. ಕ್ರಮೇಣ ಆ ಕಾರ್ಯಕ್ರಮ ದೊಡ್ಡದಾಗುತ್ತ ಬಂದಿದ್ದರಿಂದ ಆ ವರ್ಷ ನಮ್ಮ ಕಾಲೇಜಿನ ದಿನ್ನೆಯ ಕೆಳಗಿನ ಪುರುಷೋತ್ತಮ ಭವನಕ್ಕೆ ವರ್ಗಾವಣೆ ಆಗಿತ್ತು. ಮನಸೂರರು, ಬೇಂದ್ರೆಯವರು ಎಲ್ಲಿದ್ದರೂ ಅವರ ಸುತ್ತ ಒಂದು ಪುಟ್ಟ...