ಇಂಜನಿಯರಿಂಗ್ ಸೇರುವ ಕನಸು ಒಡೆದ ಮೇಲೆ ಬಿಎಸ್ಸಿ ಸೇರಲು ಸಿದ್ಧನಾದೆ. ನ್ಯಾಷನಲ್ ಕಾಲೇಜಿಗೆ ನಮಸ್ಕಾರ ಹೇಳಲೆ ಬೇಕಾಯಿತು. ಅಲ್ಲಿಗೆ ಅರ್ಜಿಯನ್ನು ಹಾಕಿರಲೆ ಇಲ್ಲ. ನ್ಯಾಷನಲ್ ಕಾಲೇಜಿನಲ್ಲಿ ಬಿ.ಇ ಸಂದರ್ಶನ ಮುಗಿಯುವ ಮೊದಲೆ ಪ್ರವೇಶ ಮುಗಿಸುವರು. ಅವರು ಆಗಲೆ ಪಾಠ ಪ್ರವಚನ ಪ್ರಾರಂಭಿಸಿದ್ದರು. ಕೆಲವರು ಅಲ್ಲಿಯೂ ಪ್ರವೇಶ ಪಡೆದು ನಂತರ ಬಿಇ ಸೀಟು ಸಿಕ್ಕಿದರೆ ಆ ಕಾಲೇಜಿಗೆ ಹೋಗುತಿದ್ದರು. ಕಟ್ಟಿದ ಶುಲ್ಕ ಹೋಗುತಿತ್ತು. ನಾನು ಯಥಾರೀತಿ ದುಡ್ಡು ದಂಡವಾಗುವುದೆಂದು ಅದರ ಯೋಚನೆ ಮಾಡಲೆ ಇಲ್ಲ. ಬೇರೆ ಕಡೆ ಸೇರಲೆ ಬೇಕಾಯಿತು. ಸೆಂಟ್ರಲ್ ಕಾಲೇಜಿನ ಭವ್ಯತೆ ಭಯ ಹುಟ್ಟಿಸಿತು. ಸಮೀಪ ಎಂದು ಆನಂದರಾವ್ ಸರ್ಕಲ್ಲಿನ ಹತ್ತಿರದ ರೇಣುಕಾಚಾರ್ಯ ಕಾಲೇಜು ಆರಿಸಿದೆ. ಅದು ಮೊದಲು ಬಸಪ್ಪ ಇಂಟರಮಿಡಿಯಟ್ ಕಾಲೇಜು ಎಂದು ಹೆಸರಾಗಿತ್ತು. ಆಗ ಪಿಯುಸಿ ಬದಲು ಎರಡು ವರ್ಷದ ಇಂಟರ್ಮಿಡಿಯಟ್ ಇದ್ದಿತು... ಅಲ್ಲಿಯೆ ಬಿಎಸ್ಸಿ ತರಗತಿಗೆ ಪ್ರವೇಶ ಪಡೆದೆ. ಆಗ ಪದವಿಗೆ ಎರಡು ಮೇಜರ್ ಮತ್ತು ಒಂದು ಮೈನರ್ ಓದಬೇಕಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ ಮೇಜರ್ ವಿಷಯವಾಗಿ ಆರಿಸಿಕೊಂಡೆ. ಗಣಿತ ಮೈನರ್ ಆಗಿತ್ತು ಎರಡುವಾರ ತರಗತಿಗೆ ಹೋಗಿರಲಿಲ್ಲ, ನನಗೆ ಅದೇಕೋ ರಸಾಯನಶಾಸ್ತ್ರದ ಪ್ರಯೋಗಾಲಯದಲ್ಲಿ ವಾರಕ್ಕೆ ಎರಡುದಿನ ಕೆಲಸ ಮಾಡುವುದು ಆಗದು ಎನ್ನಿಸಿತು. ಅಲ್ಲಿನ ವಾಸನೆ ಹಿಡಿಸಲಿಲ್ಲ. ಜತೆಗೆ ಕಡ್ಡಾಯವಾಗಿ ಪ್ರತಿವಾರ ಎರಡು ಪ್ರಯೋಗಗಳ ರೆಕಾರ್ಡ್ ಗಳನ್ನು ಬರೆಯಲೇಬೇಕಿತ್ತು. ಅದಕ್ಕೆ ಗಣಿತವನ್ನೆ ಮೇಜರ್ ವಿಷಯವಾಗಿ...