ಚಿಕ್ಕಯನಾಕನಹಳ್ಳಿಯ ತಾತಯ್ಯನ ಗೋರಿ ಮತ್ತದರ ಕುದುರೆ: ಎಸ್. ಗಂಗಾಧರಯ್ಯ ಅನುಭವ ಕಥನ
ನಮ್ಮ ಇಂಥ ದೈನೇಸಿ ಸ್ಥಿತಿಯ ಅರಿವಾಯಿತು ಎಂಬಂತೆ ಹುಚ್ಚೆದ್ದು ಓಡುತ್ತಿದ್ದ ಕುದುರೆ ಓಟದ ಬಿರುವನ್ನು ಕೊಂಚ ಕುಗ್ಗಿಸಿಕೊಂಡು ಎತ್ತಿ ಕುಕ್ಕಿದಂತೆ ಒಮ್ಮೆಗೇ ಕೆನೆದು ಮತ್ತೆ ಮಾಮೂಲಿ ಓಟಕ್ಕಿಟ್ಟುಕೊಂಡಿತು. ಇದನ್ನು ನಿರೀಕ್ಷಿಸದಿದ್ದ ಹಿಂದೆ ಕುಳಿತಿದ್ದ ನಾನು ಹೇಳದೇ ಕೇಳದೇ ಅಂತಾರಲ್ಲ ಹಂಗೆ ದೊಪ್ಪನೆ ಕೆಳಗೆ ಬಿದ್ದುಬಿಟ್ಟೆ. ಬಿದ್ದ ರಭಸಕ್ಕೆ ಕುಂಡಿಗಳನ್ನು ಗುಂಡು ಕಲ್ಲೊಂದರಿಂದ ಜಜ್ಜಿದಂತಾಯ್ತು. ತಕ್ಷಣ ಏನು ಮಾಡಬೇಕೆಂದು ತೋಚದೆ ಕೂತಲ್ಲೇ ಬಿಕ್ಕಳಿಸತೊಡಗಿದೆ. ನನ್ನ ಆ ಅನಾಥ ಅಳು ನನ್ನ ಅಡಿಯಲ್ಲಿ ಹರಿಯುತ್ತಿದ್ದ ನೀರೊಳಗೆ ಬೆರೆತು, ಅದು ಹರಿದೆಡೆಯಲ್ಲೆಲ್ಲಾ ಹರಿದಾಡುತ್ತಿರಲು ತಪಲನನ್ನು ಹೊತ್ತ ಕುದುರೆ ಸುರಿವ ಮಳೆಯಲ್ಲಿ ಮಾಯವಾಗಿಬಿಟ್ಟಿತ್ತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹನ್ನೊಂದನೆಯ ಕಂತು


