ಹೀಗೊಂದು ಕವಿತೆ ಹುಟ್ಟುತ್ತದೆ…

ಹೀಗೊಂದು ಕವಿತೆ
ಹುಟ್ಟುತ್ತದೆ…
ಅರಸನ ಕತ್ತಿಯ‌ ಅಲಗು
ಉದ್ಯಾನದ ಚಿಗುರ ಕತ್ತರಿಸಿದಂತೆ!

ರಾಜ್ಯದಲ್ಲಿ ತಲೆಗಳ ಕಳಕೊಂಡ ಮಂದಿ
ಬಯಲುಗಳಲ್ಲಿ ಮೇಯುತ್ತಿರುವುದನ್ನು
ಸ್ಪಷ್ಟವಾಗಿ ಗುರುತಿಸಬಹುದು
ಕವಿತೆಯು ಸುತ್ತಲಿನ
ಗಾಢ ಹತಾಶೆಯ ಮೇಲೆ ಬೆಳೆಯುತ್ತಿದೆ

ಅರೆಸತ್ತ ಅಂಬಿಗನು ಅರ್ಧಸತ್ಯದ ಹುಟ್ಟು ಹಿಡಿದು
ಮುಳುಗುವ ಸೂರ್ಯನ ಕಡೆಗೆ
ತೆಪ್ಪ ನೆಡೆಸಲು, ಆತನ ಮರಳುವಿಕೆಗಾಗಿ
ಈಗಲೂ ಕವಿತೆ ಬೆಂಚುಗಲ್ಲಿಗೊರಗಿ ಕಾಯುತ್ತಿದೆ

ಆಸ್ಥಾನದ ಕಮ್ಮಟದಲ್ಲಿ
ಅಕ್ಷರಗಳಿಗೆಲ್ಲಾ ಅರ್ಥವೇ ಇರದು
ಮೌನ ಹೊರಡಿಸುವ ತೀವ್ರ ಅಲೆಗಳಿಗೆ
ಓಗೊಡುವವರು ಯಾರಿದ್ದಾರೆ?
ರಾಜಧಾನಿ ಬೆತ್ತಲಾಗಿದೆ ಕವಿತೆಯ ಕಣ್ಣುಗಳಿಗೆ

ತೇಪೆ ಹಚ್ಚುವ ಕೆಲಸಕ್ಕೆ
ರಾಜ್ಯದಲ್ಲಿ ಭಾರಿ ಬೆಲೆಯಿರುವಾಗ
ಕವಿತೆಗೆ, ಊರ ತುಂಬಾ ಕಲಾವಿದರು
ತುಂಬಿ ಹೋಗಿರುವರೆಂದು ಕಂಡದ್ದು ಸುಳ್ಳಲ್ಲ!
ನಿಮ್ಮಲ್ಲೂ ನಾಳೆ ತೇಪೆ ಹಚ್ಚಲು ಬರುತ್ತಾರವರು
ಜಾಗ್ರತೆಯಿಂದ ಕಲೆಗಳನ್ನು ಕಾಪಾಡಿ.

ಕವಿತೆ ಕೆಲವರಿಗೆ ಬಹಳವಾಗಿ ಕಾಡಬಹುದು
ಅಥವಾ ನೀರಸವೇನಿಸಬಹುದು,
ದುಃಖ, ಹತಾಶೆ ಯಾ ಒಂಟಿತನದಿಂದ ಕೂಡಿರಬಹುದು
ಇಂದು ಕಾಣುವ ಸತ್ಯದಂತೆ

ಈಗೀಗ ಹುಟ್ಟುವ ಕವಿತೆಗಳೇ ಹೀಗೆ….
ಕತ್ತಿಯ ಪೆಟ್ಟಿನ ತುದಿಯಿಂದ!

ಆದಿತ್ಯ ಪ್ರಸಾದ್ ಪಾಂಡೇಲು ಮಂಗಳೂರಿನವರು
ಸದ್ಯ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಸಾಹಿತ್ಯ ಹಾಗು ರಂಗಭೂಮಿ ಇವರ ಆಸಕ್ತಿಯ ಕ್ಷೇತ್ರಗಳು.
ಸುಮಾರು 10 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ.
5ನೇ ತರಗತಿಯಲ್ಲಿರುವಾಗ ‘ಚಂದ್ರಯಾನ’ ಎಂಬ ಪುಟ್ಟ ಕವನ ಸಂಕಲನ ಪ್ರಕಟವಾಗಿತ್ತು