ಇದೆಲ್ಲದರಿಂದ ರೋಗ ಪರಿಹಾರ ಆಗುತ್ತದೆ ಎನ್ನಲಾಗದು, ಆಸ್ಮ ಪರಿಹಾರವಾಗುವುದು ಎಂದಿಲ್ಲ, ಸ್ವಲ್ಪ ತಹಬಂದಿಗೆ ಬರುತ್ತದೆ ಅಷ್ಟೆ. ಅಷ್ಟಾದರೆ ಅದೇ ದೊಡ್ಡ ವಿಷಯ. ಆರಂಭದಲ್ಲಿ ನನಗೆ ಏರುಪೇರುಗಳಿದ್ದುವು, ತಿಂಗಳಿಗೊಮ್ಮೆಯಾದರೂ ಏದುಸಿರು ಜೋರಾಗುತ್ತಿತ್ತು. ಆಗಲೆಲ್ಲ ನನ್ನ ಪಕ್ಕೆಗಳು ನೋಯುತ್ತಿದ್ದು ಸಹಿಸಲು ಕಷ್ಟವಾಗುತ್ತಿತ್ತು. ಅಮ್ಮ ನನ್ನ ಬೆನ್ನು ಉಜ್ಜುತ್ತಿದ್ದಳು. ಇಂಥದೊಂದು ಮಗುವಿಗೆ ಜನ್ಮವಿತ್ತೆನಲ್ಲ ಎಂದು ಅವಳಿಗೆ ದುಃಖವಾಗಿರಬೇಕು. ಉಬ್ಬಸದ ಸ್ಥಿತಿಯಲ್ಲಿ ಒದ್ದಾಡುತ್ತಿರುವವರನ್ನು ನೋಡುವುದೇ ಒಂದು ಸಂಕಟ. ರಾತ್ರಿ ನನಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ, ಎದೆ ಭಾರದಿಂದ. ಆಗ ಮಲಗಲೂ ಆಗದೆ, ಎದ್ದಿರಲೂ ಆಗದೆ, ಚಾವಡಿಯ ದಳಿಗೆ ಕೈಯಿರಿಸಿ ನೇತು ಚಡಪಡಿಸುತ್ತಿದ್ದುದು ನನ್ನ ನೆನಪಿಗೆ ಬರುತ್ತಿದೆ.
ಕವಿ ಕೆ.ವಿ. ತಿರುಮಲೇಶ್ ಬರೆದ ಲೇಖನ

 

ನಾನು ಅರೇಬಿಯಾದಲ್ಲಿ ಇಂಗ್ಲಿಷ್ ಕಲಿಸುತ್ತಿದ್ದಾಗ ನನಗೆ ‘ಆಸ್ಮ’ ಎಂಬ ಹೆಸರಿನ ಅನೇಕ ಮಂದಿ ವಿದ್ಯಾರ್ಥಿನಿಯರಿದ್ದರು. ಅರೇಬಿಕ್ ನಲ್ಲಿ ಆಸ್ಮ ಎಂದರೆ ‘ಚೆಲುವೆ’ ಎಂದು ಅರ್ಥ. ಇದು ಹುಡುಗಿಯರಿಗೆ ಸರ್ವೇ ಸಾಧಾರಣವಾಗಿ ಇರಿಸುವ ಜನಪ್ರಿಯ ಹೆಸರು. ಅವರನ್ನು ನೋಡಿ, ‘ಅರೇ! ಇವರೆಲ್ಲ ಎಷ್ಟು ಚಂದಾಗಿದ್ದಾರೆ, ಆದರೆ ನನಗಂಟಿದ ಆಸ್ಮಾ ಯಾಕೆ ಇಷ್ಟು ಕಠೋರವಾಗಿದೆ’ ಎಂದು ನನಗೆ ಅನಿಸಿದ್ದುಂಟು.

ನನ್ನ ಸುಮಾರು ಐದನೇ ವಯಸ್ಸಿನಲ್ಲಿ ನನಗೆ ಆಸ್ಮ (ಅಸ್ತಮಾ, ಉಬ್ಬಸ) ರೋಗ ಬಡಿಯಿತು. ಅದರ ಆರಂಭ ನನಗೆ ಸರಿಯಾಗಿ ನೆನಪಿಲ್ಲ. ನೆಗಡಿ, ಸಿಂಬಳ, ಕೆಮ್ಮು, ಆಕ್ಸಿ, ದಮ್ಮು, ಗುಂಯ್ ಗುಂಯ್, ತಲೆನೋವು, ಕೆಲವೊಮ್ಮೆ ಜ್ವರ ಸಹಿತ. ಇದು ಬರಲು ಕಾರಣ ಮನೆ ಹಿಂದಣ ಗುಳಿಗನ ವನದಲ್ಲಿರುವ ಗುಳಿಗನ ಭೂತ ಎನ್ನುತ್ತಿದ್ದಳು ನನ್ನ ಅಮ್ಮ. ಒಂದು ದಿನ ಅಮ್ಮ ಆ ಕಡೆ ಗೇರು ಬೀಜ ಹೆಕ್ಕುವುದಕ್ಕೆಂದು ಹೋಗಿದ್ದಳಂತೆ; ಅವಳ ಹಿಂದಿನಿಂದ ನಾನೂ. ವನ ನಮ್ಮ ಮನೆಯಿಂದ ಸ್ವಲ್ಪ ಎತ್ತರದಲ್ಲಿ ನಾಲ್ಕು ಮಾರು ದೂರದಲ್ಲಿ ಇತ್ತು. ಹಾಗೂ ನಡುವೆ ಕಡಿದಾದ ಒಂದು ಮುರ ಕಲ್ಲಿನ ಬರೆ. ನಾನು ಆಯ ತಪ್ಪಿ ಬರೆಯಿಂದ ಕೆಳಕ್ಕೆ ಬಿದ್ದುಬಿಟ್ಟೆನಂತೆ – ಎಂದರೆ ಸುಮಾರು ಹತ್ತಡಿ ಆಳಕ್ಕೆ. ಆಗ ತಲೆಗಾದ ಪೆಟ್ಟಿನ ಗುರುತಾಗಿ ನನ್ನ ಮುಂದಲೆಯಲ್ಲಿ ಕಾಸಿನಷ್ಟು ಜಾಗದಲ್ಲಿ ಕೂದಲಿಲ್ಲ; ಅಲ್ಲೊಂದು ನುಣುಪಾದ ತಗ್ಗಿದೆ ಅಷ್ಟೆ. ಆಚೀಚಿನ ಕೂದಲು ಆ ಜಾಗವನ್ನು ಮುಚ್ಚಿರುವುದರಿಂದ ಅದು ಹೊರಕ್ಕೆ ಕಾಣಿಸುವುದಿಲ್ಲ. ಆದರೆ ಇದೆ.

ಆ ಗಾಯದಿಂದ ಬಹಳ ರಕ್ತಸ್ರಾವವಾಗಿ ಅಮ್ಮನಿಗೆ ಗಾಬರಿಯಾಗಿರಬೇಕು. ಅವಳೇನು ಮಾಡಿದಳೋ ನನಗೆ ಗೊತ್ತಿಲ್ಲ. ನಮ್ಮೂರಿನಲ್ಲಿ ಡಾಕ್ಟರರಾಗಲಿ ವೈದ್ಯರಾಗಲಿ ಇರಲಿಲ್ಲ. ನನಗಂತೂ ಈ ಘಟನೆಯ ನೆನಪೇ ಇಲ್ಲ. ಈ ಘಟನೆಯ ನಂತರ ನನಗೆ ಆಸ್ಮ ಸುರುವಾಯಿತು, ಅದು ಗುಳಿಗನ ಉಪದ್ರವ ಎನ್ನುವುದು ನನ್ನ ಅಮ್ಮನ ನಂಬಿಕೆಯಾಗಿತ್ತು. (ಗುಳಿಗ ಒಂದು ಕ್ಷುದ್ರ ದೇವತೆ, ಭೂತ.) ಅಂತೂ ಆಗ ನನಗೆ ಹತ್ತಿದ ಆಸ್ಮ ನನ್ನನ್ನು ಜೀವಮಾನ ಇಡೀ ಬೇರೆ ಬೇರೆ ತೀವ್ರತೆಯಲ್ಲಿ ಕಾಡುತ್ತ ಬಂದಿದೆ. ವೈದ್ಯಕೀಯ ಅನುಕೂಲತೆ ಇಲ್ಲದ ಊರಿನಲ್ಲಿ ಇಂಥ ರೋಗವೊಂದು ಬಂದರೆ ಮನುಷ್ಯ ಹೋದನೇ – ಎಂದರೆ ಅನುಭವಿಸದೆ ಬೇರೆ ದಾರಿಯಿಲ್ಲ. ನನಗುಂಟಾದ ಬವಣೆಗಳಲ್ಲಿ ಕೆಲವರ ಕುರಿತು ಹೇಳುವುದು ನನ್ನ ಉದ್ದೇಶ.

ಆಸ್ಮಕ್ಕೆ ಮದ್ದೇನು? ಆಯುರ್ವೇದ ಯುನಾನಿ ಸಿದ್ಧ ಇತ್ಯಾದಿ ಪಂಡಿತ ವಿದ್ಯೆಗಳೆಲ್ಲ ನಮಗೆ ಗೊತ್ತಿಲ್ಲ. ಜನ ಜನಿತವಾದ ಕೆಲವೊಂದು ಉಪಾಯಗಳಷ್ಟೆ ಗೊತ್ತು. ವಾತ, ಪಿತ್ಥ, ಕಫ ಎಂಬ ಜನವರ್ಗೀಕರಣ ಕೇಳಿ ಗೊತ್ತು. ಮನುಷ್ಯರು ಈ ಮೂರರಲ್ಲಿ ಯಾವುದಾದರೂ ಒಂದು ವರ್ಗಕ್ಕೆ ಜನ್ಮತಃ ಸೇರಿರುತ್ತಾರೆ ಎಂದು ಲೆಕ್ಕ. ನಾನು ಸ್ಪಷ್ಟವಾಗಿಯೂ ಕಫಕ್ಕೆ ಸೇರಿದವನು. ಆಸ್ಮ ಕಫದ ಪಂಗಡದವರಿಗೆ ಬರುವ ರೋಗ. ಅಂಥವರು ಕೆಲವು ಪಥ್ಯ ಪಾಲಿಸಬೇಕು. (ನಾನು ಜನರ ನಂಬಿಕೆಯ ಬಗ್ಗೆ ಹೇಳುತ್ತಿದ್ದೇನೆ.) ಕಫಹಾರಿಯಾದ ಆಹಾರಗಳನ್ನು ಸೇವಿಸಬೇಕು; ಶೀತಕಾರಿಗಳು, ನಂಜು ವಜ್ರ್ಯ. ಎಂದರೆ ಮುಳ್ಳು ಸೌತೆ, ಹಲಸಿನ ಹಣ್ಣು, ದೀವಿಗುಜ್ಜೆ, ಬದನೆ ಇತ್ಯಾದಿ ಇತ್ಯಾದಿ. ಅಂತೆಯೇ ಕರಿದ ತಿಂಡಿಗಳು, ಸಿಹಿ ಪದಾರ್ಥಗಳು, ಹಾಲು ಮಜ್ಜಿಗೆ,. ತುಪ್ಪ, ಎಲ್ಲಾ ಜಿಡ್ಡು ಪದಾರ್ಥಗಳು, ಇನ್ನೇನುಳಿಯಿತು? ವಾಸ್ತವದಲ್ಲಿ ಇವೆಲ್ಲ ನನಗೆ ಪ್ರಿಯವಾದ ಸಂಗತಿಗಳು. ಸಹಜವಾಗಿಯೇ ಇಂಥ ಪಥ್ಯವನ್ನು ನಾನು ಕೆಲವು ಸಲ ಮೀರುತ್ತಿದ್ದೆ. ನಂತರ ಆಸ್ತಮಾ ಆಕ್ರಮಿಸಿದರೆ ಅದಕ್ಕೆ ಕಾರಣ ನಾನು ಪಥ್ಯ ಪಾಲಿಸದೆ ಇದ್ದದ್ದು ಎಂಬ ಆತ್ಮನಿಂದನೆ ನನ್ನಲ್ಲಿ ಮೂಡುತ್ತಿತ್ತು.

ಆದರೆ ಈ ರೋಗಕ್ಕೆ ಪಥ್ಯವೊಂದೇ ಸಾಲದಲ್ಲ? ಔಷಧಿಯೂ ಬೇಕು. ನಮ್ಮ ವರ್ಗದವರ ಪ್ರತಿ ಮನೆಯಲ್ಲೂ ಅಜ್ಜಿ ಮದ್ದಿನ ಸಂದೂಕವೊಂದು ಅದೆಲ್ಲೋ ಇರುತ್ತಿತ್ತು, ಅಜ್ಜಿ ಇರಲಿ, ಇಲ್ಲದಿರಲಿ. ಅದಕ್ಕೆ ಜಾಯಿಕಾಯಿ ಪೆಟ್ಟಿಗೆ ಎನ್ನುತ್ತಿದ್ದರು. ನಮ್ಮ ಮನೆಯಲ್ಲಿ ಅಜ್ಜಿಯಾಗಲಿ, ಅಜ್ಜನಾಗಲಿ ಇರಲಿಲ್ಲ, ಆದರೆ ಇಂಥದೊಂದು ಮನೆ ಮದ್ದಿನ ಪೆಟ್ಟಿಗೆ ಇತ್ತು. ಅದನ್ನು ನೋಡಿಕೊಳ್ಳುತ್ತಿದ್ದುದು ನನ್ನ ಅಮ್ಮ. ಅದರಲ್ಲಿ ಕೆಲವು ಕಾಳುಗಳು, ಬೀಜಗಳು, ಒಣ ಎಲೆಗಳು, ಬೇರುಗಳು, ತೊಗಟೆಗಳು ಕಚ್ಚಾ ಸ್ಥಿತಿಯಲ್ಲಿ ಇರುತ್ತಿದ್ದುವು. ಉದಾಹರಣೆಗೆ ಕರಿಮೆಣಸು, ತ್ರಿಫಲಾದಿ, ಲವಂಗ, ಏಲಕ್ಕಿ, ಜಾಯಿಕಾಯಿ, ಅಣಲೆ ಕಾಯಿ, ಒಣ ಶುಂಠಿ, ಅರಶಿಣ ಕೊಂಬು, ನನಗೀಗ ಮರೆತು ಹೋಗಿರುವ ಇನ್ನಿತರ ವಸ್ತುಗಳು; ಇವೆಲ್ಲವೂ ಏಕ ಕಾಲಕ್ಕೆ ಅಲ್ಲಿ ಇರುತ್ತಿದ್ದುವು ಎಂದಲ್ಲ, ಕೆಲವು ಇರುತ್ತಿದ್ದುವು, ಹಲವು ಇರುತ್ತಿರಲಿಲ್ಲ. ಕರಿಮೆಣಸಂತೂ ಇದ್ದೇ ಇರುತ್ತಿತ್ತು, ಯಾಕೆಂದರೆ ನಾವದನ್ನು ಬೆಳೆಯುತ್ತಿದ್ದೆವು. ಕರಿಮೆಣಸಿನ ಕಷಾಯ ಆಸ್ಮದವರಿಗೆ ಮುಖ್ಯ. ಅದೇ ರೀತಿ ಅಣಲೆ, ಶುಂಠಿಗಳು ಕೂಡ ಆಸ್ಮದವರಿಗೆ ಬೇಕು. ಇನ್ನು ಜೇನು ಸಹಾ ಅಗತ್ಯ. ಅದಾದರೆ ನಮ್ಮಲ್ಲಿ ಸದಾ ಇರುತ್ತಿತ್ತು. ಅಲ್ಲದೆ, ಮುಗಿದರೆ ತರಿಸಿಕೊಳ್ಳುವ ಸಾಧ್ಯತೆ ಇದ್ದೇ ಇತ್ತು. ಅಣಲೆಯ ಚೊಗರನ್ನು ಜೇನಿನ ಸಿಹಿಯಿಲ್ಲದೆ ಸಹಿಸುವುದು ಕಷ್ಟಕರ. ನನ್ನ ಭಾಗ್ಯಕ್ಕೆ ಜೇನು ಆಸ್ಮಕ್ಕೆ ವರ್ಜ್ಯವಾಗಿರಲಿಲ್ಲ.

ಇದೆಲ್ಲದರಿಂದ ರೋಗ ಪರಿಹಾರ ಆಗುತ್ತದೆ ಎನ್ನಲಾಗದು, ಆಸ್ಮ ಪರಿಹಾರವಾಗುವುದು ಎಂದಿಲ್ಲ, ಸ್ವಲ್ಪ ತಹಬಂದಿಗೆ ಬರುತ್ತದೆ ಅಷ್ಟೆ. ಅಷ್ಟಾದರೆ ಅದೇ ದೊಡ್ಡ ವಿಷಯ. ಆರಂಭದಲ್ಲಿ ನನಗೆ ಏರುಪೇರುಗಳಿದ್ದುವು, ತಿಂಗಳಿಗೊಮ್ಮೆಯಾದರೂ ಏದುಸಿರು ಜೋರಾಗುತ್ತಿತ್ತು. ಆಗಲೆಲ್ಲ ನನ್ನ ಪಕ್ಕೆಗಳು ನೋಯುತ್ತಿದ್ದು ಸಹಿಸಲು ಕಷ್ಟವಾಗುತ್ತಿತ್ತು. ಅಮ್ಮ ನನ್ನ ಬೆನ್ನು ಉಜ್ಜುತ್ತಿದ್ದಳು. ಇಂಥದೊಂದು ಮಗುವಿಗೆ ಜನ್ಮವಿತ್ತೆನಲ್ಲ ಎಂದು ಅವಳಿಗೆ ದುಃಖವಾಗಿರಬೇಕು. ಉಬ್ಬಸದ ಸ್ಥಿತಿಯಲ್ಲಿ ಒದ್ದಾಡುತ್ತಿರುವವರನ್ನು ನೋಡುವುದೇ ಒಂದು ಸಂಕಟ. ರಾತ್ರಿ ನನಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ, ಎದೆ ಭಾರದಿಂದ. ಆಗ ಮಲಗಲೂ ಆಗದೆ, ಎದ್ದಿರಲೂ ಆಗದೆ, ಚಾವಡಿಯ ದಳಿಗೆ ಕೈಯಿರಿಸಿ ನೇತು ಚಡಪಡಿಸುತ್ತಿದ್ದುದು ನನ್ನ ನೆನಪಿಗೆ ಬರುತ್ತಿದೆ. ಬೆಳಗಾಗುವುದನ್ನೇ ಕಾಯುತ್ತಿದ್ದೆ. ಬೆಳಗ್ಗೆಯೋ ಅಸಾಧ್ಯವಾದ ತಲೆನೋವು ಬೇರೆ. ಕಣ್ಣುಗಳು ಉಬ್ಬಿರುತ್ತಿದ್ದುವು. ಕೆಲವೊಮ್ಮೆ ನನ್ನ ಅಕ್ಕ ನನ್ನ ಹಣೆ ಮೇಲೆ ಕಾಸರಕನ ಸೊಪ್ಪುಗಳನ್ನಿರಿಸಿ, ಕೆಂಡದಲ್ಲಿ ಕೆಂಪಗೆ ಕಾಯಿಸಿದ ಸಟ್ಟುಗದಿಂದ ‘ಕಾಸಿ ಬರೆ’ಯುತ್ತಿದ್ದಳು. ಅದು ಹಿತವಾದ ಅನುಭವ ಕೊಡುತ್ತಿತ್ತು. ಹಸಿ ಕಾಸರಕನದ ಎಲೆಯ ಒಂದು ಆರೋಮಾ ಕೂಡ ಮೂಗಿಗೆ ಬಡಿಯುತ್ತಿತ್ತು. ಅದೇ ರೀತಿ, ಕುದಿನೀರಿನ ಹಬೆಗೆ ಮುಖ ಒಡ್ಡುವುದೂ ಇತ್ತು; ಆಗ ಮಂತ್ರವಾದಿಯಂತೆ ತಲೆಗೆ ಬಟ್ಟೆಯಿಂದ ಮುಚ್ಚಿಕೊಳ್ಳುವುದು. ನೀಲಗಿರಿ ತೈಲ ಹಚ್ಚಿಕೊಳ್ಳುವುದು, ಅಥವಾ ಅಣಲೆಯನ್ನು ಕಲ್ಲಿನಲ್ಲಿ ಅರೆದು ಅದನ್ನು ಹಣೆಗೆ ಲೇಪಿಸಿಕೊಳ್ಳುವುದು. ಅಣಲೆಯ ಲೇಪ ಆರುತ್ತಲೇ ಹಣೆಯ ಚರ್ಮವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿತ್ತು. ಇದೂ ಒಂದು ಹಿತಾನುಭವವೇ.

ಹುಟ್ಟಿದ ಮಗು ಬದುಕುವುದೇ ದೊಡ್ಡ ವಿಷಯವಾದ ಕೊಂಪೆ ಕೊಳಚೆಯ ಊರು ನಮ್ಮದು. ವರ್ಷದ ಆರು ತಿಂಗಳೂ ಮಳೆ, ಮಂಜು. ಕಾಲಿಟ್ಟಲ್ಲಿ ಪಚಕ್! ಅಲ್ಲದೆ ಶೀತ ಜ್ವರ (ಟೈಫಾಯ್ಡ್), ಕಫಜ್ವರ (ನ್ಯುಮೋನಿಯಾ), ನಡುಕ ಜ್ವರ (ಮಲೇರಿಯಾ), ನೀರ್ಕೋಟ್ಳೆ (ಚಿಕನ್ ಪಾಕ್ಸ್), ಕೆಪ್ಪಟ್ರಾಯ (ಮಮ್ಸ್); ಇನ್ನು ಊರು ಹೆಸರು ಗೊತ್ತಿಲ್ಲದ ಇತರ ಮಾರಿ ಪರೀಕ್ಷೆಗಳನ್ನು ಮಕ್ಕಳು ದೊಡ್ಡವರೆನ್ನದೆ ಎಲ್ಲರೂ ಪಾಸು ಮಾಡಿಕೊಂಡೇ ಬದುಕುಳಿಯಬೇಕು. ಇವುಗಳ ನಡುವೆ, ‘ಇದೋ ನಾನಿದ್ದೇನೆ’ ಎನ್ನುವ ಉಬ್ಬಸ ನನ್ನಂಥವನಿಗೆ! ಏನು ಮಹಾ? ಹತ್ತರ ಜತೆ ಹನ್ನೊಂದು ತಾನೆ. ಆದರೂ ‘ಓಷಧಯ’ ಪವಾಡದ ಅನ್ವೇಷಣೆ ನಡೆದೇ ಇತ್ತು. ಅದು ವಿಲಕ್ಷಣ ಎನಿಸಿದಷ್ಟೂ ಅದರ ಕುರಿತಾದ ಆಕರ್ಷಣೆ ಹೆಚ್ಚು. ಒಮ್ಮೆ ಯಾರೋ ಅಂದರು, ಆಸ್ಮಕ್ಕೆ ಉಮ್ಮತ್ತನ (ದತ್ತೂರದ) ಹೂವಿನ ಹೊಗೆ ಬತ್ತಿ ಸೇದಿದರೆ ಒಳ್ಳೆಯದು ಎಂಬುದಾಗಿ. ಈ ಉಮ್ಮತ್ತ ನಮ್ಮ ಅಂಗಳದಾಚೆ, ತೋಟದ ಬದಿಗೆ ಯಥೇಷ್ಟವಾಗಿ ಬೆಳೆಯುವ ಗಿಡ. ಯಾವ ಉಪಯೋಗಕ್ಕೂ ಬಾರದ ಸಸ್ಯವೆಂದುಕೊಂಡಿದ್ದೆವು. ಹಸಿರು ಲಡ್ಡುವಿನ ತರದ ಇದರ ಮುಳ್ಳು ಮುಳ್ಳಿನ ಬೀಜ ಅತ್ಯಂತ ವಿಷಕಾರಿಯಂತೆ. ಪಶುಗಳು ಕೂಡ ಇದರ ಗೊಡವೆಗೆ ಹೋಗುವುದಿಲ್ಲ. ಇನ್ನು ಇದರ ಹೂವಿನ ಬಣ್ಣ ಬಿಳಿ. ಓಟೆಯಂತೆ ಸುರುವಾಗಿ ಮಕ್ಕಳ ಆಟದ ತುತ್ತೂರಿಯಂತೆ (‘ಹಿಸ್ ಮಾಸ್ಟರ್ಸ್ ವಾಯ್ಸ್’ನ ಮೈಕಿನ ತರದಲ್ಲಿ) ಬಿರಿಯುತ್ತದೆ.

ಪೂಜೆಗಾಗಲಿ, ಮುಡಿಯುವುದಕ್ಕಾಗಲಿ ಯಾವ ಅಲಂಕಾರಕ್ಕಾಗಲಿ ಇದನ್ನು ಬಳಸುವುದಿಲ್ಲ. ಇದಕ್ಕೊಂದು ಪರಿಮಳವಾಗಲಿ ಇಲ್ಲ. ಪ್ರಕೃತಿಯಲ್ಲಿ ಇದು ಯಾವ ಕಾರಣಕ್ಕಾಗಿ ಸಿಲೆಕ್ಟ್ ಆಯಿತೋ ತಿಳಿಯದು. ಬಹುಶಃ ಆಸ್ಮ ಪರಿಹಾರಕವಾಗಿ? ಆದರೆ ಹಾಗೆ ಅದು ಪ್ರಚಲಿತವಲ್ಲ. ಯಾರೋ ಕೊಟ್ಟ ಪುಕ್ಕಟೆ ಸಲಹೆ. ನಮಗೂ ನಷ್ಟವೇನಿಲ್ಲ. ಸರಿ, ಅ ಒಂದೆರಡು ಹೂಗಳನ್ನು ಒಣಗಿಸಿ ಹೊಗೆ ಬತ್ತಿ ಮಾಡಿ ಚಿಕ್ಕ ಹುಡುಗನಾಗಿದ್ದ ನಾನು ಸೇದಿದ್ದಾಯಿತು. (ವರ್ಷಗಳ ನಂತರ ನನ್ನ ಸಿಗರರೇಟ್ ಹವ್ಯಾಸಕ್ಕೆ ನಾಂದಿಯಾಯ್ತೆ ಅದು!) ಅದರ ಹೊಗೆಯ ಕೆಟ್ಟ ವಾಸನೆ ನನಗೆ ಹಿಡಿಸಲಿಲ್ಲ. ಉಪಯೋಗ ಸಿಗುತ್ತದೋ ಇಲ್ಲವೋ ಗೊತ್ತಾಗುವ ಮೊದಲೇ ನಾನದನ್ನು ಬಿಟ್ಟು ಬಿಟ್ಟೆ. ಮನೆಯವರಿಗೂ ಈ ಉಮ್ಮತ್ತನ ಔಷಧಿಯಲ್ಲಿ ಮನಸ್ಸಿರಲಿಲ್ಲ. ಆ ಪ್ರಕರಣ ಅಲ್ಲಿಗೆ ನಿಂತಿತು, ಇನ್ನೇನೋ ಸುರುವಾದುವು.

ಈ ಮಧ್ಯೆ ನಾನು ಸ್ಥಳಾಂತರಕ್ಕೊಳಗಾದೆ. ಶಾಲೆ ಕಲಿಯಲೆಂದು ನನ್ನ ಸೋದರ ಮಾವನ ಮನೆ ಸೇರಿದೆ. ಇದರಿಂದ ನನ್ನ ಎಳೆ ಮನಸ್ಸು ಖಿನ್ನತೆಗೆ ಒಳಗಾದರೂ, ಆ ಪ್ರದೇಶ ಹೆಚ್ಚು ಆರೋಗ್ಯಕರವಾಗಿದ್ದು ನನ್ನ ಆಸ್ಮಕ್ಕೆ ಸ್ವಲ್ಪ ಮಟ್ಟಿಗೆ ಶಮನ ಸಿಕ್ಕಿ, ದೇಹ ಬೆಳೆಯುತ್ತಿದ್ದಂತೆ ಈ ರೋಗವನ್ನು ಸಹಿಸಿಕೊಳ್ಳುವುದು ಸಾಧ್ಯವಾಯಿತು. ಆದರೂ ಔಷಧೋಪಚಾರಗಳು ಆಗಾಗ ಬೇಕಾಗುತ್ತಲೇ ಇದ್ದುವು. ಇದರ ಎಲ್ಲ ಕಾಲಘಟ್ಟಗಳನ್ನೂ ಇಲ್ಲಿ ಹೇಳಲಾರೆ. ಆದರೆ ಎರಡು ಮೂರು ಸಂಗತಿಗಳ ಕುರಿತು ಪ್ರಸ್ತಾಪ ಮಾಡುವೆ – ಸಹಜೀವಿಗಳಿಗೆ ಉಪಯೋಗವಾಗಲಿ ಎನ್ನುವುದಕ್ಕೆ. ಈ ರೋಗದ ಕುರಿತು ಮೊದಲಿಗಿಂತ ಹೆಚ್ಚು ಸಾಮಾನ್ಯ ಜ್ಞಾನ ಮನುಷ್ಯರಲ್ಲಿ ಈಗ ಇದೆ. ಔಷಧಗಳೂ ಇವೆ. ಆದ್ದರಿಂದ ನನ್ನ ಅನುಭವದಿಂದ ಯಾರಿಗೆ ಏನೂ ಆಗಬೇಕಾಗಿ ಇರಲಾರದು. ಆದರೂ ಮನುಷ್ಯಾವಸ್ಥೆಯ ದೃಷ್ಟಿಯಿಂದ ಹೇಳುತ್ತಿದ್ದೇನೆ.

ಅಂತೆಯೇ ಕರಿದ ತಿಂಡಿಗಳು, ಸಿಹಿ ಪದಾರ್ಥಗಳು, ಹಾಲು ಮಜ್ಜಿಗೆ,. ತುಪ್ಪ, ಎಲ್ಲಾ ಜಿಡ್ಡು ಪದಾರ್ಥಗಳು, ಇನ್ನೇನುಳಿಯಿತು? ವಾಸ್ತವದಲ್ಲಿ ಇವೆಲ್ಲ ನನಗೆ ಪ್ರಿಯವಾದ ಸಂಗತಿಗಳು. ಸಹಜವಾಗಿಯೇ ಇಂಥ ಪಥ್ಯವನ್ನು ನಾನು ಕೆಲವು ಸಲ ಮೀರುತ್ತಿದ್ದೆ. ನಂತರ ಆಸ್ತಮಾ ಆಕ್ರಮಿಸಿದರೆ ಅದಕ್ಕೆ ಕಾರಣ ನಾನು ಪಥ್ಯ ಪಾಲಿಸದೆ ಇದ್ದದ್ದು ಎಂಬ ಆತ್ಮನಿಂದನೆ ನನ್ನಲ್ಲಿ ಮೂಡುತ್ತಿತ್ತು.

ಹೆಚ್ಚು ಶೀತ ಪ್ರದೇಶದಿಂದ ಕಡಿಮೆ ಶೀತ ಪ್ರದೇಶಕ್ಕೆ ವಸತಿ ಬದಲಾವಣೆ ಆಸ್ಮ ಬಾಧಿತರಿಗೆ ಒಳ್ಳೆಯದೇ, ಆದರೆ ಅದರಿಂದ ಶಾಶ್ವತ ಪರಿಹಾರ ಸಿಗುತ್ತದೆ ಎಂದೇನಿಲ್ಲ. ಸುಮಾರು ಇಪ್ಪತ್ತನೆ ವಯಸ್ಸಿನಿಂದ ಮೂವತ್ತೈದರ ತನಕ, ನಾನು ಸಾಕಷ್ಟು ಆರೋಗ್ಯದಲ್ಲೇ ಇದ್ದೆ. ಸಾಹಿತ್ಯ, ಕವಿಗೋಷ್ಠಿ ಎಂದು ಮೈಸೂರು ಬೆಂಗಳೂರು ಕಡೆ ಓಡಾಡಿದ್ದೂ ಇದೆ. ಕೇರಳದ ಸರಕಾರಿ ಕಾಲೇಜುಗಳಲ್ಲಿ ಲೆಕ್ಚರನಾಗಿ ಖಾಯಂ ಕೆಲಸದಲ್ಲಿದ್ದರೂ (ನಾನು ಇಂಗ್ಲಿಷ್ ಎಂ.ಎ. ಮಾಡಿದ್ದು ತಿರುವನಂತಪುರದಲ್ಲಿ, 1964-66) ನನ್ನ ಅಧ್ಯಯನದ ದಾಹ ನಿಂತಿರಲಿಲ್ಲ. ಪಿಎಚ್. ಡಿ. ಮಾಡುವುದಕ್ಕೆಂದು ಹೈದರಾಬಾದಿನ ಪ್ರಸಿದ್ಧ ಇಂಗ್ಲಿಷ್ ಸಂಸ್ಥೆಗೆ ಬಂದೆ. ಹೀಗೆ ನಾನು ನನ್ನ ಮೂವತ್ತೈದನೆ ಮಧ್ಯ ವಯಸ್ಸಿನಲ್ಲಿ (1975)ಪಶ್ಚಿಮ ಕರಾವಳಿಯಿಂದ ಹೈದರಾಬಾದಿಗೆ ಸ್ಥಳಾಂತರಗೊಂಡೆ.

ದಕ್ಖಣದ ಪೀಠಭೂಮಿಯಲ್ಲಿರುವ ಹೈದರಾಬಾದು ಒಣ ಪ್ರದೇಶ, ಮಳೆಯೇ ಕಡಿಮೆ. ನನಗಿದು ತೀರಾ ಹೊಸತು. ಆದರೇನು, ಮೊದಲ ಒಂದು ವರ್ಷ ಕಾಲ ಎಷ್ಟು ಸುಖವಾಗಿ ಇದ್ದೆನೆಂದರೆ ಇದು ನನಗೆ ಹೇಳಿ ಮಾಡಿಸಿದ ಊರು ಎನಿಸಿತು. ಊರಿನಿಂದ ನನ್ನ ಹೆಂಡತಿಯನ್ನು ಕರೆಸಿಕೊಂಡೆ. ಈ ಮೊದಲೇ ನಾನು ಮಾಡಬಾರದ ಕವಿಗಳ ಶೋಕಿಯ ಅಭ್ಯಾಸವಾದ ಸಿಗರೇಟಿನ ಚಟಕ್ಕೆ ಗುರಿಯಾಗಿ ಬಿಟ್ಟಿದ್ದೆ. ನನ್ನ ಪಿಎಚ್. ಡಿ. ಅಧ್ಯಯನ ಬೇರೆ ಸಾಗುತ್ತಿತ್ತು. ಆ ಮೇಲೆ ನಾನು ಕಲಿಯುತ್ತಿದ್ದ ಕಡೆಯೇ ಕೆಲಸಕ್ಕೆ ಸೇರಿದೆ. ಕಾಲಕ್ರಮೇಣ ಒಂದೆರಡು ಸುತ್ತಿಗೆ ವಿಭಾಗದ ಮುಖ್ಯಸ್ಥನೂ ಆದೆ. ಸರಿ, ಸಿಗರೇಟು ಸೇವನೆ ಈಗ ಜೋರಾಗಿತ್ತು. ಆಸ್ಮಕ್ಕೆ ನಾನು ಹೈದರಾಬಾದಿಗೆ ಬಂದ ಮರು ವರ್ಷವೇ ಗೊತ್ತಾಗಿತ್ತು, ನಾನದನ್ನು ಸೋಲಿಸಲೆಂದೇ ಇಲ್ಲಿಗೆ ಬಂದಿದ್ದೇನೆ ಎಂದು. ಅದು ನಾನೂ ಇದ್ದೇನೆ ಎಂದು ಹೇಳಲು ಸುರುಮಾಡಿತು. ಮತ್ತದೇ ಕೆಮ್ಮು, ದಮ್ಮು, ನೆಗಡಿ, ತಲೆ ನೋವು, ಗೊಯ್ ಗೊಂಯ್ ಶಬ್ದ, ನಿದ್ರಾಹೀನತೆ ಇತ್ಯಾದಿ. ಹೀಗೆ ಜೀವನ ಮೊದಲಿನ ಲಯಕ್ಕೆ ತಿರುಗಿತು.

ಈಗಲಾದರೆ ನಾನು ದೊಡ್ಡ ನಗರದಲ್ಲಿದ್ದೇನಲ್ಲ, ಹೋಗಿ ಡಾಕ್ಟರನ್ನು ಕಂಡು ಪರೀಕ್ಷೆ ಮಾಡಿಸಿ (ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಿತ್ತು) ಅವರು ಹೇಳಿದ ಹಲವಾರು ಮಾತ್ರೆಗಳನ್ನು ತಂದೆ. ಅವುಗಳಲ್ಲಿ ಆಸ್ತಲಿನ್ ಒಂದು ಎನ್ನುವುದು ನೆನಪಿನಲ್ಲಿದೆ. ಎಲರ್ಜಿ ನಿರೋಧಕ (ಏಂಟಿ-ಹಿಸ್ಟಮಿನ್) ಗುಳಿಗೆಯೂ ಇತ್ತು. ಅದನ್ನು ರಾತ್ರೆ ತೆಗೆದುಕೊಳ್ಳಬೇಕಿತ್ತು; ಯಾಕೆಂದರೆ ಅದು ಮಂಪರು ಹಿಡಿಸುವಂಥದು. ಅದರ ಪ್ರಭಾವ ಮರುದಿನ ಹೊತ್ತೇರುವ ತನಕ, ಕೆಲವು ಸಲ ಇನ್ನೂ ಮುಂದಕ್ಕೆ ಇರುತ್ತಿದ್ದುದರಿಂದ ನನಗೆ ಯಾವಾಗಲೂ ಒಂದು ತರದ ಮಂಕು ಕವಿದಂತೆ ಅನಿಸುತ್ತಿತ್ತು. ಏನು ಮಾಡಲಿ, ಬೇರೇನೂ ಉಪಾಯವಿರಲಿಲ್ಲ. ಡಾಕ್ಟರ್ ಕೆಲವೊಂದು ಆಹಾರ ನಿಯಮಗಳನ್ನು ಸಹಾ ಸೂಚಿಸಿದ್ದರು. ಇವು ಊರ ಪಥ್ಯಗಳ ತರವೇ; ಜೊತೆಗೆ ಎಲ್ಲಾ ತರದ ಗಡ್ಡೆ ಗೆಣಸುಗಳೂ! ಹೀಗೆ ನಾನು ತಿನ್ನಬಾರದ ವಸ್ತುಗಳ ಸಂಖ್ಯೆ ಜಾಸ್ತಿಯಾಗಿ, ಮಾತ್ರೆಗಳ ಮೇಲೆಯೇ ಬದುಕುವಂತಾಯಿತು.

ಈ ವಿಧಾನಗಳೆಲ್ಲ ನನ್ನನ್ನು ಜೀವಂತ ಇರಿಸಿದರೂ, ತೀರಾ ಬಡಕಲು ಜೀವಿಯನ್ನಾಗಿ ಮಾಡಿದುವು. ಇದೇ ವೇಳೆಗೆ ಇಲಾಖೆಯ ಮುಖ್ಯಸ್ಥನಾಗಿ ನಾನು ಏನಾದರೂ ಮಾಡಬೇಕೆಂದು ಮೂರು ದಿನಗಳ ರಾಷ್ಟ್ರೀಯ ಸೆಮಿನಾರ್ ನಡೆಸಿದೆ. Explanation in Linguistics ಎಂಬ ವಿಷಯದ ಕುರಿತು. ಸೆಮಿನಾರೇನೋ ಎಲ್ಲರ ಸಹಾಯದಿಂದ ಭರ್ಜರಿಯಾಗಿ ನಡೆಯಿತು, ಆದರೆ ನಾನು ಕುಸಿದು ಹೋದೆ. ಮತ್ತದೇ ಡಾಕ್ಟರನ್ನು ಭೇಟಿ ಮಾಡಿದರೆ ಅವರು ನನ್ನನ್ನು ಪರೀಕ್ಷೆ ಮಾಡದೆಯೆ ಔಷಧಿ ಪ್ರಮಾಣವನ್ನು ಇಮ್ಮಡಿಗೊಳಿಸುವಂತೆ ಹೇಳಿದರು—ಏನೊಂದೂ ವಿಚಾರಿಸದೆ. ಅವರು ಹಾಗೆ ಹೇಳಬಾರದಿತ್ತು, ಮತ್ತು ನಾನದನ್ನು ಪಾಲಿಸಬಾರದಿತ್ತು, ಅಂದರೆ ರೋಗಿಗಳು ವೈದ್ಯರನ್ನು ನಂಬಿಬಿಡುತ್ತಾರೆ. ಇದೀಗ ನನ್ನನ್ನು ಗಂಡಾಂತರ ಪರಿಸ್ಥಿತಿಗೆ ದೂಡಿತು. ನನ್ನ ಪಪ್ಫುಸಗಳು ಒಣಗಿ ಹೋದಂತೆ ಅನಿಸಿ ಉಸಿರು ತೆಗೆದುಕೊಳ್ಳಲಾರದೆ ಇನ್ನೇನು ಸತ್ತೇ ಹೋಗುತ್ತೇನೆ ಎಂಬ ಪರಿಸ್ಥಿತಿ ಬಂತು. ಹಿತೈಷಿಗಳ ನೆರವಿನಿಂದ ಒಂದು ಕ್ಲಿನಿಕ್ ಸೇರಿದೆ. ಅಲ್ಲಿ ನನಗೆ ಅದೇನೋ ಎಮೆರ್ಜೆನ್ಸಿ ಚಿಕಿತ್ಸೆ ನೀಡಲಾಯಿತು. ಅದರ ವಿವರಗಳು ನನಗೀಗ ನೆನಪಿಲ್ಲ, ಸುಮಾರು ಅರ್ಧ ಶತಮಾನದ ಹಿಂದಣ ಕತೆ ಹೇಳುತ್ತಿದ್ದೇನೆ. ಅಂತೂ ಬದುಕಿ ಬಂದೆ. ತಡವಾಗುತ್ತಿದ್ದರೆ ಸಾಯುತ್ತಿದ್ದಿ ಎಂದರು ಅಲ್ಲಿನ ವೈದ್ಯರು. ಅದು ನನಗಿಂತ ಹೆಚ್ಚು ಯಾರಿಗೆ ಗೊತ್ತು?!

ಈಗ ನಾನು ತೀರಾ ಸಣಕಲಾಗಿದ್ದೆನಲ್ಲ, ಇದು ಹೀಗಾದರೆ ನಡೆಯುವುದಿಲ್ಲ ಅನಿಸಿತು. ಪಥ್ಯವನ್ನು ಧಿಕ್ಕರಿಸಿದೆ. ಎಲ್ಲ ಆಹಾರವನ್ನೂ ಹಿತಮಿತವಾಗಿ ತೆಗೆದುಕೊಳ್ಳಲು ಸುರುಮಾಡಿದೆ. (ದಿನವೂ ನುಂಗಬೇಕಾದ ಗುಳಿಗೆಗಳಂತೂ ಇದ್ದುವು.) ಇದರಿಂದ ಸ್ವಲ್ಪ ಚೈತನ್ಯವೂ ಬಂತು. ಆದರೆ ಒಮ್ಮೆ ಯಾರೋ ತಂದುಕೊಟ್ಟ ಅಣಬೆ ಪಲ್ಯವನ್ನು ತಿಂದು ವಿಷಮ ಸ್ಥಿತಿ (ಮುಖ್ಯವಾಗಿ ಮೈ ತುರಿಕೆ) ಉಂಟಾದುದಿದೆ. ನನಗೆ ಅಣಬೆ ಎಲರ್ಜಿ ಇದೆ ಎಂದು ಗೊತ್ತಿರಲಿಲ್ಲ. ಇದಕ್ಕೆ ಮೊದಲು ನನಗೆ ಅಣಬೆಯನ್ನು ತಿಂದ ನೆನಪೂ ಇಲ್ಲ. ಅಣಬೆ ನಮ್ಮ ಊಟದ ಮೇಜಿನಿಂದ ಅಂದಿನಿಂದ ಬ್ಯಾನ್ಡ್.

ಕೆಲವು ವರ್ಷಗಳ ನಂತರ ನನಗೆ ಇನ್ನೊಂದು ಮಾರಣಾಂತಿಕ ಎನ್ನಬಹುದಾದ ಪ್ರಕರಣ ಒದಗಿತು. ಇದಕ್ಕೆ ಸರಿಯಾದ ಕಾರಣ ಏನೆನ್ನುವುದು ನನಗೆ ಇದುವರೆಗೂ ಗೊತ್ತಿಲ್ಲ. ಬಹುಶಃ ನಾವು ಕ್ವಾರ್ಟರ್ಸ್ ಬದಲಾಯಿಸಿದುದು ಕಾರಣ. ಮೂರನೆ ಮಹಡಿಯ ಫ್ಲಾಟಿನಲ್ಲಿದ್ದ ನಮಗೆ ನೀರಿನ ತೊಂದರೆಯಿತ್ತು. ಒಮ್ಮೆ ಕೆಳಗಿನ ನೆಲಹಂತದ ಫ್ಲಾಟು ಖಾಲಿಯಾದಾಗ ಅಲ್ಲಿ ನೀರಿನ ತೊಂದರೆಯಿಲ್ಲವೆಂದು ಅಲ್ಲಿಗೆ ಬದಲಾಯಿಸಿಕೊಂಡೆವು. ಆಮೇಲೆಯೇ ಗೊತ್ತಾದುದು ಅಲ್ಲಿನ ಸಮಸ್ಯೆಗಳು. ಮನೆಯೊಳಗೆಲ್ಲಾ ಕತ್ತಲು, ಅನಾರೋಗ್ಯಕರ ಸುತ್ತಮುತ್ತಲು—ಅದೇನೋ ಗಿಡಕಂಟಿಗಳು, ಮುಳ್ಳಿನ ಗಿಡಗಳು, ನೊರಜು, ಸೊಳ್ಳೆಗಳು ಇತ್ಯಾದಿ. ಇಲ್ಲಿ ನಿವರ್ಲಾಗೆ (ನನ್ನ ಹೆಂಡತಿ) ಜ್ವರ ಬಂದು ಮಲಗಿದಳು. ಎರಡು ವಾರಗಲ್ಲಿ ಗುಣವಾದರೂ ಅದೇನು ಜ್ವರವೆಂದೇ ಗೊತ್ತಾಗಲಿಲ್ಲ. ಆಮೇಲೆ ನನ್ನ ಸ್ಥಿತಿ ಬಿಗಡಾಯಿಸಿತು, ಅದುವರೆಗೆ ನಾನು ತಕ್ಕಮಟ್ಟಿಗೆ ಸರಿಯಾಗಿಯೇ ಇದ್ದೆ. ಈಗ ಊಟಕ್ಕೆ ರುಚಿಯಿಲ್ಲದಾಯಿತು. ರಾತ್ರೆ ಊಟ ಮಾಡುವುದಕ್ಕೇ ಭಯವಾಗುತ್ತಿತ್ತು. ಎಲ್ಲಿ ಆಸ್ಮ ಪ್ರಕರಣ ಆಕ್ರಮಿಸುತ್ತದೋ ಎಂದು.

ಅಂತೂ ಒಂದು ರಾತ್ರೆ ಅದು ಸಂಭವಿಸಿತು. ಪಕ್ಕದ ಬೀದಿಯಲ್ಲೆ ಇದ್ದ ನಮ್ಮ ಪರಿಚಯದ ಡಾಕ್ಟರರು ಕೂಡಲೆ ಬಂದು ನನಗೆ ಬ್ರೋಂಕೋ ಡಯಲೇಟರ್ ಇಂಜೆಕ್ಷನ್ ಕೊಟ್ಟರು. ಬಹುಶಃ ಡೆರಿಫೈಲಿನ್. ಔಷಧಿಯ ವಿವರಗಳನ್ನೆಲ್ಲ ಈಗ ಮರೆತಿದ್ದೇನೆ. ನನ್ನ ಅವಜ್ಞೆಗೆ ಕ್ಷಮೆಯಿರಲಿ. ಆಮೇಲೆ ಡಾಕ್ಟರ್ ಅಂದುದು ಅವರು ದೊಡ್ಡ ರಿಸ್ಕ್ ತಗೊಂಡಿದ್ದರು ಎಂಬುದಾಗಿ. ಉಸಿರಾಟ ಸಾಧ್ಯವಾಗುವ ಇಲ್ಲವೇ ಪೂರ್ತಿ ನಿಂತು ಹೋಗುವ ಎರಡೂ ಸಾಧ್ಯತೆಗಳು ಇದ್ದುವು! ಆದರೆ ಡಾಕ್ಟರ್ ಇಂಜೆಕ್ಷನ್ ಚುಚ್ಚಿದ ಕೆಲವೇ ನಿಮಿಷಗಳಲ್ಲಿ ನನ್ನ ಉಸಿರಾಟ ಸಾಮಾನ್ಯ ಸ್ಥಿತಿಗೆ ಮರಳಿತು. ನನಗನಿಸಿದ ಆಶ್ವಾಸ ಅಷ್ಟಿಷ್ಟಲ್ಲ. ಡಾಕ್ಟರಿಗೆ ಕೃತಜ್ಞತೆ ಹೇಳಿದೆ. ಅಂದು ಆ ನಿರ್ಣಾಯಕ ಕ್ಷಣದಲ್ಲಿ ಡಾಕ್ಟರ್ ಖುದ್ದು ಅನುಭವಿಸಿರಬಹುದಾದ ತುಮುಲ ಇವತ್ತಿಗೂ ನನ್ನ ಮನಸ್ಸಿನಲ್ಲಿದೆ. ಮುಂದೆ ನಾವು ಆ ಮನೆ ಬಿಟ್ಟು ಹಿಂದಿದ್ದ ಮೂರನೆ ಮಹಡಿಯ ಮನೆಗೇ ಮರಳಿದೆವು.

(ಶಕ್ತಿವರ್ಧನೆಗೆಂದು ನಾನು ‘ಬಿ’ ಜೀವಸತ್ವ ಹೆಚ್ಚಿರುವ ಖರ್ಗೋಸಾ ಎಂಬ, ಹಾಲು ಹಾಕದ ಚಹದಂಥ, ರಶಿಯನ್ ಪಾನೀಯವೊಂದನ್ನು ಮನೆಯಲ್ಲಿ ತಯಾರಿಸಿ ಕೆಲ ಕಾಲ ಕುಡಿದದ್ದಿದೆ. ಇದಕ್ಕೆ ವಿಶಿಷ್ಟವಾದೊಂದು ಯೇಸ್ಟ್ ಬಳಸಬೇಕಿತ್ತು. ಆದರೆ ಇದು ಅತಿ ಶೀಘ್ರ ಬೆಳೆಯುತ್ತಿದ್ದ ವಸ್ತುವಾದ್ದರಿಂದ ಇದನ್ನು ನಿಭಾಯಿಸಲಾರದೆ ಕೈಬಿಡಬೇಕಾಯಿತು.)

ಇದಕ್ಕೆ ಕೆಲವು ವರ್ಷಗಳ ಮೊದಲು ನಾನೊಮ್ಮೆ ಒಂದು ವರ್ಷದ ಮಟ್ಟಿಗೆ ಇಂಗ್ಲೆಂಡಿಗೆ ಹೋಗಿದ್ದೆ, ಅನ್ವಯಿಕ ಭಾಷಾ ವಿಜ್ಞಾನದಲ್ಲಿ ಎಂ.ಎ. ಮಾಡುವುದಕ್ಕೆ. ನಾನು ಸೇರಿದ ರೆಡಿಂಗ್ ಯುನಿವರ್ಸಿಟಿ ಒಂದು ಗುಡ್ಡದ ಮೇಲಿತ್ತು; ನನ್ನ ವಸತಿ ಕೆಳಗಿತ್ತು. ಕ್ಲಾಸಿಗೆ ಹೋಗಲು ನಾನು ದಿನವೂ ಎರಡು ಫರ್ಲಾಂಗ್ ಗುಡ್ಡ ಏರಬೇಕಿತ್ತು. ಆರಂಭದ ಎರಡು ಮೂರು ತಿಂಗಳು ನನಗೆ ಅದೊಂದು ದೈಹಿಕ ವ್ಯಾಯಾಮದಂತೆ ಸ್ವಾಗತಾರ್ಹ ಎನಿಸುತ್ತಿತ್ತು. ನಂತರ ಅದೊಂದು ಹೊರೆಯಾಗಿ ನಾನು ಏದುಸಿರು ಬಿಡತೊಡಗಿದೆ. ಆಸ್ಪತ್ರೆಗೆ ಹೋಗುವುದು ಅನಿವಾರ್ಯವೆನಿಸಿತು. ಬ್ರಿಟಿಷ್ ಕೌನ್ಸಿಲ್ ನವರ ಶಿಫಾರಿಸಿನ ಮೇಲೆ ಬ್ಯಾಟಲ್ ಹಾಸ್ಪಿಟಲ್ ಎಂಬಲ್ಲಿಗೆ ಹೋದೆ. ಅದೊಂದು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ. ಹಲವಾರು ಕಟ್ಟಡಗಳ ಹರಡಿದ ಸಮುಚ್ಚಯ. ದ್ವಿತೀಯ ಮಹಾಯುದ್ಧದ ಕಾಲದಲ್ಲಿ, ಬಹುಶಃ ಸೈನಿಕರಿಗೆ ಕಟ್ಟಿಸಿದ ಕಾರಣ ಆ ಬ್ಯಾಟಲ್ ಹೆಸರು ಬಂದಿತ್ತು. ಡಾಕ್ಟರ್ ನನಗೆ ಸ್ವಲ್ಪ ಗಟ್ಟಿ ರಬ್ಬರಿನ ಬೆಲೂನಿನಂಥ ಸಾಧನವೊಂದನ್ನು ಕೊಟ್ಟು ಅದನ್ನು ನನ್ನೆಲ್ಲಾ ಶಕ್ತಿಯಿಂದ ಊದುವಂತೆ ಹೇಳಿದರು. ನನ್ನ ಶ್ವಾಸಕೋಶದ ನಿಶ್ವಾಸ ಶಕ್ತಿಯನ್ನು ಅದು ಅಳೆಯುತ್ತಿತ್ತು. ನನಗಿರಬೇಕಾದ ಶಕ್ತಿಗಿಂತ ಸುಮಾರು ಶೇಕಡಾ ಮೂವತ್ತರಷ್ಟು ಕಡಿಮೆಯಿತ್ತು.

ನಿಶ್ವಾಸವಿಲ್ಲದಿದ್ದರೆ ಉಚ್ಛ್ವಾಸ (ಉಸಿರು ಒಳಕ್ಕೆ ಎಳೆದುಕೊಳ್ಳುವುದು) ಹೇಗೆ ಸಾಧ್ಯ? ಈಗ ನಾನೇನು ಮಾಡಲಿ? ಡಾಕ್ಟರ್ ನನಗೊಂದು ಪುಟ್ಟ ಉಪಕರಣ (ಮುಷ್ಟಿಯಲ್ಲಿ ಹಿಡಿಯುಂಥದು) ತೋರಿಸಿದರು: ರೋಟಾ ಹೇಲರ್. ಅದರೊಳಗೆ ಔಷಧಿ ಪುಡಿ ತುಂಬಿದ ಕ್ಯಾಪ್ಸ್ಯೂಲ್ ಒಂದನ್ನಿರಿಸಿ ತಿರುವಿ ಉಪಕರಣವನ್ನು ಬಾಯಲ್ಲಿರಿಸಿ ಮೇಲಕ್ಕೆ ಉಸಿರೆಳೆದುಕೊಳ್ಳುವುದು. ಇದರಿಂದ ಈ ಪುಡಿಯನ್ನು ಪಪ್ಫುಸಕ್ಕೆ ಸಿಂಪಡಿಸಿದಂತಾಗುತ್ತದೆ. ಅದು ಕಫ ಸೇರುವುದನ್ನು ತಡೆಗಟ್ಟುತ್ತದೆ. ಈಗಿನವರಿಗೆ ಇದನ್ನೆಲ್ಲ ವಿವರಿಸುವ ಅಗತ್ಯವಿಲ್ಲ. ಆದರೆ ಆಗ ಇಂಗ್ಲೆಂಡಿನಲ್ಲಿ ಸಹಾ ಇದು ಹೊಸದಾಗಿತ್ತು. ನಾನೀ ವಸ್ತುಗಳನ್ನು ಕೊಂಡು ಕೊಂಡು ದಿನಕ್ಕೆ ಮೂರು ನಾಲ್ಕು ಬಾರಿ ಉಪಯೋಗಿಸತೊಡಗಿದೆ. ಇದು ರಾಮಬಾಣದಂತೆ ಕೆಲಸ ಮಾಡಿತು. ನನಗೆ ಉಸಿರಾಟ ಸುಗಮವಾಯಿತು. ಆಸ್ಮದ ಛಾಯೆ ಸಂಪೂರ್ಣ ಹೋಗದೆ ಇದ್ದರೂ ಅದನ್ನು ನಿಯಂತ್ರಿಸುವುದು ಸಾಧ್ಯವಾಯಿತು. ಆಮೇಲೆ ನಾನು ಕಲಿತುಕೊಂಡುದೆಂದರೆ, ಆಸ್ಮವನ್ನು ತೊಲಗಿಸುವುದಕ್ಕಿಂತ ಅದನ್ನು ನಿಯಂತ್ರಿಸುವ ಕುರಿತು ಗಮನ ಹರಿಸುವುದು ಮುಖ್ಯ.

ಇಂಗ್ಲೆಂಡಿನಿಂದ ಮರಳುವಾಗ ನಾನು ರೋಟಾಹೇಲರ್ ಯಂತ್ರವನ್ನೂ ಕೆಲವು ಕ್ಯಾಪ್ಸ್ಯೂಲುಗಳನ್ನೂ ತಂದಿದ್ದೆ. ಆದರೆ ಕ್ಯಾಪ್ಸ್ಯೂಲುಗಳು ಇಲ್ಲಿ ಸಿಗುತ್ತಿರಲಿಲ್ಲ. ಇನ್ನೇನು ಮಾಡಲಿ ಎಂದು ಚಿಂತಿಸುವ ಹೊತ್ತಿಗೆ ಸಿಪ್ಲ ಕಂಪೆನಿಯ ಆಸ್ತಲಿನ್ ಇನ್ಹೇಲರ್ ಮಾರ್ಕೆಟಿಗೆ ಬಂತು. ಇದೊಂದು ಔಷಧಿಯ ಗ್ಯಾಸ್ ತುಂಬಿದ ಬೆರಳಷ್ಟು ಉದ್ದದ ಇಂಗ್ಲಿಷ್ನ ‘ಐ’ ಶೇಪಿನ ಪುಟ್ಟ ಡಬ್ಬ. ಇದರ ಕೆಳಬದಿಯ ಮೂತಿಯನ್ನು ಬಾಯಿಗಿರಿಸಿ ಒತ್ತಿ ಶ್ವಾಸ ಮೇಲಕ್ಕೆಳೆದರಾಯಿತು, ಗ್ಯಾಸ್ ನ ಒಂದಷ್ಟು ನಿಗದಿತ ಪ್ರಮಾಣ ಪಪ್ಫುಸದೊಳಕ್ಕೆ ಹೋಗುತ್ತದೆ. ಇದನ್ನು ನಾನು ಹಲವು ವರ್ಷಗಳಿಂದ ಬಳಸುತ್ತ ಬಂದಿದ್ದೇನೆ. ನನಗೆ ಆಸ್ಮ ಪ್ರಕರಣ ಬಂದಿಲ್ಲ, ಎಂದರೆ ಅದು ಹತೋಟಿಯಲ್ಲಿ ಇದೆ. ಈಗ ರೋಟಾ ಹೇಲರ್ ರೂಪದಲ್ಲಿಯೂ ಆಸ್ತಲಿನ್ ಇನ್ಹೇಲರ್ ಸಿಗುತ್ತದೆ ಎಂದು ಕೇಳಿದ್ದೇನೆ. ನೋಡಬೇಕು.

ಆದರೆ ಈಗಲೂ ನಾನು ನನ್ನ ಹಳ್ಳಿಯ ಹಿನ್ನೆಲೆಯನ್ನು ಮರೆತಿಲ್ಲ. ಗಂಟಲು ಕೆರೆತ ಇದ್ದಾಗ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು, ಕೆಮ್ಮು ಹೋಗದೆ ಇರುವಾಗ ಕಾಳು ಮೆಣಸಿನ ಕಷಾಯ ಕುಡಿಯುವುದು ನಡೆದೇ ಇದೆ. ಇನ್ನು ದೇಹ ಉರಿದಂತೆ ತೋರಿದಾಗ ಮಜ್ಜಿಗೆ ನೀರು ತಕ್ಷಣ ಉಪಶಮನ ನೀಡುವ ಅಚ್ಚ ದೇಸೀ ವಿಧಾನ.