ಸದಾ ಪ್ರವಾಸಿಗನಾಗಿ ಲೋಕ ಸುತ್ತುತ್ತಿದ್ದ ಇಬ್ನ್ ಬತೂತನಿಗೆ ಮಡದಿಯರ ಅವಶ್ಯಕತೆ ಇತ್ತು. ಆದರೆ ಅವರನ್ನು ಕಟ್ಟಿಕೊಂಡು ಓಡಾಡುವ ತಾಪತ್ರಯಗಳು ಬೇಕಾಗಿರಲಿಲ್ಲ. ಹಾಗಾಗಿ ಆತ ಈ ದ್ವೀಪದ ಇಬ್ಬರು ಸ್ತ್ರೀಯರನ್ನು ವರಿಸುತ್ತಾನೆ. ಇಬ್ಬರೂ ದ್ವೀಪದ ಎರಡು ಪತಿಷ್ಠಿತ ಕುಟುಂಬಗಳಿಗೆ ಸೇರಿದ ಸ್ತ್ರೀಯರು. ಹಾಗಾಗಿ ಆತನಿಗೆ ಈ ದ್ವೀಪದ ಎರಡೂ ಪತಿಷ್ಠಿತ ಕುಟುಂಬಗಳ ಬೆಂಬಲ ದೊರೆತು ಆ ದ್ವೀಪವನ್ನು ಆಳುತ್ತಿದ್ದ ದೊರೆಗಿಂತ ಬಲಶಾಲಿಯಾಗುತ್ತಾನೆ. ಈ ಅಪಾಯವನ್ನರಿತ ಆ ದೊರೆ ಇಬ್ನ್ ಬತೂತನಿಗೆ ದ್ವೀಪ ಬಿಡುವಂತೆ ಆಜ್ಞಾಪಿಸುತ್ತಾನೆ.
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಐದನೆಯ ಕಂತು

 

ಸುಮಾರು ಹದಿನೆಂಟು ತಾಸು ಕಡಲಲ್ಲಿ ಚಲಿಸಿದ ನಂತರ ಅರೇಬಿಯನ್ ಸೀ ಹಡಗು ನಾನಿರುವ ಕವರತ್ತಿಯಿಂದ ಮಿನಿಕಾಯ್ ದ್ವೀಪವನ್ನು ತಲುಪುತ್ತಿತ್ತು. ಕಡಲಲ್ಲಿ ಸುಮಾರು ಮುನ್ನೂರು ಕಿಲೋಮೀಟರುಗಳಿಗಿಂತಲೂ ದೂರ ಚಲಿಸಿತ್ತು. ನಿಮಗೆ ಗೊತ್ತಿರಬಹುದು. ಕಡಲಲ್ಲಿ ದೂರವನ್ನು ನಾಟಿಕಲ್ ಮೈಲಿನಲ್ಲಿ ಅಳೆಯುತ್ತಾರೆ. ಒಂದು ನಾಟಿಕಲ್ ಮೈಲು ಅಂದರೆ ಒಂದು ಕಿಲೋಮೀಟರ್ ಮತ್ತು ಎಂಟುನೂರ ಐವತ್ತೆರಡು ಮೀಟರುಗಳು. ಮಿನಿಕಾಯ್ ದ್ವೀಪ ನಾನಿರುವ ಕವರತ್ತಿಯಿಂದ ದಕ್ಷಿಣ ದಿಕ್ಕಿನಲ್ಲಿ ಇನ್ನೂರೈವತ್ತು ಕಿಲೋಮೀಟರ್ ದೂರದಲ್ಲಿದೆ. ಆದರೆ ನಾನು ಹೋಗಿದ್ದು ಉತ್ತರಕ್ಕಿರುವ ಅಗತ್ತಿ ದ್ವೀಪದಿಂದಾಗಿ ಸುಮಾರು ಅರವತ್ತು ಕಿಲೋಮೀಟರ್ ಹೆಚ್ಚುವರಿ ದೂರವನ್ನು ಕ್ರಮಿಸಿ. ಕೊಚ್ಚಿಯಿಂದ ಹೊರಟಿದ್ದ ಆ ಹಡಗು ನಾನಿರುವ ದ್ವೀಪಕ್ಕೆ ಬಂದು ಅಲ್ಲಿಂದ ಅಗತ್ತಿಯನ್ನು ಹಾದು ಮಿನಿಕಾಯ್ ದ್ವೀಪವನ್ನು ಬಳಸಿಕೊಂಡು ಮತ್ತೆ ಕೊಚ್ಚಿಯನ್ನು ತಲುಪಬೇಕಿತ್ತು. ಇಂತಹದೇ ಇನ್ನೂ ಆರು ಹಡಗುಗಳು ಹೀಗೆಯೇ ಹಲವು ದ್ವೀಪಗಳನ್ನು ಬಳಸಿಕೊಂಡು ಸುತ್ತುತ್ತಲೇ ಇರುತ್ತವೆ.

ಇದರಲ್ಲಿ ಎಂ ವಿ ಕವರತ್ತಿ ಅನ್ನುವುದು ಬಹಳ ದೊಡ್ಡ ಐಷಾರಾಮಿ ಹಡಗು. ಪ್ರವಾಸಿಗರಿಗಾಗಿಯೇ ನಿರ್ಮಿಸಿರುವುದು. ಉಳಿದ ಹಾಗೆ ಎಂ ವಿ ಲಗೂನ್ ಮತ್ತು ಎಂ ವಿ ಕೋರಲ್ ಅನ್ನುವುದು ಇನ್ನೂ ಸ್ವಲ್ಪ ಸಣ್ಣ ಹಡಗು. ಆದರೆ ಯಾಕೋ ನನಗೆ ಇವುಗಳೇ ಸ್ವಲ್ಪ ಇಷ್ಟ. ಅವುಗಳ ವಿನ್ಯಾಸ ಒಳಾಂಗಣದ ಅಚ್ಚುಕಟ್ಟುತನ ಇತ್ಯಾದಿಗಳಿಂದಾಗಿ. ಇನ್ನೆರೆಡು ಇವಕ್ಕಿಂತಲೂ ಸಣ್ಣವು ಎಂ ವಿ ಅರೇಬಿಯನ್ ಸೀ ಮತ್ತು ಎಂ ವಿ ಲಕ್ಷದ್ವೀಪ್ ಸೀ. ಮಳೆಗಾಲದ ಸಮಯದಲ್ಲಿ ಇವುಗಳಲ್ಲಿ ಕೂರದಿರುವುದು ಒಳ್ಳೆಯದು ಅನ್ನುತ್ತಾರೆ. ಗಾಳಿಗೆ ಅಷ್ಟೊಂದು ಓಲಾಡುತ್ತದೆಯಂತೆ. ಗರ್ಭಿಣಿಯರಿಗಿಂತಲೂ ಹೆಚ್ಚಾಗಿ ವಾಂತಿಮಾಡಿಕೊಳ್ಳಬೇಕಾಗುತ್ತದೆಯಂತೆ. ಆದರೆ ಬೇಸಗೆಯ ಶಾಂತಸಾಗರದಲ್ಲಿ ಇವುಗಳೂ ಮಂದಗಮನೆಯರಂತೆ ವಯ್ಯಾರದಲ್ಲಿ ಚಲಿಸುತ್ತಿರುತ್ತವೆ. ಇನ್ನುಳಿದ ಎರಡು ಹಡಗುಗಳು ಎಂ ವಿ ಮಿನಿಕಾಯ್ ಮತ್ತು ಎಂ ವಿ ಅಮೀನಿದೀವಿ ಇವು ತುಂಬ ಸಣ್ಣ ಹಡಗುಗಳು. (ಅಂದ ಹಾಗೆ ಎಂ ವಿ ಅಂದರೆ ಮೋಟರೈಸ್ಡ್ ವೆಸೆಲ್ ಅಂದರೆ ಯಾಂತ್ರೀಕೃತ ಹಡಗುಗಳು) ಮಂಗಳೂರು ಮತ್ತು ಕೇರಳದ ಬೇಪೂರುಗಳಿಗೆ ಬಂದುಹೋಗುವ ಹಡಗುಗಳಿವು. ಮಳೆಗಾಲದಲ್ಲಿ ಇವುಗಳು ಓಡುವುದಿಲ್ಲ. ಏಕೆಂದರೆ ಕಾರ್ಗಾಲದ ಬಿರುಗಾಳಿಯನ್ನು ಇವುಗಳು ತಡೆದುಕೊಳ್ಳುವುದಿಲ್ಲ.

ಈ ಎಲ್ಲ ಹೊಸ ಹಡಗುಗಳು ಓಡುವ ಮೊದಲು ಇಲ್ಲಿ ಎಂ ವಿ ಟೀಪುಸುಲ್ತಾನ್ ಮತ್ತು ಎಂ ವಿ ಭಾರತ್ ಮಾತಾ ಇತ್ಯಾದಿ ಹಡಗುಗಳು ಓಲಾಡುತ್ತಾ ತೇಲಾಡುತ್ತಿದ್ದುವಂತೆ. ಅವುಗಳ ಓಡಾಟದ ಕುರಿತು ಬಹಳಷ್ಟು ಕಥೆಗಳೇ ಇವೆ. ಅದಕ್ಕೂ ಮೊದಲು ಇಲ್ಲಿನವರದೇ ಹಾಯಿ ಹಡಗುಗಳು ಮಂಗಳೂರಿಗೂ ಬೇಪೂರಿಗೂ ನಡುವೆ ಓಡಾಡುತ್ತಿದ್ದವು. ವಾರಗಟ್ಟಲೆಯ ಓಡಾಟ. ಕೆಲವೊಮ್ಮೆ ತಿಂಗಳುಗಟ್ಟಲೆಯೂ ಆಗುತ್ತಿತ್ತು. ಈ ಓಡಾಟಗಳ ರೋಮಾಂಚಕ ಕಥೆಗಳನ್ನು ಕೇಳುವುದೇ ಒಂದು ಅನುಭವ. ಸಿಂದಾಬಾದನ ನೌಕಾಯಾನದ ಕಥೆಗಳಂತೆ. ಆಗ ಈ ದ್ವೀಪಗಳಿಗೆ ಉದ್ಯೋಗ ಅರಸಿ ಬರುವ ಶಿಕ್ಷಕರೂ, ನೌಕರರೂ ಇಂತಹದೇ ಹಾಯಿ ಹಡಗುಗಳಲ್ಲಿ ವಾರಗಟ್ಟಲೆ ಕೂತು ಬರುತ್ತಿದ್ದರಂತೆ.

ಒಂದು ಸಲ ಹೀಗೆ ಒಬ್ಬರು ಶಿಕ್ಷಕಿಯನ್ನು ತಮ್ಮ ಹಾಯಿದೋಣಿಯಲ್ಲಿ ಹತ್ತಿಸಿಕೊಂಡು ಕೇರಳದ ಬೇಪೂರಿಗೆ ಹೊರಟಿದ್ದವರು ತಮ್ಮ ಕಥೆ ಹೇಳುತ್ತಿದ್ದರು. ಏಳು ದಿನಗಳಲ್ಲಿ ಬೇಪೂರು ತಲುಪಬೇಕಿದ್ದ ದೋಣಿ ಗಾಳಿಯಿಲ್ಲದೆ ಹಾಯಿ ಚಲಿಸದೆ ನಿಂತಲ್ಲೇ ಕಡಲ ನಡುವಲ್ಲಿ ಇನ್ನೂ ವಾರಗಟ್ಟಲೆ ನಿಂತುಕೊಳ್ಳಬೇಕಾಗಿ ಬಂದದ್ದು. ತಂದಿದ್ದ ನೀರು ಮುಗಿದು ಹೋಗಿದ್ದು. ದೋಣಿಯಲ್ಲಿದ್ದ ಕೊಬ್ಬರಿಯನ್ನೇ ತುಂಡು ತುಂಡು ತಿಂದು ಬದುಕಿಕೊಂಡದ್ದು. ಶಿಕ್ಷಕಿಯ ಅಳಲು ಮತ್ತು ವಾಂತಿ. ಇವರ ಛಲ ಮತ್ತು ದೇವರ ದಯೆ ಎಲ್ಲವನ್ನೂ ವಿವರಿಸುತ್ತಾ ತಮ್ಮ ಬೊಚ್ಚುಬಾಯಿಯಲ್ಲಿ ನಗುತ್ತಿದ್ದರು. ಆ ಟೀಚರ ಹೆಸರು ಸರಸ್ವತಿಯೋ, ಮೀನಾಕ್ಷಿಯೋ ಏನೋ ಇರಬೇಕು. ತಿರುವಾಂಕೂರಿನಲ್ಲಿ ಜನಿಸಿದ್ದ ಮಂಗಳೂರು ಮೂಲದ ಸಾರಸ್ವತ ಸಮಾಜಕ್ಕೆ ಸೇರಿದ್ದವರು. ಆ ಸರಸ್ವತಿ ಟೀಚರು ಇದ್ದಿದ್ದರೆ ಏನೆಲ್ಲ ಕಥೆಗಳು ಅವರ ಬಳಿ ಹೇಳಲು ಇರುತ್ತಿತ್ತೋ ಏನೋ. ಸದ್ದಿಲ್ಲದೆ ಚಲಿಸುತ್ತಿದ್ದ ಅರೇಬಿಯನ್ ಸೀ ಹಡಗಲ್ಲಿ ಇದನ್ನೇ ಯೋಚಿಸುತ್ತಿದ್ದೆ. ಸರಸ್ವತಿ ಟೀಚರು ಹೇಳುವ ಹಾಯಿದೋಣಿಯ ಕಥೆಗಳು.

ಕಳೆದ ಕಂತಿನಲ್ಲಿ ನಾನು ಬರೆದಿದ್ದ ಪರೀಕ್ಷಾ ಪರಿವೀಕ್ಷಕರೂ ಹೀಗೇ ಪರಿವೀಕ್ಷಣೆಗಾಗಿ ಕೇರಳದಿಂದ ಬಂದಿದ್ದವರು. ಇಬ್ಬರನ್ನು ಕವರತ್ತಿಯಲ್ಲಿ ಇಳಿದಿದ್ದರು, ಇಬ್ಬರು ಅಗತ್ತಿಯಲ್ಲಿ ಇಳಿದಿದ್ದರು, ಉಳಿದ ಇಬ್ಬರು ನನ್ನೊಡನೆ ಮಿನಿಕಾಯಲ್ಲಿ ಇಳಿದಿದ್ದರು. ಹಡಗಿನ ಡೆಕ್ಕಿನಲ್ಲಿ ಕುಳಿತು ಕಷ್ಟ ಸುಖಗಳನ್ನು ಮಾತನಾಡುತ್ತ ಕುಳಿತವರ ಕಷ್ಟಸುಖಗಳ ತಮಾಷೆಗಳನ್ನು ಆಗಾಗ ಕೇಳಿಸಿಕೊಳ್ಳುತ್ತಾ ನಡುನಡುವೆ ಆಕಾಶದಂತೆ ಸುತ್ತಿಕೊಂಡಿರುವ ಕಡುನೀಲ ಕಡಲನ್ನು ನೋಡುತ್ತಾ, ನಡುನಡುವೆ ದೀರ್ಘ ನಿದ್ದೆ ಹೋಗುತ್ತಾ ಹಡಗಿನಲ್ಲಿ ಹದಿನೆಂಟು ಗಂಟೆಗಳನ್ನು ಕಳೆದು ಬೆಳಗಿನ ಹೊತ್ತು ಮಿನಿಕಾಯ್ ಮುಟ್ಟಿದ್ದೆ. ಲಕ್ಷದ್ವೀಪ ಸಮೂಹದ ಅತಿ ದಕ್ಷಿಣಕ್ಕಿರುವ ದ್ವೀಪ ಮಿನಿಕಾಯ್. ಇಲ್ಲಿಂದ ಮಾಲ್ಡೀವ್ಸ್ ದ್ವೀಪಗಳು ಬಹಳ ಹತ್ತಿರ. ಆದರೆ ಅದು ಬೇರೆ ದೇಶವಾಗುವುದರಿಂದ ಅಲ್ಲಿಗೆ ಹೋಗಬೇಕಾದರೆ ಬೇರೆ ಯಾವುದೇ ದೇಶಗಳಿಗೆ ಹೋಗುವಂತೆ ರಹದಾರಿಯ ಸಮೇತ ಕೊಚ್ಚಿಯಿಂದ ವಿಮಾನದಲ್ಲಿ ಹೋಗಬೇಕು. ಭಾಷೆ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ಮಿನಿಕಾಯ್ ದ್ವೀಪಕ್ಕೂ ಮಾಲ್ಡೀವ್ಸ್ ದೇಶದ ದ್ವೀಪಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಹದಿಮೂರನೆಯ ಶತಮಾನದ ಮೊರಾಕ್ಕೋ ಪ್ರವಾಸಿ ಮತ್ತು ಇಸ್ಲಾಮಿಕ್ ಕಾನೂನು ಪಂಡಿತ ಇಬ್ನ್ ಬತೂತ ಬಂದಿದ್ದಾಗ ಈ ಎಲ್ಲ ದ್ವೀಪಗಳೂ ಒಂದೊಂದು ಹೆಸರಿನಿಂದ ಕರೆಯಲ್ಪಡುತ್ತಿದ್ದುವು. ಆಗ ಆತ ಮಿನಿಕಾಯ್ ದ್ವೀಪಕ್ಕೆ ಇಟ್ಟಿದ್ದ ಹೆಸರು ಸ್ತ್ರೀದ್ವೀಪ ಎಂದು. ಏಕೆಂದರೆ ಈ ದ್ವೀಪದ ಸ್ತ್ರೀಯರು ಸುಂದರಿಯರೂ, ಪಾಕ ಪ್ರವೀಣರೂ, ಗೃಹಕೃತ್ಯಗಳ ಕೋವಿದರೂ, ಧೈರ್ಯವಂತರೂ ಆಗಿದ್ದರು.

(ಫೋಟೋಗಳು: ಅಬ್ದುಲ್‌ ರಶೀದ್)

ಇಬ್ನ್ ಬತೂತ ಗಮನಿಸಿದ ಹಾಗೆ ಆತನಿಗೆ ಅನುಕೂಲಕರವಾಗಿದ್ದ ಇನ್ನೊಂದು ಬಹಳ ಮುಖ್ಯ ಅಂಶವೆಂದರೆ ಈ ದ್ವೀಪದ ಸ್ತ್ರೀಯರು ತಮ್ಮ ಪತಿಯನ್ನು ಬೇಕಾದರೆ ತ್ಯಜಿಸಿಯಾರು ಆದರೆ ತಮ್ಮ ದ್ವೀಪವನ್ನು ತ್ಯಜಿಸಲಾರರು ಎಂಬುದು. ಸದಾ ಪ್ರವಾಸಿಗನಾಗಿ ಲೋಕ ಸುತ್ತುತ್ತಿದ್ದ ಇಬ್ನ್ ಬತೂತನಿಗೆ ಮಡದಿಯರ ಅವಶ್ಯಕತೆ ಇತ್ತು. ಆದರೆ ಅವರನ್ನು ಕಟ್ಟಿಕೊಂಡು ಓಡಾಡುವ ತಾಪತ್ರಯಗಳು ಬೇಕಾಗಿರಲಿಲ್ಲ. ಹಾಗಾಗಿ ಆತ ಈ ದ್ವೀಪದ ಇಬ್ಬರು ಸ್ತ್ರೀಯರನ್ನು ವರಿಸುತ್ತಾನೆ. ಇಬ್ಬರೂ ದ್ವೀಪದ ಎರಡು ಪತಿಷ್ಠಿತ ಕುಟುಂಬಗಳಿಗೆ ಸೇರಿದ ಸ್ತ್ರೀಯರು. ಹಾಗಾಗಿ ಆತನಿಗೆ ಈ ದ್ವೀಪದ ಎರಡೂ ಪತಿಷ್ಠಿತ ಕುಟುಂಬಗಳ ಬೆಂಬಲ ದೊರೆತು ಆ ದ್ವೀಪವನ್ನು ಆಳುತ್ತಿದ್ದ ದೊರೆಗಿಂತ ಬಲಶಾಲಿಯಾಗುತ್ತಾನೆ. ಈ ಅಪಾಯವನ್ನರಿತ ಆ ದೊರೆ ಇಬ್ನ್ ಬತೂತನಿಗೆ ದ್ವೀಪ ಬಿಡುವಂತೆ ಆಜ್ಞಾಪಿಸುತ್ತಾನೆ. ಆತನಿಗೂ ಇದೇ ಬೇಕಾಗಿರುತ್ತದೆ. ದ್ವೀಪವನ್ನೂ ಮಡದಿಯನ್ನೂ ಬಿಟ್ಟು ಸಿಲೋನೊನ ಕಡೆ ಹೊರಡುವ ಹಾಯಿ ದೋಣಿಯನ್ನು ಹತ್ತುತ್ತಾನೆ.

ಓದುಗರಲ್ಲಿ ಒಂದು ವಿನಂತಿ, ಇದನ್ನು ಓದಿದ ಕೂಡಲೇ, ‘ಓ ಹಾಗಾ? ನಾನು ಹೇಳಿಲ್ಲವಾ? ಅವರಲ್ಲಿ ಕಂಡಲ್ಲಿ ಕಂಡಲ್ಲಿ ಮದುವೆಯಾಗುವ ಪದ್ಧತಿ ಇದೆಯಲ್ಲವಾ’ ಎಂದು ಮೂಗಿನ ತುದಿಯಲ್ಲಿ ನಗಲು ಶುರುಮಾಡಬೇಡಿ. ನಾನು ಹೇಳುತ್ತಿರುವುದು ಏಳುನೂರು ವರ್ಷಗಳ ಹಿಂದಿನ ಸಂಗತಿ. ಈಗ ನೀವೇನಾದರೂ ಇಂತಹ ಆಸೆ ಇಟ್ಟುಕೊಂಡು ಬಂದರೆ ಇಲ್ಲಿನ ಸ್ತ್ರೀಯರು ನಿಮ್ಮನ್ನು ಅರಬಿಕಡಲಿನ ನೀರಲ್ಲಿ ಒತ್ತಿ ಮುಳುಗಿಸಿ ದಕ್ಕಯ್ಯ ದಮ್ಮಯ್ಯ ಹೇಳಿಸಿ ಇನ್ನೊಂದು ಹಡಗು ಹತ್ತಿಸಿ ಗಡೀಪಾರು ಮಾಡಿಬಿಡುತ್ತಾರೆ.

ತಮ್ಮ ಪ್ರಯಾಣದ ದಿನಗಳು, ತಮ್ಮ ಪ್ರಯಾಣದ ಭತ್ಯೆ ಇತ್ಯಾದಿಗಳ ಕುರಿತು ಮಾತನಾಡುತ್ತಿದ್ದ ಕೇರಳದ ಆ ಪರಿವೀಕ್ಷಕರಿಗೆ ತಮ್ಮ ಈ ಹಡಗಿನಲ್ಲಿ ಕಳೆದ ದಿನಗಳ ತುಟ್ಟಿಭತ್ಯೆಯನ್ನು ಯಾವ ಕಾಲಂನಲ್ಲಿ ಬರೆಯುವುದು ಎಂಬ ಚಿಂತೆಯಾಗಿತ್ತು. ಹಡಗಿನ ಟಿಕೇಟಿನಲ್ಲಿ ಪ್ರಯಾಣದ ದರ ಇತ್ತು. ಆದರೆ ವಸತಿ ಮತ್ತು ಆಹಾರದ ದರಗಳಿರಲಿಲ್ಲ. ‘ಹಾಗೆಲ್ಲಾ ಭಯ ಪಡಬೇಡ, ಎಲ್ಲದಕ್ಕೂ ನಿಯಮಗಳಿವೆ. ಇದಕ್ಕೂ ಒಂದು ವ್ಯವಸ್ಥೆ ಇರುತ್ತದೆ’ ಎಂದು ಒಬ್ಬನನ್ನು ಇನ್ನೊಬ್ಬ ಸಮಧಾನಿಸುತ್ತಿದ್ದ. ಇನ್ನೊಬ್ಬನಿಗೂ ಅಷ್ಟೇ ಈ ದ್ವೀಪಕ್ಕೆ ಎರಡನೇ ಬಾರಿ ಬರಬೇಕಾಗಿ ಬಂದ ಕೋಪ ಇನ್ನೂ ಆರಿರಲಿಲ್ಲ. ಕಳೆದ ಬಾರಿ ಪರಿವೀಕ್ಷಣೆಗಾಗಿ ಬಂದಿದ್ದಾಗ ಆತನ ಹೊಸತಾಗಿ ಮದುವೆಯಾಗಿದ್ದ ಮಡದಿಯೂ ಬಂದಿದ್ದಳು. ಆಕೆ ಹಡಗನ್ನು ಹತ್ತಿದವಳು ಕೊಚ್ಚಿಯಿಂದ ಮಿನಿಕಾಯ್ ತನಕವೂ ಸಮುದ್ರದ ಅಸ್ವಸ್ಥತೆಗೆ ಸಿಲುಕಿ ಸುದೀರ್ಘವಾದ ವಾಂತಿಮಾಡುತ್ತಾ ಹೈರಾಣಾಗಿ ಹೋಗಿದ್ದಳು. ಪುನಃ ಮಿನಿಕಾಯಿಂದ ಕೊಚ್ಚಿನ್ ತಲುಪುವವರೆಗೂ ಕೂಡಾ. ಅಲ್ಲಿ ಹಡಗು ತಲುಪಿದ ತಕ್ಷಣ ಆಂಬುಲೆನ್ಸ್ ತರಿಸಿ ಆಸ್ಪತ್ರೆಗೆ ಸೇರಿಸಿ ಅಗತ್ಯವಾಗಿದ್ದ ಜೀವದ್ರವಗಳನ್ನು ಡ್ರಿಪ್ ಮೂಲಕ ಹಾಯಿಸಿ ಬದುಕಿಸಿದ್ದರು. ಆಗ ಅವಳು ಗರ್ಭ ಧರಿಸಿರುವುದೂ ಗೊತ್ತಾಗಿತ್ತಂತೆ. ಈಗ ಆ ಮಗುವಿಗೆ ಆರು ತಿಂಗಳು. ಎಲ್ಲ ಕಡೆಯೂ ಕೋವಿಡ್ ಬೇರೆ. ಈ ಕಡಲ ನಡುವೆ ೩೬ ಗಂಟೆ ಫೋನೂ ಇಲ್ಲದೆ ಏನೂ ಇಲ್ಲದೆ ತಲೆ ಕೆಟ್ಟು ಹೋಗಿತ್ತು. ಅದರ ನಡುವೆ ಈ ಒಬ್ಬನ ಪ್ರಯಾಣಭತ್ಯೆಯ ಚಿಂತೆ. ಅವರಿಗೆ ಗೊತ್ತಿಲ್ಲದೇ ಅವರ ಕಥೆಗಳನ್ನು ಕೇಳಿಸಿಕೊಳ್ಳುತ್ತಾ ನಾನೂ ಅದರಲ್ಲಿ ಒಳಗೊಂಡು ನನ್ನಲ್ಲೂ ಹಲವು ಕಳವಳಗಳು ಶುರುವಾಗ ತೊಡಗಿದ್ದವು.

ದೋಣಿ ಸ್ಪರ್ಧೆಯ ಔತಣಕೂಟದ ನೆಪದಲ್ಲಿ ಹೂಹಕ್ಕಿಯೊಂದನ್ನು ಹುಡುಕುತ್ತಾ ಹಡಗು ಹತ್ತಿದವನು ಈಗ ಕೇರಳದ ಇಬ್ಬರು ಪರಿವೀಕ್ಷಕರ ದೈನಿಕದ ಸಂಕಟದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವುದು ಸರಿ ಅಲ್ಲ ಅನಿಸುತ್ತಿತ್ತು. ಬೆಳಗೇ ಎದ್ದವನು ಮಿನಿಕಾಯ್ ಕಾಣುತ್ತಿದೆಯೇ ಎಂದು ಹಡಗಿನ ಡೆಕ್ಕಿನಲ್ಲಿ ನಿಂತು ದೂರಕ್ಕೆ ಕಣ್ಣು ಹಾಯಿಸುತ್ತಿದ್ದೆ. ಅಂದುಕೊಂಡ ಹಾಗೇ ದೂರದಲ್ಲಿ ಕಡು ನೀಲ ಕಡಲ ಮೇಲೆ ಏಳುತ್ತಿರುವ ಸೂರ್ಯನ ಅಡಿಯಲ್ಲಿ ಹಸುರಾಗಿ ಹೊಳೆಯುತ್ತಿರುವ ಪುಟ್ಟದೊಂದು ನೆಲ. ಇನ್ನೊಂದು ಮರಕತ ದ್ವೀಪ ಅಂದುಕೊಂಡೆ. ಮುತ್ತು ಮತ್ತು ಹವಳಗಳು ಕಡಲ ಒಳಗಿರುತ್ತವೆ. ಆದರೆ ಈ ದ್ವೀಪಗಳಿಗೆ ಮರಕತ ದ್ವೀಪಗಳು ಅಂತ ಯಾಕೆ ಕರೆಯುತ್ತಾರೆ ಎಂದು ಗೊತ್ತಿರಲಿಲ್ಲ. ಆಮೇಲೆ ಇಲ್ಲಿನ ಸಂಸ್ಕೃತ ಪಂಡಿತರೊಬ್ಬರು ಬಿಡಿಸಿ ಹೇಳಿದ್ದರು.

ಮರಕತ ಅಂದರೆ ಪಚ್ಚೆ. ಅಂದರೆ ಹಸಿರು. ಆಕಾಶದಿಂದ ನೋಡುವಾಗ ಈ ದ್ವೀಪಗಳು ಪಚ್ಚೆಯ ಆಭರಣಗಳಂತೆ ಕಾಣಿಸುತ್ತವೆಯಂತೆ. ಒಂದು ದ್ವೀಪ ಅಂದರೆ ಒಂದು ದೊಡ್ಡ ತೆಂಗಿನ ತೋಪು. ಆ ತೋಪಿನ ಹಸಿರು ಚಾದರೊಳಗೆ ಕಾಣಿಸದೆ ಬದುಕುವ ಒಂದು ದೊಡ್ಡ ಜನಸಮೂಹ. ನೀಲ ಕಡಲಲ್ಲಿ ಕಾಣುವುದು ಚಲಿಸುವ ದೋಣಿಗಳು ಮತ್ತು ಕಟ್ಟಿ ಹಾಕಿರುವ ದೋಣಿಗಳು ಮಾತ್ರ. ಕಡಲಿನಿಂದಲೂ ಕಾಣಿಸುವುದು ಹೀಗೆಯೇ. ಕಡಲ ಮಧ್ಯೆ ಮಲಗಿರುವ ಒಂದು ಪಚ್ಚೆಯ ಹಾರದ ಹಾಗಿರುವ ಈ ದ್ವೀಪಗಳು. ಅಂತಹ ದ್ವೀಪಗಳಲ್ಲೇ ಅತಿ ಸುಂದರ ದ್ವೀಪ ಮಿನಿಕಾಯ್. ಬೆಳಗಿನ ಹೊತ್ತಲ್ಲಿ ದೂರಕ್ಕೆ ಸೂರ್ಯನ ಬೆಳಕಿಗೆ ಎಚ್ಚರಾಗಿ ಮೈಮುರಿದುಕೊಳ್ಳುತ್ತಿರುವಂತೆ ಕಾಣಿಸುತ್ತಿತ್ತು.

(ಮುಂದುವರಿಯುವುದು)

ಮಿನಿಕಾಯ್ ಕಥಾನಕ ಮೊದಲ ಕಂತಿನಿಂದ ಓದಲು ಇಲ್ಲಿ ಕ್ಲಿಕ್ ಮಾಡಿ