‘ಶಾರದಾ ಮೇಡಂ ಆಬ್ಸೆಂಟು, ಬರ್ತಾನೇ ಇಲ್ಲ’ ಎಂದು ಪುಟ್ಟ ಅಕ್ಷಯ ಮೊದಲ ಬಾರಿಗೆ ಹೇಳಿದಾಗ ಗುಪ್ತಾ ಸಂಸಾರ ಅದನ್ನ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಆಗಷ್ಟೇ ಸ್ಕೂಲು ಸೇರಿ ಎಲ್.ಕೇ.ಜಿ.ಯಲ್ಲಿದ್ದ ಮಗ ಸತತವಾಗಿ ಒಂದು ವಾರ ಈ ವಿಷಯವನ್ನು ಪುನರುಚ್ಚರಿಸಿದಾಗ- ಗುಪ್ತಾ ಸಂಸಾರಕ್ಕೆ ಸ್ವಲ್ಪ ಚಿಂತೆ, ಕುತೂಹಲ ಉಂಟಾಯಿತು. ಯಾಕೆಂದರೆ ಮಕ್ಕಳಿಗೆಲ್ಲಾ ಶಾರದಾ ಮೇಡಂ ಅಂದರೆ ತುಂಬಾ ಇಷ್ಟ. ಆಕೆಯ ಬಳಿ ಅದೇನು ಜಾದೂ ಮಂತ್ರವಿತ್ತೋ ತಿಳಿಯದಾದರೂ ಮಕ್ಕಳು ಮಾತ್ರ ಶಾಲೆಗೆ ಹೋಗಲು ಪ್ರತಿದಿನ ತಹತಹಿಸುತ್ತಿದ್ದರು. ಎಷ್ಟರ ಮಟ್ಟಿಗೆಂದರೆ, ಪ್ರತಿ ಶನಿವಾರ ಗುಪ್ತಾಜಿ ಮತ್ತವರ ಶ್ರೀಮತಿಯವರಿಗೆ ಆಫೀಸಿರುವಾಗ ಮಗುವಿಗೆ ಶಾಲೆಯೇಕಿಲ್ಲವೆಂದು ವಿವರಿಸುವುದು ಕಷ್ಟವಾಗುವಷ್ಟರ ಮಟ್ಟಿಗೆ ಶಾಲೆ ಮತ್ತು ಶಾರದಾ ಮೇಡಂ ಅವರ ಜೀವನವನ್ನಾವರಿಸಿಬಿಟ್ಟಿದ್ದರು. ಎರಡನೇ ವಾರ ಕಳೆದರೂ ಶಾರದಾ ಮೇಡಂ ಶಾಲೆಗೆ ಬರದೇ ಉಳಿದಾಗಂತೂ ಗುಪ್ತಾಗಳಿಗೆ ಚಿಂತೆಯುಂಟಾಗಹತ್ತಿತು.

‘ನಾಳೆಯಿಂದ ನಾನೂ ಸ್ಕೂಲಿಗೆ ಆಬ್ಸೆಂಟಾಗ್ಹೋಗ್ತೀನಿ… ನನಗೆ ಶೀಲಾಮೇಡಂ ಇಷ್ಟ ಇಲ್ಲ’ ಎಂದು ಮಗ ಪ್ರತಿದಿನ ರಾದ್ಧಾಂತ ಮಾಡಹತ್ತಿದಾಗ ಅವರಿಗೆ ಚಿಂತೆಯುಂಟಾಗುವುದು ಸಹಜವೇ ಇತ್ತು.

ಮಗು ತುಂಬಾ ಖುಷಿಯಿಂದ ಶಾಲೆಗೆ ಹೋಗುತ್ತದೆ ಎಂಬ ಕಾರಣಕ್ಕಾಗಿಯೇ ಅದು ತುಂಬಾ ಒಳ್ಳೆಯ ಶಾಲೆಯೆಂಬ ನಿರ್ಧಾರಕ್ಕೆ ಗುಪ್ತಾ ದಂಪತಿಗಳು ಎಂದೋ ಬಂದುಬಿಟ್ಟಿದ್ದರು. ಈಗ ಹೀಗೆ ಮಗ ಪ್ರತಿದಿನ ನಾನು ಆಬ್ಸೆಂಟಾಗ್ತೀನಿ ಎಂದು ವರಾತ ತೆಗೆದರೆ, ಬಹುಶಃ ಪೆಟಲ್ಸ್ ಸ್ಕೂಲಿನ ಬಗ್ಗೆಯೇ ಮರುವಿಚಾರ ಮಾಡಬೇಕಾದೀತೆಂದು ಶ್ರೀಮತಿ ಮತ್ತು ಶ್ರೀ ಗುಪ್ತಾ ಸಮಾಲೋಚಿಸಿದರು. ದಿನಬೆಳಗಾದರೆ, ಯೂನಿಫಾರ್ಮ್ ಹಾಕಿಕೊಳ್ಳಲು ರಂಪಾಟ ಮಾಡುತ್ತಿದ್ದ ಮಗನಿಂದಾಗಿ- ಶಾಲೆಯ ಬಗ್ಗೆ- ಈಗಿತ್ತಲಾಗಿ, ಇಬ್ಬರೂ ಬಹಳವೇ ರೋಸಿಹೋಗಿದ್ದರು.

(ಆ ಶಾಲೆಗೆ ಪೆಟಲ್ಸ್ ಎಂಬ ಹೆಸರು ಹೇಗೆ ಬಂತೆಂದು ಗೊತ್ತಾಗಿದ್ದರೆ ಬಹುಶಃ ಅಲ್ಲಿಗೆ ಮಗನನ್ನು ಸೇರಿಸುವ ಬಗ್ಗೆ ಗುಪ್ತಾ ದಂಪತಿಗಳು ಪುನರಾಲೋಚಿಸುತ್ತಿದ್ದರೋ ಏನೋ…. ಹತ್ತು ವರ್ಷಗಳ ಹಿಂದೆ ಈ ಶಾಲೆ ಪ್ರಾರಂಭವಾದಾಗ– ಅಮೆರಿಕೆಯಲ್ಲಿನ ಅನಿವಾಸಿ ಭಾರತೀಯ [ಹಾಗೂ ಶ್ರೀಮಂತ ಹಾಗೂ ಗುಜರಾತಿ, ಮತ್ತು ಇನ್ನೇನೇನೂ..] ಆಗಿದ್ದ- ಭೂಪೇಂದ್ರಭಾಯಿ ಪಟೇಲ್ ದೊಡ್ಡ ಮೊಬಲಗನ್ನು ದಾನವಾಗಿ ನೀಡಿದ್ದ. ಹೀಗಾಗಿ ಆ ಶಾಲೆ ಪಟೇಲ್ಸ್ ಸ್ಕೂಲ್ ಆಗಬೇಕಿತ್ತು. ಮುಂದೆ ಸರದಾರ್ ವಲ್ಲಭಭಾಯಿ ಪಟೇಲರ ಫೋಟೋ ಹಾಕಿ ತಮ್ಮ ಶಾಲೆಗೆ ಗೌರವದ ಸ್ಧಾನವನ್ನ ದೊರಕಿಸಿಕೊಳ್ಳುವುದು ಶಾಲೆಯ ಮ್ಯಾನೇಜ್‌ಮೆಂಟಿನ ವಿಚಾರವಾಗಿತ್ತು. ಆದರೆ ಶಾಲೆಯ ಬೋರ್ಡನ್ನು ಪೇಂಟ್ ಮಾಡಿದ ಮಹಾಶಯನ ಅಕ್ಷರ ಜ್ಙಾನ ತಕ್ಕಮಟ್ಟಿಗೆ ಇಲ್ಲದ್ದರಿಂದ [ಅವನು ಆ ಶಾಲೆಯಲ್ಲಂತೂ ಓದಿರಲಿಲ್ಲವಲ್ಲ- ಸದ್ಯ!] ಪಟೇಲರ ಜಾಗದಲ್ಲಿ ಪೆಟಲ್ಸ್ ಬಂದು ಸ್ಧಾಯಿಯಾಗಿಬಿಟ್ಟಿತ್ತು).

ಎರಡು ವಾರ ಕಳೆದರೂ ಶಾರದಾ ಮೇಡಂ ಆಬ್ಸೆಂಟಾಗಿಯೇ ಉಳಿದಾಗ ವಿಚಾರ ಗಹನವಾಗುತ್ತಿದೆಯೆಂದು ಗುಪ್ತಾ ದಂಪತಿಗಳಿಗೆ ಅನ್ನಿಸಿತು. ಒಮ್ಮೆ ಶಾಲೆಯವರೊಂದಿಗೆ ಮಾತಾಡಿ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬೇಕೆನ್ನುವ ನಿರ್ಧಾರಕ್ಕೆ ಗುಪ್ತಾ ದಂಪತಿಗಳು ಬಂದರು. ಆ ನಿರ್ಧಾರದನುಸಾರವಾಗಿ ಅಂದು ಆಫೀಸು ತಲುಪಿದಾಕ್ಷಣ ಗುಪ್ತಾಜಿ ಶಾಲೆಗೆ ಫೋನ್ ಹಚ್ಚಿದರು. ಶಾಲೆಯ ನಂಬರ್ ರಿಂಗ್ ಆಗುತ್ತಿದ್ದಂತೆ, ಗುಪ್ತಾಜಿಯ ಮನಸ್ಸಿನಲ್ಲಿ ಅನೇಕ ವಿಚಾರಗಳು ಕುಣಿದಾಡಿದವು- ಬಹುಶಃ ಆಕೆಯ ಆರೋಗ್ಯ ಸರಿಯಿರಲಿಕ್ಕಿಲ್ಲ, ಊರೆಲ್ಲಾ ಸೊಳ್ಳೆಗಳು ಹಬ್ಬಿ ಎಲ್ಲೆಲ್ಲೂ ಮಲೇರಿಯಾದಿಂದ ಜನ ನಡುಗುತ್ತಿದ್ದರು. ಅಥವಾ ಶಾರದಾಮೇಡಂ ಯಾವುದಾದರೂ ಶಸ್ತ್ರ ಚಿಕಿತ್ಸೆಗೆ ಒಳಗಾಗಿರಬಹುದು… ಅಥವಾ…. ಅಥವಾ…. ಗುಪ್ತಾಜಿ ಯೋಚಿಸುತ್ತಲೇ ಹೆಡ್‌ಮೇಡಂಗೆ ಹಲೋ ಹೇಳಿದರು.

‘ನಾನು ಅಕ್ಷಯನ ಅಪ್ಪ ಮಾತಾಡ್ತಾ ಇದ್ದೀನಿ. ಶಾರದಾ ಮೇಡಂ ಬರ್ತಾ ಇಲ್ಲಾಂತ ಅಕ್ಷಯ ಹೇಳಿದ, ಹೀಗಾಗಿ ಸ್ವಲ್ಪ ಎನ್‌ಕ್ವಯರಿಸೋಣಾಂತ ಫೋನ್ ಮಾಡಿದೆ…’
‘ಓಹೋ, ಗುಪ್ತಾಜೀ, ನಮಸ್ಕಾರ, ನಮಸ್ಕಾರ.. ನಮಗೂ ಎಲ್ಲಕಡೆಯಿಂದ ಫೋನ್ ಬರ್ತಾಯಿದೆ, ಶಾರದಾ ಮೇಡಂ ಬಂದುಬಿಡ್ತಾರೆ, ಆದಷ್ಟು ಬೇಗನೇ ಬಂದುಬಿಡ್ತಾರೆ, ಏನೂ ಯೋಚನೆ ಮಾಡಬೇಡಿ, ಆ ಚಿಂತೆ ನಿಮಗಿಂತ ಹೆಚ್ಚು ನಮಗಿದೆ, ನೀವು ನಿರಾಳವಾಗಿರಿ.’
‘ಅದಿರಲಿ.. ಆದರೆ ಪ್ರಾಬ್ಲಂ ಏನು? ಆರೋಗ್ಯ, ಆಸ್ಪತ್ರೆ, ಹೀಗೇನಾದರೂ?? ಬೇಕಿದ್ದರೆ ನಾವು ನಮ್ಮ ಕೆಪಾಸಿಟಿಗನುಸಾರ ಹೆಲ್ಪು ಮಾಡಬಹುದೂಂತ….’

‘ಬಹಳ ಒಳ್ಳೆಯ ವಿಚಾರ. ನಿಮ್ಮಂತಹ ಪೇರೆಂಟ್ಸ್ ಮಕ್ಕಳು ನಮ್ಮ ಶಾಲೆಯಲ್ಲಿ ಓದ್ತಾ ಇರೋದು ನಮ್ಮ ಅದೃಷ್ಚ, ಭಾಗ್ಯ. ‘ಕೈಲಾದ ಸಹಾಯ’ ಅನ್ನೋ ವಿಷಯಕ್ಕೆ ಬಂದರೆ, ನೋಡಿ, ನಮ್ಮ ಶಾಲೆಯ ಹೊಸ ಬಿಲ್ಡಿಂಗಿಗಾಗಿ, ನಾವು ಪರದಾಡ್ತಾಯಿರೋದು ನಿಮಗೆ ತಿಳಿಯದ ವಿಷಯವೇನೂ ಅಲ್ಲ. ಅಲ್ಲಿ ಒಂದು ಪ್ಲಾಟ್ ಕೊಂಡದ್ದಾಗಿದೆ…. ಈಗ ನಿಮ್ಮಂತಹ ಪೇರೆಂಟ್ಸ್ ಸಹಾಯ ಮಾಡಿದರೆ ಒಳ್ಳೆಯ ಕೆಲಸ ಬೇಗ ಆಗುತ್ತೆ. ನೀವೂ ನಿಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದರೆ….. ಇಷ್ಟೂಂತ ಇಲ್ಲ….. ಒಂದು, ಎರಡು, ಐದು, ಹತ್ತು….. ಎಷ್ಟಾದರೂನೂ ಸರಿಯೇ. ‘

‘ಮೇಡಂ, ನಾನು ಶಾರದಾ ಮೇಡಂ ವಿಚಾರ ಮಾತಾಡುತ್ತಾ ಇದ್ದೆ..’
‘ಆ ವಿಚಾರ ಬಿಡಿ. ಅವರ ಚಿಂತೆ ನಮಗಿರಲಿ ನೀವು ಸ್ಕೂಲಿನ ಚಿಂತೆ ಮಾಡಿ ಮಿಸ್ಟರ್ ಗುಪ್ತಾ. ‘
‘ಸ್ಕೂಲಿಗೆ ಏನಾದರೂ ಮಾಡೋಣ ಮೇಡಂ… ಆದರೆ ಮಗು ಶಾರದಾ ಮೇಡಂ ಇದ್ದಷ್ಟು ದಿನ ಎವರೆಡಿಯಾಗಿ ಸ್ಕೂಲಿಗೆ ಹೋಗ್ತಾ ಇದ್ದವನು ಈಗ ಎವರಿಡೇ ಪ್ರಾಬ್ಲಂ ಮಾಡ್ತಾ ಇದ್ದಾನೆ……’

‘ಮಿಸ್ಟರ್ ಗುಪ್ತಾ ಮುಂದಿನ ಪೇರೆಂಟ್ಸ್-ಟೀಚರ್ಸ್ ಮೀಟಿಂಗಿನಲ್ಲಿ ಭೇಟಿಯಾಗೋಣ. ಶಾಲೆಗೆ ಸಹಾಯ ಮಾಡಲು ಒಪ್ಪಿಕೊಂಡದ್ದಕ್ಕೆ ಬಹಳ ಥ್ಯಾಂಕ್ಸ್. ಆ ದಿನ ನಾನು ಹೈಸ್ಕೂಲಿನ ಪ್ರಿನ್ಸಿಪಾಲರನ್ನೂ ನಮ್ಮಲ್ಲಿಗೆ ಬರಹೇಳುತ್ತೇನೆ. ನಮಗೆ ಚೆಕ್ ಆದರೂ ಆದೀತು. ಕ್ಯಾಷೇ ಬೇಕೂಂತ ನಾವೇನೂ insist ಮಾಡೋದಿಲ್ಲ. ಯಾಕೇಂದ್ರೆ ನಾವು ಎಲ್ಲವನ್ನೂ ಖುಲ್ಲಂಖುಲ್ಲಾ ಮಾಡ್ತೇವೆ. ಥಾಂಕ್ಯೂ.. ‘

ಗುಪ್ತಾಜಿಗೆ ಮಾತುಕತೆ ಹೋದ ದಿಕ್ಕನ್ನು ಕಂಡು ದಿಗ್ಭ್ರಮೆಯಾಯಿತು. ಮುಂದೆ ಮಾತೇ ಹೊರಡಲಿಲ್ಲ. ಹೊರಟಿದ್ದರೂ ಪ್ರಯೋಜನವಿರಲಿಲ್ಲ. ಹೆಡ್‌ಮೇಡಂ ಆಗಲೇ ಫೋನ್ ಇಟ್ಟಾಗಿತ್ತು.

*****

ಪ್ರತಿಬಾರಿ ಪೇರೆಂಟ್ಸ್-ಟೀಚರ್ಸ್ ಮೀಟಿಂಗಿಗೆ ಚಕ್ಕರ್ ಕೊಡುತ್ತಿದ್ದ ಗುಪ್ತಾಜಿ ಈ ಬಾರಿ ಹಾಜರಿ ಹಾಕಬೇಕೆಂದು ನಿರ್ಧರಿಸಿದರು. ಮೂಲತಃ ಶಾರದಾ ಮೇಡಂ ಕಥೆ ಏನೆಂದು ತಿಳಿವ ಕುತೂಹಲ ಪತಿ-ಪತ್ನಿಯರೀರ್ವರಿಗೂ ಇತ್ತು. ಅದೇ ಸಮಯಕ್ಕೆ ಹೆಡ್‌ಮೇಡಂ ಜತೆ ಆದ ಮಾತುಕಥೆಯೆಲ್ಲಿ ‘ಕೈಲಾದ ಸಹಾಯ’ ಹೊಕ್ಕಿದ್ದರಿಂದ ಗುಪ್ತಾಜಿ ಹೋಗಬೇಕೋ ಬೇಡವೋ ಎಂಬ ಡೈಲೆಮಾದಲ್ಲಿ ಬಿದ್ದರು. ಕಡೆಗೆ ಶ್ರೀಮತಿ ಮತ್ತು ಶ್ರೀ ಗುಪ್ತಾರ ಕ್ಯಾಂಪುಗಳ ಮಧ್ಯೆ ನಡೆದ ಎರಡು ರೌಂಡಿನ ಮಾತುಕತೆಯ ನಂತರ ಶ್ರೀಮತಿ ಗುಪ್ತಾ ಶಾಲೆಯ ಮೀಟಿಂಗಿಗೆ ಹೋಗಿ, ಉಪಾಯವಾಗಿ ಇತರ ಟೀಚರುಗಳ ಜತೆ ಮಾತಾಡಿ ಶಾರದಾ ಮೇಡಂ ಬಗ್ಗೆ ಮಾಹಿತಿ ಸಂಗ್ರಹಿಸುವುದೆಂದು ನಿರ್ಧಾರವಾಯಿತು. ಈ ಮೀಟಿಂಗಿನಲ್ಲಿ ಶ್ರೀಮತಿ ಗುಪ್ತಾ ಹೆಡ್‌ಮೇಡಂರನ್ನು ಸಾಧ್ಯವಾದ ಮಟ್ಟಿಗೆ ಭೇಟಿಯಾಗದಿರುವುದೇ ಒಳ್ಳೆಯದೆಂಬ ವಿಚಾರವನ್ನು ಇಬ್ಬರೂ ಒಪ್ಪಿದರು. ಮೀಟಿಂಗಿನ ನಂತರ ಮುಂದೇನು ಮಾಡಬೇಕೆಂಬ ಬಗ್ಗೆ ರಣನೀತಿ ತಯಾರಿಸಬೇಕೆಂಬ ನಿರ್ಧಾರವನ್ನು ಗಂಡ ಹೆಂಡಿರಿಬ್ಬರೂ ಸಮರ್ಥಿಸಿದರು.

ಶ್ರೀಮತಿ ಗುಪ್ತಾ ಹೆಡ್‌ಮೇಡಂಗೆ ಹೇಗೆ ಖೊಕ್ ಕೊಡಬೇಕೆಂಬುದರ ಬಗ್ಗೆ ಸಾಕಷ್ಟು ಮಾನಸಿಕ ತಯಾರಿ ನಡೆಸಿದ್ದರು. ಇದಕ್ಕೆ ಸ್ಕೂಲಿನ ನಕ್ಷೆ, ಮೀಟಿಂಗಿನಲ್ಲಿ ಯಾರು ಎಲ್ಲಿ ಕುಳಿತುಕೊಳ್ಳುತ್ತಾರೆಂಬ ಪೂರ್ವ ಮಾಹಿತಿ, ಹಾಗೂ ಶಾಲೆಯ ದ್ವಾರಗಳ ನಿಖರ ಸ್ಥಾನಗಳನ್ನು (ಆತಂಕವಾದಿಗಳ ಯೋಜನೆಯ ರೀತಿಯಲ್ಲಿ) ಅಧ್ಯಯನ ಮಾಡಿರಲಿಲ್ಲ ಎಂಬುದಷ್ಟೇ ಸಮಾಧಾನ ಕೊಡುವ ವಿಚಾರವಾಗಿತ್ತು.

ಶಾಲೆಯ ಆವರಣವನ್ನು ಶ್ರೀಮತಿ ಗುಪ್ತಾ ಪ್ರವೇಶಿಸಿದ ಕೂಡಲೇ ಮೊದಲಿಗೆ ಕಂಡವರು ರೋಹಿಣಿ ಮೇಡಂ. ಅವರ ಬಳಿಗೆ ಹೋಗಿ ಶಾರದಾ ಮೇಡಂ ವಿಚಾರ ಕೇಳುವಷ್ಟರಲ್ಲಿಯೇ ರೋಹಿಣಿ ಒಂದು ಚಮತ್ಕಾರದ ಟೂಥ್‌ಪೇಸ್ಟ್ ಜಾಹೀರಾತಿನ ಮುಗುಳ್ನಗೆ ಬೀರಿ, ಭದ್ರವಾಗಿ ಕೈಕುಲುಕಿದ್ದಷ್ಟೇ ಅಲ್ಲ- ಆ ಕೈಯನ್ನು ಬಿಡದೆಯೇ ಭದ್ರವಾಗಿ ಹಿಡಿದು ನಿಂತುಬಿಟ್ಟರು. ಟೂಥ್‌ಪೇಸ್ಟ್ ನಗೆಯ ನಂತರದ ಡಿಶುಂ ಡಿಶುಂ ಆಗಲೇ ಪ್ರಾರಂಭವಾಯಿತೆನ್ನಿಸುತ್ತದೆ. ಶ್ರೀಮತಿ ಗುಪ್ತಾರ ಮುಂದಿನ ಪ್ರಹಾರವಾಗುವುದಕ್ಕೆ ಮೊದಲೇ ರೋಹಿಣಿ ಮೇಡಂ ಬಲಗೈಯಲ್ಲಿ ಮಾಡಿದ್ದ ಪಾಣಿಗ್ರಹಣವನ್ನು ಬಿಟ್ಟುಕೊಡದೆಯೇ ದೂರದಲ್ಲಿ ನಿಂತಿದ್ದ ಹೆಡ್‌ಮೇಡಂ ಕಡೆಗೆ ಎಡಗೈಯಿಂದ ಸನ್ನೆ ಮಾಡಿದರು. ಶಾರದಾ ಮೇಡಂ ವಿಷಯ ಎತ್ತಬೇಕೆನ್ನುವಷ್ಟರಲ್ಲಿಯೇ ಶ್ರೀಮತಿ ಗುಪ್ತಾ ಹೆಡ್‌ಮೇಡಂ ಕೈಯಲ್ಲಿ ಬಂಧಿಯಾಗಿಬಿಟ್ಟಿದ್ದರು. (ಬಹುಶಃ ಶಾಲೆಯವರ ರಣನೀತಿ ಗುಪ್ತಾ ಸಂಸಾರದ ರಣನೀತಿಗಿಂತ ಉತ್ತಮವಾಗಿತ್ತೆನ್ನಿಸುತ್ತದೆ. ಎಷ್ಟಾದರೂ ಇಂತಹ ಗುಪ್ತಾಗಳನೇಕರ ವಿಶ್ವಾಸದ ಅಡಿಪಾಯದ ಮೇಲೇ ಕಟ್ಟಿದ್ದ ಈ ಶಾಲೆಯ ಹೆಡ್‌ಮೇಡಂಗೆ, ಇಂತಹ ಎಷ್ಟೋ ತಂದೆತಾಯಿಯರನ್ನು ನುಂಗಿ ನೀರುಕುಡಿದ ಅನುಭವವಿದ್ದಿರಲೇ ಬೇಕು.) ಆದರೂ ಶ್ರೀಮತಿ ಗುಪ್ತಾರ ತಲೆಯಲ್ಲಿ ಬೇಕಾದಷ್ಟು ವಿಚಾರಗಳು ಥಕಥೈ ಮಾಡುತ್ತಿದ್ದುವು- ಅಷ್ಟು ಸುಲಭವಾಗಿ ಸೋಲೊಪ್ಪಿ ಶರಣಾದರೆ ಇನ್ನು ಒಂದು ತಿಂಗಳ ಕಾಲ ಶ್ರೀ ಗುಪ್ತಾರ ಕಿಟಿಕಿಟಿ ಭರಿಸಬೇಕಾಗುತ್ತದೆ. ಸಾಲದ್ದಕ್ಕೆ ಶಾಲೆಗೆ ಹೋಗುವುದಿಲ್ಲವೆಂಬ ತಮ್ಮ ಮಗನ ಪಿರಿಪಿರಿಗೆ ಒಂದು ಉತ್ತರವನ್ನ ಕಂಡುಹಿಡಿಯದೇ ಹೋಗುವುದು ಆತ್ಮಘಾತುಕವೇ ಆಗಬಹುದು!

ಶ್ರೀಮತಿ ಗುಪ್ತಾ ಹೀಗೆ ಯೋಚನೆ ಮಾಡುತ್ತಿರುವಾಗಲೇ ಹೆಡ್‌ಮೇಡಂ- ‘ನೀವು ಬಂದದ್ದು ಬಹಳ ಸಂತೋಷ, ಗುಪ್ತಾಜಿ ಚೆಕ್ ಕಳಿಸುವುದಾಗಿ ಹೇಳಿದ್ದರು….. ಬನ್ನಿ ಬನ್ನಿ ಪ್ರಿನ್ಸಿಪಾಲರ ರೂಮಿಗೆ ಹೋಗೋಣ… ‘ ಎನ್ನುತ್ತಾ ಬೇರೆ ಮಾತಿಗೆ ತಾವಿಲ್ಲದಂತೆ ಶ್ರೀಮತಿ ಗುಪ್ತಾರನ್ನು ಒಳಕ್ಕೆ ಒಯ್ದೇ ಬಿಟ್ಟರು.

ಪ್ರಿನ್ಸಿಪಾಲರ ಕೋಣೆಗೆ ಹೊಕ್ಕ ಕೂಡಲೇ ಹೆಡ್‌ಮೇಡಂ ಮೊದಲು ಕೂಲ್‌ ಡ್ರಿಂಕಿಗೆ ಆರ್ಡರ್ ಮಾಡಿದರು. ನಂತರ ಶ್ರೀಮತಿ ಗುಪ್ತಾರನ್ನು ಪ್ರಿನ್ಸಿಪಾಲರಿಗೆ ಪರಿಚಯ ಮಾಡಿ- ‘ಮಹಾ ಉದಾರಿಗಳು. ನಮ್ಮ ಹೊಸ ಶಾಲೆಯ ಪ್ರಾಜೆಕ್ಟ್ ವಿಷಯ ಕೇಳಿದ ಕೂಡಲೇ ಖುಷಿಯಾಗಿ ಹತ್ತು ಸಾವಿರ ಡೊನೇಟ್ ಮಾಡ್ತೀವೀಂತ ತಾವಾಗಿಯೇ ಹೇಳಿದರು. ಈವತ್ತು ಚೆಕ್ ತಂದಿದ್ದಾರೆ… ‘

ಶ್ರೀಮತಿ ಗುಪ್ತಾ ಈ ಪ್ರಹಾರಕ್ಕೆ ತಯಾರಾಗಿಯೇ ಇರಲಿಲ್ಲ. ಗುಪ್ತಾ ದಂಪತಿಗಳು ಎರಡು ಗಂಟೆಗಳ ಕಾಲ ತಲೆಗಳನ್ನೊಂದುಗೂಡಿಸಿ ಪೋಣಿಸಿದ್ದ ಸ್ಟ್ರಾಟಜಿಯೆಲ್ಲಾ ತಲೆಕೆಳಗಾಗಿ ಏನು ಹೇಳಬೇಕೆಂದು ತೋಚದೇ ಸೀರೆ ಸೆರಗಿನ ಗಂಟು ಹಾಕಿ ಬಿಚ್ಚ ತೊಡಗಿದರು. ಕಡೆಗೆ ಸಂಭಾಳಿಸಿಕೊಂಡು, ಪುಟ್ಟ ಮರುಪ್ರಹಾರ ಮಾಡಿದರು…. ‘ಹತ್ತು ಸಾವಿರಾಂತ ಕಮಿಟ್ ಮಾಡಿರಲಿಲ್ಲ… ‘ ಇಷ್ಟು ಹೇಳುವಷ್ಟರಲ್ಲಿಯೇ ಹೆಡ್‌ಮೇಡಂ ಮತ್ತೆ ಎರಡನೆಯ ಸುತ್ತಿನ ಪ್ರಹಾರ ಮಾಡಿದರು- ‘ಪರವಾಗಿಲ್ಲ ಪರವಾಗಿಲ್ಲ.. ಒಂದೆರಡು ಸಾವಿರ ಆಚೀಚೆಯಾದರೂ ಅಡ್ಡಿಯಿಲ್ಲ. ನಿಮ್ಮಂತಹ ಪೇರೆಂಟ್ಸ್ ಈ ಯೋಜನೆಯನ್ನ ಪ್ರೋತ್ಸಾಹಿಸುತ್ತೀರೆಂಬುದೇ ನಮಗೆ ತುಂಬಾ ಖುಷಿ ನೀಡುವ ವಿಚಾರ. ಎಲ್ಲಕ್ಕಿಂತ ದೊಡ್ಡವಿಚಾರವೆಂದರೆ, ಇವರು ಚೆಕ್ಕನ್ನಂತೂ ತಂದಿದ್ದಾರೆ…. ‘ ಎಂದರು. ಶ್ರೀಮತಿ ಗುಪ್ತಾರಿಗೆ ಭೂಮಿ ಬಿರಿಯಬಾರದೇ ಅನ್ನಿಸಿತು. ಈ ಗಂಡನೆಂಬ ಪ್ರಾಣಿ ಫೋನಲ್ಲಿ ಏನೇನು ವಟಗುಟ್ಟಿ ತನ್ನನ್ನು ಇಲ್ಲಿ ಸಿಕ್ಕಿಹಾಕುತ್ತಿದ್ದಾನೋ ತಿಳಿಯದೇ, ಗಂಡನಿಗೆ ಹಿಡಿಶಾಪ ಹಾಕಿದರು. ಬಹುಷಃ ಬಾಯಿಗೆ ಬಂದದ್ದೆಲ್ಲಾ ಮಾತಾಡಿದ್ದರಿಂದಲೇ ಆತ ಬರದೇ ತನ್ನನ್ನು ಸಾಗಹಾಕಿದ್ದಿರಬೇಕೆಂದು ಅನ್ನಿಸಿ ಒಂದು ಕ್ಷಣದ ಮಟ್ಟಗೆ ಆತನ ಕುತ್ತಿಗೆ ಹಿಸುಕಿ ತಾನು ವಿಧವೆಯಾಗುವುದೇ ಒಳ್ಳೆಯದೆಂಬ ವಿಚಾರ ಬಂದರೂ, ತಮ್ಮನ್ನು ತಾವೇ ಕಂಟ್ರೋಲ್ ಮಾಡಿಕೊಂಡರು. ಗಂಡ ಅಲ್ಲಿ ಇರಲಿಲ್ಲವಾದ್ದರಿಂದ ಕಂಟ್ರೋಲ್ ಮಾಡಿಕೊಳ್ಳದೇ ಬೇರೆ ವಿಧಿಯಿರಲಿಲ್ಲ.

‘ಇಲ್ಲ ನಿಜ ಹೇಳಬೇಕೆಂದರೆ ನಾನು ಚೆಕ್ ತಂದಿಲ್ಲ.. ಯಾಕೆಂದರೆ ಈ ಬಗ್ಗೆ ಅವರು ಸ್ಪಷ್ಟವಾಗಿ ನನಗೆ ಏನೂ ಹೇಳಿರಲಿಲ್ಲ.. ಜತೆಗೆ ಈವತ್ತು ಇಪ್ಪತ್ತನಾಲ್ಕನೇ ತಾರೀಖು… ತಿಂಗಳ ನಾಲ್ಕನೇ ವಾರ, ಎಷ್ಟೇ ಆದರೂ ನಾವೂ ಸ್ಯಾಲರೀಡ್ ಮಿಡಲ್ ಕ್ಲಾಸ್ ನೋಡಿ, ನಿಮಗೆ ನಮ್ಮ ತೊಂದರೆ ಗೊತ್ತೇ ಇರುತ್ತೆ.. ನಿಮಗೆ ತಿಳಿಯದ್ದೇನು…… ‘

ಇಷ್ಟು ಮಾತು ಹೇಳುವಷ್ಟರಲ್ಲಿಯೇ ಪ್ರಿನ್ಸಿಪಾಲರು ಸ್ವಲ್ಪ ಹುಷಾರಾದರು. ಶ್ರೀಮತಿ ಗುಪ್ತಾ ಈ ಲಾವಾದೇವಿಯಲ್ಲಿ ಮೇಲುಗೈ ಪಡೆದುಬಿಡಬಹುದೆಂಬ ಭೀತಿಯ ಆತುರದಲ್ಲಿಯೇ- ‘ಅರೇ ಅದಕ್ಕೇನಂತೆ, ಚೆಕ್ ಬರೆದಿಲ್ಲ, ಅಷ್ಟೇ ತಾನೆ, ಹೇಗೂ ಫೀಸ್ ಕಟ್ಟಲು ಚೆಕ್‌ಬುಕ್ ತಂದೇ ಇರುತ್ತೀರಿ, ಈ ಟರ್ಮಿನ ಫೀಸಿನ ಜತೆಗೇ ಬರೆದು ಕೊಟ್ಟುಬಿಡಿ. ನಾವು ಬ್ಯಾಂಕಿಗೆ ಎರಡನೇ ತಾರೀಕಿಗೇ ಹಾಕಿದರಾಯಿತು. ಅಥವಾ ಪೊಸ್ಟ್ ಡೇಟೆಡ್ ಆದರೂ ಆದೀತು…. ‘ ಎನ್ನುತ್ತಾ ಹೊಸಧಾಳಿಯ ತಯಾರಿ ನಡೆಸಿದರು. ಶ್ರೀಮತಿ ಗುಪ್ತಾಗೆ ಈ ಎಲ್ಲ ಮಾತುಕತೆ ಪಡೆಯುತ್ತಿರುವ ದಿಕ್ಕಿನ ಬಗೆಗೆ ದಿಗ್ಭ್ರಮೆಯಾಯಿತು. ಶಾರದಾ ಮೇಡಂ ವಿಷಯ ತಿಳಿಯದಿದ್ದರೂ ನಡೆದೀತು, ಆದರೆ ಇಲ್ಲಿಂದ ಹೊರಬಿದ್ದರೆ ಸಾಕು ಅನ್ನುವ ಸ್ಥಿತಿಗೆ ಆಕೆ ಬಂದುಬಿಟ್ಟಿದ್ದರು. ಈಗ ಏನು ಮಾಡಬೇಕು, ಹೇಗೆ ಈ ಪೀಕಲಾಟದಿಂದ ಹೊರಬೀಳಬೇಕು ಅಂತ ಯೋಚಿಸುತ್ತಿರುವಷ್ಟರಲ್ಲಿಯೇ- ಪ್ರಿನ್ಸಿಪಾಲ್ ಮತ್ತು ಹೆಡ್‌ಮೇಡಂ ತಿಂಗಳ ಕೊನೆಯವಾರದಲ್ಲಿ ಪೇರೆಂಟ್ಸ್-ಟೀಚರ್ಸ್ ಮೀಟಿಂಗ್ ಇಡುವುದರ ಔಚಿತ್ಯದ ಬಗ್ಗೆ ಮತ್ತು ತಿಂಗಳ ಮೊದಲ ವಾರಕ್ಕೆ ಇದ್ದನ್ನು ಮುಂದೂಡುವುದರಿಂದ ಆಗಬಹುದಾದ ಫಾಯಿದೆಯ ಬಗ್ಗೆ ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳತೊಡಗಿದ್ದರು.

ಕಡೆಗೂ ಶ್ರೀಮತಿ ಗುಪ್ತಾ ಸುಲಭವಾಗಿ ಇದರಿಂದ ಹೊರಬೀಳಲು ಆಗಲೇ ಇಲ್ಲ. ಚೆಕ್ ಇಲ್ಲ ಅಂದಾದ ಮೇಲೆ, ಕ್ರಡಿಟ್ ಕಾರ್ಡ್ ಆದರೂ ಆದೀತು ಅಂತ ಪ್ರಿನ್ಸಿಪಾಲರು ಹೇಳಿದರು… ಶಾಲೆಯಲ್ಲೂ ಈ ಕಾರ್ಡುಗಳು ಹೊಕ್ಕಿರಬಹುದೆಂದು ಯೋಚಿಸಿರದಿದ್ದ ಶ್ರೀಮತಿ ಗುಪ್ತಾಗೆ ನಿಜಕ್ಕೂ ತಲೆತಿರುಗಿತು. ಕಾರ್ಡನ್ನೂ ತಂದಿಲ್ಲವೆಂಬ ಸುಳ್ಳು ಹೇಳಿದಾಗ- ಎಲ್ಲರೂ ಒಂದು ತುರ್ತು ಒಪ್ಪಂದ ಮಾಡಿಕೊಳ್ಳುವುದು ಅನಿವಾರ್ಯ ಅಂತ ಪ್ರಿನ್ಸಿಪಾಲ್-ಹೆಡ್‌ಮೇಡಂ ದ್ವಯರು ಬಲವಂತ ಮಾಡಿದರು. ಆ ಒಪ್ಪಂದದ ಪ್ರಕಾರ, ಇಂದಿನ ಸಭೆಯಲ್ಲಿ ಗುಪ್ತಾ ಸಂಸಾರ ಶಾಲೆಗೆ ಇಪ್ಪತ್ತೈದು ಸಾವಿರ ರೂಪಾಯಿಗಳ ಧನಸಹಾಯ ಮಾಡುವುದಾಗಿ ಘೋಷಣೆ ಮಾಡುವುದೆಂದೂ, ಗುಪ್ತಾ ಸಂಸಾರ ಹೊಸ ಶಾಲೆಗೆ ಕನಿಷ್ಟ ೫೦೦೦ ರೂಪಾಯಾದರೂ ದೇಣಿಗೆ ನೀಡಬೇಕೆಂದೂ, ಇತರ ಮಾತಾಪಿತೃಗಳಿಗೆ ಈ ವಿಚಾರ ತಿಳಿಯಬಾರದೆಂದೂ ಒಪ್ಪಂದವಾದ ನಂತರವೇ ಸಭೆ ಪ್ರಾರಂಭವಾಯಿತು. ಕಡೆಗೂ ಶ್ರೀಮತಿ ಗುಪ್ತಾ ಅಲ್ಲಿಂದ ತಪ್ಪಿಸಿ ಹೊರಬೀಳುವಷ್ಟರಲ್ಲಿ ಆಕೆ ಬಂದ ಉದ್ದೇಶವೇ ತಲೆಕೆಳಗಾಗಿತ್ತು!! ಮತ್ತು ಆಕೆ ಹೊರಡುವಷ್ಟರಲ್ಲಿ ಹೆಡ್‌ಮೇಡಂ ಆರ್ಡರ್ ಮಾಡಿದ್ದ ಶ್ರೀಮತಿ ಗುಪ್ತಾರ ಕೂಲ್ ಡ್ರಿಂಕು ಬರಲೇ ಇಲ್ಲ. ಈ ಎಲ್ಲ ಗಲಭೆಯ ಮಧ್ಯೆ ಶಾರದಾ ಮೇಡಂ ಆಬ್ಸಂಟಾಗೇ ಇದ್ದರು. ಯಾರೂ ಆಕೆಯ ಬಗ್ಗೆ ಚಕಾರವೆತ್ತಿರಲಿಲ್ಲ!!

*****

ಮಧುಸೂಧನ ಮೆಹತಾ ಮಾಡಲು ಏನೂ ಕೆಲಸವಿಲ್ಲದವನಾಗಿ ದಯಾಕರನ ಕೋಣೆಗೆ ಹೋದ. ಆಫೀಸಿನಲ್ಲಿ ಯಾರಿಗಾದರೂ ಟೈಂಪಾಸ್ ಮಾಡಬೇಕು ಅನ್ನಿಸಿದಾಗೆಲ್ಲಾ ಶುಭ್ರವಾಗಿ ಸೋಪು ಹಾಕಿ ಕೈತೊಳೆದು ದಯಾಕರ ಮೆನನ್ ರೂಮಿಗೆ ಹೋಗುತ್ತಿದ್ದರು. ದಯಾಕರನಿಗೆ ಇದ್ದ ಅನೇಕ ಆಸಕ್ತಿಗಳಲ್ಲಿ ಜನರ ಕೈನೋಡುವುದೂ ಒಂದು ಆಸಕ್ತಿಯಾಗಿತ್ತು. ಯಾರಾದರೂ ತನ್ನ ಕೋಣೆಗೆ ಬಂದು ಕೈ ತೋರಿಸಿದರೆ- ಕೈ ಹಿಡಿದು- ಮುಖ ನೋಡಿ, ಗೆರೆಗಳನ್ನು ತಾಳೆಹಾಕಿ ಏನಾದರೂ ಗಮ್ಮತ್ತಾದ ವಿಷಯ ಹೇಳುತ್ತಿದ್ದ. ಕೆಲವೊಂದು ಬಾರಿ ಅವನು ಹೇಳಿದ್ದು ನಡೆಯುತ್ತಿತ್ತು. ಕೆಲವಷ್ಟು ಜನ ತುಂಟತನಕ್ಕೆಂದೇ ‘ನಾನು ಮನೆ ಕೊಂಡುಕೊಳ್ಳುವ ಯೋಗ ಇದೆಯೋ ಹೇಗೆ, ಹೇಳಿ?’ ಎಂದು ಕೇಳುವರು. ಅಕಸ್ಮಾತ್ ದಯಾಕರ ಇಲ್ಲವೆಂದರೆ, ತಕ್ಷಣ- ‘ನಿನ್ನೆಯಷ್ಟೇ ಹೊಸ ಫ್ಲಾಟಿಗೆ ಮುಂಗಡ ಹಣ ಕಟ್ಟಿ ಬಂದೆ.’ ಎಂದು ಅವನ ಕಾಲೆಳೆಯುತ್ತಿದ್ದರು. ದಯಾಕರ ಅದಕ್ಕೆ ಸರಿಯಾಗಿ ಏನಾದರೂ ಉತ್ತರ ತಯಾರಿಡುತ್ತಿದ್ದ. ಲೋನೆಷ್ಟು ತೆಗೊಂಡಿರಿ?.. ನೋಡಿ, ಈ ರೇಖೆ ದೊಡ್ಡ ಸಾಲವನ್ನು ಪ್ರತಿನಿಧಿಸುತ್ತದೆ. ಮನೆಯ ಲಕ್ಷಣ ನಿಮ್ಮ ಕೈಯಲ್ಲಿ ಇದೆಯಾಗಲೀ, ಆ ಮನೆಯಲ್ಲಿ ವಾಸಿಸುವ ಯೋಗ ಈ ಕ್ಷಣಕ್ಕೆ ಇಲ್ಲವಾದ್ದರಿಂದ ಈ ಗೃಹರೇಖೆ ದಿಕ್ಕು ತೋರಿಸುತ್ತಿಲ್ಲ ಎಂದೆಲ್ಲಾ ಹೇಳಿ ಬಚಾವಾಗುತ್ತಿದ್ದ.

ಈಗ ಮಧುಸೂಧನ ಮೆಹತಾ ತನ್ನ ಕೋಣೆ ಹೊಕ್ಕಾಗ, ಅವನು ತನ್ನ ಕೈ ತೋರಿಸಲೆಂದೇ ಬಂದಿದ್ದಾನೆಂದು ದಯಾಕರನಿಗೆ ತಿಳಿಯಿತು. ದಯಾಕರ ಮಧುಸೂಧನನ ಕೈನೋಡಿ, ಸ್ವಲ್ಪ ಅತ್ತ ಇತ್ತ ಯೋಚನೆ ಮಾಡಿ.. ‘ನಿನಗೆ ಗೃಹಯೋಗ ಇದೆ. ಒಂದೆರಡು ವರ್ಷಗಳಲ್ಲಿ ಎಲ್ಲಿಂದಾದರೂ ದೊಡ್ಡ ಮೊತ್ತದ ದುಡ್ಡು ಬಂದು ನೀನು ಮನೆ ಕಟ್ಟುತ್ತೀಯ.’ ಎಂದ. ಮಧುಸೂಧನನಿಗೆ ದಯಾಕರನ ಭವಿಷ್ಯದ ಬಗ್ಗೆ ಸ್ವಲ್ಪ ಹೆಚ್ಚಿನ ನಂಬುಗೆಯೇ ಇತ್ತು. ಹಿಂದೆ ಅವನು ಹೇಳಿದ್ದ ಒಂದೆರಡು ಘಟನೆಗಳು ತನ್ನ ಜೀವನದಲ್ಲಿ ನಿಜಕ್ಕೂ ಘಟಿಸಿದ್ದುವು. ಸ್ವಲ್ಪ ಹೊತ್ತು ಇಬ್ಬರೂ ಕಾಡು ಹರಟೆ ಹೊಡೆಯುತ್ತಿದ್ದರೂ ದಯಾಕರನ ದೃಷ್ಟಿ ಮಧುಸೂಧನನ ಕೈರೇಖೆಯ ಮೇಲೆಯೇ ಓಡಾಡುತ್ತಿತ್ತು. ಇನ್ನೇನು ಮಧುಸೂಧನ ಅಲ್ಲಿಂದ ಹೊರಡಲು ಏಳಬೇಕೆನ್ನುವಷ್ಟರಲ್ಲಿ ದಯಾಕರ ಗುಪ್ತವಾಗಿ ಮಧುಸೂಧನನ ಕೈಯೆಳೆದು ಹೇಳಿದ:

‘ಸ್ವಲ್ಪ ಹುಷಾರಾಗಿರು ಮಧು.. ನನಗನ್ನಿಸುತ್ತೆ- ಈ ಸ್ವಲ್ಪದಿನಗಳಲ್ಲೇ you are going to have a fling. ಯಾವುದಾದರೂ ಹುಡುಗಿ ಕಂಡರೆ ಸ್ವಲ್ಪ ಎಚ್ಚರದಿಂದಿರುವುದು ವಾಸಿ. Have a nice time.’

ಅಲ್ಲಿಂದ ಏಳಬೇಕೆನ್ನುವಷ್ಟರಲ್ಲಿ ದಯಾಕರ ಎಸೆದ ಅಣುಬಾಂಬು ಮಧುವನ್ನು ವಿಚಲಿತಗೊಳಿಸಿತು. ಮಧುಸೂಧನ ನಲವತ್ತರ ಹೊಸ್ತಿಲಲ್ಲಿ ನಿಂತಿದ್ದ ಯುವಕನೂ ಅಲ್ಲದ ಮುದುಕನೂ ಅಲ್ಲದ ವಿಚಿತ್ರ ಪರಿಸ್ಥಿತಿಯಲ್ಲಿದ್ದ ಮಧ್ಯವಯಸ್ಕ. ನಾಲ್ಕು ವರ್ಷಗಳ ಕೆಳಗೆ ರೈಲು ಅಪಘಾತದಲ್ಲಿ ಅವನ ಹೆಂಡತಿ ತೀರಿಕೊಂಡಿದ್ದಳು. ಆ ಪ್ರಯಾಣದಲ್ಲಿ ಅವನೂ ತನ್ನ ಒಂದು ವರ್ಷದ ಮಗಳೂ ಪವಾಡಸದೃಶವಾಗಿ ತಪ್ಪಿಸಿಕೊಂಡಿದ್ದರು. ಅವನು ಕಾಲು ಮುರಿದು ಕೆಲವು ದಿನ ಆಸ್ಪತ್ತ್ರೆಯಲ್ಲಿದ್ದ. ಆದರೆ ಮಗಳಿಗೇನೂ ಆಗಿಯೇ ಇರಲಿಲ್ಲ. ಈ ಎಲ್ಲ ಗಲಾಟೆಯಲ್ಲಿ ಅವನಿಗೆ ಹೆಂಡತಿ ತೀರಿಕೊಂಡ ಸುದ್ದಿ ಮುಟ್ಟಿದರೂ, ಅವಳ ದೇಹ ನೋಡಲು ಸಿಕ್ಕಿರಲಿಲ್ಲ. ಹೆಚ್ಚಿನ ಜನರಿಗೆ ತನ್ನ ಈ ಹಿನ್ನೆಲೆ ಗೊತ್ತಿರಲಿಲ್ಲ. ಸ್ವಂತ ವ್ಯಾಪಾರ ಮಾಡುತ್ತಿದ್ದ ಮಧುವಿಗೆ, ತಾನು ಅತಿಯಾಗಿ ಪ್ರೀತಿಸುತ್ತಿದ್ದ ತನ್ನ ಹೆಂಡತಿ ತೀರಿಕೊಂಡಾಗಿನಿಂದಲೂ ಇದ್ದ ಆಸಕ್ತಿ ಒಂದೇ. ಆಗ ಒಂದು ವರ್ಷದವಳಾಗಿದ್ದ ಈಗ ಐದನೇ ವಯಸ್ಸಿಗೆ ಕಾಲಿಡುತ್ತಿರುವ ತನ್ನ ಮಗಳನ್ನು ಬೆಳೆಸಿ ಒಂದು ಘಟ್ಟ ತಲುಪಿಸುವುದೇ ಜೀವನೋದ್ದೇಶವಾಗಿಬಿಟ್ಟಿತ್ತು. ಅವಳನ್ನು ನೋಡಿಕೊಳ್ಳಲು ಸಾಕಷ್ಟು ಸಮಯ ವ್ಯಯಿಸಬೇಕಾದ್ದರಿಂದ, ಸ್ವಂತ ವ್ಯಾಪಾರವಿದ್ದರೆ ಓಡಾಟ ಹೆಚ್ಚಾಗಿ ಅವಳ ಜತೆ ಸಮಯ ಕಳೆಯಲು ಸಾಧ್ಯವಾಗದ್ದರಿಂದ ಈ ಸಂಸ್ಥೆಯಲ್ಲಿ ಅಕೌಂಟ್ಸ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದ್ದ. ಹಳೆಯ ಊರು, ಹಳೆಯ ಜನರ ನಡುವೆ ಮನಸ್ಸಾಗದೇ, ಮುಂಬಯಿಗೆ ಬಂದು ಅನಾಮಿಕವಾದ ಜೀವನ ನಡೆಸುತ್ತಿದ್ದ.

ರೈಲು ಅಪಘಾತದ ನಂತರ ಮಧುವಿನ ಜೀವನ ದೃಷ್ಟಿಯಲ್ಲಿ ಮಹತ್ವದ ಪರಿವರ್ತನೆಯಾಗಿತ್ತು. ಜೀವನವನ್ನ ಲೈಟಾಗಿ ತೆಗೆದುಕೊಳ್ಳಬೇಕು, ಮಹಾ ಗಾಂಭೀರ್ಯದಿಂದ ಸಾಧಿಸುವುದೇನೂ ಇಲ್ಲ ಅಂತ ನಿರ್ಧರಿಸಿದ್ದರಿಂದ, ಎಷ್ಟೆಲ್ಲಾ ದುಃಖ ಕಂಡರೂ, ಯಾವಾಗಲೂ ನಗುನಗುತ್ತಾ, ಚಟಾಕಿ ಹಾರಿಸುತ್ತಾ ಉಡಾಫೆಯಿಂದ ಇರುತ್ತಿದ್ದ. ಮಗಳಿಗೆ ಯಾವ ದುಃಖದ ಸೋಂಕೂ ಇರಬಾರದೆಂದು ಅವನು ಹೀಗೆ ವರ್ತಿಸುತ್ತಿದ್ದ ಎನ್ನಿಸುತ್ತದೆ. ಎಂದೂ ಮರುಮದುವೆಯ, ಅಥವಾ ಬೇರಾವ ಉದ್ದ-ಅಥವಾ-ಅಡ್ಡ ದಾರಿಯ ಬಗ್ಗೆ ಯೋಚಿಸಿಯೇ ಇಲ್ಲದ ಮಧುವಿಗೆ ಇದ್ದಕ್ಕಿದ್ದಂತೆ ಈ ಹೊಸ ಸಾಧ್ಯತೆ ಹೊಸದೊಂದು ಬಾಗಿಲನ್ನು ತೆರೆದಂತೆನ್ನಿಸಿ, ಅವನು ಆಗಷ್ಟೇ ಪ್ರೇಮಜಾಲದಲ್ಲಿ ಸಿಕ್ಕಿಬಿದ್ದ ಯುವಕನಂತೆ ಪುಳಕಿತಗೊಂಡ. ಆ ದಿನದಿಂದ, ಆ ಕ್ಷಣದಿಂದ ಯಾವ ಯುವತಿ ಕಂಡರೂ, ಮಧುಸೂಧನ ಅವಳ ಮುಖ ನೋಡುವುದನ್ನ ಬಿಟ್ಟು ತನ್ನ ಕೈರೇಖೆ ನೋಡಿಕೊಳ್ಳುತ್ತಿದ್ದ. ‘ನನ್ನ ಕೈ ರೇಖೆಯಲ್ಲಿರುವ ಹುಡುಗಿ ಬಹುಶಃ ಇವಳಾಗಿರಬಹುದೇ…..?’

*****

ಪೆಟಲ್ಸ್ ಶಾಲೆಯ ಹೆಡ್‌ಮೇಡಂಗೆ ಶಾರದಾ ನಾಪತ್ತೆಯಾಗಿದ್ದದ್ದು ನಿಜಕ್ಕೂ ಪೀಕಲಾಟಕ್ಕೆ ಬಂದಿತ್ತು. ಕೆ.ಜಿ. ಸೆಕ್ಷನ್‌ಗೆ ಅನಿವಾರ್ಯ ಭಾಗವಾಗಿ ಶಾರದಾ ಬೆಳೆದು ಬಿಟ್ಟಿದ್ದಳು. ಮೂರು ವರ್ಷಗಳ ಹಿಂದೆ ಈ ಮುವ್ವತ್ತರ ಯುವತಿಯನ್ನ ಹೆಡ್‌ಮೇಡಂ ಖುದ್ದಾಗಿ ಸಂದರ್ಶನ ಮಾಡಿ ಶಾಲೆಯಲ್ಲಿ ಕೆಲಸ ಕೊಟ್ಟಿದ್ದರು. ಶಾರದಾ ಎಂ.ಎ ಮುಗಿಸಿದ್ದರೂ ಬಿ.ಎಡ್. ಮಾಡಿರಲಿಲ್ಲವಾದ್ದರಿಂದ ಹೈಸ್ಕೂಲಿಗೆ ಆಕೆಯನ್ನು ತೆಗೆದುಕೊಳ್ಳವುದು ನಿಯಮದ ಪ್ರಕಾರ ಕಷ್ಟವಾಗಿತ್ತು. ಜೊತೆಗೆ ಆಕೆಗೆ ಹಿಂದೆ ಸ್ಕೂಲಿನಲ್ಲಿ ಪಾಠಮಾಡಿದ ಅನುಭವವೂ ಇರಲಿಲ್ಲ. ಆದರೆ ಅಲ್ಲಿದ್ದುಕೊಂಡೇ ಅಣ್ಣಾಮಲೈ ಯುನಿವರ್ಸಿಟಿಯ ಕರಸ್ಪಾಂಡೆನ್ಸ್ ಬಿ.ಎಡ್ ಮಾಡಿದಲ್ಲಿ ಹೈಸ್ಕೂಲಿಗೆ ಬಡ್ತಿ ನೀಡುವುದಾಗಿ ಹೇಳಿದ್ದರೂ ಶಾರದಾ ಆ ಬಗ್ಗೆ ಆಸಕ್ತಿಯನ್ನೇನೂ ತೋರಿರಲಿಲ್ಲ. ಪುಟ್ಟ ಮಕ್ಕಳ ಮಧ್ಯೆ ನಿರಾತಂಕವಾಗಿ ಕಾಲ ಕಳೆಯಬಹುದೆಂದು ಆಕೆ ಹೇಳಿದ್ದಂತೆ ನೆನಪು. ಸ್ವಲ್ಪ ಕಾಲ ಕಳೆಯುವುದರಲ್ಲಿ ಆಕೆ ಮಕ್ಕಳ ಜತೆ ಹೊಂದಿಕೊಂಡು ಹೋದದ್ದನ್ನ ಕಂಡು ಮತ್ತೆ ಯಾರೂ ಶಾರದಾ ಮೇಡಂ ಹೈಸ್ಕೂಲಿನ ಟೀಚರಾಗುವ ವಿಚಾರವನ್ನ ಎತ್ತಿಯೇ ಇರಲಿಲ್ಲ. ಅಂದಿನಿಂದ ಇತ್ತೀಚಿನವರೆಗೂ ಶಾರದಾ ಎಂದೂ ಹೇಳದೇ ಕ್ಲಾಸ್ ತಪ್ಪಿಸಿದ್ದಿಲ್ಲ. ಈಗ ಎರಡುವಾರಗಳಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆಂದರೆ ಏನೋ ಬಹಳ ವಿಚಿತ್ರವೆನ್ನಿಸಿತು.

ಹೆಡ್‌ಮೇಡಂಗೆ ತಿಳಿದಂತೆ ಶಾರದಾ ತಾನು ಬಾಡಿಗೆಗೆ ಹಿಡಿದಿದ್ದ ಫ್ಲಾಟಿನಲ್ಲಿ ಒಂಟಿಯಾಗಿ ಇದ್ದಳು. ಅವಳ ಹಿನ್ನೆಲೆಯ ಬಗ್ಗೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ. ಬಹಳಷ್ಟು ಮಟ್ಟಿಗೆ ತನ್ನ ಪಾಡಿಗೆ ತಾನಿರುತ್ತಿದ್ದುದರಿಂದ, ಯಾರೂ ಅವಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಆಸಕ್ತಿ ತೋರುತ್ತಿರಲಿಲ್ಲ. ‘ಮಕ್ಕಳಿಗೆ ನನ್ನ ಖಾಸಗೀ ಜೀವನದ ಬಗ್ಗೆ ಅನಾವಶ್ಯಕ ಆಸಕ್ತಿಯಿಲ್ಲ ಆದ್ದರಿಂದಲೇ ಮಕ್ಕಳೆಂದರೆ ನನಗೆ ಬಹಳ ಇಷ್ಟ.‘ ಅಂತ ಅವಳು ಒಮ್ಮೆ ಹೇಳಿದ್ದದ್ದು ಹೆಡ್‌ಮೇಡಂ ನೆನಪಿಗೆ ಬಂತು. ತನಗೆ ಮದುವೆಯಾಗಿದೆಯೆಂದು ಶಾರದಾ ಒಮ್ಮೆ ಹೇಳಿದ್ದಂತೆ ನೆನಪು. ಆದರೂ ಹೆಡ್‌ಮೇಡಂಗೆ ಆ ಬಗ್ಗೆ ಖಾತ್ರಿಯಿರಲಿಲ್ಲ. ಆದರೆ ಈಗ ಒಂಟಿಯಾಗಿ ಯಾಕೆ ಜೀವನ ಮಾಡುತ್ತಿದ್ದಳೆಂಬುದರ ಬಗ್ಗೆ ಯಾರಿಗೂ ಮಾಹಿತಿಯಿರಲಿಲ್ಲ. ಬಹುಶಃ ಡೈವೋರ್ಸ್ ಆಗಿ, ಆ ಬಗ್ಗೆ ಮಾತಾಡಲು ಇಷ್ಟ ಪಡದೇ ಇರಬಹುದು ಅಂತ ಜನ ಊಹಾಪೋಹ ಮಾಡಿದ್ದರು. ಬಹುಶಃ ಅದೇ ಕಾರಣವಾಗಿ ಅವಳು ತನ್ನ ಹಿಂದಿನ ಊರಾದ ಅಹಮದಾಬಾದಿನಿಂದ ಇಲ್ಲಿಗೆ ಬಂದಿದ್ದಿರಬೇಕು.

ಶಾರದಾ ಮೇಡಂ ಬಗ್ಗೆ ಮಕ್ಕಳಿಗಿರುವ ಪ್ರೀತಿ ಅಭಿಮಾನದ ಬಗ್ಗೆ ಸಾಕಷ್ಟು ಕಥಾವಳಿಗಳು ಆ ಶಾಲೆಯಲ್ಲಿ ಪ್ರತೀತಿಯಲ್ಲಿತ್ತು. ಎಲ್ಲಕ್ಕಿಂತ ಹಚ್ಚಿನ ಪ್ರತೀತಿಯಲ್ಲಿದ್ದ ಕಥೆಯೆಂದರೆ ಕುಸುಮಾಳದ್ದು. ಅದು ಆದದ್ದು ಹೀಗೆ. ಎರಡು ವರ್ಷಗಳ ಹಿಂದೆ ಆಗ ಎರಡನೆಯ ಇಯತ್ತೆಯಲ್ಲಿದ್ದ ಕುಸುಮಾ ಎಂಬ ಒಂದು ಪುಟ್ಟ ಹುಡುಗಿ ತನ್ನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಏನೂ ಬರೆಯದೇ ಖಾಲಿ ಹಾಳೆ ಕೊಟ್ಟಿದ್ದಳು. ಸಾಮಾನ್ಯವಾಗಿ ಓದು ಬರಹದಲ್ಲಿ ಮುಂದಿದ್ದ ಇವಳು ಹೀಗೆ ಖಾಲಿ ಹಾಳೆ ಕೊಟ್ಟದ್ದು ಆಶ್ಟರ್ಯಕರವಾಗಿದ್ದು ಹೆಡ್‌ಮೇಡಂವರೆಗೂ ವಿಷಯ ಹೋಯಿತು. ಆಕೆ ಆ ಹುಡುಗಿಯನ್ನ ಕರೆದು ‘ಯಾಕೆ ಹೀಗೆ ಖಾಲಿ ಹಾಳೆ ಕೊಟ್ಟಿದ್ದೀಯ?’ ಅಂತ ಕೇಳಿದಾಗ- ‘ಇಲ್ಲ ಮೇಡಂ, ನಾನು ಫೇಲಾಗಬೇಕು, ಪಾಸಾದರೆ ಥರ್ಢ್ ಸ್ಟಾಂಡರ್ಡ್‌ನಲ್ಲಿ ಶಾರದಾ ಮೇಡಂ ಇರೊಲ್ಲ.. ಅದಕ್ಕೇ..’ ಅಂತ ಉತ್ತರ ಕೊಟ್ಟಿದ್ದಳೆಂದು ಪ್ರತೀತಿ.

ಈಗ ಇದ್ದಕ್ಕಿದ್ದಂತೆ ಇಂಥ ಶಾರದಾ ಮೇಡಂ ‘ನೆಲದಿಂದ ಧಗೆ, ಚಿಮಣಿಯಿಂದ ಹೊಗೆ, ಎದ್ದುಹೋಗುವ ಹಾಗೆ… ‘ ನಾಪತ್ತೆಯಾಗಿದ್ದರೆಂದರೆ ಅದು ಎಲ್ಲರಿಗೂ ಚಿಂತೆಯುಂಟುಮಾಡುವ ವಿಷಯವೇ ಆಯಿತು. ಹೆಡ್‌ಮೇಡಂಗೆ ಎಲ್ಲ ರೀತಿಯಿಂದಲೂ ಇದು ತಲೆನೋವಾಗಿತ್ತು. ಒಂದು ಕಡೆ ಆಕೆ ಇಲ್ಲ, ಆಕೆಯ ಪರವಾಗಿ ಯಾರಾದರೂ ತರಗತಿಗಳನ್ನು ಸಂಭಾಳಿಸಬೇಕು. ಕೆ.ಜಿ.ಯ ಎರಡು ಸೆಕ್ಷನ್‌ಗಳನ್ನ ಸೇರಿಸಿ ಶೀಲಾಗೆ ಒಪ್ಪಿಸಿದ್ದಾಗಿತ್ತು. ಆದರೆ, ಈಗ ಶೀಲಾಗೂ ಇದನ್ನು ಸಂಭಾಳಿಸುವುದು ಕಷ್ಟವಾಗುತ್ತಿತ್ತು. ಶಾರದಾ ಬರುವುದೇ ಇಲ್ಲವೆಂದಾದರೆ, ಇದಕ್ಕೆ ಏನಾದರೂ ಒಂದು ಸ್ಥಾಯಿ ಏರ್ಪಾಟು ಮಾಡಬಹುದಿತ್ತು… ಆದರೆ ಯಾವುದೂ ನಿಖರವಾಗಿ ತಿಳಿದಿರಲಿಲ್ಲ. ಇನ್ನೊಂದು ಕಡೆ ಮಕ್ಕಳಿಗೆ ಈ ಏರ್ಪಾಟು ಇಷ್ಟವಾಗಿರಲಿಲ್ಲ. ಮಕ್ಕಳಿಗೆ ಹಿಡಿಸದೇ ಹೋದರೆ ಅವರು ಇದನ್ನ ತಮ್ಮ ತಂದೆತಾಯಂದರಿಗೆ ಹೇಳುವುದು ಖಂಡಿತ. ಹೀಗಾಗಿ ಮಕ್ಕಳ ತಂದೆತಾಯಿಯರ ತಪಾಸಣೆಯ ಫೋನು. ಈವರೆಗೂ ಆಕೆ ನಾಪತ್ತೆಯೆಂದು ಯಾರಿಗೂ ಹೇಳಿರಲಿಲ್ಲ. ಆದರೂ ಈ ಗುಟ್ಟನ್ನ ಎಷ್ಟುದಿನ ಗುಟ್ಟಾಗಿಡುವುದು? ಜತೆಗೆ ಶಾರದಾ ಪತ್ತೆಯಿಲ್ಲವೆಂದು ಪೋಲಿಸ್ ಕಂಪ್ಲೇಂಟ್ ಕೊಡಬೇಕೇ? ಹೀಗೆ ಏನೇನೋ ವಿಚಾರಗಳು ಹೆಡ್‌ಮೇಡಂ ತಲೆಯಲ್ಲಿ ಸುಳಿದಾಡಿದರೂ ಒಂದಕ್ಕೂ ಉತ್ತರವಿರಲಿಲ್ಲ. ಒಂದು ಕೊಂಡಿಯಿಂದ ಮತ್ತೊಂದಕ್ಕೆ ವಿಷಯ ಬೆಳೆಯುತ್ತಾ ಹೋಗಿ ಹೆಡ್‌ಮೇಡಂ ಒಂದು ದೊಡ್ಡ ಜಾಲದಲ್ಲಿ ಸಿಕ್ಕಿ ದಿಕ್ಕು ತೋರದೇ ನಿಂತುಬಿಟ್ಟಿದ್ದರು.

ಸ್ಕೂಲಿನ ಮಿಕ್ಕ ಮೇಡಂಗಳೆಲ್ಲಾ ಶಾರದಾಳ ಮನೆಯ ಬಳಿ ಸುಳಿದು ಬಂದರೂ ಬಾಗಿಲು ಬಡಿದಾಗ ಉತ್ತರ ಸಿಗದೇ ವಾಪಸಾಗಿದ್ದರು. ಈ ಗಹನ ವಿಚಾರದ ಬೀಗಕ್ಕೆ ಕೀಲಿಕೈ ಸಿಕ್ಕಿರಲಿಲ್ಲ. ಅಕ್ಕಪಕ್ಕದ ಮನೆಯವರನ್ನ ವಿಚಾರಿಸಿದವರೂ ಉಂಟು. ಆದರೆ ಸಮಾಧಾನಕರ ಉತ್ತರವಾಗಲೀ ಸುಳಿವಾಗಲೀ ಎಲ್ಲೂ ಸಿಗಲಿಲ್ಲ.

ಯಾವುದಕ್ಕೂ ಹತ್ತಿರದ ಠಾಣೆಗೆ ಹೋಗಿ ಇಂಥ ಕೇಸಿನಲ್ಲಿ ಏನು ಮಾಡಬೇಕೆಂದು ಕೇಳಿಬರುವುದು ವಾಸಿ ಅಂತ ಹೆಡ್‌ಮೇಡಂಗೆ ಅನ್ನಿಸಿತು. ಪೋಲೀಸರಿಗೆ ವಿಷಯ ತಿಳಿಸುವುದರಲ್ಲಿ ತೊಂದರೆಯೇನು? ತಾನೇನು ಶಾರದಾ ದುಡ್ಡು ಕಾಸು ಕದ್ದು ಹೋಗಿದ್ದಾಳೆಂದು ಫಿರ್ಯಾದು ಮಾಡುತ್ತಿಲ್ಲವಲ್ಲ!! ಹೀಗೆ ಯೋಚಿಸಿದ ಹೆಡ್‌ಮೇಡಂ ಹೈಸ್ಕೂಲಿನ ಪ್ರಿನ್ಸಿಪಾಲರ ಜತೆ ಹಾಗೂ ಪೆಟಲ್ಸ್ ಸ್ಕೂಲಿನ ಮುಖ್ಯ ಟ್ರಸ್ಟಿಯ ಜತೆ ಮಾತನಾಡಿ ಕಡೆಗೂ ಠಾಣೆಗೆ ಒಂದು ಪತ್ರ ಬರೆದು ಹಾಕಬೇಕೆಂದು ನಿರ್ಧರಿಸಿದರು.

******

ಶ್ರೀಮತಿ ಗುಪ್ತಾ ಮನೆಗೆ ಬಂದು ಸ್ಕೂಲಿನಲ್ಲಾದ ಘಟನೆಯನ್ನು ಗುಪ್ತಾಜಿಗೆ ವಿವರಿಸಿದಾಗ ಗುಪ್ತಾಜಿ ಕೆಂಡಾಮಂಡಲ ಆದರು. ಒಂದು ಕ್ಷಣಕ್ಕೆ ಹೆಡ್‌ಮೇಡಂ ಅನುಸರಿಸಿದ ಪದ್ಧತಿಯ ಬಗ್ಗೆ ಗೌರವ ಬಂದು ಅದನ್ನು ತಮ್ಮ ಕಂಪನಿಯ ಸಾಲಗಾರರ ಮೇಲೆ ಪ್ರಯೋಗಿಸಬೇಕೆಂಬ ಅದ್ಭುತ ಐಡಿಯಾ ಬಂದಿತಾದರೂ, ಬಹಿರಂಗವಾಗಿ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ದೇಣಿಗೆ ಕೊಡುವುದಾಗಿ ಅನೌನ್ಸ್ ಮಾಡಿಸಿದ್ದರಿಂದ ಉಂಟಾಗುವ ಹಾನಿಯ ಬಗ್ಗೆ ಯೋಚಿಸಬೇಕಾಯಿತು. ಇನ್ನು ಬೇಕಾದವರು ಬೇಡವಾದವರು ದೇಣಿಗೆ ಕೇಳುತ್ತಾ ಮನೆಗೆ ಹಾಜರಿ ಹಾಕುತ್ತಾರೆ. ಜನ ತನ್ನಲ್ಲಿರಬಹುದಾದ ಹಣದ ಬಗ್ಗೆ ಊಹಾಪೋಹದ ಮಾತುಗಳನ್ನಾಡುತ್ತಾರೆ. ಹಾಗೂ ಇದೆಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ಶಾರದಾ ಮೇಡಂ ಬಗ್ಗೆ ಸುಳಿವು ಕೊಡದೇ ಸತಾಯಿಸುತ್ತಿರುವ ಶಾಲೆಯ ಸ್ಟ್ರಾಟಜಿ ಏನಿರಬಹುದು ಎಂಬ ವಿಚಾರ ಗುಪ್ತವಾಗಿಯೇ ಉಳಿದಿತ್ತು. ಎರಡು ದಿನಗಳ ಕಾಲ ಯೋಚನೆ ಮಾಡಿದರೂ ಇದರಲ್ಲಿರುವ ಗಹನವಾದ ವಿಚಾರದ ಸುಳಿವು ಗುಪ್ತಾಜಿಗೆ ಕೈಗೆಟುಕದೇ ಹೋದಾಗ ಆತ, ತಮ್ಮ ಪೋಲೀಸು ವಲಯದ ಮಿತ್ರರು ಯಾರಿದ್ದಾರೆ ಎಂಬುದನ್ನು ನೆನಪು ಮಾಡಿಕೊಳ್ಳತೊಡಗಿದರು.

ಅಷ್ಟರಲ್ಲಿ ರಂಗಾರೆಡ್ಡಿಯ ಫೋನು ಬಂತು. ಸಾಮಾನ್ಯ ಪರಿಸ್ಥಿತಿಯಲ್ಲಿ ಗುಪ್ತಾಜಿ ಈ ಕಾಕತಾಳೀಯದ ಬಗ್ಗೆ ಸುಮಾರಷ್ಟು ಹೊತ್ತು ಯೋಚಿಸುತ್ತಿದ್ದುದುಂಟು. ಆದರೆ ಈಗ ಈ ಶಾರದಾ ಮೇಡಂ ಬಗೆಗಿನ ಕುತೂಹಲ ಆತನನ್ನು ಆವರಿಸಬಿಟ್ಟಿತ್ತು. ಅಷ್ಟು ಹೊತ್ತಿಗೆ ಸರಿಯಾಗಿ ರಂಗಾರೆಡ್ಡಿ ಕರೆ ಕೊಟ್ಟದ್ದು ಯಾವ ದೇವಲೀಲೆಯೋ ಯಾರಿಗೆ ಗೊತ್ತು?

ರಂಗಾರೆಡ್ಡಿ ಫೋನ್ ಮಾಡಿದ್ದೇ ತನ್ನ ಗೊಗ್ಗರು ಧ್ವನಿಯಲ್ಲಿ ಪ್ರಾರಂಭಿಸಿದ: ‘ಏ ಗುಪ್ತಾ.. ನಿನ್ನ ಮಗನನ್ನ ಆ ಪೆಟಲ್ಸ್ ಸ್ಕೂಲಿಗೆ ಕಳಿಸ್ತಾ ಇದ್ದೀ ತಾನೇ, ನನಗೆ ಅಲ್ಲಿನ ಒಬ್ಬ ಮೇಡಂ ಬಗ್ಗೆ ಸ್ವಲ್ಪ ಸುದ್ದಿ ಬೇಕಿತ್ತೋ.. ನಮ್ಮ ಠಾಣೆಗೆ ಒಂದು ಕಂಪ್ಲೇಂಟ್ ಬಂದಿದೆ…’

ಗುಪ್ತಾಜಿ ತಕ್ಷಣಕ್ಕೆ ಚುರುಕಾದರು. ‘ಯಾರು, ಶಾರದಾ ಮೇಡಂ ಅನ್ನೋ ಲೇಡಿ ವಿಷಯಾನಾ? ಇದ್ದಕ್ಕಿದ್ದಹಾಗೆ ಈ ಲೇಡಿ ಹಾಲಿಡೇ ಮೇಲೆ ಹೋಗಿಬಿಟ್ಟಿದ್ದಾರಲ್ಲಾ?’

‘ಹೌದು ಕಣಯ್ಯಾ, ಜೀವನದಲ್ಲಿ ಒಂದು ಸರ್ತಿನಾದರೂ ನಿನ್ನ ತಲೆ ಪೋಲೀಸರ ತಲೆಯ ವೇಗಕ್ಕನುಸಾರವಾಗಿ ನಡೀತಾ ಇದೆಯಲ್ಲಾ, ಅದೇ ಆಶ್ಚರ್ಯ..’

‘ಇಲ್ಲಯ್ಯಾ ಇದೇ ಇಷ್ಯೂ ಬಗ್ಗೆ ನಾನೂ ನಿನಗೆ ಫೋನ್ ತಿರುಗಿಸಬೇಕೂಂತ ಇದ್ದೆ. ನೋಡು ಆಕೆ ಎರಡು ವಾರದಿಂದ ಸ್ಕೂಲಿಗೆ ಬರ್ತಾಯಿಲ್ಲಾಂತ ನನ್ನ ಸನ್ನು ಹೇಳ್ತಾ ಇದ್ದಾನೆ. ಆದರೆ ಸ್ಕೂಲಿನವರು ರೀಸನ್ನು ಏನೂಂತ ಹೇಳ್ತಾ ಇಲ್ಲ. ಯಾವಾಗ ಕೇಳಿದರೂ ಘುಮಾಫಿರಾಯಿಸಿ ಉತ್ತರ ಕೊಡುತ್ತಾರೆ.. ‘

ರಂಗಾರೆಡ್ಡಿಗೆ ಗುಪ್ತಾಜಿಯ ಭಾಷಾಪ್ರಯೋಗ ಯಾವಾಗಲೂ ಸೋಜಿಗದ್ದೆನ್ನಿಸುತ್ತಿತ್ತು. ಆದರೂ ಈಗ ಅದನ್ನೆಲ್ಲ ಚರ್ಚಿಸಲು ಸಮಯವಿರಲಿಲ್ಲ. ತಕ್ಷಣಕ್ಕೆ ಈ ಮೇಡಂ ಬಗ್ಗೆ ಮಾಹಿತಿ ಒಂದುಗೂಡಿಸಬೇಕಿತ್ತು. ‘ಅದು ಸರಿ, ಈ ಶಾರದಾ ಬಗ್ಗೆ ನಿನಗೇನೇನು ಗೊತ್ತೋ ಹೇಳು..’ ಅಂದ.

‘ಅರೇ ಬಾಬಾ, ಆ ಕೆಲಸ ಒಪ್ಪಿಸಿರೋದು ನಿನಗೆ. ನನ್ನನ್ನ ಯಾಕೆ ಕೇಳ್ತೀಯ? ಆಕೆ ವಿದ್ಯಾರ್ಥಿಗಳ ಮಧ್ಯ ವರ್ಲ್ಡ್ ಫೇಮಸ್ ಆಗಿದ್ದಳೂಂತ ನಾನು ಕೇಳಿದ್ದೀನಿ. ಆಕೆ ಬರದಿದ್ದರೆ ಸ್ಕೂಲಿಗೆ ಡುಬ್ಬಾ ಹೊಡೆದೇ ಹೊಡಿತೀನೀಂತ ಕೂತಿದ್ದಾನೆ ಈ ನನ್ನ ಮಗ. ಅಷ್ಟು ಬಿಟ್ಟರೆ ನನಗೇನೂ ಜಾನ್‌ತಾ ನೈ.’

‘ಅಲ್ಲಯ್ಯಾ, ಸ್ಕೂಲಿಗೆ ಮಗನನ್ನ ಕಳಿಸ್ತೀಯ, ಅವರಿಗೆ ಇಪ್ಪತ್ತೈದು ಸಾವಿರ ಡೊನೇಷನ್ ಕೊಡ್ತೀಯ, ಎಲ್ಲ ಆದಮೇಲೆ ಅಲ್ಲಿ ನಿನ್ನ ಮಗನ ಟೀಚರ್ ಯಾರು, ಏನು, ಎತ್ತ, ತಿಳೀದೇನೇ ಇಷ್ಟೆಲ್ಲಾ ಮಾಡೋರ್‍ನ ನಾನೆಲ್ಲೂ ನೋಡಿಲ್ಲ.’

ಗುಪ್ತಾಜಿಗೆ ಈಗ ನಿಜಕ್ಕೂ ರೇಗಿತು. ಆದರೆ ರಂಗಾರೆಡ್ಡಿಯ ಮೇಲೆ ಕೆಂಡಕಾರುವುದರಲ್ಲಿ ಅರ್ಥವಿರಲಿಲ್ಲ. ಈ ಶಾಲೆಯವರೂ ಸರಿ, ಶಾರದಾ ಮೇಡಂ ಗಲಾಟೆಯನ್ನ ಪೋಲೀಸರ ಬಳಿಗೆ ಒಯ್ದರೋ, ಅಥವಾ ಯಾರುಯಾರ ಬಳಿ ಬ್ಲಾಕ್‌ಮೇಲ್ ಮಾಡಿ ಡೊನೇಶನ್ ವಸೂಲಿ ಮಾಡಿದರೋ ಅವರ ಯಾದಿ ಹಿಡಿದು ಓಡಾಡುತ್ತಿದ್ದಾರೋ ತಿಳಿಯದೇ ಪಿರಿಪಿರಿಗೊಂಡರು.

‘ನನ್ನ ವಿಷಯ ಹಾಗಿರಲಿ, ಈಗ ನಿನಗೆ ಬೇಕಾದ್ದು ಏನು?’ ಗುಪ್ತಾಜಿ ಕೇಳಿಯೇ ಕೇಳಿದರು.

ರಂಗಾರೆಡ್ಡಿ ಸೋಲೊಪ್ಪಿದ. ಅವನಿಗೆ ಗುಪ್ತಾಜಿಯಿಂದ ಏನೂ ಮಾಹಿತಿ ಸಿಗುವಂತಿರಲಿಲ್ಲ. ಸರಿ ಇನ್ನೇನು ಫೋನ್ ಇಡಬೇಕೆನ್ನುವಷ್ಟರಲ್ಲಿ ಗುಪ್ತಾಜಿಯ ಮರುಪ್ರಹಾರ ಪ್ರಾರಂಭವಾಯಿತು.

‘ಅದು ಸರಿ ಕಣಯ್ಯ- ಪೋಲೀಸು ಡಿಪಾರ್ಟ್‌ಮೆಂಟಿನಲ್ಲಿದ್ದೀಯ. ನೀನು ಕಡಿದು ಕಟ್ಟೆ ಹಾಕಿದ ಎವಿಡೆನ್ಸು ಏನು?’

ಈಗ ರಂಗಾರೆಡ್ಡಿಗೆ ನಿಜಕ್ಕೂ ಪೀಕಲಾಟಕ್ಕೆ ಬಂತು. ನಿನ್ನೆ ಈ ವಿಷಯದ ಬಗ್ಗೆ ಕಂಪ್ಲೇಂಟು ಬಂದಾಗಿನಿಂದಲೂ ಈ ವಿಷಯ ಗಹನವಾಗುತ್ತಾ ಹೋಗಿತ್ತು. ಮೊದಲಿಗೆ ರಂಗಾರೆಡ್ಡಿಯ ಠಾಣೆಯಿಂದ ಪೇದೆಯೊಬ್ಬನನ್ನು ಕಳಿಸಿ ಶಾರದಾ ಮೇಡಂ ಅಕ್ಕಪಕ್ಕದ ಫ್ಲಾಟುಗಳಲ್ಲಿ ವಿಚಾರಣೆ ನಡೆಸಿದ. ಅಲ್ಲಿಂದ ಸಿಕ್ಕ ಮಾಹಿತಿಯಿಂದ ಶಾರದಾ ಬಗ್ಗೆ ಕುತೂಹಲ ಹೆಚ್ಚಾಯಿತೇ ವಿನಃ ಕಡಿಮೆಯಾಗಲಿಲ್ಲ. ಸಂಕ್ಷಿಪ್ತವಾಗಿ ರಂಗಾರೆಡ್ಡಿ ಶೇಖರಿಸಿದ ಮಾಹಿತಿ ಇದು:

ರೇನ್‌ಡ್ರಾಪ್ ಅಪಾರ್ಟ್‌ಮೆಂಟಿನ ಮೊದಲ ಮಹಡಿಯ ಫ್ಲಾಟಿಗೆ ಶಾರದಾ ಮೂರು ವರ್ಷಗಳ ಕೆಳಗೆ ಬಂದು ಸೇರಿದಳು. ಆ ಫ್ಲಾಟಿನ ಮಾಲೀಕ- ಮೋಹಿದ್ ಅಲಿ ದುಬಾಯಿಯಲ್ಲಿ ಕೆಲಸದಲ್ಲಿದ್ದ. ತನ್ನ ಹಳೆಯ ಗೆಳೆಯ ಚೌಧರಿ ಅಲ್ಲಿ ಫ್ಲಾಟು ಕೊಳ್ಳವ ಪ್ಲಾನ್ ಹೇಳಿದಾಗ ಮೋಹಿದ್ ಅಲಿಯೂ ಅಲ್ಲಿಯೇ ತನಗೊಂದು ಫ್ಲಾಟನ್ನ ಬುಕ್ ಮಾಡಲು ಹೇಳಿದ್ದ. ನಾಲ್ಕು ವರ್ಷಗಳ ಕೆಳಗೆ ಇಬ್ಬರೂ ಫ್ಲಾಟನ್ನ ಕೊಂಡಿದ್ದರು. ಫ್ಲಾಟಿನ ಮೊದಲ ನಿವಾಸಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಅವನು ವರ್ಗವಾಗಿ ಹೊರಟುಹೋದಾಗ, ಸ್ವಲ್ಪ ದಿನ ಫ್ಲಾಟು ಖಾಲಿಯಾಗೇ ಇತ್ತು. ಆ ನಂತರ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟಾಗ ಶಾರದಾ ಬಂದು ಫ್ಲಾಟನ್ನ ಬಾಡಿಗೆಗೆ ಹಿಡಿದಿದ್ದಳು. ಸ್ಕೂಲ್ ಮೇಡಂ, ಒಂಟಿಯಾಗಿರುತ್ತಾಳೆ ಎಂದು ತಿಳಿದಾಗ ಚೌಧರಿ, ಒಂದು ಕ್ಷಣದ ಮಟ್ಟಿಗೆ ಹಿಂದೇಟು ಹಾಕಿದರೂ, ಕಡೆಗೆ ಪಕ್ಕದಲ್ಲೇ ತಾನಿರುವುದರಿಂದ, ರಿಸ್ಕ್ ಏನೂ ಇಲ್ಲವೆನ್ನಿಸಿ ಬಾಡಿಗೆಗೆ ಕೊಡಲು ಒಪ್ಪಿದ್ದ. ಶಾರದಾ ಬಂದ ಕ್ಷಣದಿಂದಲೂ ಬಹಳ ಮರ್ಯಾದೆಯಾಗಿ ನಡೆದುಕೊಂಡಿದ್ದಳು. ಫ್ಲಾಟಿನ ಬೀಗದಕೈ ಒಂದನ್ನು ಚೌಧರಿಯ ಮನೆಯಲ್ಲಿ ಪರ್ಮನೆಂಟಾಗಿ ಇರಸಿದ್ದು, ಸಮಯಕ್ಕೆ ಸರಿಯಾಗಿ ಬಾಡಿಗೆ ಕೊಡುತ್ತಿದ್ದುದರಿಂದ ಯಾವ ಯೋಚನೆಯೂ ಇರಲಿಲ್ಲ. ಆಕೆ ಅಲ್ಲಿಗೆ ಎಷ್ಟು ಹೊಂದಿಕೊಂಡು ಬಿಟ್ಟಿದ್ದಳೆಂದರೆ, ಚೌಧರಿಯಾಗಲೀ, ಮೋಹಿದ್ ಅಲಿಯಾಗಲೀ, ಮನೆ ಬಾಡಿಗೆ ಹೆಚ್ಚಿಸುವ ವಿಷಯವನ್ನು ಎತ್ತಿಯೇ ಇರಲಿಲ್ಲ. ತನ್ನ ಪಾಡಿಗೆ ತಾನಿರುತ್ತಿದ್ದ ಶಾರದಾ, ಪೆಟಲ್ಸ್ ಸ್ಕೂಲಿನಲ್ಲಿ ಟೀಚರ್ ಆಗಿದ್ದಾಳೆಂಬುದನ್ನು ಬಿಟ್ಟು ಯಾರಿಗೂ ಆಕೆಯ ಬಗ್ಗೆ ಹಚ್ಚಿನ ಮಾಹಿತಿಯಿರಲಿಲ್ಲ. ಮಾಹಿತಿ ಶೇಖರಿಸುವ ಅವಶ್ಯಕತೆಯನ್ನೂ ಯಾರೂ ಕಂಡಂತಿರಲಿಲ್ಲ.

ಮೊದಲಿಗೆ ಶಾರದಾ ನಾಪತ್ತೆಯಾದದ್ದನ್ನು ಯಾರೂ ಗಮನಿಸಿಯೇ ಇರಲಿಲ್ಲ. ಅದಕ್ಕೆ ಕಾರಣವೆಂದರೆ, ಮನೆಯಲ್ಲಿ ದೀಪಗಳು ಉರಿಯುತ್ತಿದ್ದುವು. ಮೇಲಾಗಿ, ಆ ಮನೆಬಾಗಿಲಿಗೇ ಅಡಕವಾಗಿದ್ದ ನೈಟ್‌ಲ್ಯಾಚ್ ಬೀಗವನ್ನು ಆಕೆ ಬಳಸುತ್ತಿದ್ದಳು. ಮಿಕ್ಕ ಮನೆಗಳಲ್ಲಿ ಬಾಗಿಲಿಗೆ ಹೊರಗಿನಿಂದ ಆಯಾ ಮನೆಯ ಮಾಲೀಕರು ಚಿಲಕ ಹಾಕಿಸಿಕೊಂಡಿದ್ದರು. ಆದರೆ ಶಾರದಾಳಿಗೆ ಅದರ ಅವಶ್ಯಕತೆ ಕಂಡಿರಲಿಲ್ಲ. ಶಾಲೆಯವರು ಬಂದು ಒಂದೆರಡು ಬಾರಿ ವಿಚಾರಿಸಿದಾಗ ಮಾತ್ರ ಚೌಧರಿಗೆ ಆಕೆ ಇಲ್ಲವೆಂಬ ವಿಷಯ ತಿಳಿಯಿತು. ಅಷ್ಟರಲ್ಲಿ ಚೌಧರಿಗೆ ಕೆಲಸದ ನಿಮಿತ್ತವಾಗಿ ಒಂದು ವಾರಕಾಲ ಮುಂಬಯಿಗೆ ಹೋಗಬೇಕಾದ್ದರಿಂದ, ಆ ಗಡಿಬಿಡಿಯಲ್ಲಿ ಆತ ಹೊರಟುಬಿಟ್ಟಿದ್ದ. ಎರಡು ದಿನಗಳ ಕೆಳಗಷ್ಟೇ ವಾಪಸಾದಾಗ, ಶಾರದಾ ಇನ್ನೂ ನಾಪತ್ತೆಯಾಗಿದ್ದಾಳೆಂದು ತಿಳಿಯಿತು. ಅಷ್ಟರಲ್ಲಿ ರಂಗಾರೆಡ್ಡಿಯ ವಿಚಾರಣೆಯೂ ಪ್ರಾರಂಭವಾಗಿ, ತನ್ನ ಮನೆಯಲ್ಲಿದ್ದ ಬೀಗದ ಕೈ ತಂದು ಬಾಗಿಲು ತೆರೆದು ನೋಡಿದ್ದರು. ಮನೆ ಸಾಮಾನ್ಯವಾಗೇ ಇತ್ತು. ಇದ್ದ ಅಲ್ಪ ಸಾಮಾನುಗಳು ಯಥಾಸ್ಥಾನದಲ್ಲಿದ್ದುವು. ಹೀಗೆ ಎಲ್ಲವೂ ನಾರ್ಮಲ್ ಆಗಿದ್ದರಿಂದ ರಂಗಾರೆಡ್ಡಿಗೆ ಈ ಕೇಸು ಗಹನವನ್ನಿಸಿ, ಎನೂ ತೋಚದಂತಾಯಿತು.

ಗುಪ್ತಾಜಿಗೆ ಈ ವಿಷಯಗಳನ್ನೆಲ್ಲ ರಂಗಾರೆಡ್ಡಿ ಹೇಳಿದ. ಆದರೆ ದಪ್ಪ ಚರ್ಮದ ಗುಪ್ತಾಜಿಗೆ ತನ್ನ ಮಗನ ಪ್ರತಿನಿತ್ಯದ ವರಾತವೇ ಮುಖ್ಯವಾಗಿ, ಆ ಬಗ್ಗೆಯೇ ತಲೆಕೆಡಿಸಿಕೊಂಡು, ಈ ವಿಷಯವನ್ನು ಮರೆಯಲು ಪ್ರಯತ್ನಿಸಿದರು.

******

ಕೈತೋರಿಸುವ ಪ್ರಕ್ರಿಯೆ ಆದ ಒಂದೆರಡು ದಿನಗಳಲ್ಲೇ ಮಧುಸೂಧನ ಮೆಹತಾನಿಗೆ ಮುಂಬಯಿನಿಂದ ಹೊರಗಡೆಗೆ ಹೋಗುವ ಯೋಗ ಕೂಡಿಬಂತು. ಹೈದರಾಬಾದಿನ ಬಳಿಯ ರೆಸಿಡೆನ್ಷಿಯಲ್ ಶಾಲೆಯೊಂದರಲ್ಲಿ ತನಗೂ ತನ್ನ ಮಗಳಿಗೂ ಸಂದರ್ಶನಕ್ಕಾಗಿ ಕರೆ ಬಂದಿತ್ತು. ಈ ವರ್ಷದ ಕೊನೆಗೆ ಕೆ.ಜಿ ಮುಗಿಸಿ ಮುಂದಿನ ವರ್ಷ ಒಂದನೇ ತರಗತಿಗೆ ಸೇರಲಿದ್ದ ತನ್ನ ಮಗಳನ್ನು ಯಾವುದಾದರೂ ಒಳ್ಳೆಯ ಬೋರ್ಡಿಂಗ್ ಶಾಲೆಗೆ ಹಾಕಬೇಕೆಂದು ಮಧುಸೂಧನ ನಿರ್ಧರಿಸಿದ್ದ. ಆಫೀಸಿನಲ್ಲಿ ಗೆಳೆಯರೊಬ್ಬರು ಹೈದರಾಬಾದಿನಲ್ಲಿದ್ದ ಈ ಬೋರ್ಡಿಂಗ್ ಸ್ಕೂಲಿನ ವಿಚಾರ ಹೇಳಿದಾಗ, ತನ್ನ ಹೆಂಡತಿ ಹೈದರಾಬದಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಳು ಎಂಬ ಕಾರಣವಾಗಿಯೇ ಅವನು ಉತ್ಸುಕನಾಗಿದ್ದ. ಒಬ್ಬನಿಗೇ ಆಫೀಸಿನ ಕೆಲಸಗಳ ನಡುವೆ ಮಗಳನ್ನೂ ಸಂಭಾಳಿಸುವುದು ಸ್ವಲ್ಪ ಕಷ್ಟವೇ ಆಗುತ್ತಿತ್ತು. ಅಡುಗೆಗೆ, ಮಗಳನ್ನು ನೋಡಿಕೊಳ್ಳುವುದಕ್ಕೆ ಬೇರೆ ಬೇರೆ ಇಬ್ಬರು ಕೆಲಸದವರನ್ನು ಅವನು ನೌಕರಿಯಲ್ಲಿ ಇಟ್ಟುಕೊಂಡಿದ್ದನಾದರೂ, ಆಗಾಗ ಕೆಲಸ ಬಿಟ್ಟು ಹೋಗುವ, ಹೊಸ ಕೆಲಸದವರನ್ನು ಹುಡುಕಬೇಕಾದ ಪಿರಿಪಿರಿ ಅವನಿಗೆ ಕಷ್ಟದ್ದೇ ಆಗಿತ್ತು. ಸಾಲದ್ದಕ್ಕೆ ಒಂಟಿ ಗಂಡಸೆಂದ ಮೇಲೆ ಕೆಲಸಕ್ಕೆ ಬರಲು ಕೆಲವರು ಹಿಂಜರಿಯುತ್ತಲೂ ಇದ್ದರು. ಹೀಗಾಗಿ ಮಗಳು ಬೆಳೆಯುತ್ತಾ ಹೋದಂತೆ ಅವಳ ವಾರಗೆಯವರ ಬಳಿ ಇದ್ದು ಆಡಿಕೊಳ್ಳಲಿ ಎಂಬ ಸದ್ವಿಚಾರದೊಂದಿಗೆ ಮಧು ಈ ಯೋಜನೆ ಹಾಕಿದ್ದ.

ಸ್ಕೂಲು ನಿಜಾಮಾಬಾದ್ ರಸ್ತೆಯಲ್ಲಿ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿತ್ತು. ಹೈದರಾಬಾದಿನ ಏರ್‌ಪೋರ್ಟ್‌ನಿಂದ ಅಲ್ಲಿಗೆ ತಲುಪಲು ದಾರಿ ಹುಡುಕುವುದು ಕಷ್ಟವಾಗುತ್ತದಾದ್ದರಿಂದ, ತನಗೆ ವಾಹನ ಸೌಕರ್ಯ ಕಲ್ಪಿಸಲು ಸಾಧ್ಯವೇ ಎಂದು ಶಾಲೆಯವರನ್ನ ಆತ ಪೋನು ಮಾಡಿ ಕೇಳಿದ್ದ. ತಮ್ಮ ಶಾಲೆಗೆ ಬರುವವರೆಲ್ಲ ಸ್ವಲ್ಪ ಶ್ರೀಮಂತರೂ, ಬೇರೆ ಊರಿನವರೂ ಆದ್ದರಿಂದ, ಶಾಲೆಗೆ ಇಂಥ ಒಂದು ಕೋರಿಕೆ ಹೊಸದೇನೂ ಆಗಿರಲಿಲ್ಲ. ಹೀಗಾಗಿ ಅವನ ಕೋರಿಕೆಯನ್ನ ಒಪ್ಪಿದ್ದರು. ಅಲ್ಲದೇ, ಅದಕ್ಕೆ ಆಗುವ ಹಣವನ್ನ ಮಧುಸೂಧನನೇ ಕಟ್ಟಬೇಕೆಂದು ಹೇಳುವುದನ್ನ ಮಾತ್ರ ಮರೆತಿರಲಿಲ್ಲ. ಪ್ಲೇನಿನಿಂದ ಇಳಿದು ಹೊರ ಬಂದಾಗ ಮಧುಸೂಧನನಿಗೆ ಶಾಲೆಯವರು ಕಳಿಸಿದ್ದ ಕಾರಿನ ಚಾಲಕ, ಬೋರ್ಡು ಹಿಡಿದು ನಿಂತಿದ್ದದ್ದು ಕಾಣಿಸಿತು. ಮಗಳನ್ನು ಕರೆದು ಅವನು ಕಾರಿನತ್ತ ಹೊರಟ. ಮಗಳ ಜೊತೆಗೆ ಹಲವು ದಿನಗಳಿಂದ ಹೆಚ್ಚು ಸಮಯ ಕಳೆದಿದ್ದಿರಲಿಲ್ಲ, ಹಾಗೂ ಇಲ್ಲಿ ಅಡ್ಮಿಷನ್ ಸಿಕ್ಕರೆ, ಅವಳು ಹಾಸ್ಟೆಲ್ಲಿನಲ್ಲಿರುತ್ತಾಳೆಂಬ ಪಾಪಭಾವನೆಯೂ ಅವನನ್ನು ಕಾಡಿದ್ದರಿಂದ, ಅವನು ಒಂದು ವಾರ ಕಾಲ ರಜೆ ಹಾಕಿದ್ದ. ಶಾಲೆಯ ಸಂದರ್ಶನ ಮುಗಿದ ನಂತರ ಅಲ್ಲಿಯೇ ಇದ್ದು ಹೈದರಾಬಾದಿನ ಸಾಲಾರ್‌ಜಂಗ್, ಮೃಗಾಲಯ, ಚಾರ್‌ಮಿನಾರ, ಗೋಲ್ಕೊಂಡ ಎಲ್ಲವನ್ನೂ ಮಗಳ ಜತೆ ಸುತ್ತಾಡಿ ಮುಂಬಯಿಗೆ ವಾಪಸಾಗುವುದು ಅಂತ ಯೋಚಿಸಿ, ದೊಡ್ಡ ಪ್ಲಾನನ್ನೇ ಹಾಕಿಕೊಂಡು ಬಂದಿದ್ದ.

ಕಾರಿನ ಡ್ರೈವರ್ ತನ್ನ ಲಗೇಜಿನ ಟ್ರಾಲಿಯನ್ನ ಪಡೆದು, ಕಾರಿನತ್ತ ತಳ್ಳಿಕೊಂಡು ಹೋದ. (ಸಾಕುನಾಯಿಯ ಹಾಗೆ ಎಂದು ಮನಸ್ಸಿನಲ್ಲೇ ಅಂದಕೊಳ್ಳುತ್ತಾ) ಮಧುಸೂಧನ ಅವನನ್ನು ಹಿಂಬಾಲಿಸಿದ. ಕಾರಿನ ಬಾಗಿಲು ತೆಗೆದಾಗ ಅಲ್ಲಿ ಹಿಂದಿನ ಸೀಟಿನಲ್ಲಿ ಯಾರೋ ಕುಳಿತಿದ್ದದ್ದು ಕಾಣಿಸಿತು. ಆಕೆ ಸುಮಾರು ಮುವತ್ತು ಮುವತ್ತೈದರ ಹೆಣ್ಣು. ಬಹುಶಃ ಶಾಲೆಯಿಂದ ಯಾರನ್ನಾದರೂ ಕಳಿಸಿರಬಹುದೆಂದು ಮಧುಸೂಧನ ಊಹಿಸಿದ. ಲಗೇಜನ್ನು ಡಿಕ್ಕಿಯಲ್ಲಿ ಸೇರಿಸಿ, ಮಗಳನ್ನು ಹಿಂದಿನ ಸೀಟಿಗೆ ಕಳುಹಿಸಿ ತಾನು ಮುಂದಿನ ಸೀಟಲ್ಲಿ ಬಂದು ಕೂತ. ಶಾಲೆಯಿಂದ ಕಳಿಸಿದ್ದರೆ ಆಕೆ ತನ್ನನ್ನು ಮಾತನಾಡಿಸಬೇಕಿತ್ತು. ಬದಲಿಗೆ ಆಕೆ ಮೌನ ಧರಿಸಿದ್ದಳು. ವಿಷಯ ಏನಿರಬಹುದು ಎಂದುಕೊಳ್ಳುತ್ತಲೇ ಮಧು ತನ್ನ ಕೈರೇಖೆಯನ್ನ ಒಮ್ಮೆ ನೋಡಿಕೊಂಡ. ದಯಾಕರ ಮೆನನ್ ತನ್ನ ಕೈ ನೋಡಿದಾಗಿನಿಂದಲೂ ಮಧುಸೂಧನನ ಮನಸ್ಸು ಸ್ಥಿಮಿತದಲ್ಲಿ ಇರಲಿಲ್ಲ. ಯಾಕೆ ಹೀಗಾಗುತ್ತಿದೆಯೆಂದು ತಿಳಿಯದೆಯೇ ಅನಾವಶ್ಯಕ ಅವನು ರೋಮಾಂಚಿತಗೊಂಡ. ಆಕೆ ಯಾರು ಅಂತ ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ತಾನು ಬಾಯಿಬಿಡುವುದಕ್ಕೆ ಮೊದಲೇ ಡ್ರೈವರ್ ಅವಳ ವಿವರಗಳನ್ನು ಕೊಡಲು ಪ್ರಾರಂಭಿಸಿದ್ದ:

‘ಸಾಬ್ ಈ ಮೇಡಂ ಸ್ಕೂಲಿಗೆ ನೌಕರಿಗಾಗಿ ಇಂಟರ್‌ವ್ಯೂಗೆ ಬರ್ತಾ ಇದ್ದಾರೆ. ಹೇಗೂ ಹೈದರಾಬಾದಿಗೆ ಹೋಗ್ತಾಯಿದ್ದೀಯ, ಆಕೆಯನ್ನೂ ಕರಕೊಂಡು ಬಾ ಅಂತ ಪ್ರಿನ್ಸಿಪಾಲ್ ಸಾಹೇಬರು ಹೇಳಿದರು. ನಿಮಗೇನೂ ಅಭ್ಯಂತರ ಇರಲಾರದು ಅಂತಲೂ ಹೇಳಿದರು….’

ಮಧುಸೂಧನನಿಗೆ ಸ್ಕೂಲಿನವರ ಉಪಾಯ ತಿಳಿಯಿತು. ಆದರೆ ಕಾರು ಖಾಲಿ ಹೋಗುತ್ತಿರುವಾಗ ಅಲ್ಲಿ ಮತ್ತೊಬ್ಬಾಕೆ ಇದ್ದರೆ ತನ್ನ ಅಭ್ಯಂತರವೇನಿದ್ದೀತು? ಬದಲಿಗೆ ದಾರಿಯಲ್ಲಿ ಮಾತಾಡಲು, ಸ್ಕೂಲಿನ ವಿಚಾರ ಇನ್ನಷ್ಟು ತಿಳಿಯಲು ಅವಕಾಶ ಸಿಕ್ಕಂತಾಯಿತು ಎಂದುಕೊಂಡು ಮಧುಸೂಧನ ಒಳಗೊಳಗೇ ಖುಷಿ ಪಟ್ಟ.

ಸಿಟಿಯಿಂದ ಹೈವೇಗೆ ಬರುವವರೆಗೂ ಮಧು ಏನೂ ಮಾತನಾಡಲಾರದವನಾಗಿ ಸುಮ್ಮನಿದ್ದ. ಹಸ್ತರೇಖೆಗಳು ಅವನ ತಲೆಯ ತುಂಬ ಥಕಥೈ ಮಾಡುತ್ತಿದ್ದುದರಿಂದ, ಅವನಿಗೆ ಸಹಜವಾಗಿ ಇರಲು ಸಾಧ್ಯವೇ ಆಗಿರಲಿಲ್ಲ. ಆಕೆಯ ಜತೆ ಮಾತು ಪ್ರಾರಂಭಿಸುವುದಾದರೂ ಹೇಗೆ? ಆಕೆಯಂತೂ ತಾನು ಕಾರಲ್ಲೇ ಇಲ್ಲವೆನ್ನುವ ಹಾಗೆ, ತನ್ನ ಮಗಳ ಜೊತೆ ಮಾತುಕತೆ ಶುರು ಹಚ್ಚಿಕೊಂಡು, ಮಧುಸೂಧನನ ಬಗ್ಗೆ ಶೇಖರಿಸಬೇಕಾದ ಮಾಹಿತಿಯನ್ನೆಲ್ಲಾ ಒಟ್ಟುಗೂಡಿಸುತ್ತಿದ್ದಳು- ತಾವು ಬಂದಿರುವುದು ಎಲ್ಲಿಂದ, ಯಾತಕ್ಕಾಗಿ, ಮುಂಬಯಿಯಲ್ಲಿ ಎಲ್ಲಿ ವಾಸವಾಗಿರುವುದು… ಹೀಗೆ ಎಲ್ಲ ಮಾಹಿತಿಯೂ ಪುಟ್ಟ ಮಗಳ ದೊಡ್ಡ ವಟಗುಟ್ಟುವ ಬಾಯಿಯ ಮೂಲಕ ಆಕೆಗೆ ತಲುಪಿಬಿಟ್ಟಿತ್ತು.

ಮುಂದಿನ ಸೀಟಿನಲ್ಲಿ ಕೂತಿದ್ದ ಮಧುಸೂಧನನಿಗೆ, ತಿರುಗಿ ನೋಡಲೂ ನಾಚಿಕೆಯಾಗಿತ್ತು. ಕಾರು ಹತ್ತಿದ ತಕ್ಷಣಕ್ಕೆ ಒಂದೇ ಒಂದು ಕ್ಷಣದ ಮಟ್ಟಿಗೆ ಅವಳ ಮುಖವನ್ನು ನೋಡಿದ್ದವನಿಗೆ ಅವಳು ಹೇಗಿದ್ದಾಳೋ ನೋಡಬೇಕೆಂಬ ಕುತೂಹಲ. ಆದರೆ ಆಕೆಯ ಧ್ವನಿ ಮಾತ್ರ ಕೇಳಿಸಿ, ಆಕೆ ಒಂದು ವಿಧದ ಅಶರೀರವಾಣಿಯಾಗಿಬಿಟ್ಟಿದ್ದಳು.

ಹೈವೇ ತಲುಪಿದ ನಂತರ ಕಡೆಗೂ ಧೈರ್ಯ ತಂದುಕೊಂಡು ಒಂದು ಢಾಬಾದ ಬಳಿ ಗಾಡಿ ನಿಲ್ಲಿಸಲು ಡ್ರೈವರನಿಗೆ ಹೇಳಿದ. ಕಾರು ನಿಂತ ತಕ್ಷಣವೇ- ‘ದೂರ ಪ್ರಯಾಣ ಮಾಡಿ ಸ್ವಲ್ವ ಸುಸ್ತಾಗಿದೆ, ಒಂದಿಷ್ಟು ಚಾ ಕುಡಿಯಬೇಕು, ನೀವೂ ಬರುತ್ತೀರಾ?’ ಅಂತ ಹಿಂದೆ ತಿರುಗಿ ಆಕೆಯನ್ನ ನೋಡಿ ಕೇಳಿಯೇ ಬಿಟ್ಟ. ಆಕೆ ಒಳ್ಳೆಯ ಮೂಡಿನಲ್ಲಿ ಇದ್ದಂತಿತ್ತು.. ‘ಓಹೋ ಅದಕ್ಕೇನು, ಕುಡಿಯೋಣ, ನನಗೂ ಚಾ ಕುಡೀಬೇಕು ಅಂತ ಅನ್ನಿಸುತ್ತಾ ಇದೆ, ಗಂಟಲು ಒಣಗಿ ಹೋಗಿದೆ. ಅಲ್ಲಿಗೆ ಹೋದಮೇಲೆ ಏನು ಸಿಗುತ್ತೋ ಏನೋ ಯಾರಿಗೆ ಗೊತ್ತು?’ ಎಂದಳಾಕೆ.

ಮೂರೂ, ಮತ್ತೊಂದು ಜನ ಕಾರಿನಿಂದ ಇಳಿದು ಢಾಬಾದ ಒಂದಂಚಿನಲ್ಲಿ ಹಾಕಿದ್ದ ಮೇಜು ಕುರ್ಚಿಗಳತ್ತ ಬಂದು ಕುಳಿತರು. ಮಧು ದೊಡ್ಡವರಿಗೆ ಚಹಾ, ಮಗಳಿಗೆ ಫ್ರೂಟಿ ಹೇಳಿದ. ‘ಇವಳಿಗೆ ಪೆಪ್ಸಿ ಬಹಳ ಇಷ್ಟ.. ಷಾರುಖ್ ಖಾನ್ ಅದನ್ನೇ ಕುಡೀತಾನೆ ಅಂತ ತುಂಬ ರಂಪ ಮಾಡಿ ತರಿಸಿಕೊಳ್ಳುತ್ತಾಳೆ. ಆದಷ್ಟು ಮಟ್ಟಿಗೆ ನಾನು ಅವಳಿಗೆ ಫ್ರೂಟ್ ಜ್ಯೂಸೇ ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತೇನೆ… ‘ (ಸ್ಕೂಲ್ ಮೇಡಂಗಳಿಗೆ ಜಂಕ್ ಫುಡ್, ಏರೇಟೆಡ್ ಡ್ರಿಂಕ್ಸ್ ಕಂಡರೆ ಅತೀ ಕೋಪವಿರುತ್ತದೆ ಎಂದು ಊಹಿಸಿ, ಅವಳನ್ನ ಮೆಚ್ಚಿಸಲೆಂದೇ ಫ್ರೂಟಿ ಹೇಳಿದವನಂತೆ ದೇಶಾವರಿ ನಗೆ ನಕ್ಕ).

ಆದರೆ ಆಕೆ ಇವನಿಗಿಂತ ಒಂದು ಕೈ ಮೇಲಿದ್ದಳು. ‘ವೆಲ್, ನನಗೂ ಪೆಪ್ಸಿಯೇ ಇಷ್ಟ.. ನಿಮಗೆ ಅಭ್ಯಂತರವಿಲ್ಲದಿದ್ದರೆ ಚಹಾ ಕ್ಯಾನ್ಸಲ್ ಮಾಡಿಸಿ, ಪೆಪ್ಸಿ ಹೇಳುತ್ತೀರಾ.. ಪ್ಲೀಸ್…. ‘ ಎಂದಳು. ಮಧುಸೂಧನ ಒಂದು ಕ್ಷಣದ ಮಟ್ಟಿಗೆ ದಂಗಾದ!!!

ಮಧುಸೂಧನನಿಗೆ ಮಾತು ಹೇಗೆ ಮುಂದುವರೆಸಬೇಕೋ ತಿಳಿಯದಾಯಿತು. ಇದ್ದಕ್ಕಿದ್ದಹಾಗೆ ‘ಹಾಗಾದರೆ ನಿಮಗೂ ಷಾರುಖ್ ಖಾನ್ ಇಷ್ಟವೇನು? ನಾನಂತೂ, ದಿಲ್ ತೋ ಪಾಗಲ್ ಹೈ ನೋಡಿದಾಗಿನಿಂದ ಅವನ ಫ್ಯಾನ್ ಆಗಿಬಿಟ್ಟಿದ್ದೇನೆ.. ದೇವದಾಸ್‌ನಲ್ಲಿ ಎಷ್ಟು ಚೆನ್ನಾಗಿ ನಟಿಸಿದ್ದಾನೆ, ಅಲ್ಲವೇ? ಏನೇ ಆದರೂ ಘನ ಪಾತ್ರಗಳಿಗಿಂತ ಅವನು ಫನ್ನಿ ಪಾತ್ರಗಳಲ್ಲೇ ನನಗೆ ಇಷ್ಟ… ‘ ಎಂದುಬಿಟ್ಟ. ಅವಳ ಮನಸ್ಸಿಗೆ ಇಷ್ಟವಾಗುವ ಮಾತನ್ನು ಸಮಯಸ್ಫೂರ್ತಿಯಿಂದ ಹೇಗೆ ಹೇಳಿದೆ ಎಂದು ತನ್ನೊಳಗೇ ಬೀಗುವಷ್ಟರಲ್ಲಿ ಮಗಳು ಅದಕ್ಕೆ ತಣ್ಣೀರೆರಚಿದಳು. ‘ಅಪ್ಪ ಸುಳ್ಳು ಹೇಳ್ತಾ ಇದ್ದಾರೆ, ಅವರಿಗೆ ಷಾರುಖ್ ಕಂಡರೆ ಆಗುವುದಿಲ್ಲ. ನಾನು ಟಿ.ವಿ ನೋಡಬೇಕೂಂದಾಗೆಲ್ಲಾ ಅವನನ್ನ ಬೈತಾರೆ. ‘ ಅಂದು ತಾನು ಕಟ್ಟುತ್ತಿದ್ದ ಮಾತಿನ ಸೌಧಕ್ಕೆ ಬೆಂಕಿ ಹಚ್ಚಿದಳು.

ಮೇಡಂ ಸುಮ್ಮನಿರಲಿಲ್ಲ.. ಬಹುಶಃ ಮಧುಸೂಧನನ್ನು ಬಚಾಯಿಸಲೇ ಬೇಕು ಎಂಬಂತೆ, ‘ನನಗೂ ಆತ ಇಷ್ಟ ಇಲ್ಲ ಬಿಡಿ. ಸುಮ್ಮನೆ ತೊದಲುತ್ತಾನೆ. ಪೆಪ್ಸಿ ಇಷ್ಟವೆಂದ ಮಾತ್ರಕ್ಕೆ ಷಾರುಖ್ ಇಷ್ಟವಾಗಬೇಕೆಂದು ಏನೂ ನಿಯಮ ಇಲ್ಲವಲ್ಲ…. ನನಗೆ ಆಮೀರ್ ಇಷ್ಟ.’ ಅಂದಳು. ಮಧುಸೂಧನ ಚೇತರಿಸಿಕೊಂಡು ಮುಂದಿನ ಮಾತಾಡುವಷ್ಟರಲ್ಲಿ ಮತ್ತೆ ಮಗಳು ‘ಅಪ್ಪನಿಗೆ ಆಮೀರ್ ಕೂಡಾ ಇಷ್ಟವಿಲ್ಲ. ಬರೇ ಸುನಿಲ್ ಶೆಟ್ಟಿಯ ಸಿನೇಮಾ ನೋಡುತ್ತಾರೆ ಅಷ್ಟೇ….’ ಅಂದಳು. ಮಧುಸೂಧನನಿಗೆ ತನ್ನ ಲೆಕ್ಕಾಚಾರವೆಲ್ಲ ತಲೆಕೆಳಗಾಗುತ್ತಿದ್ದುದು ಕಂಡಿತು. ಈ ಪರಿಸ್ಥಿತಿಯಿಂದ ಹೊರಬಿದ್ದು ಮಾತುಕತೆ ಮುಂದುವರೆಸುವುದು ಹೇಗೆಂದು ತಿಳಿಯದೇ, ಪೆಕರು ಪೆಕರಾಗಿ ‘ಏ ಸುಮ್ಮನಿರೇ, ಈ ಮಕ್ಕಳಿಗೇನೂ ಗೊತ್ತಾಗೊಲ್ಲ, ಸುನೀಲ್ ಶೆಟ್ಟಿಯ ಆ ಕಾಮೆಡಿ ಹೇರಾಫೇರಿ ಇಷ್ಟವಾಗಿತ್ತು ಅಷ್ಟೇ.. ಅಂದಹಾಗೆ….’

ಅವನು ಮಾತು ಮುಂದುವರೆಸುವುದಕ್ಕೆ ಮೊದಲೇ ಮೇಡಂ ‘ಛೆ ಮಕ್ಕಳನ್ನು ಅನ್ನಬೇಡಿ, ಅವರು ದೇವರಹಾಗೆ. ಯಾವಾಗಲೂ ತಾವು ಕಂಡದ್ದನ್ನೇ ಹೇಳುತ್ತಾರೆ…. ಹಾಂ, ನೀವೇನೋ ಹೇಳುತ್ತಿದ್ದಿರಿ…. ‘

‘ಏನಿಲ್ಲ, ನೀವು ಏನು ಮಾಡ್ತಾ ಇದ್ದೀರಿ, ಹಾಗೂ ನಿಮಗೆ ಈ ಸ್ಕೂಲಿನ ಬಗೆಗಿನ ಅಭಿಪ್ರಾಯವೇನು? ಯಾಕೆ ನೀವು ನಿಮ್ಮ ಹಳೆಯ ಸ್ಕೂಲನ್ನು ಬಿಡುತ್ತಿದ್ದೀರಿ? ಈ ಶಾಲೆಗೆ ನೀವು ಸೇರಿದರೆ ನಿಮ್ಮ ಮನೆಯವರನ್ನೆಲ್ಲಾ ಬಿಟ್ಟು ಇಲ್ಲಿಗೇ ಬಂದುಬಿಡುತ್ತೀರಾ? ಈ ವಿಷಯಗಳನ್ನ ತಿಳಿದು ಕೊಳ್ಳೋಣಾಂತ. ನೋಡಿ, ನಾನು ಮುಂಬಯಿಯಿಂದ ಬರುತ್ತಿದ್ದೀನಿ. ನನಗೆ ಈ ಸ್ಕೂಲಿನ ವಿಷಯ ಯಾರೋ ಗೆಳೆಯರು ಹೇಳಿದರು. ಕೆಲ ವರ್ಷಗಳ ಹಿಂದೆ ನನ್ನ ಹೆಂಡತಿ ವಿಚಿತ್ರ ಪರಿಸ್ಥಿತಿಯಲ್ಲಿ ತೀರಿಕೊಂಡಳು. ಹೆಚ್ಚಿನ ಮನಸ್ಸಿಲ್ಲದಿದ್ದರೂ ಮಗಳನ್ನ ಬೋರ್ಡಿಂಗಿಗೆ ಹಾಕಬೇಕಾಗಿದೆ…. ‘

ಅವನು ಇಷ್ಟು ಹೇಳುವಷ್ಟರವೇಳೆಗೆ ಮೇಡಂ ಗಂಭೀರವಾದ ಮುಖ ಮುದ್ರೆ ಧರಿಸಿ ಸುಮ್ಮನಾದಳು. ಮಧುವಿಗೆ ಇದು ಬಹಳ ವಿಚಿತ್ರವನ್ನಿಸಿತು. ಹುಡುಗಿಯ ಮೂಲಕ ಮಾತಾಡಿದಾಗಲೆಲ್ಲ ಉತ್ಸಾಹದಿಂದ ತನ್ನ ಮಗಳನ್ನೇ ವಹಿಸಿಕೊಂಡು ಬಂದಂತೆ ಆಡಿದ ಈಕೆ, ನೇರ ಮಾತಾಡುವುದರಲ್ಲಿ ಹಿಂಜರಿಯುತ್ತಿದ್ದುದು ಏಕೆ? ಬಹುಶಃ ಮೊದಲ ಏಟಿಗೇ ಬಹಳ ಖಾಸಗೀ ಪ್ರಶ್ನೆಗಳನ್ನು ಕೇಳಿದ್ದರಿಂದ ಮೌನ ಧರಿಸಿದಳೇ? ಮಧುಸೂಧನಿಗೆ ಅರ್ಥವಾಗಲಿಲ್ಲ. ಬಿಲ್ ಕೊಟ್ಟನಂತರ ಕಾರಿನತ್ತ ಕಾಲೆಳೆಯುತ್ತಾ ನಡೆದ. ಅವರು ಎಲ್ಲರೂ ತನ್ನನ್ನ ಹಿಂಬಾಲಿಸಿದರು. ಮೇಡಂ ಮಗಳ ಜತೆ ಮಾತಾಡುತ್ತಿದ್ದಳಾಗಿಲೀ, ತನ್ನತ್ತ ಅಲ್ಪ ಗಮನವನ್ನೂ ಹರಿಸಲಿಲ್ಲ. ಮಧುಸೂಧನ ತನ್ನ ಕೈಗಳನ್ನೇ ನೋಡಿಕೊಳ್ಳುತ್ತಾ ಪ್ರಯಾಣವಿಡೀ ಮೌನವಾಗಿ ಕುಳಿತಿದ್ದ.

*****

ಹೆಡ್‌ಮೇಡಂಗೆ ಶಾರದಾ ತಮ್ಮ ಶಾಲೆಯಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತಿದ್ದಳು ಅನ್ನುವುದು ಖಚಿತವಾಗಿ ತಿಳಿಯ ಹತ್ತಿತು. ಒಂದು ವಾರ ಬಂದಿರಲಿಲ್ಲವೆಂದ ಮಾತ್ರಕ್ಕೆ ಗುಪ್ತಾಜಿಯಂತಹ ಅನೇಕ ತಂದೆ ತಾಯಿಗಳ ಬಹಳ ಫೋನ್ ಕರೆಗಳು ಬಂದಿದ್ದುವು. ಮೇಲಾಗಿ, ಪೇರೆಂಟ್ಸ್-ಟೀಚರ್ಸ್ ಮೀಟಿಂಗಿನ ದಿನ, ಅನೇಕ ಮಂದಿ ಆಕೆಯ ಬಗ್ಗೆ ವಿಚಾರಿಸದ್ದರೆಂದು ಮಿಕ್ಕ ಟೀಚರುಗಳು ಹೇಳಿದ್ದರು. ಎಲ್ಲರಿಗೂ ಹೆಚ್ಚು-ಕಡಿಮೆ ಎರಡು ಮುಖ್ಯ ಅನುಮಾನಗಳಿದ್ದಂತಿತ್ತು- ಒಂದು: ಶಾರದಾ ಶಾಲೆಯನ್ನು ಬಿಟ್ಟು ಹೋಗಿದ್ದಾಳೆ. ಅದನ್ನ ಸ್ಕೂಲಿನವರು ಮುಚ್ಚಿಡುತ್ತಿದ್ದಾರೆ. ಎರಡು: ಶಾರದಾ ಯಾವುದೋ ಕಾರಣವಾಗಿ ಆಸ್ಪತ್ರೆಯ ಪಾಲಾಗಿರಬೇಕು. ಅದನ್ನು ಇವರು ಯಾರಿಗೂ ಹೇಳುತ್ತಿಲ್ಲ. ಅನುಮಾನ ಏನೇ ಇದ್ದರೂ ಧಕ್ಕೆಯಂತೂ ಶಾಲೆಗೇ ಆಗುತ್ತಿತ್ತು. ಆಕೆಯಂತಹ ಐದಾರು ಟೀಚರುಗಳಿದ್ದರೆ, ಶಾಲೆಯ ಹೊಸ ಬಿಲ್ಡಿಂಗಿಗೆ ಚಂದಾ ಎತ್ತುವುದು ಕಷ್ಟದ ವಿಷಯವೇನೂ ಅಲ್ಲವೆಂದು ಹೆಡ್‌ಮೇಡಂಗೆ ಮನವರಿಕೆಯಾಗುತ್ತಾ ಬಂತು.

ಶಾರದಾಳ ಗೈರುಹಾಜರಿಯನ್ನು ಪೋಲೀಸರಿಗೆ ತಿಳಿಸಿದ್ದರಿಂದ ಸ್ಕೂಲಿಗೆ ಒಳ್ಳೆಯದೇನೂ ಆಗಿರಲಿಲ್ಲ. ದಿನೇ ದಿನೇ ರಂಗಾರೆಡ್ಡಿಯ ಜನ ಬಂದು ಹೋಗುವುದನ್ನ ಮಕ್ಕಳು ಕಂಡು ಹೆದರಿದ್ದರು. ಸಾಲದ್ದಕ್ಕೆ ಇದನ್ನ ತಮ್ಮ ತಂದೆ ತಾಯಂದರಿಗೆ ಹೇಳಿದ್ದರಿಂದ, ಈಗ ಅದಕ್ಕೆ ಸಂಬಂಧಿಸಿದ ಫೋನ್ ಕರೆಗಳ ಮಹಾಪೂರ ಉಂಟಾಗಿತ್ತು.

ಇದು ಸಾಲದ್ದೆಂಬಂತೆ ಒಂದು ಬಾರಿ ಪೋಲೀಸರನ್ನ ಕರೆದ ಮೇಲೆ, ತಮ್ಮ ಮೇಲೇ ತಾವು ತರಿಸಿಕೊಳ್ಳಬಹುದಾದ ಅನಾಹುತವನ್ನ ಸ್ಕೂಲಿನವರು ಯೋಚಿಸಿರಲಿಲ್ಲ. ಶಾರದಾ ಬಗ್ಗೆ ತಮ್ಮಲ್ಲಿ ಹೆಚ್ಚಿನ ದಾಖಲೆಗಳು ಇರಲಿಲ್ಲ. ಹಾಗೆ ನೋಡಿದರೆ ಆಕೆಗೆ ಒಂದು ಅಪಾಯಿಂಟ್‌ಮಂಟ್ ಆರ್ಡರನ್ನ ಕೂಡಾ ಅವರು ಕೊಟ್ಟಿರಲಿಲ್ಲ. (ಕೊಟ್ಟರೆ ಅದನ್ನ ಉಪಯೋಗಿಸಿ ಬೇರೆ ಸ್ಕೂಲುಗಳಲ್ಲಿ ನೌಕರಿ ಪಡೆದುಬಿಡುತ್ತಾರೆಂಬ ವಿಕೃತ ಆಲೋಚನೆ ಸ್ಕೂಲಿನವರಿಗಿದ್ದಂತಿತ್ತು.) ಸಂಬಳವನ್ನೂ ಕ್ಯಾಷಿನಲ್ಲೇ ಕೊಡುತ್ತಿದ್ದರು. ಹೆಡ್‌ಮೇಡಂಗೆ ಈ ಲಾವಾದೇವಿಗಳ ಗಹನ ವಿಚಾರ ನಿಖರವಾಗಿ ತಿಳಿದಿರಲಿಲ್ಲ. ಈ ಎಲ್ಲವೂ ಮ್ಯಾನೇಜ್‌ಮೆಂಟಿನವರ ಆದೇಶದ ಮೇರೆಗೆ ನಡೆಯುತ್ತಿತ್ತು. ರಂಗಾರೆಡ್ಡಿಗೆ ಅವರು ಕೊಡಲು ಸಾಧ್ಯವಾದ ದಾಖಲೆಯೆಂದರೆ, ಪ್ರತಿವರ್ಷ ಮಕ್ಕಳ ಜತೆಗೆ ತಗೆಯುತ್ತಿದ್ದ ಗ್ರೂಪ್ ಫೋಟೋ, ಮತ್ತು ಶಾಲೆಯ ವಾರ್ಷಿಕ, ಸ್ಪೋರ್ಟ್ಸ್‌ಡೇ, ಹೀಗೆ ಬೇರೆ ಸಂದರ್ಭಗಳಲ್ಲಿ ತೆಗೆದ ಕಲವು ಫೋಟೋಗಳು. ಮಿಕ್ಕಂತೆ ರಂಗಾರೆಡ್ಡಿಗೆ ದೊರತದ್ದು ಊಹಾಪೋಹದ ಕಥೆಗಳು ಮಾತ್ರ.

ಈ ಮಧ್ಯೆ ಹೆಡ್‌ಮೇಡಂಗೆ ತಮ್ಮ ಸ್ವಂತ ದ್ವಂದ್ವಗಳೂ ಇದ್ದುವು. ಶಾರದಾ ನಿಜಕ್ಕೂ ಎಲ್ಲಿಗೆ ಹೋಗಿರಬಹುದು? ಆಕೆ ಈಗ ಈ ಕ್ಷಣ ಪ್ರತ್ಯಕ್ಷವಾದರೆ ಅವಳನ್ನು ಶಾಲೆಗೆ ಮತ್ತೆ ಸೇರಿಸಕೊಳ್ಳಬೇಕೇ? ಆಕೆಗೆ ಏನು ತುರ್ತು ಬಂದಿರಬಹುದು? ಯಾವುದಾದರೂ ಬೇರೆ ಸ್ಕೂಲಿಗೆ ಹೋಗಿ ಸೇರಿರಬಹುದೇ? ಹಿಂದೆ ಒಂದು ಬಾರಿ ಹಾಗೆ ಆಗಿದ್ದದ್ದು ಉಂಟು. ತಾನು ಬೇರೆಡೆಯಲ್ಲಿ ಪ್ರಯತ್ನ ಮಾಡುತ್ತಿರುವುದು ಶಾಲೆಗೆ ಗೊತ್ತಾದರೆ ಶಾಲೆ ಅವಳಿಗೆ ತೊಂದರೆ ಕೊಡಬಹುದೆಂಬ ಭಯಕ್ಕೆ ಒಬ್ಬ ಟೀಚರು, ಬೇರೆ ಶಾಲೆಯಲ್ಲಿ ನೌಕರಿ ಪಡೆದದ್ದಲ್ಲದೇ, ಅಲ್ಲಿ ಒಂದುವಾರ ಕಾಲ ಕೆಲಸ ಮಾಡಿದ ಮೇಲಷ್ಟೇ ಸ್ಕೂಲಿಗೆ ಬಂದು ರಾಜೀನಾಮೆ ಕೊಟ್ಟು ಹೋಗಿದ್ದಳು. ಆದರೆ ಇಲ್ಲಿ ಶಾರದಾ ತನ್ನ ಮನೆಯಿಂದಲೂ ನಾಪತ್ತೆಯಾಗಿರುವಳಲ್ಲ! ಅಥವಾ ಶಾರದಾಳ ಹಳೆಯ ಗಂಡ ಪ್ರತ್ಯಕ್ಷನಾಗಿರಬಹುದೇ? ಈ ಸಾಧ್ಯತೆ ಹೊಳೆದ ಕೂಡಲೇ ಹೆಡ್‌ಮೇಡಂ ರಂಗಾರೆಡ್ಡಿಗೆ ಫೋನ್ ಹಚ್ಚಿ ಶಾರದಾ ಅಹಮದಾಬಾದಿನಿಂದ ಬಂದಿದ್ದಳು, ಅಲ್ಲಿಂದ ಏನಾದರೂ ಸುಳಿವು ಸಿಗಬಹುದು ಅಂತ ಹೇಳಿದಳು.

ರಂಗಾರೆಡ್ಡಿಗೆ ರೇಗಿತ್ತು. ಈಕೆಯನ್ನ ಕಂಡುಹಿಡಿಯಲೇ ಬೇಕೆಂಬ ಆತುರ ಯಾರಿಗೂ ಇದ್ದಂತಿಲ್ಲ. ಮೇಲಾಗಿ ಅಹಮದಾಬಾದಿನಷ್ಟು ದೂರದಿಂದ ಎನ್‌ಕ್ವಯರಿ ಮಾಡುವ ಬಿಟ್ಟಿ ಸಲಹೆ ಬೇರೆ. ತನ್ನ ಮರ್ಜಿಯಲ್ಲಿದ್ದಿದ್ದರೆ ಕೇಸನ್ನ ಇಂದೇ ಮುಚ್ಚಿಬಿಡುತ್ತಿದ್ದೆ ಎಂದು ಒಂದು ಕ್ಷಣದ ಮಟ್ಟಿಗೆ ಅಂದುಕೊಂಡನಾದರೂ ಅವನಲ್ಲಿದ್ದ ಸಹಜ ಪೋಲೀಸು ಕುತೂಹಲ ಈ ಕೇಸಿನ ಬಗ್ಗೆ ಹೆಚ್ಚು ಯೋಚಿಸಲು ಪ್ರಚೋದಿಸಿತು.

ರಂಗಾರೆಡ್ಡಿ ಛಲಬಿಡದ ತ್ರಿವಿಕ್ರಮನಂತೆ, ಕಡೆಗೂ ಹಳೆಯ ಕಾಗದಗಳನ್ನ ತೆಗೆಯಲು ಹೇಳಿ, ಹಾಗೂ ಹೀಗೂ ಸ್ಕೂಲಿನ ಕಡತಗಳಿಂದ ಶಾರದಾಳ ಎಪ್ಲಿಕೇಶನ್ ಫಾರಮ್ಮನ್ನ ಹುಡುಕಿಸಿ ತೆಗೆಸಿದ. ಅದರಲ್ಲಿ ಅದೃಷ್ಟವಶಾತ್ತು ಆಕೆ ಹಿಂದೆ ಮಾಡುತ್ತಿದ್ದ ಕೆಲಸದ ವಿವರಗಳು ಇದ್ದದ್ದರಿಂದ ಅಹಮದಾಬಾದಿನಲ್ಲಿ ಈ ಬಗ್ಗೆ ವಿಚಾರಣೆ ನಡೆಸಬಹುದಿತ್ತು. ಇದು ಒಳ್ಳೆಯ ಪಾಯಿಂಟೆನ್ನಿಸಿ, ರಂಗಾರೆಡ್ಡಿ ಅಹಮದಾಬದಿನ ಪೋಲೀಸು ಇಲಾಖೆಗೆ ಈ ಬಗ್ಗೆ ಮಾಹಿತಿ ಕಳಿಸಬೇಕೆಂದು, ಹಿನ್ನೆಲೆಯನ್ನೆಲ್ಲ ವಿವರಿಸಿ ಒಂದು ಪತ್ರ ಬರೆದು ಹಾಕಿದ. ಎಲ್ಲಿಯಾದರೂ ಈ ಕೇಸಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಇದಕ್ಕೊಂದು ಪರಿಷ್ಕಾರ ಹುಡುಕಬಹುದಿತ್ತು. ಬರಬರುತ್ತಾ ಗಹನವಾಗುತ್ತಿದ್ದ ಈ ಕೇಸು ಅವನ ಮನಸ್ಸಿಗೆ ಕಸರತ್ತನ್ನು ನೀಡಿತ್ತು. ಕಳೆದ ಕೆಲ ವರ್ಷಗಳಲ್ಲಿ ರಂಗಾರೆಡ್ಡಿಯ ಕೈಗೆ ಬರೇ ಸಣ್ಣ ಪುಟ್ಟ ಕೊಲೆ-ಸುಲಿಗೆಯ ಕೇಸುಗಳೇ ಬಂದು ರೋಸಿಹೋಗಿದ್ದವನಿಗೆ ಇದರಲ್ಲಿ ಎಲ್ಲಿಲ್ಲದ ರೊಮಾಂಟಿಕ್ ದೃಷ್ಟಿಕೋನಗಳು ಕಂಡು ಅವನಿಗೆ ರೋಮಾಂಚನವಾಯಿತು..

******

ಗುಪ್ತಾಜಿಯನ್ನ ತಮ್ಮ ಬಾಸ್ ಕೋಣೆಯೊಳಕ್ಕೆ ಬರಹೇಳಿದರು. ‘ನಿಮಗೊಂದು ಒಳ್ಳೆಯ ಸುದ್ದಿ, ಗುಪ್ತಾಜಿ, you have been kicked upstairs.. ನಿಮ್ಮನ್ನ ನಮ್ಮ ದೆಹಲಿ ವಿಭಾಗದ ಜನರಲ್ ಮ್ಯಾನೇಜರ್ ಆಗಿ ಬಡ್ತಿಯ ಮೇಲೆ ಕಳಿಸುತ್ತಿದ್ದೇವೆ..’ ಎಂದು ಹೇಳಿದರು.

ಗುಪ್ತಾಜಿಗೆ ಇದು ಒಳ್ಳೆಯ ಸುದ್ದಿಯೋ ಅಲ್ಲವೋ ತಿಳಿಯಲಿಲ್ಲ. ನೌಕರಿಯ ದೃಷ್ಟಿಯಿಂದ ಇದು ಒಳ್ಳೆಯದೇ ಆಗಿತ್ತು. ದೆಹಲಿ ತಮ್ಮ ಮುಖ್ಯ ಕಾರ್ಯಾಲಯಗಳಲ್ಲಿ ಒಂದಾದ್ದರಿಂದ ಅಲ್ಲಿಗೆ ಹೋಗುವುದು ಪ್ರತಿಷ್ಠೆಯ ವಿಷಯವೇ ಆದರೂ, ಗುಪ್ತಾಜಿ ಹೈದರಾಬಾದಿನಲ್ಲಿ ಚೆನ್ನಾಗಿ ಸೆಟಲ್ ಆಗಿಹೋಗಿದ್ದರು. ಬೇಗಂಪೇಟೆಯಲ್ಲಿ ಎರಡು ವರ್ಷಗಳ ಹಿಂದೆ ಕೊಂಡ ಫ್ಲಾಟಿನಲ್ಲಿ ಗುಪ್ತಾಜೀ ಸಂಸಾರ ಸುಖವಾಗಿತ್ತು. ದಿನನಿತ್ಯ ಸಂಜೆಗೆ ಕಂಟ್ರಿ ಕ್ಲಬ್ಬಿಗೆ ಹೋಗಿ ಸಮಯ ಕಳೆವ ಸುಖಜೀವಿ ಗುಪ್ತಾಜಿಗೆ ಇದನ್ನು ಕಳೆದುಕೊಳ್ಳುವ ಮನಸ್ಸಂತೂ ಇರಲಿಲ್ಲ. ಸಾಲದ್ದಕ್ಕೆ ಶ್ರೀಮತಿ ಗುಪ್ತಾ ಕೂಡಾ ಇಲ್ಲಿ ಒಳ್ಳೆಯ ಕೆಲಸದಲ್ಲಿದ್ದರು. ಈಗ ಈ ಸುಖವನ್ನೆಲ್ಲ ಬಿಟ್ಟು ಹೋಗುವುದು ಕಷ್ಟವೇ ಆಗುತ್ತಿತ್ತು. ಗುಪ್ತಾಜಿ ಈ ಎಲ್ಲ ವಿಚಾರಗಳನ್ನು ತಲೆಯಲ್ಲಿ ಮಥಿಸುತ್ತಲೇ ದೇಶಾವರಿ ನಗೆ ಬೀರಿ, ಬಾಸಿನ ಕೈ ಕುಲುಕಿ, ‘ಥಾಂಕ್ಯೂ’ ಅಂತ ಮೆಲ್ಲನೆ ಉಸುರಿದರು.

ಇದನ್ನ ಹೇಗಾದರೂ ಅರಗಿಸಿಕೊಂಡು ಖುಷಿಯಿಂದ ದೆಹಲಿಗೆ ಹೋಗಬೇಕಿತ್ತು. ಶ್ರೀಮತಿ ಗುಪ್ತಾರ ಕಂಪನಿ ಕೇವಲ ಹೈದರಾಬಾದಿಗೇ ಪರಿಮಿತವಾಗಿದ್ದರಿಂದ ಆಕೆಗೆ ಬೇರೆ ಕೆಲಸ ಹುಡುಕುವ ಅನಿವಾರ್ಯತೆಯೂ ಇತ್ತು. ಹೊಸ ಊರು, ಹೊಸ ಪರಿಸರ – ಯಾವುದು ಹೇಗೆ ಒಗ್ಗುತ್ತದೋ ತಿಳಿಯದೇ ಗುಪ್ತಾಜಿ ವಿಚಲಿತರಾದರು.

ಈ ಎಲ್ಲದರ ಮಧ್ಯೆ ಅವರಿಗೆ ಕಂಡ ಒಂದೇ ಆಶಾಬಿಂದುವೆಂದರೆ, ತಮ್ಮ ಮಗ ಅಕ್ಷಯ.. ಸ್ಕೂಲಿಗೆ ಆಬ್ಸೆಂಟಾಗ್ತೀನಿ ಅಂತ ಇರೋವನಿಗೆ ಧೈರ್ಯವಾಗಿ ‘ಆಗು‘ ಅಂತ ಹೇಳಿಬಿಡಬಹುದಿತ್ತು. ಇದರಿಂದಾಗಿ ಪೆಟಲ್ಸ್‌ಗೆ ಕೊಡಬೇಕಾದ ದೇಣಿಗೆಯೂ ಉಳಿತಾಯವಾಗುವುದನ್ನ ಅರಿತ ಗುಪ್ತಾಜಿ- ಈ ಕಾವ್ಯನ್ಯಾಯದ ಬಗ್ಗೆ ಖುಷಿಗೊಂಡರು. ‘ನೀವು ಹೀಗೆಲ್ಲಾ ನಮ್ಮ ಬಗ್ಗೆ ಸುಳ್ಳು ವಿಚಾರಗಳನ್ನು ಹಬ್ಬಿಸುತ್ತಿರುವುದರಿಂದ ಬೇಸತ್ತು ನಿಮ್ಮ ಸ್ಕೂಲಿನಿಂದ ನಮ್ಮ ಮಗನನ್ನು ತೆಗೆದು ಬೇರೆ ಸ್ಕೂಲಿಗೆ ಸೇರಿಸುತ್ತೇವೆ’ ಅಂತೆಲ್ಲಾ ನಾಟಕವನ್ನೂ ಆಡಬಹುದಿತ್ತು. ಈ ವಿಚಾರ ಮನಸ್ಸಿಗೆ ಬಂದಾಗ ಗುಪ್ತಾಜಿಗೆ ಈ ಬಾರಿ ತಾವೇ ಸ್ಕೂಲಿಗೆ ಹೋಗಿ, ಹೆಡ್‌ಮೇಡಂಗೆ ತಮ್ಮ ಮನಸ್ಸಿನ ಮಾತನ್ನು ಹೇಳಿ ಟಿ.ಸಿ. ಪಡೆದು ಬರಬೇಕೆಂಬ ಅದ್ಭುತ ವಿಚಾರವೂ ಹೊಳೆಯಿತು. ತಕ್ಷಣ ತಮ್ಮ ಸೆಲ್‌ಫೋನಿನಿಂದ ಹಂಡತಿಯ ನಂಬರ್ ಘುಮಾಯಿಸಿ ಅವಳಿಗೆ ವಿಚಾರ ತಿಳಿಸಿದರು.

ಶ್ರೀಮತಿ ಗುಪ್ತಾಗೆ ಇಲ್ಲಿನ ಕೆಲಸ ರೋಸಿಹೋಗಿತ್ತು. ಈ ಸುದ್ದಿ ಕೇಳಿದಾಕ್ಷಣ ಆಕೆಯೂ ಖುಷಿ ಪಟ್ಟು ದೆಹಲಿಯಲ್ಲಿ ಆರಾಮವಾಗಿ ಕೆಲಸವಿಲ್ಲದೇ ಕಿಟ್ಟಿ ಪಾರ್ಟಿ ಮಾಡಿಕೊಳ್ಳುತ್ತಾ ಹೇಗೆ ಮನೆಯಲ್ಲಿ ಸಮಯ ಕಳೆಯಬಹುದೆಂದು ಕನಸು ಕಾಣತೊಡಗಿದಳು.

******

ಮಧುಸೂಧನನಿಗೆ ಹೈದರಾಬಾದಿನಲ್ಲಿ ಸಮಯ ಹೇಗೆ ಕಳೆಯಿತೆಂಬುದೇ ತಿಳಿಯಲಿಲ್ಲ. ಇನ್ನೇನು, ಎರಡು ದಿನಗಳಲ್ಲಿ ತಾನು ಮಗಳೊಂದಿಗೆ ಮುಂಬಯಿಗೆ ವಾಪಸಾಗಬೇಕು. ತಾನು ಈ ೫ ದಿನಗಳ ಖುಷಿಯನ್ನು ವಿವರಿಸಲಾಗದೇ ಚಡಪಡಿಸಿದ. ಅಂದು ಶಾಲೆಗೆ ಹೋಗುವಷ್ಟು ಕಾಲವೂ ಆ ಹುಡುಗಿ (ಮಧುಸೂಧನ ಇದ್ದ ಮನಸ್ಥಿತಿಯಲ್ಲಿ ಆಕೆಯನ್ನು ಹೆಂಗಸು ಎಂದು ಕರೆಯುವುದು ತಪ್ಪಾದೀತು.) ತನ್ನ ಮಟ್ಟಿಗೆ ಮೌನವಾಗಿಯೇ ಇದ್ದಳು. ಆದರೆ ಮಗಳ ಜತೆಮಾತ್ರ ವಟಗುಟ್ಟುತ್ತಲೆ ಮುಂದುವರೆದಳು. ಅವನು ನಿರಂತರ ತನ್ನ ಕೈ ನೋಡಿಕೊಳ್ಳತ್ತಲೇ ಕೈಕೈ ಹಿಸುಕಿಕೊಳ್ಳುತ್ತಲೇ ಪ್ರಯಾಣವನ್ನು ಮುಂದುವರೆಸಿದ. ಶಾಲೆಯಲ್ಲಿ ತಂದೆ ಮಕ್ಕಳ ಸಂದರ್ಶನ ನಡೆಯಿತು. ಬರುವ ವೇಳೆಗಾಗಲೇ ಮಗಳಿಗೆ ಅಡ್ಮಿಶನ್ ಕೊಡುವುದಾಗಿಯೂ, ಹದಿನೈದು ದಿನಗಳೊಳಗಾಗಿ ವರ್ಷದ ಫೀಸನ್ನು ಕಟ್ಟಬೇಕೆಂದೂ ಪ್ರಿನ್ಸಿಪಾಲರು ಹೇಳಿದರು. ದಾರಿಯಲ್ಲಿ ವಾಪಸಾಗುವಾಗಲೂ ಅದೇ ಮೇಡಂ ಮತ್ತೆ ಕಾರಿನಲ್ಲಿ ತಮ್ಮ ಜೊತೆ ಸೇರಿದಳು. ಮತ್ತೆ ಮರುಪ್ರಯಾಣದಲ್ಲೂ ಅದೇ ಕಥೆ ಪುನರಾವೃತಗೊಂಡಾಗ ಮಧುಸೂಧನನಿಗೆ ಚಡಪಡಿಕೆಯುಂಟಾಯಿತು. ಈಕೆ ಬಹಳ ವಿಚಿತ್ರದ ಹೆಂಗಸೆನ್ನಿಸಿ ಅವಳ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡುಬಿಟ್ಟ. ಆದರೆ ಮಗುವಿನ ಜತೆಗೆ ಆಕೆ ಬೆಳೆಸಿಕೊಂಡ ಗೆಳೆತನ ಅವನ ಗಮನವನ್ನ ತಪ್ಪಿಸಲಿಲ್ಲ.

ಹೈದರಾಬಾದಿಗೆ ಬಂದಾಗ ಮಧುಸೂಧನ ಅವಳನ್ನ ಮನೆಯ ಬಳಿ ಬಿಟ್ಟು ತಾನು ಹೋಟೆಲಿಗೆ ಹೋಗುವುದಾಗಿ ಹೇಳಿದ. ಆಕೆ ಒಪ್ಪಲಿಲ್ಲ. ಬದಲಿಗೆ ಹೋಟೆಲಿನ ಬಳಿ ಇಳಿಸಿ ನಂತರ ತಾನು ಮನೆ ಸೇರುವುದಾಗಿ ಹಠ ಹಿಡಿದಳು. ಮಧುಸೂಧನನಿಗೆ ಅವಳ ಬಳಿ ವಾದ ಮಾಡುವಷ್ಟು ಚೈತನ್ಯವಿರಲಿಲ್ಲ. ಮಂಜಾನೆ ಅಷ್ಟುಹೊತ್ತಿಗೇ ಮುಂಬೈನಿಂದ ಹೊರಟಿದ್ದವನಿಗೆ ಸುಸ್ತಾಗಿತ್ತು. ಸರಿ ಎಂದು ಸುಮ್ಮನಾಗಿ ಗ್ರೀನ್‌ಪಾರ್ಕ್ ಹೋಟೆಲಿನಲ್ಲಿ ತಮ್ಮನ್ನು ಬಿಡಲು ಹೇಳಿ ಸುಮ್ಮನೆ ಕೂತುಬಿಟ್ಟ.

ಹೋಟೆಲಿನ ಮಹಾದ್ವಾರದ ಬಳಿ ಡ್ರೈವರ್ ಕಾರನ್ನು ನಿಲ್ಲಿಸಿದಾಗ, ಎಲ್ಲರೂ ಕಾರಿನಿಂದ ಇಳಿದರು. ಕಾರಿನ ಬಾಡಿಗೆ ಕೊಡಬೇಕು ಅಂತ ಪರ್ಸ್ ತೆಗೆಯುತ್ತಿರುವಾಗ ತನ್ನ ಮಗಳು, ‘ಆಂಟಿ, ಈವತ್ತು ನಮ್ಮ ಜೊತೇನೇ ಊಟಮಾಡಿ’ ಅಂತ ರಂಪ ಹಿಡಿದಳು. ಮಧುವಿಗೆ ಈ ಪರಿಸ್ಥಿತಿ ವಿಚಿತ್ರ ಅನ್ನಿಸಿತು. ಡ್ರೈವರ್ ಅವಳಿಗಾಗಿ ಕಾದಿರಲು ತಯಾರಿರಲಿಲ್ಲ. ಹಾಗೂ ಹೀಗೂ, ಎಲ್ಲರೂ ಒಟ್ಟಿಗೆ ಊಟ ಮಾಡುವುದೆಂದೂ, ಬೇರೆ ಟ್ಯಾಕ್ಸಿ ಅಥವಾ ಆಟೋ ಹಿಡಿದು ಅವಳು ನಂತರ ಮನೆಗೆ ಹೋಗುವುದೆಂದೂ ನಿರ್ಧಾರವಾಯಿತು. ಹಣ ಕೊಟ್ಟು ಡ್ರೈವರನನ್ನು ಮಧುಸೂಧನ ಕಳಿಸಿಬಿಟ್ಟ.

ಹೊರಗಿನ ಲೌಂಜಿನಲ್ಲಿ ಕುಳಿತಿರಲು ಆಕೆಗೆ ಹೇಳಿ ಮಧುಸೂಧನ್ ಹೋಟೆಲ್ ರೂಮಿಗೆ ಚೆಕಿನ್ ಮಾಡಿ, ಹದಿನೈದು ನಿಮಿಷಗಳಲ್ಲಿ ಮುಖ ತೊಳೆದು, ಬಟ್ಟೆ ಬದಲಾಯಿಸಿ ಅವಳೆದುರಿಗೆ ಹಾಜರಾದ. ಮೂವರೂ ಅಲ್ಲಿನ ರೆಸ್ಟುರಾಗೆ ಹೋಗಿ ಕುಳಿತರು. ಅಲ್ಲಿನ ವೇಟರ್ ಮಗುವಿಗಾಗಿಯೇ ಖಾಸ್ ಎತ್ತರದ ಕುರ್ಚಿ ತಂದು ಹಾಕಿ ಟೇಬಲ್ ಮೇಲಿನ ಕ್ಯಾಂಡಲ್ ಬೆಳಗಿಸಿದ. ಸುಮಾರು ಒಂದೂವರೆ ಘಂಟೆಕಾಲ ಅವಳೊಂದಿಗೆ ಕಳೆದ ನಂತರ ಮಧುವಿಗೆ ಸ್ವರ್ಗ ಕೈಗೆಟುಕುತ್ತಿದ್ದಂತೆ ಕಾಣುತ್ತಿತ್ತು.

ಅವಳ ಜೊತೆ ಮಾತಾನಾಡಿದಾಗ ಮಧುಸೂಧನನಿಗೆ ಅವಳು ಕಾರಿನಲ್ಲಿ ಯಾಕೆ ವಿಚಿತ್ರವಾಗಿ ವರ್ತಿಸಿದಳೆಂದು ಅರ್ಥವಾಯಿತು. ಸ್ಕೂಲಿನ ಪ್ರಿನ್ಸಿಪಾಲರಿಗೆ ತಿಳಿದ ಡ್ರೈವರನಾದ್ದರಿಂದ ತನ್ನ ಬಗ್ಗೆ ಖಂಡಿತವಾಗಿಯೂ ಅವರು ಪ್ರಶ್ನೆಗಳನ್ನು ಕೇಳುವುದು ಖಚಿತವಾದ್ದರಿಂದ, ಹುಷಾರಾಗಿರುವುದು ವಾಸಿ ಎನ್ನಿಸಿ ಸ್ಕೂಲಿನ ಬಗ್ಗೆ ಮಾತನಾಡದೇ ಮೌನ ವಹಿಸಿದ್ದಾಗಿ ಆಕೆ ಹೇಳಿದಳು.

ಮಾತು ಮುಂದುವರೆದಂತೆ ಮಗಳು ಆಕಳಿಸಿ ನಿದ್ದೆ ಬರುತ್ತಿದೆಯೆಂದು ಹೇಳಿದಳು. ಊಟ ಇನ್ನೂ ಮುಗಿದಿರಲಿಲ್ಲ, ಆದರೆ ಮಗಳಿಗೆ ನಿದ್ದೆ ತಡೆಯಲಾಗುತ್ತಿರಲಿಲ್ಲ. ಆಕೆ ಕುರ್ಚಿಯಲ್ಲೇ ತೂಕಡಿಸಿ ನಿದ್ದೆ ಮಾಡಿಬಿಟ್ಟಳು. ಅವಳನ್ನ ನಂತರ ಎತ್ತಿಕೊಂಡು ಹೋಗುತ್ತೇನೆಂದ ಮಧುಸೂಧನ ತನ್ನ ಮಾತನ್ನು ಮುಂದುವರೆಸಿದ. ತನ್ನ ಹಿನ್ನೆಲೆಯ ಬಗ್ಗೆ ಅವಳಿಗೆ ಹೇಳಬೇಕೆಂದು ಯಾಕೆ ಅನ್ನಿಸಿತೋ ತಿಳಿಯದು, ಆದರೆ ತನ್ನ ಕಳೆದ ಐದು ವರ್ಷಗಳ ಪರದಾಟವನ್ನು ಆಕೆಯ ಬಳಿ ತೋಡಿಕೊಂಡುಬಿಟ್ಟ. ತನ್ನ ಹೆಂಡತಿ ತೀರಿಕೊಂಡ ಪರಿಸ್ಥಿತಿಯನ್ನು ಅವಳಿಗೆ ಗ್ರಾಫಿಕ್ ಆಗಿ ವಿವರಿಸಿದ.

******

ನಾಲ್ಕು ವರ್ಷಗಳ ಕೆಳಗೆ ಮಧುಸೂಧನ ತನ್ನ ಸಂಸಾರದೊಂದಿಗೆ ರಜೆಯ ಸಲುವಾಗಿ ಕೇರಳಕ್ಕೆ ಹೊರಟಿದ್ದ. ಅಷ್ಟು ಹೊತ್ತಿಗೆ ಅವನಿಗಾಗಲೇ ಮದುವೆಯಾಗಿ ಆರು ವರ್ಷಗಳಾಗಿದ್ದವು. ಮದುವೆಯಾದಂದಿನಿಂದಲೂ ಪ್ರತಿವರ್ಷ ನವಂಬರ್ ಡಿಸೆಂಬರ್ ತಿಂಗಳಿನಲ್ಲಿ ಎರಡು ವಾರಗಳ ಕಾಲ ಧಂಧೆ ಬಿಟ್ಟು ದೇಶ ಸಂಚಾರ ಮಾಡುವುದು ದಂಪತಿಗಳ ನಿಯಮವಾಗಿತ್ತು. ಹೀಗೆ, ಮದವೆಯಾದಂದಿನಿಂದಲೂ ಇಬ್ಬರೂ ಕೂಡಿ ಮಸೂರಿ, ಶಿಮ್ಲಾ, ಕಲಕತ್ತಾ, ದೆಹಲಿ, ಅಗ್ರಾ, ಜೈಪುರ, ಊಟಿ- ಹೀಗೆಲ್ಲಾ ಅನೇಕ ಊರುಗಳನ್ನು ಸುತ್ತಿ ಬಂದಿದ್ದರು. ಈ ಬಾರಿ ಕೇರಳ ಲಕ್ಷದ್ವೀಪ ನೋಡುವ ಸರದಿಯಾಗಿತ್ತು. ಮುಂದಿನ ವರ್ಷಕ್ಕೆ ಅಂಡಮಾನ್ ಅಂತಲೂ ಪ್ಲಾನ್ ಹಾಕಿಕೊಂಡಿದ್ದರು.

ಮೊದಲು ಗೋವಾಕ್ಕೆ ಹೋಗಿ, ಕೊಂಕಣ್ ರೈಲ್ವೆಯ ಮಾರ್ಗವಾಗಿ ಕೇರಳ ಸುತ್ತಿ ಬರುವುದು ಈ ಬಾರಿಯ ಯೋಜನೆಯಾಗಿತ್ತು. ಅದಕ್ಕೆ ಹಿಂದನ ವರ್ಷ ಮಗು ತುಂಬಾ ಪುಟ್ಟದಾಗಿತ್ತಾದ್ದರಿಂದ ಈ ಪ್ರಯಾಣವನ್ನ ಅವರುಗಳು ಬೆಳೆಸಿರಲಿಲ್ಲ. ಆದರೆ ಈ ಬಾರಿ ಮೊದಲ ಬಾರಿಗೆ ಪುಟ್ಟ ಮಗುವಿನ ಜೊತೆಗೆ ಇಷ್ಟು ದೊಡ್ಡ ಪ್ರಯಾಣ ಮಾಡುತ್ತಿದ್ದರು. ಗೋವಾ ಸುತ್ತಿ ಕೇರಳಕ್ಕೆ ರೈಲು ಹತ್ತಿದರು. ದಾರಿಯ ಸೌಂದರ್ಯ ಆಸ್ವಾದಿಸುತ್ತ ಸಮಯ ಕಳೆದದ್ದೇ ತಿಳಿಯಲಿಲ್ಲ. ಆದರೆ ಕತ್ತಲಾಗಿ ಎಲ್ಲರೂ ಮಲಗಿರುವಾಗಿನ ಗಾಢಾಂಧಕಾರದಲ್ಲಿ ರೈಲು ಒಂದು ದೊಡ್ಡ ಸೇತುವೆಯ ಮೇಲೆ ಹಳಿತಪ್ಪಿ ಕೆಳಕ್ಕೆ ವಾಲಿಬಿಟ್ಟಿತು.

`For record’s sake, ಕೊಂಕಣ್ ರೈಲ್ವೆಯ ಮೇಲೆ ಇದೇ ಮೊದಲ ಅಪಘಾತ! ಇನ್ನೂ ಹೆಚ್ಚು ವಿವರ ಬೇಕೆಂದರೆ ನಮ್ಮ ಬೋಗಿಗೆ ಎಲ್ಲಕ್ಕಿಂತ ಹೆಚ್ಚಾದ ಧಕ್ಕೆ ಉಂಟಾಯಿತು – ಆ ಬೋಗಿಯ ಪ್ರಯಾಣಿಕರಲ್ಲಿ ಉಳಿದದ್ದು ನಾನು ಮತ್ತು ನನ್ನ ಮಗಳು ಮಾತ್ರ. ಬಹಳಷ್ಟು ದಿನ ಈ ಅಪಘಾತದ ಚಿತ್ರಗಳು ನನ್ನ ನಿದ್ರೆಯನ್ನ ಕೆಡಿಸಿದೆ. ‘

‘ಈ ಅಪಘಾತದಲ್ಲಿ ನನ್ನ ಕಾಲು ಮುರಿಯಿತು. ಅದೃಷ್ಟವಶಾತ್ ಮಗಳಿಗೆ ಏನೂ ಆಗಲಿಲ್ಲ, ಹಾಗೂ ಆ ಗಲಭೆಯ ಮಧ್ಯದಲ್ಲೂ ಅವಳು ನನ್ನ ಬಳಿಯೇ ಇದ್ದಳಂತೆ. ನನಗೆ ಮಿಕ್ಕ ವಿವರಗಳು ಹೆಚ್ಚು ನೆನಪಿಲ್ಲ. ಬಹುಶಃ ಒಂದು ವಾರ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ನನ್ನನ್ನ ಹೊತ್ತೊಯ್ದರು. It was a major chaos. ನಾನು ನನ್ನ ಹೆಂಡತಿಗಾಗಿ ಕೂಗಾಡುತ್ತಿದ್ದೆ- ಆದರೆ ಒಡಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕಡೆಗೂ ಅವರುಗಳು ನನ್ನ ಹೆಂಡತಿ ತೀರಕೊಂಡಳೆಂದು ಹೇಳಿದರು. ನಾನಿದ್ದ ಪರಿಸ್ಥಿತಿಯಲ್ಲಿ ಅವಳ ದೇಹ ನೋಡಿ ಗುರುತಿಸಲೂ ನನಗೆ ಅವಕಾಶ ಸಿಗಲಿಲ್ಲ. ಜೊತೆಗೆ, ಎಷ್ಟೋ ದೇಹಗಳು ಗುರ್ತೇ ಸಿಗದಂತೆ ನಾಶವಾಗಿಬಿಟ್ಟಿದ್ದುವು. ಹೀಗಾಗಿ ಬಹುಶಃ ನಾನು ದೇಹವನ್ನ ಹುಡುಕುವ, ನೋಡುವ ಪ್ರಯತ್ನ ಮಾಡದಿದ್ದದ್ದೇ ಒಳ್ಳೆಯದಾಯಿತೇನೋ. ನನಗೆ ಮತ್ತೆ ನನ್ನ ವ್ಯಾಪಾರಕ್ಕೆ ಹೋಗುವ ಮನಸ್ಸಾಗಲಿಲ್ಲ. ಒಂದೇ ಬಾರಿ ಊರಿಗೆ ಹೋಗಿ ನಾಲ್ಕುದಿನ ಇದ್ದು ಎಲ್ಲವನ್ನೂ ಮಾರಿಹಾಕಿ ಮುಂಬಯಿಗೆ ಬಂದುಬಿಟ್ಟೆ. I like the annonimity that one gets there. ಹಾಗೂ ಹೀಗೂ ಜೀವನದ ಹಲ ಕೊಂಡಿಗಳನ್ನು ಕೂಡಿಸಿ, ಅಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಗಳಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಂಡು ಜೀವನ ಮಾಡುತ್ತಿದ್ದೇನೆ.’

ಅವನ ಬಾಕಿ ಸಂಸಾರದ ಬಗ್ಗೆ ಆಕೆ ಕೇಳಿದಳು… ಅದಕ್ಕೆ ಮಧುಸೂಧನ ವಿವರವಾದ ಉತ್ತರವನ್ನೇನೂ ನೀಡಲಿಲ್ಲ. ಇಲ್ಲ ನಮ್ಮದು ಪ್ರೇಮ ವಿವಾಹ.. ಮನೆಯವರಿಗೆ ಇಷ್ಟವಿರಲಿಲ್ಲ. ಮನಸ್ತಾಪವಾಯಿತು. ಅವರೊಂದಿಗೆ ಸಂಪರ್ಕ ಕಡಿದು ಅನೇಕ ವರ್ಷಗಳೇ ಆಗಿವೆ. ಎಂದಷ್ಟೇ ಹೇಳಿ ಅವನು ಸುಮ್ಮನಾಗಿ ಬಿಟ್ಟ.

******

ಅಹಮದಾಬಾದಿನಿಂದ ಬಂದ ರಿಪೋರ್ಟು ಪ್ರೋತ್ಸಾಹದಾಯಕವಾಗೇನೂ ಇರಲಿಲ್ಲ. ಶಾರದಾ ತನ್ನ ಹಿಂದಿನ ಕೆಲಸವನ್ನ ಹೈದರಾಬಾದಿಗೆ ಬರುವ ಮೂರು ವರ್ಷಗಳ ಹಿಂದಯೇ ಬಿಟ್ಟಿದ್ದಳು. ಆ ನಂತರ ಅವಳು ಎಲ್ಲಿ ಹೋದಳೆಂಬ ಬಗ್ಗೆ ಸುದ್ದಿಯಿರಲಿಲ್ಲ. ಬಹುಶಃ ಅಹಮದಾಬಾದಿನ ಪೋಲೀಸು ಇಲಾಖೆ ಈ ಕೇಸಿನ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡಿರಲಿಲ್ಲವೆಂದು ರಂಗಾರೆಡ್ಡಿ ಊಹಿಸಿದ. ತಾನು ಅವರ ಸ್ಥಾನದಲ್ಲಿದ್ದಿದ್ದರೆ, ಆ ಸಂಸ್ಥೆಯಿಂದ ಆಕೆಯ ಮನೆ ವಿಳಾಸ ಹುಡುಕಿ, ಹೇಗಾದರೂ ಮಾಡಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ.

ಈ ಎಲ್ಲ ಆಗುವ ವೇಳೆಗೆ ಶಾರದಾ ನಾಪತ್ತೆಯಾಗಿ ಒಂದು ತಿಂಗಳಾಗುತ್ತಾ ಬಂದಿತ್ತು. ರಂಗಾರೆಡ್ಡಿಗೆ ಈ ಕೇಸು ಗಹನವಾಗುತ್ತಾ ಹೋಯಿತು. ಅದು ಹೇಗೆ ಒಂದು ವ್ಯಕ್ತಿಯ ಬಗ್ಗೆ ಇಷ್ಟು ಕಡಿಮೆ ಮಾಹಿತಿಯಿರಬಹುದು ಎನ್ನುವ ವಿಚಾರ ಅವನಿಗೆ ಅರ್ಥವೇ ಆಗಿರಲಿಲ್ಲ. ಬಹುಶಃ ಶಾರದಾಳಿಗೆ ಸ್ಕೂಲು ಬಿಟ್ಟರೆ ಬೇರಾವ ಸಂಪರ್ಕವೂ ಇದ್ದಂತೆ ಕಂಡಿಲ್ಲದ್ದರಿಂದ ಅವಳೂ ಗೈರುಹಾಜರಿ ರಿಪೋರ್ಟ್ ಆಗಲು ತಡವಾಗಿದ್ದಿರಬಹುದು. ಆದರೆ ಸ್ಕೂಲಿನವರಿಗಾದರೂ ಬುದ್ಧಿ ಬೇಡವೇ? ಅಂತ ಅವರಿರೂ ಮನದಲ್ಲೇ ಶಾಪ ಹಾಕಿದ.

ರಂಗಾರೆಡ್ಡಿಗೆ ಈ ಬಗ್ಗೆ ಅನುಮಾನ ಹೆಚ್ಚಾಗುತ್ತಾ ಹೋದಂತೆ ಅವನು ಕಳೆದ ಒಂದು ತಿಂಗಳಿನಲ್ಲಾಗಿರಬಹುದಾದ ಕೊಲೆ, ಸಾವು, ಅಪಹರಣದ ಕೇಸುಗಳಲ್ಲಿ ಯಾವುದಾದರೂ ೩೦-೩೫ ವರ್ಷದ ಮಹಿಳೆ ಸಿಲುಕಿದ್ದಳೇ ಎಂಬ ಮಾಹಿತಿಯನ್ನ ಸಂಗ್ರಹಿಸಲು ತನ್ನ ಠಾಣೆಯವರಿಗೆ ಹೇಳಿದ.

******

ಈ ನಾಲ್ಕು ದಿನಗಳಲ್ಲಿ ಮಧುಸೂಧನ ಮೇಡಂ ಜೊತೆ ಅನೇಕ ಬಾರಿ ಭೇಟಿ ಮಾಡಿದ್ದ. ಅವನಿಗೆ ಇದೊಂದು ವಿಚಿತ್ರ ಅನುಭವವಾಗಿತ್ತು. ತನ್ನ ಮೊದಲ ಪ್ರೇಮ ಅಂಕುರಗೊಂಡ ರೀತಿಗೂ ಈ ಹುಡುಗಿಯ ಜೊತೆ ತನ್ನ ಸಂಬಂಧ ಬೆಳೆಯುತ್ತಿದ್ದ ರೀತಿಗೂ ಬಹಳವೇ ಅಂತರವಿತ್ತು. ಜೊತೆಗೆ ಇಲ್ಲಿ ತನ್ನ ಮಗಳಿದ್ದದ್ದರಿಂದ ಯಾವ ಮಾತುಕತೆಯೂ ಸರಾಗಿವಾಗಿ ನಡೆಯುತ್ತಿರಲಿಲ್ಲ.

ಆದರೆ ಮೊದಲ ಸಂಜೆಯ ಗ್ರೀನ್ ಪಾರ್ಕ್ ಹೋಟೇಲಿನ ಊಟದ ನಂತರ, ಆಕೆಯ ಭೇಟಿ ಮತ್ತೆ ಆಗಲಾರದು ಅಂದುಕೊಂಡಿದ್ದ. ಏನಾದರಾಗಲಿ ಎಂದು ‘ನಾಳೆ ಸಾಲಾರ್‌ಜಂಗ್ ಮ್ಯೂಸಿಯಂಗೆ ಇವಳನ್ನ ಕರೆದುಕೊಂಡು ಹೋಗ್ತೀನಿ, ನಿಮಗೆ ಸಮಯವಿದ್ದರೆ ಯಾಕೆ ನಮ್ಮ ಜೊತೆ ಬರಬಾರದು?‘ ಅಂದ. ಅವಳು ಹೆಚ್ಚು ತೆಲೆಕೆಡಿಸಿಕೊಳ್ಳದೇ ಒಪ್ಪಿದ್ದು ಅವನಿಗೆ ಆಶ್ಚರ್ಯ ನೀಡಿತ್ತು. ‘ಮ್ಯೂಸಿಯಂಗೆ ನನ್ನ ವಿದ್ಯಾರ್ಥಿಗಳನ್ನ ಅನೇಕ ಬಾರಿ ಕರಕೊಂಡು ಬಂದಿದ್ದೀನಿ, ಹೀಗಾಗಿ ನಾನು ಬಂದರೆ ಚೆನ್ನಾಗಿರುತ್ತೆ, ಬರ್ತೀನಿ. ನನಗೂ ಆ ಸ್ಕೂಲಿನಿಂದ ಸುದ್ದಿ ಬರುವವರೆಗೂ ಬೇರೆ ಕೆಲಸವಿಲ್ಲ. So…” ಎಂದು ಅವಳು ಹೇಳಿದಾಗ ಮಧುಸೂಧನನಿಗೆ ವಿಚಿತ್ರ ಅನುಭೂತಿಯಾಯಿತು. ಅವನು ತನ್ನ ಕೈರೇಖೆ ನೋಡಿಕೊಂಡ. ಬೆಳಿಗ್ಗೆ ಈ ಸುದ್ದಿಯನ್ನ ಕೇಳಿದ ಮಗಳಿಗಂತೂ ಎಲ್ಲಿಲ್ಲದ ಖುಷಿಯಾಯಿತು.

ಹೀಗೆ ಪ್ರಾರಂಭವಾದ ಎರಡನೇ ದಿನದ ಕಾರ್ಯಕ್ರಮ, ಮತ್ತೆ ರಾತ್ರೆ ಗ್ರೀನ್‌ಪಾರ್ಕ್‌ನಲ್ಲಿ ಕ್ಯಾಂಡಲ್‌ಲೈಟ್ ಊಟದ ಜೊತೆ ಸಮಾಪ್ತವಾಯಿತು. ಮರುದಿನ ಮತ್ತೆ ಮಧುವೇ ಅವಳನ್ನು ಆಹ್ವಾನಿಸಿದ. ಇಬ್ಬರೂ ಸೇರಿ ಇಡೀ ಹೈದರಾಬಾದನ್ನು ಮಗಳಿಗೆ ತೋರಿಸುವ ನೆವದಲ್ಲಿ ಸುತ್ತಾಡಿದರು.

ನಾಲ್ಕನೇ ದಿನದ ವೇಳೆಗೆ ಅವಳಿಗೆ ಸ್ಕೂಲಿನಿಂದ ಫೋನ್ ಬಂತು. ‘ನಿಮಗೆ ನಮ್ಮ ಶಾಲೆಯಲ್ಲಿ ಕೆಲಸ ಕೊಡಲು ನಮಗೆ ಬಹಳ ಖುಷಿಯಾಗುತ್ತಿದೆ. ಆದರೆ ನಮ್ಮದು ರೆಸಿಡೆನ್ಷಿಯಲ್ ಶಾಲೆಯಾದ್ದರಿಂದ, ಹಾಗೂ ಅನೇಕ ಶ್ರೀಮಂತ ಜನರ ಮಕ್ಕಳು ಬರುವುದರಿಂದ ನೀವು ನಿಮ್ಮ ಮನೆಯಿರುವ ಇಲಾಖೆಯ ಪೋಲೀಸು ಠಾಣೆಯಿಂದ ಒಂದು ಸರ್ಟಿಫಿಕೇಟ್ ತರುವುದು ಅವಶ್ಯಕ. ಇದು ನಮ್ಮ ನಿಯಮ.. ದಯವಿಟ್ಟು ತಪ್ಪು ಅರ್ಥ ಮಾಡಿಕೊಳ್ಳಬೇಡಿ. ಠಾಣೆಯವರು ನಿಮ್ಮ ಜೊತೆ ಸಹಕರಿಸದಿದ್ದರೆ ನನಗೆ ತಿಳಿಸಿ, ನಾನು ಐ.ಜಿ. ಯ ಜೊತೆ ಮಾತಾಡುತ್ತೇನೆ. ಹಿಂದೆ ನಮ್ಮ ಶಾಲೆಗೆ ಹಳೆಯ ಶಾಲೆಯಿಂದ ರಿಸೈನ್ ಮಾಡದೇ ಕ್ಲಿಯರೆನ್ಸ್ ಪಡೆಯದೇ ಜನ ಬಂದಿರುವುದುಂಟು. ನಮಗೆ ಆ ನಂತರ ಸಾಕಷ್ಟು ತೊಂದರೆಯಾಯಿತು. ನೀವು ಆದಷ್ಟು ಬೇಗ ನಿಮ್ಮ ಠಾಣೆಯಿಂದ ಈ ಸರ್ಟಿಫಿಕೇಟ್ ತರಿಸಿಕೊಡಿ. ಯಾವುದಕ್ಕೂ ನನಗೆ ಸಂಜೆಗೆ ಫೋನ್ ಮಾಡಿ.’ ಎಂದು ಪ್ರಿನ್ಸಿಪಾಲರು ಹೇಳಿದರಂತೆ.

‘ಹಾಗಾದರೆ ನೀವು ಅಲ್ಲಿಗೆ ಸೇರುತ್ತೀರಾ ಅಂತ ಆಯಿತು. ಇದರಿಂದ ನನ್ನ ಮನಸ್ಸಿಗೂ ನೆಮ್ಮದಿಯಾಯಿತು ಬಿಡಿ. ನನ್ನ ಮಗಳು ನಿಮ್ಮ ನಿಗರಾನಿಯಲ್ಲಿರುತ್ತಾಳೆ. ಬನ್ನಿ, ನೀವು ನನಗೆ ಇಷ್ಟೆಲ್ಲಾ ಹೈದರಾಬಾದು ತೋರಿಸಿದ್ದೀರ, ನಾನೂ ನಿಮ್ಮ ಜೊತೆಗೆ ಠಾಣೆಗೆ ಬರುತ್ತೇನೆ. ಆ ಸರ್ಟಿಫಿಕೇಟ್ ಏನೋ ಇಂದೇ ತಂದುಬಿಡುವಾ.. ಎಷ್ಟಾದರೂ ನನ್ನ ಆಸಕ್ತಿಯೂ ನೀವು ಆ ಸ್ಕೂಲು ಸೇರುವುದರಲ್ಲೇ ಇದೆ.’

ಮಧುವಿಗೆ ಈ ಪರಿಚಯವನ್ನು ಮುಂದುವರೆಸುವುದಕ್ಕೆ, ಬೆಳೆಸುವುದಕ್ಕೆ ಅವಕಾಶ ಸಿಕ್ಕದ್ದು ಮನಸ್ಸಿಗೆ ಉಲ್ಲಾಸ ತರಿಸಿತ್ತು. ಈ ನಾಲ್ಕು ದಿನಗಳಲ್ಲಿ ತನ್ನ ಬಗ್ಗೆ ತಾನು ಎಲ್ಲ ಹೇಳಿದ್ದಲ್ಲದೇ ಅವಳ ಬಗ್ಗೆಯೂ ಸಾಕಷ್ಟು ವಿವರಗಳನ್ನ ಮಧು ಒಟ್ಟುಗೂಡಿಸಿದ್ದ. ಈ ಪರಿಚಯ ಎತ್ತ ಸಾಗಬಹುದೋ ಯೋಚಿಸುತ್ತಾ ಮಧುಸೂಧನ ಮತ್ತೆ ತನ್ನ ಕೈ ನೋಡಿಕೊಂಡ. ಠಾಣೆಗೆ ಹೋಗುವಾಗ ಮಗಳನ್ನು ಒಯ್ಯುವುದು ಒಳ್ಳೆಯದಲ್ಲ ಅಂತ ಮಧುವಿನ ಅಭಿಪ್ರಾಯವಾಗಿತ್ತು. ಹೀಗಾಗಿ ಮಗಳನ್ನು ಆಕೆಯ ಗೆಳತಿಯ ಮನೆಯಲ್ಲಿ ಬಿಟ್ಟು ಇಬ್ಬರೂ ಆಟೋ ಹತ್ತಿದರು.

ದಾರಿಯಲ್ಲಿ ಆಕೆ ಹಿಂಜರಿದು ಹಿಂಜರಿದು “If you don’t mind, ನಾನು ನಿಮ್ಮನ್ನ ಒಂದು ಪ್ರಶ್ನೆ ಕೇಳಬಹುದೇ?” ಅಂದಳು.

ಮಧುಸೂಧನನಿಗೆ ಮಹತ್ವದ ಪ್ರಶ್ನೆಯೊಂದು ಈಗ ತನ್ನ ದಿಕ್ಕಿನಲ್ಲಿ ಬರಬಹುದೆನ್ನಿಸಿ ಮೈ ಜುಂ ಎಂದತು. ಈ ನಾಲ್ಕು ದಿನಗಳಲ್ಲಿ ಇದೇ ಮೊದಲ ಬಾರಿಗೆ ಮಗಳಿಲ್ಲದೇ, ಅವರಿಬ್ಬರೇ ಒಂಟಿಯಾಗಿದ್ದರು. ‘ಖಂಡಿತವಾಗಿ ಕೇಳಿ, ಇಷ್ಟು ದಿನಗಳಾದ ಮೇಲೂ ನೀವು ಪ್ರಶ್ನೆ ಕೇಳಬಹುದಾ ಅನ್ನೋ ಪ್ರಶ್ನೆಯನ್ನ ಕೇಳುತ್ತಿದ್ದೀರೆಂದರೆ ನಮ್ಮ ಈ ನಾಲ್ಕು ದಿನದ ಒಡನಾಟಕ್ಕೆ ಅವಮಾನ ಮಾಡಿದಂತೆ. ಪ್ಲೀಸ್, ಏನು ಕೇಳಬೇಕಂತ್ತಿದ್ದೀರೋ ಕೇಳಿ..’

‘ಏನಿಲ್ಲ.. ಮೊದಲ ದಿನದಿಂದಲೂ ನೋಡುತ್ತಿದ್ದೇನೆ. ನಾನು ನಿಮ್ಮನ್ನು ಮಾತನಾಡಿಸಲು ಪ್ರಾರಂಭಿಸಿದಾಗಲೆಲ್ಲ ನೀವು ನಿಮ್ಮ ಕೈ ನೋಡಿಕೊಳ್ಳುತ್ತೀರಿ, ಮತ್ತು ಕೈಯನ್ನ ಒಮ್ಮೆ ಒತ್ತಿಕೊಳ್ಳುತ್ತೀರಿ. ಇದರ ಮಹತ್ವ ಏನೂ ಅಂತ… just ಕುತೂಹಲ ಅಷ್ಟೇ.. ‘

‘ಓಹ್ ಅದಾ… ‘ ಮಧೂಸೂಧನ ನಾಚಿದ. ಅವನ ಮುಖ ಕೆಂಪಾಯಿತು, ಹಣೆಯ ಮೇಲೆ ಬೆವರಿನ ಹನಿಗಳು ಬಂದುವು, ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೇ ಅವನು ತಬ್ಬಿಬ್ಬಾದ. ಕಡೆಗೂ ಧೈರ್ಯ ತಂದುಕೊಂಡು ಕೇಳಿದ: ‘ನಿಮಗೆ ನಿಜ ಹೇಳಬೇಕೋ ಸುಳ್ಳು ಹೇಳಬೇಕೋ ಹೇಳಿ.’

‘ಇದು ಒಳ್ಳೆಯ ಪ್ರಶ್ನೆಯಾಯಿತು. Of course, ನಿಜವನ್ನೇ ಹೇಳಿ.. ಇದರಲ್ಲಿ ಸುಳ್ಳು ಹೇಳುವಂತಹ ವಿಚಾರ ಏನಿದ್ದೀತು?‘

‘ನೀವು ಸಿಟ್ಟಾಗಬಾರದು ಮತ್ತೆ..‘

‘ಇದರಲ್ಲಿ ಸಿಟ್ಟಾಗುವ ವಿಷಯವೇನಿದೆ? ಅಷ್ಟೂ ಮೆಚ್ಯೂರಿಟಿಯಿಲ್ಲದೇ ಯಾರಾದರೂ ವರ್ತಿಸುತ್ತಾರಾ, ಹೇಳಿ?‘

ಇಷ್ಟು ಆಶ್ವಾಸನೆ ಸಿಕ್ಕ ಕೂಡಲೇ ಮಧುಸೂಧನನಿಗೆ ಧೈರ್ಯ ಬಂತು. ದಯಾಕರ ಮೆನನ್ ಅವನಿಗೆ ಹೇಳಿದ್ದ ಭವಿಷ್ಯವಾಣಿಯ ಬಗ್ಗೆ ನಾಚುತ್ತಲೇ ಹೇಳಿದ. ಅದನ್ನು ಕೇಳಿದಾಗ ಅವಳ ಮುಖ ಕೆಂಪಾಯಿತು.

‘ಎಲ್ಲಿ, ಇದು ಯಾವ ರೇಖೆಯೋ ತೋರಿಸಿ…‘ ಎನ್ನುತ್ತಾ ಅವನ ಪಾಣಿಗ್ರಹಣ ಮಾಡಿ, ಅದನ್ನ ಒಮ್ಮೆ ಒತ್ತಿದಳು. ಈ ಚರ್ಯೆ ಸಾವಿರ ಮಾತುಗಳಿಗಿಂತ ಹೆಚ್ಚಾಗಿತ್ತು. ಈ ಸುಖ ಕ್ಷಣಮಾತ್ರದ್ದಾಗಿತ್ತು. ಯಾಕೆಂದರೆ, ಇಬ್ಬರೂ ಬೇರೆ ಮಾತಾಡುವಷ್ಟರಲ್ಲಿ ಪೋಲೀಸು ಠಾಣೆಯನ್ನ ಆಟೋರಿಕ್ಷಾ ತಲುಪಿಬಿಟ್ಟಿತ್ತು.

******

ಠಾಣೆಯಲ್ಲಿ ಅವರು ನೇರ ಠಾಣೆದಾರನ ಕೋಣೆಗೆ ಹೋದರು. ಅಲ್ಲಿ ರಂಗಾರೆಡ್ಡಿ ಠೀವಿಯಿಂದ ಕೂತಿದ್ದ. ಇಬ್ಬರೂ ಬಂದದ್ದನ್ನ ನೋಡಿ ಅವರನ್ನ ಬರಮಾಡಿಕೊಂಡು ಎದುರಿನ ಕುರ್ಚಿಗಳಲ್ಲಿ ಕೂಡಿಸಿದ. ಆಕೆ ರಂಗಾರೆಡ್ಡಿಗೆ ತನ್ನ ಹೊಸ ಕೆಲಸದ ಬಗ್ಗೆ, ಸ್ಕೂಲಿನ ಬಗ್ಗೆ, ಹಾಗೂ ಬೇಕಾಗಿರುವ ಸರ್ಟಿಫಿಕೇಟ್ ಬಗ್ಗೆ ಹೇಳಿದಳು. ರಂಗಾರೆಡ್ಡಿ ತಲೆಯಾಡಿಸಿದ. ‘ಹೌದು, ಆ ಸ್ಕೂಲಿನ ಬಗ್ಗೆ ಕೇಳಿದ್ದೇನೆ, ಆಗಬಹುದು ಸರ್ಟಿಫಿಕೇಟ್ ಕೊಡುತ್ತೇನೆ, ನಿಮ್ಮ ವಿಳಾಸ ಇತ್ಯಾದಿ ಈ ಕಾಗದದ ಮೇಲೆ ಬರೆದು ಕೊಡಿ, ಎರಡು ದಿನಗಳಲ್ಲಿ ಎನ್‌ಕ್ವಯರಿ ಮಾಡಿ ಬರಕೊಡುತ್ತೇನೆ. ಅಂದಹಾಗೆ ಇವರು ಯಾರು?’ ಎಂದು ಕೇಳಿದ.

ಠಾಣೆಗೆ ಬರುವಾಗ ತಮಗೆ ಇಂಥ ಪ್ರಶ್ನೆಯೊಂದು ಎದುರಾಗಬಹುದೆಂದು ಇಬ್ಬರೂ ಯೋಚಿಸಿರಲಿಲ್ಲ. ಗೊಣಗುಟ್ಟುತ್ತಾ ಇಬ್ಬರೂ ಭೇಟಿಯಾದ ಪರಿಸ್ಥಿತಿಯನ್ನ ವಿವರಿಸಿದರು…. ರಂಗಾರೆಡ್ಡಿಗೆ ಇವರಿಬ್ಬರನ್ನೂ ನೋಡಿ ಅನುಮಾನ ಬಂತು.. ಮೇಜಿನ ಅಡಿಭಾಗದಲ್ಲಿದ್ದ ಬೆಲ್ ಒತ್ತಿ ಪೇದೆಯನ್ನು ಕರೆದ. ಅವರ ಮುಖವನ್ನ ನೋಡುತ್ತಲೇ, ಏನೂ ಆಗಿಲ್ಲವಂಬಂತೆ, ‘ಎರಡು ಕಾಫಿ ತೆಗೊಂಡು ಬಾ.. ಹಾಗೇ ಶಾರದಾ ಮೇಡಂ ಫೈಲನ್ನ ಕಳಿಸು… ‘ ಅಂದ. ಇಷ್ಟು ಹೇಳಿ ಪ್ರತಿಕ್ರಿಯೆಗಾಗಿ ಇಬ್ಬರ ಮುಖವನ್ನೂ ನೋಡಿದ. ಯಾವ ಪ್ರತಿಕ್ರಿಯೆಯೂ ಕಾಣಿಸದಾಗ, ಸ್ವಲ್ಪ ನಿರಾಳ ನಿಟ್ಟುಸಿರಿಟ್ಟ..

‘ನೋಡಿ, ನಮ್ಮ ಠಾಣೆಗೆ ಈ ಮಧ್ಯೆ ಯಾಕೋ ಸ್ಕೂಲ್ ಟೀಚರುಗಳ ಕೇಸುಗಳೇ ಬರ್ತಾ ಇರೋಹಾಗಿದೆ.. ಮೂರು ವಾರಗಳ ಕೆಳಗೆ ಪೆಟಲ್ಸ್ ಸ್ಕೂಲಿನಿಂದ ಒಬ್ಬರು ಮೇಡಂ ನಾಪತ್ತೆಯಾಗಿದ್ದಾರೆ. ಅವರೂ, ಹೇಳದೇ ಕೇಳದೇ ಹೀಗೆ ಯಾವುದಾದರೂ ರೆಸಿಡೆನ್ಷಿಯಲ್ ಶಾಲೆ ಸೇರಿರಬಹುದೂಂತ ನಮ್ಮ ಅನುಮಾನ… ಹೀಗಾಗಿ ಪೋಲೀಸು ವೆರಿಫಿಕೇಶನ್ ಮಾಡಿಸಿಕೊಳ್ಳುವುದು ಒಳ್ಳೆಯದೇ ಅಂತ ನಮ್ಮ ಅಭಿಪ್ರಾಯ. ನೀವೇನಂತೀರಿ? ‘ ಎಂದು ಒಂದು ದೇಶಾವರಿ ನಗೆ ಬೀರಿದ.

ಇಬ್ಬರೂ ತಲೆಯಾಡಿಸಿದರು. ಮೊದಲಿಗೆ ಫೈಲ್ ಬಂತು. ರಂಗಾರೆಡ್ಡಿ ಅದನ್ನ ಒಮ್ಮೆ ಅಮೂಲಾಗ್ರ ನೋಡಿದ. ಅದರೊಳಗಿದ್ದ ಫೋಟೋವನ್ನ ಹತ್ತಿರದಿಂದ ನೋಡಿ, ಅವಳನ್ನೊಮ್ಮೆ ನೋಡಿದ.. ಉಹುಂ, ಇದು ಬೇರೆಯದೇ ಕೇಸು ಅಂದುಕೊಳ್ಳುತ್ತಾ ಫೈಲನ್ನ ಅವಳತ್ತ ತಿರುಗಿಸಿ – ‘ನೀವೂ ಟೀಚಿಂಗ್ ಪ್ರಫೆಷನ್‌ನಲ್ಲಿದ್ದೀರ… ನಿಮಗೆ ಇವರೇನಾದರೂ ಗೊತ್ತೇನೋ ನೋಡಿ ಹೇಳಿ.’ ಅಂದ.

‘ಇಲ್ಲ.’ ಅನ್ನುತ್ತಾ ಅವಳು ಆ ಫೈಲನ್ನು ಮಧುವಿಗೆ ಕೊಟ್ಟಳು. ಮಧುಸೂಧನ ಆ ಫೈಲನ್ನು ಪಡೆದು ಯಾವ ಆಸಕ್ತಿಯೂ ಇಲ್ಲದವನಂತೆ ನೋಡಿದ. ನೋಡಿದ ಕೂಡಲೇ ಜೋರಾಗಿ “Oh my god!!!”. ಅಂತ ಕಿರುಲಿದ. ರಂಗಾರೆಡ್ಡಿ ಮತ್ತು ಆಕೆ ಕೂಡಲೇ ಅವನತ್ತ ನೋಡಿ ಏಕಧ್ವನಿಯಲ್ಲಿ ‘ಏನಾಯಿತು?‘ ಅಂದರು.

‘ಇದು… ಇದು… ಇದು ನನ್ನ ಹೆಂಡತಿ ಶಾರದಾ….’ ಎಂದ.

ಆ ಹೊತ್ತಿಗೆ ಸರಿಯಾಗಿ ಒಬ್ಬ ಕಾನ್‌ಸ್ಟೇಬಲ್ ಒಳಕ್ಕೆ ಬಂದ. ‘ಸರ್ ಪಂಜಾಗುಟ್ಟಾ ಠಾಣೆಯಿಂದ ರಿಪೋರ್ಟ್ ಬಂದಿದೆ, ಮೂರು ವಾರಗಳ ಕೆಳಗೆ ಹೂತಿಟ್ಟಿದ್ದ ಹೆಂಗಸಿನ ಶವ ಸಿಕ್ಕಿದೆಯಂತೆ. ನಾವು ಕಳಿಸಿದ ಆ ಮೇಡಂದೇನಾದರೂ ಇರಬಹುದು ಅಂತ ಅವರ ಅನುಮಾನ….’

ರಂಗಾರೆಡ್ಡಿ ದಂಗಾದ. ಮಧುಸೂಧನ ಕಂಗಾಲಾಗಿ ಕಂಬವಾಗಿಬಿಟ್ಟಿದ್ದ. ಆ ಹುಡುಗಿ ಮಧುಸೂಧನನ ಕೈಯನ್ನು ಭದ್ರವಾಗಿ ಹಿಡಿದು ಅವನ ಕೈರೇಖೆಗಳನ್ನು ಸವರತೊಡಗಿದಳು.