ದಾರಿಯಲ್ಲಿ ಬರುತ್ತಿದ್ದಾಗ ನನ್ನ ಮನಸ್ಸಿನಲ್ಲಿದ್ದ ಪೂರ್ವ ಸಂಶಯಗಳೆಲ್ಲಾ ನಿಜವಾಗಿ ಕಂಡುಬಂದುವು. ಅಡಿಗೆಯವನು ಚಿಕ್ಕತಂದೆಯ ಗಂಟಿನ ಆಸೆಗೆ ಒಳಗಾಗಿ, ಊಟ ಉಪಚಾರಗಳಲ್ಲಿ ನಮ್ಮಿಬ್ಬರಿಗೆ ಬರಿದಾದ ಪಾತ್ರೆಗಳನ್ನು ಮಾತ್ರ ನಿಲ್ಲಿಸುವನು ಎಂದು ನನ್ನ ಹೆಂಡತಿಗೂ ಅವನಿಗೂ ದಿನಂಪ್ರತಿ ಕಾಳಗವಾಗುತ್ತಿತ್ತು. ಇವೆಲ್ಲವು ಅಲ್ಪ ಸಂಗತಿಗಳೆಂದು ಬಗೆದು ಅಡಿಗೆಮನೆಯ ಕಲಹವನ್ನು ನನ್ನ ಆಫೀಸ್ ಚಾವಡಿಗೆ ತರಲು ಬಿಡುತ್ತಿರಲಿಲ್ಲ. ಈ ಹೊತ್ತು ನೋಡಿದ ನೋಟದಿಂದ ನನ್ನ ಮನಸ್ಸಿಗೆ ಅವೆಲ್ಲವೂ ಖಚಿತವಾದುವು.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ಓಬೀರಾಯನ ಕಾಲದ ಕತೆಗಳು ಸರಣಿಯಲ್ಲಿ ಪಂಜೆ ಮಂಗೇಶರಾವ್  ಬರೆದ ಕತೆ ನನ್ನ ಚಿಕ್ಕ ತಂದೆ ಭಾನುವಾರದ ನಿಮ್ಮ ಓದಿಗೆ.

 

ನನ್ನ ಚಿಕ್ಕತಾಯಿ ನಮ್ಮಿಬ್ಬರನ್ನು ತನ್ನ ಮನೆಯಲ್ಲಿ ಬಿಟ್ಟು ಈ ಲೋಕದಿಂದ ದೂರಳಾದಳು. ಅವಳು ಸ್ವರ್ಗಕ್ಕೆ ಹೋದಳೋ ನರಕಕ್ಕೆ ಬಿದ್ದಳೋ ನನ್ನಿಂದ ಹೇಳಲು ಸಾಧ್ಯವಿಲ್ಲ. ಸ್ವರ್ಗದ ಸೋಪಾನಗಳು ಸಾವಿರವಾದರೆ, ಅವನ್ನೆಲ್ಲಾ ಹತ್ತುವಷ್ಟು ದೇಹಶಕ್ತಿ ಅವಳಲ್ಲಿ ಇರಲಿಲ್ಲ. ನರಕದ ನವದ್ವಾರಗಳು ಇಕ್ಕಟ್ಟಾದರೆ ಅವುಗಳನ್ನು ದಾಟಿಹೋಗುವಷ್ಟು ದೇಹ ಕೃಶತ್ವವು ಅವಳಲ್ಲಿ ಇದ್ದಿಲ್ಲ. ಇಹದಲ್ಲಿ ಉಣ್ಣದೆ ಉಡದೆ ಕಾಸಿಗೆ ಕಾಸು ಕೂಡಿಸುವ ಪುಣ್ಯವಂತರು ಸ್ವರ್ಗವನ್ನು ಏರುವುದು ನಿಜವಾದರೆ, ಅವಳು ನರಕದಲ್ಲಿ ಬೀಳಲಿಲ್ಲ. ಸಂತಭಜನೆಯಲ್ಲಿ ದೇಹವನ್ನು ವಿನಿಯೋಗಿಸುವ ‘ಮೊಂಡು ಭಕ್ತಿಯ’ ವೃದ್ಧ ಪತಿವ್ರತೆಯರು ನರಕಕ್ಕೆ ಇಳಿಯುವುದು ಸತ್ಯವಾದರೆ, ಅವಳು ಸ್ವರ್ಗವನ್ನು ಸೇರಲಿಲ್ಲ. ಅವಳು ಎಲ್ಲಿ ಹೋದಳೆಂದು ಈಗ ವಿಚಾರಿಸುವುದು ಅವಶ್ಯವಿಲ್ಲ. ಒಂದು ದಿನ ನಾವೂ ನೀವೂ ಅದನ್ನು ಕಂಡು ಹಿಡಿಯದೆ ಇರಲಾರೆವು. ಹೇಗೂ ನನ್ನ ಚಿಕ್ಕತಾಯಿ ಮಾನವ ಶರೀರವನ್ನು ಬಿಟ್ಟುಹೋದಳು. ಹೋಗುವಾಗ ತನ್ನ ಮನೆಯನ್ನು ತನ್ನೊಡನೆ ಕೊಂಡುಹೋಗಲು ಪ್ರಯತ್ನ ಮಾಡುವುದಕ್ಕೆ ಮರೆತುಬಿಟ್ಟಳು. ಅಂದಿನಿಂದ ಅವಳ ಮನೆ ಮಾತ್ರವೇ (ಅವಳ ಒಡವೆಯ ಗಂಟು ಯಥಾರ್ಥವಾಗಿ ನನಗೆ ಸಿಕ್ಕಲಿಲ್ಲ) ನನ್ನ ಪಾಲಿಗೆ ಬಂದ ಹಾಗಾಯಿತು. ಅಂದಿನಿಂದ ನಾವಿಬ್ಬರು – ನಾನು ಮತ್ತು ನನ್ನವಳು – ಆ ಮನೆಯಲ್ಲಿ, ನನ್ನ ಚಿಕ್ಕತಾಯ ಸ್ಥೂಲ ದೇಹಗಳತ್ಸ್ವೇದ ಜಲಸಮ್ಮಾರ್ಜಿತ ಭಿತ್ತಿಯುಕ್ತವಾದ ಮನೆಯಲ್ಲಿ, ಗಡ್ಡಮೀಸೆಗಳನ್ನು ಗಾಯವಾಗುವಂತೆ ಬೋಳಿಸಿಕೊಂಡು ಹದಿನೆರಡು ದಿನ ತಣ್ಣೀರು ಮಿಂದು ಒಪ್ಪೊಪತ್ತು ಉಂಡುದಕ್ಕೆ ಪ್ರತಿಫಲವಾಗಿ ಸಿಕ್ಕಿದ ಮನೆಯಲ್ಲಿ, ನನ್ನ ಚಿಕ್ಕ ತಾಯ ಪೂರ್ವ ಮಹತ್ವಕ್ಕೆ ಇಹಲೋಕದಲ್ಲಿ ಸ್ಮಾರಕ ಚಿಹ್ನವಾಗಿ ಉಳಿದಂತಹ ಮನೆಯಲ್ಲಿ ನಾವಿಬ್ಬರು ಸ್ವಲ್ಪ ಕಾಲ ಸುಖವಾಗಿದ್ದೆವು.

ಆದರೆ ಈ ಮನೆಯಲ್ಲಿ ನಾನು ಚಿರಕಾಲವಿರುವಂತೆ ನನ್ನ ಹಣೆಯಲ್ಲಿ ಬರೆಯುವುದಕ್ಕೆ ಬೊಮ್ಮ ದೇವನಿಗೆ ಮಸಿಯೂ ಲೇಖಣಿಯೂ ಇರಲಿಲ್ಲವೆಂದು ತೋರುತ್ತಿದೆ. ಇಲ್ಲವಾದರೆ ಮುದಿ ಗೂಗೆಯ ಗೂಡಿನಲ್ಲಿದ್ದ ಗಿಳಿಮರಿಗಳಂತಿರುವ ನಮ್ಮ ಬಳಿಗೆ ಅಕಸ್ಮಾತ್ ಈ ಮಾರ್ಜಾಲ ಋಷಿ ಏತಕ್ಕೆ ಬಂದನು? ಇದುವರೆಗೆ ಅಜ್ಞಾತವಾಸದಲ್ಲಿದ್ದ ಈ ವೃದ್ಧ ಯುಧಿಷ್ಠಿರನು ಮರಳಿ ಪಟ್ಟಣಕ್ಕೆ ಮೋರೆಯನ್ನು ತೋರಿಸಿದನೇತಕ್ಕೆ? 40 ವರ್ಷ ಊರುಬಿಟ್ಟು ಹೋದ ನನ್ನ ಚಿಕ್ಕತಂದೆಯವರು ತಿರುಗಿ ನನ್ನ – ತನ್ನ – ಮನೆಗೆ ಏತಕ್ಕೆ ಕಾಲಿಟ್ಟರು?

ನನ್ನ ಚಿಕ್ಕತಂದೆಯವರಿಗೆ ಸುಮಾರು 70 ವರ್ಷ. ಕೆಲವರಿಗೆ ವಾರ್ಧಕ್ಯದಲ್ಲಿ ಯೌವನ ಪ್ರಾಪ್ತಿಯುಂಟಾಗುವುದು. ನಮ್ಮ ಚಿಕ್ಕಪ್ಪನವರಿಗೆ ಹೀಗಿದ್ದಿತು. ಅವರು ಪ್ರಾಯದಲ್ಲಿ ಮುದುಕರಾದರೂ ದೇಹದಲ್ಲಿ ವೃದ್ಧರಾಗಿರಲಿಲ್ಲ; ಹೆಣ್ಣು ಕೊಡುವವರಿದ್ದರೆ ತಲೆಗೆ ಬಾಸಿಂಗ ಸಿಕ್ಕಿಸಿಕೊಳ್ಳಲಿಕ್ಕೆ ಅವರು ಸಿದ್ಧರಾಗಿದ್ದರು. ಅವರು ಬಂದು ಎರಡು ವರ್ಷಗಳಾದರೂ, ತಮ್ಮ ಜಾತಕದ ಪ್ರತಿಯನ್ನು ತಲೆಯ ಮುಂಡಾಸಿನಲ್ಲಿಯೇ ಇಟ್ಟುಕೊಂಡು ದಿನವೆಲ್ಲ ತಿರುಗಿದರೂ, ಹೆಣ್ಣು ಮಕ್ಕಳ ಆಸೆಯಿದ್ದ ಪಾಪಿಗಳು ಯಾರೂ ಅದನ್ನು ಕುರಿತು ವಿಚಾರಿಸಲಿಲ್ಲ. ತಲೆಯ ಕೂದಲೆಲ್ಲಾ ನರೆತಿದ್ದುವು. ಕಣ್ಣುಗಳು ಮಾತ್ರ ಗುಂಡಿಗೆ ಇಳಿದಿರಲಿಲ್ಲ; ಅವುಗಳು ನೋಟಕರನ್ನು ಗುಂಡಿಗೆ ತಳ್ಳುವಂತಿದ್ದವು. ಈ ಕಣ್ಣುಗಳ ನಡುವಿನಿಂದ ಮೂಗಿನ ಮೇಲ್ಭಾಗವು ಉದ್ಭವಿಸಿ, ಗರಿಗಳಿಲ್ಲದ ತೆಂಗಿನ ಸೋಗೆಯಂತೆ ಕೆಳಕ್ಕೆ ಹರಿದು, ಅದರೆ ಮೊಂಡಭಾಗವು ಮೇಲಿನ ತುಟಿಯನ್ನು ಅಂಟಿ ಕೊಂಡಿತ್ತು. ಮೂಗಿನ ಸೊಳ್ಳೆಗಳ ಇಕ್ಕಡೆಗಳಲ್ಲಿಯೂ ಗಲ್ಲಗಳ ತೊಗಲು ಸ್ವಲ್ಪ ಮುದುರಿಕೊಂಡಿತ್ತು. ತುಟಿಗಳು ಸ್ವಲ್ಪ ತೆರೆದಿರುವುದರಿಂದ ಒಳಗಿನ ಹಲ್ಲುಗಳು ಇನ್ನೂ ಬೆಳ್ಳಗಾಗಿ ತೋರುತ್ತಿದ್ದವು. ಮೈಯಲ್ಲಿ ರೋಮವಿಲ್ಲದಿದ್ದರೂ ಒಂದು ಪ್ರಕಾರವಾದ ಕಪ್ಪು ಬಣ್ಣವು ತುಂಬಿ ಹೋಗಿತ್ತು. ಕೆಲದಿನಗಳ ಕೆಳಗೆ ಗಟ್ಟದ ಕಾಫಿತೋಟಗಳಿಗೆ ಆಳುಗಳನ್ನು ಗೊತ್ತು ಹಚ್ಚುವ ‘ಕಂಟ್ರಾಕ್ಟ್ದಾರನು’, ನಮ್ಮ ಚಿಕ್ಕತಂದೆಯವರ ಕೈಹಿಡಿದು ಬಳಿಕ ಅವರ ಕ್ಷಮಾಪಣೆಯನ್ನು ಬೇಡಿಕೊಂಡನಂತೆ. ಅವರ ಮೈ ಬಣ್ಣವು ಹೇಗಿರುವುದೆಂದು ಪಾಠಕ ಮಹಾಶಯರಿಗೆ ಖಚಿತ ಮಾಡುವುದಕ್ಕೆ ಅದಕ್ಕೆ ಸಾದೃಶ್ಯ ಪದಾರ್ಥವನ್ನು ಇನ್ನೂ ಹುಡುಕುತ್ತಲಿರುವೆನು. ನನ್ನ ಚಿಕ್ಕತಂದೆಯವರ ಹೆಸರು ಏನೆಂಬುದು ಈ ತನಕ ಸರಿಯಾಗಿ ನನಗೆ ಗೊತ್ತಾಗಲಿಲ್ಲ. ನನ್ನ ಚಿಕ್ಕತಾಯಿ ಜೀವಂತಳಾಗಿದ್ದಾಗ, ‘ಜೋಗುಳ ಹಾಡು’ ಎನ್ನುವ ಬದಲಾಗಿ ‘ತೊಟ್ಟಿಲು ತೂಗುವ ಪದ’ ಎನ್ನುತ್ತಿದ್ದಳು. ಹಾಗೆಯೇ “ಮೇಲಿಂದ ನೀರು ಹರಿಯುವುದು” ಎನ್ನುವಳಲ್ಲದೆ “ಜೋಗು” ಎಂಬ ಪದವನ್ನು ಉಚ್ಚರಿಸುತ್ತಿದ್ದಿಲ್ಲ. ಈ ಕಾರಣಗಳಿಂದ ನಮ್ಮ ಚಿಕ್ಕತಂದೆಯವರ ಹೆಸರು “ಜೋಗಪ್ಪ” ಎಂದು ನಾನು ಸಾಧಾರಣ ನಿಶ್ಚಯಮಾಡಿದೆನು. ನಾನು ‘ಚಿಕ್ಕಪ್ಪಾ! ಚಿಕ್ಕಪ್ಪಾ!’ ಎಂದು ಯಾವಾಗಲೂ ಕರೆಯುತ್ತಿದ್ದುದರಿಂದ, ನನ್ನ ಸ್ನೇಹಿತರೆಲ್ಲ ಈ ಮಾತನ್ನೆ ಹಿಡಿದು, ಅವರನ್ನು ಚಿಕ್ಕಪ್ಪಯ್ಯ ಎಂದು ಸಂಬೋಧಿಸುತ್ತಿದ್ದರು. ಹಲವು ಜನ ಪಾರಮಾರ್ಥ ಬಲ್ಲವರು ಇದಕ್ಕೆ ಬದಲಾಗಿ ‘ಚಿ! ಕಪ್ಪಯ್ಯ!” ಎಂತಲೂ ಹೇಳುತ್ತಿದ್ದರು. ಅವರು ಹೀಗೆ ಕರೆಯುತ್ತಿದ್ದುದು ನ್ಯಾಯವೋ ಅನ್ಯಾಯವೋ ವಾಚಕರೇ ವಿಚಾರಿಸಬಹುದು.

ನಮ್ಮ ಚಿಕ್ಕತಂದೆಯವರು ಮತದಲ್ಲಿ ಅದ್ವೈತವನ್ನು ಅವಲಂಬಿಸಿದ್ದರು. ಅವರಿಗೆ ಅನ್ಯ ಹಣ ಬೇರೆ, ತನ್ನ ಹಣ ಬೇರೆ, ಎಂಬ ದ್ವೈತಾಭಿಪ್ರಾಯವಿರಲಿಲ್ಲ; ಎಲ್ಲವೂ ತನ್ನ ಪೆಟ್ಟಿಗೆಯನ್ನೇ ಸೇರಬೇಕೆಂಬ ಸದ್ಧರ್ಮವನ್ನು ಅವರು ವಿಚಾರಿಸುತ್ತಿದ್ದರು. ಅವರು ವಿಚಾರಿಸುವಂತೆ ಅವರ ಬಳಿಯಲ್ಲಿ ಸ್ವಲ್ಪ ಹಣವಿತ್ತು. ಅದು ಎಷ್ಟಿತ್ತೆಂದು ಕಂಡು ಹಿಡಿಯುವುದಕ್ಕೆ ಅನುಕೂಲವಾದ ಸಮಯವು ಇನ್ನೂ ಒದಗಲಿಲ್ಲ ಎಂದು ನಾನು ವ್ಯಸನಪಡುತ್ತೇನೆ. ಹಣದ ಪೆಟ್ಟಿಗೆಯನ್ನು ದಿನಕ್ಕೆ ಎರಡು ಸಲ ಪೂಜಿಸುತ್ತಿದ್ದರು. ಈ ಹಣವು ಅವರೊಡನೆ ಉಂಟೆಂಬ ಪರಿಜ್ಞಾನದಿಂದಲೇ ನಾನು ನಿರಾಯಾಸವಾದ ಎರಡು ಊಟಗಳನ್ನು ಅವರಿಗೆ ಕೊಡುತ್ತಿದ್ದೆನು. ನಾನು ಊಟ ಹಾಕದಿದ್ದರೆ, ಪರರ ಮನೆಯಲ್ಲಿ ಈ ಹಣದ ಪೆಟ್ಟಿಗೆಯ ದರ್ಶನದಿಂದಲೇ ಉಳುಕೊಳ್ಳುವುದು ಅವರಿಗೆ ಕಷ್ಟವಾಗುತ್ತಿರಲಿಲ್ಲ. ಈ ಪೆಟ್ಟಿಗೆಯನ್ನು ನೋಡಿಕೊಂಡು ಎಷ್ಟೋ ಜನರು ಅವರ ಕಾಲುಹಿಡಿದು ತಮ್ಮ ಮನೆಯಲ್ಲಿ ಅವರನ್ನು ನಿಲ್ಲಿಸಿಕೊಂಡು ಮೋಸಹೋಗುವುದಕ್ಕೆ ಸಿದ್ಧರಾಗಿದ್ದರು. “ನನ್ನ ತಲೆಯ ಮೇಲೆ ಇನ್ನು ಹೆಚ್ಚು ದಿವಸಗಳು ಹೋಗಲಾವು” ಎಂದು ನನ್ನ ಚಿಕ್ಕ ತಂದೆಯವರು, ನನಗೆ ಕೇಳಿಸುವಂತೆ ಪದೇ ಪದೇ ಹೇಳುತ್ತಿದ್ದುದರಿಂದ, ನಾನು ವೆಚ್ಚದ ವಿಷಯದಲ್ಲಿ ಅಷ್ಟು ವಿಚಾರ ಮಾಡುತ್ತಿದ್ದಿಲ್ಲ. ಆದರೆ ಒಂದೊಂದು ಸಲ “ದಿನ ಹೋಗದಿದ್ದರೂ ವರ್ಷಗಳು ಹೋಗಬಹುದಲ್ಲವೆ” ಎಂದು ಸಂಶಯ ಮನಸ್ಕನಾಗುತ್ತಿದ್ದೆನು. ಅವರಿಗೆ ಇನ್ನೂ ದೀರ್ಘಕಾಲ ಬದುಕಬೇಕೆಂಬ ಆಸೆ ಇತ್ತೋ ಇಲ್ಲವೊ ನನ್ನಿಂದ ಹೇಳಲು ಬರುವುದಿಲ್ಲ. ಆದರೆ ಅಭ್ಯಂಗಸ್ನಾನಗಳಲ್ಲಿ ದಿನ ತಪ್ಪುತ್ತಿದ್ದಿಲ್ಲ; ಊಟಗಳಲ್ಲಿ ಗಂಟೆ ತಪ್ಪುತ್ತಿದ್ದಿಲ್ಲ; ಫಲಾಹಾರ ವಿಷಯದಲ್ಲಿ ನಿಮಿಷ ತಪ್ಪುತ್ತಿದ್ದಿಲ್ಲ.

ನಮ್ಮ ಚಿಕ್ಕತಂದೆಯವರು –

ಪಾಠಕಮಹಾಶಯರು ಇನ್ನೂ ತಾಳಲಾರರು. ನನ್ನ ಚಿಕ್ಕತಂದೆಯವರನ್ನು ಕುರಿತು ಓದಿ ಓದಿ ನಿಮ್ಮ ಸಹನಾಶಕ್ತಿಯು ಸಾಕುಸಾಕಾಯಿತು. “ಇನ್ನೂ, ಈತನ ಚಿಕ್ಕತಂದೆಯವರು ಹೋಗಲಿಲ್ಲ” ಎಂದು ಮಹಾಶಯರು ಕೋಪಿಸಿ “ಸತ್ತು ಹೋಗಲಿ” ಎಂದು ಪುಸ್ತಕವನ್ನು ಬಿಸುಡುವರೆಂದು ನಾನು ಸಂಶಯಪಡುತ್ತೇನೆ. ‘ಹಾಗೆ ಆಗಲಿಲ್ಲವಲ್ಲ!’ ಎಂದು ನಾನೂ ವ್ಯಸನಪಟ್ಟರೂ, ನನ್ನ ಚಿಕ್ಕತಂದೆಯವರ ಅಂಥ ಸ್ಥಿತಿಯನ್ನು ನೋಡಲು ನೀವು ಸಂತೋಷಪಡುವುದಾದರೆ ನಾನು ಮುಂದೆ ಹೇಳತೊಡಗುವೆನು. ಆದರೆ ಅಷ್ಟರಲ್ಲಿ ನಮ್ಮ ಮನೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿಯನ್ನು ಕುರಿತು ಕೆಲವು ಮಾತುಗಳನ್ನು ಹೇಳಲು ಬಯಸುವೆನು.

ಈ ವ್ಯಕ್ತಿಯ ಪರಿಚಯವು ಊರಲ್ಲಿ ಎಲ್ಲರಿಗೂ ಇತ್ತು. ಊರಲ್ಲಿ ಹೆಣ್ಣು ಮಕ್ಕಳು ಅಳುತ್ತಿದ್ದರೆ ‘ಮುದ್ದಣ್ಣನಿಗೆ ಮದುವೆ ಮಾಡಿಕೊಡುತ್ತೇವೆ’ ಎಂದು ತಂದೆತಾಯಿಗಳು ಅಣಕಿಸುವುದುಂಟು. ಮುದ್ದಣ್ಣನು ನಮ್ಮೆಲ್ಲರಿಗೂ ಅನ್ನದಾತಾರನಾಗಿದ್ದನು. ಅಡಿಗೆ ಮಾಡುವುದು ಅವನ ಕೆಲಸವಾದರೂ, ‘ಅಡಿಗೆಭಟ್ಟ’ ಎಂದು ಯಾರಾದರೂ ಕರೆದರೆ, ರೇಗುವನು. ರೂಪಲಾವಣ್ಯವು ಅಷ್ಟೊಂದು ವಿಶೇಷವಾಗಿರಲಿಲ್ಲ. ಕಣ್ಣು ಚಿಕ್ಕವು, ಕಿವಿ ಕೊಂಕು, ಮೂಗು ಮೊಂಡ, ಮುಖ ಮಂದ. ಕೆಲವರು ಈತನನ್ನು ಹುಚ್ಚನೆಂದು ನೋಡುತ್ತಲೇ ಹೇಳುತ್ತಿದ್ದರು. ‘ಹುಚ್ಚು ಹೌದು. ಕಂಡವರ ಮೇಲೆ ಕಲ್ಲಿಡುವ ಹುಚ್ಚಲ್ಲ.’ ತ್ರಿದಶ ವರ್ಷಗಳವರೆಗೆ ಧನ ಬಲವಿಲ್ಲದೆ ಕಠೋರ ಬ್ರಹ್ಮಚರ್ಯವ್ರತವನ್ನು ಅವಲಂಬಿಸಿದ ಮಹಾತ್ಮನಿಗೆ ಯಾವ ಬುದ್ಧಿವಿಕಲತೆಯು ಉಂಟಾಗಬಹುದೋ ಆ ಹುಚ್ಚು ಇವನನ್ನು ಹಿಡಿದಿತ್ತು. ಇದು ಕಾರಣದಿಂದ ಅವನು ಮಾತಿನಲ್ಲಿ ಯಾರೊಡನೆಯೂ ತಡವರಿಸುತ್ತಿದ್ದಿಲ್ಲ. ಆಮಂತ್ರಿತರಾದ ಗೃಹಸ್ಥರು ನಮ್ಮ ಮನೆಗೆ ಬಂದ ಕಾಲದಲ್ಲಿ ಮುದ್ದಣ್ಣನು ಅಡಿಗೆ ಮಾಡುವುದನ್ನು ಬಿಟ್ಟು, ಹೊಸ ಧೋತ್ರವನ್ನು ಉಟ್ಟುಕೊಂಡು ತನ್ನ ವಿದ್ಯಾರ್ಜನೆಯನ್ನೂ, ತನ್ನ ಕುಲೀನತೆಯನ್ನೂ, ತನ್ನ ಧನಸಂಪನ್ನತೆಯನ್ನೂ ಕುರಿತು ಅವರ ಮುಂದೆ ವ್ಯಾಖ್ಯಾನ ಮಾಡುವನು. ಅವನಲ್ಲಿ ಇವೆಲ್ಲವು ಕೊಂಚ ಕೊಂಚವಾಗಿ ಇಲ್ಲದೆ ಇರಲಿಲ್ಲ. ನೆರೆಯಲ್ಲಿದ್ದ ಸ್ತ್ರೀಯರು ನಮ್ಮ ಮನೆಯಲ್ಲಿ ಹಾಳುಹರಟೆಗಳನ್ನು ಜಗಿಯುವುದಕ್ಕೆ ಕೂಡಿದರೆ, ಈ ಸುಂದರ ಪುರುಷನು ಅಡಿಗೆಮನೆಯನ್ನು ಬಿಟ್ಟು, ಅವರ ಸಮ್ಮುಖದಲ್ಲಿ ಬಂದು ಗಂಭೀರಭಾವವನ್ನು ಧರಿಸಿ, ಕುರ್ಚಿಯ ಮೇಲೆ ಕುಳಿತುಕೊಳ್ಳುವನು. ಹಾಗೆಯೇ ಮೇಜಿನ ಮೇಲಿದ್ದ ಒಂದು ‘ಸೋಶ್ಯಲ್ ರಿಫೋರ್ಮರ್’ ಸಂಚಿಕೆಯನ್ನು ಕೈಯಲ್ಲಿ ಕೊಂಡು ‘ವಾಂಟೆಡ್ ಏ ಯಂಗ್ ಮೆನ್ ಟು ಮೆರ್ರಿ ಏ ವರ್ಜಿನ್ ವಿಡೊ’ ಎಂದು ಓದಿಕೊಂಡು ಒಮ್ಮೆ ಸ್ತ್ರೀಯರ ಮುಖವನ್ನು ನೋಡುತ್ತಾ, ಒಮ್ಮೆ ‘ವರ್ಜಿನ್ ವಿಡೊ’ ಎಂದು ಹೇಳಿ ತಲೆದೂಗುತ್ತಾ, ಆನಂದಪರವಶನಾಗುವನು. ತಾನು ಇತರರಂತೆ ಸದ್ವಂಶದಲ್ಲಿ ಹುಟ್ಟಿರುವೆನೆಂದು ಮರಳಿಮರಳಿ ನಮ್ಮ ಕಿವಿಗೆ ಹಾಕುತ್ತಿದ್ದನು. ಅವನು ಹೇಳುವಂತೆ ಅವನ ಸೋದರಮಾವನೊಬ್ಬನು ಜಿಲ್ಲಾ ಮುನ್ಸೀಫನಾಗಿದ್ದನು; ಮತ್ತೊಬ್ಬನು ತಾಲೂಕು ಅಮಲ್ದಾರನಾಗಿದ್ದನು. ಆದರೆ ಈ ಪುಣ್ಯಾತ್ಮರಿಗೆ ಅಳಿಯನ ಪರಿಚಯವೇನೋ ಇರಲಿಲ್ಲ. ಅಳಿಯುವ ಮೊದಲೇ ಅಳಿಯನಾಗಬೇಕೆಂಬ ಆಸೆಯಿಂದ ಅವನು ಸ್ವಲ್ಪ ಹಣವನ್ನು ಕೂಡಹಾಕಿದ್ದನು. ಈ ಧನಲೋಲುಪ್ತಿಯ ವಿಷಯದಲ್ಲಿ ಅವನು ನನ್ನ ಚಿಕ್ಕಪ್ಪನವರ ಸಾಕಣೆ ಮಗ ಎಂದು ಕರೆಯಲ್ಪಡುವಷ್ಟು ಅವರ ಪೂರ್ಣ ಅನುವರ್ತಿಯಾಗಿದ್ದನು. ಮೊದಲು ಮೊದಲು ‘ಚಿಕ್ಕಪ್ಪಯ್ಯನ ದತ್ತಕಪುತ್ರ’ ಎಂದು ಸರಸಕ್ಕೆ ಇವನನ್ನು ಯಾರಾದರೂ ಕರೆದರೆ ಈತನು ಉರಿದು ಬೀಳುತ್ತಿದ್ದರೂ, ಕ್ರಮೇಣ ಈ ಹೆಸರು ಹೇಳಿದರೆ ಅವನಿಗೆ ಒಂದು ಪ್ರಕಾರದ ಆನಂದವುಂಟಾಗುತ್ತಲಿತ್ತು. ಯಾವ ಕಾರಣದಿಂದಲೊ ಇವರಿಬ್ಬರೊಳಗೆ ಪರಸ್ಪರ ಗೂಢ ಸ್ನೇಹವುಂಟಾಯಿತು. ಈ ರಹಸ್ಯವಾದ ಅನ್ಯೋನ್ಯ ಮೈತ್ರಿಯೇ ನನ್ನನ್ನು ಇನ್ನೊಮ್ಮೆ ಜೈಲಿಗೆ ಅಟ್ಟಿಬಿಟ್ಟಿತು. ಆದರೂ ಈ ಮುದ್ದಣ್ಣನ ಮೇಲೆ ನನಗೆ ಕೋಪವಿರಲಿಲ್ಲ. ಏಕೆಂದರೆ ಆತನು ಸಜ್ಜನ ಸ್ವಭಾವದವನು, ಸಹನಾ ಶಕ್ತಿಯುಳ್ಳವನು. ಅಡಿಗೆ ಮನೆಯಲ್ಲಿ ಬೆಕ್ಕಿನಂತೆ ಯಾರ ಅಪ್ಪಣೆಯನ್ನೂ ಕೇಳದೆ ಕಣ್ಮುಚ್ಚಿ ತಿನ್ನುವುದಾಗಲೀ. ಚಿಕ್ಕಮನೆಯಲ್ಲಿ ಹಾಸಿದ ಹಾಸಿಗೆಯ ಮೇಲೆ ಅಂತರಂಗದಿಂದ ಬಂದು ಮನೆಯ ಯಜಮಾನನಂತೆ ಮಲಗುವುದಾಗಲೀ, ಅವನ ಕೃತ್ಯಗಳಲ್ಲಿ ಕಾಣಿಸಲಿಲ್ಲ.

ಸೋಮವಾರ ದಿನ ನನ್ನ ಚಿಕ್ಕತಂದೆಯವರು ನಿತ್ಯ ಕರ್ಮದಂತೆ ಊಟಕ್ಕೆ ಕುಳಿತಿದ್ದರು. ಅಡಿಗೆಯವನು ಪ್ರೇಮಪೂರ್ವಕವಾಗಿ ಸೇವಿಸುತ್ತಿದ್ದನು. ನಾನು ಸ್ನಾನವನ್ನು ತೀರಿಸಿ ಭೋಜನಕ್ಕೆ ಸಿದ್ಧನಾಗಿ ಅಡಿಗೆ ಮನೆಗೆ ಹೋಗುತ್ತಿದ್ದೆನು. ಆದರೆ ಅವರಿಬ್ಬರಿಗೂ ನಡೆಯುವ ಅಂತರಂಗದ ಸಂಭಾಷಣೆಯಲ್ಲಿ ಕೆಲವು ಮಾತುಗಳು ಹಿಂದುಗಡೆಯಲ್ಲಿದ್ದ ನನ್ನ ಕಿವಿಗಳಲ್ಲಿ ಇಳಿದುದರಿಂದ ನಾನು ಕುತೂಹಲಮನಸ್ಕನಾಗಿ ಅಲ್ಲಿಯೇ ತಡೆದೆನು.

ಚಿಕ್ಕಪ್ಪ – “ನಾನು ನನಗೆ ಬೇಕಾದ ಒಬ್ಬಿಬ್ಬರೊಡನೆ ಹಣವನ್ನೆಲ್ಲಾ ನಿನ್ನ ವಶಮಾಡುವೆನೆಂದು ಹೇಳಿದುದರಿಂದ, ನನ್ನ ಸಾಕಣೆಮಗ ಎಂದು ಎಲ್ಲರೂ ನಿನ್ನನ್ನು ಹೇಳಲು ಕಾರಣವಾಯಿತು.”

ಮುದ್ದಣ್ಣ – “ಮನೆಯ ಯಜಮಾನರು ನಿಮ್ಮ ಸೋದರ ಮಗನಲ್ಲವೇ? ನಿಮ್ಮ ಹಣವೆಲ್ಲಾ ಅವರ ಪಾಲಿಗೆ ಹೋಗದೆ ನನ್ನ ವಶಕ್ಕೆ ಬರಲು ನ್ಯಾಯವು ಬಿಡುವುದೇ?”

ನಾನು ನಿಂತಲ್ಲಿಯೇ ಇದರ ಸಂಪೂರ್ಣ ಅರ್ಥವನ್ನು ಗ್ರಹಿಸಿದೆನು.

ಚಿಕ್ಕಪ್ಪ – “ಹುಚ್ಚಾ! ನೀನರಿಯೆ. ಈ ಮನೆಯ ಯಜಮಾನ ನಾನು; ಅವನಲ್ಲ. ಇದು ಆಗಿಹೋದ ನನ್ನ ಧರ್ಮಪತ್ನಿಯ ಮನೆ. ಆದುದರಿಂದ ಮನೆಯ ಒಂದು ಕಲ್ಲಿನಲ್ಲಿ ಕೂಡ ಆತನಿಗೆ ಹಕ್ಕಿಲ್ಲ. ನನ್ನ ನಗದು ಹಣವು ಸ್ವಾರ್ಜಿತವಾದುದರಿಂದ ಅದನ್ನು ನನ್ನ ಇಚ್ಛಾನುಸಾರವಾಗಿ ನಾನು ವಿನಿಯೋಗಿಸಬಹುದು, ಕಂಡೆಯಾ?”

ಹೀಗೆಂದು ಹೇಳಿ ಚಿಕ್ಕತಂದೆಯವರು ಭಕ್ಷ್ಯವನ್ನು ಬಡಿಸಲು ಹೇಳಿದರು. ಅಡಿಗೆಯವನು ಭಕ್ಷ್ಯಗಳನ್ನು ಅವರ ಎಲೆಯ ಮೇಲೆ ಧಾರಾಳವಾಗಿ ವರ್ಷಿಸಿದನು. ಕಣ್ಣು ಕಾಣದ ನಷ್ಟವನ್ನು ನೋಡಿ ನಾನು ನನ್ನಲ್ಲಿಯೇ ಬೇಸರಗೊಂಡೆನು. ಆದರೂ ಮಾತುಗಳು ಕೊನೆಮುಟ್ಟಿದುದನ್ನು ನೋಡುವುದಕ್ಕೆ ಸಡಗರಿಸುತ್ತ ಅಲ್ಲಿಯೇ ನಿಂತೆನು.

ಚಿಕ್ಕಪ್ಪ – “ಮುದ್ದು! ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನು ಕೂಡ ನನ್ನನ್ನು ಇಷ್ಟು ಪ್ರೀತಿಯಿಂದಲೂ ವಾತ್ಸಲ್ಯದಿಂದಲೂ ನೋಡುತ್ತಿದ್ದಿಲ್ಲ. ನನ್ನ ಹಣವೆಲ್ಲಾ ನಿನಗೆಂದು ನಾನು ‘ಉಯಿಲ್’ ಬರೆದಿಟ್ಟಿರುವೆನು.”

ಮುದ್ದಣ್ಣ – “ಉಯಿಲ್ ಎಂದರೇನು?”
ಚಿಕ್ಕಪ್ಪ – “ಸ್ಥಿರಚರ ಸೊತ್ತನ್ನು ಒಬ್ಬನು ಮತ್ತೊಬ್ಬನಿಗೆ ತನ್ನ ಮರಣದ ಬಳಿಕ ದಾನವಾಗಿ ಬರೆದುಕೊಡುವ ನ್ಯಾಯಪತ್ರ.”
ಮುದ್ದಣ್ಣ – “ಹಾಗಾದರೆ ಬರೆದುಕೊಡುವವನು ಸತ್ತ ವಿನಾ ಆ ಸೊತ್ತು ಮತ್ತೊಬ್ಬನ ಪಾಲಿಗೆ ಬರುವುದಿಲ್ಲವೇ?”

ಚಿಕ್ಕತಂದೆಯವರು ಅಡಿಗೆಭಟ್ಟನ ಮಾತಿನ ಅರ್ಥವನ್ನು ಸರಿಯಾಗಿ ತಿಳಿದುಕೊಂಡರು. ಊರಲ್ಲೆಲ್ಲಾ ವಾಂತಿಭೇದಿಯು ಹಬ್ಬಿದುದರಿಂದ ಈ ಮಾತು ಅವರಿಗೆ ಅಪಶಕುನವಾಗಿ ತೋರಿದ್ದರೂ ಇರಬಹುದು. ಹೇಗೂ ಆ ಮೇಲೆ ಅವರು ಮಾತೆತ್ತದೆ, ಕೈತೊಳೆದು ಹೊರಕ್ಕೆ ಹೋದರು.

ಸ್ವಲ್ಪ ಹೊತ್ತಿನ ಮೇಲೆ ನನ್ನ ಹೆಂಡತಿಯು ಅಡಿಗೆಮನೆಗೆ ಬಂದು ನನ್ನನ್ನು ಕರೆಯುತ್ತಲೇ ನಾನು ಊಟಕ್ಕೆ ಕುಳಿತುಕೊಂಡೆನು. ಪಾತ್ರೆಗಳಲ್ಲಿ ಶಾಕಪಾಕಗಳು ವಜ್ರ್ಯವಾದುದನ್ನು ನೋಡಿ ಸಕಲಾವತಿಗೂ ಅಡಿಗೆಯವನಿಗೂ ನಿತ್ಯದಂತೆ ಬಾಯ್ಜಗಳವು ನಡೆಯಿತು. ನನಗೆ ‘ಆಫೀಸಿಗೆ’ ಹೋಗುವುದಕ್ಕೆ ವಿಳಂಬವಾದುದರಿಂದಲೂ, ನನ್ನ ಮನಸ್ಸಿಗೆ ಸಮಾಧಾನವಿಲ್ಲದುದರಿಂದಲೂ, ನಾನು ಮನೆಯವಳ ಪಕ್ಷವಾಗಿ ಸಿಟ್ಟಿಗೆದ್ದು “ಇವರ ಕರ್ಮದಿಂದ ಒಂದು ತುತ್ತು ಅನ್ನ ತಿನ್ನುವುದಕ್ಕೆ ಇಲ್ಲ! ಹಾಳಾಗಿ ಹೋಗಲಿ!” ಎಂದು ಶಪಿಸಿ, ಊಟ ಮುಗಿಸದೆ, ನೆಟ್ಟನೆ ಆಫೀಸಿಗೆ ಹೊರಟೆನು. ನಮ್ಮ ಚಿಕ್ಕಪ್ಪನವರು ಸುಖಾಸೀನರಾಗಿ ನಿದ್ರೆಗೆ ಪ್ರಸ್ತಾವನೆಯಾಗಿ ಆಕಳಿಸುವುದನ್ನು ನೋಡಿ, ಮನೆಯನ್ನು ಬಿಟ್ಟು ಹೋಗುವಾಗ ನನ್ನ ಅಸಮಾಧಾನತೆಯು ಕಡಿಮೆಯಾಗಲಿಲ್ಲ.

ದಾರಿಯಲ್ಲಿ ಬರುತ್ತಿದ್ದಾಗ ನನ್ನ ಮನಸ್ಸಿನಲ್ಲಿದ್ದ ಪೂರ್ವ ಸಂಶಯಗಳೆಲ್ಲಾ ನಿಜವಾಗಿ ಕಂಡುಬಂದುವು. ಅಡಿಗೆಯವನು ಚಿಕ್ಕತಂದೆಯ ಗಂಟಿನ ಆಸೆಗೆ ಒಳಗಾಗಿ, ಊಟ ಉಪಚಾರಗಳಲ್ಲಿ ನಮ್ಮಿಬ್ಬರಿಗೆ ಬರಿದಾದ ಪಾತ್ರೆಗಳನ್ನು ಮಾತ್ರ ನಿಲ್ಲಿಸುವನು ಎಂದು ನನ್ನ ಹೆಂಡತಿಗೂ ಅವನಿಗೂ ದಿನಂಪ್ರತಿ ಕಾಳಗವಾಗುತ್ತಿತ್ತು. ಇವೆಲ್ಲವು ಅಲ್ಪ ಸಂಗತಿಗಳೆಂದು ಬಗೆದು ಅಡಿಗೆಮನೆಯ ಕಲಹವನ್ನು ನನ್ನ ಆಫೀಸ್ ಚಾವಡಿಗೆ ತರಲು ಬಿಡುತ್ತಿರಲಿಲ್ಲ. ಈ ಹೊತ್ತು ನೋಡಿದ ನೋಟದಿಂದ ನನ್ನ ಮನಸ್ಸಿಗೆ ಅವೆಲ್ಲವೂ ಖಚಿತವಾದುವು. ನನ್ನ ಚಿಕ್ಕ ತಂದೆಯವರು ತನ್ನ ಹಣದ ವಾಸನೆಯನ್ನು ಇಟ್ಟು, ಮುದ್ದಣ್ಣನು ತನ್ನ ಹಿಂದುಗಡೆ ತನಗೆ ಬೇಕಾದ ಹಾಗೆ ಬರುವಂತೆ ಮಾಡಿ, ‘ಮನ್ನಣೆಯ ಮನೆಯ ಅಳಿಯನಂತೆ’ ಸರ್ವಸುಖವನ್ನು ಅನುಭವಿಸುವುದಕ್ಕೆ ಅನುಕೂಲ ಪಡಿಸಿರುವರು! ಇವರ ಮನೆಯನ್ನೂ ಧನವನ್ನೂ ಆಶಿಸಿದ ನನಗೆ ಬೂರುಗದ ಮರ ಕಾದ ಗಿಣಿಯಂತೆ ಹತಾಶನಾಗುವ ಕಾಲ ಬಂದೊದಗುವುದು. ಮನೆಯ ಗೋಡೆಯನ್ನು ಅಂಟಿಕೊಂಡ ಈ ಉಡುವನ್ನು ಹೊರಕ್ಕಟ್ಟಿಬಿಟ್ಟ ಹೊರತು ಮನೆಗೆ ಶ್ರೇಯಸ್ಸು ಇಲ್ಲ. ಇನ್ನು ಈ ಹಳೆಯ ಮರವು ಬೇರೂರಿದರೆ ನೆಲವನ್ನು ಬಿಡದೆ ಎಲ್ಲವನ್ನು ಆವರಿಸಿಕೊಳ್ಳುವುದು. ಆದುದರಿಂದ ಈ ವೃದ್ಧ ಶಕುನಿಯಿಂದ ನಾವಿಬ್ಬರು ದೂರರಾಗಿರಬೇಕು ಎಂದು ದೃಢಮನಸ್ಕನಾದೆನು.

‘ಆಫೀಸಿನಲ್ಲಿ’ ಗುಮಾಸ್ತರು ಒಬ್ಬಿಬ್ಬರು ಅಲ್ಲದೆ ಮತ್ತಾರು ಬಂದಿರಲಿಲ್ಲ. ಊರಲ್ಲೆಲ್ಲ ಭಯಂಕರವಾಗಿ ವಾಂತಿಭೇದಿಯು ಪಸರಿಸಿದುದರಿಂದ, ಅವರು ಇದೇ ನೆವವನ್ನು ಮಾಡಿ ಮನೆಯಲ್ಲಿ ನಿಂತುಬಿಟ್ಟಿದ್ದರು. ರೋಗವು ತಲೆದೋರುವ ಮೊದಲೇ ಹುಡುಗರೆಲ್ಲಾ ಶಾಲೆಗೆ ‘ರಜಾ’ ಎಂದು ತಮ್ಮಷ್ಟಕ್ಕೆ ಖಚಿತ ಮಾಡಿಕೊಂಡು ಊರಿಗೆ ಹೋಗಿಬಿಟ್ಟರು. ಎಂದೂ ಬಂಡಿಯನ್ನು ಹತ್ತದ “ಆಸ್ಪತ್ರೆಯ” ಬಡ ನೌಕರರೆಲ್ಲ ಕುದುರೆಗಾಡಿಯಲ್ಲಿ ಕುಳಿತುಕೊಳ್ಳುವುದಕ್ಕೆ ಮೊದಲು ಮಾಡಿದರು. ‘ಲೋಕಲ್ ಫಂಡ್ ಮೆಂಬರ್ಸ್’ ಎಂದು ಕರೆಯಲ್ಪಡುವ ಲೋಕದ ಪಂಡರು (ಪಂಡ – ಒಬ್ಬ ಅಮುಖ್ಯ ಮನುಷ್ಯ) ಖಜಾನೆಯಲ್ಲಿ ಕಾದಿಟ್ಟ ಹಣವನ್ನು ವ್ಯಯಮಾಡುವುದಕ್ಕೆ ತೊಡಗಿದರು. ಆದರೂ ಕೊಲೆರಾ (ಎಂದರೆ ಕೊಲೆರೋಗ) ಊರಲ್ಲಿ ಶಮನವಾಗಲಿಲ್ಲ. ಶಮನಾರ್ಥವಾಗಿ ಶಾಂತಿಗಳೂ ಪೂಜೆಗಳೂ ನಡೆದುವು. ದೇವಸ್ಥಾನಗಳಲ್ಲಿ ವಿಪ್ರಸಂತರ್ಪಣೆಗಳು ಮಹಾ ಸಂಭ್ರಮದಿಂದ ಜರಗಿದವು. ಕೆಲವು ದಿನಗಳಲ್ಲಿ ಬ್ರಾಹ್ಮಣರ ಅಗ್ರಹಾರದಲ್ಲಿ ಮರಣಗಳು ಸಂಭವಿಸಿದುವು. ಉಪಾಯವಿಲ್ಲ; ಎಲ್ಲರೂ ನಾನಾ ತರದ ಔಷಧಗಳನ್ನು ತರಿಸಿ ಇಟ್ಟುಕೊಂಡರು. ಬಹಿರಂಗವಾಗಿ ಬೀಡಿ ಸೇದುವುದಕ್ಕೆ ಹೆದರುತ್ತಿದ್ದ ಹುಡುಗರು ಹಣವನ್ನು ಹೊಗೆಯಾಗಿ ಮಾಡಿಬಿಟ್ಟರು. ಬ್ರಾಂಡಿ ವ್ಹಿಸ್ಕಿ ಸೀಸೆಗಳ ಕ್ರಯವು ಹೆಚ್ಚಿತು. ಆದರೂ ರೋಗವು ಶಾಂತವಾಗಲಿಲ್ಲ.

ಕೆಲವರು ಈತನನ್ನು ಹುಚ್ಚನೆಂದು ನೋಡುತ್ತಲೇ ಹೇಳುತ್ತಿದ್ದರು. ‘ಹುಚ್ಚು ಹೌದು. ಕಂಡವರ ಮೇಲೆ ಕಲ್ಲಿಡುವ ಹುಚ್ಚಲ್ಲ.’ ತ್ರಿದಶ ವರ್ಷಗಳವರೆಗೆ ಧನ ಬಲವಿಲ್ಲದೆ ಕಠೋರ ಬ್ರಹ್ಮಚರ್ಯವ್ರತವನ್ನು ಅವಲಂಬಿಸಿದ ಮಹಾತ್ಮನಿಗೆ ಯಾವ ಬುದ್ಧಿವಿಕಲತೆಯು ಉಂಟಾಗಬಹುದೋ ಆ ಹುಚ್ಚು ಇವನನ್ನು ಹಿಡಿದಿತ್ತು.

ಆಫೀಸಿನಲ್ಲಿ ನಾನು ಸ್ವಲ್ಪ ಕೆಲಸಮಾಡಿದ ಬಳಿಕ ಫಲಾಹಾರಕ್ಕೋಸ್ಕರ ಮುದ್ದಣ್ಣನ ಹಾದಿಯನ್ನು ಎದುರ್ನೋಡುತಿದ್ದೆನು. ಕೂಡಲೆ ಮುದ್ದಣ್ಣನು ಎಂದಿಗಿಂತ ಮುಂಚೆಯೇ ಬಂದನು; ನನ್ನ ಬೀರುವಿನ ಬೀಗದ ಕೈಯನ್ನು ಮನೆಯಲ್ಲಿ ತರಹೇಳಿದರೆಂದು ಹೇಳಿ, ಹೋಗುವಾಗ ಅದನ್ನು ಕೊಂಡುಹೋದನು. ಆ ದಿನ ಬೇಗನೆ ಹೋಗುವುದಕ್ಕೆ ಅವಕಾಶವಿದ್ದುದರಿಂದ, ನಾನು 7 ಗಂಟೆಗೆ ‘ಆಫೀಸ್’ ಬಿಟ್ಟು ಮನೆಯ ಹಾದಿಯನ್ನು ಹಿಡಿದೆನು. ದಾರಿಯಲ್ಲಿ ನೂತನವಾದ ವರ್ತಮಾನವನ್ನು ಕೇಳಿ ನನ್ನ ತಲೆ ಕೆಳಗಾಯಿತು. ನನ್ನ ಚಿಕ್ಕತಂದೆಯವರು ಅಕಸ್ಮಾತ್ತಾಗಿ ಪ್ರಾಣಾಂತ ಸ್ಥಿತಿಯಲ್ಲಿರುವರೆಂದೂ, ಅವರ ಜೀವಂತ ಶವವನ್ನು ‘ಪೋಲೀಸಿನವರು’ ‘ಆಸ್ಪತ್ರೆಗೆ’ ಒಯ್ದಿರುವರೆಂದೂ ಕೇಳಿ ನನ್ನ ಹೃದಯವು ತಳಮಳಗೊಂಡಿತು. ನಾನು ನಿಂತಲ್ಲಿ ನಿಲ್ಲದೆ ಓಡತೊಡಗಿದೆನು.

ನಾನು ‘ಆಸ್ಪತ್ರೆಯನ್ನು’ ಸೇರುವುದಕ್ಕೆ ವಿಳಂಬವಾಗಲಿಲ್ಲ. ನಮ್ಮ ಚಿಕ್ಕತಂದೆಯವರು ಮಂಚದ ಮೇಲೆ ಮಲಗಿದ್ದರು ಅಥವಾ ಮಲಗಿಸಲ್ಪಟ್ಟಿದ್ದರು. ‘ಡಾಕ್ಟರರು’ ಬಳಿಯಲ್ಲಿ ನಿಂತು, ಔಷಧದ ದರ್ವಿಯನ್ನು ಅವರ ಹಲ್ಲುಗಳ ನಡುವೆ ತುರುಕುತ್ತಿದ್ದರು. ಚಿಕ್ಕತಂದೆಯವರು ಅವರ ಮೇಲೆ ಕೋಪದಿಂದಲೊ ಎಂಬಂತೆ ಕಣ್ಮುಚ್ಚಿ ಹಲ್ಲು ಮಸೆಯುತ್ತಿದ್ದರು. ಚಿಕ್ಕತಂದೆಯವರಿಗೆ ಪ್ರಜ್ಞೆ ತಪ್ಪಿ ಹೋಗಿದ್ದಿತು; ನಾಲಗೆ ಬಿದ್ದುಹೋಗಿದ್ದಿತು; ಶ್ವಾಸ ಮಾತ್ರ ಮೆಲ್ಲಮೆಲ್ಲನೆ ಹೊರಬರುತ್ತ ಒಳಹೋಗುತ್ತ ಆಡುತಿದ್ದಿತು. ಅವರ ಅಂತ್ಯಸ್ಥಿತಿಯನ್ನು ನೋಡುವುದಕ್ಕೆ ಹಲವು ಜನರು ಅಲ್ಲಿ ನೆರೆದಿದ್ದರು. ಪುರೋಹಿತನೂ ಪೋಲೀಸಿನವನೂ ಎಲ್ಲರಿಗಿಂತಲೂ ಮುಂದೆ ನಿಂತಿದ್ದರು. ಎಲ್ಲಾದರೂ ಅಕಸ್ಮಾತ್ ಮರಣ ಉಂಟಾದರೆ, ಉಳಿದವರಿಗೆ ಮರಣದೋಷವು ತಗಲದಂತೆ ಮಾಡುವ ಸದುದ್ದೇಶವಿದ್ದ ಈ ಇಬ್ಬರು ಪುಣ್ಯಾತ್ಮರು ನಮ್ಮ ಚಿಕ್ಕತಂದೆಯವರ ಅವಸ್ಥೆಯನ್ನು ಕುರಿತು ಕ್ಷಣೇಕ್ಷಣೇ ವಿಚಾರಿಸುತಿದ್ದರು.

ಸ್ವಲ್ಪ ಹೊತ್ತಿನ ಮೇಲೆ ಪ್ರಾಣವಾಯುವು ಸುಳಿವುದೋ ಎಂದು ಪರೀಕ್ಷಿಸುವುದಕ್ಕೆ ಕನ್ನಡಿಯನ್ನು ಅವರ ಮುಖದ ಇದಿರಿಗೆ ಹಿಡಿದರು. ಅದರ ಬದಲಾಗಿ ರೂಪಾಯಿಯ ಗೊಂಬೆಯನ್ನು ಮೂಗಿನ ಸೊಳ್ಳೆಗೆ ಒರಸಿದರೆ ಸರಿಯಾಗಬಹುದೆಂದು ಅಲ್ಲಿದ್ದವರಲ್ಲಿ ಯಾರೋ ಒಬ್ಬರು ಸೂಚಿಸಿದರು. ‘ಡಾಕ್ಟರರು’ ಮತ್ತೊಮ್ಮೆ ರೋಗಿಯ ನಾಡಿಯನ್ನು ಹಿಡಿದು, ಔಷಧವನ್ನು ಕೊಡಲು ಮನಸ್ಸು ಮಾಡಿ ‘ಆಸ್ಪತ್ರೆಯ’ ಆಳಿನೊಡನೆ ‘ಪೆಟ್ಟಿಗೆಯನ್ನು ಕೊಂಡು ಬಾ!’ ಎಂದು ಆಜ್ಞೆ ಮಾಡಿದರು. ‘ಕ್ರಿಶ್ಚನ್ ಡಾಕ್ಟರನು’ ಈ ಮಾತು ಹೇಳುತ್ತಲೇ ಪುರೋಹಿತನು ತವಕಗೊಂಡನು; ಮತ್ತು ನನ್ನೆಡೆಗೆ ಬಂದು “ಡಾಕ್ಟರನು ಕಟ್ಟಿಗೆ ಎನ್ನುವ ಬದಲಾಗಿ ಪೆಟ್ಟಿಗೆ ಎಂದು ಹೇಳಿದನೋ ನೋಡಿಕೊಳ್ಳು” ಎಂದು ನನ್ನನ್ನು ಎಚ್ಚರಗೊಳಿಸಿದನು. ಆದರೆ ಅಷ್ಟರಲ್ಲಿ ‘ಪೋಲೀಸ್ ಜಮಾದಾರನು’ ಬಂದು ನನ್ನೊಡನೆ ಮಾತನಾಡುತ್ತಿದ್ದುದರಿಂದ ಪುರೋಹಿತನ ಹಿತೋಕ್ತಿಯನ್ನು ನಾನು ಕಿವಿಗೆ ಹಾಕಿಕೊಳ್ಳಲಿಲ್ಲ.

ಜಮಾದಾರನು ನನ್ನೊಡನೆ “ನಿಮ್ಮ ಚಿಕ್ಕಪ್ಪನವರು ಬದುಕುವ ಸಂಭವ ತೋರುವುದಿಲ್ಲ. ಅಕಸ್ಮಾತ್ತಾಗಿ ನಡೆದಿರುವ ಈ ಸಂಗತಿಯನ್ನು ಕುರಿತು ನಿಮ್ಮೊಡನೆ ವಿಚಾರಿಸಬೇಕೆಂದಿರುವೆವು” ಎಂದನು. ನಾನು ಅದಕ್ಕೆ ಒಪ್ಪಿಕೊಂಡು ವಿಚಾರಣೆಗೆ ಸಿದ್ಧನಾಗಿ ನಿಂತೆನು. ಜಮಾದಾರನು ಚಿಕ್ಕತಂದೆಯವರ ಹೆಸರು, ಪ್ರಾಯ, ವೃತ್ತಿ ಮೊದಲಾದುವನ್ನು ಕೇಳಿಕೊಂಡು, ಕಾಗದದಲ್ಲಿ ಅದನ್ನು ಬರೆದುಕೊಂಡನು.

ಜಮಾದಾರ – ನಿಮ್ಮ ಚಿಕ್ಕತಂದೆಯವರನ್ನು ನೀವು ಈ ದಿನ ಎಷ್ಟು ಹೊತ್ತಿಗೆ ನೋಡಿದಿರಿ?
ನಾನು – ಅವರು ಈ ದಿನ 12 ಗಂಟೆಗೆ ಆರೋಗ್ಯವಂತರಾಗಿದ್ದರು.
ಜಮಾದಾರ – ಅಕಸ್ಮಾತ್ತಾಗಿ ಹೀಗಾಗಲು ನಿಮಗೆ ಏನಾದರೂ ಕಾರಣ ತೋರುವುದೇ?
ನಾನು – ಇಲ್ಲ.
ಜಮಾದಾರ – ಅವರಿಗೂ ನಿಮಗೂ ಪರಸ್ಪರ ವಿರೋಧ ಭಾವವಿದ್ದಿತೇ?
ನಾನು – ಇಲ್ಲ.
ಜಮಾದಾರ – ಈ ದಿನ ಉಣ್ಣದೆ ನೀವು ಆಫೀಸಿಗೆ ಹೋಗಲು ಕಾರಣವೇನು?

ಈ ಸಂಗತಿಯು ಜಮಾದಾರನಿಗೆ ಹೇಗೆ ತಿಳಿಯಿತೆಂದು ನಾನು ಆಶ್ಚರ್ಯಪಟ್ಟು ಒಂದು ನಿಮಿಷ ಮಾತಿಲ್ಲದವನಾದೆನು. ಆಫೀಸಿಗೆ ಹೋಗುವುದಕ್ಕೆ ವಿಳಂಬವಾದುದರಿಂದ ನಾನು ಉಂಡಂತೆ ಮಾಡಿ ಹೊರಟು ಹೋದೆನೆಂದು ಹೇಳಿದೆನು.

ಜಮಾದಾರ – ನಿಮ್ಮ ಮನೆಯ ವಿಷಯದಲ್ಲಿ ನಿಮಗೂ ಅವರಿಗೂ ಮಾತು ನಡೆಯುತ್ತಿದ್ದಿತೇ?
ನಾನು – ಹೌದು. ಆ ಮಾತುಗಳು ವಿನೋದದಿಂದ ಅಲ್ಲದೆ ವಿರೋಧದಿಂದ ನಡೆಯುತ್ತಿರಲಿಲ್ಲ.
ಜಮಾದಾರ – ಅವರೊಡನೆ ಸ್ವಲ್ಪ ಹಣವುಂಟೆಂದು ಸುದ್ದಿ ಇದೆ. ಇದು ನಿಜವೇ?
ನಾನು – ಅದನ್ನು ನಾನರಿಯೆ. ಅವರು ಬಂದಂದಿನಿಂದ ಮನೆಯ ವೆಚ್ಚದ ವಿಷಯದಲ್ಲಿ ಒಂದು ಚಿಕ್ಕಾಸೂ ಕೂಡ ಕೊಡದಿದ್ದುದರಿಂದ, ಅವರೊಡನೆ ಹಣವುಂಟು ಎಂದು ಹೇಳಲು ನನಗೆ ಸಂಶಯವಿದೆ.

ಜಮಾದಾರ – ನಿಮ್ಮ ಚಿಕ್ಕತಂದೆಯವರಿಗೂ ಹಳೆಯ ಪೇಟೆ ಶ್ಯಾಮರಾಯರಿಗೂ ದ್ವೇಷವಿದ್ದಿತೇ?
ನಾನು – ಶ್ಯಾಮರಾಯರನ್ನು ಕುರಿತು ಅವರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ.
ಜಮಾದಾರ – ಯಾವ ಕಾರಣದಿಂದ?

ನಾನು – ಚಿಕ್ಕತಂದೆಯವರು ಚಿಕ್ಕದೊಂದು ಹುಡುಗಿಯನ್ನು ಅಂತರಂಗದಿಂದ ಮದುವೆಮಾಡಿಕೊಳ್ಳಲಿಕ್ಕೆ ಎಲ್ಲವನ್ನು ಒದಗಿಸಿದ್ದರು. ಆಗ ಸಮಾಜ ಸುಧಾರಕರಾದ ಶ್ಯಾಮರಾಯರು ಈ ವಿವಾಹ ವಿಷಯವಾಗಿ ‘ಎಪ್ಪತ್ತು ವರ್ಷದ ಮುದುಕ ಇಪ್ಪತ್ತು ದಿವಸ ಬದುಕ’; ‘ಹೆಣ್ಣಿಗೆ ಮನೆಯಾಯಿತು, ಗಂಡಗೆ ಮಸಣವಾಯಿತು’; ‘ಮುಪ್ಪಯ್ಯನ ಮದುವೆಯಲ್ಲಿ ಕಪ್ಪಯ್ಯನ ಮರಣ’; ಮೊದಲಾದ ಮಾತುಗಳನ್ನು ಕಂಡವರೊಡನೆ ಹೇಳಿ, ಆ ಮದುವೆ ನಡೆಯಕೂಡದೆಂದು ಮಾಡಿದರಂತೆ.

ಜಮಾದಾರ – ನಿಮ್ಮ ಚಿಕ್ಕತಂದೆಯವರಿಗೆ ‘ಅಫೀಮು’ ತಿನ್ನುವ ಅಭ್ಯಾಸವಿದ್ದಿತೇ?
ನಾನು – ನಾನರಿಯೆ; ಬಹುಶಃ ಇಲ್ಲವೆಂದು ಹೇಳಬಹುದು. ಕ್ರಯಕ್ಕೆ ಕೊಂಡು ಅದನ್ನು ಸೇವಿಸುವ ದುರಭ್ಯಾಸವಿರಲಿಲ್ಲ.
ಜಮಾದಾರ – ನೀವು ಅದನ್ನು ಸೇವಿಸುವಿರೇ?
ನಾನು – ಇಲ್ಲ.
ಜಮಾದಾರ – ಹಾಗಾದರೆ ಈ ಅಫೀಮಿನ ಸೀಸೆ ನಿಮ್ಮದೇ?

ಹೀಗೆಂದು ಜಮಾದಾರನು ಒಂದು ಸೀಸೆಯನ್ನು ಎತ್ತಿ ತೆಗೆದು ನನ್ನ ಕೈಗೆ ಕೊಟ್ಟನು. ನಾನು ತಲೆ ಅಪ್ಪಳಿಸಿದಂತಾಗಿ, ಸೀಸೆಯನ್ನು ಹಿಡಿದು ನೋಡುವಂತೆ ಸ್ವಲ್ಪ ಹೊತ್ತು ನಿರುತ್ತರನಾದೆನು. ಉಪಾಯವಿಲ್ಲದವನಾಗಿ ಅದು ನನ್ನದೆಂದು ನಾನು ಒಪ್ಪಿದೆನು.

ಜಮಾದಾರ – ಅಫೀಮನ್ನು ನೀವು ಇಟ್ಟುಕೊಂಡುದೇಕೆ?

ನಾನು – ಊರಲ್ಲಿ ವಾಂತಿ ಭೇದಿ ಇದ್ದುದರಿಂದ ತತ್ಕ್ಷಣದ ಪರಿಹಾರಾರ್ಥವಾಗಿ ಅದನ್ನು ಮೊದಲೇ ತಂದು ಇಟ್ಟುಕೊಂಡಿದ್ದೆನು.

ಜಮಾದಾರನ ಮಾತುಗಳು ಇನ್ನೂ ಬಲವಾಗುತ್ತ ಬಂದುವು. ಇದರ ಪರಿಣಾಮವು ಏನಾಗುವುದೆಂದು ತಿಳಿಯುವುದಕ್ಕೆ ನನ್ನ ಮನಸ್ಸಿನಲ್ಲಿ ಕಳವಳವೂ ಭ್ರಾಂತಿಯೂ ಉಂಟಾದುವು.

ಜಮಾದಾರ – ನೀವು ನಿಮ್ಮ ಅಡಿಗೆಭಟ್ಟನನ್ನು ಎಲ್ಲಿಗೆ ಕಳುಹಿಸಿರುವಿರಿ?
ನಾನು – ಮುದ್ದಣ್ಣನು ಫಲಾಹಾರ ಕೊಂಡುಬಂದು, ಹಿಂತಿರುಗಿದ ಮೇಲೆ ನಾನು ಅವನನ್ನು ನೋಡಲಿಲ್ಲ.
ಜಮಾದಾರ – ಆಫೀಸಿಗೆ ಬಂದವನು ನಿಮ್ಮೊಡನೆ ಏನನ್ನಾದರೂ ಹೇಳಲಿಲ್ಲವೇ?
ನಾನು – ಈ ವಿಷಯವನ್ನು ಕುರಿತು ಅವನು ಹೇಳಲಿಲ್ಲ. ಬೀರುವಿನ ಬೀಗದ ಕೈ ತರಹೇಳಿದರೆಂದು, ನನ್ನಿಂದ ಅದನ್ನು ಕೊಂಡುಹೋದನು.
ಜಮಾದಾರ – ಅಫೀಮಿನ ಸೀಸೆಯು ಬೀರುವಿನೊಳಗೆ ಇದ್ದಿತೇ?
ನಾನು – ಹೌದು.
ಜಮಾದಾರ – ಮುದ್ದಣ್ಣನು ಈಗ ಎಲ್ಲಿಗೆ ಹೋಗಿರುವನು?
ನಾನು – ಅವನು ಮನೆಯಲ್ಲಿ ರಾತ್ರಿ ಮಲಗುವ ಪದ್ಧತಿ ಇಲ್ಲ.

ವಿಚಾರಣೆ ಆದ ಬಳಿಕ ಜಮಾದಾರನು ಪುನಃ ಚಿಕ್ಕತಂದೆಯವರನ್ನು ನೋಡುವುದಕ್ಕೆ ಹೋದನು. ಚಿಕ್ಕತಂದೆಯವರು ಕಣ್ಣು ಬಿಟ್ಟಿದ್ದರು; ಮಾತನಾಡುವುದಕ್ಕೆ ಪ್ರಯತ್ನಿಸುವಂತೆ ತುಟಿ ಅಲ್ಲಾಡಿಸುತ್ತಿದ್ದರು; ಏನನ್ನೋ ಹುಡುಕುವಂತೆ ತಲೆದಿಂಬಿನ ಬಳಿಯಲ್ಲಿ ಕೈಬೆರಳನ್ನು ಸವರುತ್ತಿದ್ದರು. ದೂರಲೋಕಕ್ಕೆ ಪ್ರಯಾಣ ಮಾಡುವಷ್ಟು ಶಕ್ತಿಯಿಲ್ಲದುದರಿಂದ ಇಲ್ಲಿಯೇ ಉಳಿಯುವ ಸ್ಥಿತಿಯನ್ನು ತೋರಿಸಿದರು.

ಮೆಲ್ಲಮೆಲ್ಲನೆ ಒಂದೊಂದೇ ಮಾತು ಬಾಯಿಂದ ಹರಿಯುತ್ತ ಬಂತು. ಮೊದಲು ಮೊದಲು ಉಚ್ಚರಿಸಿದ ಅಕ್ಷರಗಳು ಸ್ಪಷ್ಟವಾಗಿ ಕೇಳಿಸಲಿಲ್ಲ. ಬ-ದು-ಕ – ಎಂಬೀ ಅಕ್ಷರಗಳು ಹೊರಟುವು. ಬದುಕಲಾರೆನೆಂದು ಹೇಳುವರೊ ಬದುಕುತ್ತಾರೆ ಎಂದು ಹೇಳುವರೊ ಎಂದು ತಿಳಿಯಲಿಕ್ಕೆ ಕಷ್ಟವಾಯಿತು. ಪುನಃ ಕಣ್ಮುಚ್ಚಿದರು; ಸ್ತಬ್ಧರಾದರು, ಜಮಾದಾರನು ಪಕ್ಕದಲ್ಲಿಯೇ ನಿಂತಿದ್ದನು. ಸ್ವಲ್ಪ ಹೊತ್ತಿನ ಮೇಲೆ ಮು-ಧ-ಣ ಎಂದು ಬಾಯಿಂದ ಉಸುರು ಹೊರಟಿತು.

ಜಮಾದಾರನು ಮುದ್ದಣ್ಣನ ಹೆಸರನ್ನು ಕಾಗದದಲ್ಲಿ ಬರೆದುಕೊಂಡನು. ಮುದ್ದು ಹಣ ಎಂದು ಬರೆಯಬೇಕಾಗಿ ಮತ್ತೊಬ್ಬ ಪೋಲೀಸಿನವನು ಆಗತಾನೇ ಸೂಚಿಸಿದನು. ಅಷ್ಟರಲ್ಲಿ ‘ಡಾಕ್ಟರರು’ ಸಮೀಪಕ್ಕೆ ಬಂದು ರೋಗಿಯನ್ನು ಆಗತಾನೆ ಮಾತನಾಡಿಸಿದರೆ, ಸ್ಥಿತಿಯು ಕೆಟ್ಟು ಹೋಗುವುದೆಂದು ಹೇಳಿ, ಚಿಕ್ಕತಂದೆಯವರ ಅಂತ್ಯೋಕ್ತಿಗಳನ್ನು ನಾವು ಕೇಳದಂತೆ ಮಾಡಿಬಿಟ್ಟರು. ಕೂಡಲೇ ಜಮಾದಾರನು ನನ್ನ ಬಳಿಗೆ ಬಂದು “ಈ ಅಕಸ್ಮಾತ್ತಾದ ವಿಷಯದಲ್ಲಿ ನಿಮ್ಮ ಮೇಲೆ ಸಂಶಯವಿರುವುದರಿಂದ ನಿಮ್ಮನ್ನು ‘ಕೈದು’ ಮಾಡಿರುವೆನು” ಎಂದು ನಿರ್ದಯೆಯಿಂದ ಹೇಳಿದನು.

ತನ್ನ ತಲೆಯ ಮೇಲೆ ಸಿಡಿಲು ಬಿದ್ದಂತಾಯಿತು. ನಾಲಗೆಯ ಬಾಯಲ್ಲಿ ಬಿಗಿದುಕಟ್ಟಿದಂತಾಯಿತು. ಹಕ್ಕಿಗಳು ಬಾರದಂತೆ ಗದ್ದೆಯಲ್ಲಿಡುವ ಬೆರ್ಚಪ್ಪನ ಹಾಗೆ ನಾನು ಮಾತಿಲ್ಲದವನಾಗಿ ನಿಂತುಬಿಟ್ಟೆನು. ಚಿಕ್ಕ ತಂದೆಯವರ ಅಂದಿನ ಅವಸ್ಥೆಯೇ ಲೇಸೆಂದು ನನಗೆ ಆಗ ತೋರಿಬಂದಿತು. ನನ್ನನ್ನು ‘ಸ್ಟೇಶನಿಗೆ’ ಕೊಂಡು ಹೋಗುವುದಕ್ಕೆ ಜಮಾದಾರನು ಅಪ್ಪಣೆ ಕೊಟ್ಟನು. ನನ್ನನ್ನು ಅಲ್ಲಿಗೆ ಕೊಂಡೊಯ್ದರು.

ಮರುದಿನ ಬೆಳಗ್ಗೆ ‘ಸ್ಟೇಶನಿನಲ್ಲಿ’ ಅನೇಕರು ಬಂದು ನೆರೆದರು. ‘ಪೋಲೀಸಿನವರು’ ಮುದ್ದಣ್ಣನನ್ನು ಹಿಡಿದು ತಂದು ವಿಚಾರಿಸಿದರು. ಚಿಕ್ಕತಂದೆಯವರಿಗೆ ‘ಅಫೀಮು’ ತಿನ್ನುವ ಅಭ್ಯಾಸವಿದ್ದಿತೆಂದು ಅವನು ಒಪ್ಪಿದನು. ಹಾಗೂ ದಿನಂಪ್ರತಿ ಅದನ್ನು ಎಲ್ಲಿಂದಲಾದರೂ ಸಂಪಾದಿಸಿಕೊಂಡು ತಾನು ಚಿಕ್ಕತಂದೆಯವರಿಗೆ ಕೊಡುತ್ತಿದ್ದೆನು ಎಂದು ಮುದ್ದಣ್ಣನು ಹೇಳಿದನು. ಅದೂ ಅಲ್ಲದೆ ‘ಕೊಲೆರಾ’ ರೋಗದ ಶಮನಾರ್ಥವಾಗಿ ನಾನು ತಂದಿಟ್ಟ ಸೀಸೆಯ ಸಂಗತಿಯು ಚಿಕ್ಕತಂದೆಯವರಿಗೆ ಗೊತ್ತಿದ್ದಿತೆಂದೂ, ಅವರ ಮಾತಿನಂತೆ ಬೀಗದ ಕೈಯನ್ನು ನನ್ನಿಂದ ಕೊಂಡುಹೋಗಿ, ಸೀಸೆಯನ್ನು ಅವರ ಕೈಗೆ ಕೊಟ್ಟಿದ್ದೆನೆಂದೂ ಮುದ್ದಣ್ಣನು ಹೇಳಿಕೆ ಕೊಟ್ಟನು.

ಸ್ವಲ್ಪ ಹೊತ್ತಿನ ಮೇಲೆ ಚಿಕ್ಕತಂದೆಯವರು ಮರಣಾವಸ್ಥೆಯನ್ನು ಬಿಟ್ಟು ನಿದ್ರಾವಸ್ಥೆಗೂ ಜಾಗೃತಾವಸ್ಥೆಗೂ ಬಂದು ಎಚ್ಚರವಾಗಿ ಅವರ ಹೇಳಿಕೆಯ ಪ್ರಕಾರ ‘ಅಫೀಮನ್ನು’ ದೇಹದ ಅಂದಿನ ಅಜೀರ್ಣ ಪರಿಹಾರಾರ್ಥವಾಗಿ ತಾನೇ ತಿಳಿಯದೆ ಸ್ವಲ್ಪ ಹೆಚ್ಚು ತಿಂದುಬಿಟ್ಟಿದ್ದರೆಂದು ಚಿಕ್ಕತಂದೆಯವರು ಕೊಟ್ಟ ವಾಙ್ಮೂಲದ ಮೇಲೆ ನನಗೆ ಬಿಡುಗಡೆಯಾಯಿತು.

ಟಿಪ್ಪಣಿ:
ಪಂಜೆ ಮಂಗೇಶರಾಯರ ನಾಲ್ಕು ಕತೆಗಳ ಗುಚ್ಛದ ಮೂರನೆಯ ಕತೆ ಇದು. ಇದರಲ್ಲಿಯೂ ಪೋಲೀಸ್ ಇಲಾಖೆಯು ಸ್ಥಳೀಯರ ಸಂಪತ್ತಿನ ಮೇಲೆ, ಅದರ ವರ್ಗಾವಣೆಯ ಮೇಲೆ ವಹಿಸುತ್ತಿದ್ದ ಜಾಗರೂಕತೆಯ ಸೂಚನೆಯಿದೆ. ಜನರ ಉಪಕಾರಕ್ಕಾಗಿ ಇಂತಹ ನಿಗಾ ಇರಲಾರದು; ಉತ್ತರಾಧಿಕಾರದ ಪ್ರಶ್ನೆ ಸಂಶಯಾಸ್ಪದವಾಗಿದ್ದಾಗ ಆಸ್ತಿಯನ್ನು ಅಥವಾ ಸಂಪತ್ತನ್ನು ಮುಟ್ಟುಗೋಲು ಹಾಕಲು ಬ್ರಿಟಿಷ್ ಆಡಳಿತ ವಹಿಸುತ್ತಿದ್ದ ಎಚ್ಚರಿಕೆ ಇದು.
ಈ ಸರಣಿಯ ಕೊನೆಯ ಕತೆಯಲ್ಲಿ (ಮುಂದಿನ ಕತೆ) ಈ ಕುಟುಂಬದ ಸಂಪತ್ತಿನ ವ್ಯವಹಾರ ಹೇಗೆ ಮುಕ್ತಾಯವಾಯಿತು ಎನ್ನುವುದರ ವರ್ಣನೆಯಿದೆ.