ನಾವು ಶಾಲೆಯಲ್ಲಿ ಕಲಿತ ಹಾಗೆ ಇಲ್ಲಿ ತೇಲಿ ಬರುವ ಮೋಡಗಳು ಪರ್ವತಶ್ರೇಣಿಗಳಿಗೆ ಡಿಕ್ಕಿ ಹೊಡೆದು ಮಳೆಯಾಗಿ ಸುರಿಯುವುದಿಲ್ಲ, ಬದಲಾಗಿ ತಮ್ಮ ಭಾರಕ್ಕೆ ತಾವೇ ನಲುಗಿ ದೊಪ್ಪನೆ ತಪ್ಪಲೆಯೊಳಗಿನ ನೀರಂತೆ ಸುರಿದು ತಾವು ಇದುವರೆಗೆ ಇರಲೇ ಇಲ್ಲವೇನೋ ಎಂಬ ಹಾಗೆ ಮಾಯವಾಗಿರುತ್ತದೆ. ದ್ವೀಪದ ಒಳಗೂ ಹಾಗೇ. ಬಿಸಿಲಲ್ಲಿ ಬೆಳಗುತ್ತಿದ್ದ ಆಕಾಶವೇನಾದರೂ ಮಂಕಾಗಿದ್ದರೆ ಮನೆಯಿಂದ ಹೊರಬಂದು ಆಕಾಶಕ್ಕೆ ತಲೆ ಎತ್ತಿದರೆ ಕಪ್ಪಗಿನ ಮೇಘವೊಂದು ಕರಿಯ ಬೆಕ್ಕಿನ ಹಾಗೆ ಮೇಲಿನ ಮೂಲೆಯೊಂದರಿಂದ ನಿಮ್ಮನ್ನು ನೋಡುತ್ತಿರುತ್ತದೆ.
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಆರನೆಯ ಕಂತು

 

ನಿನ್ನೆಯ ಮಿನಿಕಾಯ್ ಸರಣಿಯಲ್ಲಿ ಇಬ್ನ್ ಬತೂತನ ಎರಡು ವಿವಾಹಗಳ ಕುರಿತು ಓದಿದ ಗೆಳೆಯ ‘ನಿನಗೂ ಮನಸು ಆ ಕಡೆ ಕೊಂಚ ವಾಲಲಿಲ್ಲವೇ’ ಎಂದು ಕೇಳಿದರು. ಅದೆಲ್ಲಿಂದ ನೆನಪಾಯಿತೋ ಗೊತ್ತಿಲ್ಲ, ಸುಮಾರು ಮೂರು ದಶಕಗಳಿಗಿಂತಲೂ ಹಿಂದೆ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾಗ ಓದಿಕೊಂಡಿದ್ದ ಟಿ ಎಸ್ ಎಲಿಯಟ್ಟನ ಕವಿತೆಯೊಂದರ ಎಪಿಗ್ರಾಪನ್ನು ಆತನಿಗೇ ತಿರುಗಿ ಉರು ಹೊಡೆದೆ. ಎಲಿಯಟ್ ತನ್ನ ಕವಿತೆಯಲ್ಲಿ ರಾಣಿ ಎಲಿಜಬೆತಳ ಕಾಲದ ಹೆಸರಾಂತ ನಾಟಕಕಾರ ಕ್ರಿಸ್ಟೋಫರ್ ಮಾರ್ಲೋನ ನಾಟಕದ ಸಾಲೊಂದನ್ನು ಹಣೆಬರಹವಾಗಿ ಬಳಸಿಕೊಳ್ಳುತ್ತಾನೆ. “Thou hast committed – / Fornication: but that was in another country, / And besides, the wench is dead.” ಆ ನಾಟಕದಲ್ಲಿ ಒಬ್ಬಾತ ಇನ್ನೊಬ್ಬನನ್ನು ಹಾದರ ಮಾಡಿರುವುದಾಗಿ ಆರೋಪಿಸುತ್ತಾನೆ. ಆರೋಪಿಸಿಕೊಂಡಾತ, ‘ಹಾದರ ಮಾಡಿರುವುದು ಹೌದು’ ಎಂದು ಒಪ್ಪಿಕೊಳ್ಳುತ್ತಾನೆ. ಆದರೆ ಅದಕ್ಕೆ ಒಂದು ಷರಾ ಸೇರಿಸುತ್ತಾನೆ. ‘ಆದರೆ ಅದು ಇನ್ನೊಂದು ದೇಶದಲ್ಲಾಗಿತ್ತು/ಅದೂ ಅಲ್ಲದೆ ಆ ಹಾದರಗಿತ್ತಿಯೂ ಈಗ ಬದುಕಿಲ್ಲ. ಯೌವನದ ದಿನಗಳಲ್ಲಿ ನಾವು ಎಲಿಯಟ್ಟನ ಕವಿತೆಗಿಂತ, ಕವಿತೆಯ ಮೇಲ್ಗಡೆ ಬಲ ತುದಿಯಲ್ಲಿದ್ದ ಈ ನಾಟಕೀಯ ಸಾಲುಗಳನ್ನು ಹೆಚ್ಚು ಇಷ್ಟ ಪಟ್ಟಿದ್ದೆವು ಮತ್ತು ಆಕಾಲದಲ್ಲಿ ಅದು ಕವಿತೆಗಿಂತ ಹೆಚ್ಚು ಸಮಂಜಸವಾಗಿದ್ದವು.


ಕಣ್ಣಿಗೆ ಕಂಡ ಸುಂದರಿಯರೆಲ್ಲರೂ ನಮ್ಮವರಾಗಬೇಕೆಂಬ ಬಯಕೆ. ಆದರೆ ಈಗ ಸುಂದರಿಯರು ಎಂದರೆ ಬಯಕೆಗಿಂತ ಭಯವೇ ಹೆಚ್ಚು ಎಂಬುದು ನನ್ನ ನಂಬಿಕೆ ಎಂದು ಆತನಿಗೆ ತಿಳಿಸುವುದು ನನ್ನ ಉದ್ದೇಶವಾಗಿತ್ತು. ಅದೂ ಅಲ್ಲದೆ ಎಲ್ಲವನ್ನೂ ಒಪ್ಪಿಕೊಳ್ಳುವ ವೀರಾವೇಶದ ಸಮಯವೂ ಇದಲ್ಲವಲ್ಲ.

ಈ ನಡುವೆ ಮಿನಿಕಾಯ್ ನಿಂದ ಹಾಡು ಹೇಳಲು ಬಂದ ಡೋಲುವಾದಕ ಮಿತ್ರನ ಜಂಜಡಗಳೂ ಹೆಚ್ಚಾಗಿತ್ತು. ರಂಜಾನ್ ಉಪವಾಸದ ಸಮಯದ ಆಹಾರದ ಹೊಂದಾಣಿಕೆಯಿಂದಾಗಿ ಆತನಿಗೆ ವಾಯುಪ್ರಕೋಪದ ಸಮಸ್ಯೆಗಳು ಕಾಣಿಸಿಕೊಂಡು ಆತ ಇಲ್ಲಿರುವ ಸರಕಾರೀ ಆಸ್ಪತ್ರೆಯೊಂದಕ್ಕೆ ತೆರಳಿದರೆ ಆತನ ಗುರುತಿನ ಚೀಟಿಯೂ ಆಧಾರದ ಪತ್ರಗಳೂ ಇಲ್ಲದೆ ರೋಗಿಯಾಗಿ ನೋಂದಾವಣೆ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಉತ್ತರ ಬಂತು. ಮಧ್ಯಪ್ರವೇಶಿಸಿ ಆತನ ದ್ವೀಪಕ್ಕೆ ದೂರವಾಣಿ ಮಾಡಿ ಅಲ್ಲಿನ ವೈದ್ಯರೊಂದಿಗೆ ಇಲ್ಲಿನ ವೈದ್ಯರ ಸಂಪರ್ಕ ಕಲ್ಪಿಸಿ ಚಿಕಿತ್ಸೆ ಕೊಡಿಸಿದ್ದೂ ಆಯಿತು. ಈಗ ಆತನಿಗೆ ತನ್ನ ದ್ವೀಪಕ್ಕೆ ಮರಳಬೇಕೆನಿಸಿದೆ. ಆದರೆ ಹತ್ತಿರದ ದಿನಗಳಲ್ಲಿ ಎಲ್ಲೂ ಹಡಗಿನ ವೇಳಾ ಪಟ್ಟಿಯಿಲ್ಲ. ಅದೂ ಅಲ್ಲದೆ ಕೊರೋನಾ ಕಾರಣಗಳಿಂದಾಗಿ ದ್ವೀಪಗಳಿಂದ ದ್ವೀಪಕ್ಕೆ ಸಂಚಾರ ನಿರ್ಬಂಧಗಳನ್ನೂ ಹೇರಲಾಗಿದೆ.

(ಫೋಟೋಗಳು: ಅಬ್ದುಲ್‌ ರಶೀದ್)

ಮದುವೆಯಾಗಿ ವಿಚ್ಚೇದಿತಳಾಗಿದ್ದ ಪತ್ನಿಯ ಮರುಮದುವೆಯ ಕೋರಿಕೆಯಿಂದಾಗಿ ರೋಸಿ ಹೋಗಿ ಇಲ್ಲಿಗೆ ಬಂದಿರುವ ಆತನಿಗೆ ಈಗ ಅಲ್ಲೇ ಇದ್ದಿದ್ದರೆ ಇದಕ್ಕಿಂತ ಸುಖವಾಗಿರುತ್ತಿತ್ತು ಎಂದು ಅನಿಸತೊಡಗಿದೆ. ಆದರೆ ಅನಿಸಿದಾಗ ತಿರುಗಿ ಹೊರಡುವುದು ಇಲ್ಲಿ ಸಾಧ್ಯವಾಗದ ಮಾತು. ಹಾಗಾಗಿ ಹಡಗಿನ ವೇಳಾಪಟ್ಟಿಯನ್ನೂ ಕಾಯುತ್ತಾ ಆತನೂ ಆತನ ಸಣ್ಣಪುಟ್ಟ ಅಗತ್ಯಗಳಿಗೆ ಸಹಾಯ ಮಾಡುತ್ತಾ ನಾನೂ ಕಾಲಕಳೆಯುತ್ತಿದ್ದೇವೆ. ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಿದ್ದೇವೆ. ನಮ್ಮಿಬ್ಬರಿಗೂ ಸಮಾನವಾದ ಕೆಲವು ಕಷ್ಟಸುಖಗಳು ಇರುವ ಹಾಗೆ ಅನಿಸುತ್ತಿದೆ.

ಇರಲಿ ಬಿಡಿ. ನಿನ್ನೆಯ ಕಂತಿನಲ್ಲಿ ನಾನಿರುವ ದ್ವೀಪದಿಂದ ಹಡಗು ಹತ್ತಿ ಮಿನಿಕಾಯ್ ತಲುಪಿದ ಕುರಿತು ಬರೆದಿದ್ದೆ. ಬೆಳಗಿನ ಬಿಸಿಲಲ್ಲಿ ಹೊಳೆಯುತ್ತಿರುವ ಮಿನಿಕಾಯ್ ಎಂಬ ಮರಕತ ದ್ವೀಪ ಹತ್ತಿರವಾಗುತ್ತಿದ್ದಂತೆ ದ್ವೀಪದ ತಲೆಯ ಮೇಲೆ ಒಂದಿಷ್ಟು ಕಾರ್ಮೋಡಗಳು ಸೂರ್ಯನ ಮುಖಕ್ಕೆ ಕೊಡೆ ಹಿಡಿದು ನಿಂತಿದ್ದವು. ಜೊತೆಗೆ ಸಣ್ಣಗಿನ ಎರಚಲು ಮಳೆ. ಕಡಲಿನಲ್ಲಿ ದ್ವೀಪದೊಳಗೆ ಮಳೆಯ ಚಲನೆಯನ್ನು ನೋಡುವುದು ಬಹಳ ಮನೋಹರವಾದ ದೃಶ್ಯ. ನೀವು ವಿಶಾಲವಾದ ಬಯಲೊಂದರಲ್ಲಿ ಕುಳಿತು ನಿಮ್ಮ ಕಡೆ ದಾವಿಸಿ ಬರುತ್ತಿರುವ ಒಬ್ಬಳು ಗೆಳತಿ ಅಥವಾ ಒಂದು ವೈರಿಪಡೆಯನ್ನು ನೋಡುತ್ತಿರುವ ಹಾಗೆ ಕಲ್ಪಿಸಿಕೊಳ್ಳಿ. ಹತ್ತಿರವಾಗುತ್ತಾ ಅವರು ನಿಚ್ಚಳವಾಗುತ್ತಾ ಹೋಗುತ್ತಾರೆ. ಮಳೆ ಕೆಲವೊಮ್ಮೆ ನಿಮ್ಮ ಹತ್ತಿರಕ್ಕೂ ಬಾರದೆ ಅಲ್ಲೇ ಸುರಿಸಿ ಹತ್ತಿರವೂ ಬಾರದೆ ಅಲ್ಲೇ ಅಂತರ್ಧಾನವಾಗುತ್ತದೆ. ಅಥವಾ ನಿಮ್ಮ ಹತ್ತಿರ ಬಂದೂ ಸುರಿಸದೆ ಇನ್ನಷ್ಟು ಮುಂದೆ ಹೋಗಿ ಸುರಿಸುತ್ತದೆ. ನಾವು ಶಾಲೆಯಲ್ಲಿ ಕಲಿತ ಹಾಗೆ ಇಲ್ಲಿ ತೇಲಿ ಬರುವ ಮೋಡಗಳು ಪರ್ವತಶ್ರೇಣಿಗಳಿಗೆ ಡಿಕ್ಕಿ ಹೊಡೆದು ಮಳೆಯಾಗಿ ಸುರಿಯುವುದಿಲ್ಲ, ಬದಲಾಗಿ ತಮ್ಮ ಭಾರಕ್ಕೆ ತಾವೇ ನಲುಗಿ ದೊಪ್ಪನೆ ತಪ್ಪಲೆಯೊಳಗಿನ ನೀರಂತೆ ಸುರಿದು ತಾವು ಇದುವರೆಗೆ ಇರಲೇ ಇಲ್ಲವೇನೋ ಎಂಬ ಹಾಗೆ ಮಾಯವಾಗಿರುತ್ತದೆ. ದ್ವೀಪದ ಒಳಗೂ ಹಾಗೇ. ಬಿಸಿಲಲ್ಲಿ ಬೆಳಗುತ್ತಿದ್ದ ಆಕಾಶವೇನಾದರೂ ಮಂಕಾಗಿದ್ದರೆ ಮನೆಯಿಂದ ಹೊರಬಂದು ಆಕಾಶಕ್ಕೆ ತಲೆ ಎತ್ತಿದರೆ ಕಪ್ಪಗಿನ ಮೇಘವೊಂದು ಕರಿಯ ಬೆಕ್ಕಿನ ಹಾಗೆ ಮೇಲಿನ ಮೂಲೆಯೊಂದರಿಂದ ನಿಮ್ಮನ್ನು ನೋಡುತ್ತಿರುತ್ತದೆ. ಸ್ವಲ್ಪ ಹೊತ್ತಿಗೆ ಮಳೆ ಸುರಿದು ಮತ್ತೆ ಆಕಾಶ ಬೆಳಗತೊಡಗುತ್ತದೆ. ಮಳೆ ಸುರಿಯದೆಯೂ ಆಕಾಶ ಬೆಳಗಿದರೆ ಮಳೆ ಅಲ್ಲೇ ಹತ್ತಿರ ಕಡಲಲ್ಲಿ ಸುರಿದುಹೋಗಿದೆ ಎಂದು ಅರ್ಥ. ಹಾಗಾದಾಗ ಇಲ್ಲೇ ಕಾಲು ಮೈಲು ದೂರವಿರುವ ಕಡಲನ್ನು ಓಡಿಹೋಗಿ ನೋಡಿ ಬರುತ್ತೇನೆ. ಮಳೆ ಸುರಿದ ನಂತರದ ಕಡಲು ದಿವ್ಯವಾಗಿ ಹೊಳೆಯುತ್ತಿರುತ್ತದೆ. ಒಂದು ಕಾಲಾತೀತ ಅಮಲಿನ ಹಾಗೆ.

ಹಾಗೇ ಹೊಳೆಯಲು ಕಾಯುತ್ತಿದ್ದ ಕಡಲಿನ ಮುಂದೆ ಕಾಣಿಸುತ್ತಿದ್ದ ಮಿನಿಕಾಯ್, ಅದರ ಶಿರದ ಮೇಲೆ ನಿಂತಿರುವ ಒಂದಿಷ್ಟು ಶ್ಯಾಮ ಮೇಘಗಳು. ಬೀಳಲಿರುವ ಮಳೆಗೆ ಮುನ್ನುಡಿ ಬರೆಯುತ್ತಿರುವ ಎರಚಲು ಮಳೆ. ಹಡಗು ನಿಧಾನಕ್ಕೆ ಪಡುವಣದ ಜೆಟ್ಟಿಯಲ್ಲಿ ಲಂಗರು ಹಾಕತೊಡಗಿತು. ಜೆಟ್ಟಿಗಳಲ್ಲಿ ಹಡಗು ಲಂಗರು ಹಾಕುವುದನ್ನು ನೋಡುವುದು ಹೊಸಬರಿಗೆ ಬಹಳ ಕುತೂಹಲದ ವಿಷಯ, ಆದರೆ ಹಡಗು ಯಾತ್ರೆಯನ್ನೇ ಹವ್ಯಾಸವಾಗಿರಿಸಿಕೊಂಡಿರುವ ನನ್ನಂತಹವರಿಗೆ ಅದೊಂದು ಗಜಪ್ರಸವದ ಹಾಗೆ. ಕಾಯುತ್ತ ನಿಲ್ಲುವುದು ಕೊಂಚ ನೀರಸ. ಅದೂ ಅಲ್ಲದೆ ಮಿನಿಕಾಯ್ ದ್ವೀಪ ಬೇರೆ ದ್ವೀಪಗಳ ಹಾಗಲ್ಲ. ಬೇರೆ ದ್ವೀಪಗಳಾದರೆ ಹಡಗು ಜೆಟ್ಟಿ ಎಂಬುದು ಬಹಳ ಜನ ಜಂಗುಳಿಯ ತಾಣ. ನಮ್ಮ ಹೋಬಳಿಗಳ ಬಸ್ಸು ನಿಲ್ದಾಣಗಳ ಹಾಗೆ. ಕೆಲಸವಿಲ್ಲದಿದ್ದರೂ ಜನ ತುಂಬಿಕೊಂಡಿರುತ್ತಾರೆ. ಆದರೆ ಇಲ್ಲಿ ಅನವಶ್ಯಕ ಆತುರವಿಲ್ಲ. ಸುಮ್ಮನೇ ಯಾರೂ ತಿರುಗಾಡುವುದಿಲ್ಲ, ಇವರ ಹನ್ನೊಂದು ಹಳ್ಳಿಗಳಾದರೋ ಯಾರಿಗೂ ಕಾಣಿಸದ ಹಾಗೆ ಉತ್ತರಕ್ಕೆ ತೆಂಗಿನ ತೋಪುಗಳ ಅಡಿಯಲ್ಲಿ ಪುಟ್ಟಪುಟ್ಟ ಅಗ್ರಹಾರಗಳಂತಹ ಹಳ್ಳಿಗಳು. ಜೊತೆಗೆ ಎರಚಲು ಮಳೆ ಬೇರೆ. ‘ಹೋ ಇಲ್ಲಿ ಎಷ್ಟು ಕಾಗೆಗಳು!’ ಕೇರಳದ ಪರಿವೀಕ್ಷಕ ಅಚ್ಚರಿಯಿಂದ ದನಿ ಎತ್ತಿದ. ಮಳೆಯ ಮೋಡವನ್ನು ನೋಡುತ್ತಾ ನಿಂತಿದ್ದ ನನಗೆ ಈ ಕಾಕ ಸಮೂಹದ ಸದ್ದುಗಳು ಗೊತ್ತಾಗಿಯೇ ಇರಲಿಲ್ಲ.

ದ್ವೀಪದ ಮೇಲೆ ಸುರಿಯಲಿರುವ ಮಳೆಯಿಂದ ರಕ್ಷಿಸಿಕೊಳ್ಳಲು ತಾಲೀಮು ನಡೆಸುತ್ತಿರುವ ಕಾಗೆಗಳ ವಾಯುಸೇನೆ. ನನ್ನ ಮುಖ ಕಪ್ಪಿಟ್ಟಿತು. ಕಾಗೆಗಳಿರುವಲ್ಲಿ ನಾನು ಹುಡುಕಿ ಬಂದಿರುವ ಹೂಹಕ್ಕಿಗಳಿರುವುದಿಲ್ಲ ಎಂಬ ಮುನ್ಸೂಚನೆ ಮಿದುಳೊಳಗೆ ಹಾದು ಹೋಗಿ ಪೆಚ್ಚೆನಿಸಿತು. ಲಂಗರು ಹಾಕುವುದನ್ನು ಮುಗಿಸಿದ ಹಡಗಿನಿಂದ ಹೊರಗಿಳಿಯಲು ಹಾಕುವ ಏಣಿಯನ್ನೂ ಹಾಕಲಾಯಿತು. ನಾನಾದರೋ ಹಾಗೆ ಇಳಿಯುವ ಹಾಗಿರಲಿಲ್ಲ. ಹಡಗಿನ ಸರಳೊಂದಕ್ಕೆ ಆಡನ್ನು ಕಟ್ಟಿ ಹಾಕಿದ ಹಾಗೆ ಕಟ್ಟಿ ನಿಲ್ಲಿಸಿದ್ದ ನನ್ನ ಸೈಕಲನ್ನೂ ಇಳಿಸಬೇಕಿತ್ತು.

(ಮುಂದುವರಿಯುವುದು)

ಮಿನಿಕಾಯ್ ಕಥಾನಕ ಮೊದಲ ಕಂತಿನಿಂದ ಓದಲು ಇಲ್ಲಿ ಕ್ಲಿಕ್ ಮಾಡಿ