ಅಪ್ಪ, ತುತ್ತಿನ ಚೀಲ

ಅಪ್ಪ
ತುತ್ತಿನ ಚೀಲ
ಜೀವ ಕಾರುಣ್ಯದ ಕಡಲ
ಉಂಡರೂ ನೋವು
ಬೆಳದಿಂಗಳ ನಗೆ ನಕ್ಕು
ನಲಿವು ತುಳುಕಿಸುವ ಧೀರ
ಉಡಿ ಪ್ರೀತಿ ಅವ್ವನಿಗೆ
ಹಿಡಿ ಪ್ರೀತಿ ಅಪ್ಪನಿಗೆ
ಹಂಚಿದಾಗಲೂ
ಅಪ್ಪಿತಪ್ಪಿಯೂ ಬೇಸರಪಡದ ಅಪ್ಪ
-ನದು ಸಂತನ ನಿಲುವು

ಉಣ್ಣುವುದಲ್ಲಿ ಉಡುವುದರಲ್ಲಿ
ಅಪ್ಪನಿಗೆ ಯಾವಾಗಲೂ ಕೊನೆಯ ಪಾಲು
ಇದ್ದಷ್ಟೇ ಉಂಡು ಮಘೀ ನೀರು ಕುಡಿದು
ಊರ ಅಗಸಿಗೆ ಕೇಳುವ ಹಾಗೆ
ಢರೀ ಹೊಡೆಯುವ ಅಪ್ಪ
ಅರೆ ಹೊಟ್ಟೆಯಲ್ಲಿಯೂ ಸಂತುಷ್ಠಿ

ಹಾಲು ಹೊಳೆಯಂತಹ ಅಪ್ಪನ ನಡೆಗೆ
ಯಾರ್ಯಾರೋ ವಿಷವ ಬೆರಸಿದರೂ
ಸದಾ ಹಾಲು ಕರೆಯುವ ಹಸು
ಹೆಸರಿಗೇ ಅಪ್ಪ!
ಕರಳು ಮಾತ್ರ ಅವ್ವನದೇ!
ಅಪ್ಪನಾಗಿ ಅವ್ವನ ಪ್ರೀತಿ ತೋರುವ ಜೀವ
ಭೂಮಿಯ ಮೇಲೆ ಇದ್ದರೇ….,
ಅದು ಅಪ್ಪನದೇ!

ಅಪ್ಪನೆಂಬ ಆಲಕೆ
ಆಕಾಶ ಎಂಬ ರೂಪಕ
ತೊಡಿಸಿದರೂ ಅದು ಅರ್ಧಂಬರ್ಧ!
ಅಪ್ಪನ ವಿರಾಟ್ ವ್ಯಕ್ತಿತ್ವ ಅಕ್ಷರಗಳಲ್ಲಿ ಹಿಡಿದಿಡುವೆಂಬುದು ಬರೀ ಭ್ರಮೆ!
ಅಪ್ಪ ಎಂದೂ ತೀರಲಾರದ ಪ್ರೀತಿ
ಸದಾ ಪ್ರೀತಿಸುವುದೇ ಅಪ್ಪನೆಗೆ ಕೊಡುವ
ಗೌರವದ ಕಾಣಿಕೆ!

ಸದಾಶಿವ ದೊಡಮನಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೂದಿಹಾಳ ಗ್ರಾಮದವರು.
ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಹಾಗೂ ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡು, ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಸದ್ಯ ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ಧರೆ ಹತ್ತಿ ಉರಿದೊಡೆ’ , ‘ನೆರಳಿಗೂ ಮೈಲಿಗೆ’, ದಲಿತ ಸಾಹಿತ್ಯ ಸಂಚಯ’, ‘ಪ್ರತಿಸ್ಪಂದನ’, ‘ಇರುವುದು ಒಂದೇ ರೊಟ್ಟಿʼ (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.