ಕ್ಷಮಿಸಿಬಿಡು

ನಿನ್ನ ಹೀಗೆ ಮತ್ತೆ ಮತ್ತೆ ನೋಡುತ್ತ
ನನಗೆ ಪ್ರೀತಿಯಾದರೆ
ಕ್ಷಮಿಸಿಬಿಡು

ಒಲವಾಗದಿರಲಿ ಎಂದುಕೊಂಡೇ
ನಿನ್ನತ್ತ ನೋಡುತ್ತೇನೆ
ಸಹನೆ ತುಂಬಿದ ನಿನ್ನ ಕಣ್ಣುಗಳ
ಮೌನ ಮಡಿಕೆಯ ತುಟಿಗಳ
ಕಾಣುವಾಗಲೆಲ್ಲ
ನನ್ನ ಜಗದ ಮಾತುಗಳು ಎದೆಯೊಳಗೆ ಇಳಿದು
ರೆಕ್ಕೆ ಬಡಿಯುತ್ತದೆ

“ಥತ್” ಇದೇನು ಪ್ರೀತಿಸುವ ವಯಸ್ಸೇ
ಎಂದುಕೊಳ್ಳುತ್ತ ನಿನ್ನಡಿಗಳಿಂದ
ಚಿತ್ತ ಬದಲಿಸುತ್ತೇನೆ..

“ಪ್ರೇಮಕ್ಕೂ ಕಾಲ ಮಿತಿಯೇ” ಕೇಳಿದಂತೆ
ಭಾಸವಾಗಿ ಬೇಲಿಯೊಳಗಿನ ಬಿಂಬ
ತಣ್ಣಗೆ ಚಲಿಸುತ್ತದೆ
ಮತ್ತೆ ನೀನರಿಯದ ನಿನ್ನ ನೋಟಗಳಲ್ಲಿ
ಭಾವದಲೆಗಳ ತೇಲಿಬಿಡುತ್ತೇನೆ..
ಮತ್ತೆ ಹೇಳುತ್ತೇನೆ
ನಾನು ಹೀಗೆ ತೇಲುತ್ತ ತೇಲುತ್ತ ಮುಳುಗಿದರೆ…ದಯವಿಟ್ಟು

 

ದೀಪ್ತಿ ಭದ್ರಾವತಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.
ಈಗ ಭದ್ರಾವತಿಯಲ್ಲಿದ್ದಾರೆ.
“ಅಹಲ್ಯೆಯ ಸ್ವಗತ” (ಕವನ ಸಂಕಲನ) ಗೀರು (ಕಥಾ ಸಂಕಲನ) ಪ್ರಕಟಿತ ಕೃತಿಗಳು