ಇಲ್ಲಿ ಎಲ್ಲ ಕ್ರೋಧತೆಗಳು ಹುತ್ತಗಟ್ಟಿವೆ
ಬಾಗಿಲವರೆಗೂ ಧಾವಿಸಿದ ಆಕ್ರೋಶಗಳು
ಬೀದಿಯಲಿ ಗಸ್ತು ಹೂಡಿವೆ
ನಗರದ ನಡುರಸ್ತೆಯಲಿ
ತೆವಳುವ ಇರುವೆ ಎದೆಗೂಡಿನ ಶಬ್ದ ಕೇಳಲಾಗದು ಇನ್ನು
ಅದರ ಅಂಗಾಲಿಗೆ ತಗುಲಿದ ನೆತ್ತರ ಅಳಲಿಗೆ
ರೆಕ್ಕೆಗಳಚಿದ ಸಮೀರನ ತಣ್ಣನೆ ಕೊರೆತ
ಬದುಕು ಉರಿದು ಹೋದ ಅರ್ಧ ಸಿಗರೇಟಿನ ಕಿಟ್ಟಂತೆ
ಇನ್ನರ್ಧ ಕವಿತೆಗಳಲ್ಲದ ಕವಿತೆಗಳಲಿ
ಅವಿತು ಜೀವ ಚೈತನ್ಯದ ಹಾಡು ಹಾಡಿದಂತೆ
ಏನಾದರೇನಂತೆ
ಅರಾಜಕತೆಯ ದಿನಗಳಲಿ ನಾಲಿಗೆ ಉದ್ದ ಸ್ವಾಮಿ
ಮುರಿದು ಹೋದ ಕೊಂಬೆ ಮೇಲಿನ ಹಕ್ಕಿಯ
ಜೀವಸ್ವರ ಕೇಳಲು ಕಿವಿಗಳು ಎಲ್ಲಿ
ಕವಿಯ ಎಲ್ಲ ಭಾವಗಳು ಅಭಾವಗಳಲ್ಲೇ
ಜೀವ ಕಳೆದುಕೊಳ್ಳುತ್ತಿವೆ
ಉಳಿದದ್ದು ಅರ್ಧ ಕವಿತೆ ಮಾತ್ರ
ಮತ್ತೆ ಬದುಕು ಅಷ್ಟೇ…
ಅರ್ಥಪೂರ್ಣ ಕವಿತೆ
ತುಂಬ ಧನ್ಯವಾದಗಳು ಬೀಜೀ…
ಮನಸಿನ ಭಾವನೆಗಳು ಅಭಾವದಲ್ಲೆ ಕಳೆದುಹೋಗುದಿದೆ
💐💐
ಪ್ರತಿಕ್ರಿಯೆಗೆ ಧನ್ಯವಾದಗಳು ಮಧುರಾಜ ಸರ್…