ಮನಸಿನೊಳಗೆ ಮಹಾ ಶಾಂತ ಸ್ವಭಾವವನ್ನೂ, ಮುಖದಲ್ಲಿ ಅಪಾರ ಸಾತ್ವಿಕತೆಯನ್ನೂ ತುಂಬಿಕೊಂಡಿದ್ದ ಪರದಂಡ ಚಂಗಪ್ಪನವರು ನಿನ್ನೆ ಅಪರಾಹ್ನ ಮೂರೂವರ ಗಂಟೆಯ ಸುಮಾರಿಗೆ ನನ್ನನ್ನು ನೋಡಲು ಬಂದಾಗ ಅವರಿಗೆ ೯೪ ವರ್ಷ ಕಳೆದು ೯೫ ತುಂಬಿ ಅದಾಗಲೇ ಆರು ತಿಂಗಳುಗಳು ಕಳೆದಿದ್ದವು. ಅದಾಗಲೇ ಮೂರುನಾಲ್ಕು ಸಲ ಅವರನ್ನು ಕಂಡು ಪರಿಚಿತನಾಗಿದ್ದ ನನಗೆ ಅವರ ಆ ಶಾಂತ ಮುಖದಲ್ಲಿ ಅಪಾರ ತುಂಟತನಗಳೂ ಅವರ ಅರೆಮುಚ್ಚಿದ್ದ ಕಣ್ಣುಗಳಲ್ಲಿ ನೂರಾರು ಹೇಳದ ಕಥೆಗಳೂ ಕಂಡು ಬಂದು ‘ಬನ್ನಿ ಚಂಗಪ್ಪನವರೇ ಮೊದಲು ಒಂದು ಕಪ್ಪು ಖಾಲಿ ಚಾ ಕುಡಿಯುವಾ, ಆನಂತರ ಕಥೆ ಕೇಳುವಾ’ ಎಂದು ಕರೆದೆ. ಚಂಗಪ್ಪನವರು ಎಂದಿನಂತೆ ಚಹಾವನ್ನು ನಿರಾಕರಿಸಿದರು. ‘ಮೊದಲು ಬಂದ ಕೆಲಸ.  ಚಾ ಕುಡಿಯುವುದನ್ನು ಆನಂತರ ವಿಚಾರ ಮಾಡುವಾ’ ಎಂದು ಖಡಕ್ಕಾಗಿ ಹೇಳಿದರು.

ಚಂಗಪ್ಪನವರು ಸ್ವಲ್ಪ ಹಳೆಯದಾದ ಆದರೆ ಒಂದಿಷ್ಟೂ ಕೊಳೆಯಿಲ್ಲದ ಸೂಟು ದರಿಸಿ, ಬಲಗೈಯಲ್ಲಿ ಹಳೆಯ ಕಾಲದ ಮಳೆಯ ಕೊಡೆಯೊಂದನ್ನು ಹಿಡಿದು, ಎಡತೋಳಿನ ಮೇಲೆ ಒಂದು ಬಟ್ಟೆಯ ಚೀಲವನ್ನು ನೇತು ಹಾಕಿಕೊಂಡು ನಡೆದೇ ಬಂದು ನನಗಾಗಿ ಕಾಯುತ್ತಿದ್ದರು. ಅವರ ಆ ಬಟ್ಟೆಯ ಚೀಲದ ಒಳಗೆ ಅವರೇ ಬರೆದ ನಾಲ್ಕು ಪುಸ್ತಕಗಳ ಕೊಟ್ಟ ಕೊನೆಯ ಒಂದೊಂದು ಪ್ರತಿಗಳಿದ್ದವು. ಕನ್ನಡ ಸಾಹಿತ್ಯ ಪರಿಷತ್ತಿನವರಿಗಾಗಿ ಸಾವಿರ ಪದಗಳಲ್ಲಿ ಅವರೇ ಬರೆದ ಅವರದೇ ಜೀವನ ಚರಿತ್ರೆಯ ಒಂದು ಹಳೆಯ ಹಾಳೆ ಮತ್ತು ಕಟ್ಟು ಹಾಕಿಸಿದ ಎರಡು ಹಳೆಯ ಕಾಲದ ಫೋಟೋಗಳೂ ಅದರಲ್ಲಿದ್ದವು.

ಅದರಲ್ಲಿ ಒಂದು ೬೦ ವರ್ಷಗಳ ಹಿಂದೆ ಅವರ ಸೇನಾ ಸೇವೆಯಲ್ಲಿದ್ದಾಗ ತೆಗೆಸಿದ್ದ ಒಂದು ಫೋಟೋ. ಇನ್ನೊಂದು ಸುಮಾರು ಹತ್ತು ವರ್ಷಗಳ ಹಿಂದೆ ಅವರು ತಮ್ಮ ಏಕೈಕ ಪುತ್ರನೊಡನೆ ಪ್ರೀತಿಯಿಂದ ತೆಗೆಸಿ ಇನ್ನೊಂದು ಫೋಟೋ. ಆ ಫೋಟೋದಲ್ಲಿ ಚಂಗಪ್ಪನವರ ಮುಖದಲ್ಲಿದ್ದ ಮಮತೆ ಎದ್ದು ಕಾಣುತ್ತಿತ್ತು. ಚಂಗಪ್ಪನವರು ದೂರದ ವೀರಾಜಪೇಟೆಯಿಂದ ಬಸ್ಸು ಹತ್ತಿ ಮಡಿಕೇರಿಗೆ ಬರಲು ಐದು ಕಾರಣಗಳಿದ್ದವು. ಒಂದು, ಕಳೆದು ಹೋಗಿದ್ದ ತಮ್ಮ ಹಿರಿಯ ನಾಗರಿಕನ ಗುರುತು ಚೀಟಿಯನ್ನು ಒದಗಿಸಿಕೊಡುವಂತೆ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಇಲಾಖೆಗೆ ಅರ್ಜಿ ಸಲ್ಲಿಸುವುದು. ಎರಡು, ಸೇನಾ ಕ್ಯಾಂಟೀನಿನಿಂದ ಮನೆಗೆ ಬೇಕಾದ ಸೋಪು ಸಕ್ಕರೆ ಕೊಳ್ಳುವುದು. ಮೂರು, ತಮ್ಮ ಎರಡೂ ಪುಸ್ತಕಗಳ ಪ್ರತಿಗಳು ಮುಗಿದು ಹೋಗಿರುವುದರಿಂದ ಅವುಗಳನ್ನು ಪುನರ್ ಮುದ್ರಿಸಲು ಸಹಾಯ ಬೇಕೆಂದು ಸ್ಥಳೀಯ ಶಾಸಕರಲ್ಲಿ ಕೇಳಿಕೊಳ್ಳುವುದು. ನಾಲ್ಕು, ಸ್ಥಳೀಯ ಪೋಲೀಸು ಠಾಣೆಗೆ ತೆರಳಿ ಒಂದು ಸಣ್ಣ ಪುಕಾರು ಸಲ್ಲಿಸುವುದು.

ಪುಕಾರಿನ ಸಾರಾಂಶ ಜನರಲ್ಲಿ ದೈವನಿಷ್ಠೆ, ನ್ಯಾಯನೀತಿ ಕಡಿಮೆ ಆಗಿ ಆ ಜಾಗದಲ್ಲಿ ಪುಂಡತನ ಮತ್ತು ಅತಿಆಸೆ ಜಾಸ್ತಿ ಆಗಿರುವುದರಿಂದ ಅಂತಹವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ಹೇಳುವುದು ಎಂಬುದಾಗಿತ್ತು. ಈ ನಾಲ್ಕೂ ಕೆಲಸಗಳು ಮುಗಿದ ಮೇಲೆ ಅವರ ಐದನೇ ಕೆಲಸ ನನ್ನ ಬಳಿ ಬಂದು ಹಳೆಯ ಕಾಲದ ಅವರ ಕೆಲವು ಕಥೆಗಳನ್ನು ಹೇಳುವುದಾಗಿತ್ತು.

ಪರದಂಡ ಚಂಗಪ್ಪನವರನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ಮಡಿಕೇರಿಯ ಕೋಟೆಯೊಳಗಿರುವ ಜಿಲ್ಲಾದಿಕಾರಿಗಳ ಹಳೆಯ ಕಟ್ಟಡದಲ್ಲಿ ಆಗಾಗ ನೋಡುತ್ತಿದ್ದೆ. ಅವರ ಕೈಯಲ್ಲಿದ್ದ ಬಟ್ಟೆಯ ಚೀಲದೊಳಗಿರುವುದು ಅವರೇ ಬರೆದ ಪುಸ್ತಕಗಳ ಪ್ರತಿಗಳು ಎಂಬುದು ನನಗೆ ಗೊತ್ತಿರಲಿಲ್ಲ. ಯಾರೋ ವಯಸ್ಸಾದ ಮುದುಕನೊಬ್ಬ ತನ್ನ ಹೆಂಡತಿ ಮಕ್ಕಳು ದಾಯಾದಿಗಳೊಡನೆ ನಿರಂತರವಾಗಿ ನಡೆಸುತ್ತಿರುವ ಆಸ್ತಿ ದಾವೆಯಿಂದಾಗಿ ಆತನ ಕೈಯಲ್ಲಿರುವ ಬಟ್ಟೆಯ ಚೀಲ ದಾಖಲೆ ಪತ್ರಗಳಿಂದ ಹೀಗೆ ತುಂಬಿಹೋಗಿರಬಹುದು ಎಂದುಕೊಂಡಿದ್ದ ನನಗೆ ಅವರ ಚೀಲದೊಳಗಿದ್ದುದು ಅವರೇ ಬರೆದ ಪುಸ್ತಕಗಳು ಎಂದು ಅರಿವಾಗುವಾಗ ವರ್ಷವೇ ಕಳೆದಿತ್ತು.

ಸಾಹಿತ್ಯ ಪ್ರೇಮಿಯಾಗಿದ್ದ ಜಿಲ್ಲಾದಿಕಾರಿಗಳೊಬ್ಬರು ತಮಗೆ ಸಾಹಿತ್ಯದ ಮೇಲೆ ಪ್ರೀತಿಯಾದಾಗಲೆಲ್ಲ ಈ ವಯೋವೃದ್ದ ಲೇಖಕರನ್ನು ಕೋಟೆಗೆ ಕರೆಸಿಕೊಂಡು ಮಾತಾಡಿಸಿ ಕಳಿಸುತ್ತಿದ್ದರೇ ವಿನಃ ಬೇರೇನೂ ಮಾಡಿರಲಿಲ್ಲ. ಇವರೂ ಬೇರೆ ಏನೂ ಕೇಳಿರಲಿಲ್ಲ. ‘ಸಾಧ್ಯವಾದರೆ ನನ್ನ ಪುಸ್ತಕಗಳನ್ನು ಪುನರ್ ಮುದ್ರಿಸಿ ಸಾಹೇಬರೇ, ಏಕೆಂದರೆ ಇದು ನಾನು ನಾನಾಗಿಯೇ ಬರೆದ ಪುಸ್ತಕಗಳಲ್ಲ. ಇವೆಲ್ಲವೂ ದೇವರು ನನ್ನಿಂದ ಬರೆಸಿದವು. ಇವೆಲ್ಲವೂ ದೇವರ ಪುಸ್ತಕಗಳು. ಮುದ್ರಿಸಿ ಪುಣ್ಯ ಕಟ್ಟಿಕೊಳ್ಳಿ’ ಎಂದು ಕೈಮುಗಿಯುತ್ತಿದ್ದರು.

ಕೊಂಚ ವಿಚಾರವಾದಿಯೂ ಆಗಿದ್ದ ಆ ಜಿಲ್ಲಾದಿಕಾರಿಯು ಈ ಮುದುಕನು ತನ್ನ ಖಚೇರಿಯಿಂದ ಹೊರನಡೆದ ಮೇಲೆ ಈ ತಮಾಷೆಯನ್ನು ತನ್ನ ಕೈಕೆಳಗಿನ ಮೇಲ್ ಸ್ತರದ ಅದಿಕಾರಿಗಳೊಡನೆ ಹೇಳಿಕೊಂಡು ನಗುತ್ತಿದ್ದನು.‘ದೇವರ ಪುಸ್ತಕ’ ಎಂದರೆ ಆತನ ವಲಯದಲ್ಲಿ ಪೋಲಿಯಾದ ಅರ್ಥಗಳಿದ್ದುದು ಚಂಗಪ್ಪನವರಿಗೂ ಗೊತ್ತಿರಲಿಲ್ಲ ಕಾಣುತ್ತದೆ. ಆದರೆ ಚಂಗಪ್ಪನವರ ಚೀಲದೊಳಗಿದ್ದುದು ನಿಜವಾದ ದೇವರ ಪುಸ್ತಕಗಳಾಗಿದ್ದವು. ಮತ್ತು ಅವರು ಹೇಳುವ ಪ್ರಕಾರ ದೇವರುಗಳೇ ಎದುರು ನಿಂತು ಅವರಿಂದ ಈ ಪುಸ್ತಕಗಳನ್ನು ಬರೆಸಿದ್ದರು.

ಒಂದನೆಯ ಪುಸ್ತಕದ ಹೆಸರು ‘ಸದ್ಗುರು ಸಿದ್ಧಾರೂಡ ಸ್ವಾಮಿ’. ಎರಡನೆಯದು ‘ಕೊಡಗಿನ ಮೂಲನಿವಾಸಿಗಳ ಪುರಾಣ ಸಂಸ್ಕೃತಿ ಮತ್ತು ಊರೂರು ದೇವಾಲಯಗಳು’. ಮೂರನೆಯದು ‘ಇಗ್ಗುತಪ್ಪ ದೇವರ ಪುರಾಣ’. ನಾಲ್ಕನೆಯದು ‘ದೇವರೂ ಲೋಕಸೃಷ್ಟಿಯೂ ಮತ್ತು ಋಷಿಮುನಿಗಳ ಕಾಲದ ಪೌರಾಣಿಕತೆಯೂ’ ಎಂಬುದಾಗಿತ್ತು. ಈ ನಾಲ್ಕೂ ಪುಸ್ತಕಗಳನ್ನು ಇವರು ಬಟ್ಟೆಯ ಚೀಲದಲ್ಲಿ ತುಂಬಿಕೊಂಡು ಊರೂರು ತಿರುಗಿ ಭಕ್ತಜನರಿಗೆ ಮಾರಿ ಮುಗಿಸಿದ್ದರು.

ಆದರೂ ಈ ದೇವರ ಕೆಲಸವನ್ನು ಬಿಡಬಾರದು ಎಂಬುದು ಇವರ ಹಠವಾಗಿತ್ತು. ಏಕೆಂದರೆ ಜನರಲ್ಲಿ ದೈವನಿಷ್ಠೆ, ನ್ಯಾಯನೀತಿ ಕಡಿಮೆ ಆಗಿ ಆ ಜಾಗದಲ್ಲಿ ಪುಂಡತನ ಮತ್ತು ಅತಿಆಸೆ ಜಾಸ್ತಿಯಾಗುತ್ತಲೇ ಇತ್ತು. ಹಾಗಾಗಿ ಇವರು ತಮ್ಮಿಂದ ದೇವರು ಬರೆಸಿದ ಈ ಪುಸ್ತಕಗಳನ್ನು ಪುನರ್ ಮುದ್ರಿಸಿ ಮುದ್ರಿಸಿ ಇವರು ಹೈರಾಣಾಗಿ ಹೋಗಿದ್ದರು. ಚಂಗಪ್ಪನವರು ಹೀಗೆ ಹೈರಾಣಾಗಿ ತಿರುಗುತ್ತಿರುವಾಗಲೇ ಬೇತಾಳನಂತೆ ನಾನು ಅವರಿಗೆ ತಗುಲಿಕೊಂಡಿದ್ದೆ. ಇವರೇ ಇಷ್ಟೆಲ್ಲ ದೇವರ ಕಥೆಗಳನ್ನು ಬರೆಯಬೇಕಾದರೆ ಇವರ ಜೀವನದ ಕಥೆಗಳು ಇದಕ್ಕಿಂತಲೂ ರೋಚಕವಾಗಿಯೂ ಪೌರಾಣಿಕವಾಗಿಯೂ ಇರಬಹುದೆಂದು ನನ್ನ ಊಹೆಯಾಗಿತ್ತು.

ನಿನ್ನೆ ಸಣ್ಣಗೆ ಹನಿಯುತ್ತಿದ್ದ ಮಳೆಯಲ್ಲಿ ಅವರು ಸುಮಾರು ಒಂದು ಗಂಟೆ ಹೊತ್ತು ಚುಟುಕಾಗಿ ಅವರ ಕಥೆ ಹೇಳಿದರು. ಆ ಕಥೆಯನ್ನು ಉಳಿದ ಮುನ್ನೂರು ಪದಗಳಲ್ಲಿ ನಿಮಗೆ ನಾನು ಹೇಳಬೇಕು. ಚಂಗಪ್ಪನವರು ೯೫ ವರ್ಷಗಳ ಹಿಂದೆ ಹುಟ್ಟಿದಾಗಲೇ ತುಂಟರಾಗಿದ್ದರು. ಅವರು ಗಣಿತದ ಮೇಷ್ಟರು ತುಂಬಾ ಕ್ರೂರಿಯಾಗಿದ್ದರಿಂದ ಚಂಗಪ್ಪನವರು ಮೂರನೇ ಫಾರ್ಮ್ ನಲ್ಲಿ ಸೋತರು. ಊಟದ ಸಮಯದಲ್ಲಿ ಮಾತ್ರ ಚಂಗಪ್ಪನವರು ಮನೆಯಲ್ಲಿ ಕಾಣಿಸುತ್ತಿದ್ದರು. ಉಳಿದ ಸಮಯದಲ್ಲಿ ಮಲೆಕುಡಿಯರೊಡನೆ ಕಾಡುಮೇಡುಗಳಲ್ಲಿ ಆಡುತ್ತಿದ್ದರು. ಅವರು ನೋಡಲು ಸಣ್ಣದಾಗಿದ್ದರೂ ಅವರ ಇಂಗ್ಲೀಷು ತುಂಬಾ ಚೆನ್ನಾಗಿತ್ತು. ಹಾಗಾಗಿ ಅವರು ಅಪ್ಪನ ಜೇಬಿನಿಂದ ಆ ಕಾಲದಲ್ಲಿಯೇ ಇಪ್ಪತ್ತೈದು ರೂಪಾಯಿಗಳನ್ನು ಲಪಟಾಯಿಸಿ ಬೆಂಗಳೂರು ಸೇರಿ ಟೈಪಿಂಗು ಕಲಿಯಲು ತೊಡಗಿದರು.

ಅದು ೧೯೪೦ನೇ ಇಸವಿ. ಎರಡನೇ ಮಹಾಯುದ್ದದ ಕಾಲ. ಜರ್ಮನರೂ ಇಟಾಲಿಯನ್ನರೂ ಸೇರಿ ಬ್ರಿಟಿಷರನ್ನು ಹುರಿದು ಮುಕ್ಕುತ್ತಿದ್ದರು. ಇದೇ ಸರಿಯಾದ ಸಮಯ ಎಂದುಕೊಂಡ ಚಂಗಪ್ಪನವರು ಮೇಯೋ ಹಾಲಿನ ಹತ್ತಿರದ ಸೇನಾ ನೇಮಕಾತಿಗೆ ಹೋದರು. ಯುದ್ದಕ್ಕೆ ಜರೂರಾಗಿ ಜನರು ಬೇಕಿದ್ದರಿಂದ ಸ್ವಲ್ಪ ಕುಳ್ಳಗಿದ್ದರೂ ಪರವಾಗಿಲ್ಲ ಬಾ ಎಂದು ಇವರನ್ನೂ ಸೇನೆಗೆ ಸೇರಿಸಿಕೊಂಡರು. ಹೀಗೆ ಸೇನೆ ಸೇರಿದ ಚಂಗಪ್ಪನವರು ತಮ್ಮ ರೆಜಿಮೆಂಟಿನೊಡನೆ ೧೯೪೧ ರ ಅಕ್ಟೋಬರ್ ೩೦ರಂದು ಈಜಿಪ್ಟಿನ ಸೂಯೆಜ್ ಕಾಲುವೆ ದಾಟಿ ಮೀನಾದ ಸೇನಾ ನೆಲೆ ತಲುಪಿದರು.

ಮೇಲಿನಿಂದ ನಾಜಿಗಳ ಬಾಂಬು, ಎತ್ತ ನೋಡಿದರೂ ಕೊಳೆತ ಹೆಣಗಳ ವಾಸನೆ, ಅಲ್ಲಲ್ಲಿ ಗೋಚರಿಸುತ್ತಿದ್ದ ಪುರಾತನ ಪಿರಮಿಡ್ಡುಗಳು. ರಾತ್ರಿ ಹೊತ್ತಲ್ಲಿ ಹೆಣಗಳ ರಾಶಿಯಿಂದ ಕೊಳ್ಳಿದೆವ್ವಗಳು ಊಳಿಡುತ್ತಾ ನಡೆದು ಬರುತ್ತಿರುವುದು ಚಂಗಪ್ಪನವರಿಗೆ ಕಾಣಿಸುತ್ತಿತ್ತಂತೆ. ಇರುಳ ಆಕಾಶದಲ್ಲಿ ಒಂದಕ್ಕೊಂದು ಡಿಕ್ಕಿಹೊಡೆಯದಂತೆ ಸಾಲುಸಾಲಾಗಿ ಶಿಸ್ತಿನಿಂದ ಮರಳಿ ಬರುತ್ತಿದ್ದ ಯುದ್ದವಿಮಾನಗಳು ಹಕ್ಕಿಗಳ ಹಾಗೆ ನೆಲಕ್ಕೆ ಇಳಿಯುತ್ತಿದ್ದುವಂತೆ. ಉಸಿರಾಡಲು ನೋಡಿದರೆ ಮೂಗಿನೊಳಗೆ ತುಂಬಿಕೊಳ್ಳುತ್ತಿದ್ದ ಹೆಣಗಳ ಘಾಟು ವಾಸನೆ ಮತ್ತು ಮೆಡಿಟರೇನಿಯನ್ ಸಮುದ್ರದ ಉಪ್ಪುಪ್ಪು ಗಾಳಿ.

‘ಆ ಹಾಳಾದ ನಾಜಿಗಳು ಸೋತು ಹೋಗದಿದ್ದರೆ ನಾನು ಕೊಡಗಿಗೆ ಮರಳಿ ಬಂದು ಈ ಇಗ್ಗುತಪ್ಪ ದೇವರ ಪುಸ್ತಕ ಬರೆಯಲು ಆಗುತ್ತಲೇ ಇರಲಿಲ್ಲ. ನೋಡಿ ನನ್ನ ಇಗ್ಗುತಪ್ಪ ದೇವರೇ ಅಲ್ಲಿಗೆ ಬಂದು ಆ ಜರ್ಮನ್ನರನ್ನೂ ಇಟಾಲಿಯರನ್ನೂ ಸೋಲಿಸಿದರು. ನೀವು ನಂಬುವುದಾದರೆ ನಂಬಿ ಬಿಡುವುದಾದರೆ ಬಿಡಿ’ ಎಂದು ಚಂಗಪ್ಪನವರು ತಮ್ಮ ಅಷ್ಟೂ ಕಥೆಯನ್ನು ಹೇಳಿಮುಗಿಸಿದವರಂತೆ ತಲೆಯ ಮೇಲಿದ್ದ ಉಣ್ಣೆಯ ಟೋಪಿಯನ್ನು ಟೇಬಲಿನ ಮೇಲೆ ಇಟ್ಟು ತಮ್ಮ ಬೆವರಿದ್ದ ತಲೆಯನ್ನು ಒರೆಸಿಕೊಂಡರು. ಚಂಗಪ್ಪನವರು ಹೊರಡುವ ಮೊದಲು ಸಾವಿರ ಪದಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಅವರೇ ಬರೆದ ಅವರದೇ ಜೀವನ ಚರಿತ್ರೆಯ ಆ ಹಾಳೆಯನ್ನು ನೋಡಿದೆ. ಸರಿಯಾಗಿ ಸಾವಿರ ಪದಗಳು.

ಮೊದಲಿಂದ ಕೊನೆತನಕ ಎಲ್ಲವನ್ನೂ ಏನೂ ಕಡಿಮೆ ಇಲ್ಲದಂತೆ ಅವರೇ ಅಷ್ಟು ಒಳ್ಳೆಯ ಕನ್ನಡದಲ್ಲಿ ಬರೆದುಬಿಟ್ಟಿದ್ದಾರೆ. ‘ಕೋತಿಯಾಟದವನ ಕೈಯಲ್ಲಿರುವ ಕೋತಿಯ ಹಾಗೆ ಮನುಷ್ಯ ಬದುಕು’ ಎಂದು ಅವರು ಮನುಷ್ಯನ ಕುರಿತೂ ದೇವರ ಕುರಿತೂ ಹೇಳಿಬಿಟ್ಟಿದ್ದಾರೆ. ‘ಹೋಗುವಾಗಲಾದರೂ ಒಂದು ಖಾಲಿ ಚಾ ಕುಡಿದು ಹೋಗಿ’ ಎಂದು ನಾನು ಕೇಳಿಕೊಳ್ಳುತ್ತೇನೆ. ‘ಮನೆಯಲ್ಲಿ ಹೆಂಡತಿ ಕಾಯುತ್ತಿದ್ದಾಳೆ. ನನಗೆ ತಲೆ ಕೆಟ್ಟು ಹೋಗಿದೆ ಎಂಬುದು ಅವಳ ಹೆದರಿಕೆ. ನನಗೆ ತಲೆಕೆಟ್ಟಿಲ್ಲ ಎಂದು ಗೊತ್ತಾಗಬೇಕಾದರೆ ಅವಳ ಮುಂದೆ ಹಾಜರಿ ಹಾಕಬೇಕು. ಮೊದಲು ಆ ಕೆಲಸ ಮಾಡುತ್ತೇನೆ. ಆಮೇಲೆ ಚಾ ಕುಡಿಯುವ ವಿಚಾರ’ ಎಂದು ಅವರು ಹೊರಟೇ ಬಿಡುತ್ತಾರೆ.

ಅವರು ಹೊರಟು ಹೋಗಿ ಎರಡು ಗಂಟೆಗಳ ಬಳಿಕ ಫೋನ್ ಮಾಡಿ, ‘ಚಂಗಪ್ಪನವರೇ ತೊಂದರೆಯಿಲ್ಲದೆ ತಲುಪಿದಿರಾ?’ ಎಂದು ಕೇಳಿದರೆ ‘ನಾನು ಚಂಗಪ್ಪ ಅಲ್ಲ. ಅವರ ಶ್ರೀಮತಿ. ಚಂಗಪ್ಪನವರು ಮಲಗಿದ್ದಾರೆ. ಈಗ ಎಬ್ಬಿಸಲಾಗುವುದಿಲ್ಲ’ ಎಂದು ಖಡಕ್ಕಾಗಿ ಹೇಳುತ್ತಾರೆ. ಚಂಗಪ್ಪನವರದೇ ಧ್ವನಿ. ಅದೇ ಖಡಕ್ ಮಾತು. ‘ನೀವು ಯಾರು? ಏನಾಗಬೇಕು?’ ಎಂದು ಶ್ರೀಮತಿ ಚಂಗಪ್ಪನವರು ಕೇಳುತ್ತಾರೆ. ‘ನಾನು ಚಂಗಪ್ಪನ ಗಣಿತದ ಮೇಷ್ಟರು. ಅವನೊಡನೆ ತುಂಬಾ ಕ್ರೂರವಾಗಿ ನಡೆದುಕೊಂಡಿದ್ದೆ. ಕ್ಷಮೆ ಕೇಳಲು ಫೋನ್ ಮಾಡಿದ್ದೆ ಎಂದು ಹೇಳಿ’ ಎಂದು ಫೋನ್ ಇಡುತ್ತೇನೆ.