ಈ ಹಕ್ಕಿಯ ಹೆಸರು ‘ಫೂಕುಂಞಿ’ . ಅಂದರೆ ಹೂಮರಿ ಎಂದು ಅರ್ಥ. ಅಷ್ಟು ಹಗುರ.ಅಷ್ಟು ಸೂಕ್ಷ್ಮ, ಮತ್ತು ಅಷ್ಟೊಂದು ಸುಂದರ. ಒಂದು ಕಾಲದಲ್ಲಿ ಈ ದ್ವೀಪದ ಮನೆಮನೆಗಳ ಎದುರಿಗಿರುವ ಬುಗುರಿ ಮರದ ಎಲೆಗಳಿಗೆ ಜೋತಾಡುತ್ತ, ಎಲೆ ಯಾವುದು ಹಕ್ಕಿ ಯಾವುದು ಎಂದು ಗೊತ್ತಾಗದ ಹಾಗೆ ಉಲಿಯುತ್ತಿದ್ದ ಈ ಹೂ ಹಕ್ಕಿಗಳು ಇವರ ಹಾಡುಗಳಲ್ಲಿ ಮತ್ತು ಕತೆಗಳಲ್ಲಿ ದಂಡಿಯಾಗಿ ಸಿಗುತ್ತವೆ. ಅವುಗಳು ಈಗ ಇಲ್ಲದಿರುವುದಕ್ಕೆ ಹಲವು ಕಾರಣಗಳನ್ನೂ ಹೇಳಿದ್ದರು. ಆದರೆ ನನಗೆ ಅನಿಸಿದ ಕಾರಣ ಬೇರೆಯೇ ಇತ್ತು ಮತ್ತು ಅದು ಸತ್ಯವೂ ಆಗಿತ್ತು.
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಎರಡನೆಯ ಕಂತು

 

ಮಿನಿಕಾಯ್ ದ್ವೀಪದ ಹಳ್ಳಿಯೊಂದು ದೋಣಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದ ಸಂಭ್ರಮದ ನೆಪದಲ್ಲಿ ಏರ್ಪಡಿಸಿದ್ದ ಔತಣಕೂಟಕ್ಕೆ ನೆಂಟನಾಗಿ ಹಡಗು ಹತ್ತಿ ಹೊರಟಿದ್ದೆ ಎಂದು ನಿನ್ನೆ ಉಲ್ಲೇಖಿಸಿದ್ದೆನಷ್ಟೆ. ಆದರೆ ಮಿನಿಕಾಯ್ ಗೆ ತೆರಳಲು ಅದಕ್ಕಿಂತಲೂ ಮುಖ್ಯ ಕಾರಣ ಒಂದು ಪುಟ್ಟ ಹಕ್ಕಿಯ ಕುರಿತು ಕಳೆದ ಹಲವು ತಿಂಗಳುಗಳಿಂದ ನಾನು ನಡೆಸುತ್ತಿರುವ ಹುಡುಕಾಟವಾಗಿತ್ತು. ಲಕ್ಷದ್ವೀಪ ಸಮೂಹದ ಹಲವು ದ್ವೀಪಗಳಲ್ಲಿ ಸುತ್ತಿ ಬಂದಿರುವ ನಾನು ಕಂಡಿರುವ ಪಕ್ಷಿ ವರ್ಗಗಳಲ್ಲಿ ಕಾಗೆಯೇ ಪ್ರಮುಖವಾಗಿತ್ತು. ಆನಂತರದ ಸ್ಥಾನ ಕೋಗಿಲೆಗಳದಾಗಿತ್ತು. ಅದು ಬಿಟ್ಟರೆ ಕಾಣುವುದು ದೂರ ದೇಶಗಳಿಂದ ಚಳಿಗಾಲದ ಸಮಯದಲ್ಲಿ ವಲಸೆಬಂದು ಮಳೆಗಾಲದ ಮೊದಲು ಮತ್ತೆ ಹೊರಡುವ ದೇಶಾಂತರ ಪಕ್ಷಿಗಳು. ಮತ್ತೆ ಹೀಗೇ ದಾರಿ ತಪ್ಪಿಯೋ, ಆಹಾರ ಹುಡುಕುತ್ತಲೋ ಬಂದಿರುವ ಕಲವೇ ಕೆಲವು ರಾಮದಾಸ ಹದ್ದುಗಳು. ಅದು ಬಿಟ್ಟರೆ ಇಲಿಗಳ ಉಪಟಳ ಎದುರಿಸಲು ವಿಜ್ಞಾನಿಗಳು ತಂದು ಬಿಟ್ಟಿರುವ ಬೆರಳೆಣಿಕೆಯಷ್ಟಿರುವ ಕಣಜದ ಗೂಬೆಗಳು.

ಅಂದ ಹಾಗೆ ಈ ಕಾಗೆಗಳು ಮತ್ತು ಮತ್ತು ಕೋಗಿಲೆಗಳು ಬಹುತೇಕ ವಲಸೆ ಹಕ್ಕಿಗಳಲ್ಲ. ಹಾಗಾದರೆ ಇವುಗಳು ನೂರಾರು ಮೈಲುಗಳ ದೂರ ಕಡಲ ನಡುವೆ ಇರುವ ಈ ಪುಟ್ಟ ದ್ವೀಪಗಳಿಗೆ ಹೇಗೆ ಬಂದವು ಎನ್ನುವುದು ನನಗೆ ಇನ್ನೂ ಚೋಧ್ಯವಾಗಿಯೇ ಉಳಿದಿದೆ. ಕೆಲವರು ಊಹಿಸುವ ಪ್ರಕಾರ ಹಿಮಯುಗದ ಸಮಯದಲ್ಲಿ ಅಂದರೆ ಸುಮಾರು ನೂರಾ ಮೂವತ್ತು ಸಾವಿರ ವರ್ಷಗಳ ಹಿಂದೆ ಈ ದ್ವೀಪಗಳಿಗೂ ಮತ್ತು ಭಾರತದ ಮುಖ್ಯನೆಲಕ್ಕೂ ನಡುವೆ ಇಂತಹವೇ ಸಾವಿರಾರು ನಡುಗುಡ್ಡೆಗಳಿದ್ದವು ಮತ್ತು ಅವುಗಳು ಹಕ್ಕಿಗಳೂ ಹಾರಿಬರಬಲ್ಲಷ್ಟು ಹತ್ತಿರದಲ್ಲಿದ್ದವು. ಭಾರತ ಭೂಶಿರದಿಂದ ಉತ್ತರಕ್ಕೆ ಬೀಸಿದ ಮುಂಗಾರಿನ ಉಷ್ಣಗಾಳಿ ಉತ್ತರದ ಹಿಮಗಡ್ಡೆಗಳನ್ನು ಕರಗಿಸಿ, ಕರಗಿದ ಆ ನೀರು ಸಾಗರಕ್ಕೆ ನುಗ್ಗಿ, ಸಾಗರದ ನೀರು ಮೇಲಕ್ಕೆ ಎದ್ದು ಇಂತಹವೇ ಇನ್ನೂ ಹಲವು ಸಾವಿರ ನಡುಗುಡ್ಡೆಗಳು ಮುಳುಗಿದವು ಮತ್ತು ಆಗಲೇ ಈ ದ್ವೀಪಗಳಲ್ಲಿ ಕುಪ್ಪಳಿಸುತ್ತಿದ್ದ ಈ ಕಾಗೆಗಳು ಮತ್ತು ಕೋಗಿಲೆಗಳು ಉಳಿದ ದ್ವೀಪಗಳೊಳಗೇ ಒಂಟಿಯಾದವು ಅನ್ನುತ್ತಾರೆ ಅವರು. ಹಾಗಾದರೆ ಉಳಿದ ಹಕ್ಕಿಗಳು ಏನಾದವು ಎಂಬುದು ನನ್ನನ್ನು ಕಾಡುವ ಇನ್ನೊಂದು ಪ್ರಶ್ನೆ.

ಇನ್ನೊಂದು ಚೋದ್ಯದ ಸಂಗತಿ ಈಗ ನಾನಿರುವ ಈ ಮೂಲ ದ್ವೀಪದಲ್ಲಿ ಕಾಗೆಗಳೂ ಇಲ್ಲ ಎನ್ನುವುದು. ಬರೀ ಕೋಗಿಲೆಗಳು ಮಾತ್ರ ಹಗಲೂ ಇರುಳೂ ಸಿಕ್ಕಾಪಟ್ಟೆ ಅರಚಾಡುತ್ತಿರುತ್ತವೆ. ಕೆಲವರು ಪರೀಕ್ಷಾರ್ಥ ತಂದುಬಿಟ್ಟ ಕೆಲವು ಕಾಗೆಗಳು ಅಲ್ಲಿ ಇಲ್ಲಿ ಸದ್ದು ಮಾಡುತ್ತಿರುತ್ತದೆ. ಆದರೆ ಇಲ್ಲಿನ ದ್ವೀಪವಾಸಿಗಳು ಹೇಳುವ ಪ್ರಕಾರ ಅದು ಯಾರು ಬೇಕಾದರೂ ಪರೀಕ್ಷಾರ್ಥವಾಗಿ ಕಾಗೆಗಳನ್ನು ಈ ದ್ವೀಪಕ್ಕೆ ತಂದು ಬಿಡಲಿ. ಅವುಗಳ ಸಂಖ್ಯೆ ಕಡಿಮೆಯಾಗುತ್ತದೆಯೇ ವಿನಃ ಹೆಚ್ಚುವುದಿಲ್ಲ ಎಂದು. ಏಕೆಂದರೆ ಈ ದ್ವೀಪದ ಬಲು ಶ್ರೇಷ್ಠರಾದ ಸಂತರೊಬ್ಬರು ಕಾಕಸಂತತಿಯ ಮೇಲೆ ಶಾಪ ಹಾಕಿರುವರು. ಅವರು ಶಾಪ ಹಾಕಲೂ ಒಂದು ಕಾರಣವಿದೆ.

ಅವರು ಆಕಾಶಕ್ಕೆ ಕೈ ಎತ್ತಿ ಪಡೆದವನನ್ನು ಬೇಡಿಕೊಳ್ಳುತ್ತಿರುವಾಗ ಕಾಗೆಯೊಂದು ಅವರ ತೆರೆದ ಬೊಗಸೆಯೊಳಗೆ ಕಾಷ್ಠ ವಿಸರ್ಜಿಸಿಬಿಡುತ್ತದೆ. ಸಿಟ್ಟುಗೊಂಡ ಅವರು ಈ ದ್ವೀಪದ ಕಾಕಸಂತತಿ ನಾಶವಾಗಲಿ ಎಂದು ಶಾಪ ಹಾಕಿದ್ದಾರೆ. ಈ ಶಾಪ ಹಾಕಿದ್ದು ಸುಮಾರು ನಾನೂರು ವರ್ಷಗಳ ಹಿಂದೆ. ಅಂದಿನಿಂದ ಇಲ್ಲಿ ಕಾಗೆಗಳು ಕಾಣಿಸುತ್ತಿರಲಿಲ್ಲ. ಆದರೆ ಇದೀಗ ದ್ವೀಪದಲ್ಲಿ ಈ ಸಂತರ ಕುರಿತ ಭಕ್ತಿ ಮತ್ತು ಭಯ ಕಮ್ಮಿಯಾಗುತ್ತಿದೆ, ಅವರ ಶಾಪದ ಶಕ್ತಿಯನ್ನು ಒರೆಗೆ ಹಚ್ಚುವ ಪರೀಕ್ಷಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ‘ಅಂತಹ ತರಲೆ ಬುದ್ದಿಯ ಕೀಟಲೆಕೋರರು ದೂರದ ತೀರದಿಂದ ಮತ್ತು ಬೇರೆಯ ದ್ವೀಪಗಳಿಂದ ಕಾಗೆಗಳನ್ನು ಕದ್ದುಮುಚ್ಚಿ ಹಿಡಿದು ತಂದು ಇಲ್ಲಿ ಬಿಡುತ್ತಿದ್ದಾರೆ. ಆದರೆ ಅವರು ಎಷ್ಟು ಕಾಗೆಗಳನ್ನು ತಂದರೂ ಅವುಗಳ ವಂಶ ಇಲ್ಲಿ ಉದ್ಧಾರವಾಗುವುದಿಲ್ಲ, ಅವುಗಳ ಸಂತತಿಯನ್ನು ನಾಶಮಾಡಲೆಂದೇ ಇಲ್ಲಿ ಸಹಸ್ರಾರು ಕೋಗಿಲೆಗಳಿವೆ. ಇದಲ್ಲವೇ ನಮ್ಮ ಸಂತನ ಮಹಿಮೆ’ ಎಂದು ಇಲ್ಲಿನ ಹಿರಿಯರಾದ ದ್ವೀಪವಾಸಿಗಳು ಹೇಳುತ್ತಾರೆ.

ಆದರೆ ನಾನು ಹುಡುಕುತ್ತಿರುವ ಪುಟ್ಟ ಹಕ್ಕಿಯ ಕಥೆ ಬೇರೆಯೇ ಇದೆ. ಈ ಹಕ್ಕಿಯ ಹೆಸರು ‘ಫೂಕುಂಞಿ’ . ಅಂದರೆ ಹೂಮರಿ ಎಂದು ಅರ್ಥ. ಹೆಸರಿನ ಹಾಗೆಯೇ ಈ ಹಕ್ಕಿ ಒಂದು ಕುಸುಮಬಾಲೆ. ಅಷ್ಟು ಹಗುರ. ಅಷ್ಟು ಸೂಕ್ಷ್ಮ, ಮತ್ತು ಅಷ್ಟೊಂದು ಸುಂದರ. ಒಂದು ಕಾಲದಲ್ಲಿ ಈ ದ್ವೀಪದ ಮನೆಮನೆಗಳ ಎದುರಿಗಿರುವ ಬುಗುರಿ ಮರದ ಎಲೆಗಳಿಗೆ ಜೋತಾಡುತ್ತ, ಎಲೆ ಯಾವುದು ಹಕ್ಕಿ ಯಾವುದು ಎಂದು ಗೊತ್ತಾಗದ ಹಾಗೆ ಉಲಿಯುತ್ತಿದ್ದ ಈ ಹೂ ಹಕ್ಕಿಗಳು ಇವರ ಹಾಡುಗಳಲ್ಲಿ ಮತ್ತು ಕತೆಗಳಲ್ಲಿ ದಂಡಿಯಾಗಿ ಸಿಗುತ್ತವೆ. ಇವರ ಹಾಡು ಮತ್ತು ಕಥೆಗಳಲ್ಲಿ ಇಷ್ಟೊಂದು ಸಲ ಬರುವ ಹಕ್ಕಿಗಳು ನಿಜವಾಗಿಯೂ ಯಾಕೆ ಇಲ್ಲ ಎಂದು ಹುಡುಕತೊಡಗಿದ್ದೆ. ಅವುಗಳು ಈಗ ಇಲ್ಲದಿರುವುದಕ್ಕೆ ಹಲವು ಕಾರಣಗಳನ್ನೂ ಹೇಳಿದ್ದರು.

(ಫೋಟೋಗಳು: ಅಬ್ದುಲ್‌ ರಶೀದ್)

ಕೆಲವರು ಪರೀಕ್ಷಾರ್ಥ ತಂದುಬಿಟ್ಟ ಕೆಲವು ಕಾಗೆಗಳು ಅಲ್ಲಿ ಇಲ್ಲಿ ಸದ್ದು ಮಾಡುತ್ತಿರುತ್ತದೆ. ಆದರೆ ಇಲ್ಲಿನ ದ್ವೀಪವಾಸಿಗಳು ಹೇಳುವ ಪ್ರಕಾರ ಅದು ಯಾರು ಬೇಕಾದರೂ ಪರೀಕ್ಷಾರ್ಥವಾಗಿ ಕಾಗೆಗಳನ್ನು ಈ ದ್ವೀಪಕ್ಕೆ ತಂದು ಬಿಡಲಿ. ಅವುಗಳ ಸಂಖ್ಯೆ ಕಡಿಮೆಯಾಗುತ್ತದೆಯೇ ವಿನಃ ಹೆಚ್ಚುವುದಿಲ್ಲ ಎಂದು.

ಅವುಗಳಲ್ಲಿ ಒಂದು ಹೆಚ್ಚುತ್ತಿರುವ ಕಾಗೆಗಳ ಸಂಖ್ಯೆ. ಇನ್ನೊಂದು ಕಣ್ಮರೆಯಾಗುತ್ತಿರುವ ಬುಗುರಿ ಮರಗಳು. ಆದರೆ ನನಗೆ ಅನಿಸಿದ ಕಾರಣ ಬೇರೆಯೇ ಇತ್ತು ಮತ್ತು ಅದು ಸತ್ಯವೂ ಆಗಿತ್ತು. ಅದು ಈ ದ್ವೀಪವಾಸಿಗಳ ಒಂದು ಕಾಲದ ಹಕ್ಕಿ ಸಾಕುವ ಹುಚ್ಚು. ಎಲೆಗಳ ಮರೆಯಲ್ಲಿರುವ ಈ ಹಕ್ಕಿಗಳನ್ನು ಅಲ್ಲೇ ಇರಲು ಬಿಡುವುದನ್ನು ಬಿಟ್ಟು ಅದನ್ನು ಹಿಡಿದು ಪಂಜರದಲ್ಲಿ ಸಾಕುವ ಅವರ ಹುಚ್ಚು. ಮತ್ತು ಮಕ್ಕಳಿಗೆ ಇವುಗಳ ಮೊಟ್ಟೆಯನ್ನು ತಿನಿಸುವ ಹುಚ್ಚು. ಈ ಹುಚ್ಚಿನಿಂದಾಗಿ ಈ ಹೂ ಹಕ್ಕಿಗಳ ಸಂತತಿಯೇ ನಾಶವಾಗಿತ್ತು. ಕೇವಲ ಕೆಲವೇ ಕೆಲವು ಹಕ್ಕಿಗಳು ದ್ವೀಪದ ತುದಿಯಲ್ಲಿರುವ ಪೊದೆ ತುಂಬಿದ ಜವುಗು ಜಾಗದಲ್ಲಿ ಕಾಗೆಗಳಿಂದಲೂ ಮನುಷ್ಯರ ಕಾಕದೃಷ್ಟಿಯಿಂದಲೂ ತಪ್ಪಿಸಿಕೊಂಡು ಬದುಕುತ್ತಿದ್ದವು. ಆದರೆ ಒಂದು ದಿನ ನನ್ನ ಕಣ್ಣಿಗೆ ಬಿದ್ದು ಬಿಟ್ಟವು.

ಅಂದಿನಿಂದ ಯಾರಿಗೂ ಹೇಳದೇ ಈ ಮುದ್ದು ಹಕ್ಕಿಗಳ ಹಿಂದೆ ಬಿದ್ದು ಬಿಟ್ಟಿದ್ದೆ. ಈ ದ್ವೀಪದ ಒಂದು ಕಾಲದ ಏಕಾಂಗಿ ತಬ್ಬಲಿತನವನ್ನೂ, ಈಗಿನ ಅನಾಹುತಗಳನ್ನೂ ಒಂದು ರೂಪಕವಾಗಿ ಹೇಳಲೋ ಎಂಬಂತೆ ಯಾರ ಕಣ್ಣಿಗೂ ಕಾಣಿಸದೆ ಬದುಕುತ್ತಿರುವ ಅಸಹಾಯಕ ಹಕ್ಕಿಗಳು. ಯಾರಿಗಾದರೂ ಹೇಳಿದರೆ ಅವರು ಇದನ್ನು ಹಿಡಿದು ಸಾಕಲು ಮುಂದಾಗುತ್ತಾರೆ. ಯಾರಿಗಾದರೂ ಒಮ್ಮೆಯಾದರೂ ಕೈಯಲ್ಲಿ ಮುಟ್ಟಿ ಒಮ್ಮೆಯಾದರೂ ಕೆನ್ನೆಯ ಬಳಿ ತಂದು ಸೋಕಿಸಿ ಆದ್ರರಾಗಬೇಕು ಅನ್ನಿಸುವ ಹಾಗಿರುವ ಕೋಮಲ ಹಕ್ಕಿಗಳು ಇವು. ಗೊತ್ತಾದರೆ ಮತ್ತೆ ಈ ಊರಿನ ಮಕ್ಕಳು ದೀವು ಹಲಸಿನ ಅಂಟನ್ನು ಕೋಲಿನ ತುದಿಗೆ ಅಂಟಿಸಿ ಅದನ್ನು ಎಲೆಗಳಿಗೆ ಸವರಿ ಸಿಕ್ಕಿಹಾಕಿಕೊಂಡ ಈ ಹೂಹಕ್ಕಿಗಳನ್ನು ಹಿಡಿದು ಪಂಜರದಲ್ಲಿ ಸಾಕಲು ಶುರುಮಾಡುತ್ತಾರೆ. ಅದಕ್ಕೆ ನಾನು ಇದುವರೆಗೂ ಯಾರಿಗೂ ಹೇಳಲಿಲ್ಲ. ಕೇಳಿಸುವ ಹಾಗೆ ಈ ಹಕ್ಕಿಗಳೂ ಜೋರು ಸದ್ದು ಮಾಡುವುದಿಲ್ಲ. ನಾನೂ ಅಷ್ಟೆ ಈ ಹೂ ಹಕ್ಕಿಗಳ ಫೋಟೋಗಳನ್ನೂ ಯಾರಿಗೂ ತೋರಿಸುವುದಿಲ್ಲ.

ನಾನು ಈ ಹಕ್ಕಿಗಳನ್ನು ನೋಡಲು ಹೋಗುವ ಹಾದಿಯಲ್ಲಿ ಒಂದು ಟೀ ಅಂಗಡಿ ಇದೆ. ಈ ಟೀ ಅಂಗಡಿಯಾತ ಮಿನಿಕಾಯ್ ದ್ವೀಪದವನು. ಈತನ ಮುಖದಲ್ಲಿ ಸದಾ ತಾನೊಬ್ಬ ಪಾತ್ರಧಾರಿ ಎಂಬ ಭಾವ. ಆತನ ಪ್ರತಿಯೊಂದು ನಡೆಯೂ ಪಾತ್ರವೊಂದು ನಡೆದಂತೆ. ಟೀ ಕುದಿಸುವುದು, ಸೋಸುವುದು, ಚಮಚೆಯಲ್ಲಿ ಸಕ್ಕರೆ ತೆಗೆದು ಲೋಟಕ್ಕೆ ಹಾಕಿ ಅಲ್ಲಾಡಿಸುವುದು. ಒಂದೇ ಎತ್ತರದಿಂದ ಟೀಯನ್ನು ಒಂದು ಲೋಟದಿಂದ ಇನ್ನೊಂದು ಲೋಟಕ್ಕೆ ಉದ್ದಕ್ಕೆ ಸುರಿದು ಟೇಬಲ್ಲಿನ ಮುಂದೆ ಇಡುವುದು. ಅಡಿಕೆಯನ್ನು ಕತ್ತರಿಸಿ ಸೀಳುಮಾಡಿ, ಒಂದೇ ವೀಳ್ಯದೆಲೆಯನ್ನು ಸಮನಾಗಿ ನಾಲ್ಕು ಭಾಗಗಳಾಗಿ ಕತ್ತರಿಸಿ ಹೊಳೆಯುವ ಸುಣ್ಣದ ಕರಂಡಕದಿಂದ ಸಣ್ಣಗೆ ತೆಗೆದು ಎಲೆಗೆ ಹಚ್ಚಿ ಬಾಯೊಳಗಿಟ್ಟು ಕಣ್ಣಲ್ಲೇ ನಗುವುದು. ಎಲ್ಲವೂ ಕರಾರುವಾಕ್ಕು. ಹೆಚ್ಚಾಗಿ ಯಾರೂ ಓಡಾಡದ ದ್ವೀಪದ ತುದಿಯ ಈ ಕಾಡು ಜಾಗದಲ್ಲಿ ಹಳೆಯ ಮಲಯಾಳಂ ಸಿನಿಮಾ ಹಾಡು ಹಾಕಿಕೊಂಡು ಕೂರುವ ಈತ ನನ್ನ ತಿರುಗಾಟದಿಂದ ಕೊಂಚ ವಿಚಲಿತನಾಗಿದ್ದ. ನನ್ನ ಕ್ಯಾಮರಾವನ್ನು ಆತ ಸರ್ವೆ ಇಲಾಖೆಯ ಅಳೆಯುವ ಉಪಕರಣ ಎಂದು ಅಂದುಕೊಂಡಿದ್ದ.

ಆತ ವಿಚಲಿತನಾಗುವುದಕ್ಕೂ ಕಾರಣವಿತ್ತು. ಆತನ ಟೀ ಅಂಗಡಿ ಇದ್ದುದು ಯಾರಿಗೂ ಸೇರದ ಭಂಡಾರದ ಭೂಮಿಯಲ್ಲಿ. ಈ ‘ಭಂಡಾರದ ಭೂಮಿ’ ಒಂದು ಕಾಲದಲ್ಲಿ ಅಂದರೆ ನೂರಾರು ವರ್ಷಗಳ ಹಿಂದೆ ಕಣ್ಣೂರಿನ ಬೀಬಿ ರಾಣಿ ದ್ವೀಪವಾಸಿಗಳಿಗೆ ತೆಂಗಿನ ಮರ ನೆಡಲು ಭೋಗ್ಯಕ್ಕೆ ನೀಡಿದ ಭೂಮಿ. ಲಕ್ಷದ್ವೀಪದ ಬಹುತೇಕ ಕಡೆ ಇಂತಹ ಭಂಡಾರದ ಭೂಮಿಗಳಿವೆ. ಇಲ್ಲಿ ಇರುವ ತೆಂಗಿನ ಮರಗಳ ಮೇಲಿನ ಹಕ್ಕು ನೆಟ್ಟವರ ಕುಟುಂಬಸ್ಥರದು. ಭೂಮಿಯ ಮೇಲಿನ ಹಕ್ಕು ಇನ್ನೂ ಯಾರದೆಂದು ಇತ್ಯರ್ಥವಾಗಿಲ್ಲ. ಅಂತಹ ಕಡೆ ತೆಂಗಿನ ಮರಗಳ ಹಾಸಿನ ಕೆಳಗೆ ಟೀ ಅಂಗಡಿ ಇಟ್ಟಿರುವ ಈತನಿಗೆ ಸದಾ ಎರಡು ಭಯ. ಒಂದು ಯಾರಾದರೂ ತನ್ನನ್ನು ಒಕ್ಕಲೆಬ್ಬಿಸಬಹುದು ಎಂದು.(ಎಬ್ಬಿಸಿದರೂ ಯಾರೂ ತನ್ನ ಸಹಾಯಕ್ಕೆ ಬರಲಾರರು ಎನ್ನುವುದು ಅದಕ್ಕೆ ಹೊಂದಿಕೊಂಡಿರುವ ಉಪ ಭಯ. ಯಾಕೆಂದರೆ ಈತ ಸ್ಥಳೀಯನಾಗಿರದೆ ದೂರದ ಮಿನಿಕಾಯ್ ದ್ವೀಪದವನು). ಈತನ ಇನ್ನೊಂದು ದೊಡ್ಡ ಭಯ ತಲೆಯ ಮೇಲೆ ತೆಂಗಿನ ಕಾಯಿ, ತೆಂಗಿನ ಗರಿ ಇತ್ಯಾದಿಗಳು ಬೀಳಬಹುದೆಂದು. ಅದಕ್ಕೇ ಈತ ಅಂಗಡಿ ಬಿಟ್ಟು ಹೊರಗೆ ನಡೆಯುವಾಗಲೆಲ್ಲ ತಲೆಯ ಮೇಲೆ ಕೈಯಿಟ್ಟು ನಡೆಯುತ್ತಿದ್ದ ಅಂದುಕೊಂಡಿದ್ದೆ. ಆದರೆ ಆತ ತಲೆಯ ಮೇಲೆ ಕೈ ಇಡುತ್ತಿದ್ದುದು ಬೇರೆಯ ಕಾರಣಕ್ಕೆ ಎಂದು ಆಮೇಲೆ ಒಂದು ಮಧ್ಯಾಹ್ನ ಗೊತ್ತಾಯಿತು.

ಆವತ್ತು ಮಧ್ಯಾಹ್ನ ಕಡಲಿಗೆ ಇಳಿತವಿತ್ತು. ಸೂರ್ಯನೂ ಮಂಕಾಗಿದ್ದ. ಇದ್ದಕ್ಕಿದಂತೆ ಆಗ್ನೇಯದ ಕಡೆಯಿಂದ ಗಾಳಿಬೀಸಲು ತೊಡಗಿತು. ಎಷ್ಟು ದೊಡ್ಡ ಗಾಳಿ ಎಂದರೆ ಈ ಮಿನಿಕಾಯ್ ದ್ವೀಪದವನ ಟೀ ಅಂಗಡಿಯ ಪ್ಲಾಸ್ಟಿಕ್ ಕುರ್ಚಿಗಳು ತರಗೆಲೆಗಳಂತೆ ತೆಂಗಿನ ಮರಗಳ ಬುಡದಲ್ಲಿ ಹಾರಾಡಲು ತೊಡಗಿದವು. ಈತ ಅಂಗಡಿಯಿಂದ ಹೊರಬಂದು ಹಾರುತ್ತಿದ್ದ ಕುರ್ಚಿಗಳನ್ನು ಹಿಡಿಯಲು ಶುರುಮಾಡಿದ.ಆಗ ಆತನ ತಲೆಯ ಮೇಲಿದ್ದ ಚೌರಿ ಕೂದಲಿನ ಟೋಪಿ ಆತನ ತಲೆಯಿಂದ ಮೇಲೆದ್ದು ಪ್ಲಾಸ್ಟಿಕ್ ಕುರ್ಚಿಗಳ ಜೊತೆಗೆ ತಾನೂ ಹಾರಾಡತೊಡಗಿತು. ಆತ ಕುರ್ಚಿಗಳನ್ನು ಹಿಡಿದಿಡುವುದನ್ನು ಕೈಬಿಟ್ಟು ಇನ್ನೇನು ಕಡಲಿನೊಳಕ್ಕೆ ಹಾರಿಯೇ ಹೋಗಲಿದ್ದ ತನ್ನ ಚೌರಿ ಕೂದಲಿನ ಹಿಂದೆ ಓಡಿದ. ಕೈಯಲ್ಲಿ ಆ ಚೌರಿ ಕೂದಲಿನ ಟೋಪಿ ಹಿಡಕೊಂಡು ವಾಪಾಸು ಬರುವಾಗ ಆತ ಕೊಂಚ ಮಂಕಾಗಿದ್ದ. ನನಗೂ ಕೆಟ್ಟದೆನಿಸಿತ್ತು. ನನ್ನ ಕ್ಯಾಮರಾದಲ್ಲಿದ್ದ ಈ ಹೂಹಕ್ಕಿಗಳನ್ನು ಅವನಿಗೆ ತೋರಿಸಿ ‘ಈ ಹಕ್ಕಿ ನಿಮ್ಮ ಮಿನಿಕಾಯ್ ದ್ವೀಪದಲ್ಲಿದೆಯೇ?’ ಎಂದು ವಿಷಯ ಬದಲಿಸಲು ನೋಡಿದೆ. ಆತ ಈ ಹೂ ಹಕ್ಕಿಗಳ ಫೋಟೋವನ್ನು ಸರಿಯಾಗಿ ನೋಡಿದನೋ ಇಲ್ಲವೋ ಗೊತ್ತಿಲ್ಲ. ‘ಓ ಈ ಹಕ್ಕಿ ಮಾತ್ರವೇ ಏನು? ಲೋಕದ ಎಲ್ಲ ಹಕ್ಕಿಗಳೂ ನಮ್ಮ ಮಿನಿಕಾಯ್ ದ್ವೀಪದಲ್ಲಿದೆ’ ಎಂದು ಅಂದುಬಿಟ್ಟಿದ್ದ. ಅಂದಿನಿಂದ ನಾನು ಈ ಮಿನಿಕಾಯ್ ದ್ವೀಪಕ್ಕೆ ತೆರಳಲು ಒಂದು ನೆಪಕ್ಕಾಗಿ ಕಾಯುತ್ತಿದ್ದೆ. ದೋಣಿ ಸ್ಪರ್ಧೆಯ ಔತಣದ ಆಹ್ವಾನದಿಂದಾಗಿ ಆ ನೆಪವೂ ಸಿಕ್ಕು ಹಡಗು ಹತ್ತಿ ಹೊರಟೇ ಬಿಟ್ಟಿದ್ದೆ.

ಮುಂದೆ ಏನಾಯಿತು ಎಂದು ನಾಳೆ ಬರೆಯುವೆ.

(ನಾಳೆ ಮುಂದುವರಿಯುವುದು)

ಮಿನಿಕಾಯ್ ಕಥಾನಕ ಮೊದಲ ಕಂತಿನಿಂದ ಓದಲು ಇಲ್ಲಿ ಕ್ಲಿಕ್ ಮಾಡಿ