ಸಂಜೆ ಕಾಲೇಜಿನಿಂದ ಬಂದ ನಾನು ಎಂದಿನಂತೆ ಟಿವಿಯೊಳಗೆ ಹೊಸ ಸುದ್ದಿ ಏನಿದೆ ಎಂದು ನೋಡಲು ಇಣುಕಿದೆ. ಅದರೊಳಗೆ ಆ ಸುದ್ದಿ ಮತ್ತಷ್ಟು ಬಸವಳಿಯುವಂತೆ ಮಾಡಿತು – ಕುಣಿಯುತ್ತ ಕುಣಿಯುತ್ತಲೇ ಕೆರೆಮನೆ ಶಂಭು ಹೆಗಡೆ ಈ ಭವದ ಆಟ ಮುಗಿಸಿ ಮತ್ತೆ ಬರದ ಲೋಕದತ್ತ ನಡೆದಿದ್ದಾರೆಂಬ ಸುದ್ದಿ ಅದಾಗಿತ್ತು. ಮನ ಕಲಕಿತು. ಸಾಗರದಲ್ಲಿ ತೆರೆಗಳು ಎದ್ದೆದ್ದು ಬರುವಂತೆ ನೆನಪುಗಳು ಒತ್ತೊತ್ತಿ ಬರತೊಡಗಿದುವು.

ಮೂವತ್ತೈದು ವರ್ಷಗಳಷ್ಟು ಹಿಂದೆ, ಪುತ್ತೂರಿಗೆ ಮಹಾಗಣಪತಿ ಯಕ್ಷಗಾನ ಮಂಡಳಿ, ಇಡಗುಂಜಿ ಎಂಬ ಬಡಗು ತಿಟ್ಟಿನ ಮೇಳ ಬರುತ್ತದೆಂಬ ಸುದ್ದಿ ಕೇಳಿದಾಗ ಅದಾಗಲೇ ಯಕ್ಷಗಾನದ ಹುಚ್ಚು ಹಿಡಿಸಿಕೊಂಡಿದ್ದ ಹುಡುಗ ಪ್ರಾಯದ ನಮಗೆಲ್ಲ ಕುತೂಹಲ. ಆ ಮೇಳದಲ್ಲಿ ಕೆರೆಮನೆ ಕುಟುಂಬದ ಘಟಾನುಘಟಿ ಕಲಾವಿದರಿದ್ದಾರಂತೆ, ಪಾತ್ರಧಾರಿಗಳು ಕೇದಗೆ ಮುಂಡಾಸು ತೊಡುತ್ತಾರಂತೆ, ನೆಲದಲ್ಲಿ ಮಂಡಿಯೂರಿ ಗರಗರನೆ ಸುತ್ತುತ್ತಾರಂತೆ… ನಮ್ಮ ಕುತೂಹಲಕ್ಕೆ ಗರಿಗಳು, ರೆಕ್ಕೆ ಪುಕ್ಕಗಳು ಮೂಡತೊಡಗಿದುವು.

ತೆಂಕು ತಿಟ್ಟಿನ ಯಕ್ಷಗಾನವಷ್ಟೆ ಅಂದು ನಮಗೆ ತಿಳಿದಿತ್ತು. ಪುತ್ತೂರಿನ ಜಾತ್ರೆ ಗದ್ದೆಯಲ್ಲಿ ಒಂದೇ ದಿನ ಐದಾರು ಡೇರೆಗಳ ತುಂಬ ತೆಂಕು ತಿಟ್ಟಿನ ಪೌರಾಣಿಕ ಕಥಾನಕ ಗಳು ವಿಜೃಂಭಿಸುತ್ತಿದ್ದ ದಿನಗಳವು. ಬಡಗು ತಿಟ್ಟು ಅಂದರೆ ಏನೆಂದೇ ತಿಳಿದಿರಲಿಲ್ಲ. ಬಿಡದೇ ನಾಲ್ಕೈದು ದಿನ ಯಕ್ಷಗಾನ ನೋಡುವಷ್ಟು ಯಕ್ಷಗಾನದ ಗೀಳು ನಮಗೆ.

ಸಂಜೆಯೇ ಡೇರೆಗೊಂದು ಸುತ್ತು ಬಂದು ಕೃತಾರ್ಥರಾಗಿ, ಅಂದು ರಾತ್ರೆ ಒಂಬತ್ತರ ಹೊತ್ತಿಗೆ ಮೇಳದ ಡೇರೆಯಲ್ಲಿ ಹಾಜರಿದ್ದೆವು, ನಮ್ಮ ಮನೆ ಮಂದಿಯೊಂದಿಗೆ. ಜನವೋ ಜನ. ಅಲ್ಲಿಯ ತನಕ ಚಚ್ಚೌಕದ ಚಿಕ್ಕ ವೇದಿಕೆ ನೋಡಿದ್ದ ನಮಗೆ ಅಲ್ಲಿದ್ದ ಅರ್ಧ ಚಂದ್ರಾಕೃತಿಯ ವಿಶಾಲ ವೇದಿಕೆ ಬೆರಗು ಮಾಡಿತು.

ಅಂದಿನ ಯಕ್ಷಗಾನ ಪ್ರಸಂಗ ಈಗಲೂ – ತೀರ ನಿನ್ನೆ ನೋಡಿದಂತೆ – ನೆನಪಿದೆ. ಪ್ರಚಂಡ ವಿಶ್ವಾಮಿತ್ರ ಮತ್ತು ಉತ್ತರನ ಪೌರುಷ. ಶಿವರಾಮ ಹೆಗಡೆಯವರ ವಸಿಷ್ಠ, ಮಹಾಬಲ ಹೆಗಡೆಯವರ ವಿಶ್ವಾಮಿತ್ರ, ಗಜಾನನ ಹೆಗಡೆಯವರ ಮೇನಕೆ, ಗೋಡೆ ನಾರಾಯಣ ಹೆಗಡೆಯವರ ತ್ರಿಶಂಕು. ಎಂತೆಂಥ ಕಲಾವಿದರು. ಸಾಕ್ಷಾತ್ ಗಂಧರ್ವಾಧಿಪತಿ ಬಂದಿರಬಹುದು ಅಂದಿನ ಆಟದ ಸವಿ ಅನುಭವಿಸಲು. ಬೆಳಗ್ಗಿನ ಜಾವ ಮೂರರ ಹೊತ್ತಿಗೆ ಮೊದಲ ಪ್ರಸಂಗ ಮುಗಿಯಿತು. ಹೊಂತಕಾರೀ ಪಡೆಗಳಾದ ನಮ್ಮನ್ನು ಕರೆದೊಯ್ದ ಹಿರಿಯರೆಲ್ಲ ನಾಳಿನ ಕಾಯಕಕ್ಕೆ ತಯಾರಾಗಲು ಮುಂಚಿತವಾಗಿ ಹೊರಡಬೇಕೇ? ನಮಗೋ ಎಲ್ಲ ನೋಡಬೇಕೆಂಬ ಮನಸ್ಸು. ಒಲ್ಲದ ಮನದೊಂದಿಗೆ ನಮ್ಮ ಪಟಾಲಮ್ಮು ಹೊರಟಿತು. ಆದರೇನು ಆಶ್ಚರ್ಯ, ಓಹ್, ಅಲ್ಲಿ ನೋಡಿ – ಉತ್ತರನ ಪ್ರವೇಶವಾಯಿತು. ಅದೆಂಥ ಮೋಡಿ! ಅಗಲ ಮತ್ತು ದುಂಡಗಿನ ಮುಖದ ಸ್ಪುರದ್ರೂಪೀ ತರುಣ ಮಿಂಚು ಕೋರೈಸಿದಂತೆ ಆ ಅರ್ಧಚಂದ್ರಾಕೃತಿಯ ವೇದಿಕೆಯನ್ನು ತುಂಬಿದ ಆ ಬಗೆಯಿಂದ ಬೆಕ್ಕಸ ಬೆರಗಾದುವು. ಎದ್ದಲ್ಲೇ ಕುಳಿತೆವು. ಕುಳಿತಲ್ಲೇ ಬಿಡುಗಣ್ಣರಾದೆವು. ಮುಂದಿನ ಮೂರು ಗಂಟೆಗಳ ಕಾಲ ಉತ್ತರನ ನಿಜ ಪೌರುಷ ಅಲ್ಲಿ ವಿಜೃಂಭಿಸಿತು.

ಉತ್ತರ ಮಾತಿನ ಮಲ್ಲ. ಮಾತಿನ ಮಲ್ಲರಾದ ಶೇಣಿ, ರಾಮದಾಸ ಸಾಮಗ, ವಾಸುದೇವ ಸಾಮಗರ ಉತ್ತರನನ್ನು ಕಂಡಿದ್ದೇನೆ. ಆದರೆ ಶಂಭು ಹೆಗಡೆಯವರ ಉತ್ತರಕ್ಕೆ ಸರಿ ಸಾಟಿಯಾದದ್ದು ಬೇರೊಂದಿಲ್ಲ. ಅಲ್ಲಿ ಮಾತು ಇತ್ತು. ಅದಕ್ಕಿಂತ ಹೆಚ್ಚಿಗೆ ಉತ್ತರ ಭೂಪನ ಅದ್ಭುತ ವಿಲಾಸವಿತ್ತು. ಅದು ಮಾತು ಕುಣಿತಗಳ ಅನ್ಯಾದೃಶ ಉತ್ತರ.

ಮುಂದಿನ ದಿನಗಳಲ್ಲಿ ಕೆರೆಮನೆ ಶಂಭು ಹೆಗಡೆ ಮತ್ತು ಕೆರೆಮನೆ ಮೇಳ ಎಷ್ಟೊಂದು ಆಪ್ತರಾದರೆಂದರೆ ಪುತ್ತೂರು ಮಾತ್ರವಲ್ಲ ಸುತ್ತಲಿನ ಹತ್ತೂರುಗಳಲ್ಲೆಲ್ಲ ಮೇಳದ ಡೇರೆ ತುಂಬಿ ತುಳುಕತೊಡಗಿದುವು. ಎದುರಿನ ಹಲವಾರು ಸಾಲುಗಳ ಕುರ್ಚಿಗಳಿಗೆ ರುಮಾಲು, ಹಗ್ಗ ಕಟ್ಟಿ ಮೊದಲೇ ಕಾದಿರಿಸಿಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಶಂಭು ಹೆಗಡೆಯವರ ಕಾರ್ತವೀರ್ಯ, ಕೀಚಕ, ಮಾಗಧ, ಗದಾಯುದ್ಧದ ಕೌರವ, ಕೃಷ್ಣ ಸಂಧಾನದ ಕೃಷ್ಣ, ಸುಧನ್ವ, ಕಂಸ .. ಪ್ರತಿಯೊಂದು ಪಾತ್ರವೂ ಅಪ್ರತಿಮ. ಎಂದೂ ಅವರು ಪಾತ್ರದ ಘನತೆಗೆ ಚ್ಯುತಿ ತರುತ್ತಿರಲಿಲ್ಲ. ಪ್ರಾಯಕ್ಕೆ ಸಹಜವಾಗಿ ನಂತರ ದಿನಗಳಲ್ಲಿ ಅವರು ಅಭಿನಯಯಿಸಿದ ರಾಮ, ದಶರಥ, ವಾಲಿಯ ಪಾತ್ರಗಳು ಮಾತಿನ ಪ್ರೌಢಿಮೆಗೂ ಸಾಕ್ಷಿಯಾದುವು.

ಒಂದು ಪ್ರಸಂಗ ನೆನಪಿಗೆ ಬರುತ್ತಿದೆ. ದುರ್ಯೋಧನನ ಪಾತ್ರದಲ್ಲಿ ಅವರು ತಲ್ಲೀನರಾಗಿದ್ದರು. ಪ್ರೇಕ್ಷಕರ ನಡುವೆ ಏನೋ ಹರಟೆಯ ಮಾತುಗಳು ಹೆಚ್ಚಾದುವು. ದುರ್ಯೋಧನ ಮಾತು ನಿಲ್ಲಿಸಿ, ಗಲಾಟೆ ಮಾಡುವ ಮಂದಿಯನ್ನು ತರಾಟೆಗೆ ತೆಗೆದುಕೊಂಡು ಸುಮ್ಮನೆ ಇರಲು ಸಾಧ್ಯವಾಗದಿದ್ದರೆ ಡೇರೆ ಬಿಟ್ಟು ನಡೆಯಲು ಆಜ್ಞಾಪಿಸಿಯೇ ಬಿಡಬೇಕೇ? ಇಡೀ ಡೇರೆಯಲ್ಲಿ ಮೌನ ಆವರಿಸಿತು. ಅಪ್ಪಟ ಕಲಾವಿದನಿಗೆ ಬೇಕು ತಾದಾತ್ಮ ಹೊಂದಿದ ಪ್ರೇಕ್ಷಕರು.

ಇನ್ನೊಂದು ಸಂದರ್ಭದಲ್ಲಿ ಒಂದು ರೂಪಾಯಿ ಟಿಕೇಟಿನ ನೆಲದಿಂದ ಹತ್ತು ರೂಪಾಯಿಯ ಇಸೀಚೆಯರಿನ ಪರಮ ಸುಖಕ್ಕಾಗಿ ಕೆಲವರು ಮೆತ್ತಗೆ ಹಗ್ಗದ ಕೆಳಗಿಂದ ತೂರತೊಡಗಿದರು ನಡು ರಾತ್ರೆ ಕಳೆದ ಬಳಿಕ. ರಾಜ ವೇಷದಲ್ಲಿದ್ದ ಮೇಳದ ರಾಜನೇ ಆದ ಯಜಮಾನ ಶಂಭು ಹೆಗಡೆ ಗಮನಿಸಿದರು. ಅಲ್ಲಿಂದಲೇ ಅವರನ್ನು ಗದರಿಸಿ ಹಿಂದೆ ಕಳುಹಿಸಿದರು.

ಪುತ್ತೂರು, ವಿಟ್ಲ ಮೊದಲಾದ ಭಾಗಗಳಲ್ಲಿ ಕೆರೆಮನೆ ಮೇಳದ ಬಗ್ಗೆ ಪ್ರೇಕ್ಷಕರು ಅನನ್ಯ ಅಭಿಮಾನ ಇಟ್ಟಿದ್ದರೆಂದು ಶಂಭು ಹೆಗಡೆ ಸ್ಮರಿಸುತ್ತಿದ್ದರು. ಇವರ ವಿಜಯ ಇತರ ಬಡಗು ಮೇಳಗಳಿಗೆ, ಕಲಾವಿದರಿಗೂ ತೆಂಕಿನ ಕಡೆಗೆ ಬರುವುದಕ್ಕೆ ಧೈರ್ಯ ಮೂಡಿಸಿದ್ದು ಸುಳ್ಳಲ್ಲ. ಮುಂದಿನ ದಿನಗಳಲ್ಲಿ ಈ ಕಡೆಗೆ ಸಾಲಿಗ್ರಾಮ ಮೇಳ ಬಂತು. ಪೆರ್ಡೂರು ಮೇಳ ಆಗಮಿಸಿತು. ಅಮೃತೇಶ್ವರಿ ಮೇಳ ಬಂತು. ಬಡಗು ತಿಟ್ಟಿನ ಇತರ ಕಲಾವಿದರ ಪರಿಚಯವಾಯಿತು. ಇದೊಂದು ತಿಟ್ಟೀಕರಣ (ಜಾಗತೀಕರಣದಂತೆ) ಪ್ರಕ್ರಿಯೆಯಾಯಿತು. ತೆಂಕು ತಿಟ್ಟಿನ ಬಗೆಯಲ್ಲೂ ಸಾಕಷ್ಟು ವ್ಯತ್ಯಾಸವಾಯಿತು.

ಯಕ್ಷಗಾನ ಶಂಭು ಹೆಗ್ದೆಯವರ ರಕ್ತದಲ್ಲಿ ಹರಿದು ಬಂದಿತ್ತು. ತಂದೆ ಶಿವರಾಮ ಹೆಗ್ಡೆ ರಾಷ್ಟ್ರ ಪ್ರಶಸ್ತಿ ವಿಜೇತ ಅಗ್ರಗಣ್ಯ ಕಲಾವಿದರು. ಅವರ ಗರಡಿಯಲ್ಲಿ ಪ್ರಾರಂಭದ ನಡೆ ಕಲಿತ ಶಂಭು ಹೆಗ್ದೆಯವರು ಯಕ್ಷಗಾನದಲ್ಲಿ ಮಾತಿಗಿಂತಲೂ ಗಾನ ಮತ್ತು ನೃತ್ಯ ಮುಖ್ಯ ಎನ್ನುವುದನ್ನು ಪ್ರತಿಪಾದಿಸಿದರು ತಮ್ಮದೇ ಬಗೆಯಲ್ಲಿ. ಆ ದಿನಗಳಲ್ಲಿ ನಮ್ಮ ಮನೆಗಳಲ್ಲಿಯೂ ಚರ್ಚೆ ನಡೆದಿದ್ದುಂಟು. ನಾವು ಹುಡುಗರು ಬಡಗಿನ ಕಡೆಗೆ ವಾಲಿದರೆ ಕೆಲವು ಹಿರಿಯರಿನ್ನೂ ತೆಂಕಿನ ಪಕ್ಷದಲ್ಲಿಯೇ ಇದ್ದರು. ಹಿತವಾದ ಚರ್ಚೆ ನಡೆಯುತ್ತಿತ್ತು. ಈ ಕುರಿತಂತೆ ಪತ್ರಿಕೆಯಲ್ಲಿಯೂ ಚರ್ಚೆ ಕಾವೇರಿದ್ದುಂಟು. ಗದಾಯುದ್ಧ ಪ್ರಸಂಗದಲ್ಲಿ ‘ನೋಡಲ್ಲಿ ಬಿದ್ದಿಹ ಭೀಮ…’ ಎನ್ನುತ್ತ ಅಷ್ಟೊಂದು ನೃತ್ಯ ಮಾಡುವುದಕ್ಕೆ ಯುದ್ಧರಂಗದಲ್ಲಿ ದುರ್ಯೋಧನನಿಗೆ ಪುರುಸೊತ್ತಿದೆಯೇ ಎಂಬ ದಾಟಿಯಲ್ಲಿ ಹಿರಿಯ ಕಲಾವಿದರೊಬ್ಬರು ಆಕ್ಷೇಪಿಸಿದಾಗ, ಮಾತಿನ ವರಸೆಯಲ್ಲೇ ಇರುವುದಕ್ಕೂ ಅವನಿಗೆ ಪುರುಸೊತ್ತಿರದು ಎಂಬ ಹಾಗೆ ಶಂಭು ಹೆಗಡೆಯವರು ಮಾರುತ್ತರ ನೀಡಿದ್ದರು ಖಾರವಾಗಿ.

ನಮ್ಮ ಅಣ್ಣ ಒಮ್ಮೆ ಶಂಭು ಹೆಗಡೆಯವರಿಗೆ ಪತ್ರ ಬರೆದ. ಅವನಿಗೆ ಹುಡುಗ ಪ್ರಾಯ. ನಿಮ್ಮ ಮೇಳದ ಭಾಗವತಿಕೆ ತೀರ ಕರ್ಕಶ – ದೊರಗು ನೆಲದಲ್ಲಿ ಮೇಜು ಏಳೆದಂತಾಗುತ್ತದೆ, ಬದಲಾಯಿಸಿದರೆ ಉತ್ತಮ ಎಂಬ ಭಾವ ಅಲ್ಲಿತ್ತು. ಶಂಭು ಹೆಗ್ಡೆ ಪತ್ರವನ್ನು ನಿರ್ಲಕ್ಷಿಸದೇ ಸಮಜಾಯಿಷಿ ಕೊಟ್ಟದ್ದು ಮಾತ್ರವಲ್ಲ, ಮುಂದೊಂದು ದಿನ ಅಣ್ಣನನ್ನು ತೀರ ಆತ್ಮೀಯವಾಗಿ ಮಾತನಾಡಿಸಿದ್ದು ಅವರ ಸೌಜನ್ಯಕ್ಕೊಂದು ನಿದರ್ಶನ.

ಯಕ್ಷಗಾನ ಕಲಾವಿದರಾಗಿ ಇವರದು ಹಿತ ಮಿತ ಮಾತು – ಪದ್ಯಕ್ಕೆ ಎಷ್ಟು ಬೇಕೋ ಅಷ್ಟು. ಆದರೆ ಯಕ್ಷಗಾನಕ್ಕೆ ಸಂಬಂಧಿಸಿದ ಗೋಷ್ಠಿಯಲ್ಲಿ ಇವರ ಮಾತಿನ ಪ್ರೌಢಿಮೆಯನ್ನು ಕಂಡು ಬೆರಗಾಗಿದ್ದೆ. ಬೌದ್ಧಿಕವಾಗಿ ಇವರು ಉನ್ನತ ಸ್ತರದ ಕಲಾವಿದರು.

ಶಂಭು ಹೆಗಡೆಯವರದು ಲೀಲಾಜಾಲವಾದ ಕುಣಿತ. ಭರತನಾಟ್ಯದ ಸೂಕ್ಷ್ಮಗಳನ್ನು, ಕಿರಿಯೋಗ್ರಫಿಯ ತಂತ್ರಗಳನ್ನು ಸ್ವಾಂಗೀಕರಿಸಿಕೊಂಡವರು ಇವರು. ಇವರಂಥ ನವುರಾದ ಪದಗತಿಯ ಕಲಾವಿದ ಅತ್ಯಪರೂಪ. ನನಗನ್ನಿಸುವಂತೆ ಒಬ್ಬ ಯಕ್ಷಗಾನ ಕಲಾವಿದ ಇಡೀ ವೇದಿಕೆಯನ್ನು ತುಂಬುವಂತೆ ಕುಣಿಯುವುದು ತೀರ ಪ್ರಯಾಸದ್ದು. ಆದರೆ ಅದು ಸಾಧ್ಯವಾಗುತ್ತಿತ್ತು ಶಂಭು ಹೆಗಡೆಯವರಿಗೆ. ಚಪ್ಪಾಳೆಗಾಗಿ ಎಂದೂ ಪ್ರಯತ್ನಿಸಿದವರಲ್ಲ. ಅವರಿದ್ದಷ್ಟು ಹೊತ್ತು ನಮಗೆ ರಸಕಾವ್ಯದ ಅನುಭವ.

ನಿಧಾನವಾಗಿ ವರ್ತಮಾನ ಬದಲಾಗುತ್ತ ಧಾವಂತದ ಬದುಕು ಆವರಿಸತೊಡಗಿದಂತೇ ರಾತ್ರೆಯ ಜಾಗರಣೆ ಅಸಹನೀಯವಾಗಿ ಕಾಲಮಿತಿ ಯಕ್ಷಗಾನ ಜನಪ್ರಿಯವಾಗತೊಡಗಿತು – ಸೀಮಿತ ಓವರುಗಳ ಕ್ರಿಕೆಟ್ ಆಟದ ಹಾಗೆ. ಇಂಥ ಸಂದರ್ಭದಲ್ಲಿ ಶಂಭು ಹೆಗಡೆಯವರೂ ಬದಲಾದರು. ಕಾಲಮಿತಿ ಯಕ್ಷಗಾನದ ಕಡೆಗೆ ಒಲವು ತೋರಿದರು.

ಕಾಲ ಯಾರಿಗೂ ಕಾಯುವುದಿಲ್ಲ. ಯಕ್ಷಗಾನದ ಈ ಅನರ್ಘ್ಯ ಕಲಾವಿದ ರಾಮ ನಿರ್ಯಾಣ ಪ್ರಸಂಗದಲ್ಲಿ ವೇಷ ಕಳಚದೇ ಹಟಾತ್ತನೆ ನಿರ್ಯಾಣ ಹೊಂದಿದ್ದು ಒಂದು ಬಗೆಯಲ್ಲಿ ಅರ್ಹವಾದ ಕೊನೆ. ಹಲವು ಬಿರುದು ಬಾವಲಿಗಳಿಂದ ಸನ್ಮಾನಿಸಲ್ಪಟ್ಟ ಇವರಿಗೆ ನಟನಿಗೆ ಇದಕ್ಕಿಂತ ಅರ್ಹ ಸಮ್ಮಾನ ಬೇರೊಂದು ಇರದು.

[ಚಿತ್ರ: ಬಾಲು ಮಂದಾರ್ತಿ]