ಗಜಲ್
ಮಲ್ಲಿಗೆಯ ಹೂವು ನಾನು ಮುರುಟಬೇಡ ಗೆಳೆಯ
ತಿಳಿಗೊಳ ಜಲದಂತೆ ನನ್ನೆದೆ ಕಲಕಬೇಡ ಗೆಳೆಯ
ಸ್ವಚ್ಛಂದ ಆಗಸದ ತಣ್ಣನೆಯ ಮನ ನೀಲ ಹರಹು
ಇರುಳ ಚೆಲುವಿಗೆ ಕಪ್ಪುತಾರೆ ಇರಿಸಬೇಡ ಗೆಳೆಯ
ಅದೆಷ್ಟು ಸೊಬಗಿನ ಮೋಹಕ ಕನಸುಗಳು ತೇಲುತಿವೆ
ಕೆಂಪಾದ ಕೊಳ್ಳಿಗೆ ಇನ್ನಿಲ್ಲದಂತೆ ಸುಡಬೇಡ ಗೆಳೆಯ
ಎಷ್ಟೋ ಸಂವತ್ಸರ ಕಳೆದು ಸೋನೆಗರೆದಿದೆ ಶ್ರಾವಣ
ಉತ್ಸಾಹದ ಚಿಗುರನು ಮೂಸಿ ಎಸೆಯಬೇಡ ಗೆಳೆಯ
ಹೃದಯವೀಣೆ ಕಾದಿದೆ ಮಾಧುರ್ಯ ಹೊಮ್ಮಿಸಲು ಗಿರಿ
ಮೃದುವಾದ ಬೆರಳಲಿ ಅಪಸ್ವರ ನುಡಿಸಬೇಡ ಗೆಳೆಯ

ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ