ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ವೈಶಾಲಿ ಹೆಗಡೆ ಬರೆದ ನಾಲ್ಕು ಚುಟುಕುಗಳು.

ಚುಟುಕಗಳು

ಸಣ್ಣಗೆ ಬೆನ್ನಮೇಲೆ ತಟ್ಟಿದಂತೆ
ತಿರುಗಿನೋಡಿದರೆ ಬರೀ ಭ್ರಮೆ
ಸ್ಫಟಿಕ ನೀಲಿ ಕೊಳದಮೇಲೆ ಮಂದಾನಿಲದಂತೆ
ಸಣ್ಣಗೆ ಅದುರಿದ ಅಲೆ
ಮತ್ತೆಲ್ಲ ಮುಗುಳ್ನಗೆ


ಬೆಟ್ಟ ಹತ್ತುವಾಗ ಹಾದಿಯಲೆಲ್ಲೋ ನಕ್ಕವರು
ಜತೆಗೊಂಚೂರು ನಡೆದು ಮತ್ಯಾವುದೋ
ಕಾಲುದಾರಿಯಲ್ಲಿ ಕೈಬೀಸಿ ಇಳಿದು ಹೋಗುತ್ತಾರೆ
ಮನದಲ್ಲೇ ಉಳಿದು ಹೋಗುತ್ತಾರೆ


ಫಕ್ಕನೆ ಮಿಂಚಿ ಮರೆಯಾದ ವಕ್ರಬೆಳಕಿನ ರೇಖೆ
ಅರೆಕ್ಷಣವಾದರೂ ಬೆಳಗಿತು ಕಾರಿರುಳ ಹಾದಿ
ಅಡ್ಡ ಹಾದಿ ಉದ್ದ ಹಾದಿ, ಅಡ್ಡತಿದ್ದ ಹಾದಿ
ಬಿದ್ದ ಬೆಳಕಲ್ಲಿ  ನೇರವೆಷ್ಟೋ ವಕ್ರವೆಷ್ಟೋ


ಬಿಸಿಲ ಹೊತ್ತಲ್ಲಿ ಪುಟಿವ ಕಾರಂಜಿ ನಡುವಲ್ಲಿ
ನೀರ ಕಣವೆಲ್ಲ ಹುಟ್ಟಿಸಿದ ಮಳೆಬಿಲ್ಲು
ಅವಳ ಕಣ್ಣಲ್ಲಿ ಸುಂದರ ಕಾಮನಬಿಲ್ಲು
ಅವನಿಗದು ಬೆಳಕಿನ ವಕ್ರೀಭವನ