ಪೊಸತು ವರುಷವಿದು

ಬಾಳ ಪಯಣದ ಬುತ್ತಿ ಗಂಟಿನ
ಪೌಳಿಯೊಳಗಡೆಯೊಂದು ದಾಳವು
ಪಾಳಿ ಕಳೆದಿದೆಯೆಂದು ಹೋಯಿತು ತೀರ ದೂರವಿರೆ||
ಕಾಲ ಸಮಯಕೆ ಕರ್ಮವೆನ್ನುತ
ಕಾಲ ಮೆದ್ದಿಹ ಜೀವ ನೆನೆಯುತ
ತಾಳ ಮೇಳವ ಗುಣಿಸಿ ಮಣಿಸುತ ರಾಗ ಪಾಡುತಿರೆ|

ಮಳೆಯ ಕಳೆದೊಡೆ ಬಿಸಿಲು ಬಾರದೆ
ಬೆಳಕು ಮೂಡಿದೊಡಿರುಳು ಕಾಣದೆ
ತಳಕು ಬಳುಕಿನ ಬದುಕು ತಿಳಿಸದೆ ದೂರ ಸರಿಯುವುದೆ
ಕಳೆದುದೆಲ್ಲವ ಮರೆಯಬೇಕಿದೆ
ಕಳೆದು ಕೂಡಲು ಮರೆವ ಮದ್ದಿದೆ
ಹೊಳೆವ ವಜ್ರಕೆ ಮೆರುಗು ಬಳಿಯಲು ಕಾಲ ಕಾಯುತಿದೆ

ಉಸಿರ ನೀಯಲು ನಮ್ಮ ಭಾವಕೆ
ಪಸಿರು ತುಂಬುತ ಜಲವನುಳಿಸುತೆ
ಕೆಸರಿನೊಂದಿಗೆ ಪಯಣ ಮುಗಿಸಿತೆ ಕಳೆದ ಕಾಲವದು|
ಹಸಿವಿನುದರಕೆ ಬೋನ ಹೊಂಚಲು
ಕೆಸರು ಕಡೆಯುತ ಮೊಸರುಗೈದೊಡೆ
ಪೆಸರು ಮೂಡುವುದೆಂದು ಪೇಳಿತು ಪೊಸದು ವರುಷವಿದು||

 

ವೈಲೇಶ್ ಪಿ. ಎಸ್. ಕೊಡಗಿನ ವಿರಾಜಪೇಟೆಯವರು
ಕರಾರಸಾಸಂಸ್ಥೆಯ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಮ್ಮ ನಿಮಗಾಗಿ, ಕಣ್ಮರೆಯಾದ ಹಳ್ಳಿ, ಬೊಮ್ಮಲಿಂಗನ ಸಗ್ಗ, (ಕವನ ಸಂಕಲನಗಳು) ಮುಕ್ತಕ ಕುಸುಮ ಮತ್ತು ಕೊಡಗಿನ ಕವಿ ಸಾಹಿತಿಗಳು, ಮನದ ಇನಿದನಿ ಇವರ ಪ್ರಕಟಿತ ಕೃತಿಗಳು
ಓದು, ಬರಹ, ಸಾಹಿತ್ಯ ಸಂಘಟನೆ, ಸಾಹಿತ್ಯ ರಚನೆ ಇವರ ಹವ್ಯಾಸಗಳು