ಗಂಧವತಿ

ಸುಮ್ಮನೇ ಪದ್ಮಾಸನದಲ್ಲಿ ಕೂತು ಧ್ಯಾನಸ್ಥನಂತೆ ನಟಿಸುವಾಗಲೂ
ಕಳೆದ ಇರುಳುಗಳಲ್ಲಿ ದೇಹದಿಂದ ನೀನು ಗುಟ್ಟಾಗಿ ಹೊಮ್ಮಿಸಿದ ಗಂಧದ ಘಮಲು
ನೀಲಿದೇಹಿಯ ಉಬ್ಬುಕೊರಳಿನ ಉರಗದಂತೆ
ಮರಳಿ ನನ್ನನ್ನು ಬಿಗಿದುಕೊಳ್ಳುತ್ತದೆ

ಸಹಸ್ರ ವರ್ಷಗಳಿಗೊಮ್ಮೆ ಮಿನುಗಿ
ಒಂದಿಡಿಯಷ್ಟು ಬೆಳಕನ್ನು ಮಾತ್ರ ಬಯಲಿಗೆಸೆವ
ಅಸ್ಪೃಶ್ಯ ನಕ್ಷತ್ರದ
ಬೆಳಕಿಗೆ ಹೆದರಿ ಅಗಳಿ ಜಡಿದುಕೊಂಡವರ
ಮನೆಯ ಮೂಲೆಯಲ್ಲಿ ಅತ್ತಿತ್ತ ಓಲಾಡುತ್ತಿರುವ
ಒಂಟಿ ದೀಪದ ಒಡಲಿಗೆ ಎಣ್ಣೆ ಸುರಿದವಳು
ಈಗ
ನೆರಳೂ ಸೋಕಿಸದಂತೆ
ಊರ ಹೊರಗೆ ಒಬ್ಬಳೇ ಗೇಣು ಕೆತ್ತುತ್ತ ಒಡಲ ತುಂಬಿಕೊಳ್ಳಲು ಅವಸರಿಸುತಾಳೆ

ಅಕಾಲಿಕ ವಸಂತದಂತೆ ಮುನಿಸು ಸರಿಸಿದ
ಅವನ ಎರಡೂ ಕಣ್ಣುಗಳಲ್ಲಿನ
ಸಿಟ್ಟು ಸಣ್ಣ ಒಲವಿನ ಎದುರು
ಕೈ ಮಿಲಾಯಿಸಲಾರದೆ ನೆಲಕ್ಕಪ್ಪಳಿಸಿ ದೊಪ್ಪೆಂದು‌ ಬಿದ್ದು ಮೈಗಂಟಿದ ಧೂಳು
ಕೊಡವಿಕೊಳ್ಳುತ್ತಲೆ ಚದುರುತ್ತದೆ

ಏರೋಪ್ಲೇನ್ ಚಿಟ್ಟೆಯೊಂದನ್ನ
ಹಿಡಿದ ಮಗು ಬಾಲದ ತುದಿಗೆ ಎಳೆಯ
ನುಲಿಯುತದೆ
ಒಂದಿಷ್ಟೇ ಹೊತ್ತು
ಎಳೆಯ ಕಳಚಿಕೊಂಡ ಚಿಟ್ಟೆ ಬಿಡುಗಡೆಗೊಂಡು
ಚಿಟ್ಟೆ ಕಳೆದುಕೊಂಡ ಮಗು ಬಂಧನಕೆ ಒಲಿದಮೇಲೆ
ಜಾರಿಯಾಗುತ್ತದೆ
ಸಣ್ಣ ಮೌನ

ಊರ ತೋಟದ ಹೂವು ಕಂಪು ಕಳೆದುಕೊಂಡು
ತನ್ನಸ್ತಿತ್ವದ ಗಾಯದ ಒಸರಿಗೆ
ನೋಯುತ್ತಿರುವ ಹೊತ್ತಿಗೇ
ತುಂಬಿಕೊಂಡ ಘಮಲನ್ನ
ಕದ್ದು ಕಣ್ಣರಳಿಸಿ
ಒಂದಿಷ್ಟೇ ಹಂಚಿಕೊಳ್ಳುತ್ತಾಳೆ

ಮಗ್ಗುಲಿಗೆ ಹೊರಳಿ
ಕೊರಳು ಪಸೆ ಒಣಗುವ ಮೊದಲೇ
ಅಷ್ಟೊಂದು ರೂಪದ ಗಂಧವತಿಯ
ಪಾಪಕಾರ್ಯದಲ್ಲಿ ಅರಿವಿಲ್ಲದೆ ಅನುಮತಿ ಇಲ್ಲದೇ ನಾನೂ ಸಮಾನವಾಗಿ ಭಾಗಿಯಾಗಿಹೋಗುತ್ತೇನೆ

ಸಂದೀಪ್  ಮೂಲತ‍ಃ ಮೈಸೂರಿನವರು .
ಮಾರ್ಕೆಟಿಂಗ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆದವರು.

ಸುದ್ದಿ ವಾಹಿನಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವ. ಆಂಗ್ಲ ಕಾದಂಬರಿಯೊಂದರ ಸಹ ಲೇಖಕರು.ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಇವರಿಗೆ ಸಿನಿಮಾ, ಸಾಹಿತ್ಯ, ಪ್ರವಾಸದಲ್ಲಿ ಆಸಕ್ತಿ.
ಇವರ “ಮೆಟ್ರೋ ರೈಲಿನ ಹುಡುಗಿ” ಕವನ ಸಂಕಲನ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ.