ಮನುಷ್ಯ ಸಮಾಜಕ್ಕೆ ಐಡೆಂಟಿಟಿಯನ್ನು ನೀಡುವುದು ಭಾಷೆಯೊಂದೇ ಅಲ್ಲ, ಸಾಮೂಹಿಕವಾದ ಧರ್ಮ, ಜಾತಿ, ಆಚಾರ ವಿಚಾರಗಳು, ಸಂಸ್ಕಾರಗಳು, ಕಲೆಗಳು, ನಿಷೇಧಗಳು, ನಂಬಿಕೆಗಳು, ದೇವಳಗಳು, ಮಠಗಳು, ನಿತ್ಯಕರ್ಮಗಳು, ಸ್ತ್ರೀಯರ ಸ್ಥಾನ ಮಾನ ಇತ್ಯಾದಿ ಹಲವಾರು ವಿಷಯಗಳು ಸಮಾಜದ ಗುರುತನ್ನು ರೂಪಿಸುತ್ತವೆ. ಕಾಸರಗೋಡಿನಲ್ಲಿ ಗುಡಿಗಳು, ದೇವಸ್ಥಾನಗಳು, ಭೂತಸ್ಥಾನಗಳು, ಮಸೀದಿಗಳು, ಇಗರ್ಜಿಗಳು ನಿಬಿಡವಾಗಿವೆ. ಇವೆಲ್ಲವೂ ಸುಖಶಾಂತಿಯಿಂದ, ಆದರ್ಶಕರವಾಗಿ ಯಾವತ್ತೂ ಸಹಬಾಳ್ವೆ ನಡೆಸುತ್ತಿವೆ ಎನ್ನಲಾರೆ. ಕೆಲವೊಮ್ಮೆ ವೈಮನಸ್ಸು ಉಂಟಾಗುತ್ತದೆ. ತಾನು ಬದುಕುವುದು, ಇತರರನ್ನು ಬದುಕಲು ಬಿಡುವುದು ಹೇಗೆನ್ನುವುದೇ ಮನುಷ್ಯನ ಮುಂದಿರುವ ಪ್ರಶ್ನೆ. ಅದು ಯಾವತ್ತಿನಿಂದಲು, ಎಲ್ಲೆಡೆಯೂ ಇರುವ ಪ್ರಶ್ನೆಯೇ. ಯಾವ ಪ್ರವಾದಿಯೂ, ಸಂತನೂ, ತತ್ವಪದಕಾರನೂ ಅದನ್ನು ಶಾಶ್ವತವಾಗಿ ಪರಿಹರಿಸಿಲ್ಲ.
ಕೆ.ವಿ. ತಿರುಮಲೇಶ್ ಬರೆದ ಲೇಖನ

 

‘ನನ್ನ ಜೀವನವೊಂದು ಶುದ್ಧಗೆ’ಯೆಂದು ವಾದಿಸುವವರನ್ನು ತೋರಿಸಿಕೊಡಿ. ನಾನವರಿಗೆ ಉದ್ದಂಡ ನಮಸ್ಕಾರ ಹಾಕುತ್ತೇನೆ. ವಾಸ್ತವದಲ್ಲಿ ಶುದ್ಧವಾಗಿರುವವರು ಯಾರೂ ಇಲ್ಲ. ಶುದ್ಧ ಬ್ರಾಹ್ಮಣರು? ಶುದ್ಧ ವೈಶ್ಯರು, ಕ್ಷತ್ರಿಯರು, ಶೂದ್ರರು? ನಾವು ಬಳಸುವ ಭಾಷೆಗಳು? ಉಡುಗೆ ತೊಡುಗೆ, ಆಚಾರ ವಿಚಾರಗಳು? ಇತ್ತ ನಾರಣಪ್ಪನ ಶವ ಸಂಸ್ಕಾರವನ್ನು ಯಾರು ಮಾಡಬೇಕೆಂದು ಅಗ್ರಹಾರದ ಬ್ರಾಹ್ಮಣರು ‘ಧರ್ಮ ಜಿಜ್ಞಾಸೆ’ಯಲ್ಲಿರುವಾಗ ಅತ್ತ ಬ್ಯಾರಿಯೊಬ್ಬನು ಶವಕ್ಕೆ ಅಗ್ನಿ ಸಂಸ್ಕಾರ ಮಾಡುತ್ತಾನೆ! ಅಂತೆಯೇ ರವೀಂದ್ರನಾಥ ಠಾಕೂರರ “ಗೋರಾ” ಮತ್ತು ಭೈರಪ್ಪನವರ “ವಂಶವೃಕ್ಷ” ಕೊನೆ ತನಕ ಓದಿ. ನದಿ ಮೂಲ, ಋಷಿಮೂಲ ಮಾತ್ರವಲ್ಲ ಯಾರ ಮೂಲವನ್ನೂ ಕೇಳಬೇಡಿ. ನಿಮಗೆ ಶಾಕ್ ಕಾದಿರುತ್ತದೆ. ‘ನಾವು’ ಮತ್ತು ‘ಅವರು’ ಎಂಬುದರ ನಡುವಿನ ಅಂತರ ನಮ್ಮ ದೃಷ್ಟಿಕೋನವನ್ನು ಹೊಂದಿಕೊಂಡಿರುತ್ತದೆ.

ಶುದ್ಧ ಕನ್ನಡವನ್ನು ಪ್ರತಿಪಾದಿಸುವ ವಿದ್ವಾಂಸರಿಗೆ ಗೊತ್ತಿದೆಯೋ ಇಲ್ಲವೋ, ನಾವು ಅಚ್ಚಗನ್ನಡವೆಂದು ಭ್ರಮಿಸಬಹುದಾದ ‘ಅರಸ’ ಕೂಡ ಅಷ್ಟೇನೂ ‘ಅಚ್ಚಗನ್ನಡ’ವಲ್ಲ. ಮೂಲತಃ ಅದು ಸಂಸ್ಕೃತದ ‘ರಾಜ’ ಪದದಿಂದ ತಮಿಳು ಮುಖಾಂತರ ‘ಅಕಾರ’ವನ್ನು ಪಡೆದುಕೊಂಡು ‘ಅರಸ’ ರೂಪದಲ್ಲಿ ಕನ್ನಡವನ್ನು ಪ್ರವೇಶಿಸಿತು! ಇಂದೀಗ ಅದು ಕನ್ನಡವೇ. ಎಲ್ಲವೂ ಹಾಗೆಯೇ. ನಾವು ಬೇಕೆಂದು ಪಡೆದುಕೊಂಡಾಗ ಅದು ನಮ್ಮದಾಗುತ್ತದೆ. ಇನ್ನು ಅಚ್ಚ, ಉಚ್ಚ, ದೇಸಿ, ವಿದೇಶಿ, ಶುದ್ಧ, ಅಶುದ್ಧ ಇತ್ಯಾದಿ ವರ್ಗಗಳನ್ನು ನಾವು ಬೇರೆ ಬೇರೆ ಕಾರಣಗಳಿಗೋಸ್ಕರ ಮಾಡಿಕೊಂಡದ್ದು. ಸೂಜಿ ಎಲ್ಲಿಂದ ಬಂತು, ದಬ್ಬಣ ಎಲ್ಲಿಂದ ಬಂತು, ಹೊಲಿಗೆ ಯಂತ್ರವನ್ನು ಯಾರು ಕಂಡುಹಿಡಿದರು? ನೀರೆತ್ತುವ ರಾಟೆ? ಬಟ್ಟೆ ನೇಯುವ ಮಗ್ಗ? ನೇಗಿಲು, ಎತ್ತಿನ ಗಾಡಿ? ನಮ್ಮಲ್ಲಿ ಎಲ್ಲವೂ ಇದ್ದುವು ಎನ್ನುವ ಅತಿರಾಷ್ಟ್ರೀಯವಾದಿಗಳಿದ್ದಾರೆ. ಆದರೆ ಗನ್ ಪೌಡರ್ ಮತ್ತು ತುಪಾಕಿಗಳಿರಲಿಲ್ಲವಲ್ಲ. ಆ ಕುರಿತು ಯೋಚಿಸದೆ ಇದ್ದರೆ ಅವೂ ನಮ್ಮ ಬಳಿ ಇದ್ದುವು ಎಂದುಬಿಡಬಹುದು. ಆದರೆ ಬಾಬರನಿಗೆ ಸಣ್ಣ ಸೇನೆಯೊಂದಿಗೆ ಡೆಲ್ಲಿ ಸುಲ್ತಾನ ಇಬ್ರಾಹಿಂ ಲೋಧಿಯನ್ನು ಮೊದಲ ಪಾಣಿಪತ್ ಯುದ್ಧದಲ್ಲಿ ಗೆಲ್ಲಲು ಸಾಧ್ಯವಾದುದು ತನ್ನ ಬಳಿಯಿದ್ದ, ಆಗಿನ ಕಾಲಕ್ಕೆ ನವೀನವಾಗಿದ್ದ, ತುಪಾಕಿಗಳ ಸಹಾಯದಿಂದ. ಈಗ ಈ ಶಸ್ತ್ರಾಸ್ತ್ರಗಳು ಭಾರತದಲ್ಲೂ ಇವೆ, ಆದರೆ ‘ಮೂಲತಃ’ ಭಾರತದವಲ್ಲ.

ನಾನು ಹುಟ್ಟಿಬೆಳೆದ ಮನೆ ಹುಲ್ಲು ಛಾವಣಿಯದು. ಪ್ರತಿವರ್ಷ, ಕನಿಷ್ಠ ಎರಡು ವರ್ಷಗಳಿಗೊಮ್ಮೆಯಾದರೂ, ಛಾವಣಿಗೆ ಮುಳಿಹುಲ್ಲು ಹೊದೆಸಬೇಕಾಗುತ್ತಿತ್ತು. ಈ ಕೆಲಸ ಮಾಡಲು ಪರಿಣತಿ ಬೇಕಾಗುತ್ತಿತ್ತು. ಇದಕ್ಕೆ ನಮ್ಮ ಮನೆಯ ಅನತಿ ದೂರದಲ್ಲೇ ಒಬ್ಬ ವಯಸ್ಸಾದ ‘ಥ್ಯಾಚರ್’ ಇದ್ದ. ನಾನವನನ್ನು ಪ್ರೀತಿಯಿಂದ ಮಾಲಿಂಗಜ್ಜ ಎಂದು ಕರೆಯುತ್ತಿದ್ದೆ. ವರ್ಷಗಳ ನಂತರ ಮಿಸೆಸ್ ಮಾರ್ಗರೆಟ್ ಥ್ಯಾಚರ್ ಬ್ರಿಟನ್ನಿನ ಪ್ರಧಾನಿಯಾಗಿದ್ದಾಗ ಈ ‘ಥ್ಯಾಚರ್’ ಉಪನಾಮ ಆತ್ಮೀಯವೆನಿಸಿತು. ಹಿಂದೆ ಬ್ರಿಟನ್ನಿನಲ್ಲೂ ಮನೆಗಳಿಗೆ ಹುಲ್ಲು ಹೊದೆಸುತ್ತಿದ್ದರೆನಿಸಿ ಆ ದೇಶದೊಂದಿಗೆ ಆತ್ಮೀಯತೆಯೂ ಬಂತು! ನೋಡಿದಿರ, ಎಷ್ಟೊಂದು ಸಣ್ಣ ಸಂಗತಿ ಸಾಕು ಆತ್ಮೀಯತೆಗೆ? ಇದು ಬ್ರಿಟನ್ನಿಗೂ ಸೀಮಿತವಾಗಲಿಲ್ಲ, ಐರ್ಲೆಂಡಿಗೂ ಹರಡಿತು. ಯಾಕೆಂದರೆ ಐರಿಶ್ ಕವಿ ಸೀಮಸ್ ಹೀನಿಯ “ಥ್ಯಾಚರ್” ಹೆಸರಿನ ಕವಿತೆಯೊಂದಿದೆ: ಇದೂ ಹುಲ್ಲು ಹೊದೆಸುವ ಒಬ್ಬನ ಕುರಿತಾದುದು, ಮುಳಿಹುಲ್ಲಿಗೆ ಬದಲಾಗಿ ಇಲ್ಲಿ ಗೋಧಿಯ ಬೈಹುಲ್ಲನ್ನು ಹೊದೆಸಲಾಗುತ್ತದೆ ಅಷ್ಟೆ ವ್ಯತ್ಯಾಸ. ಈ ಕೊನೆ ಸಾಲುಗಳನ್ನು ಗಮನಿಸಿ:

Couchant for days on sods above the rafters,
He shaved and flushed the butts, stitched all
together

Into a sloped honeycomb, a stubble patch,
And left them gaping at his Midas touch.
— Thatcher, from Death of a Naturalist (1966)

ಹೀನಿಯ ಥ್ಯಾಚರಿನಷ್ಟೇ ಗೌರವಾರ್ಹ ನನ್ನ ಮಾಲಿಂಗಜ್ಜ. ಈಗ ಅವನಿಲ್ಲ; ಅವನು ಗತಿಸಿ ಕಾಲವಾಗಿದೆ. ಆದರೂ ನನ್ನ ಸ್ಮೃತಿಯಲ್ಲಿ ಇನ್ನೂ ಇದ್ದಾನೆ. ಅವನು ಮುಳಿ ಹೊದೆಸುತ್ತಿದ್ದ ಪ್ರತಿಯೊಂದು ಚಲನ ವಲನವೂ ನನಗೆ ಗೊತ್ತಿದೆ. ಮೈದಾಸ್ ಟಚ್ ಅವನ ಹೊದೆತಕ್ಕೂ ಇತ್ತು. ಕೆಲಸದ ದಿನಗಳಲ್ಲಿ ಅವನು ನಮ್ಮಲ್ಲೆ ಊಟ ಮಾಡುತ್ತಿದ್ದ. ಬೇಸಿಗೆಯ ಕಾಲವಾದ್ದರಿಂದ (ಹುಲ್ಲು ಹೊದೆಸುವುದು ಸಾಧಾರಣವಾಗಿ ಬೇಸಿಗೆಯಲ್ಲೇ) ತಾನೇ ಕಟ್ಟುತ್ತಿದ್ದ ಹಸಿ ಅಡಿಕೆ ಹಾಳೆಯ ಪಡಿಗೆಯಲ್ಲಿ ಅವನು ಕೈತುಂಬ ಉಣ್ಣುವ ಗಂಜಿಯೂಟದ ಶೈಲಿಯನ್ನು ಕಂಡರೆ ಆಗಷ್ಟೇ ಉಂಡವರಿಗೂ ಮತ್ತೊಮ್ಮೆ ಉಣಬೇಕೆನಿಸುವುದು! ಚೆನ್ನಾಗಿ ಹಸಿದವರ ಊಟದ ರೀತಿ ಅಂಥದು. ಮಾಲಿಂಗಜ್ಜನ ಆತ್ಮಕ್ಕೆ ಶಾಂತಿಯಿರಲಿ.

ಕಾಸರಗೋಡಿನ ಹಳ್ಳಿಯೊಂದರಲ್ಲಿ ಹುಟ್ಟಿಬೆಳೆದ ನಾನು ಎಷ್ಟೇ ಕಷ್ಟ ಕಾರ್ಪಣ್ಯಗಳನ್ನೆದುರಿಸಿದರೂ ಹಲವು ರೀತಿಗಳಲ್ಲಿ ಅದೃಷ್ಟವಂತನೇ ಸರಿ. ಮುಖ್ಯವಾಗಿ ಅಲ್ಲಿನ ಬಹು ಹಾಗೂ ಮಿಶ್ರ ಹಾಗೂ ವೈವಿಧ್ಯಮಯ ಸಂಸ್ಕೃತಿಗೆ ನಾನು ಋಣಿ. ಎಲ್ಲಕ್ಕಿಂತ ಮುಖ್ಯವಾಗಿ, ಇದೊಂದು ಬಹುಭಾಷಾ ಪ್ರದೇಶ. ಯಾರ ಮಾತೃಭಾಷೆಯೂ ಅಲ್ಲದ, ಆದರೆ ವಿದ್ಯಾವಂತ ವರ್ಗಕ್ಕೆ ಸ್ವಲ್ಪ ಮಟ್ಟಿಗಾದರೂ ಗೊತ್ತಿರುವ ಇಂಗ್ಲಿಷ್ ಮತ್ತು ಹಿಂದಿಯನ್ನು ಬದಿಗಿರಿಸೋಣ; ಮಾತೃಭಾಷೆಯಾಗಿರುವ ನುಡಿಗಳನ್ನು ನೋಡಿದರೆ ಗೊತ್ತಾಗುತ್ತದೆ: ಕನ್ನಡ, ತುಳು, ಮಲೆಯಾಳಂ, ಕೊಂಕಣಿ, ಮರಾಠಿ. ಈ ಒಂದೊಂದು ಭಾಷೆಗೂ ನಾನು ತಿಳಿದಂತೆ ಅನೇಕ ಪ್ರಭೇದಗಳು; ಕನ್ನಡವೊಂದಕ್ಕೇ ಹವ್ಯಕ ಕನ್ನಡ, ಹೆಬ್ಬಾರರ ಕನ್ನಡ, ಕೋಟೆ (ರಾಮಕ್ಷತ್ರಿಯ) ಕನ್ನಡ, ಮಾದಿಗ ಕನ್ನಡ; ತುಳುವಿನಲ್ಲಿ ಬ್ರಾಹ್ಮಣ (ಶಿವಳ್ಳಿ) ತುಳು, ಶೂದ್ರ ತುಳು, ಶೂದ್ರ ತುಳುವಿನಲ್ಲಿ ಬಂಟರ ತುಳು, ದಲಿತ ತುಳು, ಕೊರಗರ ತುಳು. ಕೊಂಕಣಿಯಲ್ಲಿ ಕೊಂಕಣಸ್ಥರ ಕೊಂಕಣಿ, ಕ್ರಿಶ್ಚಿಯನರ ಕೊಂಕಣಿ. ಮಲೆಯಾಳಮಿನಲ್ಲಿ ಮಲಬಾರ್ ಮಲೆಯಾಳ ಮತ್ತು ಬ್ಯಾರಿ ಮಲೆಯಾಳ, ಮರಾಠಿಯಲ್ಲಿ ಕರ್ಹಾಡ ಬ್ರಾಹ್ಮಣರ ಮರಾಠಿ, ಶೂದ್ರರ ಮರಾಠಿ. ಇವೆಲ್ಲವೂ ಬಗಲು ಬಗಲಲ್ಲೇ ಇರುತ್ತಿದ್ದ, ಈಗಲೂ ಇರುವ ಭಾಷೆಗಳು, ಕೆಲವು ಆಯಾ ಪಂಗಡಗಳ ಒಳಗೆ (ಹವ್ಯಕ, ಮರಾಠಿ, ಕೊಂಕಣಿ), ಕೆಲವು ಸಾಮಾಜಿಕವಾಗಿ(ಸೀಮೆಕನ್ನಡ, ತುಳು, ಮಲೆಯಾಳ). ಪ್ರತಿಯೊಂದು ಭಾಷೆಯೂ ಅದನ್ನು ಆಡುವವರಿಗೆ ಮುದ್ದು, ಆದರೂ ಅದನ್ನು ಇತರ ಭಾಷಿಕರ ಮೇಲೆ ಹೇರುವ ಕ್ರಮವಿಲ್ಲ. ಇಲ್ಲಿನ ಎಲ್ಲರಿಗೂ ಎಲ್ಲ ಭಾಷೆಗಳೂ ಗೊತ್ತು ಎಂದು ಹೇಳುವಂತೆಯೂ ಇಲ್ಲ.

ಈಗ ಭಾಷಾ ಸಂಸ್ಥಾನಗಳು ಹುಟ್ಟಿಕೊಂಡು ಮೊದಲಿನ ಭಾಷಾ ಸಾಮರಸ್ಯಕ್ಕೆ ಧಕ್ಕೆ ಬಂದಿದೆ ಎನ್ನುವುದೂ ನಿಜ. ಮೈನಾರಿಟಿ ಸಂಸ್ಕೃತಿಗಳನ್ನು (ಅವು ಸಾರ್ವತ್ರಿಕ ಮೌಲ್ಯಗಳಿಗೆ ಎದುರಾಗದೆ ಇದ್ದರೆ) ಮೆಜಾರಿಟಿ ಸಂಸ್ಕೃತಿ ಕಾಪಾಡುವುದು ಅಗತ್ಯ. ಸಂಸ್ಕೃತಿಯಲ್ಲಿ ಭಾಷೆ ಎನ್ನುವುದು ಅದರ ಜೀವವಿದ್ದ ಹಾಗೆ. ಅದನ್ನು ಕೊಂದರೆ, ಉಳಿಯುವುದು ಕಳೇಬರ ಮಾತ್ರ. ಅಮೇರಿಕನ್ ಕವಿ ಡಬ್ಲ್ಯೂ. ಎಸ್. ಮರ್ವಿನ್ ನ ಕವಿತೆಯೊಂದು ನೆನಪಾಗುತ್ತದೆ ಅದರ ಅರಂಭ:

ಉಸಿರೊಂದು ಹೊರಟೋಗುತ್ತೆ ವಾಕ್ಯಗಳಿಂದ, ಆಮೇಲದು ವಾಪಸು ಬರಲ್ಲ
ಅಂತಿದ್ದೂ ಹಳಬರಿಗೆ ನೆನಪಿದೆ ತಾವು ಹೇಳಬಹುದಾದ್ದು ಏನೋ ಒಂದು

ಆದರೆ ಅವರಿಗೆ ಗೊತ್ತು ಅಂಥ ಸಂಗತಿಗಳನ್ನ ಜನ ಈಗ ನಂಬಲ್ಲ
ಹಾಗೂ ಯುವಕರ ಹತ್ತಿರ ಶಬ್ದಗಳು ಕಡಿಮೆ
-The Loss of Language

ಭಾಷೆಯ ಅವಸಾನ ಕೇವಲ ಭಾಷೆಯದೇ ಅಲ್ಲ, ಜನಜೀವನದ್ದು ಎನ್ನುವುದು ಕವಿತೆಯ ಅರ್ಥ. ನನ್ನ ಮನೆ ಮಾತಾದ ಹವ್ಯಕದ ಅನೇಕ ಪದಗಳು ನನಗೀಗ ಮರೆತು ಹೋಗಿವೆ. ನೆನಪಿಗೆ ತರಲು ಪೇಚಾಡುತ್ತೇನೆ. ಹಲವು ಸಲ ಸಿಗುವುದಿಲ್ಲ, ಸಿಗದಾಗ ನಿರಾಸೆಯಾಗುತ್ತೆ. ಕೆಲವು ಸಲ ಸಿಗುತ್ತವೆ-ಸಿಕ್ಕಾಗ ಕಳೆದುಹೋದ ಅಮೂಲ್ಯ ವಸ್ತುವೊಂದು ಮರಳಿ ಸಿಕ್ಕಿದಷ್ಟು ಸಂತೋಷವಾಗುತ್ತದೆ. ಯಾಕೆಂದು ನನಗೆ ತಿಳಿಯದು; ಬಹಶಃ ಅವು ನನ್ನ ಗುರುತಿನ ಒಂದು ಭಾಗವೆಂಬ ಕಾರಣಕ್ಕೆ. ಅಷ್ಟೂ ಅಲ್ಲ, ನಾನೊಬ್ಬ ಪದಮೋಹಿ; ಭಾಷೆಗಳನ್ನು ನಾನು ಇಷ್ಟಪಡುತ್ತೇನೆ. ಕನ್ನಡವನ್ನು ಪ್ರೀತಿಸುವುದಕ್ಕೆ ಇತರ ಭಾಷೆಗಳನ್ನು ಕಡೆಗಣಿಸಬೇಕೆಂದಿಲ್ಲ.

ಡಿಗ್ರಿ ಕ್ಲಾಸಿನಲ್ಲಿ ಇಂಗ್ಲಿಷ್ ಸಾಹಿತ್ಯ ಕಲಿಸುತ್ತಿದ್ದ ಪ್ರೊಫೆಸರ್ ಮಧುಕರ ರಾವ್ ನನಗೆ ಸಾಹಿತ್ಯ ಮೋಹವನ್ನು ಹಿಡಿಸಿದ್ದು ಮಾತ್ರವಲ್ಲ, ಪದ ಮೋಹವನ್ನೂ ಹಿಡಿಸಿಬಿಟ್ಟರು. ಈ ಶೇಕ್ಸ್ಪಿಯರ್ ನೋಡಿ ತನ್ನ ಚೆಲುವಿನ ಕಥಾನಾಯಕಿಯರಿಗೆ ಎಷ್ಟೊಂದು ಚಂದದ ಹೆಸರುಗಳನ್ನು ಇಟ್ಟಿದ್ದಾನೆ—ಒಫೀಲಿಯಾ, ಒಲೀವಿಯಾ, ಇಮೊಜಿನ್, ಮಿರಾಂಡಾ, ಜೂಲಿಯೆಟ್, ರೋಸಲಿಂಡ್, ಮೆರೀನಾ,ಎನ್ನುತ್ತಿದ್ದರು. . Nonpareil, unparalleled, mellifluous, gossamer, casement ಮುಂತಾದ ಪದಗಳನ್ನು ನಾನು ಕಲಿತುದು ಅವರಿಂದಲೇ. ಈಚೆಗೆ ಪುಸ್ತಕವೊಂದನ್ನು ಓದುತ್ತ stentorian ಎಂಬ ಪದ ಕಾಣಸಿಕ್ಕಿ ನನ್ನ ಮನಸ್ಸು ಮಧುಕರ ರಾವ್ ಕ್ಲಾಸಿಗೆ ಹೋಯಿತು; stentorian ಎಂದರೆ ಮನುಷ್ಯ ಧ್ವನಿಗೆ ಸಂಬಂಧಿಸಿದ್ದು, ‘ಏರು ಸ್ವರದ ಮತ್ತು ಶಕ್ತಿಯುತ’ ಎಂದು ಅರ್ಥ!ಅಂತೆಯೇ ಇಂಗ್ಲಿಷ್ ನ ಹಲವಾರು ನುಡಿಗಟ್ಟುಗಳನ್ನು (ಇಡಿಯಮ್ಸ್), ಗಾದೆಮಾತುಗಳನ್ನು ‘out-Herod Herod’), ಶೇಕ್ಸ್ಪೀರಿಯನ್ ಮಹಾ ವಾಕ್ಯಗಳನ್ನು, ಉದಾ;

Out, out, brief candle!
Life’s but a walking shadow, a poor player,
That struts and frets his hour upon the stage,
And then is heard no more. It is a tale
Told by an idiot, full of sound and fury,
Signifying nothing.
-Macbeth

ಮುಂದೆ ನಾನು ಭಾಷಾವಿಜ್ಞಾನದಲ್ಲಿ ಆಸಕ್ತಿ ತಳೆಯುತ್ತ ಪದಗಳ ವ್ಯುತ್ಪತ್ತಿಯ ಕಡೆ ಗಮನ ಹರಿಸಿದೆ. ಈ ಇಂಗ್ಲಿಷ್ ನ ಶಬ್ದ ದಾಹ ಎಷ್ಟು ಅಗಾಧವಾದುದು ಎಂದು ದಿಗ್ಭ್ರಮೆಗೊಂಡೆ. ನಾನು ಇಂಗ್ಲೆಂಡಿನ ಇತಿಹಾಸವನ್ನೂ ಓದುತ್ತಿದ್ದೆ. ಇಂಗ್ಲೆಂಡ್ ಬೇರೆಯಲ್ಲ, ಇಂಗ್ಲಿಷ್ ಭಾಷೆ ಬೇರೆಯಲ್ಲ ಎಂಬಂತೆ ಎರಡೂ ಹಾಸುಹೊಕ್ಕಾಗಿವೆ. ಇಂಗ್ಲೆಂಡಿಗೆ ಆ ಹೆಸರು ಬರಲು ಕಾರಣವಾದವರು ಪೂರ್ವಕಾಲದಲ್ಲಿ ಅಲ್ಲಿಗೆ ಬಂದು ನೆಲಸಿದ ಸ್ಕಾಂಡಿನೇವಿಯದ ಜನವರ್ಗಗಳಲ್ಲಿ ಒಂದು (‘ಏಂಗ್ಲ್ಸ್’). ಇಡೀ ಇಂಗ್ಲೆಂಡ್ ದ್ವೀಪ ಒಂದು ವಲಸಿಗರ ದೇಶ; ಅವರ ಭಾಷೆಯೂ ಹಾಗೆಯೇ- ಒಂದು ಸಂಕರ. ಅದು ಆಗಿಂದಾಗ್ಗೆ ಬದಲಾಗುತ್ತ ಬಂದಿದ್ದರೂ (ಹಳೆ ಇಂಗ್ಲಿಷ್ ಮತ್ತು ನಡು ಇಂಗ್ಲಿಷ್ ಇಂದು ‘ಕುರಿತೋದದೆ’ಅರ್ಥವಾಗುವುದಿಲ್ಲ. ಆಧುನಿಕ ಇಂಗ್ಲಿಷ್ ಗಳು ಹಲವಾರು ಇವೆ—ಅಮೇರಿಕನ್, ಸ್ಕಾಟಿಶ್, ಐರಿಶ್, ಸಿಂಗಪೂರಿಯನ್, ಇಂಡಿಯನ್, ವೆಸ್ಟ್ ಇಂಡಿಯನ್, ಆಫ್ರಿಕನ್, ಆಸ್ಟ್ರೇಲಿಯನ್; ಇವೆಲ್ಲದರಲ್ಲಿ ಶ್ರೇಣೀಕೃತ ಭಿನ್ನತೆಗಳೂ ಇವೆ. ಆದರೆ ಒಟ್ಟಾರೆ ಒಂದು ಭಾಷೆಯಾಗಿ ಇಂಗ್ಲಿಷ್ ಗೆ ಅದರದೇ ಸ್ವಾಯತ್ತತೆ, ಗುರುತು ಇಲ್ಲದೆಇಲ್ಲ. ಅದು ಜರ್ಮಾನಿಕ್ ಮೂಲದ್ದಾದರೂ ಜರ್ಮನ್ ಅಲ್ಲ; ಲ್ಯಾಟಿನೇಟ್ ಪದಗಳನ್ನು ಹೊಂದಿದ್ದೂ, ಲ್ಯಾಟಿನ್ ಅಲ್ಲ; ಫ್ರೆಂಚಿನ ಪ್ರಭಾವವಿದ್ದೂ ಫ್ರೆಂಚ್ ಅಲ್ಲ; ಅರೆಬಿಕ್ ಪದಗಳಿದ್ದೂ ಅರೆಬಿಕ್ ಅಲ್ಲ; ಗ್ರೀಕ್ ಪಾರಿಭಾಷಿಕ ಪದಗಳನ್ನು ಬಳಸುತ್ತಿದ್ದರೂ ಗ್ರೀಕ್ ಅಲ್ಲ.

ಕಾಸರಗೋಡಿನಂಥ ಒಂದು ಚಿಕ್ಕ ಪ್ರದೇಶದಲ್ಲಿ ಮೇಲೆ ಹೆಸರಿಸಿದ ಭಾಷೆಗಳು ಮೈಯೊರೆಸಿಕೊಂಡಿರದೆ ಸಾಧ್ಯವಿಲ್ಲ. ಈ ಭಾಷಿಕರೆಲ್ಲ ಇಲ್ಲಿಗೆ ಯಾವಾಗ ಬಂದರು, ಎಲ್ಲಿಂದ ಬಂದರು, ಅವರು ತಮ್ಮ ಜತೆ ತಂದ ಭಾಷೆಗಳು ಹೇಗಿದ್ದುವು, ಅವು ಈಗ ಹೇಗಾಗಿವೆ ಎಂದು ಕೇಳುವುದು ಸುಲಭ; ಉತ್ತರಿಸುವುದು ಕಷ್ಟ. ಇಲ್ಲಿ ಎಲ್ಲರಿಗಿಂತ ಮೊದಲು ಇದ್ದವರು ತೌಳವರು ಎಂದು ಐತಿಹ್ಯಗಳಿಂದ, ಪಾಡ್ದನಗಳಿಂದ ಊಹಿಸಬಹುದು. ಅಲ್ಲದೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಕಾಸರಗೋಡು, ಮಂಗಳೂರು, ಉಡುಪಿ ಕರಾವಳಿಯಲ್ಲಲ್ಲದೆ ಇನ್ನೆಲ್ಲೂ ಇಲ್ಲ. ಇದು ಅಕ್ಷರ ಸಾಹಿತ್ಯದಿಂದ ದೂರವಾದ ಕಾರಣವೋ ಏನೋ, ಬ್ರಾಹ್ಮಣ ತುಳು ಪ್ರಭೇದವನ್ನು ಹೊರತುಪಡಿಸಿದಂತೆ, ಸಂಸ್ಕೃತದ ಪ್ರಭಾವಕ್ಕೆ ಜಾಸ್ತಿ ಒಳಗಾಗದೆ ಇದೆ. ಬದಲು ಸಮೃದ್ಧ ಜನಪದ ಸಾಹಿತ್ಯವನ್ನು ಪಡೆದಿದೆ. ಕೆಲವು ಮಲೆಯಾಳಿ ಬೂತಗಳನ್ನು ಬಿಟ್ಟರೆ ಇಲ್ಲಿನ ಬೂತಗಳೆಲ್ಲ ತುಳುವೇ.

ಈ ಪ್ರಾಂತ್ಯಕ್ಕೆ ಕನ್ನಡ ಮುಖ್ಯವಾಗಲು ಕಾರಣ ಹಿಂದಿನ ಮೆಡ್ರಾಸ್ ಪ್ರಸಿಡೆನ್ಸಿಯಲ್ಲಿ ಇದು ದಕ್ಷಿಣ ಕರ್ನಾಟಕದ ಭಾಗವಾಗಿದ್ದುದು. ಈ ದಕ್ಷಿಣ ಕನ್ನಡ ದಕ್ಷಿಣದಲ್ಲಿ ಕಾಸರಗೋಡಿನಿಂದ ಉತ್ತರದಲ್ಲಿ ಮಂಗಳೂರು, ಉಡುಪಿ ದಾಟಿ ಕುಂದಾಪುರ ತನಕ ಕರಾವಳಿಯಲ್ಲಿ ಹಾಗೂ ಪೂರ್ವದಲ್ಲಿ ಸುಳ್ಯ ಪುತ್ತೂರು ಬೆಳ್ತಂಗಡಿ ಕಡೆಗಳಲ್ಲಿ ಮೈಚಾಚಿಕೊಂಡಿರುವ ಪ್ರದೇಶ. ಕಾಸರಗೋಡಿನ ಈ ಕನ್ನಡ ಅಸ್ಮಿತೆಗೆ ಧಕ್ಕೆ ಬಂದುದು 1956ರ ಭಾಷಾವಾರು ಪ್ರಾಂತ ರಚನೆಯಲ್ಲಿ, ಕಾಸರಗೋಡಿನ ಬಹುಜನರ ಮನಸ್ಸಿಗೆ ವಿರುದ್ಧವಾಗಿ ಅದನ್ನು ಕೇರಳದ ಭಾಗವಾಗಿ ಮಾಡಿದಾಗ. ದೊಡ್ಡ ಚಳುವಳಿಯೇ ನಡೆಯಿತಾದರೂ ರಾಜಕೀಯ ಚದುರಂಗದಾಟದಲ್ಲಿ ಏನೂ ಫಲ ನೀಡಲಿಲ್ಲ. ಕೇರಳ ಸರಕಾರ ಕನ್ನಡ ಮೈನಾರಿಟಿಯ ಹಕ್ಕುಗಳನ್ನು ರಕ್ಷಿಸಬೇಕಿತ್ತು; ಅದಕ್ಕೆ ಬದಲಾಗಿ ಅದು ದಮನ ನೀತಿಯನ್ನು ಅನುಸರಿಸುತ್ತಿರುವುದು ಪ್ರಜಾ ಪ್ರಭುತ್ವಕ್ಕೆ ಮಾಡುವ ಅಪರಾಧ. ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಲವಲೇಶವೂ ಗೊತ್ತಿಲ್ಲದ ಮಲೆಯಾಳಿ ಅಧ್ಯಾಪಕರನ್ನು ನೇಮಿಸುವುದು ಏರುಗೈಯ ವರ್ತನೆಯಲ್ಲವೇ? ಇಂಥ ವರ್ತನೆಗಳಿಂದ ಕಾಸರಗೋಡಿನ ಕಾಲಾಂತರದ ಭಾಷಾಬಾಂಧವ್ಯ ಹಾಳಾಗುತ್ತದೆ ಅಷ್ಟೆ.

1956ರಲ್ಲಿ ನಾನಿನ್ನೂ ಹೈಸ್ಕೂಲು ಹುಡುಗ. ಆದರೂ ಕಾಸರಗೋಡು ಕನ್ನಡಿಗರ ಹೋರಾಟದಲ್ಲಿ ಭಾಗವಹಿಸಿದೆ. ಪೋಲೀಸರ ಕೈಯಲ್ಲಿ ಬಂಧನಕ್ಕೊಳಗಾದೆ. ಕರ್ನಾಟಕ ಸಮಿತಿ ಚುನಾವಣೆಗೆ ನಿಂತಾಗ ಉಮೇದುವಾರರ ಪರವಾಗಿ ಕೆಲಸ ಮಾಡಿದೆ. ಇದೆಲ್ಲದರ ನೆನಪುಗಳು ಕಹಿಯೋ ಸಿಹಿಯೋ ಇನ್ನೂ ನನ್ನ ಮನಸ್ಸಿನಲ್ಲಿವೆ. ಮೈನಾರಿಟಿಯನ್ನು ಹೇಗೆ ನಡೆಸಿಕೊಳ್ಳಬೇಕೆನ್ನುವುದಕ್ಕೆ ಮಾದರಿಯಾಗಬಹುದಾದ ಒಂದು ಸದವಕಾಶವನ್ನು ಕೇರಳ ಸರಕಾರಗಳು ಕಳೆದುಕೊಂಡು ಬಂದಿವೆ-ಒಂದು ಚಿಕ್ಕ ಪ್ರದೇಶಕ್ಕೆ ಸೀಮಿತವಾದ ಕನ್ನಡದಿಂದ ಮಲೆಯಾಳಕ್ಕೆ ಏನಾದರೂ ಗಂಡಾಂತರವಿದೆಯೇ? ಇಲ್ಲವಲ್ಲ. ಬದಲು ಬಹುತ್ವಕ್ಕೆ ಪ್ರೋತ್ಸಾಹ ಕೊಟ್ಟಂತೆ ಆಗುತ್ತದೆ. ಕೆಲಸ ಹುಡುಕಿ ಎಲ್ಲಿಗೆ ಬೇಕಾದರೂ ಹೋಗುತ್ತಿರುವ ಮಲೆಯಾಳಿಗಳಿಗೆ ಇದು ಗೊತ್ತಿಲ್ಲದ ವಿಷಯವೇ? ಮೈನಾರಿಟಿ ಮೆಜಾರಿಟಿ ಪ್ರಶ್ನೆ ಎಲ್ಲೇ ಬಂದಾಗಲೂ ಇದು ಮೆಜಾರಿಟಿಗೆ ಬಹುತ್ವವನ್ನು ಕಾಪಾಡಲು ಒಂದು ಅವಕಾಶವೆಂದೇ ನನಗನಿಸುವುದು.

ಕಾಸರಗೋಡನ್ನು ಸಂಪೂರ್ಣವಾಗಿ ಮಲೆಯಾಳೀಕರಿಸುವುದರಿಂದ ಕೇರಳಕ್ಕೆ ನಷ್ಟವಲ್ಲದೆ ಲಾಭವೇನೂ ಇಲ್ಲ. ಅದಕ್ಕೆ ಬದಲು ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವುದು, ಕನ್ನಡದ ಮಹಾಕಾವ್ಯಗಳನ್ನು ಮಲೆಯಾಳಕ್ಕೆ ಭಾಷಾಂತರಿಸುವುದು ನಡೆಯಬೇಕಾದ ಕೆಲಸ. ನೋಡಿ, ಕನ್ನಡಿಗರು ಕೇರಳದಲ್ಲೇ ಹೆಚ್ಚು ಕನ್ನಡಿಗರಾಗಿದ್ದಾರೆ ಎಂದು ಕೇರಳ ಪ್ರಾಮಾಣಿಕವಾಗಿ ತೋರಿಸುವಂತಾಗಬೇಕು. ಕೋಟ್ಟಾಯಮಿನ ಮಹಾತ್ಮಾಗಾಂಧಿ ಯುನಿವರ್ಸಿಟಿಗೆ ಒಂದು ಅವಧಿಗೆ ಯು. ಆರ್. ಅನಂತಮೂರ್ತಿಯವರನ್ನು ಕುಲಪತಿಯಾಗಿ ಕೇರಳ ಬರಮಾಡಿಕೊಂಡಿತು. ಇದು ಸರ್ವತ್ರ ಶ್ಲಾಘನೆಗೆ ಒಳಗಾದ ಸಂಗತಿ. ಇಂಥ ಕೆಲಸ ನಡೆದರೆ ಎಷ್ಟು ಚಂದ ಅಲ್ಲವೇ? ಕೊಡು ಕೊಳ್ಳುವಿಕೆ ಇಲ್ಲದೆ ಯಾವ ಸಂಸ್ಕೃತಿಯೂ ಬೆಳೆದಿಲ್ಲ.

ಮಲೆಯಾಳವನ್ನಾಗಲಿ, ಮಲೆಯಾಳಿಗಳನ್ನಾಗಲಿ ನಾನು ದ್ವೇಷಿಸುವುದಿಲ್ಲ, ಯಾರೂ ದ್ವೇಷಿಸಲೂ ಬಾರದು. (ಇದೊಂದು ಹೇಳಿಕೊಳ್ಳುವ ಮಾತೂ ಅಲ್ಲ. ಈ ಸಂದರ್ಭದಲ್ಲಿ ಹೇಳುತ್ತಿದ್ದೇನೆ ಅಷ್ಟೆ.) ಸುತ್ತು ಮುತ್ತಲು ಮಲೆಯಾಳಿಗಳೇ ತುಂಬಿದ್ದ ಊರಿನಲ್ಲೇ ನಾನು ಹುಟ್ಟಿಬೆಳೆದುದು. ಮಲೆಯಾಳಿ ಬೂತಕೋಲಗಳನ್ನೇ ನಾನು ಮೊದಲು ನೋಡಿದುದು. ಮಲೆಯಾಳೀ ಮಾತೆಯೇ ನನಗೆ ಸ್ತನದಾಯಿನಿಯಾದುದು. ಮಲೆಯಾಳಿ ಹುಡುಗ ಹುಡುಗಿಯರೇ ನನ್ನ ಮೊದಲ ಆಟದ ಗೆಳೆಯರು ಕೂಡ. ನಮ್ಮ ಮನೆಗೆಲಸಕ್ಕೆ, ತೋಟದ ಕೆಲಸಕ್ಕೆ ಬರುತ್ತಿದ್ದವರೂ ಮಲೆಯಾಳಿಗಳೇ ಆಗಿದ್ದರು. ನಾನು ಶಾಲೆಗೆ ಹೋಗಲು ಪಡುವಣ ನನ್ನ ಸೋದರ ಮಾವನ ಮನೆಗೆ ಹೋದಾಗ ಪರಿಸರ ಸ್ವಲ್ಪ ಬದಲಾಯಿತು ಎನ್ನಬಹುದು. ಅಲ್ಲಿ ತುಳು ಭಾಷಿಕರು ಹೆಚ್ಚಿದ್ದರು.

ಕಾಸರಗೋಡಿನಲ್ಲಿ ಇಂಗ್ಲಿಷ್ ಬಿ.ಎ. ಮಾಡಿದ ಮೇಲೆ ನಾನು ಎಂ.ಎ. ಮಾಡಲು ಹೋದುದು ಮೈಸೂರಿಗಲ್ಲ, ಕೇರಳದ ರಾಜಧಾನಿಯಾದ ತಿರುವನಂತಪುರಕ್ಕೆ. ಇಸವಿ 1964. ತಿರುವನಂತಪುರ ಸೊಗಸಾದ ಚಿಕ್ಕ ನಗರ; ಅದೊಂದು ಪ್ರಾಂತದ ರಾಜಧಾನಿಯೆನ್ನುವ ಭಾವನೆಯೇ ಬರದಿರುವಂಥದು. ಅಲ್ಲಿ ಸಾಕಷ್ಟು ತಮಿಳು ಜನಸಂಖ್ಯೆಯೂ ಇತ್ತು. ಎಲ್ಲ ಗಡಿಪ್ರದೇಶಗಳಲ್ಲೂ ನಾವು ಇಂತಹ ದ್ವಿಭಾಷಾ, ಕೆಲವೆಡೆ ಬಹುಭಾಷಾ, ಚಲನೆಯನ್ನು ನಾವು ಕಾಣುತ್ತೇವೆ. ಎಂ.ಎ. ಮೊದಲ ವರ್ಷ ಕೇರಳದ ಪ್ರಸಿದ್ಧ ಕವಿ ಅಯ್ಯಪ್ಪ ಪಣಿಕ್ಕರ್ ನನಗೆ ಅಧ್ಯಾಪಕರಾಗಿದ್ದರು; ಅವರು ಕಲಿಸುತ್ತಿದ್ದುದು ಹಳೆ ಇಂಗ್ಲಿಷ್. ಮುಂದಿನ ವರ್ಷ ಅವರು ಯುನಿವರ್ಸಿಟಿ ಕೇಂದ್ರಕ್ಕೆ ಹೋದರು. ಕವಿಯಿತ್ರಿ ಹೃದಯಕುಮಾರಿ (ಕವಿಯಿತ್ರಿ ಸುಗತಕುಮಾರಿಯ ಸೋದರಿ) ಕೂಡ ನನಗೆ ಅಧ್ಯಾಪಕರಾಗಿದ್ದರು; ಅವರು ಕಲಿಸುತ್ತಿದ್ದುದು ಇಂಗ್ಲಿಷ್ ರೊಮ್ಯಾಂಟಿಕ್ ಪೋಯೆಟ್ರಿ. ಆದರೆ ನಾನು ಹೆಚ್ಚು ಇಷ್ಟಪಡುತ್ತಿದ್ದುದು ಕುಮಾರ ಪಿಳ್ಳೆಯವರನ್ನು. ಅವರು ಕಲಿಸುತ್ತಿದ್ದುದು ಟಿ.ಎಸ್. ಎಲಿಯಟ್ ನ ಕವಿತೆಗಳನ್ನು. ಹೊರಗೆ ಕಂಡಾಗಲೆಲ್ಲ ನನ್ನ ಸುಖದುಃಖ ವಿಚಾರಿಸುತ್ತಿದ್ದರು. ನನ್ನ ಊರ ಬಗ್ಗೆ ಕೇಳುತ್ತಿದ್ದರು.

ಇಸವಿ 1966. ಎಂ.ಎ. ಮುಗಿಸಿಕೊಂಡು ಕೇರಳದಲ್ಲಿ ಇಂಗ್ಲಿಷ್ ಲೆಕ್ಚರರಾಗಿ ಸುತ್ತಾಡುತ್ತಿದ್ದ ವೇಳೆ ನನಗೆ ಹಲವು ಆಧುನಿಕ ಮಲೆಯಾಳಿ ಕವಿಮಿತ್ರರು ಲಭ್ಯವಾದರು. ಕಡಮನಟ್ಟ ರಾಮಕೃಷ್ಣನ್, ಶಂಕರ ಪಿಳ್ಳ, ಸಚ್ಚಿದಾನಂದನ್, ಬಿ. ರಾಜೀವನ್, ನಾರಾಯಣ ಪ್ರಸಾದ್, ಶಿವದಾಸನ್, ಅಲಿಯಾರ್ ಕುಂಞು ಮುಂತಾಗಿ… ಲೋಕಸಾಹಿತ್ಯದ ಕುರಿತು ಇವರಿಗಿದ್ದ ಓದಿಗೆ ನಾನು ಬೆರಗಾದೆ. ಇನ್ನು ಕ್ರಾಂತಿಯ ವಿಷಯಕ್ಕೆ ಬಂದರೆ ಎಲ್ಲರೂ ಹೋ ಚಿ ಮಿನ್ನರೇ, ಎಲ್ಲರೂ ಚೆ ಗವೇರರೇ. ಕನ್ನಡದಿಂದ ಮಲೆಯಾಳಕ್ಕೆ ಹೊಸ ಕನ್ನಡ ಕವಿತೆಗಳನ್ನು ಅನುವಾದಿಸಲು ನಾನು ಸ್ವಲ್ಪ ಮಟ್ಟಿಗೆ ಒಂದು ಕೊಂಡಿಯಾಗಿ ಕೆಲಸ ಮಾಡಿದೆ. ಅವು ಕೆಲವು ಪಣಿಕ್ಕರರ “ಕೇರಳ ಕವಿತ” ಎಂಬ ಪತ್ರಿಕೆಯಲ್ಲಿ ಪ್ರಕಟವಾದುವು. ರಾಜಕೀಯ ಏನಿದ್ದರೂ ಸಾಹಿತ್ಯ ಅದನ್ನು ಮೀರಿ ನಿಲ್ಲಬಹುದು ಎಂಬುದನ್ನು ನಾನು ಅನುಭವದಿಂದ ಕಂಡುಕೊಂಡೆ. 1975ರಲ್ಲಿ ನಾನು ಕೇರಳ ತೊರೆದು ಹೈದರಾಬಾದಿಗೆ ಬಂದೆ, ಕೇರಳ ಕವಿಮಿತ್ರರ ಸಂಪರ್ಕ ನಿಂತಿತು.

ನಮ್ಮ ಹಿರಿಯರಿಗೆ ಮಲೆಯಾಳ ದೇಶದ ಸಂಬಂಧ ಬಹಳ ಹಿಂದಿನಿಂದಲೂ ಇತ್ತು. ಈಗ ಕೇರಳವನ್ನು ‘ದೇವರ ನಾಡು’ ಎಂದು ವಿಜೃಂಭಿಸುವುದು ವಾಡಿಕೆಯಾಗಿದೆ: ‘ನಿಸರ್ಗ ಸುಂದರ’ವಾದ ಪ್ರದೇಶ ಎಂಬ ಅರ್ಥದಲ್ಲಿ, ಪ್ರವಾಸೋದ್ಯಮದ ದೃಷ್ಟಿಯಿಂದ. ಆದರೆ ಕೇರಳದಲ್ಲಿ ವಿಪುಲವಾದ ದೇವಾಲಯಗಳೂ ಇವೆ. ಅಲ್ಲಿ ಅರ್ಚಕರಾಗಿ ನಮ್ಮ ಹಿರಿಯರು ಹೋಗುತ್ತಿದ್ದರು. ಇದಕ್ಕೆ ‘ತೆಂಕಲಾಗಿ ಹೋಗುವುದು’ ಎಂದು ಹೆಸರು. ಒಂದೊಂದು ಮನೆತನಕ್ಕೆ ಮೂಲ ಹಕ್ಕಿನಂತೆ ಒಂದೋ ಎರಡೋ ದೇವಾಲಯಗಳ ಅರ್ಚಕತ್ವ ಸಿಗುತ್ತಿತ್ತು. ಈ ಕಡೆಯ ಬ್ರಾಹ್ಮಣರು (‘ಎಂಬ್ರಾಂದ್ರಿ’ಗಳು) ಅಲ್ಲಿ ‘ಶಾಂತಿಕ್ಕಾರ’ರಾಗಿ ಇರುತ್ತಿದ್ದರು. ‘ಶಾಂತಿ ಮಾಡುವುದು ಎಂದರೆ ಈ ಪರಿಭಾಷೆಯಲ್ಲಿ ಪೂಜೆ ಮಾಡುವುದು ಎಂದೇ ಅರ್ಥ; ಅದನ್ನು ಮಾಡುವವರು ಶಾಂತಿಕ್ಕಾರರು! ‘ಶಾಂತಿ’ ವೇದಮಂತ್ರಗಳಲ್ಲಿ ಪದೇ ಪದೇ ಸಮಾಪ್ತಿಯಾಗಿ ಬರುವ‘ಓಂ ಶಾಂತಿಃ ಶಾಂತಿಃ ಶಾಂತಿಃ’ ಟಿ.ಎಸ್. ಎಲಿಯಟ್ ತನ್ನ ನೀಳ್ಗವನ ‘ದ ವೇಸ್ಟ್ ಲ್ಯಾಂಡ್’ನ ಸಮಾಪ್ತಿಗೆ ಬಳಸುವುದೂ ಇದನ್ನೇ! ಎತ್ತಣಿಂದೆತ್ತಣ ಸಂಬಂಧ! ಇಪ್ಪತ್ತನೆ ಶತಮಾನದ ಆದಿಯಲ್ಲಿ ಕರಾವಳಿ ರೈಲ್ವೆ (ಉಗಿ ಬಂಡಿ) ಸುರುವಾಯಿತಷ್ಟೆ? ಇದರಿಂದ ಜನಜೀವನದ ಗತಿಯೇ ಬದಲಾಯಿತು. ಇದರ ಫಲಾನುಭವಿಗಳಲ್ಲಿ ನಮ್ಮ ಶಾಂತಿಕ್ಕಾರರೂ ಇದ್ದರು.

ಈ ರೈಲ್ವೆ ಸುರುವಾಗುವ ಮೊದಲು ಅವರು ಕೇರಳಕ್ಕೆ ಹೇಗೆ ಹೋಗಿ ಬರುತ್ತಿದ್ದರೋ ತಿಳಿಯದು. ಬಸ್ಸು, ಕಾರುಗಳು ಇನ್ನೂ ಬಂದಿರಲಿಲ್ಲವಲ್ಲ. ಅಂತೂ ದಿನಗಟ್ಟಲೆ ನಡೆದುಕೊಂಡೋ ಎತ್ತಿನ ಗಾಡಿಗಳಲ್ಲೋ ಹೋಗಿ ಬರುತ್ತಿದ್ದರು. ಒಂದೆರಡು ವರ್ಷ ಅಲ್ಲಿದ್ದು ರಜದಲ್ಲಿ ಊರಿಗೆ ಬರುತ್ತಿದ್ದರು, ಮತ್ತೆ ಹೋಗುತ್ತಿದ್ದರು. ದೇವರ ಮೇಲಿನ ಭಕ್ತಿಯಿಂದಲ್ಲ, ಧನಾರ್ಜನೆಗೆ. ಅಂತೂ ಮಲೆಯಾಳದ ಸಂಪರ್ಕದಲ್ಲಿರುತ್ತಿದ್ದರು. ರೈಲು ಬಂದ ಮೇಲೆ ಇದು ಸ್ವಲ್ಪ ಸುಲಭವಾಯಿತು.

ಕೆಲಸದ ದಿನಗಳಲ್ಲಿ ಅವನು ನಮ್ಮಲ್ಲೆ ಊಟ ಮಾಡುತ್ತಿದ್ದ. ಬೇಸಿಗೆಯ ಕಾಲವಾದ್ದರಿಂದ (ಹುಲ್ಲು ಹೊದೆಸುವುದು ಸಾಧಾರಣವಾಗಿ ಬೇಸಿಗೆಯಲ್ಲೇ) ತಾನೇ ಕಟ್ಟುತ್ತಿದ್ದ ಹಸಿ ಅಡಿಕೆ ಹಾಳೆಯ ಪಡಿಗೆಯಲ್ಲಿ ಅವನು ಕೈತುಂಬ ಉಣ್ಣುವ ಗಂಜಿಯೂಟದ ಶೈಲಿಯನ್ನು ಕಂಡರೆ ಆಗಷ್ಟೇ ಉಂಡವರಿಗೂ ಮತ್ತೊಮ್ಮೆ ಉಣಬೇಕೆನಿಸುವುದು! ಚೆನ್ನಾಗಿ ಹಸಿದವರ ಊಟದ ರೀತಿ ಅಂಥದು. ಮಾಲಿಂಗಜ್ಜನ ಆತ್ಮಕ್ಕೆ ಶಾಂತಿಯಿರಲಿ.

ಯಾಕೆ ಇದೆಲ್ಲ ಹೇಳುತ್ತಿದ್ದೇನೆ ಎಂದರೆ ತೆಂಕಲಾಗಿ ಹೋಗಿ ಬಂದವರು ಮೊದಲಿನಂತೆ ಇರುತ್ತಿರಲಿಲ್ಲ. ಅವರು ‘ನಿಜವಾದ’ಮಲೆಯಾಳ ಸಂಸ್ಕೃತಿ ಕಲಿತಿರುತ್ತಿದ್ದರು. ಕಾಳನ್, ಓಲನ್, ತೋರನ್, ಪರಿಪ್ಪು, ಪುಳಿಶ್ಶೇರಿ, ಅವಿಲ್, ಉಪ್ಪೇರಿ ಮುಂತಾದ ಊಟದ ಪದಾರ್ಥಗಳ ಬಗ್ಗೆ ಮಾತಾಡುತ್ತಿದ್ದರು. ಅವರ ಮಲೆಯಾಳ ಕೇಳಿ ನಮ್ಮ ಊರಿನ ಮಲೆಯಾಳಿಗಳು ಮೂಗಿಗೆ ಬೆರಳಿಡುತ್ತಿದ್ದರು. ಹೋಗುವಾಗ ಹೀಗಿರಲಿಲ್ಲವಲ್ಲ, ಈಗ ಯಾಕೆ ಹೀಗೆ ಎಂದು! ಕೇರಳದಿಂದ ಬಂದ ಹಲವರಿಗೆ ಮಲೆಯಾಳ ಓದಲು ಬರೆಯಲು ಕೂಡ ಬರುತ್ತಿತ್ತು. ನನ್ನ ಸೋದರ ಮಾವನಿಗೆ (ನಾನು ಶಾಲೆಗೆ ಹೋಗಲು ತಂಗಿದ್ದ ಮನೆಯವರು) ಹಣೆಗೆ ಮಾತ್ರವಲ್ಲ, ಇಡೀ ಕೈಮೈಗೆ ವಿಭೂತಿ ಬಳಿಯುವ ಅಭ್ಯಾಸ ಬಂದಿತ್ತು.

ಅದೇ ರೀತಿ ಎಡೆ ಹೊತ್ತಿನಲ್ಲಿ ಚಾಯ. ಅವರಿಗೆ ಚೆನ್ನಾಗಿ ಮಲೆಯಾಳ ಓದಲು ಬರೆಯಲು ಬರುತ್ತಿತ್ತು. ಅವರ ಹತ್ತಿರ ಭಟ್ಟಿ ವಿಕ್ರಮಾದಿತ್ಯ ಕಥೆಗಳ ದೊಡ್ಡದೊಂದು ಮಲೆಯಾಳ ಪುಸ್ತಕವಿತ್ತು. ಅದನ್ನು ಮಲೆಯಾಳದಲ್ಲೇ ನಮಗೆ ಓದಿಹೇಳುತ್ತಿದ್ದರು. ಗ್ರಾಂಥಿಕ ಮಲೆಯಾಳ ಭಾಷೆ, ಕುತೂಹಲಕರ ಕಥೆ, ಕೇಳಲು ಸೊಗಸಾಗಿತ್ತು.

ಕಾಸರಗೋಡಿನಲ್ಲಿ ಗಣನೀಯವಾದ ಮುಸ್ಲಿಂ ಜನಸಂಖ್ಯೆಯಿದೆ. ಇವರು ಮಾತಾಡುವ ಮಲೆಯಾಳಕ್ಕೆ ಮಾಪಿಳ್ಳೆ ಯಾ ಬ್ಯಾರಿ ಭಾಷೆ ಎನ್ನುತ್ತಾರೆ. ಇದು ಮಲಬಾರು ಮಂಗಳೂರು ಕಡೆ ಪ್ರಚಾರದಲ್ಲಿದೆ. ಅರೇಬಿಕ್ ನಿಂದ ಬಹಳ ಪ್ರಭಾವಿತವಾದ ಉಪಭಾಷೆ ಇದು. ಇದರ ವಿಶಿಷ್ಟತೆಯನ್ನು ಗುರುತಿಸಿದ ಕರ್ನಾಟಕ ಸರಕಾರ ಬ್ಯಾರಿ ಎಕಾಡಮಿಯನ್ನು ಸ್ಥಾಪಿಸಿದೆ. ಕೇರಳದ ವಿಚಾರ ನನಗೆ ತಿಳಿಯದು.

ಕಾಸರಗೋಡಿಗೆ ಹವೀಕರು ಎಲ್ಲಿಂದ ಯಾವಾಗ ಯಾಕೆ ಬಂದರು ಎನ್ನುವುದಕ್ಕೆ ದಾಖಲೆಯಿಲ್ಲ. ಬಹುಶಃ ಅವರು ಉತ್ತರ ಕನ್ನಡದಿಂದ ಬಂದಿರಬೇಕು. ಈಗ ಕಾಸರಗೋಡಿನ ಹವ್ಯಕಕ್ಕೂ ಉತ್ತರ ಕನ್ನಡ ಹವ್ಯಕಕ್ಕೂ ಇರುವ ವ್ಯತ್ಯಾಸಗಳನ್ನು ಮತ್ತು ಇಲ್ಲಿನವರ ವಿಪುಲ ಜನಸಂಖ್ಯೆಯನ್ನು ನೋಡಿದರೆ, ಈ ವಲಸೆ ಶತಮಾನಗಳ ಹಿಂದೆಯೇ ಯಾವುದೋ ಮುಖ್ಯ ಕಾರಣಕ್ಕೆ ನಡೆದಿರಬೇಕೆನಿಸುತ್ತದೆ. ಅದೇನೆನ್ನುವುದು ಊಹೆಗೆ ಬಿಟ್ಟ ವಿಚಾರ. ಈ ಉಪಭಾಷೆಗಳು ಪರಸ್ಪರ ಅರ್ಥವಾಗುವಂತಿವೆ; ಆದರೆ ಕಾಸರಗೋಡಿನ ಹವ್ಯಕ ಮಾತು ಹಳೆಗನ್ನಡಕ್ಕೆ ಹತ್ತಿರವಿದೆ, ಮತ್ತು ಮಲೆಯಾಳ, ತುಳುವಿನಿಂದ ಸ್ವಲ್ಪ ಮಟ್ಟಿಗೆ ಪ್ರಭಾವಿತವಾಗಿದೆ, ಉತ್ತರ ಕನ್ನಡದ ಹವ್ಯಕ ಸೀಮೆಕನ್ನಡದಿಂದ ಪ್ರಭಾವಿತವಾಗಿದ್ದು ಕಾಸರಗೋಡಿನ ಹವ್ಯಕ ಮತ್ತು ಸೀಮೆಕನ್ನಡದ ಮಧ್ಯೆ ಇರುವಂತೆ ಕಾಣುತ್ತದೆ.

ಹವ್ಯಕ ನುಡಿ ಸ್ವಸಮಾಜದೊಳಗೆ ಬಳಸಲ್ಪಡುವಂಥದು, ಆದ್ದರಿಂದ ಅದರಲ್ಲಿ ಜನಪದ ಸಾಹಿತ್ಯವಿದೆಯೇ ಹೊರತು, ಲಿಖಿತ ಸಾಹಿತ್ಯ ಕಡಿಮೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ: ಹೊಸ ಸಾಹಿತ್ಯ ಸೃಷ್ಟಿಯಾಗುತ್ತಿದೆ, ಪುಸ್ತಕರೂಪದಲ್ಲಿ ಪ್ರಕಟವಾಗುತ್ತಿದೆ—ಕವಿತೆ, ಕತೆ, ಕಾದಂಬರಿ, ನಾಟಕ ಇತ್ಯಾದಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ. ಈ ನಿಟ್ಟಿನಲ್ಲಿ ಹರಿಕೃಷ್ಣ ಭರಣ್ಯರ ಕೊಡುಗೆ ಅಪಾರವಾದುದು ಮತ್ತು ಅನುಸರಣೀಯ.

ಕಾಸರಗೋಡಿನ ಮೂಲ ಭಾಷೆಯಾದ ತುಳು ಈ ಪ್ರದೇಶದ ವ್ಯಾವಹಾರಿಕ ಭಾಷೆ ಕೂಡ ಹೌದು. ಇದಕ್ಕೆ ಬರಹವಿಲ್ಲ, ಇತ್ತು ಎನ್ನುತ್ತಾರೆ ಕೆಲವರು. ಮಲೆಯಾಳದ ಗ್ರಂಥ ಲಿಪಿಯೇ ತುಳುವಿನ ಲಿಪಿ ಎನ್ನುವುದು ಅವರ ವಾದ. ಇದ್ದೀತು, ಆದರೆ ಈಗ ಇಲ್ಲ. ತುಳು ಬರೆಯಬೇಕಾಗಿ ಬಂದಾಗ ಕನ್ನಡ ಲಿಪಿಯನ್ನೇ ಬಳಸಲಾಗುತ್ತದೆ. ಆದರೆ ಈಗಾಗಲೇ ಹೇಳಿದಂತೆ ತುಳು ಅದನ್ನಾಡುವ ಜನರ ಜಾತಿಯನ್ನು ಹೊಂದಿಕೊಂಡು ಬೇರೆ ಬೇರೆ ಸ್ವರೂಪವನ್ನು ಪಡೆದುಕೊಂಡಿದೆ. ತುಳು ಮಾತಾಡುವ ಜನಸಂಖ್ಯೆ ಕಿರಿದಾದರೂ, ಅದರ ಕ್ಷೇತ್ರ ಕಾಸರಗೋಡಿಗಷ್ಟೆ ಸೀಮಿತವಾಗಿಲ್ಲ, ಕಾಸರಗೋಡಿನ ದಕ್ಷಿಣಕ್ಕೂ ಉತ್ತರಕ್ಕೂ ಅದು ಮೈಚಾಚಿದೆ-ಮುಂಬಯಿಯನ್ನೂ ತಲುಪಿದೆ. ಬಹು ಪ್ರಾಚೀನವಾದ ಈ ಭಾಷೆಯ ಜನಪದ ಸಾಹಿತ್ಯ ಶ್ರೀಮಂತವಾದುದು; ಇದನ್ನು ಕಾಪಾಡುವುದು ಗೌರವಿಸುವುದು ಅಗತ್ಯವಿದೆ.

ಕಾಸರಗೋಡಿನ ತುಳು ಜನರು ಕನ್ನಡ ಸಾಹಿತ್ಯಕ್ಕೆ ಕೊಟ್ಟ, ಕೊಡುತ್ತಿರುವ ಕೊಡುಗೆ ಸಾಕಷ್ಟು ದೊಡ್ಡದು ಎನ್ನುವುದನ್ನು ಮರೆಯಬಾರದು; ಕಯ್ಯಾರ ಕಿಞ್ಞಣ್ಣ ರೈ ಹೆಸರು ಅವಿಸ್ಮರಣೀಯ. ಮನೆಮಾತು ಏನಿದ್ದರೂ ಕಾಸರಗೋಡಿನ ಹಲವು ಜನ ಕನ್ನಡದಲ್ಲಿ ಬರೆಯುತ್ತ ಬಂದಿದ್ದಾರೆ, ಕನ್ನಡ ಅವರೆಲ್ಲರನ್ನೂ ಕನ್ನಡಿಗರೆಂದೇ ತಿಳಿದಿದೆ. ನನ್ನ ಮಿತ್ರ ಕನ್ನಡದ ಪ್ರಸಿದ್ಧ ಕತೆಗಾರ ಎಂ. ವ್ಯಾಸರ ಮನೆ ಮಾತು ತುಳು. ಅವರು ಯಾರಿಗಿಂತಲೂ ಕಡಿಮೆ ಕನ್ನಡಿಗ ಹೇಗಾದಾರು? ಕನ್ನಡದ ಪ್ರಸಿದ್ಧ ಕಾದಂಬರಿಕಾರ ಕೆ.ಟಿ. ಗಟ್ಟಿಯವರ ಮನೆಮಾತು ಕೂಡ ತುಳು. ಆದರೇನಾಯಿತು? ಕನ್ನಡಕ್ಕೆ ಅವರು ಕನ್ನಡಿಗರೇ. “ಸಂಸ್ಕಾರ”ವೂ ಸೇರಿದಂತೆ ಹಲವು ಆಧುನಿಕ ಕನ್ನಡ ಕೃತಿಗಳನ್ನು ಮಲೆಯಾಳಕ್ಕೆ ಅನುವಾದಿಸಿದ ಸಿ. ರಾಘವನ್ ಅಪ್ಪಟ ಮಲೆಯಾಳಿ, ಆದರೆ ಅವರು ಕನ್ನಡಕ್ಕೆ ಹೊರತಲ್ಲ. ಕನ್ನಡ ಮಾತಾಡುತ್ತಿದ್ದರು, ಓದುತ್ತಿದ್ದರು. ಹಾಸನದಿಂದ ಕಾಸರಗೋಡು ಸರಕಾರಿ ಕಾಲೇಜಿಗೆ ಕನ್ನಡ ಪ್ರಾಧ್ಯಾಪಕರಾಗಿ ಬಂದು ಕಾಲಾವಕಾಶದಲ್ಲಿ ಮಲೆಯಾಳ ಕಲಿತು ಅನೇಕ ಪ್ರಸಿದ್ಧಮಲೆಯಾಳಂ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಬಿ. ಕೆ. ತಿಮ್ಮಪ್ಪನವರ ಸೇವೆಯೂ ಕನ್ನಡದ ಸೇವೆಯೇ.

ಕಾಸರಗೋಡಿನ ಐದು ಭಾಷೆಗಳಲ್ಲಿ ಕನ್ನಡ, ತುಳು, ಮಲೆಯಾಳಂ ಎಂಬ ಮೂರು ದ್ರಾವಿಡ ವರ್ಗದವಾದರೆ, ಉಳಿದೆರಡು ಕೊಂಕಣಿ ಮತ್ತು ಮರಾಠಿ ಇಂಡೋ-ಯುರೋಪಿಯನ್ ವರ್ಗಕ್ಕೆ ಸೇರಿದಂಥವು, ಪ್ರಾಕೃತ ಪಂಗಡಕ್ಕೆ ಸೇರಿದಂಥವು. ಈ ಎರಡು ಭಾಷಿಕರು ಉತ್ತರದಿಂದ ಈ ಕಡೆ ಬಂದವರಿರಬೇಕು. ಕೊಂಕಣಿ ಮಾತಾಡುವವರು (ಸಾರಸ್ವತ, ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ಕ್ರಿಶ್ಚಿಯನ್ ಶೂದ್ರರು) ಕೊಂಕಣಸ್ಥರೆಂದು (ಎಂದರೆ ಗೋವಾದಿಂದ ಮಲಬಾರ್ ತನಕದ ಕರಾವಳಿ ನಿವಾಸಿಗರೆಂದು) ಪ್ರಸಿದ್ಧರಾದರೂ, ಈ ಸೀಮೆಗೂ ಮೇಲಿನ ಉತ್ತರದಿಂದ ಅವರು ಬಂದಿರಬಹುದು. ಕೊಂಕಣಿ ಬ್ರಾಹ್ಮಣರು ದೇಸೀಯರಿಗಿಂತ ಪರಿಷ್ಕೃತರು ಮತ್ತು ವಿದ್ಯಾವಂತರು, ಹೆಚ್ಚಿನವರೂ ನಗರವಾಸಿಗಳಾಗಿದ್ದು, ವ್ಯಾಪಾರ ವಹಿವಾಟುಗಳಲ್ಲಿ, ವಕಾಲತು, ಅಧ್ಯಾಪನ ಮುಂತಾದ ಗೌರವಾನ್ವಿತ ಉದ್ಯೋಗಗಳಲ್ಲಿ ತೊಡಗಿಸಿಕೊಂಡವರು. ಕನ್ನಡ ಸಾಹಿತ್ಯಕ್ಕೆ ಕೊಂಕಣಸ್ಥರ ಕೊಡುಗೆ ಎಷ್ಟು ಅಪಾರವಾದುದು ಎನ್ನುವುದಕ್ಕೆ ನಮ್ಮ ಗೋವಿಂದ ಪೈ ಹೆಸರೇ ಸಾಕು. ಈಗ ಈ ಮೂಲದಿಂದ ಕನ್ನಡ ಯುವ ಲೇಖಕರು ಎಷ್ಟೋ ಮಂದಿ ಬರುತ್ತಿದ್ದಾರೆ. ಇಡೀ ಕನ್ನಡ ಕರಾವಳಿಗೆ ಒಂದು ಬಾಂಧವ್ಯವನ್ನು ಬೆಸೆಯುವುದಕ್ಕೆ ಕೊಂಕಣ ಭಾಷಿಕರ ಉದ್ಯಮಶೀಲತೆಯೂ ಒಂದು ಕಾರಣ.

ಕೊಂಕಣಿಗೆ ಅದರದೇ ಆದ ಬರಹವಿಲ್ಲ, ಇದುವರೆಗೆ ಇರಲಿಲ್ಲ. ಹೇಳಿಕೊಳ್ಳುವಂತಹ ಸಾಹಿತ್ಯವೂ ಇರಲಿಲ್ಲ. ಆದರೆ ಈಗ ಸಾಂಸ್ಕೃತಿಕ ಪುನರುದಯವೊಂದು ಕಾಣಸಲು ತೊಡಗಿದೆ. ದೇವನಾಗರಿಯನ್ನೇ ಕೊಂಕಣಿಗೆ ಬಳಸಬೇಕೆನ್ನುವುದು ಕೇಂದ್ರ ಸಾಹಿತ್ಯ ಅಕಾಡಮಿಯ ಸೂಚನೆ. ಇದುವರೆಗೆ ಆಯಾ ಪ್ರಾದೇಶಿಕ ಮುಖ್ಯ ಭಾಷೆಯ ಲಿಪಿಯನ್ನೇ ಕೊಂಕಣಿ ಬರೆಯಲು ಬಳಸಲಾಗುತ್ತಿತ್ತು. ಕೊಂಕಣಿಗೆ ಇತರ ಭಾಷೆಗಳಿಂದ (ಕನ್ನಡ, ಇಂಗ್ಲಿಷ್, ಮಲೆಯಾಳಂ) ಅನುವಾದ ಕಾರ್ಯವೂ ನಡೆದಿದೆ. ಚಿನ್ನಾ ಕಾಸರಗೋಡು ಅವರ ಅನುವಾದ ಕಾರ್ಯ ಶ್ಲಾಘನೀಯ. ಆಧುನಿಕ ಕನ್ನಡದ ಮೂವತ್ತು ಸಣ್ಣ ಕತೆಗಳ ಅವರ ಕೊಂಕಣಿ ಅನುವಾದ “ತೀಸ್ ಕಾಣಿಯೋ” ಕರ್ನಾಟಕದ ಅಕಾಡಮಿ ಪ್ರಶಸ್ತಿಗೆ ಭಾಜನವಾಗಿದೆ. ಅಂತೆಯೇ ಅವರ ‘ಘರ್ ಘರ್ ಕೊಂಕಣಿ’ ಕಾರ್ಯಕ್ರಮ ಕೊಂಡಾಡತಕ್ಕದ್ದು; ಇದೊಂದು ಕೊಂಕಣಿ ಸ್ವಾಭಿಮಾನ ಉದ್ದೀಪನ ಯೋಜನೆಯಾಗಿದ್ದು ಅದ್ವಿತೀಯವಾದದ್ದು ಎನಬಹುದು.

ಸಾಹಿತ್ಯ, ಸಂಗೀತ, ಗಾಯನ, ನಾಟಕ, ಸಿನೆಮಾ, ಸಂವಾದ ಕಾರ್ಯಕ್ರಮಗಳ ಮೂಲಕ ಚಿನ್ನಾ ಕನ್ನಡ, ತುಳು, ಕೊಂಕಣಿ ಸಾಂಸ್ಕೃತಿಕ ಕ್ಷೇತ್ರಗಳಿಗೆ ನೀಡುತ್ತಿರುವ ಸೇವೆ ಕಾಸರಗೋಡಿನ ಯುವ ಜನತೆಗೆ ಚೈತನ್ಯದಾಯಕವಾಗಿದೆ. ಇದರಿಂದ ಈ ಸರಹದ್ದಿನ ಜನರ ಅನಾಥ ಭಾವ ಸ್ವಲ್ಪವಾದರೂ ಇಲ್ಲದಾಗುತ್ತದೆಎನಿಸುತ್ತದೆ.

ಕುಂಬಳೆ, ಬೇಳ, ನೀರ್ಚಾಲಿನ ಸುತ್ತ ಮುತ್ತ ನೆಲಸಿದ ಕ್ರಿಶ್ಚಿಯನರ ಮಾತೃಭಾಷೆಯೂ ಕೊಂಕಣಿಯೇ. ಆದರೆ ಬ್ರಾಹ್ಮಣರ ಕೊಂಕಣಿಯೂ ಕ್ರಿಶ್ಚಿಯನರ ಕೊಂಕಣಿಯೂ ಒಂದೇ ರೀತಿ ಇಲ್ಲ. ಪದಗಳಲ್ಲಿ, ಶೈಲಿಯಲ್ಲಿ, ಧಾಟಿಯಲ್ಲಿ ವ್ಯತ್ಯಾಸಗಳಿವೆ. ಎರಡೂ ಕೊಂಕಣಿಗಳ ಮೇಲೆ ದಟ್ಟವಾದ ಕನ್ನಡ, ತುಳು ಪ್ರಭಾವಗಳೂ ಇವೆ. ಕ್ರಿಶ್ಚಿಯನ್ ಕೊಂಕಣಿ ಜನರು ಇತರರ ಜೊತೆ ವ್ಯಾವಹಾರಿಕ ಭಾಷೆಯಾಗಿ ತುಳು ಮಾತಾಡುವುದೇ ಜಾಸ್ತಿ. ಬೇಳದ ಕ್ರಿಶ್ಚಿಯನ್ ಗಂಡಾಳುಗಳಿಗೆ ಸೋಜ ಎನ್ನುವ ಉಪನಾಮವಿದೆ. ಇದು ಪೋರ್ಚುಗೀಸಿನ ಡಿ’ಸೋಜ ಎಂಬ ಪದದಿಂದ ಬಂದುದು. ಬಹುಶಃ ನಮ್ಮೂರಿನ ಸೋಜರು ಪೋರ್ಚುಗೀಸ್ ಮಿಶನರಿಗಳ ಪ್ರಭಾವದಿಂದ ಗೋವಾ ದಾಮನ್ ಗಳಲ್ಲಿ ಮತಪರಿವರ್ತನೆಗೆ ಒಳಗಾಗಿದ್ದು ಮತಪ್ರಚಾರಕರ ಜತೆ ಇತ್ತ ವಲಸೆ ಬಂದಿರಬೇಕು.

ಬೇಳದಲ್ಲೊಂದು ಮಾದ್ರಿ ಶಾಲೆಯಿದೆ, ಒಂದು ಕನ್ಯಾನಿಲಯವೂ ಇದೆ. ಕುಂಬಳೆಯಲ್ಲೂ ಇವೆ. ಇವೆಲ್ಲ ಕ್ಯಾಥಲಿಕ್ ಮಿಶನರಿ ಪ್ರಾಯೋಜಿತವಾದರೆ, ಕಾಸರಗೋಡು ಪಟ್ಟಣದ ಪ್ರೊಟೆಸ್ಟೆಂಟರ ಬಾಸೆಲ್ ಮಿಶನ್ ಶಾಲೆಯೂ ಹೆಸರಾಂತ ಶಿಕ್ಷಣ ಸಂಸ್ಥೆ, ಪುರಾತನವೂ ಸುಪ್ರಸಿದ್ಧವೂ ಆದುದು. ಕ್ಯಾಥಲಿಕ್-ಪ್ರೊಟೆಸ್ಟೆಂಟ್ ಭೇದವಿಲ್ಲದೆ ಶಿಕ್ಷಣಕ್ಕೆ ಕ್ರಿಶ್ಚಿಯನ್ ಮಿಶನರಿಗಳ ಕೊಡುಗೆ ಎಲ್ಲ ಕಡೆಯಲ್ಲಿರುವಂತೆ ಇಲ್ಲಿಯೂ ಅನನ್ಯವಾದುದು. ಈ ಸಂಸ್ಥೆಗಳಲ್ಲಿ ಜಾತ್ಯತೀತವಾಗಿ ಎಲ್ಲರಿಗೂ ಮುಕ್ತಾವಕಾಶವಿದೆ ಎನ್ನುವುದು ಗಮನಾರ್ಹವಾದ ಸಂಗತಿ.

ಮರಾಠಿ ಆಡುವವರು ಕರ್ಹಾಡ ಬ್ರಾಹ್ಮಣರು ಹಾಗೂ ಕೆಲವು ಜಾತಿಯ ಶೂದ್ರರು. ಇವರೂ ಈ ಪ್ರದೇಶಕ್ಕೆ ವಲಸಿಗರೇ. ಯಾಕೆ ಬಂದರು, ಯಾವಾಗ ಬಂದರು ಎನ್ನುವುದು ಸ್ಪಷ್ಟವಿಲ್ಲ. ಕರ್ಹಾಡ ಎಂಬ ಹೆಸರಿರುವುದರಿಂದ ಮಹಾರಾಷ್ಟ್ರದ ಕರ್ಹಾಡ ಪ್ರಾಂತದಿಂದ ಗೋವಾ ಮೂಲಕ ಕೊಂಕಣ ಸೀಮೆಗೆ ಬಂದರು ಎಂದು ಊಹಿಸಬಹುದು. ಇವರಿಗೆ ಪದ್ಯ ಬ್ರಾಹ್ಮಣರು ಎಂದೂ ಹೇಳುತ್ತಾರೆ. ಇವರು ಮಾತಾಡುವ ಮರಾಠಿಯ ಮೇಲೆ ಕೊಂಕಣಿ, ಕನ್ನಡ ಮತ್ತು ತುಳು, ಮಲೆಯಾಳಗಳ ಪ್ರಭಾವ ಇದೆ. ಹೆಚ್ಚಿನವರೂ ಅಡಿಕೆ ಕೃಷಿಕರು, ವಿದ್ಯಾವಂತರು, ಉದ್ಯೋಗಸ್ಥರು, ಹೆಚ್ಚಿನವರೂ ತಕ್ಕ ಮಟ್ಟಿಗೆ ಸ್ಥಿತಿವಂತರು, ಕೆಲವರು ಸಾಕಷ್ಟು ಶ್ರೀಮಂತರು. ಕಾಸರಗೋಡಿನ ಸಂಕರ ಸಂಸ್ಕೃತಿಗೆ ಒಗ್ಗಿಕೊಂಡಿದ್ದೂ ತಮ್ಮ ಅಸ್ಮಿತೆಯನ್ನು ಸಾಧ್ಯವಾದಷ್ಟೂ ಉಳಿಸಿಕೊಂಡಿರುವರು. ಇದೇ ಸಮಾಜದಿಂದ ಬಂದ ಕನ್ನಡ ಸಾಹಿತಿ ರಾಧಾಕೃಷ್ಣ ಬೆಳ್ಳೂರು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿದ್ದು ಈ ಪ್ರದೇಶದ ಕರ್ಹಾಡ ಬ್ರಾಹ್ಮಣರ ಭಾಷೆ ಮತ್ತು ಜನಜೀವನದ ಕುರಿತು ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.

ಮನುಷ್ಯ ಸಮಾಜಕ್ಕೆ ಐಡೆಂಟಿಟಿಯನ್ನು ನೀಡುವುದು ಭಾಷೆಯೊಂದೇ ಅಲ್ಲ, ಸಾಮೂಹಿಕವಾದ ಧರ್ಮ, ಜಾತಿ, ಆಚಾರ ವಿಚಾರಗಳು, ಸಂಸ್ಕಾರಗಳು, ಕಲೆಗಳು, ನಿಷೇಧಗಳು, ನಂಬಿಕೆಗಳು, ದೇವಳಗಳು, ಮಠಗಳು, ನಿತ್ಯಕರ್ಮಗಳು, ಸ್ತ್ರೀಯರ ಸ್ಥಾನ ಮಾನ ಇತ್ಯಾದಿ ಹಲವಾರು ವಿಷಯಗಳು ಸಮಾಜದ ಗುರುತನ್ನು ರೂಪಿಸುತ್ತವೆ. ಕಾಸರಗೋಡಿನಲ್ಲಿ ಗುಡಿಗಳು, ದೇವಸ್ಥಾನಗಳು, ಭೂತಸ್ಥಾನಗಳು, ಮಸೀದಿಗಳು, ಇಗರ್ಜಿಗಳು ನಿಬಿಡವಾಗಿವೆ. ಇವೆಲ್ಲವೂ ಸುಖಶಾಂತಿಯಿಂದ, ಆದರ್ಶಕರವಾಗಿ ಯಾವತ್ತೂ ಸಹಬಾಳ್ವೆ ನಡೆಸುತ್ತಿವೆ ಎನ್ನಲಾರೆ. ಕೆಲವೊಮ್ಮೆ ವೈಮನಸ್ಸು ಉಂಟಾಗುತ್ತದೆ. ತಾನು ಬದುಕುವುದು, ಇತರರನ್ನು ಬದುಕಲು ಬಿಡುವುದು ಹೇಗೆನ್ನುವುದೇ ಮನುಷ್ಯನ ಮುಂದಿರುವ ಪ್ರಶ್ನೆ. ಅದು ಯಾವತ್ತಿನಿಂದಲು, ಎಲ್ಲೆಡೆಯೂ ಇರುವ ಪ್ರಶ್ನೆಯೇ. ಯಾವ ಪ್ರವಾದಿಯೂ, ಸಂತನೂ, ತತ್ವಪದಕಾರನೂ ಅದನ್ನು ಶಾಶ್ವತವಾಗಿ ಪರಿಹರಿಸಿಲ್ಲ. ಯಾಕೆಂದರೆ ಇದು ಪ್ರತಿಯೊಬ್ಬ ಮನುಷ್ಯನೂ, ಪ್ರತಿಯೊಂದು ಸಮಾಜವೂ, ರಾಷ್ಟ್ರವೂ ತಮಗೆ ತಾವೇ ಪರಿಹರಿಸಿಕೊಳ್ಳಬೇಕಾದ, ತಪ್ಪು ಮಾಡುತ್ತಲೇ ಕಲಿತುಕೊಳ್ಳಬೇಕಾದ, ತಿದ್ದಿಕೊಳ್ಳಬೇಕಾದ ವಿಷಯ.

ಆದರೆ ಇಲ್ಲೊಂದು ವಿರೋಧಾಭಾಸ ತಲೆಯೆತ್ತುತ್ತದೆ: ಸರಿ ತಪ್ಪುಗಳನ್ನು ನಿರ್ಧರಿಸಲು ಸಮೂಹಗಳ ಸ್ವ-ಹಿತಾಸಕ್ತಿಗಳಿಗೆ ಅತೀತವಾದ, ಸಂದರ್ಭರಹಿತವಾಗಿ, ‘ಎಲ್ಲರೂ’ ಒಪ್ಪುವ ಕೆಲವು ಮೌಲ್ಯಗಳು – ಒಂದು ಸಂಹಿತೆ ಬೇಕಲ್ಲವೇ? ಇದನ್ನೇ ನಾವು ಸಂವಿಧಾನವೆಂದು ಕರೆಯುವುದು. ಯಾವ ಸಾಮಾಜಿಕ ಆಚರಣೆ ಕೂಡಾ ಅದಕ್ಕೆ ವಿರುದ್ಧವಾಗಿ ಇರಬಾರದು. ಉದಾಹರಣೆಗೆ ಬಾಲ್ಯವಿವಾಹ ಪದ್ಧತಿ. ನಮ್ಮ ಸಂವಿಧಾನ ಇದನ್ನು ನಿಷೇಧಿಸಿದೆ; ಯಾವ ಜಾತಿಯೂ ಮತವೂ ಇದು ತಮ್ಮ ಪರಂಪರೆ ಎಂದು ಸಂವಿಧಾನದ ನಿಷೇಧವನ್ನು ತಿರಸ್ಕರಿಸುವಂತಿಲ್ಲ. ಇನ್ನು ಯುನಿವರ್ಸಲ್ ಆದ ಕೆಲವು ಮೌಲ್ಯಗಳಿವೆ, ಅವುಗಳನ್ನು ಎಲ್ಲ ನಾಗರಿಕ ರಾಷ್ಟ್ರಗಳೂ ಗೌರವಿಸಬೇಕಾಗುತ್ತದೆ. ಉದಾಹರಣೆಗೆ, ಯುದ್ಧ ಕೈದಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವುದು.

ಯಾಕೆ ಹೇಳುತ್ತಿದ್ದೇನೆಂದರೆ ಸಣ್ಣ ಸಣ್ಣ ಗುಂಪುಗಳ ಬೆಳವಣಿಗೆಗೆ ಗೋಡೆಗಳು ಬೇಕು, ಗೋಡೆಗಳೆಂದರೆ ಸ್ವಾಯತ್ತತೆ, ಆದರೆ ಅವು ಸೆರೆಮನೆಗಳಾಗಬಾರದು. ಒಂದು ಮನೆ ಎಂದ ಮೇಲೆ ಬಾಗಿಲು ಬೇಕೇ ಬೇಕು-ಹೊರ ಹೋಗುವುದಕ್ಕೆ ಹೇಗೋ ಹಾಗೆ ಒಳ ಬರುವುದಕ್ಕೆ. ಸಂಕರ ಸ್ಥಿತಿ ಯಾವುದೇ ಚಲನಶೀಲ ಬದುಕಿಗೆ ಅನಿವಾರ್ಯ. ಹೀಗೆ ಕಾಸರಗೋಡಿನವರು ಒಂದು ರೀತಿಯಲ್ಲಿ ಉದಾರವಾದಿಗಳು, ಬುದ್ಧನ ಮಧ್ಯಮ ಮಾರ್ಗಿಗಳು. ತಂತಿಯನ್ನು ಅತಿಯಾಗಿ ಬಿಗಿಯಬೇಡಿ, ಕಡಿದೀತು, ಅತಿಯಾಗಿ ಸಡಿಲಿಸಬೇಡಿ, ಸ್ವರ ಹೊರಡದೆ ಇದ್ದೀತು. ಹೀಗೆಂದು ಬುದ್ಧನಿಗೆ ಹೇಳಿದವರು ದಾರಿಹೋಕ ಹೆಂಗಸರಲ್ಲದೆ ಯಾವ ಮಹಾಜ್ಞಾನಿಗಳೂ ಅಲ್ಲ!