(ಬಿ.ವಿ. ಕಾರಂತ)

“ನೀನಾಸಂ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲಾ ರಂಗ-ತಾಂತ್ರಿಕ ಸಮಸ್ಯೆಗಳನ್ನು ಬಹಳ ಸಮಾಧಾನವಾಗಿ ನಿಭಾಯಿಸುವ ನಮ್ಮ ಸಮಾಧಾನಿ ಬಂಗಾರಣ್ಣ, ಒಂದು ರೀತಿಯಲ್ಲಿ ‘ಸಕಲಕಲಾವಲ್ಲಭನ್’. ಇವರು ‘ನೀನಾಸಂಗೇ ದೊಡ್ಡವರು’. ಇವರು ಯಾವಯಾವ ವರ್ಷದಲ್ಲಿ ಯಾರುಯಾರು ಏನೇನು ಮಾಡಿದರು ಎಂಬುದನ್ನೆಲ್ಲಾ ಬಲ್ಲ ನಿಧಾನಿ. ನಿಧಾನಿಯಾಗುವುದು ಪ್ರಧಾನಿಯಾಗುವುದಕ್ಕಿಂತಲೂ ಮಹತ್ತರವಾದುದೆಂಬುದನ್ನು ನನ್ನಂಥವರಿಗೆಲ್ಲಾ ಹೇಳದೇ ಕಲಿಸಿಕೊಟ್ಟ ದ್ರೋಣಾಚಾರ್ಯರು ಇವರು”
ಚನ್ನಕೇಶವ ರಂಗ ಪುರಾಣದ ಮೂರನೆಯ ಕಂತು.

 

ಈ ಮುಂದುವರಿದ ಕಥನದಲ್ಲಿ ಬಿ.ವಿ. ಕಾರಂತರಿಂದ ವಿಷಯಾಂತರವಾಯಿತೆಂದು ಗೊಂದಲವಾಗದಿರಿ. ಬಿ.ವಿ. ಕಾರಂತರನ್ನು ಬೇರೆ ರೂಪದಲ್ಲಿ ಕಾಣಿಸುವ ಒಬ್ಬ ವ್ಯಕ್ತಿಯನ್ನು ನಿಮ್ಮೆದುರು ಕಾಣಿಸುವುದು ಈ ಕಥನದ ಆಸಕ್ತಿ. ಅದು ಸಣ್ಣದಿರಬಹುದು, ದೊಡ್ಡದೇ ಆಗಿರಬಹುದು. ಆದರೆ ಅವರು, ಅಂದರೆ ಬಂಗಾರಣ್ಣ, ಆಗ ನೀನಾಸಂಗೇ ದೊಡ್ಡವರಾಗಿದ್ದರು. ನಾವು ಕಲಿಯುತ್ತಿರುವ ಕಾಲಕ್ಕೆ.

೨೦೦೦ದ ಇಸವಿಯವರೆಗೂ ನೀನಾಸಂಅನ್ನು ಹತ್ತಿರದಿಂದ ಬಲ್ಲವರಿಗೆ ‘ಬಂಗಾರಣ್ಣ’ ಯಾರೆಂದು ಗೊತ್ತಿರದೇ ಇರಲು ಪ್ರಾಯಶಃ ಸಾಧ್ಯವಿಲ್ಲ. ಕರೆಂಟ್ ಹೋದರೆ, ಲೈಟ್ ಕೆಟ್ಟುಹೋದರೆ, ಮೈಕು ಕುಂಯ್ ಎಂದರೆ, ೧೬ಎಂ.ಎಂ. ಪ್ರೊಜೆಕ್ಟರ್ನಿಂದ ಪಿಚ್ಚರ್ ಬಿಡಬೇಕಾದರೆ, ಸ್ಲೈಡ್ಸ್ ನೋಡಬೇಕಿದ್ದರೆ… ಅಷ್ಟೇ ಅಲ್ಲ, ಕರ್ಟನ್ ಕಟ್ಟಬೇಕಿದ್ದರೆ, ಹಸು-ಕರುಗಳು ನೀನಾಸಂ ಕ್ಯಾಂಪಸ್ನ ಬೇಲಿಯನ್ನು ದಾಟಿ ಒಳಹೊಕ್ಕಿದರೆ, ನಾಯಿಗಳ-ಮಂಗಗಳ ಕಾಟ ಜಾಸ್ತಿಯಾದರೆ, ರಂಗಮಂದಿರದ ಆವರಣದಲ್ಲಿರುವ ತೆಂಗಿನ ಮರದಲ್ಲಿ ಕಾಯಿಬಿಟ್ಟರೂ, ಯಾವುದಾದರೂ ವೇದಿಕೆ ಅಣಿಯಾಗಲೂ, ಯಾರಾದರೂ ಗೆಸ್ಟ್ ಬಂದರೂ… ಮುಂತಾದ ಹತ್ತು-ಹಲವಾರು ಎಲ್ಲದಕ್ಕೂ ಬಂಗಾರಣ್ಣ ಬೇಕೇಬೇಕಿತ್ತು. ಈಗ ಅವರು ನಿವೃತ್ತಿಯ ಜೀವನ ನಡೆಸುತ್ತಿದ್ದಾರೆ. ಅವರ ಮಗ ಜೀವನ ಮೈಸೂರಿನ ಶಾಲೆಯೊಂದರಲ್ಲಿ ನಾಟಕ ಶಿಕ್ಷಕನಾಗಿದ್ದಾನೆ.

************

ನೀನಾಸಂ ಆರಂಭಕಾಲದಲ್ಲೊಮ್ಮೆ ಸುಬ್ಬಣ್ಣನವರು ಶೇಕ್ಸ್ಪಿಯರ್ನ ‘ಹ್ಯಾಮ್ಲೆಟ್ ನಾಟಕವನ್ನು ಮಾಡಿಸಿದ್ದರಂತೆ. ಆ ನಾಟಕದ ಒಳಗೊಂದು ನಾಟಕದ ಸನ್ನಿವೇಶ ಬರುತ್ತದೆ. ಆ ನಾಟಕದೊಳಗಿನ ನಾಟಕದಲ್ಲಿ ಮದುವೆಯ ದೃಶ್ಯವೊಂದಿದೆ. ಸರಿ, ಆ ನಾಟಕದ ಮದುವೆಗೆ ನಾದಸ್ವರ ವಾದ್ಯ ನುಡಿಸಿದರೆ ಚೆನ್ನಾಗಿರುತ್ತದೆಯೆಂದು ನಿರ್ಧರಿಸಿದರು. ನಾದಸ್ವರ ವಾದಕರಿಗಾಗಿ ಎಲ್ಲೆಡೆ ಹುಡುಕಾಡಿದರು. ಕೊನೆಗೊಂದು ತಂಡ ಸಿಕ್ಕಿತು. ಆದರೆ ಒಂದು ಸಣ್ಣ ದೃಶ್ಯಕ್ಕೆ ವಾದ್ಯ ನುಡಿಸಲು ಪ್ರತಿನಿತ್ಯ ಅವರನ್ನು ಅಷ್ಟು ದೂರದಿಂದ ಕರೆಸುವುದು, ಅವರು ಬಂದು ಹೋಗುವುದು ಕಷ್ಟವೂ, ದುಬಾರಿಯೂ ಆಗುತ್ತದೆಂದೂ, ಹಾಗಾಗಿ ನಾಟಕದ ಪ್ರದರ್ಶನಕ್ಕೆ ಮಾತ್ರ ಬಂದರೆ ಸಾಕೆಂದು ತೀರ್ಮಾನಿಸಲಾಯಿತು. ನಾಟಕದ ಪ್ರದರ್ಶನಕ್ಕೆ ಒಂದು ತಾಸು ಮೊದಲೇ ನಾದಸ್ವರ ವಾದಕರು ಬಂದರು. ರಂಗಮಂಟಪದ ಮೇಲೆ ಕುಳಿತು ಅವರು ನುಡಿಸಿದರೆ, ವಾದನದ ಅಬ್ಬರ ಹೆಚ್ಚಾಗುತ್ತದೆಯಾದ್ದರಿಂದ ಅವರನ್ನು ರಂಗಮಂದಿರದ ಹೊರಗೆ, ಅಂದರೆ ಪಕ್ಕದ ಕಾರಿಡಾರ್ನಲ್ಲಿ ಕೂರಿಸಲಾಯಿತು. ಆದರೆ ಅಲ್ಲಿಂದ ನಾಟಕ ಕಾಣುವುದಿಲ್ಲ ಎನ್ನುವ ಸಮಸ್ಯೆ ಎದುರಾಯಿತು. ಅದಕ್ಕೊಂದು ಉಪಾಯ ಮಾಡಿದ ಸುಬ್ಬಣ್ಣ, ರಂಗಮಂಟಪದ ಮುಂದಿನ ಬಲ ಬಾಗಿಲಲ್ಲಿ ನಮ್ಮ ‘ಸಮಾಧಾನಿ ಬಂಗಾರಣ್ಣ’ನವರನ್ನು ಅದಕ್ಕಾಗಿಯೇ ನಿಯೋಜಿಸಿದರು. ಮದುವೆಯ ಸನ್ನಿವೇಶ ಬರುತ್ತಿದ್ದಂತೆಯೇ ವಾದಕರಿಗೆ ಸೂಚನೆ ನೀಡಲು ಬಂಗಾರಣ್ಣನಿಗೆ ತಿಳಿಸಲಾಗಿತ್ತು. ದೊಡ್ಡ ನಾಟಕದ ನಡುವಿನ ಆ ಮದುವೆಯ ದೃಶ್ಯವೆಂದರೆ ಅದೆಷ್ಟು ದೊಡ್ಡದಿದೆ? ಸುಮ್ಮನೆ ತಾಳಿಕಟ್ಟುವುದೋ, ಉಂಗುರ ತೊಡಿಸುವುದೋ, ಹಾರ ಬದಲಾಯಿಸುವುದೋ ಅಷ್ಟೇ. ಹತ್ತದಿನೈದು ಸೆಕೆಂಡಿನ ಹೊತ್ತು. ಅಷ್ಟೇ.

ನಾಟಕದ ಪ್ರದರ್ಶನಕ್ಕೆ ಒಂದು ತಾಸು ಮೊದಲೇ ನಾದಸ್ವರ ವಾದಕರು ಬಂದರು. ರಂಗಮಂಟಪದ ಮೇಲೆ ಕುಳಿತು ಅವರು ನುಡಿಸಿದರೆ, ವಾದನದ ಅಬ್ಬರ ಹೆಚ್ಚಾಗುತ್ತದೆಯಾದ್ದರಿಂದ ಅವರನ್ನು ರಂಗಮಂದಿರದ ಹೊರಗೆ, ಅಂದರೆ ಪಕ್ಕದ ಕಾರಿಡಾರ್ನಲ್ಲಿ ಕೂರಿಸಲಾಯಿತು. ಆದರೆ ಅಲ್ಲಿಂದ ನಾಟಕ ಕಾಣುವುದಿಲ್ಲ ಎನ್ನುವ ಸಮಸ್ಯೆ ಎದುರಾಯಿತು. ಅದಕ್ಕೊಂದು ಉಪಾಯ ಮಾಡಿದ ಸುಬ್ಬಣ್ಣ, ರಂಗಮಂಟಪದ ಮುಂದಿನ ಬಲ ಬಾಗಿಲಲ್ಲಿ ನಮ್ಮ ‘ಸಮಾಧಾನಿ ಬಂಗಾರಣ್ಣ’ನವರನ್ನು ಅದಕ್ಕಾಗಿಯೇ ನಿಯೋಜಿಸಿದರು.

(ಬಂಗಾರಣ್ಣ)

ನಾಟಕ ಆರಂಭವಾಯಿತು. ಪ್ರೇಕ್ಷಕರೆಲ್ಲಾ ನಾಟಕದಲ್ಲಿ ತಲ್ಲೀನರಾದರು. ನಾದಸ್ವರವಾದಕರೂ ಕಿಟಕಿಯಿಂದ ನಾಟಕವನ್ನು ನೋಡಿ ಆಸ್ವಾದಿಸತೊಡಗಿದರು. ಬಯಲಾಟಗಳನ್ನು ನೋಡಿ ಬಲ್ಲ ಅವರು ಅಂತಹ ನೆಳಲು ಬೆಳಕಿನ ನಾಟಕವೆನ್ನುವ ಅದ್ಭುತ ಮಾಯಾಲೋಕವನ್ನೆಂದೂ ನೋಡಿದವರಲ್ಲ. ಇಂಥಾ ನಾಟಕಕ್ಕೆ ತಮ್ಮನ್ನು ವಾದ್ಯ ನುಡಿಸಲು ಕರೆಸಿರುವುದು ಬಹಳ ಹೆಮ್ಮೆಯ ವಿಷಯವೆಂದೇ ಅವರು ಭಾವಿಸಿದರು. ಬಾಗಿಲ ಮೆಟ್ಟಿಲ ಮೇಲೆ ಕುಳಿತ ಬಂಗಾರಣ್ಣನೂ ನಾಟಕದ ಪ್ರದರ್ಶನವನ್ನು ನೋಡುತ್ತಾ ಅದರಲ್ಲೇ ತಲ್ಲೀನರಾಗಿದ್ದರು.

ಹ್ಯಾಮ್ಲೆಟ್ನ ಸ್ವಗತಗಳು, ಪಾತ್ರಗಳನ್ನು ಮಾಡುತ್ತಿದ್ದ ಊರ ಜನರು, ಅವರನ್ನು ಆ ವಿಚಿತ್ರಾವಸ್ಥೆಯಲ್ಲಿ ನೋಡುವುದು, ಇದನ್ನೆಲ್ಲಾ ನೋಡುತ್ತಾ ಸಂತೋಷಪಡುತ್ತಿದ್ದಂತೆಯೇ, ಇದ್ದಕ್ಕಿದ್ದಂತೆ ನಾಟಕ ಭರದಿಂದ ಸಾಗಿ, ಒಂದು ಉತ್ಕರ್ಷದಲ್ಲಿ ಆ ಮದುವೆಯ ದೃಶ್ಯವೂ ಧುತ್ತನೆ ಬಂದೇಬಿಟ್ಟಿತು. ಸಕಾಲದಲ್ಲಿ ಎಚ್ಚೆತ್ತ ನಮ್ಮ ‘ಸಮಾಧಾನಿ ಬಂಗಾರಣ್ಣ’ ಗಡಿಬಿಡಿಯಲ್ಲಿ ಎದ್ದು ಹೋಗಿ ಕಾರಿಡಾರ್ ಕಿಟಕಿಯಲ್ಲಿ ಮುಖ ತೂರಿಸಿ ನಾಟಕ ನೋಡಿ ಆನಂದಿಸುತ್ತಿದ್ದ ವಾದ್ಯಗಾರರಿಗೆ ಬೇಗಬೇಗ ಬ್ಯಾಂಡ್ ಬಜಾಯಿಸಲು ಹೇಳಿದರು. ಅವರೋ, ಉತ್ಸುಕರಾಗಿ, ಸಡಗರದಿಂದಲೇ ತಮ್ಮ ಟವೆಲ್ಲನ್ನು ಕೊಡವಿಕೊಂಡು ಕಲಾಸೇವೆಗೆ ಸಿದ್ಧರಾಗತೊಡಗಿದರು. ಒಬ್ಬನಂತೂ ಅಷ್ಟು ದೂರ ಓಡಿಹೋಗಿ ಬಾಯಲ್ಲಿದ್ದ ಕವಳವನ್ನು ತುಪ್ಪಿ ಬಂದ. ಬಂದವನೇ ತನ್ನ ನಾದಸ್ವರದ ಪೀಪಿಗೆ ಕಡ್ಡಿಯಾಡಿಸಿ ‘ಪೇಂ… ಪೇಂ… ಎಂದು ಊದಿ ಅದನ್ನು ನಾದಸ್ವರದ ಕೊಳವೆಯ ಊದುವ ತುದಿಗೆ ತೂರಿಸಿ ಮತ್ತೊಮ್ಮೆ ‘ಪೇಂ… ಪೇಂ… ಎಂದು ನುಡಿಸಿ, ಟ್ಯೂನ್ ಮಾಡಿಕೊಳ್ಳತೊಡಗಿದ. ಡೋಲು ನುಡಿಸುವವ ತನ್ನ ಬಲಗೈಯ ಬೆರಳುಗಳಿಗೆ ಡೋಲು ನುಡಿಸುವಾಗ ತೊಡುವ ಬೆರಳ ಕವಚಗಳನ್ನು ತೊಟ್ಟು ಅವು ಸರಿಯಾಗಿ ಕೆಲಸ ಮಾಡುವವೇ ಎಂದು ಪರೀಕ್ಷಿಸಲು ಶುರುಮಾಡಿದ. ಅವರ ಶೃತಿಗೊಳ್ಳುವ ಸಿದ್ಧತೆ ಭರದಿಂದ ಸಾಗಿದ ಕಾರಣ. ಪ್ರೇಕ್ಷಕರೆಲ್ಲರೂ ಒಮ್ಮೆ ತಮ್ಮ ಗಮನವನ್ನು ಆ ನಾದ ಬಂದ ಕಡೆಗೊಮ್ಮೆ ಹರಿಸಿದರು.

ಇತ್ತ ನಾಟಕದಲ್ಲಿ, ಮದುವೆಯ ದೃಶ್ಯ ಬಂದಾಗ ಕೇವಲ ‘ಪೇಂ… ಪೇಂ… ಶಬ್ದ ಮಾತ್ರ ಬಂದದ್ದಕ್ಕೆ ನಟರು ಹೆಚ್ಚೇನೂ ತಲೆ ಕೆಡಿಸಿಕೊಳ್ಳಲಿಲ್ಲ. ಆಧುನಿಕ ರಂಗಭೂಮಿಯನ್ನು ಹೆಗ್ಗೋಡಿನಂಥ ಗ್ರಾಮಕ್ಕೆ ಪರಿಚಯ ಮಾಡಿಕೊಡುತ್ತಿದ್ದ ಸುಬ್ಬಣ್ಣನವರು, ಬೇಕಂತಲೇ ಹೀಗೆ ‘ಸಂಗೀತ ವಿನ್ಯಾಸ’ ಮಾಡಿರಬಹುದೆಂದು ಅವರು ಎಣಿಸಿದರು. ತಮ್ಮ ನಿತ್ಯದ ತಾಲೀಮಿನಂತೆ ನಾಟಕ ಪ್ರದರ್ಶನವನ್ನು ಮುಂದುವರಿಸಿದರು. ಮದುವೆಯ ದೃಶ್ಯ ಮುಗಿದು ನಾಟಕ ಮುಂದೆ ಸಾಗಿದ್ದಕ್ಕೆ, ಸರಿಸಮಯದಲ್ಲಿ ನಾದಸ್ವರ ವಾದನ ಬಾರದ್ದಕ್ಕೆ ಗಾಬರಿಯಾದ ಬಂಗಾರಣ್ಣ ಮತ್ತೆ ವಾದಕರ ಬಳಿ ಬಂದು. ‘ಮದುವೆ ಮುಂದಕ್ಕೆ ಹೋಯ್ತು, ನುಡಿಸುವುದು ಬೇಡ ಎನ್ನುವಂತೆ ಸನ್ನೆ ಮಾಡಿದರು. ಮಾತಾಡುವಂತಿರಲಿಲ್ಲ. ಇತ್ತ ನಾಟಕದಲ್ಲಿ ಮದುವೆಯ ದೃಶ್ಯ ಮುಗಿದು, ಮದುಮಗನ ಸಾವಾಗಿ, ಕ್ಲಾಡಿಯಸ್ ದೊರೆ ಎದ್ದು ನಿಂತು ‘ನಿಲ್ಲಿಸಿ… ಬೆಳಕು ತನ್ನಿ, ಬೆಳಕು… ಎಂದು ಕಿರುಚಿಯೂ ಆಗಿತ್ತು. ನಾಟಕ ಭಾವತೀವ್ರತೆಯಿಂದ ಮುಂದುವರೆದಿತ್ತು. ಪ್ರೇಕ್ಷಕರೆಲ್ಲರೂ ಆ ಭಾವತೀವ್ರತೆಯ ಅನುಭವವನ್ನು ಹೊಚ್ಚ-ಹೊಸತಾಗಿ ಅನುಭವಿಸುತ್ತಿದ್ದರು. ಅತ್ತ ಬಂಗಾರಣ್ಣನು, ವಾದ್ಯಗಾರರು, ಅದನ್ನು ನುಡಿಸುವುದಿಲ್ಲವೆಂದು ಸನ್ನೆಯಲ್ಲೇ ಖಚಿತ ಪಡಿಸಿಕೊಂಡ ಮೇಲೆಯೇ, ಮತ್ತೆ ಮೆಟ್ಟಿಲ ಮೇಲೆ ಬಂದು ಕುಳಿತು ನಾಟಕ ನೋಡಲು ಆರಂಭಿಸಿದರು. ನಾದಸ್ವರವಿಲ್ಲದ ಮದುವೆಯ ದೃಶ್ಯವನ್ನು ಕಣ್ಣಾರೆ ಕಂಡಿದ್ದ ನಾದಸ್ವರ ವಾದಕರು ಆ ಕತ್ತಲೆಯಲ್ಲೇ ತಮ್ಮತಮ್ಮ ಕಣ್ಣುಗಳನ್ನು ನೋಡಿಕೊಂಡರು. ಅವರ ಕಣ್ಣುಗಳಲ್ಲಿ ತಪ್ಪಿಹೋದ ತಮ್ಮ ಅವಕಾಶದ ಬಗ್ಗೆ ಅತ್ಯಂತಿಕ ವಿಷಾದವಿತ್ತು.

(ನೀನಾಸಂ, ಹೆಗ್ಗೋಡು)

ಇತ್ತ ನಾಟಕದಲ್ಲಿ, ಮದುವೆಯ ದೃಶ್ಯ ಬಂದಾಗ ಕೇವಲ ‘ಪೇಂ… ಪೇಂ… ಶಬ್ದ ಮಾತ್ರ ಬಂದದ್ದಕ್ಕೆ ನಟರು ಹೆಚ್ಚೇನೂ ತಲೆ ಕೆಡಿಸಿಕೊಳ್ಳಲಿಲ್ಲ. ಆಧುನಿಕ ರಂಗಭೂಮಿಯನ್ನು ಹೆಗ್ಗೋಡಿನಂಥ ಗ್ರಾಮಕ್ಕೆ ಪರಿಚಯ ಮಾಡಿಕೊಡುತ್ತಿದ್ದ ಸುಬ್ಬಣ್ಣನವರು, ಬೇಕಂತಲೇ ಹೀಗೆ ‘ಸಂಗೀತ ವಿನ್ಯಾಸ’ ಮಾಡಿರಬಹುದೆಂದು ಅವರು ಎಣಿಸಿದರು. ತಮ್ಮ ನಿತ್ಯದ ತಾಲೀಮಿನಂತೆ ನಾಟಕ ಪ್ರದರ್ಶನವನ್ನು ಮುಂದುವರಿಸಿದರು. ಮದುವೆಯ ದೃಶ್ಯ ಮುಗಿದು ನಾಟಕ ಮುಂದೆ ಸಾಗಿದ್ದಕ್ಕೆ, ಸರಿಸಮಯದಲ್ಲಿ ನಾದಸ್ವರ ವಾದನ ಬಾರದ್ದಕ್ಕೆ ಗಾಬರಿಯಾದ ಬಂಗಾರಣ್ಣ ಮತ್ತೆ ವಾದಕರ ಬಳಿ ಬಂದು. ‘ಮದುವೆ ಮುಂದಕ್ಕೆ ಹೋಯ್ತು, ನುಡಿಸುವುದು ಬೇಡ ಎನ್ನುವಂತೆ ಸನ್ನೆ ಮಾಡಿದರು. ಮಾತಾಡುವಂತಿರಲಿಲ್ಲ. ಇತ್ತ ನಾಟಕದಲ್ಲಿ ಮದುವೆಯ ದೃಶ್ಯ ಮುಗಿದು, ಮದುಮಗನ ಸಾವಾಗಿ, ಕ್ಲಾಡಿಯಸ್ ದೊರೆ ಎದ್ದು ನಿಂತು ‘ನಿಲ್ಲಿಸಿ… ಬೆಳಕು ತನ್ನಿ, ಬೆಳಕು… ಎಂದು ಕಿರುಚಿಯೂ ಆಗಿತ್ತು.

ಇತ್ತ ನಾಟಕದಲ್ಲಿ ಆ ದೃಶ್ಯದ ಎಲ್ಲ ಪಾತ್ರಗಳು ನಿರ್ಗಮಿಸಿ, ಕೇವಲ ಹಾಮ್ಲೆಟ್ ಮತ್ತು ಹೊರೇಶಿಯೋ ಮಾತಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ದೊಡ್ಡ ಸ್ವರದಲ್ಲಿ ‘ಪೇಂ… ಪೇಂ… ಡುಂಡುಂ ಟಕಟಕ ಎನ್ನುವ ಗಟ್ಟಿಮೇಳವು ರಂಗದ ಹೊರಗಿಂದ ಎಲ್ಲರ ಕಿವಿಗೆ ಧಿಡೀರನೆ ಅಪ್ಪಳಿಸಿತು. ಈ ಅನಿರೀಕ್ಷಿತವಾದ ಸಂಗೀತದಬ್ಬರಕ್ಕೆ ಎಲ್ಲರೂ ಬೆಚ್ಚಿಬಿದ್ದರು. ಹ್ಯಾಮ್ಲೆಟ್, ಹೊರೇಶಿಯೋ ಮಾತ್ರವಲ್ಲದೇ, ಇಡೀ ಪ್ರೇಕ್ಷಕ ಸಮುದಾಯವೇ ‘ಗಟ್ಟಿಮೇಳ’ ಬರುವೆಡೆಗೆ ನೋಡತೊಡಗಿತು. ಪ್ರೇಕ್ಷಾಂಗಣದಲ್ಲಿ ಕುಳಿತಿದ್ದ ಸುಬ್ಬಣ್ಣನವರು ಬಾಗಿಲ ಮೆಟ್ಟಿಲ ಮೇಲೆ ಕುಳಿತಿದ್ದ ಬಂಗಾರಣ್ಣನ ಕಡೆಗೆ ನೋಡತೊಡಗಿದರು. ಬಂಗಾರಣ್ಣ ವಾದಕರ ಬಳಿಗೆ ಓಡತೊಡಗಿದರು. ಎರಡು ನಿಮಿಷಗಳಷ್ಟು ಕಾಲ ಇಡಿಯ ನಾಟಕ, ಪ್ರೇಕ್ಷಾಂಗಣ ಸ್ಥಬ್ದವಾಯಿತು.

ಅತ್ತ ನಡೆದದ್ದಿಷ್ಟೇ; ಕಣ್ಸನ್ನೆಯಲ್ಲಿ ಮಾತಾಡಿಕೊಂಡ ನಾದಸ್ವರ ವಾದಕರು, ಹಾಗೇ ತೀರ್ಮಾನಿಸಿ ‘ಗಟ್ಟಿಮೇಳ’ ನುಡಿಸಿಯಾಗಿತ್ತು. ನುಡಿಸಿದ ನಂತರವೇ ಅವರ ಕಣ್ಣುಗಳಲ್ಲಿ ಧನ್ಯತೆಯ ಭಾವ ಮೂಡಿಬಂದದ್ದು. ಅವರು ತಮ್ಮ ವಾದ್ಯಗಳನ್ನು ಪ್ಯಾಕ್ ಮಾಡತೊಡಗಿದರು, ತೃಪ್ತ ಭಾವಮುದ್ರೆಯಲ್ಲಿ. ನೀನಾಸಂನಂಥಾ ನೀನಾಸಂನಲ್ಲಿ ವಾದ್ಯ ನುಡಿಸಲು, ಅಷ್ಟು ದೂರದ ಊರಿನಿಂದ ನಡೆದು ಬಂದು, ನುಡಿಸದೇ ವಾಪಸ್ ಊರಿಗೆ ಹೋದರೆ, ನಾಳೆ ಕಂಡವರು ಏನು ಹೇಳಿಯಾರು? ಹೆಮ್ಮೆಯ ನೀನಾಸಂ ನಾಟಕದಲ್ಲಿ ವಾದ್ಯ ನುಡಿಸಲು ಕರೆಸಿದ್ದೇ ಹೆಚ್ಚುಗಾರಿಕೆ… ಅಂಥದ್ದರಲ್ಲಿ ನುಡಿಸದೇ ವಾಪಸ್ ಹೋಗುವುದೆಂದರೇನು? ಎನ್ನುವ ಖಚಿತ ಭಾವಚಿತ್ತವಿತ್ತು ಅವರಲ್ಲಿ. ಬಂಗಾರಣ್ಣನವರ ‘ನುಡಿಸಬೇಡಿ’ ಎನ್ನುವ ಸನ್ನೆ ಮಾತು ತಮಗೆ ಅರ್ಥವಾದರೂ ಅವರು ಅದನ್ನು ಸುತಾರಾಮ್ ಕೇಳಲು ತಯಾರಿರಲಿಲ್ಲ. ಸುಬ್ಬಣ್ಣನವರೇ ಬಂದು ಹೇಳಿದ್ದರೂ ಕೇಳುತ್ತಿರಲಿಲ್ಲವೇನೋ, ಪ್ರಾಯಶಃ.

************

(‘ಗೋಕುಲ ನಿರ್ಗಮನ’ ನಾಟಕದ ಒಂದು ದೃಶ್ಯ)

ನೀನಾಸಂ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲಾ ರಂಗ-ತಾಂತ್ರಿಕ ಸಮಸ್ಯೆಗಳನ್ನು ಬಹಳ ಸಮಾಧಾನವಾಗಿ ನಿಭಾಯಿಸುವ ನಮ್ಮ ಸಮಾಧಾನಿ ಬಂಗಾರಣ್ಣ, ಒಂದು ರೀತಿಯಲ್ಲಿ ‘ಸಕಲಕಲಾವಲ್ಲಭನ್’. ರಾತ್ರಿ ವೇಳೆಯಲ್ಲಿ ಇಂಗ್ಲೀಷನ್ನೂ, ಹಗಲಿನಲ್ಲಿ ಹೆಚ್ಚು ಮೌನವನ್ನು ಧರಿಸುವ ಸಿದ್ಧಿ ಗಳಿಸಿರುವ ಇವರು ‘ನೀನಾಸಂಗೇ ದೊಡ್ಡವರು’. ಇವರು ಯಾವಯಾವ ವರ್ಷದಲ್ಲಿ ಯಾರುಯಾರು ಏನೇನು ಮಾಡಿದರು ಎಂಬುದನ್ನೆಲ್ಲಾ ಬಲ್ಲ ನಿಧಾನಿ. ನಿಧಾನಿಯಾಗುವುದು ಪ್ರಧಾನಿಯಾಗುವುದಕ್ಕಿಂತಲೂ ಮಹತ್ತರವಾದುದೆಂಬುದನ್ನು ನನ್ನಂಥವರಿಗೆಲ್ಲಾ ಹೇಳದೇ ಕಲಿಸಿಕೊಟ್ಟ ದ್ರೋಣಾಚಾರ್ಯರು ಇವರು. ತಾವು ನಿವೃತ್ತರಾಗುವವರೆಗೆ ನೀನಾಸಂನಲ್ಲಿ ನಡೆಯುತ್ತಿದ್ದ ಪ್ರತಿಯೊಂದೂ ಭಾಷಣಗಳನ್ನು ಕೇಳಿಬಲ್ಲ ಬಂಗಾರಣ್ಣ, ಸುಮಾರು ಐವತ್ತು ವರ್ಷಗಳ ನೀನಾಸಂ ನಾಟಕ ಪ್ರಯೋಗಗಳಿಗೆ, ಭಾಷಣಗಳಿಗೆ ಧ್ವನಿ ತಂತ್ರಜ್ಞಾನವನ್ನು ಹೊಂದಿಸಿಕೊಟ್ಟಿರುವ ಸೌಂಡ್ ಇಂಜಿನಿಯರ್ ಕೂಡಾ ಹೌದು. ಅವರ ಕೈಚಳಕದಿಂದಲೇ ಇಂದಿಗೂ ನೀನಾಸಂನಲ್ಲಿ ನಡೆದಿರುವ ಹಲವಾರು ಭಾಷಣ, ಸಂವಾದ, ಗಾಯನ ಮುಂತಾದವುಗಳ ಟೇಪು ಸಿಗುತ್ತದೆ. ಜಂಬೆಯವರಿಗೆ ಬಂಗಾರಪ್ಪನಾಗಿಯೂ, ಅಕ್ಷರ-ಸುಬ್ಬಣ್ಣನವರಿಗೆ ಬಂಗಾರಿಯಾಗಿಯೂ ಮಿಕ್ಕವರಿಗೆ ಬಂಗಾರಣ್ಣನಾಗಿರುವ ಇವರು ಸರ್ವಾಂತರ್ಯಾಮಿ. ಎಲ್ಲಾದರೂ ಬೆಂಕಿ ಹತ್ತಿಕೊಂಡರೆ, ಅಲ್ಲಿ ಧುತ್ತನೆ ಪ್ರತ್ಯಕ್ಷವಾಗಿ, ಅನಾವಶ್ಯಕವಾಗಿ ಗಾಬರಿಯಾಗದೆ, ಒಂದು ಬೀಡಿ ಹಚ್ಚಿ, ಸಮಾಧಾನದಿಂದಲೇ… ‘ಏನಾಗಿದೆ? ಯಾಕಾಗಿದೆ?’ ಎಂದು ಸಮಾಲೋಚಿಸುವ ಚಿಂತನಕಾರ. ಯಾವುದಾದರೊಂದು ಕೆಲಸದಲ್ಲಿ ಯಾವಾಗಲೂ ತೊಡಗಿಕೊಂಡೇ ಇರುವ ಇವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ರಾತ್ರಿ ವೇಳೆಯಲ್ಲಿ ಸಾಮಾನ್ಯವಾಗಿ ಅವರು ನೀನಾಸಂ ಕಾಂಪಸ್ನಲ್ಲಿ ಕಾಣಿಸಿಕೊಳ್ಳುವುದಿಲ್ಲವಾದರೂ, ಇದ್ದಕ್ಕಿದ್ದಂತೆ ನಿಮ್ಮ ಪಕ್ಕದಲ್ಲೇ ಧುತ್ತನೆ ಪ್ರತ್ಯಕ್ಷವಾಗಿ ‘ವೆನ್ ಶಲ್ ವಿ ಮೀಟ್ ಎಗೈನ್’ ಎನ್ನುವ ಶೇಕ್ಸ್ಫಿಯರ್ನ ಮ್ಯಾಕ್ಬೆತ್ ನಾಟಕದ ಇಂಗ್ಲೀಷ್ ಡೈಲಾಗ್ ಕೂಡಾ ಹೊಡೆದರೆ ಅದು ಅಚ್ಚರಿಯಲ್ಲ. ಅಂತಹ ಕ್ಷಣದಲ್ಲಿ ನೀವು ಅವರೊಡನೆ ಮುಂದುವರೆದರೆ, ಆ ದಿನ ನಡೆದ ನಾಟಕ ಪ್ರದರ್ಶನದ ಬಗ್ಗೆ ಅವರ ಕಟು ವಿಮರ್ಶೆಯನ್ನೂ ಕೂಡಾ ಕೇಳಬಹುದು. ಹೀಗೆ ನೀನಾಸಂಗೆ ಬರುವ ಅಥಿತಿಗಳಿಗೇ ಅನೂಹ್ಯ ಅಥಿತಿ ನಮ್ಮ ಸಕಲಕಲಾವಲ್ಲಭ ಈ ಬಂಗಾರಣ್ಣನವರು.

ನೀನಾಸಂನಂಥಾ ನೀನಾಸಂನಲ್ಲಿ ವಾದ್ಯ ನುಡಿಸಲು, ಅಷ್ಟು ದೂರದ ಊರಿನಿಂದ ನಡೆದು ಬಂದು, ನುಡಿಸದೇ ವಾಪಸ್ ಊರಿಗೆ ಹೋದರೆ, ನಾಳೆ ಕಂಡವರು ಏನು ಹೇಳಿಯಾರು? ಹೆಮ್ಮೆಯ ನೀನಾಸಂ ನಾಟಕದಲ್ಲಿ ವಾದ್ಯ ನುಡಿಸಲು ಕರೆಸಿದ್ದೇ ಹೆಚ್ಚುಗಾರಿಕೆ… ಅಂಥದ್ದರಲ್ಲಿ ನುಡಿಸದೇ ವಾಪಸ್ ಹೋಗುವುದೆಂದರೇನು? ಎನ್ನುವ ಖಚಿತ ಭಾವಚಿತ್ತವಿತ್ತು ಅವರಲ್ಲಿ. ಬಂಗಾರಣ್ಣನವರ ‘ನುಡಿಸಬೇಡಿ’ ಎನ್ನುವ ಸನ್ನೆ ಮಾತು ತಮಗೆ ಅರ್ಥವಾದರೂ ಅವರು ಅದನ್ನು ಸುತಾರಾಮ್ ಕೇಳಲು ತಯಾರಿರಲಿಲ್ಲ. ಸುಬ್ಬಣ್ಣನವರೇ ಬಂದು ಹೇಳಿದ್ದರೂ ಕೇಳುತ್ತಿರಲಿಲ್ಲವೇನೋ, ಪ್ರಾಯಶಃ.

ಕಾರಂತರ ‘ಗೋಕುಲ ನಿರ್ಗಮನ’ ನಾಟಕದ ತಾಲೀಮಿನಲ್ಲಿ ಧ್ವನಿ-ವ್ಯವಸ್ಥೆಯನ್ನು ಅಣಿಗೊಳಿಸಿದವರು ಇದೇ ಬಂಗಾರಣ್ಣನೇ. ಅದು ಗೀತನಾಟಕವಾಗಿದ್ದರಿಂದ ಮೈಕು ಏನಾದರೂ ಕಾರಂತರಿಗೆ ಹೆದರಿ, ನಾಟಕ ಮಧ್ಯದಲ್ಲಿ ತಾನೂ ಹಾಡಿಬಿಟ್ಟರೆ!! ಅಭಾಸ ತಾನೆ? ಅದಕ್ಕಾಗಿ ಬಂಗಾರಣ್ಣನವರು ಪ್ರದರ್ಶನ ಮುಗಿಯುವವರೆಗೂ ಅದನ್ನು ಆಗಾಗ ಸುಮ್ಮನಿರಿಸಿ, ಸಮಾಧಾನ ಮಾಡಬೇಕಾಗಿತ್ತು. ಆ ಮೈಕುಗಳು, ಸೌಂಡ್ ಸಿಸ್ಟಂಗಳು, ಬಂಗಾರಣ್ಣನ ವಿನಃ ಬೇರೆ ಯಾರ ಮಾತನ್ನೂ ಕೇಳುತ್ತಿರಲಿಲ್ಲವಾಗಿ, ಅವರು ನಾಟಕದ ತಾಲೀಮು/ಪ್ರದರ್ಶನ ನಡೆಯುವ ಸಂದರ್ಭದಲ್ಲಿ ಇರುವುದು ಅನಿವಾರ್ಯವಾಗಿತ್ತು. ಈ ಅನಿವಾರ್ಯತೆಯಿಂದ ತಾಲೀಮಿನ ಪ್ರತೀ ಪ್ರದರ್ಶನವನ್ನೂ ಬಂಗಾರಣ್ಣನವರು ನೋಡಲೇಬೇಕಿತ್ತು. ಪ್ರತಿದಿನವೂ ಕೃಷ್ಣ ಗೋಕುಲವನ್ನು ತೊರೆಯುವುದು, ರಾಧೆ, ಕೃಷ್ಣನಿಗಾಗಿ ಹಂಬಲಿಸುತ್ತಾ ‘ಹಾ… ಹೊರಟನೇ…’ ಎಂದು ಹಾಡುವುದು ನಡೆದೇ ಇತ್ತು. ಅದು ಬಂಗಾರಣ್ಣನವರ ಮನವನ್ನು ದಿನದಿನವೂ ಕಲಕಿ-ಕಲಕಿ ಕಡೆಗೆ ಅಳುವಂತೆ ಮಾಡಿತ್ತಂತೆ. ಈ ಅಗಲಿಕೆಯ ಹಳಹಳಿಕೆ ಕೇವಲ ಬಂಗಾರಣ್ಣನಿಗೆ ಮಾತ್ರವಲ್ಲ ಹೆಗ್ಗೋಡಿನ ಹಲವಾರು ಸಹೃದಯರನ್ನು ಅಳುವಂತೆ ಮಾಡಿದೆಯಂತೆ. ಅಷ್ಟೇ ಏಕೆ! ಗೋಕುಲದ ಕೊನೆಯ ಪ್ರದರ್ಶನದಲ್ಲಿ ಸ್ವತಃ ಕಾರಂತರೇ ಅತ್ತರಂತೆ! ಯಾವ ರೀತಿಯ ಭಾವನಾತ್ಮಕ ಸಂಬಂಧವೊ ಕಾಣೆ, ಗೋಕುಲ ನಿರ್ಗಮನದ ನಾಟಕ ಪ್ರಯೋಗ ಇಂದಿಗೂ ಎಷ್ಟೋ ಜನರ ಮನಸ್ಸುಗಳಿಂದ ನಿರ್ಗಮಿಸಿಲ್ಲ. ಸಂದರ್ಭಗಳು ಬದಲಾದರೂ.

(‘ಗೋಕುಲ ನಿರ್ಗಮನ’ ನಾಟಕದ ಒಂದು ದೃಶ್ಯ)

ಪ್ರತಿದಿನವೂ ಕೃಷ್ಣ ಗೋಕುಲವನ್ನು ತೊರೆಯುವುದು, ರಾಧೆ, ಕೃಷ್ಣನಿಗಾಗಿ ಹಂಬಲಿಸುತ್ತಾ ‘ಹಾ… ಹೊರಟನೇ…’ ಎಂದು ಹಾಡುವುದು ನಡೆದೇ ಇತ್ತು. ಅದು ಬಂಗಾರಣ್ಣನವರ ಮನವನ್ನು ದಿನದಿನವೂ ಕಲಕಿ-ಕಲಕಿ ಕಡೆಗೆ ಅಳುವಂತೆ ಮಾಡಿತ್ತಂತೆ. ಈ ಅಗಲಿಕೆಯ ಹಳಹಳಿಕೆ ಕೇವಲ ಬಂಗಾರಣ್ಣನಿಗೆ ಮಾತ್ರವಲ್ಲ ಹೆಗ್ಗೋಡಿನ ಹಲವಾರು ಸಹೃದಯರನ್ನು ಅಳುವಂತೆ ಮಾಡಿದೆಯಂತೆ. ಅಷ್ಟೇ ಏಕೆ! ಗೋಕುಲದ ಕೊನೆಯ ಪ್ರದರ್ಶನದಲ್ಲಿ ಸ್ವತಃ ಕಾರಂತರೇ ಅತ್ತರಂತೆ!

ನೀನಾಸಂ ತಿರುಗಾಟದ ಇತಿಹಾಸದಲ್ಲೇ ಅಪರೂಪವೆಂಬಂತೆ ಈ ನಾಟಕವನ್ನು ಪುನಃಸೃಷ್ಟಿ ಮಾಡುವ ಎರಡು-ಮೂರು ಪ್ರಯತ್ನಗಳು ನಡೆದವು. ಕಾರಂತರು ನಮ್ಮೆಲ್ಲರಿಂದ ನಿರ್ಗಮಿಸುವ ಮೊದಲು ಮೊದಲ ಕೆಲವು ಪ್ರದರ್ಶನಗಳು ದೆಹಲಿ ಮತ್ತು ಕರ್ನಾಟಕದಲ್ಲಿ ಆದವು. ನಾನು ಕೊನೆಯ ಸಲ ‘ಗೋಕುಲ ನಿರ್ಗಮನ’ದ ಮರು ಪ್ರಯೋಗವನ್ನು ಮಂಚೀಕೇರಿಯಲ್ಲಿ ನೋಡಿದ್ದೆ. ಅದಕ್ಕಾಗಲೇ ಸ್ಟಾರ್ವ್ಯಾಲ್ಯೂ ಬಂದಾಗಿತ್ತು. ಬಹುಪಾಲು ನಟ-ನಟಿಯರು ಕಿರುತೆರೆ ನಟ-ನಟಿಯರಾಗಿದ್ದರು. ಬಹುಪಾಲು ನೀನಾಸಂ ತಿರುಗಾಟದ ನಾಟಕದಂತೆಯೇ ಕಾಣುತ್ತಿದ್ದರೂ ಸಾಕಷ್ಟು ಸೂಕ್ಷ್ಮ ಬದಲಾವಣೆಗಳಾಗಿದ್ದವು. ಅದನ್ನು ಮಾಡಿದ್ದ ತಂಡ ಮತ್ತು ನಟರುಗಳೂ ಬೇರೆಯೇ ಆಗಿದ್ದರಿಂದ ಹೀಗಾಯಿತೇನೋ. ಕೃಷ್ಣನನ್ನೂ ಸೇರಿದಂತೆ, ಹೊಸ ಗೊಲ್ಲರ ಪಡೆಯಿದ್ದ ಈ ತಂಡ ದೇಶದ ಹಲವಾರು ಭಾಗಗಳಲ್ಲಿ ಪ್ರದರ್ಶನ ನೀಡಿತು, ನೀಡುತ್ತಿದೆ. ಆಧುನಿಕ ಕನ್ನಡ ರಂಗಭೂಮಿಯ ಈ ಜಾನಪದ ಹೊಸ ವರಸೆಗೆ ‘ಜೈ ಹೋ.


ಈ ಗೋಕುಲ ನಿರ್ಗಮನವನ್ನು ಮೊದಲ ಸಲ ನಕಲು ಮಾಡುವಾಗ, ಕಾರಂತರು ದೆಹಲಿಯಲ್ಲಿದ್ದರು. ಆಗ ನಾನು ಆ ತಂಡದ ಹಣಕಾಸು ವ್ಯವಸ್ಥಾಪಕನಾಗಿದ್ದೆ. ಆಗ ಅದನ್ನು ಅದರ ವಿಡಿಯೋ ಚಿತ್ರವನ್ನು ನೋಡಿ ತಂಡ ತಯಾರಿ ನಡೆಸುತ್ತಿತ್ತು. ಎರಡನೆಯ ಬಾರಿ ಸ್ವಲ್ಪ ಭಿನ್ನ ತಂಡದೊಡನೆ ಮಾಡುವಾಗ, ವಿಡಿಯೋ ಜೊತೆಗೆ, ಕಾರಂತರೂ ಇದ್ದರು. ಕೆಲವು ಸಣ್ಣ-ಪುಟ್ಟ ಬದಲಾವಣೆಗಳನ್ನು ಅವರು ಮಾಡಿದರು ಎಂದು ನೆನಪು. ಈಗಲೂ ಗೋಕುಲ ನಿರ್ಗಮನ ನಾಟಕದ ಪದರ್ಶನ ನಡೆಯುತ್ತಲೇ ಇದೆ ಎಂದರೆ, ಅದೊಂದು ಅಚ್ಚರಿಯೇ ಸರಿ. ನನಗನ್ನಿಸುತ್ತದೆ, ಈ ಗೋಕುಲ ನಿರ್ಗಮನವನ್ನು ಮತ್ತೆಮತ್ತೆ ಅದೇ ಶೈಲಿ-ರೀತಿಯಲ್ಲಿ ಆಡುತ್ತಿದ್ದರೆ, ಆಗ ‘ಗೋಕುಲ’ವೆಂಬ ಒಂದು ಜಾನಪದ ಶೈಲಿಯು ಬೆಳೆದು, ಗೋಕುಲದ ಗೊಲ್ಲರ ವಂಶವೇ ನಿರ್ಮಾಣವಾದರೆ ಅಚ್ಚರಿಯಿಲ್ಲ.

ಮುಂದುವರೆಯುವುದು….

(ಮುಖಪುಟ ಚಿತ್ರ: ಪ್ರತೀಕ್ ಮುಕುಂದ)