ಎತ್ತರವಾಗುವುದೆಂದರೆ

ಎತ್ತರ ಮುಗಿಲ ಕಣ್ಣು
ಹಾರಿದವನಿಗೂ ಎತ್ತರ
ಬಾನೆತ್ತರ ಬಾನೇರುವ ಬಾನಾಡಿಗೂ ಎತ್ತರ
ಸೊಲ್ಲಿನ ಪದ ಗಲ್ಲುಗಲ್ಲೆಂದ ಮನಸಿನ ಹದ
ಮಾತಿಗಿಂತಲು ಎತ್ತರ

ನಾನು ಹಳ್ಳ ನೀನು ದಡ ಅವನೆ ಎಲ್ಲಾ ಎನ್ನು
ಪ್ರಶಾಂತವಾದ ಕಣ್ಣಿಗೆ ಮುದ
ನನ್ನದೇನು ಇಲ್ಲ ನಾನು ಕಣ ಎನ್ನು
ನೀನು ಧ್ಯಾನಕಿಂತ ಎತ್ತರ

ಕೊಡುವ ಕೈ ಹಸಿದವನ ಕಾಣುವ ಕಣ್ಣು
ಸಂತೈಸುವ ನಾಲಗೆ
ಬಿದ್ದವನ ಎತ್ತುವ ಕೈಗಳು
ಕಷ್ಟಕೆ ಹೆಗಲುಕೊಡುವ ಮನಸ್ಸುಗಳು
ಪೂಜಿಸುವ ದೇವರಿಗಿಂತಲು ಎತ್ತರ

ತನ್ನ ಸುತ್ತಲ ಸಮೂಹದ ನಗುವೆ ಸಂಪತ್ತು
ಎನ್ನುವವನ ಹೃದಯ
ಕೋಟಿ ಪುಣ್ಯಕಿಂತಲು ಎತ್ತರ

ಬಡವನ ಗುಡಿಸಲಲ್ಲಿ ಮಿನುಗುವ ದೀಪ
ಕಣ್ಣಿಗೆ ಬೆಳಕು ಮತಿಗೆ ತಿಳಿವು
ಕಂಡವನು ದಾರ್ಶನಿಕ
ಬಾಳಿದವನು ಅವನಿಗಿಂತಲೂ ಎತ್ತರ

ಗ್ರಂಥ – ಕಜಾನೆಗಳು ಅಮೂಲ್ಯವೇ
ಹೌದೆನ್ನುತ್ತವೆ ನಿದರ್ಶನಗಳು
ಕಂಡವನು ಜ್ಞಾನಿ ಅನುಭವಿಸಿದವನು ವಿದ್ವಾಂಸ
ಬೆವರಲಿ ಬದುಕಿನ ಅರ್ಥ ಕಂಡವನು
ಇವರೆಲ್ಲರಿಗಿಂತ ಎತ್ತರ

ಹೆಣ್ಣು ಗಂಡು ಜೀವ ಜೀವದ ನೆರಳು ಬೆಳಕು
ಖಗ, ಮೃಗ, ಗಿಡ, ಮರ, ಜಂತು – ಸಂತುಗಳಲ್ಲಿ
ಆತ್ಮದ ನಡೆಗೆ ಡಿಂಭದ ವೇಷ
ನುಡಿಸಿದವನು ಮಾಂತ್ರಿಕ, ನಡೆಸುವವನ ಕಂಡವರಿಲ್ಲ
ಬದುಕಿನ ನಾಟಕದ ಈ ಎಲ್ಲಾ ಅವತಾರಗಳಿಗೆ
ಎಡೆಗೊಡದೆ ಕಾಯಕದಲಿ ನಿಂತವನು
ಅನಂತ ಶಕ್ತನಿಗೂ ಮಾದರಿಯಲಿ ಎತ್ತರ

ಪರಾತ್ಪರತೆಯಲಿ ಪವಡಿಸುವವನು
ಕವಿಯ ನಡೆಗೂ ನುಡಿಗೂ ಹತ್ತಿರ
ಅನುಭವಿಸಿ ನುಡಿಯುವವನು ಅನುಭಾವಿಗೂ ಎತ್ತರ

ಮರೆತರೆ ಕೆಸರು ಅರಿತರೆ ಮತ್ತೆ ಅಲ್ಲೇ ಕಮಲ
ಪಾಡಿಗೆ ತಕ್ಕ ಹಾಡು.,
ಹರಿಯುವ ನದಿಯಲಿ ನಗುವ ಮೀನಿನಂತೆ.
ಎತ್ತರವೆಂದರೆ ಸ್ವಚ್ಚನೀರಲಿ ಕಂಡ ಮುಖ

ಪಂಚವರ್ಣದ ಹಂಸ

ಖಾಲಿ ದೋಣಿಯೊಂದು
ನಿನ್ನ ಕಾದು ಕೂತು
ನನಗೆ ಕಣ್ಣ ಸನ್ನೆ ಮಾಡಿದೆ.

ಜೋಡಿ ಹುಡುಕಿ ಹುಡುಕಿ
ನಮ್ಮ ಹೊತ್ತು ತಿರುಗಿ
ಸಂಸಾರ ಸಾರಮಾಡಿ ಸಾಗರವ ದಾಟಬೇಕಿದೆ
ಎಂದು ನನ್ನ ಕಿವಿಗೆ ಹೇಳಿದೆ.

ಪಂಚವರ್ಣದ ಹಂಸ ಜೊಡಿ ಮಾಡಿಕೊಂಡು
ಸಲಿಲದಲ್ಲಿ ಸಲುಗೆ ಮಾಡಿದೆ
ನಮ್ಮ ಕಥೆಗೆ ತನ್ನ ಒಲವ ಬೆಸುಗೆ ಮಾಡಿ
ತೇಲೊ ಆಸೆ ಮನದಿ ಮೂಡಿದೆ

ಕತ್ತಲಲ್ಲಿ ನಿನ್ನ ಚಂದ್ರನಂತೆ ಕಂಡು
ನನ್ನ ಕೂಗಿ ಕೂಗಿ ಕರೆದಿದೆ
ಸೌಂದರ್ಯ ರಾಶಿ ಹಾಲು ಉಕ್ಕಿದಂತೆ
ನನ್ನ ಬೊಗಸೆ ಹಿಡಿಯಲೇಳಿದೆ

ತಾನು ತನನ ಹಾಡಿ
ಮುತ್ತು ಮಳೆಯ ಕರೆಸಿ
ನಿನಗೆ ಸೀರೆಮಾಡಿ ಉಡಿಸಲೇಳಿದೆ

ನಾಚಿಕೆಯ ಕವಿತೆ ಬರೆದು ನೀರಿನಲ್ಲಿ ತೇಲಿಬಿಟ್ಟು
ಇಬ್ಬರನ್ನೆ ಹಗಲುಮಾಡಿ ಸಾಗರವನೆ ರಾತ್ರಿ ಮಾಡಿ
ತಾನು ನಿರಾಳವಾಗಿ ಸಾಗಿದೆ

ದೂರ ದೂರಿನಲ್ಲಿ ನಮಗೆ ಗೂಡು ತೋರಿ.
ತಾನು ನೀರಿನಲ್ಲಿ ನಿಂತು ದಡವ ಸೇರಿದವರ ನೋಡಿ
ಚಿಟ್ಟೆ ಹಾರಿದಂಗೆ ಹಾರಿ ಹೃದಯಕೊಂದು
ಹೊಸ ಭಾಷೆ ಕಲಿಸಿದೆ.

ಕವಿ ಸತ್ಯಮಂಗಲ ಮಹದೇವ ಅವರು ತುಮಕೂರು ಜಿಲ್ಲೆಯ ಸತ್ಯಮಂಗಲದವರು
ಪಿ.ಎಚ್.ಡಿ ಸಂಶೋಧನಾ ವಿದ್ಯಾರ್ತಿಯಾಗಿರುವ ಇವರು ಬಿ.ಎನ್.ಇ.ಎಸ್ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಭಾವತೀರದ ಹಾದಿಯಲ್ಲಿ’, ‘ಹೆಜ್ಜೆ ಮೂಡಿದ ಮೇಲೆ’, ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಇವರ ಪ್ರಕಟಿತ ಸಂಕಲನಗಳು