“ಕಥೆ ನಡೆಯುವುದೇ ಅನಿರೀಕ್ಷಿತ ಕಾರಣಗಳಿಂದಾಗಿ ಎಂದು ನಾನು ಈ ದಿನದ ಬರಹದ ಮೊದಲಲ್ಲೇ ಹೇಳಿರುವುದಕ್ಕೆ ಒಂದು ಕಾರಣವೂ ಇದೆ. ನೀವು ಯಶವಂತ ಚಿತ್ತಾಲರ ಕತೆಯೊಂದನ್ನು ಓದಿರಬಹುದು. ‘ಕಥೆಯಲ್ಲಿ ಬಂದಾತ ಮನೆಗೂ ಬಂದು ಕದ ತಟ್ಟಿದ’ ಇದು ಆ ಕಥೆಯ ಹೆಸರೆಂದು ಅನಿಸುತ್ತದೆ. ಅದೇ ತರಹ ನನಗೂ ಇಂದು ಸಂಭವಿಸಿತು. ಮಿನಿಕಾಯ್ ಕಥನದ ಎರಡು ಕಂತುಗಳನ್ನು ಬರೆದು ಮೂರನೇಯ ದಿನಕ್ಕೆ ಏನು ಬರೆಯುವುದು ಎಂದು ನಿನ್ನೆ ಇರುಳು ಯೋಚಿಸುತ್ತಿದ್ದೆ. ಅಷ್ಟು ಹೊತ್ತಿಗೆ ಕದ ತಟ್ಟಿದ ಸದ್ದು. ನೋಡಿದರೆ ಒಂದು ಅಪರಿಚಿತ ಮುಖ ವಿಶಾಲವಾಗಿ ನಕ್ಕು ನನ್ನ ಬಂದು ತಬ್ಬಿಕೊಂಡಿತು. ನಾನು ಗಲಿಬಿಲಿಯಾದೆ”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಮೂರನೆಯ ಕಂತು.

 

ಥೆಯೊಂದನ್ನು ನಡೆದ ಹಾಗೆ ಕಾಲಾನುಕ್ರಮಣದಲ್ಲಿ ಹೇಳುತ್ತಾ ಹೋಗುವುದು ಒಂದು ಬಗೆ. ಆದರೆ ಹೀಗೆ ಹೇಳುತ್ತಾ ಹೋಗುವುದರಿಂದ ಹೇಳುವವನಲ್ಲೂ ಕೇಳುವವನಲ್ಲೂ ಒಂದು ರೀತಿಯ ಅಸಹಜವಾದ ತಾಧ್ಯಾತ್ಮತೆಯೂ, ಬೋರು ಹೊಡೆಸುವ ಏಕತಾನತೆಯೂ. ಘಟನಾವಳಿಗಳು ಹೀಗೇ ಗಾಲಿಯೊಂದರ ನಿರಂತರ ಉರುಳುವಿಕೆಯಂತೆ ಕಾಲಾನುಕ್ರಮದಲ್ಲಿ ನಡೆಯುತ್ತಲೇ ಇರುತ್ತದೆ ಎಂಬ ಹುಸಿ ವಿಶ್ವಾಸವೂ ಉಂಟಾಗುತ್ತದೆ.ಯಾವುದೇ ಅನಿಶ್ಚಿತತೆಗಳಿಗೆ ಅಲ್ಲಿ ಜಾಗವೇ ಇರುವುದಿಲ್ಲವಾದ್ದರಿಂದ ಸ್ವಲ್ಪ ಹೊತ್ತು ಕಥೆಯ ನಡುವೆ ಕಣ್ಮುಚ್ಚಿ ವಿರಮಿಸಿ ಮತ್ತೆ ಕಥೆಯೊಳಗೆ ಸೇರಿಕೊಂಡರೂ ದೊಡ್ಡದಾದ ವ್ಯತ್ಯಾಸ ಏನೂ ಆಗಿರುವುದಿಲ್ಲ. ಏಕೆಂದರೆ ಅಲ್ಲಿ ಅಂತಹ ಅನಿರೀಕ್ಷಿತವೇನೂ ಸಂಭವಿಸಿರುವುದಿಲ್ಲ. ಆದರೆ ನನಗೆ ಗೊತ್ತಿರುವ ಹಾಗೆ ಲೋಕ ನಡೆಯುವುದೇ ಅನೀರೀಕ್ಷಿತ ಸಂಭವಗಳಿಂದಾಗಿ. ಲೋಕ ನಿಲ್ಲುವುದೂ ಅನಿರೀಕ್ಷಿತ ಸಂಭವಗಳಿಂದಾಗಿಯೇ. ಎಲ್ಲವೂ ಅಂದುಕೊಂಡ ಹಾಗೆಯೇ ನಡೆಯುವ ಹಾಗಿದ್ದರೆ ಲೋಕವೂ ಕಥೆಗಳೂ ಚಲಿಸುತ್ತಲೇ ಇರುತ್ತಿರಲಿಲ್ಲವೇನೋ.

ಇದು ಮಾಮೂಲಿ ಮಾತಾಯಿತು ಬಿಡಿ. ಘಟನೆಯೊಂದರ ಮೂಲಕ ಇದನ್ನು ಹೇಳುತ್ತೇನೆ.

ಔತಣ ಕೂಟವೊಂದರ ಆಹ್ವಾನದ ನೆಪದಿಂದಲೂ, ಪುಟ್ಟ ಹಕ್ಕಿಯೊಂದನ್ನು ನೋಡುವ ಆಶೆಯಿಂದಲೂ ಮಿನಿಕಾಯ್ ದ್ವೀಪಕ್ಕೆ ಹೊರಡಲು ತೀರ್ಮಾನಿಸಿದ್ದ ನಾನು ಹಡಗೊಂದರ ಪ್ರಯಾಣದ ವೇಳಾಪಟ್ಟಿಗಾಗಿ ಕಾಯುತ್ತಿದ್ದೆ. ಎಲ್ಲಿಗಾದರೂ ಹೋಗಬೇಕೆನಿಸಿದರೆ ಕಾರೋ, ರೈಲೋ, ವಿಮಾನವೋ ಹತ್ತಿ ಹೋದರಾಯಿತು ಎನ್ನುವ ನಿಮ್ಮ ಹಾಗಿನ ನಿಶ್ಚಿಂತೆ ದ್ವೀಪವಾಸಿಗಳಾದ ನಮಗೆ ಇರುವುದಿಲ್ಲ. ಹೋಗಬೇಕಾದರೆ ಹಡಗೊಂದರ ವೇಳಾಪಟ್ಟಿಗಾಗಿ ಕಾಯಬೇಕಾಗುತ್ತದೆ. ಆ ಹಡಗು ನೇರವಾಗಿ ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಹೋಗುವುದಿಲ್ಲ. ಸುತ್ತಿ ಬಳಸಿ ಹೋಗುವುದರಿಂದ ನೀವು ಬಸ್ಸೊಂದರಲ್ಲಿ ಆರು ಗಂಟೆಗಳಲ್ಲಿ ತಲುಪುವ ಜಾಗವನ್ನು ಇಲ್ಲಿ ಇಪ್ಪತ್ತನಾಲ್ಕು ಗಂಟೆಗಳ ನಂತರ ತಲುಪಬೇಕಾಗಬಹುದು. ಈ ನಡುವೆ ಹವಾಮಾನ, ಬಿರುಗಾಳಿ, ಸಮುದ್ರದ ಇಳಿತ ಭರತ ಇವೆಲ್ಲದರ ಮುಲಾಜೂ ಇರುತ್ತದೆ. ಒಂದು ವೇಳೆ ಹೊರಟೇಬಿಟ್ಟಿರಿ ಅಂತ ಇಟ್ಟುಕೊಳ್ಳಿ. ವಾಪಾಸು ಯಾವಾಗ ತಲುಪುವಿರಿ ಎಂದು ಹೇಳುವ ಹಾಗಿಲ್ಲ. ಅದಕ್ಕೆ ನೀವು ಅಲ್ಲಿಂದ ಹೊರಡುವ ಇನ್ನೊಂದು ಹಡಗಿನ ವೇಳಾಪಟ್ಟಿಗಾಗಿ ಕಾಯಬೇಕಾಗುತ್ತದೆ. ಜೊತೆಗೆ ಹವಾಮಾನ, ಬಿರುಗಾಳಿ, ಸಮುದ್ರದ ಇಳಿತ ಭರತ ಇವೆಲ್ಲದರ ಮುಲಾಜುಗಳೂ ಕೂಡಾ. ಕಡಲಲ್ಲಿ ಕಳೆಯುವ ಅಷ್ಟೂ ಹೊತ್ತು ಲೋಕಕ್ಕೂ ನಿಮಗೂ ಯಾವುದೇ ಸಂಬಂಧ ಇರುವುದಿಲ್ಲ. ಹಾಗಾಗಿ ದ್ವೀಪವೊಂದನ್ನು ಬಿಟ್ಟು ಇನ್ನೊಂದು ದ್ವೀಪಕ್ಕೆ ಹೊರಡುವಾಗ ಬಹಳ ಯೋಚಿಸಬೇಕಾಗುತ್ತದೆ. ಆದರೆ ನನಗನಿಸುವು ಪ್ರಕಾರ ಹಾಗೆ ಏನೂ ಯೋಚಿಸದೆ ಹೊರಟು ಬಿಡುವುದು ಒಳ್ಳೆಯದು.

ಹಾಗೆ ಏನೂ ಯೋಚಿಸದೆ ಹೊರಟೇ ಬಿಡುತ್ತೇನೆ ಅಂದುಕೊಂಡು ಕಡಲ ಬದಿಯಲ್ಲಿ ಹುಳ ಹೆಕ್ಕುತ್ತಿದ್ದ ವಲಸೆ ಹಕ್ಕಿಯೊಂದರ ಮೇಲೆ ಕ್ಯಾಮರಾದ ಕಣ್ಣನ್ನು ಕ್ರೋಡೀಕರಿಸುತ್ತಾ ನೋಡುತ್ತಿದ್ದೆ. ಹಕ್ಕಿ ಒದ್ದೆ ಮರಳಿನ ಮೇಲೆ ಪುಟುಪುಟು ಓಡಾಡುತ್ತಿತ್ತು. ಹಾವಸೆ ತುಂಬಿದ ಪುಟ್ಟ ಕಲ್ಲುಗಳ ಪೊಟರೆಗಳೊಳಗೆ ಏಡಿಗಳು ಗೂಢಾಲೋಚನೆ ಮಾಡುತ್ತಾ ಚಲಿಸುತ್ತಿದ್ದವು. ಅವುಗಳಿಗೆ ಈ ಹಕ್ಕಿಗಳನ್ನು ಹಿಡಿಯುವ ತವಕ. ಆದರೆ ಇಂತಹ ನೂರಾರು ಏಡಿಗಳ ಹುನ್ನಾರವನ್ನು ಕಂಡಿರುವ ಆ ಹಕ್ಕಿ ಲಗುಬಗೆಯಿಂದ ತನ್ನ ಹುಳದ ಹುಡುಗಾಟವನ್ನು ಮುಂದುವರಿಸಿತ್ತು. ಒಂದು ಕ್ಷಣ ಕಣ್ಮುಚ್ಚಿ ಯೋಚಿಸಿದೆ. ಒಂದು ವೇಳೆ ಏಡಿಯೊಂದು ಈ ಹಕ್ಕಿಯ ಪುಟ್ಟ ಕಾಲುಗಳನ್ನು ಹಿಡಕೊಂಡು ಬಿಟ್ಟರೆ ಏನಾಗಬಹುದು? ತಲೆ ಕೆಟ್ಟು ಹೋಯಿತು. ಸಾವಿರಾರು ಮೈಲು ದೂರದಿಂದ ಚಳಿಗಾಲ ಕಳೆಯಲು ಬಂದಿರುವ ಪುಟ್ಟ ಹಕ್ಕಿ. ಮತ್ತೆ ಹಿಮಾಲಯ ಶ್ರೇಣಿಯನ್ನೂ ಹಾರಿ ಹಿಂತಿರುಗಬೇಕಾದ ಹಕ್ಕಿ. ಇದರ ಜೋಡಿ ಹಕ್ಕಿ ಇಲ್ಲೇ ಇನ್ನೊಂದು ಕಡೆ ಹೀಗೆಯೇ ಹುಳ ಹುಡುಕುತ್ತಾ ಓಡಾಡುತ್ತಿದೆ. ಇನ್ನೇನು ಮಳೆಗಾಲ ಶುರುವಾಗುವ ಮೊದಲು ಇವುಗಳು ದೂರ ಹಾರಿ, ಸಂಸಾರ ಸುರು ಹಚ್ಚಬೇಕು. ಆಮೇಲೆ ಮರಿಗಳನ್ನೂ ಕರೆದುಕೊಂಡು ಇನ್ನೂ ದೂರ ಹಾರಬೇಕು. ಮತ್ತೆ ಮರಳಿ ಬರುವಷ್ಟು ಈ ಪುಟ್ಟಹಕ್ಕಿಗೆ ಆಯಸ್ಸು ಇದೆಯೋ ಗೊತ್ತಿಲ್ಲ. ಆದರೆ ಈ ಎಲ್ಲದರ ನಡುವೆ ಏಡಿಯೊಂದು ಹಠಾತ್ತನೆ ಈ ಹಕ್ಕಿಯ ಕಾಲುಗಳನ್ನು ತನ್ನ ಕೊಂಡಿಗಳಿಂದ ಹಿಡಿದುಕೊಂಡರೆ ಏನಾಗಬಹುದು? ಈ ಹಕ್ಕಿಯ ಜೀವನ ಘಟನಾಚಕ್ರದ ಉರುಳುವಿಕೆಯಲ್ಲಿ ಏನೇನೆಲ್ಲಾ ಉಳಿಕೆ ಪರಿಣಾಮಗಳು ಸಂಭವಿಸಬಹುದು? ನನ್ನ ಯೋಚನೆಯ ಮೇಲೆಯೇ ಹಿಕ್ಕೆ ಹಾಕಿದಂತೆ ಆ ಹಕ್ಕಿ ಸಣ್ಣಗೆ ಹಿಕ್ಕೆ ಹಾಕಿ ಅಲ್ಲಿಂದ ಹಾರಿತ್ತು. ಏಡಿಗಳ ಹುನ್ನಾರ ನಿಜಕ್ಕೂ ಜೋರಾಗುತ್ತಿದೆ ಎಂದು ಅದಕ್ಕೆ ಅನ್ನಿಸಿರಬೇಕು. ನಾನೂ ಎದ್ದು ಹೊರಟಿದ್ದೆ. ಎದ್ದು ಹೊರಟವನು ಮಧ್ಯಾಹ್ನದ ಹೊತ್ತು ಇಲ್ಲಿಂದ ಹೊರಡುವ ದೊಡ್ಡದೊಂದು ಹಡಗು ಹತ್ತಿ ಕುಳಿತಿದ್ದೆ.

(ಫೋಟೋಗಳು: ಅಬ್ದುಲ್‌ ರಶೀದ್)

ಕಥೆ ನಡೆಯುವುದೇ ಅನಿರೀಕ್ಷಿತ ಕಾರಣಗಳಿಂದಾಗಿ ಎಂದು ನಾನು ಈ ದಿನದ ಬರಹದ ಮೊದಲಲ್ಲೇ ಹೇಳಿರುವುದಕ್ಕೆ ಒಂದು ಕಾರಣವೂ ಇದೆ. ನೀವು ಯಶವಂತ ಚಿತ್ತಾಲರ ಕತೆಯೊಂದನ್ನು ಓದಿರಬಹುದು. ‘ಕಥೆಯಲ್ಲಿ ಬಂದಾತ ಮನೆಗೂ ಬಂದು ಕದ ತಟ್ಟಿದ’ ಇದು ಆ ಕಥೆಯ ಹೆಸರೆಂದು ಅನಿಸುತ್ತದೆ. ಅದೇ ತರಹ ನನಗೂ ಇಂದು ಸಂಭವಿಸಿತು. ಮಿನಿಕಾಯ್ ಕಥನದ ಎರಡು ಕಂತುಗಳನ್ನು ಬರೆದು ಮೂರನೇಯ ದಿನಕ್ಕೆ ಏನು ಬರೆಯುವುದು ಎಂದು ನಿನ್ನೆ ಇರುಳು ಯೋಚಿಸುತ್ತಿದ್ದೆ. ಅಷ್ಟು ಹೊತ್ತಿಗೆ ಕದ ತಟ್ಟಿದ ಸದ್ದು. ನೋಡಿದರೆ ಒಂದು ಅಪರಿಚಿತ ಮುಖ ವಿಶಾಲವಾಗಿ ನಕ್ಕು ನನ್ನ ಬಂದು ತಬ್ಬಿಕೊಂಡಿತು. ನಾನು ಗಲಿಬಿಲಿಯಾದೆ.

‘ಓ ಗೊತ್ತಾಗಲಿಲ್ಲವಲ್ಲಾ.. ’ ಆತ ಇನ್ನೂ ದೊಡ್ಡದಾಗಿ ನಕ್ಕ.

‘ನಾನು ಇಬ್ರಾಹಿಂ ಮಿನಿಕಾಯ್ ದ್ವೀಪದ ಹಾಡುಗಾರ’ ಎಂದು ಇನ್ನೂ ಜೋರಾಗಿ ನಕ್ಕ.

‘ಅಯ್ಯೇ ನನಗೆ ಗೊತ್ತಾಗಲಿಲ್ಲ. ಆದರೆ ನಿಮ್ಮ ಗಡ್ಡ ಎಲ್ಲಿ ಹೋಯಿತು’ ನಾನು ಇನ್ನೂ ಗಲಿಬಿಲಿಯಿಂದ ಕೇಳಿದೆ.

‘ಗಡ್ಡವೂ ಹೋಯಿತು. ಎಲ್ಲವೂ ಹೋಯಿತು’ ಆತ ಇನ್ನೂ ಜೋರಾಗಿ ನಕ್ಕ.

ವಿಷಯ ಆಗಿದ್ದು ಇಷ್ಟೇ. ಈತ ಮಿನಿಕಾಯ್ ದ್ವೀಪದ ಹಾಡುಗಾರ. ಚೆನ್ನಾಗಿ ದೋಲೂ ಬಾರಿಸುತ್ತಾನೆ. ನಾನು ಅಲ್ಲಿದ್ದಾಗ ಈತನ ಹಾಡುಗಳನ್ನು ಧ್ವನಿಮುದ್ರಿಸಿಕೊಂಡಿದ್ದೆ. ‘ಎಷ್ಟು ಚೆನ್ನಾಗಿ ಹಾಡುತ್ತೀಯಾ. ಕವರತ್ತಿಗೆ ಬಂದಾಗ ಇನ್ನೂ ಹಾಡಬೇಕು’ ಎಂದು ಆಹ್ವಾನವನ್ನೂ ಕೊಟ್ಟಿದ್ದೆ. ಆ ಆಹ್ವಾನವನ್ನು ಅಷ್ಟೇ ತೀವ್ರವಾಗಿ ಹಚ್ಚಿಕೊಂಡಿದ್ದ ಇಬ್ರಾಹಿಂ ಧ್ವನಿಮುದ್ರಣದ ಹೊತ್ತಲ್ಲಿ ಚೆನ್ನಾಗಿ ಕಾಣಿಸಬೇಕು ಅಂದುಕೊಂಡು ತನ್ನ ಹುಲುಸಾದ ಕರಿಯ ಗಡ್ಡವನ್ನು ಸ್ವಲ್ಪ ನೇರಗೊಳಿಸಲು ಹೋಗಿ ಜಾಸ್ತಿಯೇ ಹೆರೆದುಕೊಂಡಿದ್ದ. ಇನ್ನು ಗಡ್ಡ ಹೀಗೆ ಅಡ್ಡಾದಿಡ್ಡಿಯಾಗಿದ್ದರೆ ಚೆನ್ನಾಗಿರುವುದಿಲ್ಲ ಎಂದುಕೊಂಡು ಗಡ್ಡವನ್ನು ಸಂಪೂರ್ಣ ಬೋಳಿಸಿಕೊಂಡು ಗುರುತೇ ಇಲ್ಲದವನ ಹಾಗೆ ಆಗಿಹೋಗಿದ್ದ. ನಾನು ಯಾವ ಕಾರಣಕ್ಕೂ ಮರೆಯಲೇ ಆಗದ ಮುಖ ಈ ಇಬ್ರಾಹೀಮನದು. ಹಾಡುಗಾರ, ಡೋಲುಗಾರ, ಮೀನುಗಾರ ಮತ್ತು ದುಃಖಿ! ದುಃಖಿ ಏಕೆಂದರೆ ಈತನ ಮಡದಿಯನ್ನು ಇತ್ತೀಚೆಗಷ್ಟೆ ಈತ ತ್ಯಜಿಸಿಬಿಟ್ಟಿದ್ದ. ತ್ಯಜಿಸಲು ಕಾರಣ ದ್ವೀಪದ ಪಕ್ಷ ರಾಜಕಾರಣ.

ಈತನ ದ್ವೀಪದಲ್ಲಿ ಇರುವುದು ಎರಡೇ ಪಕ್ಷಗಳು ಮತ್ತು ಎಲ್ಲರೂ ಯಾವುದಾದರೊಂದು ಪಕ್ಷದಲ್ಲಿ ಇರಲೇಬೇಕಿತ್ತು. ಹಾಗೆ ಈತನೂ ಈತನ ಮಡದಿಯೂ ಒಂದೇ ಪಕ್ಷದಲ್ಲಿದ್ದರು. ಆದರೆ ಒಂದು ದಿನ ಈತನ ಮಡದಿ ಇನ್ನೊಂದು ಪಕ್ಷದ ಸಭೆಯಲ್ಲಿ ಹಾಡು ಹೇಳಿ ನೃತ್ಯ ಮಾಡಿದಳು ಎಂಬುದು ಇವರ ಜಗಳಕ್ಕೆ ಹೇತುವಾಗಿತ್ತು. ಅದರ ಜೊತೆಗೆ ದೋಣಿ ಸ್ಪರ್ಧೆಯಲ್ಲಿ ಇಬ್ರಾಹೀಮನ ಹಳ್ಳಿಗೆ ಮೊದಲ ಬಹುಮಾನ ಬಂದರೆ ಆಕೆಯ ಹಳ್ಳಿಗೆ ಕೊನೆಯ ಬಹುಮಾನ. ಆ ಈರ್ಷ್ಯೆ ಜಗಳವನ್ನು ಇನ್ನೂ ಬಿಗಡಾಯಿಸಿತ್ತು. ಇಬ್ರಾಹೀಮನಿಗೆ ಜೀವನ ಸಾಕೋ ಸಾಕಾಗಿತ್ತು. ಈ ನಡುವೆ ಆಕೆ ರಾಜಿಯಾಗಿ ಪುನಃ ಮದುವೆಯಾಗೋಣ ಎಂಬ ಸಂದೇಶವನ್ನೂ ಕಳಿಸತೊಡಗಿದ್ದಳು. ಇದು ಆತನಿಗೆ ಇನ್ನಷ್ಟು ಕೋಟಲೆಯ ವಿಷಯವಾಗಿತ್ತು. ಏಕೆಂದರೆ ಒಮ್ಮೆ ತ್ಯಜಿಸಿದ ಮಡದಿಯನ್ನು ಪುನಃ ಪಡೆಯಬೇಕಿದ್ದರೆ ಆಕೆ ಇನ್ನೊಂದು ವಿವಾಹವಾಗಿ ಆ ವಿವಾಹದಿಂದ ಹೊರಬರಬೇಕಿತ್ತು. ಅದೂ ಅಲ್ಲದೆ ಈತನಿಗೆ ಜೀವನದಲ್ಲಿ ಹಾಡುವುದು ಮತ್ತು ದೋಲುಬಡಿಯುವುದು ಬಿಟ್ಟರೆ ಬೇರೆ ಉತ್ಸಾಹಗಳೂ ಉಳಿದಿರಲಿಲ್ಲ. ಅದಕ್ಕಾಗಿಯೇ ಆತ ನಾನು ಆಹ್ವಾನ ಕೊಟ್ಟಿದ್ದೇ ಸರಿ, ಹಡಗು ಹತ್ತಿ ಮಿನಿಕಾಯಿಂದ ಹೊರಟೇಬಿಟ್ಟಿದ್ದ.

ಈ ಬರಹದ ಮೊದಲೇ ಹೇಳಿದ ಹಾಗೆ ಲೋಕ ಚಲಿಸುವುದೇ ಅನಿರೀಕ್ಷಿತ ಸಂಭವಗಳಿಂದಾಗಿ. ಈ ದ್ವೀಪಗಳಲ್ಲಿ ಚಲಿಸುವಾಗ ನಿಮ್ಮ ಬಳಿ ಗುರುತಿನ ಚೀಟಿಗಳೂ, ಅನುಮತಿ ಪತ್ರಗಳೂ ಆಧಾರದ ದಾಖಲೆಗಳೂ ಇರಲೇಬೇಕಾಗುತ್ತದೆ. ಅದರ ಪ್ರಕಾರ ಈತನೂ ತನ್ನ ಗುರುತಿನ ಚೀಟಿಯನ್ನೂ ಆಧಾರದ ದಾಖಲೆಯನ್ನೂ ನೀಟಾಗಿ ಮಡಚಿ ತನ್ನ ಮೊಬೈಲ್ ಫೋನಿನ ಕವಚದೊಳಗೆ ಭದ್ರವಾಗಿಟ್ಟುಕೊಂಡಿದ್ದ. ಹಡಗಿನಿಂದ ಏಣಿಯ ಮುಖಾಂತರ ಇಳಿಯುವಾಗ ತಾನು ತಲುಪಿರುವ ಸಂಗತಿಯನ್ನು ನನಗೆ ಹೇಳಲು ಮೊಬೈಲನ್ನು ಕೈಗೆತ್ತಿಕೊಂಡವನು ಹಡಗಿನ ಏಣಿಯ ತೂರಾಟದಲ್ಲಿ ಮೊಬೈಲನ್ನು ಆಳವಾದ ಕಡಲಿಗೆ ಬೀಳಿಸಿಕೊಂಡಿದ್ದ.

‘ಈಗ ನನಗೆ ಗಡ್ಡವೂ ಇಲ್ಲ, ಹೆಂಡತಿಯೂ ಇಲ್ಲ, ಮೊಬೈಲೂ ಇಲ್ಲ, ಗುರುತಿನ ಚೀಟಿಯೂ ಇಲ್ಲ, ಆಧಾರವೂ ಇಲ್ಲ, ಏನೂ ಇಲ್ಲʼ ಎಂದು ನಗಲು ನೋಡುತ್ತಿದ್ದ. ಆದರೆ ಆತ ಒಳಗೊಳಗೆ ದಿಗಿಲುಗೊಂಡಿರುವುದು ಆತನ ಕಣ್ಣುಗಳಲ್ಲಿ ಗೊತ್ತಾಗುತ್ತಿತ್ತು. ಇನ್ನು ನನ್ನ ಇತರ ಕೆಲಸಗಳ ಜೊತೆ ಆತನ ಕಳೆದುಹೋದ ದಾಖಲೆಗಳನ್ನು ಹುಡುಕಿಕೊಡುವುದರಲ್ಲೂ ಸಹಾಯ ಮಾಡಬೇಕು. ಏಕೆಂದರೆ ಅವುಗಳು ಕಳೆದುಹೋಗಲು ನಾನೂ ಕಾರಣ. ಹಕ್ಕಿಯೊಂದನ್ನು ನೋಡಲು ಹೋಗಿ ದ್ವೀಪವೊಂದರ ಕಥಾ ಪಾತ್ರವೊಂದರ ಕಷ್ಟನಷ್ಟಗಳಿಗೆ ಕಾರಣನಾಗುವುದೆಂದರೆ ಏನು ಅಷ್ಟು ಕಮ್ಮಿ ಅಪರಾಧವೇ? ಕಡಲ ಬದಿಯಲ್ಲಿ ಕುಳಿತುಕೊಂಡಿರಿ ಇಬ್ರಾಹೀಮರೇ ಒಂಚೂರು ಕೆಲಸ ಮುಗಿಸಿ ನಿಮ್ಮನ್ನು ಸೇರಿಕೊಳ್ಳುವೆ ಎಂದು ಹೇಳಿಬಂದಿರುವೆ. ಬಹುಶಃ ನಾಳೆ ಇಬ್ರಾಹೀಮನ ಕಳೆದುಹೋದ ದಾಖಲೆಗಳನ್ನು ಮರಳಿಪಡೆಯಲು ಸಹಾಯ ಮಾಡಬೇಕಾಗುತ್ತದೆ. ಅದೂ ಕಳೆದು ಸಮಯ ಉಳಿದರೆ ಮುಂದಿನ ವಿಷಯ!

(ಮುಂದುವರಿಯುವುದು)

ಮಿನಿಕಾಯ್ ಕಥಾನಕ ಮೊದಲ ಕಂತಿನಿಂದ ಓದಲು ಇಲ್ಲಿ ಕ್ಲಿಕ್ ಮಾಡಿ