ವಿಳಾಸಕ್ಕೆ ಮರೆಯದೇ ತಲುಪಿಸು

ಮಳೆ ಬಿಟ್ಟ ಸಂಜೆಯ
ಖಾಲಿ ಮುಖವನ್ನು
ನೋಡಲು ಭಯವಾಗುತ್ತಿದೆ.
ಹೊತ್ತಾದರೂ
ಒಂಟಿಯಾಗಿ
ಮರದ ದಗರಿಯಮೇಲೆ ಕೂತು
ವಿರಹದ ದನಿಯನ್ನು
ಕಕ್ಕುತ್ತಿರುವ ಹಕ್ಕಿ;
ಹಿಡಿದು ಕೊಂದುಹಾಕಿಬಿಡಬೇಕೆನ್ನುವ
ಮೌನ;
ಅನಾಥವಾಗಿ ನಿದ್ದೆಹೋದ
ಚಪ್ಪಲಿಗಳು;
ಶೋಕಗೀತೆಯ
ಬಿಟ್ಟು ಬಿಟ್ಟು ಹಾಡುತ್ತಿರುವ
ಮತಿಭ್ರಮಣ ಕನಸು

ಈ ನಡುವಿನ
ಖಾಲಿತನದೊಳಗೆ
ಸದ್ದಿಲ್ಲದೆ
ತುಂಬಿಕೊಳ್ಳುವ ನೀನು
ಖಾಲಿಯಾದದ್ದೆ
ಅರಿವಿಗೆ ಬಾರಲಿಲ್ಲ..!

ಸಿಗಿದು
ಚರ್ಮಸುಲಿದಂಥ
ನೆನ್ನೆಗಳ ಮೇಲೆ
ಕನಿಕರಪಟ್ಟು ಮುದುರಿ
ಕೂತರೆ
ನಾಳೆಗಳ
ಮಾರಣಹೋಮ
ನಡೆಯುವುದು ಶತಸಿದ್ಧ

ಮಳೆಬಿದ್ದ ನೆಲದಲ್ಲಿ
ನೆನಪುಗಳ
ಕಲಸಿ ತಿಂದರೂ
ನನ್ನ ಹಸಿವು
ನೀಗಿತ್ತಿಲ್ಲ;
ಹಸಿವ ನೀಗಿಸಲು
ಒಂದು ತೊಟ್ಟು
ಅನುರಾಗದ
ವಿಷವನ್ನಾದರೂ ನನ್ನ
ವಿಳಾಸಕ್ಕೆ
ಮರೆಯದೇ ತಲುಪಿಸು…

 

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು