ನಿರ್ವಾಣಗೊಳ್ಳೋಣ

ನೆತ್ತರು ಬಸಿದು
ಕುದಿಯಲು
ಇಟ್ಟು ಬರುತ್ತೇನೆ
ಸ್ವಲ್ಪ ಹೊತ್ತು
ಕಾಯಿ;
ಶತಮಾನಗಳ‌ ಮಾತು
ಇಂದೇ ಆಡಿ ಮುಗಿಸೋಣ

ಎಲೆ ಉದುರುವ
ಚಳಿಗಾಲದ ರಾತ್ರಿಗಳು
ಭೂಮಿಗೆ
ಹೊದಿಕೆ ಹೊದ್ದಿಸಿ
ಪಾಪದ ಕಟಕಟೆಯಲ್ಲಿ
ಎಚ್ಚರವಾಗಿವೆ;
ದೂರದ ಮಳೆಗಾಲಕ್ಕೆ
ಕಾತರಿಸುವ
ಕಪ್ಪೆಗಳ ಬಾಯಿ
ಯಾರೋ ಮುಚ್ಚಿ
ಮೌನ ಸಮಾಧಿಯ
ಚೊಕ್ಕಟಗೊಳಿಸಿದ್ದಾರೆ;
ಹೂವೇ ಇಲ್ಲದ
ಜಾಜಿ ಬಳ್ಳಿ
ಕಲ್ಲಿನಂಥ
ಮರದ ಎದೆ, ಸೊಂಟ,
ನಿತಂಬಗಳ ಬಳಸಿ
ತಬ್ಬಿ ತೂಗುತ್ತಿದೆ

ಇಬ್ಬರ
ಏಕಾಂತಕಿದು
ಹೇಳಿಮಾಡಿಸಿದ ರಾತ್ರಿ
ನಿನ್ನವಲ್ಲದ
ಎಲ್ಲವನ್ನೂ ಕಳಚಿಟ್ಟು ಬಾ
ಇಂದೇ
ನಿರ್ವಾಣಗೊಳ್ಳೋಣ
ಸಾವಿಲ್ಲದ
ಒಲವಿನ ಮನೆಯಲ್ಲಿ
ಆರದ ದೀಪವಾಗೋಣ….!

 

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು