…ಇದೀಗ ಎರಡು ನಿಮಿಷವಾಯಿತು !
ಅವಳು ನನ್ನ ಬಿಟ್ಟುಹೋಗಿ
ಇದೀಗ ಎರಡು ನಿಮಿಷವಾಯಿತು*
ಅವಳದೊಂದು ಕೂದಲೆಳೆಯಿದೆ
ನೀಳ ಕಪ್ಪು ಗುಂಗುರು ನನ್ನಬಳಿ
ಹೆರಳರಾಶಿಯಲಾಡಿರಬಹುದಾದ
ಬೆರಳ ಗುರುತು ಇಲ್ಲ ಅಲ್ಲುಳಿದಿಲ್ಲ
ಮುಡಿಯುತ್ತಿದ್ದ ಕೇದಗೆಯ ಕಂಪೂ
ಅವಳು ನನ್ನ ಬಿಟ್ಟುಹೋಗಿ
ಇದೀಗ ಎರಡು ನಿಮಿಷವಾಯಿತು
ನಾನೇ ಮರಳಿಸಬಹುದಾದರೆ
ಅಂಚೆಯ ಮೂಲಕ ಅವಳ ವಿಳಾಸಕೆ
ಆ ಅದೃಷ್ಟ ರೇಖೆಯನು….
ಈಗ ಏನೂ ಮಾಡಲಾಗದು
ಒಂದು ಅಸಂಗತ ಅನುಭವ
ನರೆತ ಕೂದಲಿಗೆ ಹೊಂದಿಕೆಯಾಗದು
ಗಾಲಿಬನ ಗಝಲುಗಳ ನಡುವೆ
ಬಚ್ಚಿಟ್ಟಿರಬಹುದಾದ ಆ ಕೇಶ
ನನಗೆ ನವಿಲು ಗರಿಯಂತೆ
ನಾನೇನಾದರೂ ಬರೆಯಲು ಅಥವಾ
ಓದಲು ಹೋದಾಗ ಅಥವಾ
ಯಾವಾಗಲಾದರೊಮ್ಮೆ
ಗರಿಗೆದರಿ ಹೆರುತ್ತದೆ ನನಗೋಸ್ಕರ
ಒಂದು ದಿವ್ಯ ಏಕಾಂತವನು
ಬೆರಳಿಟ್ಟರೆ ಬಸಿರಾಗುವ
ಆ ನೀಳ ಕಪ್ಪು ಗುಂಗುರು ಗುಂಗುರು
ಮುಂಗುರುಳು
ಅವಳು ನನ್ನ ಬಿಟ್ಟುಹೋಗಿ
ಎರಡು ನಿಮಿಷವಾಯಿತು
ಅಥವಾ ಎರಡು ಯುಗ..?
ಗೊತ್ತಿಲ್ಲ
ಜ್ಯೋತಿರ್ವರ್ಷಗಳಾಚೆ
ಕತ್ತಲ ಮೂಲೆಯಲ್ಲೆಲ್ಲೋ
ತೊಳಲಾಡುತ್ತಿರುವ
ಗ್ರಹ ತಾರೆ ನಿಹಾರಿಕೆಗಳ
ಬಣ್ಣ ಬೆಳಕು ಹೃದಯ ಬಡಿತ
ಕ್ಷಣಮಾತ್ರದಲಿ ಅಳೆದು ಬಿಸಾಡುವ
ಈ ಬುದ್ಧಿವಂತ
ತನ್ನ ಪ್ರೀತಿಯ ಮುಂಗುರುಳಿನ
ಅಂತರವ ಅಳೆಯಲಾರ!
*ಕವಿತೆಯ ಮೊದಲೆರೆಡು ಸಾಲುಗಳು ಶ್ರೀಲಂಕಾದ ತಮಿಳು ಕವಿತೆಯ ಸಾಲುಗಳು
ಆರಿಫ್ ರಾಜಾ ಹೊಸ ತಲೆಮಾರಿನ ಪ್ರಮುಖ ಕವಿ.
‘ಜಂಗಮ ಫಕೀರನ ಜೋಳಿಗೆ’ ಇವರ ಪ್ರಸಿದ್ಧ ಕವನ ಸಂಕಲನ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಇವರ ಊರು.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಬ್ಯುಟಿಫುಲ್
ಕವಿತೆಯ ಚಿತ್ರ …ಅತ್ಯುತ್ತಮ ರೂಪಕ