ಈ ಸಾಂಕ್ರಾಮಿಕದ ಮೊದಲ ಅಲೆ ವ್ಯಾಪಕವಾಗಿರುವಾಗ ನಡೆದ ಬ್ರಿಟನ್ನಿನ ಸಂಶೋಧನೆಗಳಿಂದ ತಿಳಿದು ಬಂದ ಅಂಶವೇನೆಂದರೆ ಸೋಂಕಿತರಲ್ಲಿ ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ಬಂದಿರುವ ಜನರಲ್ಲಿ, ಈ ರೋಗ ಹೆಚ್ಚು ತೀವ್ರವಾಗಿರುತ್ತದೆ ಎನ್ನುವುದು ಮತ್ತು ಹೆಚ್ಚು ಪ್ರಾಣಹಾನಿಯನ್ನು ಮಾಡುತ್ತದೆ ಎನ್ನುವುದು. ಅಷ್ಟೇ ಅಲ್ಲ, ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ಬಂದ ಜನ ಹೆಚ್ಚಾಗಿ ನೆಲೆಸಿರುವ ಪ್ರದೇಶಗಳಲ್ಲಿ ಈ ಸಾಂಕ್ರಾಮಿಕ ಹೆಚ್ಚು ವ್ಯಾಪಕವಾಗಿರುವುದೂ ಕಂಡುಬಂತು.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

 

2020ರ ಆರಂಭದಲ್ಲಿ ಮೊಟ್ಟಮೊದಲು ಕೋವಿಡ್-19 ಕಾಯಿಲೆಯ ವರದಿ ಬಂದಾಗ ರಾಜಕಾರಣಿಗಳು, ಪತ್ರಿಕೆಗಳು, ವಿಜ್ಞಾನಿಗಳು ಈ ಹಿಂದೆ ಬಂದ ಸಾರ್ಸ್ (SARS) ಕಾಯಿಲೆಯ ತರಹ ಈ ಕಾಯಿಲೆಯು ಕೆಲವು ತಿಂಗಳು ಕೆಲವು ದೇಶಗಳನ್ನು ಕಾಡಿ ಹೊರಟು ಹೋಗುತ್ತದೆ ಎಂದುಕೊಂಡರು. ಜಾಗತಿಕ ಸಾಂಕ್ರಾಮಿಕವೊಂದನ್ನು ಎದುರಿಸಲು ಪ್ರಪಂಚದಲ್ಲಿ ಅತ್ಯುನ್ನತ ಆರೋಗ್ಯ ವ್ಯವಸ್ಥೆ ಇರುವ ದೇಶಗಳೂ ಸಿದ್ಧವಾಗಿರಲಿಲ್ಲ, ತನ್ನೆಲ್ಲ ಪ್ರಜೆಗಳಿಗೆ ಉಚಿತ ಆರೋಗ್ಯ ಕೊಡುವ ಬ್ರಿಟನ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೂ ದಿನಕ್ಕೊಂದು ಹೇಳಿಕೆ ಕೊಡುತ್ತ ಗೊಂದಲದಲ್ಲಿತ್ತು. ಹಿಂದೆಂದೂ ನೋಡಿರದ ರೀತಿಯಲ್ಲಿ ನಾನು ಕೆಲಸ ಮಾಡುವ ಆಸ್ಪತ್ರೆಗಳು ಕೊರೋನಾ ಸೋಂಕಿತರಿಂದ ಭರ್ತಿಯಾದವು. ತೀವ್ರ ನಿಗಾ ಘಟಕಗಳು ತುಂಬಿದವು. ಹೊಸ ತೀವ್ರ ನಿಗಾ ಘಟಕಗಳನ್ನು ಸೃಷ್ಟಿಸಿದರು. ಎಲ್ಲ ರುಟೀನ್ ಕಾಯಿಲೆಗಳ ಕ್ಲಿನಿಕ್ಕುಗಳು ಮತ್ತು ಶಸ್ತ್ರಚಿಕಿತ್ಸೆಗಳು ನಿಂತುಹೋದವು.

ಇಡೀ ಯುನೈಟೆಡ್ ಕಿಂಗ್‌ಡಮ್ ಲಾಕ್‌ಡೌನ್‌ಗೆ ಹೋಯಿತು; ಆದರೆ ವೈದ್ಯವೃತ್ತಿಯಲ್ಲಿರುವ ನನ್ನಂಥವರಿಗೆ ಎಲ್ಲಿಯ ಲಾಕ್‌ಡೌನ್‌? ವೈಯಕ್ತಿಕ ರಕ್ಷಾ ಧಿರಿಸನ್ನು ಹಾಕಿಕೊಂಡು ಸೋಂಕಿತರನ್ನು ನೋಡುತ್ತಿದ್ದೆವು, ನಮಗೆ ಯಾವಾಗ ಸೋಂಕು ತಗುಲುವುದೋ ಎನ್ನುವ ಅನಿಶ್ಚಿತತೆಯಲ್ಲಿ ಮನೆಗೆ ಮರುಳುತ್ತಿದ್ದೆವು. ಎಲ್ಲಿ ನಮಗೆ ಬಂದಿರಬಹುದಾದ ಸೋಂಕನ್ನು ಸಂಗಾತಿಗೆ, ಮಕ್ಕಳಿಗೆ ಕೊಡುತ್ತೇವೋ ಎಂದು ಹೆದರುತ್ತಿದ್ದೆವು. ಜೊತೆಗೆ ಕೆಲಸ ಮಾಡುವ, ಪರಿಚಯವಿರುವ ಹಲವಾರು ವೈದ್ಯರು ಸೋಂಕಿತರಾಗಿ, ಕಾಯಿಲೆ ಹೆಚ್ಚಾಗಿ ಆಸ್ಪತ್ರೆಯಲ್ಲಿ ಭರ್ತಿಯಾದರು, ಕೆಲವು ವೈದ್ಯರು ಅಸುನೀಗಿದರು.

ಈ ಸಾಂಕ್ರಾಮಿಕದ ಮೊದಲ ಅಲೆ ವ್ಯಾಪಕವಾಗಿರುವಾಗ ನಡೆದ ಬ್ರಿಟನ್ನಿನ ಸಂಶೋಧನೆಗಳಿಂದ ತಿಳಿದು ಬಂದ ಅಂಶವೇನೆಂದರೆ ಸೋಂಕಿತರಲ್ಲಿ ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ಬಂದಿರುವ ಜನರಲ್ಲಿ, ಈ ರೋಗ ಹೆಚ್ಚು ತೀವ್ರವಾಗಿರುತ್ತದೆ ಎನ್ನುವುದು ಮತ್ತು ಹೆಚ್ಚು ಪ್ರಾಣಹಾನಿಯನ್ನು ಮಾಡುತ್ತದೆ ಎನ್ನುವುದು. ಅಷ್ಟೇ ಅಲ್ಲ, ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ಬಂದ ಜನ ಹೆಚ್ಚಾಗಿ ನೆಲೆಸಿರುವ ಪ್ರದೇಶಗಳಲ್ಲಿ ಈ ಸಾಂಕ್ರಾಮಿಕ ಹೆಚ್ಚು ವ್ಯಾಪಕವಾಗಿರುವುದೂ ಕಂಡುಬಂತು.

ಅಂದರೆ ಬ್ರಿಟನ್ ದೇಶದಲ್ಲಿರುವ ಅಲ್ಪಸಂಖ್ಯಾತ ಜನರು ಈ ಕಾಯಿಲೆಯಿಂದಾಗಿ ಹೆಚ್ಚು ಬಳಲುತ್ತಾರೆ, ಹೆಚ್ಚಾಗಿ ಆಸ್ಪತ್ರೆಯಲ್ಲಿ ದಾಖಲಾಗುತ್ತಾರೆ (ಬ್ರಿಟನ್ನಿನಲ್ಲಿ ಎಲ್ಲರಿಗೂ ಆರೋಗ್ಯ ಚಿಕಿತ್ಸೆ ಉಚಿತ), ಆಸ್ಪತ್ರೆಯಲ್ಲಿ ಹೆಚ್ಚು ದಿನ ಇರುತ್ತಾರೆ, ಹಾಗಾಗಿ ಬ್ರಿಟನ್ನಿನ ಆರೋಗ್ಯ ಮತ್ತು ಅರ್ಥ ವ್ಯವಸ್ಥೆಯಲ್ಲಿ ಹೆಚ್ಚಿನ ಪಾಲನ್ನು ಬೇಡುತ್ತಾರೆ, ಅಲ್ಲದೇ ರೋಗವನ್ನೂ ಹೆಚ್ಚು ಜನರಿಗೆ ಹಬ್ಬಿಸುತ್ತಾರೆ ಎಂದಾಯಿತು.

ಲಸಿಕೆ ಬಂದಾಗಲೂ ಕೂಡ, ಬಹುಸಂಖ್ಯಾತರಿಗೆ ಹೋಲಿಸಿದರೆ, ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ವಲಸೆ ಬಂದಿರುವ ಜನರು ಲಸಿಕೆ ಪಡೆಯುವಲ್ಲಿ ಹೆಚ್ಚು ಹಿಂದೇಟು ಹಾಕಿದರು. ಬೇರೆಯವರು ತೆಗೆದುಕೊಂಡು ಬದುಕಿ ಉಳಿದರೆ ನೋಡೋಣ ಎಂದು ಮೂಗು ಮುರಿದರು. ಲಸಿಕೆಯ ಬಗ್ಗೆ ಇಲ್ಲ ಸಲ್ಲದ ತರ್ಕಗಳನ್ನು ಸಾಮಾಜಿಕ ತಾಣಗಳಲ್ಲಿ, ವಾಟ್ಸ್ಯಾಪ್ಪಿನಲ್ಲಿ ಹರಿಬಿಟ್ಟರು.

ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ಬಂದು ಬ್ರಿಟನ್ನಿನಲ್ಲಿ ನೆಲೆಸಿರುವ ಜನರ ವರ್ಣಜನಾಂಗವನ್ನು ತೆಗೆದುಕೊಂಡರೆ ಬಹುತೇಕ ಜನರು ಕಪ್ಪು ಅಥವಾ ಕಂದು ಬಣ್ಣದವರು. ಧರ್ಮವನ್ನು ತೆಗೆದುಕೊಂಡರೆ ಅವರೆಲ್ಲ ಬಹುತೇಕ ಜನ ಇಸ್ಲಾಂ, ಹಿಂದೂ ಅಥವಾ ಸಿಖ್ ಧರ್ಮಕ್ಕೆ ಸೇರಿದವರು. ಹಾಗಿದ್ದರೂ ಕೊರೋನಾ ಸಾಂಕ್ರಾಮಿಕ ಶುರುವಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಒಂದೇ ಒಂದು ಪತ್ರಿಕೆಯೂ, ಒಬ್ಬನೇ ಒಬ್ಬ ರಾಜಕಾರಣಿಯೂ ಕಪ್ಪು ಅಥವಾ ಕಂದು ವರ್ಣದವರ ಬಗೆಯಾಗಲೀ, ಅಥವಾ ಇಸ್ಲಾಂ, ಹಿಂದೂ ಅಥವಾ ಸಿಖ್ ಧರ್ಮಗಳ ಕುರಿತಾಗಲೀ ಕೀಳಾಗಿ ಮಾತನಾಡಿಲ್ಲ, ಉದ್ರೇಕಕಾರಿ ಹೇಳಿಕೆಗಳನ್ನು ಕೊಟ್ಟಿಲ್ಲ; ಬದಲಾಗಿ, ಸಹಾನುಭೂತಿಯನ್ನು ತೋರಿಸಿದ್ದಾರೆ.

ಕೋವಿಡ್ ಸೋಂಕಿತ ರೋಗಿ ಮೃತನಾದಾಗ ಬ್ರಿಟನ್ನಿನ ಆಸ್ಪತ್ರೆಯ ಯಾವುದೇ ಸಿಬ್ಬಂದಿಯಾಗಲಿ ವೈದ್ಯನಾಗಲಿ ಮೃತವ್ಯಕ್ತಿಯ ಬಂಧುಗಳಿಂದ ಒಂದೇ ಒಂದು ಏಟು ತಿಂದು ಹಿಂಸೆಗೊಳಗಾದ ಒಂದೇ ಒಂದು ಘಟನೆಯೂ ಇಲ್ಲಿ ನಡೆದಿಲ್ಲ. ಪರಂತು, ರೋಗಿಗಳು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ, ಬ್ರಿಟನ್ನಿನ ಜನತೆ ತಮ್ಮ ಮನೆಯ ಮುಂದೆ ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳನ್ನು ಹೇಳುವ ಚಿತ್ರಗಳನ್ನು ಹಾಕಿಕೊಂಡಿದ್ದಾರೆ.

ಎಲ್ಲಿ ನಮಗೆ ಬಂದಿರಬಹುದಾದ ಸೋಂಕನ್ನು ಸಂಗಾತಿಗೆ, ಮಕ್ಕಳಿಗೆ ಕೊಡುತ್ತೇವೋ ಎಂದು ಹೆದರುತ್ತಿದ್ದೆವು. ಜೊತೆಗೆ ಕೆಲಸ ಮಾಡುವ, ಪರಿಚಯವಿರುವ ಹಲವಾರು ವೈದ್ಯರು ಸೋಂಕಿತರಾಗಿ, ಕಾಯಿಲೆ ಹೆಚ್ಚಾಗಿ ಆಸ್ಪತ್ರೆಯಲ್ಲಿ ಭರ್ತಿಯಾದರು, ಕೆಲವು ವೈದ್ಯರು ಅಸುನೀಗಿದರು.

ಕಂದುಬಣ್ಣದ ಹಿಂದೂಧರ್ಮಕ್ಕೆ ಸೇರಿದವನಾದ ನಾನು ಈ ಲಾಕ್‍ಡೌನ್ ಸಮಯದ ದೀರ್ಘಾವಧಿಯಲ್ಲಿ ಎಲ್ಲೇ ಹೋದರೂ ಯಾರೂ ನನ್ನನ್ನು ಕೊರೋನಾ ಕಾಯಿಲೆಯನ್ನು ಹಬ್ಬಿಸುವ ವೈರಸ್ಸಿನಂತೆ ನೋಡಿಲ್ಲ. ಆಸ್ಪತ್ರೆಯಲ್ಲಿ ಯಾವ ರೋಗಿಯೂ, ರೋಗಿಯ ಬಂಧುವೂ ನನ್ನನ್ನು ಕೆಂಗಣ್ಣಿನಿಂದ ನೋಡಿಲ್ಲ. ಯಾವ ರಾಜಕಾರಣಿಯೂ, ಯಾವ ಅಂಕಣಕಾರನೂ, ಯಾವ ಪತ್ರಿಕೆಯೂ, ಯಾವ ಟಿವಿ ಚಾನೆಲ್ಲೂ ನನ್ನ ಬಣ್ಣದ ಬಗ್ಗೆ, ಧರ್ಮದ ಬಗ್ಗೆ, ನಿಷ್ಕೃಷ್ಟವಾಗಿ ಮಾತನಾಡಿಲ್ಲ, ಅವಹೇಳನ ಮಾಡಿಲ್ಲ, ಅಷ್ಟರ ಮಟ್ಟಿಗೆ ಅಲ್ಪಸಂಖ್ಯಾತನಾಗಿ ಮತ್ತು ವೈದ್ಯನಾಗಿ ಈ ಕೊರೋನಾದ ಜಾಗತಿಕ ಸಾಂಕ್ರಾಮಿಕದಲ್ಲಿ ಬ್ರಿಟನ್ನಿನಲ್ಲಿ ನಾನು ಸುರಕ್ಷಿತವಾಗಿದ್ದೇನೆ. ಇದನ್ನೆಲ್ಲ ಏಕೆ ಬರೆಯುತ್ತಿದ್ದೇನೆ ಎಂದು ಬಾಯಿಬಿಟ್ಟು ಹೇಳುವ ಅವಶ್ಯಕತೆ ಇಲ್ಲ ಎಂದುಕೊಂಡಿದ್ದೇನೆ.

ಆಯುರ್ವೇದವೋ ಅಲೋಪತಿಯೋ?

ಹೋಮಿಯೋಪತಿಯ ಮೂಲತತ್ತ್ವದ ಪ್ರಕಾರ ಯಾವುದರಿಂದ ಕಾಯಿಲೆ ಬರುತ್ತದೋ ಅದರಿಂದಲೇ ಕಾಯಿಲೆಯನ್ನು ವಾಸಿ ಮಾಡಬಹುದು ಎನ್ನುವುದು. ಕಾಯಿಲೆಯನ್ನು ಗುಣಪಡಿಸಲು ಬೇರೊಂದು ಪದಾರ್ಥವನ್ನು ಬಳಸಿ ಕಾಯಿಲೆಯನ್ನು ಕಡಿಮೆ ಮಾಡಿದರೆ ಅಥವಾ ವಾಸಿ ಮಾಡಿದರೆ, ಅದಕ್ಕೆ ಹತ್ತೊಂಬತ್ತನೇ ಶತಮಾನದ ಆದಿಭಾಗದಲ್ಲಿ ಅಲೋಪತಿ ಎಂದು ಹೆಸರಿಟ್ಟರು, ಹೋಮಿಯೋಪತಿಯಿಂದ ಈ ಆರೋಗ್ಯ ಪದ್ಧತಿಯನ್ನು ಬೇರ್ಪಡಿಸಲು. ಆಧುನಿಕ ವೈದ್ಯಶಾಸ್ತ್ರವನ್ನು ‘ಅಲೋಪತಿ’ ಎಂದು ಎಂದು ಕರೆಯುವುದು ವಾಡಿಕೆ. ಈ ವ್ಯಾಖ್ಯೆಯ ಪ್ರಕಾರ, ಕೆಮ್ಮನ್ನು ಕಡಿಮೆ ಮಾಡಲು, ಡೆಕ್ಸ್‌ಟ್ರೋಮೆಥೊರ್ಫಾನ್ (dextromethorphan) ಕೊಟ್ಟರೂ, ನೀಲಗಿರಿ ಎಣ್ಣೆ ಕೊಟ್ಟರೂ, ಅದು ಅಲೋಪತಿಯೇ ಆಯಿತಲ್ಲವೇ? ಇತ್ತೀಚೆಗೆ ಭಾರತದ ಪ್ರಖ್ಯಾತ ಆಯುರ್ವೇದದ ಉದ್ಯಮಿಯೊಬ್ಬರು,’ಲಕ್ಷಾಂತರ ಕೊರೋನಾ ಸೋಂಕಿತರು ಅಲೋಪತಿಯಿಂದಾಗಿ ಬಲಿಯಾದರು’ ಎಂದು ಮಾಧ್ಯಮದ ಮುಂದೆ ಹೇಳಿ ವಿವಾದಕ್ಕೆ ಎಡೆ ಮಾಡಿಕೊಟ್ಟರು. ಅಲೋಪತಿಯ ವ್ಯಾಖ್ಯೆಯನ್ನು ನೋಡಿದರೆ ಆಯುರ್ವೇದವೂ ಅಲೋಪತಿಯೇ ಅಲ್ಲವೇ?

ಹಾಗೆಯೇ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ತಯಾರು ಮಾಡಿದ ಔಷಧಿಗಳಿಂದ ಅಡ್ಡಪರಿಣಾಮಗಳು ಇರುವುದಿಲ್ಲ, ಆದರೆ ಆಧುನಿಕ ವೈದ್ಯಶಾಸ್ತ್ರದ ಔಷಧಿಗಳಿಂದ ಬಹಳ ಅಡ್ಡಪರಿಣಾಮಗಳು ಆಗುತ್ತವೆ ಎಂದು ಬಹಳಷ್ಟು ಜನರಲ್ಲಿ ಭ್ರಮೆಯಿದೆ. ಹಾಗೆ ನೋಡಿದರೆ, ಆಧುನಿಕ ಔಷಧಿಗಳು ಮಾರುಕಟ್ಟೆಗೆ ಬರುವ ಮೊದಲು ಸಾಕಷ್ಟು ಪ್ರಯೋಗ ಮತ್ತು ಟ್ರಯಲ್‌ಗಳನ್ನು ಸಾಗಿ ಬಂದಿರುತ್ತವೆ, ಆದರೆ ಆಯುರ್ವೇದದ ಹೆಸರಿನಲ್ಲಿ ಬರುವ ಔಷಧಿಗಳ ಪರಿಣಾಮಗಳನ್ನು ಅಡ್ಡಪರಿಣಾಮಗಳನ್ನು ಆಧುನಿಕ ಔಷಧಗಳಷ್ಟು ಕಟ್ಟುಬದ್ಧಾಗಿ ಟ್ರಯಲ್‌ಗಳನ್ನು ಮಾಡಿರುವುದಿಲ್ಲ. ಹಾಗಾಗಿ ಅಂಗಡಿಗಳಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಮತ್ತು ಟಿವಿ ಪತ್ರಿಕೆಗಳಲ್ಲಿ ಜಾಹಿರಾತುಕೊಡುವ, ಆಯುರ್ವೇದದ ಹಣೆಪಟ್ಟಿ ಹಾಕಿಕೊಂಡಿರುವ ಔಷಧಿಗಳಿಂದ ದೂರವಿರುವುದು ಆರೋಗ್ಯಕ್ಕೂ ಒಳ್ಳೆಯದು, ಜೇಬಿಗೂ.. – ಎನ್ನುವುದು ನನ್ನ ಅಭಿಪ್ರಾಯ. ಇದೇ ಮಾತನ್ನು ನಾನು ಅಲೋಪತಿಯ ಹೆಸರಿನಲ್ಲಿ ವೈದ್ಯರ ಚೀಟಿಯಿಲ್ಲದೇ ಸಿಗುವ ಮತ್ತು ಜಾಹೀರಾತುಗಳಲ್ಲಿ ಬರುವ ಔಷಧಿಗಳ ಬಗ್ಗೆಯೂ ಹೇಳುತ್ತೇನೆ.

ಗಾಢಕಾಲಪ್ರಯೋಗ:

ಇತ್ತೀಚೆ ‘ಗಾಢಕಾಲಪ್ರಯೋಗ (Deep Time Experiment)’ದ ನಿಮಿತ್ತ 27ರಿಂದ 50 ವರ್ಷದ 15 ಜನರು ಫ್ರಾನ್ಸ್ ದೇಶದ ಕಗ್ಗತ್ತಲಿನ ಗುಹೆಯೊಂದರಲ್ಲಿ ಬಾಹ್ಯಪ್ರಪಂಚದ ಸಂಪರ್ಕವಿಲ್ಲದೇ, ಫೋನು, ಗಡಿಯಾರಗಳಿಲ್ಲದೇ 40 ದಿವಸ ಬದುಕಿ ಹೊರಗೆ ಬಂದರು. ಗಡಿಯಾರ ಅಥವಾ ಕ್ಯಾಲೆಂಡರ್ ಇಲ್ಲದೇ, ಬಾಹ್ಯ ಸಂಪರ್ಕವಿಲ್ಲದೇ, ದಿನ-ರಾತ್ರಿಯ ಕಲ್ಪನೆಯಿಲ್ಲದೇ ಮನುಷ್ಯನಿಗೆ ಕಾಲಮಾನದ ಬಗ್ಗೆ ಏನು ಅನಿಸುತ್ತದೆ ಎಂದು ತಿಳಿಯುವುದೇ ಈ ಪ್ರಯೋಗದ ಉದ್ದೇಶವಾಗಿತ್ತು.

ನಲವತ್ತನೇ ದಿನ ಗುಹೆಯ ಒಳಗೆ ಹೋಗಿ ಅಲ್ಲಿದ್ದ 15 ಜನರನ್ನು ಹೊರಗೆ ತಂದು ‘ನಲವತ್ತು ದಿನಗಳಾದವು, ಪ್ರಯೋಗ ಮುಗಿಯಿತು’ ಎಂದು ಹೇಳಿದರೆ, ಗುಹೆಯಿಂದ ಹೊರಬಂದ ಜನ ನಂಬಲೇ ಇಲ್ಲ. ‘ಯಾಕೆ ಹತ್ತು ದಿನ ಬೇಗ ನಮ್ಮನ್ನು ಹೊರಗೆ ತಂದಿರಿ?’ ಎಂದು ಬೇಸರ ಮಾಡಿಕೊಂಡರು. ಗುಹೆಯಲ್ಲಿದ್ದವರ ಲೆಕ್ಕದ ಪ್ರಕಾರ ಅವರು ಗುಹೆಯ ಒಳಗೆ ಹೋಗಿ ಬರೀ ಮೂವತ್ತು ದಿನಗಳಾಗಿದ್ದವು.

ಅಂದರೆ ಗುಹೆಯಲ್ಲಿರುವವರಿಗೆ ಮಾನಸಿಕವಾಗಿ ಕಾಲವುನಿಧಾನ ಗತಿಯಲ್ಲಿ ಚಲಿಸುತ್ತಿತ್ತು. ಕಾಲವನ್ನು ಮಾನಸಿಕವಾಗಿ ನಿಧಾನವಾಗಿಸುವ ಈ ಪ್ರಯೋಗವನ್ನು ಸಾವಿರಾರು ವರ್ಷಗಳಿಂದ ಭಾರತದ ಹಿಮಾಲಯದ ತಪ್ಪಲಿನಲ್ಲಿ ಸಾಧಕರು, ಜಪಾನಿನ ಹಿಮಪರ್ವತಗಳಡಿಯಲ್ಲಿ ಯಾಮಾಬುಷಿ ಅನ್ನುವ ಭಿಕ್ಷುಗಳು ಮಾಡುತ್ತಲೇ ಬಂದಿದ್ದಾರೆ. 2020 ಮಾರ್ಚ್ ತಿಂಗಳಿನಿಂದ ಕೊರೋನಾದ ನಿಮಿತ್ತ ಲಾಕ್‌ಡೌನ್‌ ಆದಾಗಿನಿಂದ ನಮ್ಮ ಬದುಕೂ ಕೂಡ ಈ ಗಾಢಕಾಲಪ್ರಯೋಗದಂತೆ, ಯಾಮಾಬುಷಿ ಬಿಕ್ಕುಗಳಂತೆ ಸ್ವಲ್ಪವಾದರೂ ನಿಧಾನವಾಗಿದೆ.

ಬೇಗನೆದ್ದು ಓಡುವ ಆತುರ, ಮಕ್ಕಳ ಶಾಲೆಗೆ ತಡವಾಗುವ ಆತಂಕ, ಕೆಲಸದ ಒತ್ತಡ, ಹಣ ಗಳಿಸಲು ವೇಳೆಯನ್ನು ಮಾರಿಕೊಳ್ಳುವ ತರಾತುರಿ, ವೇಳೆಗೆ ಸರಿಯಾಗಿ ಹೋಗಬೇಕಾದ ಜಾಗಕ್ಕೆ ಹೋಗುತ್ತೇವೆಯೋ ಇಲ್ಲವೋ ಎನ್ನುವ ಉದ್ವೇಗಗಳೆಲ್ಲ ತಕ್ಕಮಟ್ಟಿಗೆ ಕಡಿಮೆಯಾಗಿವೆ. ಪ್ರವಾಹದಲ್ಲಿ ಕೊಚ್ಚಿಕೊಂಡು ಹರಿಯುತ್ತಿದ್ದವರು ಒಂದು ಕೊಂಬೆಯೋ ಕಲ್ಲೋ ಸಿಕ್ಕಾಗ ಆಗುವ ಅನುಭವವನ್ನು ಈ ಕೊರೋನಾ ಲಾಕ್‌ಡೌನ್‌ ಕೆಲವರಿಗಾದರೂ ಕೊಟ್ಟಿದೆ ಅನಿಸುತ್ತೆ. ಹೆಚ್ಚು ಹೆಚ್ಚು ಜನ ವ್ಯಾಯಾಮ ಮಾಡುತ್ತಿದ್ದಾರೆ, ಯೋಗ ಕಲಿಯುತ್ತಿದ್ದಾರೆ, ಬಿಟ್ಟುಹೋದ ಹವ್ಯಾಸಗಳನ್ನು ಮತ್ತೆ ಕೈಗೆತ್ತಿಕೊಳ್ಳುತ್ತಿದ್ದಾರೆ, ಓದು, ಬರಹ, ಸಂಗೀತ, ನೃತ್ಯ, ಚಿತ್ರಕಲೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.