ಬೆರ್ಚಪ್ಪನಿಗೆ ಹಕ್ಕಿಗಳು ಬೆದರುತ್ತವೆಯೇ? ನನಗೀ ಬಗ್ಗೆ ಸಂಶಯವಿದೆ. ಬೆರ್ಚಪ್ಪನ ಹೆಗಲ ಮೇಲೇ ಕೂತು ದಣಿವಾರಿಸಿಕೊಳ್ಳುತ್ತಿರುವ ಹಕ್ಕಿಗಳನ್ನು ನಾನು ಕಂಡಿದ್ದೇನೆ. ಇನ್ನು ಈ ಕುರಿತು ಹಕ್ಕಿಗಳನ್ನು ಕೇಳಿ ಪ್ರಯೋಜನವಿಲ್ಲ. ಅವು ಕಬಳಿ ಹಾಕಿದ ಭತ್ತದ ಹೊಟ್ಟುಗಳನ್ನು ನೋಡಿದರೆ ಗೊತ್ತಾಗುತ್ತದೆ: ಹಕ್ಕಿಗಳು ನಿಜ ಹೇಳಲಾರವು ಎನ್ನುವುದು. ಇದು ಗೊತ್ತಿದ್ದೂ ಪ್ರತಿವರ್ಷವೂ ಬೆರ್ಚಪ್ಪನನ್ನು ನಿಲ್ಲಿಸುತ್ತಾರೆ; ಹೊಲ ಎಂದ ಮೇಲೊಂದು ಬೆರ್ಚಪ್ಪ ಬೇಕೇಬೇಕು ಎಂಬಂತೆ. ಸಂಸ್ಕೃತಿ ಎಂದರೆ ಇದುವೇ.
ಕವಿ ಕೆ.ವಿ. ತಿರುಮಲೇಶರು ಬರೆದ ಬೆರ್ಚಪ್ಪ ಪ್ರಪಂಚ.

 

ನನ್ನ ಕವಿತೆಗಳಲ್ಲಿ ಬರುವ ಕೆಲವು `ಲೋಲಿ ಕ್ಯಾರಕ್ಟರ್ಸ್’ಗಳಲ್ಲಿ ವಿದೂಷಕ ಒಂದು, ಬೆರ್ಚಪ್ಪ ಇನ್ನೊಂದು. ವಿದೂಷಕ ಹಿಂದಿನ ನಾಟಕಗಳಲ್ಲಿನ ಒಂದು ಸ್ಥಿರ ಪಾತ್ರ. ನಮ್ಮ ಕಡೆಯ ಯಕ್ಷಗಾನ ಬಯಲಾಟಗಳಲ್ಲಂತೂ ವಿದೂಷಕ ಬೇಕೇಬೇಕು. ಬೆರ್ಚಪ್ಪ ಗದ್ದೆಗಳ ನಡುವೆ ಹಕ್ಕಿಗಳನ್ನೋಡಿಸಲು ಇರಿಸುವ ಒಂದು ಗೊಂಬೆ. ಈ ಬೆರ್ಚಪ್ಪನ ಹೆಸರಿನಲ್ಲಿ ನಾನೊಂದು ಕತೆಯನ್ನೂ ಬರೆದಿದ್ದೇನೆ: `ಬೆಚ್ಚು ಬೊಮ್ಮ’ ಎಂದು ಅದರ ಹೆಸರು. ಅರ್ಧ ಕನ್ನಡ, ಅರ್ಧ ತೆಲುಗು ಸೇರಿಸಿ, ಬಹುಶಃ ನನ್ನದೇ ಸನ್ನಿವೇಶವನ್ನು ಪ್ರತಿನಿಧಿಸುವಂತೆ, ತಯಾರಿಸಿದ ಶೀರ್ಷಿಕೆ ಇದು. `ಬೊಮ್ಮ’ ಎಂದರೆ ತೆಲುಗಿನಲ್ಲಿ ಬೊಂಬೆ (ಗೊಂಬೆ) ಎಂದು ಅರ್ಥ. ಈ ಪದ ಬಹುಶಃ ಬ್ರಹ್ಮನ ಅವತಾರ ಇರಬೇಕು. ನಾನು ಕತೆಗೆ `ಬೆರ್ಚಪ್ಪ’ ಎಂದು ಹೆಸರು ಇರಿಸಬಹುದಿತ್ತು; ಆದರೆ ಸ್ವಲ್ಪ ನಾವೀನ್ಯತೆ ಇರಲಿ ಎನಿಸಿ ಈ ಹೆಸರು ಇರಿಸಿದೆ.

ಬೆರ್ಚಪ್ಪ ಎನ್ನುವುದು ದಕ್ಷಿಣ ಕನ್ನಡದ ಪ್ರದೇಶದ ಪದಪ್ರಯೋಗ; ಸೀಮೆ ಕನ್ನಡದಲ್ಲಿ `ಬೆದರುಗೊಂಬೆ’ ಎಂದು ಕರೆಯುತ್ತಾರೋ ಏನೋ. ಬೆರ್ಚುವುದು ಎಂದರೆ ಬೆಚ್ಚುವುದು, ಬೆದರುವುದು, ಗಲಿಬಿಲಿಗೊಳ್ಳುವುದು ಎಂದು ಅರ್ಥವಾಗುತ್ತದೆ. `ಬೆಚ್ಚಿಬೀಳು’ ಎನ್ನುವುದಕ್ಕೆ ಹವ್ಯಕದಲ್ಲಿ ಬೆರ್ಚಿಬೀಳು ಎನ್ನುತ್ತಾರೆ. ಕೆಲವು ಬಣ್ಣಗಳನ್ನು ಕಂಡರೆ ಬೆರ್ಚುವ ದನಗಳಿರುತ್ತವೆ. ಅಂಥ ದನಗಳಿಗೆ `ಪೆರ್ಚಿ’ ಇದೆ ಅನ್ನುತ್ತೇವೆ. ಬೆರ್ಚಿಗೆ `ಅಪ್ಪ’ ಸೇರಿ ಬೆರ್ಚಪ್ಪ ಉಂಟಾಗಿದೆ: ಈ `ಅಪ್ಪ’ ಎಂಬ ಪದವನ್ನು (+Human, +Male) ಒಂದು ಪ್ರತ್ಯಯದಂತೆ ಹಚ್ಚಿ ಅಂಕಿತ ನಾಮಗಳನ್ನು ರಚಿಸುವುದು ಕನ್ನಡದ ಒಂದು ಜಾಯಮಾನ ತಾನೆ? ರಾಮಪ್ಪ, ಸೋಮಪ್ಪ, ಭೀಮಪ್ಪ, ವೆಂಕಪ್ಪ, ಸಂಕಪ್ಪ, ಮುದುಕಪ್ಪ, ತಟಪಟಹನಿಯಪ್ಪ ಎಂಬಂತೆ.

ಹೀಗೆ ಈ `ಬೆರ್ಚಪ್ಪ’ ಪದದೊಳಗೆ ಬೆದರಿಕೆ ಇದೆ. ಆದರೆ ಈ ಗೊಂಬೆ ಸ್ವತಃ ಬೆದರುತ್ತದೆ ಎಂದು ಅರ್ಥವಲ್ಲ; ಅದು ಇತರರನ್ನು, ಮುಖ್ಯವಾಗಿ ಹಕ್ಕಿಗಳನ್ನು, ಹೊಲಕ್ಕೆ ಬರದಂತೆ ಬೆದರಿಸುತ್ತದೆ ಎಂದು ತಿಳಿಯಬೇಕು. ಬೆರ್ಚಪ್ಪ ಸಕರ್ಮಕ! ಭತ್ತ, ಧಾನ್ಯ, ತರಕಾರಿ ಬೆಳೆಸುವ ಹೊಲಗಳ ಮಧ್ಯದಲ್ಲಿ ಈ ಗೊಂಬೆಯನ್ನು ಆಳೆತ್ತರಕ್ಕೆ, ಎಲ್ಲರಿಗೂ ಕಾಣಿಸುವಂತೆ ಇರಿಸುತ್ತಾರೆ. ಇದು ಹೊಲಕ್ಕೆ ದಾರಿಹೋಕರ ‘ಕಣ್ಣು ಬೀಳದಿರುವುದಕ್ಕೂ’ ಆಯಿತು!

ಬೆರ್ಚಪ್ಪನನ್ನು ಸಂತೆಯಿಂದ ಖರೀದಿಸಿ ತರುವುದಿಲ್ಲ; ಅದು ಹಾಗೆ ಸಿಗುವುದೂ ಇಲ್ಲ. ಬೇಕಾದಾಗ ನಾವೇ ಮಾಡಿಕೊಳ್ಳುತ್ತೇವೆ. ಹಾಗೂ ಇದನ್ನು ಮಾಡುವುದಕ್ಕೆ ಹೆಚ್ಚೇನೂ ಪರಿಣತಿ ಬೇಡ. ಕೈಗೆ ಸಿಗದ ಸಾಮಗ್ರಿಗಳೂ ಬೇಡ. ಮಾಡುವುದು ಬಹಳ ಸುಲಭ.

ಬೇಕಾದ ಸಾಮಾನುಗಳು: 1. ಮರದ ಎರಡು ಕೋಲುಗಳು, ಒಂದು ಉದ್ದದ್ದು, ಇನ್ನೊಂದು ಅದಕ್ಕಿಂತ ಸ್ವಲ್ಪ ಚಿಕ್ಕದ್ದು; 2. ಸ್ವಲ್ಪ ಬೈಹುಲ್ಲು, ಅಥವಾ ಮುಳಿಹುಲ್ಲು; 3. ಹೊಸ ಅಥವಾ ಹಳೆಯ ಒಂದು ಮಡಕೆ; 4. ಹಳತಾದ ಉದ್ದ ಕೈಯ ಒಂದು ಅಂಗಿ. 5. ಸುಣ್ಣ; 6. ಬೇಕಾದಷ್ಟು ಹಗ್ಗ.

ಮಾಡುವ ವಿಧಾನ: ಉದ್ದದ ಕೋಲನ್ನು ಉದ್ದಕ್ಕೂ, ಚಿಕ್ಕ ಕೋಲನ್ನು ಅದಕ್ಕೆ ಅಡ್ಡವಾಗಿಯೂ ಇರಿಸಿ ಎರಡನ್ನೂ ನಡುವೆ ಬಿಗಿದು ಕಟ್ಟುವುದು. ಇದು ಯೇಸು ಕ್ರಿಸ್ತನನ್ನು ಏರಿಸಿದ ಶಿಲುಬೆಯಂತೆ ಕಾಣಿಸುತ್ತದೆ. ಈಗ ಉದ್ದದ ಕೋಲಿನ ಕೆಳಭಾಗ ಸೊಂಟ ಮತ್ತು ಕಾಲು, ಮೇಲಿನ ಭಾಗ ಕುತ್ತಿಗೆ ಎಂತಲೂ ತಿಳಕೊಳ್ಳಬೇಕು. ಅಡ್ಡಕೆ ಕಟ್ಟಿದ ಕೋಲಿನ ಆಚೀಚಿನ ಭಾಗಗಳು ತೋಳುಗಳು ಎಂತ ಲೆಕ್ಕ. ಇಷ್ಟಾದ ನಂತರ ದೇಹಾಂಗಗಳಿಗೆ ಬೇಕಾದಂತೆ ಬೈಹುಲ್ಲು ಅಥವಾ ಮುಳಿಹುಲ್ಲು ಸುತ್ತಿ ಹಗ್ಗದಿಂದ ಕಟ್ಟುವುದು. ಆಮೇಲೆ ಅದಕ್ಕೆ ಅಂಗಿ ಸುರಿಯುವುದು. ಪೈಜಾಮ ಅಥವಾ ಪ್ಯಾಂಟ್ಸ್? ಬೇಡ, ಅಷ್ಟೊಂದು ರಿಯಲಿಸಂ ಅಗತ್ಯವಿಲ್ಲ. ಇದ್ದರೆ ಸರಿ, ಇಲ್ಲದಿದ್ದರೆ ತಲೆಕೆಡಿಸಿಕೊಳ್ಳುವುದು ಬೇಡ. ಮಾನ ಮುಚ್ಚುವಷ್ಟು ಅಂಗಿ ಸೊಂಟದಿಂದ ಇಳಿಬಿದ್ದಿದ್ದರೆ ಸಾಕು—ಅದಲ್ಲದಿದ್ದರೆ ಒಬ್ಬ ಮನುಷ್ಯನನ್ನೇ ನಿಲ್ಲಿಸಬೇಕಾಗುತ್ತದೆ! (ಯಾಕೆಂದರೆ, ನಾವಿಲ್ಲಿ ಮಾಡುತ್ತಿರುವುದು ಒಂದು ಗೊಂಬೆಯನ್ನಲ್ಲದೆ ನಿಜವಾದ ಕಾವಲುಗಾರನನ್ನಲ್ಲ! ಕೆಲವು ಕತೆಗಾರರು ವಾಸ್ತವತೆ ತರಬೇಕು ಎಂದುಕೊಂಡು ವರದಿಯನ್ನೇ ಬರೆದುಬಿಡುತ್ತಾರೆ. ಆಗ ಕತೆ ಹೊರಟುಹೋಗಿ ವರದಿ ಉಳಿಯುತ್ತದೆ. ಅದೇ ರೀತಿ ಬೆರ್ಚಪ್ಪನನ್ನು ನಿಜವಾದ ವ್ಯಕ್ತಿಯಂತೆ ನಾಜೂಕಾಗಿ ತಯಾರಿಸಿದರೆ ಮತ್ತೆ ಬೆರ್ಚಪ್ಪ ಇರುವುದಿಲ್ಲ!)

ಈಗ ಮಡಕೆಗೆ ಕಣ್ಣುಗಳ ಎರಡು ತೂತುಗಳು, ಬಾಯಿಯ ಒಂದು ತೂತು ತೆಗೆಯಬೇಕು. ಸುಣ್ಣವನ್ನು ನೀರಿನಲ್ಲಿ ಮಿದು ಮಾಡಿ ಇಟ್ಟುಕೊಂಡು ಮಡಕೆಗೆ ಅಲ್ಲಲ್ಲಿ ಬೊಟ್ಟುಗಳನ್ನು ಹಾಕುವುದು. ಅದಕ್ಕೆ ಹೀಗೇ ಎಂಬ ನಿಯಮವೇನೂ ಇಲ್ಲ. ಎಷ್ಟು ಬೊಟ್ಟು ಎನ್ನುವುದರಲ್ಲಿ ಅರ್ಥವಿಲ್ಲ. ಬರಿಯ ಸ್ವಾರ್ಥ. ನಂತರ ಈ ಮಡಕೆಯನ್ನು ಮೇಲಿನ ಕೋಲಿಗೆ ಸಿಕ್ಕಿಸಿದರೆ ಬೆರ್ಚಪ್ಪ ತಯಾರು. ಇನ್ನು ಅದಕ್ಕೆ ಬೂಟು ತೊಡಿಸುವುದು, ಕಾಲಾ ಚಶ್ಮ ಇರಿಸುವುದು, ಬೆಲ್ಟ್ ಕಟ್ಟುವುದು ಇತ್ಯಾದಿ ಏಡ್-ಓನ್ಸ್ ನಿಮಗೆ ಬಿಟ್ಟದ್ದು. ಈ ಬೆರ್ಚಪ್ಪನನ್ನು ಹೊಲದ ಮಧ್ಯೆ ಎಲ್ಲರಿಗೂ ಕಾಣಿಸುವಂತೆ ಇನ್ನೊಂದು ಕೋಲಿಗೆ ಕಟ್ಟಿ ಊರಿದರಾಯಿತು.
This is our Installation!

ಅರ್ಥಾತ್ ಇನ್ಸ್ಟಲೇಶನ್ ಆರ್ಟ್. ಒರಿಜಿನಲ್ ಅಲ್ಲದಿದ್ದರೇನಾಯಿತು? ಪರಂಪರೆಯಿಂದ ಬಂದುದು. ನಮ್ಮ ದೇಸೀ ಪರಂಪರೆ. ಪೇಟೆಯವರಿಗೆ ಥ್ರಿಲ್ ನೀಡುವಂಥದು. ಆದರೂ ನಮ್ಮ ಯಾವ ದೇಸೀವಾದಿಗಳೂ ಈ ಬೆರ್ಚಪ್ಪನನ್ನು ಹೊಗಳಿ ಬರೆದುದಿಲ್ಲ. ಇದರ ಮೂಲವೇನು, ಕತೆಯೇನು ಎಂಬ ಕುರಿತು ವಿವರಗಳೇ ಇಲ್ಲವಲ್ಲ.

ಆದರೆ ಜನರು ಬೆರ್ಚಪ್ಪನನ್ನು ಒಂದು ಕಲಾವಿನ್ಯಾಸವನ್ನಾಗಿ ಕಲ್ಪಿಸುವುದಿಲ್ಲ. ಹೊಲಕ್ಕೆ ಹಕ್ಕಿಗಳು ಬರದಂತೆ ಬೆದರಿಸುವ ಒಂದು ಗೊಂಬೆಯಾಗಿ ಕಲ್ಪಿಸುತ್ತಾರೆ. ಅಷ್ಟಕ್ಕೂ ಬೆರ್ಚಪ್ಪನ ಕಲ್ಪನೆ ನಮ್ಮ ಜನರಿಗೆ ಮಾತ್ರವೇ ಸೀಮಿತ ಎನ್ನುವಂತೆಯೂ ಇಲ್ಲ. ಇದೊಂದು ಜಾಗತಿಕ ಕಲ್ಪನೆ. ಧಾರ್ಮಿಕ ಮೂಲದ್ದೇ ಅಥವಾ ಕರ್ಷಕ ಮೂಲದ್ದೇ ಎನ್ನುವುದು ಚಿಂತಿಸತಕ್ಕ ವಿಷಯ; ಎರಡೂ ಆಗಿರಬಹುದು. ಜಪಾನೀ ಭಾಷೆಯಲ್ಲಿ ಬೆರ್ಚಪ್ಪನಿಗೆ Kuebiko ಎನ್ನುತ್ತಾರಂತೆ. ಹಾಗಂದರೆ ಒಂದು ದೈವ. ಇದು ನಡೆಯಲಾರದು, ಆದರೆ ಎಲ್ಲವನ್ನೂ ತಿಳಕೊಂಡಿರುತ್ತದೆಯಂತೆ. ಅಂಥದೊಂದು ದೈವ ಹೊಲಕ್ಕೆ ಕಾವಲುಗಾರ ಆಯಿತು. ದಕ್ಷಿಣ ಕನ್ನಡದ ನಮ್ಮ ಕಡೆ ಬೆರ್ಚಪ್ಪನನ್ನು ದೈವೀಕರಿಸುವುದಿಲ್ಲ. ಬಹುಶಃ ನಮ್ಮಲ್ಲಿ ಈಗಾಗಲೇ ಸಾಕಷ್ಟು ಸಂಖ್ಯೆಯ ದೈವಗಳು ಇರುವುದರಿಂದ ಬೆರ್ಚಪ್ಪನನ್ನೂ ಒಂದು ದೈವವಾಗಿ ಮಾಡುವ ಅಗತ್ಯ ಬರಲಿಲ್ಲವೇನೋ. ವಾಸ್ತವದಲ್ಲಿ ಅದಕ್ಕೂ ಒಂದು ವಾರ್ಷಿಕ ಜಾತ್ರೆ ಇದ್ದಿದ್ದರೆ ಒಳ್ಳೇದಿತ್ತು.

ಜಾಗತಿಕವಾಗಿ ನೋಡುವುದಿದ್ದರೆ ಬೆರ್ಚಪ್ಪ ಬಹುಶಃ ಕೃಷಿಮೂಲದ ಗೊಂಬೆ. ಲೋಕದ ಹೆಚ್ಚಿನ ಭಾಷೆಗಳಲ್ಲೂ ಇದಕ್ಕೆ ಆಯಾ ಭಾಷೆಯ ಹೆಸರಿದೆ. ಜಪಾನೀ ಹೆಸರನ್ನು ನೋಡಿದೆವು. ಒಂದೇ ಭಾಷೆಯೊಳಗೂ ಪ್ರಾದೇಶಿಕ ವ್ಯತ್ಯಾಸಗಳಿವೆ. ಇಂಗ್ಲೆಂಡ್ ನಷ್ಟು ಚಿಕ್ಕ ದೇಶದಲ್ಲೇ ಹಲವಾರು ಹೆಸರುಗಳು ಪ್ರಚಲಿತ:

Scare-crow: England
Hay-man: England
Hodmedod: Berkshire
Murmet: Devon
Mommet: Somerset
Bwbak: Wales
Bodach-rocais:Scotland
Tattie bogle: Scotland

ಎಂದರೆ ಇದೆಷ್ಟು ನೆಲಕ್ಕೆ ಅಂಟಿಕೊಂಡಿರುವಂಥ `ಗುಮ್ಮ’ ಎನ್ನುವುದು ಗೊತ್ತಾಗುತ್ತದೆ. ಹೊಲ ಮನೆ, ನೊಗ ನೇಗಿಲುಗಳ ಹಾಗೆಯೇ. ಚಂದದ ಹೆಸರುಗಳು ಅಲ್ಲವೇ? ಇನ್ನು ಇಂಗ್ಲಿಷ್ ನ scare-crow ಎಂಬ ಪದದ ಶಬ್ದಾರ್ಥ ಗಮನಿಸಿ: ಕಾಗೆಯನ್ನು ಹೆದರಿಸುವಂಥದು ಎಂದರ್ಥ; ಇಲ್ಲಿ ಕಾಗೆ ಎಂದರೆ ಹೊಲಕ್ಕೆ ಉಪದ್ರ ಕೊಡುವ ಎಲ್ಲಾ ಹಕ್ಕಿಗಳೂ ಆದುವು. ಅದೇ ರೀತಿ, Hay-man ಎಂದರೆ ಬೈಹುಲ್ಲಿನ ಮನುಷ್ಯ; ಯಾವ ಹುಲ್ಲಿಂದಾದರೂ ಇದನ್ನು ಮಾಡಬಹುದು. ಆದರೆ ಹೊಲದ್ದೇ ಅದ ಬೈಹುಲ್ಲು ಇದಕ್ಕೆ ಜನಪ್ರಿಯ ಕಚ್ಚಾವಸ್ತು. ಸ್ಕಾಟಿಶ್ ನ Bodach-rocais ಎಂದರೆ `ಕಾಗೆಗಳ ಮುದಿಯ’ (‘ಮುದಿ ಕಾಗೆ’) ಎಂದರ್ಥ. ಮಲೇಶಿಯನ್ ಭಾಷೆಯಲ್ಲಿ ಬೆರ್ಚಪ್ಪನಿಗೆ Orang-orang ಎನ್ನುತ್ತಾರಂತೆ! (ಇದು ಬಹುಶಃ Orang-utan ‘ಚಿಂಪಾಂಜಿ ಜಾತಿಯ ಮರಕೋತಿ’ ಎಂಬ ಪದದಿಂದ ಬಂದಿರಬಹುದು.) ಹೀಗೆ ಈ ಬೆರ್ಚಪ್ಪನ ಪದಗಳು ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವರ್ಣರಂಜಿತವಾಗಿ ಮೂಡಿಬಂದಿವೆ. ಮುಖ್ಯವಾದ ವಿಷಯವೆಂದರೆ ಬೆರ್ಚಪ್ಪ ಎನ್ನುವುದು ಹಳ್ಳಿಮಕ್ಕಳ ಮನಸ್ಸಿನ ಒಂದು ಭಾಗವಾಗಿಹೋಗಿದ್ದು ಅವರ ಕಲ್ಪನಾಶಕ್ತಿಯನ್ನು ಕೆರಳಿಸುವಂಥ ಒಂದು `ಬೆಂತರ’, ಗುಮ್ಮ ಅಥವಾ ಗುಮ್ಮನ ತಮ್ಮ.

ಬೆರ್ಚಪ್ಪನಿಗೆ ಹಕ್ಕಿಗಳು ಬೆದರುತ್ತವೆಯೇ? ನನಗೀ ಬಗ್ಗೆ ಸಂಶಯವಿದೆ. ಬೆರ್ಚಪ್ಪನ ಹೆಗಲ ಮೇಲೇ ಕೂತು ದಣಿವಾರಿಸಿಕೊಳ್ಳುತ್ತಿರುವ ಹಕ್ಕಿಗಳನ್ನು ನಾನು ಕಂಡಿದ್ದೇನೆ. ಇನ್ನು ಈ ಕುರಿತು ಹಕ್ಕಿಗಳನ್ನು ಕೇಳಿ ಪ್ರಯೋಜನವಿಲ್ಲ. ಅವು ಕಬಳಿ ಹಾಕಿದ ಭತ್ತದ ಹೊಟ್ಟುಗಳನ್ನು ನೋಡಿದರೆ ಗೊತ್ತಾಗುತ್ತದೆ: ಹಕ್ಕಿಗಳು ನಿಜ ಹೇಳಲಾರವು ಎನ್ನುವುದು. ಬೆರ್ಚಪ್ಪ ನೆಟ್ಟ ನೋಟದಲ್ಲಿ ನಿಂತುಕೊಂಡೇ ಇರುತ್ತದೆ (ಇರುತ್ತಾನೆ?); ಹಕ್ಕಿಗಳು ತಮ್ಮ ಪಾಡಿಗೆ ತಾವು ಬಂದು ಬೇಕಷ್ಟು ತಿಂದುಕೊಂಡು ಹೋಗುತ್ತವೆ. ಇದು ಗೊತ್ತಿದ್ದೂ ಪ್ರತಿವರ್ಷವೂ ಬೆರ್ಚಪ್ಪನನ್ನು ನಿಲ್ಲಿಸುತ್ತಾರೆ; ಹೊಲ ಎಂದ ಮೇಲೊಂದು ಬೆರ್ಚಪ್ಪ ಬೇಕೇಬೇಕು ಎಂಬಂತೆ. ಸಂಸ್ಕೃತಿ ಎಂದರೆ ಇದುವೇ.

ತರಕಾರಿ ಹೊಲಗಳಲ್ಲಿ ಈ ಬೆರ್ಚಪ್ಪನ ಕೆಲಸ ಹಕ್ಕಿಗಳನ್ನು ಓಡಿಸುವುದಕ್ಕಿಂತಲೂ, ದೃಷ್ಟಿಬೊಟ್ಟಾಗಿ ಇರುವುದು. `ಓಹೋ ದೇವಲೋಕದ ಹಾಗಿದೆ ತರಕಾರಿ ಬೆಳೆ!’ ಎಂದು ಕೆಲವರು ಹೇಳಿಬಿಟ್ಟರೆ ಬೆಳೆಯ ಗತಿ ಏನು? ಮುಗಿದಂತೆಯೇ. ಸಂಪೂರ್ಣ ನಾಶವಾಗಿಬಿಡುತ್ತದೆ- ಹಾಗೆಂತ ನಾವು ಕೇಳಿದ್ದೇವೆ. ಇದಕ್ಕೆ `ಕಣ್ಹಾಕುವುದು’, `ಕಣ್ಣು ತಾಗುವುದು’, `ದೃಷ್ಟಿ ಸೋಂಕುವುದು’, `ದೃಷ್ಟಿ ಬಡಿಯುವುದು’ ಎಂದು ಮುಂತಾಗಿ ಅನ್ನುತ್ತಾರೆ.

ಈ `ಬೆರ್ಚಪ್ಪ’ ಪದದೊಳಗೆ ಬೆದರಿಕೆ ಇದೆ. ಆದರೆ ಈ ಗೊಂಬೆ ಸ್ವತಃ ಬೆದರುತ್ತದೆ ಎಂದು ಅರ್ಥವಲ್ಲ; ಅದು ಇತರರನ್ನು, ಮುಖ್ಯವಾಗಿ ಹಕ್ಕಿಗಳನ್ನು, ಹೊಲಕ್ಕೆ ಬರದಂತೆ ಬೆದರಿಸುತ್ತದೆ ಎಂದು ತಿಳಿಯಬೇಕು. ಬೆರ್ಚಪ್ಪ ಸಕರ್ಮಕ! ಭತ್ತ, ಧಾನ್ಯ, ತರಕಾರಿ ಬೆಳೆಸುವ ಹೊಲಗಳ ಮಧ್ಯದಲ್ಲಿ ಈ ಗೊಂಬೆಯನ್ನು ಆಳೆತ್ತರಕ್ಕೆ, ಎಲ್ಲರಿಗೂ ಕಾಣಿಸುವಂತೆ ಇರಿಸುತ್ತಾರೆ. ಇದು ಹೊಲಕ್ಕೆ ದಾರಿಹೋಕರ ‘ಕಣ್ಣು ಬೀಳದಿರುವುದಕ್ಕೂ’ ಆಯಿತು!

ಕಣ್ಹಾಕುವಂಥ ದುಷ್ಟ ದೃಷ್ಟಿಶಕ್ತಿಯಿರುವವರು ಊರಿನಲ್ಲಿ ಕೆಲವರಾದರೂ ಇರುತ್ತಾರೆ. `ಎಷ್ಟು ಚಂದ ಇದೆ ಮಗು! ತಿಂಗಳಿನಲ್ಲಿ ತೊಳೆದ ಹಾಗೆ!’ ಅಂತ ಅಂದುಬಿಡುತ್ತಾರೆ. ಆವತ್ತು ರಾತ್ರೆ ಮಗುವಿಗೆ ಜ್ವರ; ಮರುದಿನ ನೀವು ಹೆಂಡತಿಮಗು ಸಮೇತ ಡಾಕ್ಟರಲ್ಲಿಗೆ ಪ್ರಯಾಣ. ಏನಾಯಿತು ಎಂದು ಡಾಕ್ಟರ್ ಕೇಳಿದರೆ ನೀವು ನಿನ್ನೆ ನಡೆದ ಘಟನೆಯನ್ನು ವಿವರಿಸುತ್ತೀರಿ; ಎಂದರೆ ಯಾರೋ ಒಬ್ಬರ ದೃಷ್ಟಿ ಬಡಿಯಿತು ಎಂದು. ಡಾಕ್ಟರ್ ಹಾಂ ಅನ್ನುವುದಿಲ್ಲ, ಹೂಂ ಎನ್ನುವುದಿಲ್ಲ. ಮಗುವಿನ ಪರೀಕ್ಷೆ ಮಾಡಿ ಔಷಧಿ ಕೊಡುತ್ತಾರೆ. ಒಂದು ದೃಷ್ಟಿ ಬೊಟ್ಟಿನಲ್ಲಿ ಹೋಗುವ ಜ್ವರಕ್ಕೆ ನೂರು ರೂಪಾಯಿ ಖರ್ಚು! ಯಾಕೆಂದರೆ ನಿಮ್ಮ ಮಗುವಿಗೆ ದೃಷ್ಟಿ ಬೊಟ್ಟು ಇರಿಸಲು ನಿನ್ನೆ ನೀವು ಮರೆತಿರುತ್ತೀರಿ, ಅಥವಾ ಲೆಕ್ಕಕ್ಕಿಂತ ತುಸು ಜಾಸ್ತಿಯೇ ವಿಚಾರಶೀಲರಾಗಿ ಇದನ್ನು ಮೂಢನಂಬಿಕೆಯೆಂದು ಧಿಕ್ಕರಿಸಿರುತ್ತೀರಿ. ಈ ಕಣ್ಹಾಕುವವರಾದರೂ ಬೇಕೆಂತಲೇ ನಿಮ್ಮ ತೋಟವನ್ನೋ ಮಗುವನ್ನೋ ಕೆಡಿಸಬೇಕು ಎನ್ನುವ ಉದ್ದೇಶ ಇಟ್ಟುಕೊಂಡಿರುವುದಿಲ್ಲ.

ಅವರು ಬರುತ್ತಾರೆ, ನೋಡುತ್ತಾರೆ, ಅವರ ಬಾಯಿಂದ ಒಂದು ರೂಪಕ ಬಂದು ಬಿಡುತ್ತದೆ ಅಷ್ಟೆ; ಅಲ್ಲದೆ ಅವರು ಹೇಳುವ ಮಾತು ನಿಜವೇ ಇರಬಹುದು; ಎಂದರೆ ನಿಮ್ಮ ತರಕಾರಿ ಬೆಳೆ ಅಥವಾ ಮಗು ತುಂಬಾ ಚಂದ ಇರಬಹುದು. ಆದರೆ ಹಾಗೆ ಅವರು ಬಾಯಿತೆರೆದು ಹೇಳಿಬಿಟ್ಟರೆ ಅಪಾಯ! ಕೆಲವು ಹೆಂಗಸರಿಗೆ ಗೊತ್ತಿರುತ್ತದೆ, ತಮ್ಮ ಗಂಡನಿಗೆ ಇಂಥ ಅಭ್ಯಾಸವಿದೆ ಎಂಬುದಾಗಿ; ಅದ್ದರಿಂದ ಗಂಡ ಮನೆಯಿಂದ ಹೊರಟಾಗಲೇ ಅವರು ಸಾಕಷ್ಟು ತಾಕೀತು ಮಾಡಿರುತ್ತಾರೆ, ಅಲ್ಲಿ ಹೋಗಿ ಏನಾರೂ ಹೇಳಬೇಡಿ ಮತ್ತೆ, ಎಂದು! ಗಂಡನೇನೋ ಒಪ್ಪಿದಂತೆ ತಲೆ ಆಡಿಸುತ್ತಾನೆ; ಆದರೆ ಅವನ ನಾಲಿಗೆ ಸುಮ್ಮನಿರಬೇಕಲ್ಲ! ಏನೋ ನುಡಿದುಬಿಡುತ್ತದೆ. ಅಷ್ಟು ಸಾಕು ಆ ವಸ್ತುವಿಗೆ ಗತಿ ಕಾಣಿಸುವುದಕ್ಕೆ: ಮಗುವಿಗೆ ಜ್ವರ ಬರುತ್ತದೆ, ನಾಯಿ ಲಾಚಾರಿಯಾಗಿ ಸತ್ತುಹೋಗುತ್ತದೆ, ಬೆಕ್ಕು ನಾಪತ್ತೆ, ದನದ ಕೆಚ್ಚಲಲ್ಲಿ ಬಾವು, ಮನೆ ಮುಂದೆ ಮೈತುಂಬಾ ಹೂ ಬಿಡುತ್ತಿದ್ದ ದಾಸನ ಗಿಡಕ್ಕೆ ಹುಳ! ತರಕಾರಿ ತೋಟವಂತೂ ನಾಶ. ಕಣ್ಣು ಬೀಳದಿರಲಿ ಎಂದು ಎಷ್ಟೆಂದು ಅಡಗಿಸುವುದು ಸಾಧ್ಯ?

ಅದ್ದರಿಂದಲೇ ಅಲ್ಲವೇ ಮಕ್ಕಳ ಮುದ್ದುಕೆನ್ನೆಗಳ ಮೇಲೆ ಕಪ್ಪು ಮಸಿಯಿಂದ ಬೊಟ್ಟಿಡುವುದು? ಇದಕ್ಕೆ `ದೃಷ್ಟಿಬೊಟ್ಟು’ ಅನ್ನುತ್ತಾರೆ. ಇಂಥ ಬೊಟ್ಟು ಇದ್ದರೆ ಕಣ್ಣಡುವವರ ದೃಷ್ಟಿ ಮಗುವಿಗೆ ಸೋಂಕುವುದಿಲ್ಲ ಎಂದು ನಂಬಿಕೆ. ಈ ಬೊಟ್ಟು ಅವರ ಮಾತಿನ ಕೆಟ್ಟುದನ್ನು ಹೀರಿಕೊಳ್ಳುತ್ತದೆ. ಬೊಟ್ಟು ದೊಡ್ಡದಾದಷ್ಟೂ ಹೀರುವ ಸಾಮರ್ಥ್ಯ ಅದಕ್ಕೆ ಜಾಸ್ತಿ.

ನನ್ನ ಚಿಕ್ಕಂದಿನಲ್ಲಿ ಒಂದು ಕತೆ ಕೇಳಿದ್ದೆ. ಒಂದು ಊರಿನಲ್ಲಿ ಹೀಗೆ ಕಣ್ಹಾಕುವ ಒಬ್ಬ ಮಹರಾಯ ಇದ್ದ. ಅವನು ಒಂದು ಆರೋಗ್ಯವಂತ ಕೋಣನನ್ನು ನೋಡಿ, ಯಾವಾಗ ಬಂದ್ಯೋ ಯಮಲೋಕದಿಂದ ಎಂದರೆ ಸಾಕು, ಆ ಕೋಣ ವಾಪಸು ಯಮಲೋಕಕ್ಕೆ ಹೋದಂತೆಯೇ. ಈ ಕಣ್ಹಾಕುವವ ಬರುವುದು ಗೊತ್ತಾದರೆ, ಊರವರು ತಮ್ಮ ಅಮೂಲ್ಯ ವಸ್ತುಗಳನ್ನು ಅಡಗಿಸಿಡುತ್ತಿದ್ದರಂತೆ. ಹೀಗಿರಲು ಒಮ್ಮೆ ಅದೇ ಊರಿನ ಯಜಮಾನರೊಬ್ಬರಿಗೆ ಸಮಸ್ಯೆಯೊಂದು ಬಂತು. ಅವರಿಗೆ ಹೊಸ ಮನೆ ಕಟ್ಟಿಸಬೇಕೆಂಬ ಮನಸ್ಸಾಯಿತು. ಅದಕ್ಕೆ ಅಗೆತ ಸುರುವಾದಾಗ ಮಣ್ಣಿನ ಕೆಳಗೊಂದು ಹೆಬ್ಬಂಡೆ ಕಾಣಿಸಿತು. ಇದನ್ನು ಒಡೆಯುವುದಕ್ಕೆ ಸಿಡಿಮದ್ದು ತರಿಸುವುದು ಸುಲಭವಾಗಿರಲಿಲ್ಲ. ಆಗ ಯಾರೋ ಸಲಹೆಮಾಡಿದರು: ಈ ನಮ್ಮ ಕಣ್ಹಾಕುವವನ ಕರೆಸೋಣ ಅಂತ. ಬಂಡೆಗೆ ಬಿಳಿ ವಸ್ತ್ರ ಹೊದೆಸಿಟ್ಟು ಅವನನ್ನು ಉಪಾಯದಿಂದ ಅಲ್ಲಿಗೆ ಬರಮಾಡಿಕೊಂಡರು. ಯಾಕೆ ಏನೆಂಬುದಕ್ಕೆ ಅದೇನೋ ಸುಳ್ಳು ಹೇಳಿದ್ದರು. ಅವನ ಕಣ್ಣಿಗೆ ಈ ವಸ್ತ್ರ ಹೊದೆಸಿಟ್ಟ ಬಂಡೆಗಲ್ಲು ಕಾಣಿಸಿದ್ದೇ `ದಾನೆಯ ಬೊಳ್ಳ, ಬೊಳ್ಪಾತು ಸಮಯ ಏತಾಂಡ್? ಲಕ್ಯಾರ ಆತಿದ್ಯ ಮಾರಾಯ ನೀಕು?’ ಎಂದೇನೋ ಅಂದುಬಿಟ್ಟ, ತುಳುವಿನಲ್ಲಿ; ಎಂದರೆ `ಏನು ಬಿಳಿಯ, ಬೆಳಗಾಗಿ ಸಮಯ ಎಷ್ಟಾಯ್ತು? ಏಳೋದಕ್ಕೆ ಆಗಿಲ್ವೆ ಮಾರಾಯ ನಿನಗೆ?’ ಎಂದು, ಬಂಡೆಯನ್ನು ಇನ್ನೂ ಎಚ್ಚರಾಗದೆ ನಿದ್ರಿಸುತ್ತಿದ್ದ ಕೋಣ ಎಂಬ ರೀತಿಯಲ್ಲಿ ಉದ್ದೇಶಿಸಿ. ಸರಿ, ಅವನ ಜತೆ ಯಜಮಾನರು ಅದೇನೋ ಮಾತಾಡಿ ಕಳಿಸಿಯಾಯಿತು. ಆದರೆ ಅವನಿನ್ನೂ ಬೇಲಿ ದಾಟಬೇಕಾದರೆ ಎಲ್ಲರೂ ನೋಡನೋಡುತ್ತಿದ್ದಂತೆ ಬಂಡೆ ಸಿಡಿದು ನುಚ್ಚುನೂರು! ಇದೊಂದು ಅತ್ಯುತ್ಪ್ರೇಕ್ಷೆಯ ಕತೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ಕಡೆಯ ಯಾರನ್ನಾದರೂ ಕೇಳಿ ನೋಡಿ, ಅವರಿಗೆ ಈ ಕತೆಯ ಒಂದಲ್ಲ ಒಂದು ಆವೃತ್ತಿ ಗೊತ್ತಿರುತ್ತದೆ.

(ಗಮನಿಸಬೇಕಾದ ಸಂಗತಿಯೆಂದರೆ: ಕೆಡುಗಣ್ಣಿನ ಮಂದಿ ಯಾವಾಗಲೂ ರಂಗುರಂಗಾಗಿ ಮಾತಾಡುತ್ತಾರೆ—ಉಪಮೆ, ರೂಪಕ ಇತ್ಯಾದಿಗಳನ್ನು ಬಳಸಿ. ಆದ್ದರಿಂದ ಸಾಮಾನ್ಯ ಜನರು ಖಾಸಗಿ ಮಾತಿನಲ್ಲಿ ಇಂಥ ಅಲಂಕಾರಗಳನ್ನು ಬಳಸುವುದಕ್ಕೆ ಹಿಂಜರಿಯುತ್ತಾರೆ—ತಾವು ಹೇಳಿದ್ದು ಎಲ್ಲಾದರೂ ಕೆಡುಕಾಗಿ ಪರಿಣಮಿಸಿದರೆ ಎಂಬ ಭಯದಲ್ಲಿ!)

ಇದೇ ಕಾರಣಕ್ಕೆ ಹೊಸ ಕಟ್ಟಡಗಳನ್ನು, ಮನೆಗಳನ್ನು ಕಟ್ಟುವಾಗ ಪೆಡಂಬೂತದ ತಲೆಗಳಂಥ ಆಕೃತಿಗಳನ್ನು ಎದುರಿಗೆ ತೂಗಿಹಾಕುವ ಪರಿಪಾಠ ಬಂದಿರಬೇಕು. ಇಂಥ ಆಕೃತಿಗಳಾದರೆ ಬಹುಶಃ ಅಂಗಡಿಗಳಲ್ಲಿ ಖರೀದಿಸಲು ಸಿಗುತ್ತವೆ ಎಂದು ತೋರುತ್ತದೆ. ಯಾಕೆಂದರೆ ರೀಯಲ್ ಎಸ್ಟೇಟ್ ಧಂಧೆಯಿಂದಾಗಿ ಈಗ ಈ ಮನೆ ಕಟ್ಟುವವರ ಸಂಖ್ಯೆ ಜಾಸ್ತಿಯಾಗಿದೆ. (ಕೆಲವರು ಬೂದುಗುಂಬಳವನ್ನು—ಅದರಲ್ಲೇನೋ ನೆಗೆಟಿವ್ ಶಕ್ತಿಯಿದೆ ಎಂದುಕೊಂಡು—ತೂಗಿಹಾಕುತ್ತಾರೆ; ಅದಕ್ಕೊಂದು ತಲೆಬುರುಡೆಯ ಆಕಾರ ಇದೆಯಷ್ಟೆ. ಒಡೆದರೆ ಅದು ಒಡೆಯಲಿ ಎಂದು.)

ಕೆಡುಗಣ್ಣಿಗೆ ಇಂಗ್ಲಿಷ್ನಲ್ಲಿ Evil Eye ಎನ್ನುತ್ತಾರೆ. ಆದರೆ ಇದು ಮೂಲತಃ ಯುರೋಪಿಯನ್ ಕಲ್ಪನೆಯೆಂದು ಅನಿಸುವುದಿಲ್ಲ. ಮುಖ್ಯವಾಗಿ ಮೆಡಿಟರೇನಿಯನ್ ಮತ್ತು ಏಶಿಯಾಟಿಕ್ ಕಲ್ಪನೆಯಿರಬಹುದು. ಅರೆಬಿಕ್, ಹೀಬ್ರೂ, ಪರ್ಶಿಯನ್, ಟರ್ಕಿಶ್, ಅಫ್ಘಾನೀ, ಭಾರತೀಯ ಭಾಷೆಗಳಲ್ಲಿ ಕೆಡುಗಣ್ಣಿಗೆ ಪರ್ಯಾಯ ಪದಗಳಿವೆ. ಯುರೋಪಿಯನರಲ್ಲಿ ಸ್ಪ್ಯಾನಿಶ್ ಭಾಷೆಯಲ್ಲೂ ಇಂಥ ಪದವಿದೆ; ಬಹುಶಃ 400 ವರ್ಷಗಳ ಮುಸ್ಲಿಮ್ ಆಳ್ವಿಕೆಯ ಕಾಲದಲ್ಲಿ ಸ್ಪ್ಯಾನಿಶಿಗೆ ಇದು ಹರಡಿರಬಹುದು. ಇಂಗ್ಲಿಷ್ ಗೆ ಹೇಗೆ ಬಂತೋ ತಿಳಿಯದು. ಬಹುಶಃ ಸ್ಪ್ಯಾನಿಶ್ ನಿಂದ. ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಂತೂ ಕೆಡುಗಣ್ಣಿನ ನಂಬಿಕೆ ಸಾರ್ವತ್ರಿಕವಾಗಿದೆ ಎಂದು ಅನಿಸುತ್ತದೆ. ಈಗ ಇಂಥ ನಂಬಿಕೆ ಕಡಿಮೆಯಾಗುತ್ತ ಬಂದಿದೆ. ಆದರೂ ದೃಷ್ಟಿ ಬೊಟ್ಟಿನ ಆಚರಣೆ ಮುಂದುವರಿದಿದೆ. ಹಾಗೂ ಟೀವಿ ಸೀರಿಯಲುಗಳು ಇವನ್ನು ಮತ್ತೆ ಪ್ರಚಾರಕ್ಕೆ ತರುತ್ತಿವೆ. ನಟಿಕೆ ಮುರಿಯುವುದು, ನಾಯಕಿಯ ತಾಯಿ ತನ್ನ ಕಣ್ಣಿನ ಬದಿಯಿಂದ ಉಗರಿನಲ್ಲಿ ಚೂರು ಮಸ್ಕರಾ ತೆಗೆದು ನಾಯಕಿಯ ಕೆನ್ನೆಗೆ ಬಳಿಯುವುದು ಇತ್ಯಾದಿ.

ಈ ರೀತಿ ಕಣ್ಹಾಕುವ ಮಂದಿಯಾದರೂ ಸುರಕ್ಷಿತರೇ ಎಂದರೆ ಅದೂ ಇಲ್ಲ! ಯಾಕೆಂದರೆ ಸಂಸಾರಸ್ಥರು ಕೆಲವು ಪ್ರತಿಕ್ರಮಗಳನ್ನು ರೂಢಿಸಿಕೊಂಡಿರುತ್ತಾರೆ. ನಮ್ಮ ಕಡೆಯಾದರೆ, ಕೆಡುಗಣ್ಣಿಗ ನಿಂತಿದ್ದ ಜಾಗದಿಂದ ತುಸು ಮಣ್ಣನ್ನು ತೆಗೆದು ಒಲೆಯ ಉರಿಗೆ ಹಾಕಿದರೆ ಕಣ್ಹಾಕಿದವರ ಕಣ್ಣು ಹೊಟ್ಟಿ ಹೋಗುತ್ತದೆ ಎನ್ನುವ ವಿಶ್ವಾಸವಿದೆ, ಇತ್ತು. ಕೆಲವರು ಮಣ್ಣಿನ ಬದಲು ಸ್ವಲ್ಪ ಸಾಸಿವೆ ಕಾಳನ್ನು ಬೆಂಕಿಗೆ ಹಾಕುತ್ತಿದ್ದರು. ಅದಾದರೆ ಸಿಡಿಯುವ ಸದ್ದು ಕೇಳಿಸುವುದಲ್ಲ! ಆ ಸದ್ದಿನಲ್ಲೊಂದು ತೃಪ್ತಿ. ಆದರೆ ಹಾಗೆ ಕಣ್ಣು ಕಳಕೊಂಡ ವ್ಯಕ್ತಿಗಳನ್ನು ಮಾತ್ರ ನಾನು ನಿಜಕ್ಕೂ ಕಂಡಿಲ್ಲ.

ನಮ್ಮ ಬೆರ್ಚಪ್ಪ ಹೊಲದ ಮಧ್ಯೆ ಇರುವ ತನಕ ಹೊಲಕ್ಕೆ ಯಾರ ಕಣ್ಣೂ ಬೀಳದು; ಯಾಕೆಂದರೆ ಅವರು ಬೆರ್ಚಪ್ಪನನ್ನೇ ನೋಡಿ ಮೂಕವಿಸ್ಮಿತರಾಗುತ್ತಾರೆ, ಹೊಲದ ಮೇಲೆ ಅವರ ದೃಷ್ಟಿ ಹಾಯುವುದಿಲ್ಲ ಎಂದೇನೂ ಅಲ್ಲ! ಬೆರ್ಚಪ್ಪ ಎಂಥ ದೃಷ್ಟಿಯನ್ನೂ ತೆಗೆದು ನಿವಾಳಿಸಿ ಒಗೆಯುತ್ತದೆ ಎಂಬ ಕಾರಣಕ್ಕೆ. ಆದರೆ ನಮ್ಮ ಬೆರ್ಚಪ್ಪ ದೃಷ್ಟಿಬೊಟ್ಟಾಗಿ ಬಳಕೆಯಾಗುವುದಕ್ಕಿಂತಲೂ ಹೆಚ್ಚು ಹಕ್ಕಿಗಳನ್ನು ಓಡಿಸುವ ಕೆಲಸಕ್ಕೆ ನಿಯುಕ್ತವಾಗಿರುವುದೇ ಹೆಚ್ಚು.
ಹಿಂದೆ ಕೆಲವು ಕಡೆ ಹಕ್ಕಿಗಳನ್ನು ಓಡಿಸುವ ಕೆಲಸವನ್ನು ಜನರೇ ಮಾಡುವುದು ಇತ್ತೆಂದು ಕಾಣುತ್ತದೆ. ಹಕ್ಕಿಗಳನ್ನು ಓಡಿಸಲೆಂದು ಅಂಥವರು ಹೊಲಗಳ ಬಳಿ ಇಡೀ ದಿನ ಕಾವಲು ನಿಂತಿರುತ್ತಿದ್ದರು. ಶಿಶುನಾಳ ಷರೀಫರದೊಂದು ಸೊಗಸಾದ ಪದ್ಯವಿದೆ. ಇದರಲ್ಲಿ ಹೆಣ್ಣೊಬ್ಬಳು `ಕಾಡತಾವ ಕಬ್ಬಕ್ಕಿ, ಹೊಲದೊಳಗೆ ನಾ ಒಬ್ಬಾಕಿ’ ಎಂಬಂಥ ಸಾಲುಗಳು ಬರುತ್ತವೆಯೆಂದು ನನ್ನ ನೆನಪು. ಷರೀಫರ ಮಟ್ಟಿಗೆ ಈ ಕಬ್ಬಕ್ಕಿಗಳು ಭವದ ಉಪಾಧಿಗಳಿರಬೇಕು. ಅವು ಬಂದು ಮನುಷ್ಯರನ್ನು ಕಾಡುತ್ತವೆ ಎಂಬ ಅಧ್ಯಾತ್ಮಿಕ ಅರ್ಥ ಅದರಲ್ಲಿದೆ ಎನ್ನುತ್ತಾರೆ, ಇರಬಹುದು. ನನಗಾದರೆ ಇಂಥ ಅಧ್ಯಾತ್ಮದ ಆಸಕ್ತಿಯಿಲ್ಲ; ಅವೆಲ್ಲಾ ಲೋಕವನ್ನು ತಿಳಿಯುವ ತೀರಾ ಸಿಂಪ್ಲಿಸ್ಟಿಕ್ ವಿಧಾನಗಳೆಂದು ನನಗನಿಸುತ್ತದೆ. ಆದರೆ ಷರೀಫರ ಈ ಪದ್ಯವನ್ನು ಪದ್ಯವಾಗಿ (ಎಂದರೆ ಐಹಿಕವಾಗಿ) ನಾನು ಆನಂದಿಸಬಲ್ಲೆ. ಇದನ್ನೋದಿದಾಗ ನನಗೆ ಆ ಮಾತುಗಳನ್ನು ನುಡಿಯುವ ಒಬ್ಬ ಯುವತಿ ಕಲ್ಪನೆಗೆ ಬರುತ್ತಾಳೆ; ಅವಳು ಒಬ್ಬಂಟಿಯಾಗಿ ಹೊಲ ಕಾಯ್ತ ಇರುತ್ತಾಳೆ. ಬಹುಶಃ ಅದು ಅವಳ ದೈನಂದಿನ ಕಸುಬು. ಆದರೆ ಈ ಖದೀಮ ಹಕ್ಕಿಗಳ ಉಪಟಳ ಜಾಸ್ತಿ; ಅವುಗಳನ್ನು ಓಡಿಸುವುದಕ್ಕೆ ಅವಳಿಂದ ಆಗುತ್ತಿಲ್ಲ. ಬಹುಶಃ ಸುಸ್ತಾಗಿಬಿಟ್ಟಿದ್ದಾಳೆ. ಅವಳಿಗೆ ಯಾರಾದರೂ ಸಹಾಯ ಮಾಡಬಾರದೇ ಎಂದು ನಾನು ಅಂದುಕೊಳ್ಳುತ್ತೇನೆ. ಬಹುಶಃ ಅವಳಿಗೊಬ್ಬ ಪ್ರಿಯತಮ ಇರುತ್ತಿದ್ದರೆ! ಇಂಥ ವಿಚಾರಗಳು ನನ್ನ ತಲೆಯಲ್ಲಿ ಮೂಡುತ್ತವೆ.

ಇವೇನೂ ಷರೀಫರ ಅಧ್ಯಾತ್ಮಿಕ ವಿಚಾರಗಳಿಗಿಂತ ಕಡಿಮೆ ಜೀವನ ಮೌಲ್ಯವುಳ್ಳವೆಂದು ನನಗನಿಸುವುದಿಲ್ಲ. ಷರೀಫರೇ ಸ್ವತಃ ಇಂಥದೊಂದು ಚಿತ್ರವನ್ನು ರೂಪಕವಾಗಿಯಾದರೂ ಕೊಟ್ಟುದು ಅವರ ವಸ್ತುಪ್ರಪಂಚವನ್ನು ನಮಗೆ ತೋರಿಸುತ್ತದೆ. ಅಬ್ಬೆ, ಹೆಣ್ತಿ, ಕೋಳಿ, ಕೋಡಗ, ಮಗ್ಗ, ಮದ್ದಳೆ, ಕುಪ್ಪಸ, ಸೀರೆ! ಇಂಥ ತೀರ ಸಾಮಾನ್ಯವಾದ ವಿವರಗಳಿಂದ ಷರೀಫರ ಜಗತ್ತು ದಿಮಿಗುಟ್ಟುತ್ತ ಇತ್ತು, ಇರುತ್ತದೆ. ಈ ಜಗತ್ತು ನಮ್ಮದಕ್ಕಿಂತ ಭಿನ್ನವಲ್ಲ ಎಂದು ಗೊತ್ತಾಗಿ ಸಂತೋಷವೆನಿಸುತ್ತದೆ. ಷರೀಫರು ಸ್ವತಃ ಈ ಹುಡುಗಿಯನ್ನು ನೋಡಿರಬೇಕಲ್ಲ ಎನಿಸುತ್ತದೆ. ಪುರಂದರದಾಸರ ಪದ್ಯಗಳನ್ನು ಓದಿದಾಗಲೂ ನನಗೆ ಇಂಥದೇ ಭಾವನೆ ಬರುತ್ತದೆ.

ಅವರು `ಕಾಗದ ಬಂದಿದೆ’ ಎನ್ನುವಾಗ, ಆಹಾ, ಅವರ ಕಾಲದಲ್ಲೂ ಈ ಕಾಗದ ಕಳಿಸುವ ವ್ಯವಸ್ಥೆ ಇತ್ತೇ ಎಂದು ಸೋಜಿಗಪಡುವುದು ಮಾತ್ರವಲ್ಲ; ಇಂಥ ಸಾಮಾನ್ಯ ವಸ್ತುವನ್ನೂ ಅವರು ಕಡೆಗಣಿಸಲಿಲ್ಲವಲ್ಲ ಎಂದು ಖುಷಿಯಾಗುತ್ತದೆ. (ಈವತ್ತಾದರೆ ಅವರು ಈ-ಮೇಲ್ ಬಂದಿದೆ ಎನ್ನುತ್ತಿದ್ದರೋ ಏನೋ! ಯಾಕಿರಬಾರದು? ಆದರೆ ಇಂಥ ಯೋಚನೆಯೇ ಅಪವಿತ್ರವೆಂದು ಆಸ್ತಿಕರ ನಂಬಿಕೆ. ಅಪವಿತ್ರ ಪವಿತ್ರೋ ವಾ!) ಇಂಥ ಪದ್ಯಗಳನ್ನೋದಿ ಎಷ್ಟು ಮಂದಿ ಅಧ್ಯಾತ್ಮಿಗಳಾದರೋ ನನಗೆ ಗೊತ್ತಿಲ್ಲ, ಆದರೆ ಪದ್ಯಗಳು ಮಾತ್ರ ಜನರಿಗೆ ಖುಷಿಯನ್ನು ಕೊಡುತ್ತಲೇ ಬಂದಿವೆ.

ಷರೀಫರ ಈ ಕಬ್ಬಕ್ಕಿ ಪದ್ಯ ನಾನು ಓದಿದ ಇತರ ಕೆಲವು ಪದ್ಯಗಳನ್ನು ನನಗೆ ನೆನಪಿಗೆ ತರುತ್ತದೆ. ಉದಾಹರಣೆಗೆ, ವಾಲೆಸ್ ಸ್ಟೀವನ್ಸನ “Thirteen Ways of Looking at a Blackbird”. ಕಬ್ಬಕ್ಕಿಯನ್ನು ನೋಡುವ ಹದಿಮೂರು ಬಗೆಗಳನ್ನು ಹದಿಮೂರು ಚರಣಗಳಲ್ಲಿ ವಿವರಿಸುವ ಪದ್ಯ ಇದು- ಹದಿಮೂರು ಯಾಕೆ, ಅಥವಾ ಹದಿಮೂರೇ ಯಾಕೆ ಎಂದು ಕೇಳಬೇಡಿ. ಪ್ರಾಯಶಃ ಹದಿಮೂರಕ್ಕೆ ಪದ್ಯ ನಿಂತಿತು, ಅದಕ್ಕೇ ಹದಿಮೂರು ಬಗೆ. A painting is never finished, it is only abandoned ಎಂಬ ಮಾತು ಕವಿತೆಗೂ ಸಲ್ಲುತ್ತದೆ. ಜಪಾನೀ ಹಾಯಿಕುಗಳ ಮಾದರಿಯ ಚಿಕ್ಕ ಚಿಕ್ಕ ಚರಣಗಳ ಜೋಡಣೆ ಇದು. ಇದರಲ್ಲಿ ನನಗೆ ಅತ್ಯಂತ ಇಷ್ಟವಾದ ಸಾಲುಗಳೆಂದರೆ:

I do not know which to prefer,
The beauty of inflections
Or the beauty of innuendoes,
The blackbird whistling
Or just after.

ಯಾಕೆ ಎಂದು ಕೇಳಬೇಡಿ. ಮನಸ್ಸಿಗೆ ಆಹ್ಲಾದ ಉಂಟುಮಾಡುತ್ತದೆ. ಪದ್ಯವೊಂದು ಅಷ್ಟು ಮಾಡಿದರೆ ಸಾಲದೇ? ಹಕ್ಕಿಯೊಂದನ್ನು ಅದು ಸಿಳ್ಳೆ ಹೊಡೆಯುವ ಮೊದಲು ಮತ್ತು ನಂತರ ಎಂದು ಕಲ್ಪಿಸುವುದೇ ಒಂದು ಖುಷಿ! ಸ್ಟೀವನ್ಸ್ ನ ಬ್ಲ್ಯಾಕ್ ಬರ್ಡ್ (ತ್ರಶ್) ಬಹುಶಃ ಕನ್ನಡದ ಕಬ್ಬಕ್ಕಿ ಇರಲಾರದು. ಸ್ಟೀವನ್ಸ್ ನ ಹಕ್ಕಿ ಹಾಡುತ್ತದೆ. ಕನ್ನಡದ ಕಬ್ಬಕ್ಕಿ ಕಾಳು ಕೊಳ್ಳೆ ಹೊಡೆಯುತ್ತದೆ! ಆದರೆ ಹಕ್ಕಿಗಳು ಹಕ್ಕಿಗಳೇ!

ಬೆರ್ಚಪ್ಪನಿಗೆ ಹಕ್ಕಿಗಳು ಬೆದರುತ್ತವೆಯೇ? ನನಗೀ ಬಗ್ಗೆ ಸಂಶಯವಿದೆ. ಬೆರ್ಚಪ್ಪನ ಹೆಗಲ ಮೇಲೇ ಕೂತು ದಣಿವಾರಿಸಿಕೊಳ್ಳುತ್ತಿರುವ ಹಕ್ಕಿಗಳನ್ನು ನಾನು ಕಂಡಿದ್ದೇನೆ. ಇನ್ನು ಈ ಕುರಿತು ಹಕ್ಕಿಗಳನ್ನು ಕೇಳಿ ಪ್ರಯೋಜನವಿಲ್ಲ. ಅವು ಕಬಳಿ ಹಾಕಿದ ಭತ್ತದ ಹೊಟ್ಟುಗಳನ್ನು ನೋಡಿದರೆ ಗೊತ್ತಾಗುತ್ತದೆ: ಹಕ್ಕಿಗಳು ನಿಜ ಹೇಳಲಾರವು ಎನ್ನುವುದು.

ಅದೇ ರೀತಿ, ವಿಲಿಯಂ ವಡ್ರ್ಸ್ವರ್ತ್ ನ “The Solitary Reaper” ಎಂಬ ಪದ್ಯ ನೆನಪಾಗುತ್ತದೆ. ಹೊಲದಲ್ಲಿ ಒಬ್ಬಳೇ ಬೆಳೆ ಕೊಯ್ಯುವ ಹೆಣ್ಣೊಬ್ಬಳ ಚಿತ್ರಣ ಇದರಲ್ಲಿದೆ. ಬಾಗಿ ಕೊಯ್ಯುತ್ತ, ಕಟ್ಟುತ್ತ ಅವಳು ಬೇಸರದ ಧ್ವನಿಯ ಹಾಡೊಂದನ್ನು ಹಾಡುತ್ತ ಇರುತ್ತಾಳೆ. ಆ ಹಾಡು ಯಾತರ ಕುರಿತು ಎನ್ನುವುದು ಕವಿಗೆ ಗೊತ್ತಾಗುವುದಿಲ್ಲ, ಯಾಕೆಂದರೆ ದೂರದ ಗುಡ್ಡದಿಂದ ಅವನ ಕಣ್ಣಿಗೆ ಬೀಳುವ ದೃಶ್ಯ ಇದು; ಆದರೆ ಹಾಡಿನ ಸಂಗೀತ ಮಾತ್ರ ಅವನ ಹೃದಯದಲ್ಲಿ ನೆಲಸುತ್ತದೆ. ಉಳಿದುದನ್ನೆಲ್ಲ ಅವನು ಕಲ್ಪಿಸಿಕೊಳ್ಳುತ್ತಾನೆ. ವಡ್ರ್ಸ್ ವರ್ತ್ ನ ಹಲವಾರು ಪ್ರಸಿದ್ಧ ಸ್ಮೃತಿಗೀತಗಳಲ್ಲಿ ಇದೂ ಒಂದು, ನಮ್ಮ ಮನಸ್ಸನ್ನು ಗಾಢವಾಗಿ ಹಿಡಿದುಕೊಳ್ಳುವಂಥದು.

ಇಂಥದೇ ಇನ್ನೊಂದು ಕವಿತೆ ಕೀಟ್ಸ್ನ “Ode to a Nightingale”. ಕವಿತೆಯ ಈ ಭಾಗವನ್ನು ನೋಡಿ:
Hou wast not born for death, immortal Bird!
No hungry generations tread thee down;
The voice I hear this passing night was heard
In ancient days by emperor and clown:
Perhaps the selfsame song that found a path
Through the sad heart of Ruth, when, sick for home,
She stood in tears amid the alien corn;
The same that oft-times hath
Charmed magic casements, opening on the foam
Of perilous seas, in faery lands forlorn.

ನೈಟಿಂಗೇಲ್ ಹಕ್ಕಿಯನ್ನು ಹೊಗಳುವ ನೆವದಲ್ಲಿ ಕೀಟ್ಸ್ ಎಷ್ಟೊಂದು ಸಂಗತಿಗಳನ್ನು ತರುತ್ತಾನೆ! ಇಲ್ಲಿ ಬರುವ ಮಹಾರಾಜ ಮತ್ತು ವಿದೂಷಕನ ಪ್ರಸ್ತಾಪ ಶೇಕ್ಸ್ಪಿಯರನ “ಕಿಂಗ್ ಲೀಯರ್” ನಾಟಕಕ್ಕೆ ಸಂಬಂಧಿಸಿದುದು ಎನ್ನುತ್ತಾರೆ ವಿಮರ್ಶಕರು: ತನ್ನ ಇಬ್ಬರು ಹಿರಿಯ ಮಗಳಂದಿರಿಂದ ಹೊರಹಾಕಲ್ಪಟ್ಟ ಕಿಂಗ್ ಲೀಯರ್ ಹುಚ್ಚನಂತೆ ಮಳೆಗಾಳಿಯಲ್ಲಿ ಬಯಲು ಸುತ್ತುತ್ತಿರುವಾಗ ಅವನಿಗೆ ಜತೆಯಾಗುವುದು ಹುಚ್ಚನ ವೇಷವನ್ನು ಬೇಕೆಂದೇ (ಮುದಿ ಅರಸನಿಗೆ ನೆರವಾಗಲು) ಧರಿಸಿಕೊಂಡಿದ್ದ ಎಡ್ಗರ್. ಈ ಎಡ್ಗರ್ ಸಹಾ ತನ್ನ ತಂದೆಯಿಂದ ಹೊರ ಹಾಕಲ್ಪಟ್ಟವನು. ಆದರೆ ನಮ್ಮ ಅಗ್ರೇರಿಯನ್ (ಕರ್ಷಕ) ವಲಯಕ್ಕೆ ಹೆಚ್ಚು ಪ್ರಸ್ತುತವಾದುದು ರೂತ್ ನ ಪ್ರಸ್ತಾಪ. ರೂತ್ ಎನ್ನುವವಳು ಒಬ್ಬ ಬಿಬ್ಲಿಕಲ್ ತರುಣಿ. ಬೈಬಲಿನ `ಬುಕ್ ಆಫ್ ರೂತ್’ನಲ್ಲಿ ಇವಳ ಕತೆಯನ್ನು ಓದಬಹುದು. ತನ್ನ ಊರು (ಮೊಆಬ್) ಬಿಟ್ಟು ಪರವೂರಿನಲ್ಲಿ (ಬೆತ್ಲಹೆಮ್) ತನ್ನ ಅತ್ತೆಯೊಂದಿಗೆ ನೆಲಸಲು ತೀರ್ಮಾನಿಸಿದ ಈ ಯುವ ವಿಧವೆ ರೂತ್ (ಬಡವಳು ಅವಳು) ಬೇರೆಯವರ ಹೊಲದಲ್ಲಿ ಬಿದ್ದ ತೆನೆಗಳನ್ನು ಹೆಕ್ಕಿಕೊಳ್ಳುವ ಪ್ರಸಂಗ ಕೀಟ್ಸ್ನ ಕವಿತೆಯಲ್ಲಿ ಮನಮೋಹಕವಾಗಿ ಬಂದಿದೆ. ನೈಟಿಂಗೇಲಿನ ಕೂಗು ಅವಳ ಹೃದಯದಲ್ಲಿ ಹೊಕ್ಕು ಹಾಯುತ್ತದೆ, ನೈಟಿಂಗೇಲಿನ ಹಾಡಿನಿಂದ ಅವಳಿಗೆ ತನ್ನ ಹುಟ್ಟೂರಿನ ಹಂಬಲ ತೀವ್ರವಾಗುತ್ತದೆ ಎಂದು ಕೀಟ್ಸ್ ಕಲ್ಪಿಸುತ್ತಾನೆ.

ಈ ಸಾಲುಗಳನ್ನು ಓದುತ್ತ ನನಗೆ ನಮ್ಮ ಊರಿನಲ್ಲಿ ಹಿಂದೆ ಇದ್ದ ಒಂದು ಸಂಪ್ರದಾಯದ ನೆನಪಾಗುತ್ತದೆ: ಭತ್ತದ ಕೊಯ್ಲು ಆದ ನಂತರ ಗದ್ದೆಯಲ್ಲಿ ಬಿದ್ದಿರಬಹುದಾದ ಕಾಳು ಕದಿರುಗಳನ್ನು ಯಾರು ಬೇಕಾದರೂ ಹೆಕ್ಕಿಕೊಂಡು ಹೋಗಬಹುದಾಗಿತ್ತು! ಇದೇ ಸಂಪ್ರದಾಯ ಒಂದು ಕಾನೂನಿನಂತೆ ಪುರಾತನ ಇಸ್ರೇಲಿನಲ್ಲೂ ಇತ್ತು ಎನ್ನುವುದು ನನಗೆ ಲೋಕವನ್ನು ಇನ್ನಷ್ಟು ಹತ್ತಿರ ತರುತ್ತದೆ. ಷರೀಫ್, ವಡ್ರ್ಸ್ ವರ್ತ್, ಕೀಟ್ಸ್ ಎಲ್ಲರ ಕವಿತೆಗಳಲ್ಲೂ ಬರುವ ಇಲ್ಲದುದರ ಹಂಬಲ ಕೂಡ ಸಾರ್ವತ್ರಿಕವಾದುದು. ದೂರವಿರುವ ತಮ್ಮ ಊರನ್ನು ಮತ್ತು ಇಷ್ಟದ ಜನರನ್ನು ನೆನೆನೆನೆದು ಕೊರಗುವ ವ್ಯಸನಕ್ಕೆ ಹವ್ಯಕ ಭಾಷೆಯಲ್ಲಿ `ಅಸಕ್ಕ’ ಎನ್ನುತ್ತಾರೆ. ಮದುವೆಯಾಗಿ ಗಂಡನ ಮನೆಗೆ ಹೋಗಿ ಜೀವಿಸುವ ಯುವತಿಯರಿಗೆ ತವರಿನ ಕುರಿತು `ಅಸಕ್ಕ ಆವುತ್ತು’ (ಹಂಬಲವಾಗುತ್ತದೆ). `ಆಷಾಢ ಮಾಸ ಬಂತಮ್ಮಾ, ಕರೆಯಾಕೆ ಅಣ್ಣ ಬಂದಿಲ್ಲ’ ಎಂಬಂಥ ಜನಪದ ಹಾಡುಗಳು ಈಗಲೂ ಎಷ್ಟೊಂದು ಮನ ಕಲಕುತ್ತವೆ!

ಬೇಂದ್ರೆಯವರ “ಹಕ್ಕಿ ಹಾರುತಿದೆ ನೋಡಿದಿರಾ” ಎಂಬ ಪದ್ಯವೂ ಈ ಸಂದರ್ಭದಲ್ಲಿ ನನಗೆ ನೆನಪಾಗುತ್ತದೆ. ಆದರೆ ಈ ಹಕ್ಕಿ ಮಾತ್ರ ಬ್ರಹ್ಮಾಂಡದ ಹಕ್ಕಿಯಾಗಿದ್ದು ನಮ್ಮ ಬಡ ಬೆರ್ಚಪ್ಪನ ಅಳವಿಗೆ ನಿಲುಕುವಂಥದಲ್ಲ. ಬೆರ್ಚಪ್ಪ ಅಧ್ಯಾತ್ಮ ಜೀವಿಯಲ್ಲ—ಆತ ಕೇವಲ ಒಬ್ಬ `ಹುಲುಮಾನವ’—ಅಕ್ಷರಶಃ! ಮಾನವನೂ ಅಲ್ಲ, ನಮ್ಮದೇ ಇಮೇಜಿನಲ್ಲಿ ನಾವು ಕಲ್ಪಿಸಿದ ಒಂದು ಗೊಂಬೆ.

ಈ ಯಾವ ಪದ್ಯದಲ್ಲೂ ಬೆರ್ಚಪ್ಪನ ಉಲ್ಲೇಖವಿಲ್ಲ. ಆದರೇನಾಯಿತು? ಅದು ನನ್ನ ಮನಸ್ಸಿನಲ್ಲಿದೆ. ಹಾಗೇನೇ ನಾನು ಚಿಕ್ಕಂದಿನಲ್ಲಿ ಕಂಡ ಭತ್ತದ ಗದ್ದೆಗಳು, ಬೆಟ್ಟು ಗದ್ದೆಗಳಲ್ಲಿ ನಾವು ಬೆಳೆಯುತ್ತಿದ್ದ ತರಕಾರಿ ಬೆಳೆಗಳು, ಅದಕ್ಕೆ ಏತದಿಂದ ನೀರು ಎತ್ತಿ ಎರೆಯುತ್ತಿದ್ದುದು ಎಲ್ಲವೂ. ಇದು ಬೆರ್ಚಪ್ಪ ಪ್ರಪಂಚ. ನಾವೆಲ್ಲರೂ ನಮ್ಮ ನಮ್ಮ ಅನುಭವಗಳಿಗೆ ಹೊಂದಿಸಿಕೊಂಡು ಓದುತ್ತೇವೆ, ಅರ್ಥಮಾಡಿಕೊಳ್ಳುತ್ತೇವೆ. ಆದ್ದರಿಂದ ಪ್ರತಿಯೊಬ್ಬನ ಓದು ಕೂಡ ಭಿನ್ನವಾಗಿರುತ್ತದೆ—ಒಬ್ಬೊಬ್ಬನ ಬೆರಳ ಗುರುತಿನಂತೆ. ಇಲ್ಲಿ ಉಲ್ಲೇಖಿಸಿದ ಪದ್ಯಗಳನ್ನು ನಾನು ಓದಿದಂತೆ ಇನ್ನೊಬ್ಬರು ಓದಬೇಕೆಂದಿಲ್ಲ, ಬಹುಶಃ ಅದು ಸಾಧ್ಯವೂ ಇಲ್ಲ. ಆದರೆ ಹಾಗೆಂದು ನಮ್ಮ ಓದಿಗೂ ಇತರರ ಓದಿಗೂ ಸಮಾನತೆ ಇಲ್ಲವೆಂದೂ ಹೇಳಲಾಗದು. ಅದಲ್ಲವಾದರೆ, ನಾವು ಹೇಳುವುದು ಇನ್ನೊಬ್ಬರಿಗೆ ಅರ್ಥವೇ ಆಗದು. ಆದರೂ ನಮಗೆ ಪರಸ್ಪರ ಅರ್ಥವಾಗುತ್ತದೆ: ಕೆಲವೊಮ್ಮ ವಡ್ರ್ಸ್ ವರ್ತ್ ಒಂಟಿ ಕೊಯ್ಲುಗಾರ್ತಿಯ ಹಾಡಿನ ಧ್ವನಿಯಿಂದ ಅದನ್ನು ಅರ್ಥಮಾಡಿಕೊಂಡಂತೆ, ಭಾವನಾತ್ಮಕವಾಗಿ ಅರಿತುಕೊಳ್ಳುತ್ತೇವೆ. ಅರ್ಥವಾಗುವಿಕೆಯಲ್ಲಿ ಹಲವಾರು ಮಟ್ಟಗಳು, ಪ್ರಮಾಣಗಳು ಇವೆಯಲ್ಲವೇ? ಅರ್ಥ ಒಂದು ಚಲನಶೀಲ (ಡೈನಮಿಕ್) ಕ್ರಿಯೆ-ಪರಿಪೂರ್ಣ ಸ್ಥಿತಿಯಲ್ಲ. ಕೆಲವೊಮ್ಮೆ ಯಾವುದೋ ಭಾವ ಸ್ಫುರಿಸಿದರೆ ಅದೇ ಹಾಡಿನ ಅರ್ಥ.

ಈ ಬೆರ್ಚಪ್ಪ ಎಷ್ಟೊಂದು ಒಂಟಿ ಎನಿಸುತ್ತದೆ ನನಗೆ. ಹೊಲದ ಮಧ್ಯೆ ನಿಂತಿರುತ್ತದೆ. ಯಾರೂ ಅದನ್ನು ಮಾತಾಡಿಸುವುದಿಲ್ಲ— ಕಾಣುತ್ತಾರೆ, ನೋಡುವುದಿಲ್ಲ. ಬೆರ್ಚಪ್ಪನನ್ನು ನೋಡಿ ಎಷ್ಟು ಚೆನ್ನಾಗಿದೆ ಇದು ಎಂದು ಯಾರಾದರೂ ಎನ್ನುವುದನ್ನು ನೀವು ಕೇಳಿದ್ದೀರಾ? ಅದರ ಏಕಾಂತ ಅದಕ್ಕೇ ಗೊತ್ತು, ಎಂದರೆ ಅದರಲ್ಲಿ ತಮ್ಮನ್ನು ತಾವು ಕಾಣಬಲ್ಲವರಿಗೆ. ಆದರೆ ಬೆರ್ಚಪ್ಪನ ಅಪ್ಪನಂಥ ಆಕೃತಿಯೊಂದು ನಮ್ಮ ಊರಿನಲ್ಲಿದೆ, ಕೆಲವು ದೇವಸ್ಥಾನಗಳಲ್ಲಿ. ಬೇತಾಳ ಎಂದು ಅದರ ಹೆಸರು. ದೈತ್ಯಾಕಾರದ ಈ ಆಕೃತಿ ದಷ್ಟಪುಷ್ಟವಾಗಿದ್ದು ಕಣ್ಣು ಮೋರೆಗೆ ಬಣ್ಣ ಬಳಿದ ಮರದ ತಲೆಯನ್ನು ಹೊಂದಿರುತ್ತದೆ. ದೇವಸ್ಥಾನದ ಮೂಲೆಯಲ್ಲಿ ಅಥವಾ ಹೊರ ಕೊಟ್ಟಿಗೆಯಲ್ಲಿ ನೀವದನ್ನು ಕಾಣಬಹುದು. ವರ್ಷಕ್ಕೊಮ್ಮೆ ಉತ್ಸವದ ಸಂದರ್ಭದಲ್ಲಿ ಅದು ತನ್ನ ಸ್ಥಾನದಿಂದೆದ್ದು ಉತ್ಸವ ಮೂರ್ತಿಯ ಮುಂದೆ ಪ್ರಾಂಗಣದಲ್ಲಿ ಕೊನೆಯ ಮೂರು ನಾಲ್ಕು ಸುತ್ತು ವಿಚಿತ್ರವಾಗಿ ಕುಣಿಯುತ್ತದೆ. ಎಂದರೆ ಅದರೊಳಗೊಬ್ಬ ಹೊಕ್ಕು ಕುಣಿಸುತ್ತಾನೆ, ಕುಣಿಯುತ್ತಾನೆ. ಇಂಥ ಬೇತಾಳ ಕುಣಿಯುತ್ತಿದ್ದರೆ ಅದರ ಧಾಂಡಿಗ ತೋಳುಗಳು ಓ ಅಷ್ಟು ದೂರಕ್ಕೆ ಬೀಸುತ್ತಿರುತ್ತದೆ. ಜನ ಚದರುತ್ತಾರೆ, ಮಕ್ಕಳು ಬೆರಗಾಗುತ್ತಾರೆ. ಬೇತಾಳ ಕುಣಿಯುವಾಗ ದೇವರ ಉತ್ಸವ ಮೂರ್ತಿಯನ್ನು ಯಾರೂ ನೋಡುವುದಿಲ್ಲ, ಬೇತಾಳವನ್ನೇ ನೋಡುತ್ತಿರುತ್ತಾರೆ. ನಂತರ ಅದು ಯಥಾಸ್ಥಾನವನ್ನು ಸೇರಿಕೊಳ್ಳುತ್ತದೆ; ಮುಂದಿನ ವರ್ಷದ ತನಕ ಅದಕ್ಕೆ ಕೆಲಸವಿಲ್ಲ. ಅದೂ ಮೌನಿ.