ನಮ್ಮ ನಮ್ಮ ಜಾನುವಾರುಗಳನ್ನು ಹುಡುಕಿ ಹೊರಟ ಗೋಪಾಲಕರಾದ ನಮ್ಮ ಲಕ್ಷ್ಯ ಕೇವಲ ಜಾನುವಾರುಗಳ ಮೇಲೇ ಇರಲಿಲ್ಲ; ಮಕ್ಕಳಾದ ನಮಗೆ ಈ ಹುಲ್ಲಿನ ವೈಭೋಗವನ್ನು ಆನಂದಿಸುವುದೇ ಮುಖ್ಯ ಇರಾದೆಯಾಗಿತ್ತು. ಅದೂ ಅರಬ್ಬೀ ಸಮುದ್ರದಲ್ಲಿ ಸೂರ್ಯನು ನಿಜವಾಗಿ ಮುಳುಗುತ್ತಿದ್ದ ಕಾಲ! ಕವಿ ಹೇಳುವಂತೆ ಆ ಅಸ್ತಮಯ ಸಮಯದಲ್ಲಿ ಸೂರ್ಯನು ತೊಳತೊಳ ತೊಳಗುವನು. ಅದೊಂದು ದಿವ್ಯ ಪ್ರಭೆ ಅಲೆ ಅಲೆಯಾಗಿ ಈ ಮುಳಿಹುಲ್ಲ ಸಮುದ್ರದ ಮೇಲೂ ಹಾಯುವುದು. ಸಂಜೆಯ ಗಾಳಿಗೆ ಮುಳಿಹುಲ್ಲು ಕೂಡಾ ಅಲೆ ಅಲೆಯಾಗಿ ಅಲ್ಲಾಡುವುದು. ಇದನ್ನೆಲ್ಲ ನೋಡುತ್ತ ಮೈಮರೆಯುವವರಲ್ಲಿ ನಾನೂ ಒಬ್ಬ. 
ಕೆ.ವಿ. ತಿರುಮಲೇಶ್ ಬರಹ

 

The prairie-grass dividing—its special odor breathing,
I demand of it the spiritual corresponding,
Demand the most copious and close companionship of men,
Demand the blades to rise of words, acts, beings,
Those of the open atmosphere, coarse, sunlit, fresh, nutritious,
Those that go their own gait, erect, stepping with freedom and command—leading, not following,
Those with a never-quell’d audacity—those with sweet and lusty flesh, clear of taint,
Those that look carelessly in the faces of Presidents and Governors, as to say, Who are you?
Those of earth-born passion, simple, never-constrain’d, never obedient,
Those of inland America.

-Walt Whitman, “The Prairie-Grass Dividing”

ಒಮ್ಮೆ ನಾನು ಇಂಗ್ಲೆಂಡಿನಲ್ಲಿ ಹಾಸ್ಟೆಲಿನಲ್ಲಿ ಊಟಕ್ಕೆ ಕುಳಿತಿದ್ದಾಗ ನನ್ನ ಪಕ್ಕದಲ್ಲಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಮಾತಾಡಿಸಿದೆ. ಏನು ಮಾಡುತ್ತಿರುವಿ ಎಂದು ವಿಚಾರಿಸಿದೆ. ರಿಸರ್ಚು ಎಂದಳು. ಯಾವುದರ ಬಗ್ಗೆ ಎಂದು ಕೇಳಿದೆ. ಹುಲ್ಲಿನ ಬಗ್ಗೆ ಎಂದಳು. ನನಗೆ ಸ್ವಲ್ಪ ನಗು ಬಂತು. ಯಾಕೆ ನಗುತ್ತೀ ಎಂದಳು ತುಸು ಆಶ್ಚರ್ಯದಿಂದ. ಇಂಟರೆಸ್ಟಿಂಗ್ ಎಂದೆ. ವಾಸ್ತವದಲ್ಲಿ ಹುಲ್ಲಿನ ಕುರಿತಾಗಿ ರಿಸರ್ಚ್ ಮಾಡುವ ಒಬ್ಬಾಕೆಯನ್ನು ನಾನು ಕಂಡುದು ಅದೇ ಮೊದಲ ಸಲವಾಗಿತ್ತು. ಇಷ್ಟೊಳ್ಳೆ ಹುಡುಗಿ ಹುಲ್ಲಿನ ಬದಲು ಹೂವಿನ ಕುರಿತು ರಿಸರ್ಚ್ ಮಾಡುತ್ತಿದ್ದರೆ ಚೆನ್ನಾಗಿತ್ತು ಎಂದು ನಾನು ಅಂದುಕೊಂಡೆನೇ?! ಹಾಗೇನಿಲ್ಲ. ಹುಲ್ಲಿನಂಥ ವಿಷಯದ ಬಗ್ಗೆ ರಿಸರ್ಚ್ ಮಾಡುವ ಒಬ್ಬಾಕೆಯ ಈ ಹಠಾತ್ತನೆ ಭೇಟಿಯ ವಿಸ್ಮಯಕ್ಕೆ ನಾನು ಒಳಗಾಗಿದ್ದೆ. ಎಂದರೆ ಪಕ್ಕದಲ್ಲಿ ಕೂತವಳು, ತಾನು ಮಂಗಳ ಗ್ರಹದಿಂದ ಬಂದವಳು ಎಂದು ಹೇಳಿದ್ದರೂ ಬಹುಶಃ ನಾನು ಅದೇ ತರ ಆಗ ಪ್ರತಿಕ್ರಿಯಿಸುತ್ತಿದ್ದೆ. ಅದು ನನ್ನ ಅರಿವಿನ ಕೊರತೆಯಲ್ಲದೆ ಬೇರೇನಲ್ಲ. ಈ ಲೋಕದಲ್ಲಿ ರಿಸರ್ಚ್ ಮಾಡುವುದಕ್ಕೆ ಎಷ್ಟೊಂದು ವಿಷಯಗಳಿವೆ ಎಂಬ ವಿಸ್ಮಯಕ್ಕೆ ನಾನು ಒಳಗಾಗಿದ್ದೆ. ಅವಳು ನನ್ನನ್ನು ತಪ್ಪು ತಿಳಿದುಕೊಂಡಳೋ ಗೊತ್ತಿಲ್ಲ. ಒಂದು ವೇಳೆ ಹಾಗೆ ತಿಳಿದುಕೊಂಡಿದ್ದರೆ ನಾನವಳನ್ನು ದೂರಲಾರೆ. ಯಾಕೆಂದರೆ ಹುಲ್ಲು ನಮ್ಮ ದೃಷ್ಟಿಯಲ್ಲಿ ತೀರಾ ‘ಕ್ಷುಲ್ಲಕ’ ವಸ್ತು-ನಾವು ದಿನವೂ ಕಾಣುವಂಥದು, ಕೆಲವೊಮ್ಮೆ ಮೆಟ್ಟಿ ನಡೆಯುವಂಥದು. ಆದರೆ ಅದೇ ನಮ್ಮ ಜೀವ ನಾಡಿಯೂ ಎನ್ನುವುದನ್ನು ಮರೆತುಬಿಡುತ್ತೇವೆ. ಹೀಗೆ ಮರೆತವರಲ್ಲಿ ಬಹುಶಃ ನಾನೂ ಒಬ್ಬ. ಆದ್ದರಿಂದ ಹುಲ್ಲು ಎಂದಾಗಲೆಲ್ಲ ನನಗೆ ಆ ಹುಡುಗಿ ನೆನಪಾಗುತ್ತಾಳೆ, ಹುಲ್ಲಿನ ಮಹತ್ವ ಮನಸ್ಸಿಗೆ ಬರುತ್ತದೆ.

ವಾಸ್ತವವೆಂದರೆ ಹಳ್ಳಿಗಳಲ್ಲಿ ಹುಟ್ಟಿ ಬೆಳೆದ ನನ್ನಂಥವರೆಗೆ ಹುಲ್ಲಿನ ಸಂಪರ್ಕ ಇದ್ದೇ ಇರುತ್ತದೆ. ಇದು ನಮ್ಮ ಪ್ರಾಕೃತ ಸ್ಮೃತಿಯಲ್ಲಿ ಸೇರಿರುವ ಕಾರಣ ನಮಗೆ ಹುಲ್ಲು ಮರೆತುಹೋಗುವ ಪ್ರಶ್ನೆಯೇ ಇಲ್ಲ. ನಾನು ಚಿಕ್ಕಂದಿನಲ್ಲಿ ಕಲಿತು ಈಗಲೂ ನೆನಪಿರುವ ಒಂದು ಪದ್ಯವೆಂದರೆ:

ದನ ದನ ನಮ್ಮ ದನ
ಕಾಳು ಕಡ್ಡಿ ತಿನ್ನುವ ದನ
ಹುಲ್ಲು ಮೇದು ಬರುವ ದನ
ಹಾಲು ಕೊಡುವ ನಮ್ಮ ದನ

ಯಾರಾದರೂ ಒಂದು ಕನ್ನಡದ ಪದ್ಯ ಹೇಳೆಂದರೆ ನಾನು ತಪ್ಪಿಲ್ಲದೆ ಹೇಳಬಹುದಾದ ಪದ್ಯವೆಂದರೆ ಇದೊಂದೇ. ಎಷ್ಟು ಸರಳವೂ ಸ್ಪಷ್ಟವೂ ಆದ ಪದ್ಯ! ಆದರೆ ಒಂದು ಇಡೀ ಜೀವನ ಪದ್ಧತಿಯನ್ನೇ ಒಳಗೊಂಡಂಥದು. ನಿಜ, ಹುಲ್ಲು ಮತ್ತು ದನಕ್ಕೆ ಅವಿನಾಭಾವ ಸಂಬಂಧ. ನನ್ನ ಚಿಕ್ಕಂದಿನಲ್ಲಿ ಅಮ್ಮ ತೋಟದಲ್ಲಿ ಕುಕ್ಕರಗಾಲಲ್ಲಿ ಕುಳಿತು ಕತ್ತಿಯಿಂದ ಹುಲ್ಲು ‘ಕೆರೆಸು’ವ ನೆನಪು ನನಗೆ ಬರುತ್ತಿದೆ. ಎಡಗೈಯಿಂದ ಹುಲ್ಲುಗಳನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ಹೀಗೆ ಕೆರೆಸುವಾಗ ಕರ ಕರ ಸದ್ದಾಗುತ್ತಲೇ ಇರುತ್ತದೆ. ತೋಟದಲ್ಲಿ ನುಸಿ ಬಾಧೆ. ಅವುಗಳನ್ನೂ ಓಡಿಸಿಕೊಳ್ಳಬೇಕು, ಅವು ಕಚ್ಚಿದಲ್ಲಿ ಆಗಾಗ ತುರಿಸಿಕೊಳ್ಳಬೇಕು. ನಂತರ ನಾನೂ ಹುಲ್ಲು ಕೆರೆಸುವುದನ್ನು ಅಭ್ಯಾಸ ಮಾಡಿಕೊಂಡೆ. ಈ ಹುಲ್ಲನ್ನು ಕಟ್ಟಿಕೊಂಡು ನಾವು ಕೊಟ್ಟಿಗೆಗೆ ತರುತ್ತೇವೆ. ಎಲ್ಲಾ ದನಗಳಿಗೂ ಇಂಥ ಹಸಿ ಹುಲ್ಲನ್ನು ತಿನಿಸುವಷ್ಟು ಹುಲ್ಲು ತೋಟದಲ್ಲಿ ಸಿಗುವುದಿಲ್ಲ. ಗಬ್ಬ ಧರಿಸಿದ ಅಥವಾ ಹಾಲು ಕೊಡುವ ದನಗಳಿಗೆ ಮಾತ್ರ ಈ ಪ್ರತ್ಯೇಕ ಉಪಚಾರ. ದನಗಳಿಗೆ ಹಸಿ ಹುಲ್ಲೆಂದರೆ ಪ್ರಾಣ. ಕೊಟ್ಟಿಗೆ ದನಗಳನ್ನು ನಾವು ಬೆಳಿಗ್ಗೆ ಗುಡ್ಡಕ್ಕೆ ಬಿಡುತ್ತೇವೆ. ಅವು ಮೇದುಕೊಂಡು ಸಂಜೆಗೆ ಮರಳುತ್ತವೆ. ಬಾಯಾರಿಕೆಯಾದರೆ ಕೆಲವು ಮೊದಲೇ ಬರುತ್ತವೆ. ಆದರೆ ನಾವಿರುವ ಜಾಗದಲ್ಲಿ ಸಮಸ್ಯೆಯೊಂದು ಇತ್ತು: ನಮ್ಮ ಜಾಗದ ಹೊರಗೆಲ್ಲಾ ಆಗ ದಟ್ಟವಾದ ಅರಣ್ಯ—ವರ್ಷಾರಣ್ಯ ಅರ್ಥಾತ್ ರೈನ್ ಫಾರೆಸ್ಟ್. ನಾವಿದನ್ನು ‘ಫಾರೆಸ್ಟ್ ಕಾಡು’ ಎನ್ನುತ್ತಿದ್ದೆವು. ಎಂದರೆ ಸರಕಾರಕ್ಕೆ ಸೇರಿದ್ದು ಎನ್ನುವ ಅರ್ಥದಲ್ಲಿ. ನನಗೆ ‘ಬುದ್ಧಿ ಬರುತ್ತಿರುವಂತೆ’ ಈ ಕಾಡು ಮರಗಳನ್ನೆಲ್ಲಾ ಕಡಿದು ಸುಟ್ಟು ಆ ಜಾಗದಲ್ಲಿ ಗೇರು ಬೀಜದ ಬೆಳೆಯನ್ನು ಬೆಳೆಸಲಾಯಿತು. ಇದು ಸರಕಾರದ ವತಿಯಿಂದ ಆದ ಕೆಲಸ. ಕಾಡಿನ ಆಚೆ, ಗುಡ್ಡದ ಮೇಲೆ ಅಲ್ಪ ಸ್ವಲ್ಪ ಹುಲ್ಲು ಬೆಳೆಯುವ ಪ್ರಶಸ್ತವಾದ ಜಾಗ ಇದ್ದಿತಾದರೂ (ಇಂಥ ಸ್ಥಳಗಳೇ ‘ಅಡ್ಕ’ಗಳು; ಈ ಅಡ್ಕ ಎಂಬ ಉಪಾಧಿಯಿರುವ ಅನೇಕ ಗ್ರಾಮಗಳಿವೆ: ಬದಿಯಡ್ಕ, ಬಂದಡ್ಕ, ಸಾಮೆತ್ತಡ್ಕ, ಸಾರಡ್ಕ ಇತ್ಯಾದಿ; ನಮ್ಮ ಗ್ರಾಮದ ಹೆಸರು ಕಾರಡ್ಕ) ನಮ್ಮ ಜಾನುವಾರುಗಳು ಈ ಕಾಡಿನ ಮೂಲಕವೇ ಹೋಗಿ ಬರಬೇಕಷ್ಟೆ? ಈಗ ಈ ಫಾರೆಸ್ಟ್ ಕಾಡಿನ ಗಾರ್ಡುಗಳು, ರೇಂಜರುಗಳು, ಫಾರೆಸ್ಟರ್ ಗಳೇ ಮೊದಲಾದ ಅಧಿಕಾರಿಗಳು ದನಗಳ ಮೇಯುವ ಹಕ್ಕನ್ನು ತಡೆಯತೊಡಗಿದರು. ದನಗಳು ಈ ಸರಕಾರಿ ಕಾಡುಗಳನ್ನು ಪ್ರವೇಶಿಸುವುದು ಅಪರಾಧವಾಗಿತ್ತಂತೆ. ಅವುಗಳನ್ನು ಹಿಡಿದು ಅದಕ್ಕೆಂದೇ ಕಟ್ಟಿದ ದೊಡ್ಡಿಯಲ್ಲಿ ಕೂಡಿಹಾಕುತ್ತಿದ್ದರು. ನಾವು ಹೋಗಿ, ದಂಡ ತೆತ್ತು ಅವುಗಳನ್ನು ಬಿಡಿಸಿಕೊಂಡು ಬರಬೇಕಾಗಿತ್ತು. ಆದರೆ ಇದೇ ಗಾರ್ಡ್, ರೇಂಜರ್ ಇತ್ಯಾದಿಗಳಿಗೆ ಏನಾದರೂ ರುಶುವತ್ತು (ಒಂದೋ ಹಣದ ರೂಪದಲ್ಲಿ, ಇಲ್ಲವೇ ಬಾಳೆಕಾಯಿ, ತೆಂಗಿನಕಾಯಿ, ಹಲಸಿನಕಾಯಿ ಇತ್ಯಾದಿ ವಸ್ತು ರೂಪದಲ್ಲಿ) ತೆತ್ತರೆ ನಮ್ಮ ದನಗಳನ್ನು ತಕರಾರಿಲ್ಲದೆ ಬಿಟ್ಟುಬಿಡುತ್ತಿದ್ದರು.

ಹುಲ್ಲುಗಳಲ್ಲಿ ಎಷ್ಟು ಬಗೆ? ಯಾರಿಗೆ ಗೊತ್ತು? ನಾನಂತೂ ಹುಲ್ಲಿನ ವಿದ್ಯಾರ್ಥಿಯಲ್ಲ. ನನಗದರ ಕುರಿತು ಏನಾದರೂ ಗೊತ್ತಿದ್ದರೆ ಅದು ಹೆಚ್ಚಾಗಿ ಅನುಭವದ ಮೂಲಕ. ಅಮ್ಮನ ಜತೆಯೋ ಒಬ್ಬನೆಯೋ ತೋಟದಲ್ಲಿ ತಿರುಗಾಡುತ್ತ ಅನೇಕ ತರದ ಹಸಿರು ಹುಲ್ಲ ಹಾಸಿನ ಮೇಲೆ ನಡೆದ ಅನುಭವವಿದೆ. ತಂಪು ಸ್ಥಳದಲ್ಲಿ ಅವು ದಟ್ಟವಾಗಿ ಬೆಳೆಯುತ್ತವೆ. ಕೆಲವೊಂದು ಮುಳ್ಳು ಕೂಡಾ ಅಲ್ಲಲ್ಲಿ ಇರಬಹುದು. ಅವುಗಳಿಂದ ಚುಚ್ಚಿಸಿಕೊಳ್ಳಬೇಕಾಗುತ್ತದೆ. ಉಳಿದಂತೆ ಬರಿಗಾಲಲ್ಲಿ ನಡೆಯುವಾಗ (ಅಲ್ಲದೆ ಚಪ್ಪಲಿ ಗಿಪ್ಪಲಿ ಕಂಡವರಾರು?) ಮಖಮಲ್ಲಿನ ಸ್ಪರ್ಶದ ಅನುಭವವಾಗುತ್ತದೆ. ಮಖಮಲ್ಲಾದರೂ ಅನೇಕ ವರ್ಷಗಳ ನಂತರ ಕಂಡದ್ದು. ಹಸಿ ಹುಲ್ಲಿನ ವಾಸನೆ, ಅದರ ಮೆತ್ತನೆ ಸ್ಪರ್ಶ, ಪಚ್ಚೆ ಬಣ್ಣದ ನೋಟ ಇವೆಲ್ಲವೂ ಸಹಜವಾಗಿ ಬರುವ ಅನುಭವಗಳು. ದನಗಳಿಗೆ ನೀಡುವ ಈ ಹುಲ್ಲು ಹೆಚ್ಚು ಉದ್ದವಾಗಿ ಬೆಳೆಯುವುದಿಲ್ಲ. ಬೇಸಿಗೆಯಲ್ಲಿ ಒಣಗಿ ಮಣ್ಣಿಗೆ ಹಿಡಿದುಹೋಗುತ್ತದೆ. ಮುಂದಿನ ಮಳೆಯಲ್ಲಿ ಮತ್ತೆ ಬೆಳೆಯಲು ಕಾಯುತ್ತ. ಆದರೆ ಇಂಥ ಹುಲ್ಲಿಗೆ ಕೂಡ ಬೆಳೆಯಲು ಸಾಕಷ್ಟು ಬಿಸಿಲೂ ಬೇಕು. ಆದ್ದರಿಂದ ನಮ್ಮ ಅಡಿಕೆ ತೋಟದ ಉದ್ದಗಲಕ್ಕೂ ಇದು ಬೆಳೆಯುವುದಿಲ್ಲ; ಎಲ್ಲಿ ಸೂರ್ಯನ ಬೆಳಕು ಬೀಳುವುದೋ ಎಲ್ಲಿ ನೆಲ ಸ್ವಲ್ಪ ತೇವ ಇರುವುದೋ ಅಲ್ಲಿ ಮಾತ್ರ ಬೆಳೆಯುತ್ತದೆ. ಎಂದರೆ ಸೂರ್ಯನ ಶಾಖವನ್ನು ಇದು ಹೀರಿ ತನ್ನದಾಗಿಸಿಕೊಂಡು ದನಗಳಿಗೆ ಆಹಾರವಾಗುತ್ತದೆ; ದನ ನಮಗೆ ಹಾಲು ಕೊಡುತ್ತದೆ. ಇದು ಸ್ಕೂಲು ವಿಜ್ಞಾನ. ಅದೇ ರೀತಿ, ಹುಲ್ಲು ಚೆನ್ನಾಗಿ ಬೆಳೆಯುವುದು ಸಮಶೀತೋಷ್ಣ ಪ್ರದೇಶಗಳಲ್ಲಿ; ಮೊಂಗೋಲಿಯಾದಂಥ ಕಡೆ ಹುಲ್ಲು ಧಾರಾಳ ಬೆಳೆಯುತ್ತದಂತೆ. ಅಲ್ಲಿ ಆಹಾರ ಕೃಷಿ ಸಾಕಷ್ಟು ಇಲ್ಲ. ಆದರೆ ಈ ಹುಲ್ಲನ್ನು ಕುದುರೆಗಳು, ಜಾನುವಾರುಗಳು ತಿನ್ನುತ್ತವೆ; ಕುದುರೆ ಮಾಂಸವನ್ನು ಜನ ತಿನ್ನುತ್ತಾರೆ.

ಟಿಬೆಟಿನಂಥ ಅತಿ ಎತ್ತರದ ಪ್ರದೇಶದಲ್ಲಿ ಆಹಾರ ಕೃಷಿ ತೀರಾ ಕಡಿಮೆ. ಬೆಳೆಯುವ ಅಲ್ಪ ಸ್ವಲ್ಪ ಹುಲ್ಲನ್ನು ಯಾಕ್ ಎಂಬ, ಟಿಬೇಟಿಗೆಂದೇ ದೇವರು ನಿರ್ಮಿಸಿದ, ಮೃಗಗಳು ತಿನ್ನುತ್ತವೆ. ಟಿಬೆಟನರಿಗೆ ಹಾಲು ಹೈನ, ಕಂಬಳಿ, ಚರ್ಮ ಎಲ್ಲಕ್ಕೂ ಯಾಕ್ ಒಂದೇ ಸಂಪನ್ಮೂಲ. ಹೀಗೆ ನಾನು ಓದಿದ್ದೇನೆ. ಹೈಸ್ಕೂಲಿನ ಪಠ್ಯಗಳಲ್ಲಿ ಪ್ರಯರಿ, ಸವನ್ನಾ, ತುಂದ್ರಾ, ಸ್ಟೆಪಿ ಮುಂತಾದ ಪ್ರದೇಶಗಳ ಕುರಿತು ಓದಿ ನಾನು ಪುಳಕಿತನಾದ್ದು ಇದೆ. ಅವೆಲ್ಲವೂ ಬೇರೆ ಬೇರೆ ರೀತಿಯ ವಿಶಾಲವಾದ ಹುಲ್ಲುಗಾವಲುಗಳು.

ನಮ್ಮಲ್ಲಿ ನನ್ನ ಚಿಕ್ಕಂದಿನಲ್ಲಿ ಅಲ್ಲಲ್ಲಿ ಹುಲುಗಾವಲುಗಳೇನೋ ಇದ್ದುವು. ನಮ್ಮದು ಏರು ತಗ್ಗಿನ, ಕಣಿವೆ ಬೆಟ್ಟಗಳ ಭೌಗೋಳಿಕ ಪ್ರದೇಶವಾದ ಕಾರಣ ‘ಅಡ್ಕಗಳು’ (ಪ್ರಶಸ್ತ ಪ್ರದೇಶಗಳು) ಹೆಚ್ಚು ಹರವಾಗಿ ಇರುವುದು ಕಡಿಮೆ. ಆದ್ದರಿಂದ ಹುಲ್ಲುಗಾವಲುಗಳ ವಿಸ್ತಾರವೂ ಹೇಳಿಕೊಳ್ಳುವಷ್ಟು ಇಲ್ಲ. ಆದರೆ ಈ ಪ್ರಯರಿ ಮುಂತಾದುವು ಹಾಗಲ್ಲ ಎನ್ನುವುದು ನನ್ನ ಕಲ್ಪನೆಯಾಗಿತ್ತು. ಮುಂದೆ ನಾನು ಅಮೇರಿಕೆಗೆ ಹೋದಾಗ ಅಯೋವಾ ಪ್ರಾಂತದಲ್ಲಿ ಸುವಿಸ್ತಾರವಾದ ಪ್ರಯರಿಗಳನ್ನು ಕಣ್ಣಾರೆ ನೋಡಿದೆ. ಅದೇ ರೀತಿ ಕಣ್ಣಿಗೆ ಹಬ್ಬವೆನಿಸುವ ಹುಲ್ಲುಗಾವಲುಗಳನ್ನು ನಾನು ನೋಡಿದುದು ಇಂಗ್ಲೆಂಡಿನಲ್ಲಿ. ಅವು ಸಮುದ್ರದ ತೆರೆಗಳಂತೆ ದಿಗಂತದ ಕಡೆ ಚಾಚಿಕೊಂಡಿರುತ್ತವೆ. ಇದೇ ಹುಲ್ಲುಗಾವಲುಗಳಲ್ಲಿ ಬೆಳೆದ ಕುರಿಗಳ ಉಣ್ಣೆಗಳನ್ನು ಹಿಂದೆ ಇಂಗ್ಲೆಂಡು ಯರೋಪಿನ ದೇಶಗಳಿಗೆ, ಮುಖ್ಯವಾಗಿ ಫ್ರಾನ್ಸಿಗೆ, ಕಚ್ಚಾ ವಸ್ತುವಾಗಿ ಮಾರಿ ಹಣಗಳಿಸುತ್ತಿದ್ದುದು. ನಂತರ ಈ ಉಣ್ಣೆಯಿಂದ ಸಿದ್ಧ ಉಡುಪುಗಳನ್ನು ಮಾಡಿ ಮಾರುವುದು ಹೆಚ್ಚು ಲಾಭದಾಯಕ ಎನ್ನುವುದನ್ನು ಅದು ಕಂಡುಕೊಂಡಿತು. ಇಂಗ್ಲೆಂಡಿನ ‘ಕಾಟ್ಸ್ವೋಲ್ಡ್ಸ್’ ವೂಲ್ ಇಂದಿಗೂ ಪ್ರಸಿದ್ಧ. (ಕಾಟ್ಸ್ವೋಲ್ಡ್ಸ್’ ಇಂಗ್ಲೆಂಡಿನ ದಕ್ಷಿಣ ಮಧ್ಯ ಭಾಗದ ಗ್ರಾಮಾಂತರ ಪ್ರದೇಶ.)

ಹೌದು, ನನ್ನ ಚಿಕ್ಕಂದಿನಲ್ಲಿ ನಮ್ಮ ಕಡೆಯೂ ಸಾಕಷ್ಟು ಹುಲ್ಲುಗಾವಲುಗಳು ಇದ್ದುವು. ಇವು ಬಹುಶಃ ಸರಕಾರಿ ಪ್ರದೇಶಗಳಾಗಿದ್ದುವು ಎಂದು ಕಾಣುತ್ತದೆ. ಕ್ರಮೇಣ ಇಲ್ಲೆಲ್ಲ ದರಖಾಸ್ತುಗಳಾಗಿ ಜಮೀನು ಖಾಸಗಿಯವರ ಪಾಲಾಯಿತು. (ದರಖಾಸ್ತು ಎಂದರೆ ಕೋರಿಕೆ ಎಂದರ್ಥ; ಅರೆಬಿಕ್ ಪದ. ಭೂಮಿಯಿಲ್ಲದವರು, ಅಥವಾ ಇದ್ದೂ ಏನೇನೋ ಕಾರಣವೊಡ್ಡಿ ಹುಲ್ಲು, ಸೊಪ್ಪು ಬೆಳೆಯಲು ಜಾಗ ಬೇಕೆನ್ನುವ ಕೃಷಿಕರು, ಅವರಲ್ಲಿ ಕೆಲವರು ಭೂದಾಹಿಗಳು, ಸರಕಾರಕ್ಕೆ ಅರ್ಜಿ ಹಾಕಿ, ಅಧಿಕಾರಿಗಳನ್ನು ಪೂಸಿ ಮಾಡಿಕೊಂಡು ತಮ್ಮ ಹೆಸರಿಗೆ ಸರಕಾರಿ ಜಾಗ ಬರೆಸಿಕೊಳ್ಳುವುದಕ್ಕೆ ದರಖಾಸ್ತು ಮಾಡಿಸುವುದು ಎಂಬ ಹೆಸರಿತ್ತು.) ನೋಡನೋಡುತ್ತಲೇ ಅವರು ಒಬ್ಬೊಬ್ಬರೂ ತಂತಮ್ಮ ದರಖಾಸ್ತು ಜಾಗದ ಸುತ್ತ ದರೆಗಳನ್ನು, ಅಥವಾ ಉಂಡೆ ಕಲ್ಲಿನ ಎದೆಯೆತ್ತರದ ಗೋಡೆಗಳನ್ನು ನಿರ್ಮಿಸಿದರು. ದರೆಗಳ ಮೇಲೆ ದಡ್ಡೋಲಿ ಸಸಿಗಳನ್ನು ನಟ್ಟು ಯಾವ ದನಗಳೂ ಒಳಕ್ಕೆ ಬಾರದಂತೆ ಬಂದೋಬಸ್ತು ಮಾಡಿಕೊಂಡರು. ನಿಜಕ್ಕೂ ಜಾನುವಾರುಗಳಿದ್ದುದು ಕೆಳಗೆ ಬಯಲು ಕಣಿವೆಗಳಲ್ಲಿನ ಕೃಷಿಕರ ಬಳಿ. ಅವರು ತಮ್ಮ ಈ ಸಾಕು ಪ್ರಾಣಿಗಳನ್ನು ಮೇಯಲು ಗುಡ್ಡಗಳಿಗೆ ಬಿಡುವುದು ಕಾಲಾಂತರದಿಂದ ಬಂದ ರೂಢಿಯಾಗಿತ್ತು. ಆದರೆ ಗುಡ್ಡೆಗಳು ದರಖಾಸ್ತ್ ಎಂಬ ಬಾಲ್ಕನೈಶೇಸನಿಗೆ ಒಳಗಾದ್ದೇ ಈ ಪ್ರಾಣಿಗಳಿಗೆ ಮೇಯಲು ಜಾಗವಿಲ್ಲದಾಯಿತು. ಅರ್ಥಾತ್ ಹುಲ್ಲುಗಾವಲುಗಳು ಮಕ್ಕಳ ಪುಸ್ತಕದಲ್ಲಿ ಮಾತ್ರ ಉಳಿದುವು! ಆದರೆ ಇದೆಲ್ಲ ಮುಂದೆ ಉಂಟಾದ ಪರಿಣಾಮ. ನನ್ನ ಚಿಕ್ಕಂದಿನಲ್ಲಾದರೆ ನಮ್ಮ ಪ್ರದೇಶದ ಭೂದೃಶ್ಯ ಹೆಚ್ಚು ತೊರಸಾಗಿತ್ತು, ಎಂದರೆ ದನಗಳು ಮೇಯಬಹುದಾದ ಹುಲ್ಲುಗಾವಲುಗಳು ಇದ್ದುವು. ಯಾರ ಜಾಗ ಯಾರ ಹುಲ್ಲು ಎನ್ನವ ಪ್ರಶ್ನೆಯನ್ನೇ ಕೇಳದೆ ಎಮ್ಮೆ ಕೋಣ ದನ ಎತ್ತುಗಳು ಸುಖವಾಗಿ ಅಲ್ಲಿ ಮೇಯುತ್ತಿದ್ದುವು. ನಮ್ಮ ಕಾರಡ್ಕದ ‘ಫಾರೆಸ್ಟ್ ಕಾಡಿನ’ ಸಮಸ್ಯೆಯೊಂದನ್ನು ಬಿಟ್ಟರೆ, ಉಳಿದಂತೆ ಗುಡ್ಡಗಾಡುಗಳು ಸಾಕಷ್ಟು ಮುಕ್ತವಾಗಿದ್ದುವು.

ಸ್ಕೂಲು ಕಲಿಯಲೆಂದು ನಾನು ಮಾವನ ಮನೆಗೆ ಹೋದೆ. ಅಲ್ಲಿಯೂ ಗುಡ್ಡಗಳು. ಅಡ್ಕಗಳು ಸಾಕಷ್ಟು ಇದ್ದುವು. ಜಾನುವಾರುಗಳನ್ನು ಮೇಯಲು ಈ ಅಡ್ಕಗಳಿಗೆ ಕಳಿಸಲಾಗುತ್ತಿತ್ತು. ಶಾಲೆ ಮಕ್ಕಳು ಕೆಲವೊಮ್ಮೆ ಗೋಪಾಲಕರಾಗಿ ಕೆಲಸ ಮಾಡಬೇಕಾಗುತ್ತಿತ್ತು. ಎಂದರೆ, ಸಂಜೆ ಶಾಲೆಯಿಂದ ಬಂದ ಕೂಡಲೆ, ಅಥವಾ ರಜಾದಿನಗಳಲ್ಲಿ, ನಮ್ಮ ನಮ್ಮ ಮನೆಯ ಎಮ್ಮೆ ದನಗಳನ್ನು ನಾವು ಎಬ್ಬಿಸಿಕೊಂಡು ಹಟ್ಟಿಗೆ ತರಬೇಕಾಗಿತ್ತು. ಇದು ನಮಗೆ ಸಂತೋಷದ ಕೆಲಸವೇ ಸರಿ. ಯಾಕೆಂದರೆ ಗುಡ್ಡದ ಮೇಲಿನ ಹುಲುಸಾದ ಹುಲ್ಲಿನ ಗುಂಟ ಸಾಗುವಷ್ಟು (ಅ)ಲೌಕಿಕ ಸುಖ ಬಹುಶಃ ಇನ್ನೊಂದು ಇರಲಾರದು. ನಿಮಗೆ ಕಲ್ಪನಾಶಕ್ತಿಯಿದ್ದರೆ ಇದೇ ಲೌಕಿಕ ಸುಖ ಪಾರಮಾರ್ಥಿಕ ಆನಂದವೂ ಆಗಬಹುದು. ಮೇಲೆ ಕೊಟ್ಟ ವ್ಹಿಟ್ ಮನ್ ಪದ್ಯವೂ ಇದನ್ನೇ ಹೇಳುವುದು. ವ್ಹಿಟ್ ಮನ್ ಅಮೇರಿಕದ ಪ್ರಯರಿಗಳಲ್ಲಿ ಹುಲ್ಲಿನ ನಡುವೆ ದಾರಿಮಾಡಿಕೊಂಡು ನಡೆಯುವ ಐಂದ್ರಿಯ ಸುಖದ ಬಗ್ಗೆ ಹೇಳುತ್ತಾನೆ; ಅದನ್ನೇ ಪಾರಮಾರ್ಥಿಕವಾಗಿ ಮಾಡಿಕೊಳ್ಳಬೇಕು ಎನ್ನುತ್ತಾನೆ. ನಾನಿಲ್ಲಿ ಹೇಳುವ ನಮ್ಮ ಅಡ್ಕಗಳ ಹುಲ್ಲು ಮೊದಲು ಹೇಳಿದ ತೋಟದ ಹುಲ್ಲಿನಂಥದಲ್ಲ. ಅಡ್ಕದ ಹುಲ್ಲಿಗೆ ನಾವು ಮುಳಿ (ಅಥವಾ ಮುಳಿಹುಲ್ಲು) ಎನ್ನುತ್ತೇವೆ, ಅರ್ಥಾತ್ ಇದು ವ್ಹಿಟ್ ಮನ್ ನ ಪ್ರಯರಿ ಹುಲ್ಲಿಗೆ ಸರಿಯಾದುದು. ಆಗ ನನಗೆ ವ್ಹಿಟ್ ಮನ್ ಗಿಟ್ ಮನ್ ಯಾರೂ ಗೊತ್ತಿರಲಿಲ್ಲ. ಆದರೂ ಮುಳಿ ಹುಲ್ಲಿನ ನಡುವೆ ದಾರಿ ಮಾಡಿಕೊಂಡು, ಅದರ ಗಂಧವನ್ನು ಆಘ್ರಾಣಿಸಿದ, ಹಾಗೂ ಆ ಹುಲ್ಲಿನಲ್ಲಿ ಎದೆಮಟ್ಟ ಮಾಯವಾದ, ಕೆಲವೊಮ್ಮೆ ಅದರಲ್ಲಿ ಬಿದ್ದುಹೊರಳಿದ, ಇಳಿಜಾರಿನಲ್ಲಿ ಜಾರಿದ ನನ್ನದೇ ಈ ಚಿಕ್ಕಂದಿನ ಅನುಭವ ಇರುವುದರಿಂದಲೋ ಏನೋ ವ್ಹಿಟ್ ಮನ್ ಪದ್ಯ ನನಗೆ ತುಂಬಾ ಇಷ್ಟವಾಗುತ್ತದೆ.

ನಮ್ಮ ನಮ್ಮ ಜಾನುವಾರುಗಳನ್ನು ಹುಡುಕಿ ಹೊರಟ ಗೋಪಾಲಕರಾದ ನಮ್ಮ ಲಕ್ಷ್ಯ ಕೇವಲ ಜಾನುವಾರುಗಳ ಮೇಲೇ ಇರಲಿಲ್ಲ; ಮಕ್ಕಳಾದ ನಮಗೆ ಈ ಹುಲ್ಲಿನ ವೈಭೋಗವನ್ನು ಆನಂದಿಸುವುದೇ ಮುಖ್ಯ ಇರಾದೆಯಾಗಿತ್ತು. ಅದೂ ಅರಬ್ಬೀ ಸಮುದ್ರದಲ್ಲಿ ಸೂರ್ಯನು ನಿಜವಾಗಿ ಮುಳುಗುತ್ತಿದ್ದ ಕಾಲ! ಕವಿ ಹೇಳುವಂತೆ ಆ ಅಸ್ತಮಯ ಸಮಯದಲ್ಲಿ ಸೂರ್ಯನು ತೊಳತೊಳ ತೊಳಗುವನು. ಅದೊಂದು ದಿವ್ಯ ಪ್ರಭೆ ಅಲೆ ಅಲೆಯಾಗಿ ಈ ಮುಳಿಹುಲ್ಲ ಸಮುದ್ರದ ಮೇಲೂ ಹಾಯುವುದು. ಸಂಜೆಯ ಗಾಳಿಗೆ ಮುಳಿಹುಲ್ಲು ಕೂಡಾ ಅಲೆ ಅಲೆಯಾಗಿ ಅಲ್ಲಾಡುವುದು. ಇದನ್ನೆಲ್ಲ ನೋಡುತ್ತ ಮೈಮರೆಯುವವರಲ್ಲಿ ನಾನೂ ಒಬ್ಬ. ಇದೇ ಹುಲ್ಲು ಆರಂಭದಲ್ಲಿ ಅಚ್ಚ ಹಸಿರು ಬಣ್ಣದಲ್ಲಿದ್ದುದು ಬೆಳೆಯುತ್ತ ಎತ್ತರವಾಗುತ್ತ ಹಣ್ಣಾಗುವುದು, ಹೊಂಬಣ್ಣಕ್ಕೆ ತಿರುಗುವುದು. ಇದರ ಸೂಕ್ಷ್ಮ ಕುಸುಮವು ಹಲವು ಜನರಿಗೆ ಅಲರ್ಜಿಯನ್ನೂ ತರುವುದು: ಮುಳಿ ಹಣ್ಣಾಗುವ ಜ್ವರ ಎಂಬ ಹೆಸರಿನ ಒಂದು ಜ್ವರವೇ ಇದೆ!

ಕಣ್ಣಿಗೆ ಹಬ್ಬವೆನಿಸುವ ಹುಲ್ಲುಗಾವಲುಗಳನ್ನು ನಾನು ನೋಡಿದುದು ಇಂಗ್ಲೆಂಡಿನಲ್ಲಿ. ಅವು ಸಮುದ್ರದ ತೆರೆಗಳಂತೆ ದಿಗಂತದ ಕಡೆ ಚಾಚಿಕೊಂಡಿರುತ್ತವೆ. ಇದೇ ಹುಲ್ಲುಗಾವಲುಗಳಲ್ಲಿ ಬೆಳೆದ ಕುರಿಗಳ ಉಣ್ಣೆಗಳನ್ನು ಹಿಂದೆ ಇಂಗ್ಲೆಂಡು ಯರೋಪಿನ ದೇಶಗಳಿಗೆ, ಮುಖ್ಯವಾಗಿ ಫ್ರಾನ್ಸಿಗೆ, ಕಚ್ಚಾ ವಸ್ತುವಾಗಿ ಮಾರಿ ಹಣಗಳಿಸುತ್ತಿದ್ದುದು.

ನಾವು ಹೆಚ್ಚಾಗಿ ಹೊರಳಲು ಇಷ್ಟಪಡುವುದು ನೆಯ್ ಮುಳಿ ಎಂಬ ಉತ್ತಮ ತಳಿಯ ಮುಳಿಯ ಮೇಲೆ; ಯಾಕೆಂದರೆ ಅದು ಹೆಸರೇ ಸೂಚಿಸುವಂತೆ ತುಂಬ ನಯವಾದುದು. ತುಂಬ ನಾಜೂಕು ಕೂಡ. ನೆಯ್ ಮುಳಿ ಹೆಚ್ಚು ಪ್ರದೇಶದಲ್ಲಿ ಬೆಳೆಯುವುದಿಲ್ಲ. ನಾನು ಉದ್ದೇಶಿಸುವ ಗುಡ್ಡದಲ್ಲಿ ಈ ನೆಯ್ ಮುಳಿಯ ಸುಂದರ ತೇಪೆಗಳು ಅಲ್ಲಲ್ಲಿ ಇದ್ದುವು. ಒಣ ಮುಳಿಯ ಮೇಲೆ ಹೀಗೆ ಹೊರಳಾಡಿದರೆ ನೆಯ್ ಮುಳಿಯಾಗಲಿ ಇತರ ಮುಳಿಗಳಾಗಲಿ ಬಾಗುತ್ತವೆ; ರಾತ್ರಿಯ ಇಬ್ಬನಿಗೂ ಅವು ತಲೆ ಬಾಗಿಸಬಹುದು. ನಸುಕಿನ ತನಕ ಅವು ಹಾಗೇ ಅವನತಶಿರಗಳಾಗಿ ಇರುತ್ತವೆ. ಆದರೆ ಏನಾಶ್ಚರ್ಯ! ಸೂರ್ಯ ಮೇಲೇರುವ ವೇಳೆಗೆ ಏನೂ ಆಗದವರಂತೆ ಎದ್ದು ನಿಂತುಕೊಳ್ಳುತ್ತವೆ. ಒಂದು ಗಾದೆಯಿದೆಯಲ್ಲ, ತಾಳಿದವನು ಬಾಳಿಯಾನು. ಮರವೊಂದು ಬಿರುಗಾಳಿಗೆ ಉರುಳಿ ಬೀಳಬಹುದು. ಆದರೆ ಹುಲ್ಲಿಗೆ ಏನೂ ಆಗುವುದಿಲ್ಲ. Lessed are the meek: for they shall inherit the earth. ಮ್ಯಾಥ್ಯೂ 5:5.

ಇನ್ನೊಂದು ವರ್ಗದ ಮುಳಿಯಿದೆ: ಅದು ಧಡಸಲು, ಎಂದರೆ ನೆಯ್ ಮುಳಿಯ ಗುಣಗಳಿಗೆ ವಿರುದ್ಧವಾದುದು. ಅದರ ದಂಟು ದಬ್ಬಣದಂತೆ ದಪ್ಪ, ಹಾಗೂ ದಳಗಳು ಕೂಡಾ ದೊರಗಾದುವು. ಬಹುಶಃ ದನಗಳು ಇಷ್ಟಪಡುವ ಜಾತಿಯದಲ್ಲ. ಈ ಹುಲ್ಲು ಕೂಡಾ ಬೆಳೆಯುವುದು ನೆಲ ದೊರಗಾದ ಜಾಗಗಳಲ್ಲೇ. ಇನ್ನು ಈ ಎರಡು ವರ್ಗಗಳ ನಡುವಣ ದರ್ಜೆಯ ಮುಳಿಯೊಂದು ಇದೆ: ಇದು ಬುದ್ಧನು ಹೇಳಿದ ಮಧ್ಯಮ ಮಾರ್ಗಿ. ಇದೇ ನಮ್ಮ ಕಡೆ ಧಾರಾಳವಾಗಿ ಬೆಳೆಯುವುದು, ಜಾನುವಾರುಗಳಿಗೆ ಆಧಾರ, ಮನುಷ್ಯರಿಗೂ ಮನೆ ಛಾವಣಿ ಹೊದೆಸುವುದಕ್ಕೆ ಅತ್ಯಗತ್ಯ. ಬೇಸಿಗೆಯಲ್ಲಿ ಈ ಮುಳಿಯನ್ನು ಶೇಖರಿಸಿ ಇಡುವ ಕಾರ್ಯಕ್ರಮ ಸುರುವಾಗುತ್ತದೆ. ಐದಾರು ಹಿಡಿಯಷ್ಟು ಮುಳಿ ಒಂದು ಸೂಡಿ. ಅದಕ್ಕೆ ಅದೇ ಮುಳಿಯ ಕಟ್ಟು. ಇಂಥ ಅರುವತ್ತು ಅಥವಾ ನೂರು ಸೂಡಿಗಳನ್ನು ಒಟ್ಟು ಸೇರಿಸಿ ಕಟ್ಟು ಹಾಕಿದರೆ ಅದು ಒಂದು ಕಟ್ಟು (‘ಕಟ್ಟ’) ಮುಳಿ. ಎಂದರೆ ಒಂದು ತಲೆಹೊರೆ.

ಇಂಥ ಕಟ್ಟುಗಳನ್ನು ಆಳುಗಳಿಂದ ತರಿಸುತ್ತಿದ್ದೆವು, ಹಾಗೂ ಮಾರುವವರಿಂದ ಕೊಳ್ಳುತ್ತಿದ್ದೆವು. ಅವುಗಳನ್ನು ಒಂದೋ ಕೊಟ್ಟಿಗೆಯ ಅಟ್ಟದಲ್ಲಿ ಶೇಖರಿಸಿಡುತ್ತಿದ್ದೆವು, ಇಲ್ಲವೇ ಅಂಗಳದಲ್ಲಿ ಮೆದೆಯಾಗಿ ಕೂಡಿಡುತ್ತಿದ್ದೆವು. ಇದು ಛಾವಣಿಗೂ ಆಯಿತು, ಜಾನುವಾರುಗಳಿಗೂ ಅಯಿತು, ಗುಡ್ಡದ ಮೇವು ಕಡಿಮೆಯಾದ ಮಳೆಗಾಲದಲ್ಲಿ. ಈ ಮಧ್ಯಮ ಮಾರ್ಗಿಗಳಲ್ಲೂ ಛಾವಣಿಗೆ ಹೆಚ್ಚು ಉತ್ತಮ ತರಗತಿಯದು, ಉಳಿದದ್ದು ಜಾನುವಾರುಗಳಿಗೆ.

ಜಾನುವಾರುಗಳು ಪ್ರೀತಿಸುವ ಇನ್ನೊಂದು ಹುಲ್ಲು ಬೈಹುಲ್ಲು: ಎಂದರೆ ಭತ್ತ ಕೊಯ್ದಾದ ನಂತರ ತೆನೆ ಬಡಿದು ಭತ್ತ ತೆಗೆದ ನಂತರ ಸಿಗುವ ಒಣಹುಲ್ಲು. ಇದಕ್ಕೆ ಲಘು ಹಳದಿ ಬಣ್ಣ. ಮುಳಿಹುಲ್ಲಿಗಿಂತ ಉದ್ದವೂ ಗಟ್ಟಿಯೂ ಆದ ಹುಲ್ಲು; ಬಹುಶಃ ಹೆಚ್ಚು ಪೌಷ್ಟಿಕ. ಇದನ್ನೂ ಸೂಡಿ ಮಾಡಿ ನಾವು ಶೇಖರಿಸಿ ಇಟ್ಟುಕೊಳ್ಳುತ್ತಿದ್ದೆವು—ಮನೆ ಹೊದೆಸುವುದಕ್ಕಲ್ಲ, ಜಾನುವಾರುಗಳಿಗೆ ತಿನಿಸುವುದಕ್ಕೆ. ಭತ್ತದ ಕೃಷಿ ಇರುವವರು ಇದನ್ನು ಕೊಳ್ಳುವ ಅಗತ್ಯವಿಲ್ಲ, ಯಾಕೆಂದರೆ ಇದು ಉಪ ಉತ್ಪತ್ತಿಯಾಗಿ ಸಿಗುವಂಥದು. ಆಶ್ಚರ್ಯದ ಮಾತೆಂದರೆ ಕೃಷಿಕರಿಗೆ ಯಾವುದೂ ನಿರುಪಯೋಗಿಯಾದ ಸಾಧನವಲ್ಲ! ಭತ್ತ, ಬಾಳೆ, ಕಂಗು, ತೆಂಗು ಎಲ್ಲದರ ಅವಯವವೂ ಪ್ರಯೋಜನಕಾರಿಯೇ. ಬೈಹುಲ್ಲನ್ನೂ ಒಂದೋ ಕೊಟ್ಟಿಗೆ ಅಟ್ಟದಲ್ಲಿ ಇಲ್ಲವೇ ಕೊಟ್ಟಿಗೆಯ ಕೋಣೆಯಲ್ಲಿ, ಅಥವಾ ಮೆದೆಯಾಗಿ ಒಟ್ಟೈಸಿ ಇಡುವುದು ಪದ್ಧತಿ. ಈ ಮೆದೆ ಒಂದು ಪುಟ್ಟ ಪಿರಮಿಡಿನಂತೆ ಅಂಗಳದ ಮೂಲೆಯಲ್ಲಿ ಶೋಭಿಸುವುದು. ಇದರೊಳಗೆ ಯಾವ ಫೇರೋ ಕೂಡ ಅಡಗಿರುವುದಿಲ್ಲ. ಮಳೆ ಬಿದ್ದ ಮೇಲೆ ಕೆಲವೊಮ್ಮೆ ಮೆದೆಯ ಪಕ್ಕಗಳಲ್ಲಿ ಅಣಬೆಗಳು ತಲೆಯೆತ್ತುತ್ತಿದ್ದುವು ಅಷ್ಟೆ. ಅಣಬೆಗಳ ಧೂಳಿನಂಥ ಸೂಕ್ಷ್ಮಾತಿಸೂಕ್ಷ್ಮ ಪುಡಿಗಳು ಬಹುಶಃ ಗಾಳಿಯಲ್ಲಿ ತೇಲಿ ಬಂದು ತೇವಕ್ಕಾಗಿ ಈ ಬೈಹುಲ್ಲಿ ಸಾಮೀಪ್ಯದಲ್ಲಿ ಕಾಯುತ್ತಿದ್ದುವು.

ನಾವು ಅಕ್ಕಿ ತೆಗೆಯುವ ಈ ಭತ್ತವೆನ್ನುವ ಸಸ್ಯ ಹುಲ್ಲಿನ ವರ್ಗಕ್ಕೆ ಸೇರಿದುದು. ಇದಲ್ಲದೆ ಗೋಧಿ, ಜೋಳ, ನವಣೆ, ರಾಗಿ ಮುಂತಾದ ಇತರ ಧಾನ್ಯಗಳೂ ಹುಲ್ಲಿನ ವರ್ಗದವೇ. ಮನುಷ್ಯರು ಹುಲ್ಲಿನಲ್ಲಿ ಬೆಳೆಯುವ ಧಾನ್ಯಗಳನ್ನು (ಬೀಜಗಳನ್ನು) ತಿಂದರೆ, ದನ, ಆಡು, ಕುರಿ, ಕುದುರೆ ಮುಂತಾದ ಪ್ರಾಣಿಗಳು ನೇರವಾಗಿ ಹುಲ್ಲನ್ನೇ ತಿಂದು ಬದುಕುತ್ತವೆ. ಈ ಪ್ರಾಣಿಗಳಿಂದ ವಿವಿಧ ಉಪಯೋಗ ಪಡೆಯುವ ಮನುಷ್ಯರು ಅವುಗಳ ಮಾಂಸವನ್ನೂ ತಿನ್ನಬಹುದು. ಇದು ಮನುಷ್ಯರಿಗೆ ಹುಲ್ಲಿನ ದ್ವಿತೀಯ ತರದ ಲಾಭ. ಫುಡ್ ಚೈನ್. ಎಂದ ಮೇಲೆ ಹುಲ್ಲಿನ ಪ್ರಾಮುಖ್ಯವನ್ನು ಒತ್ತಿ ಹೇಳಬೇಕಾದ ಅಗತ್ಯವಿಲ್ಲ.

ಚರಿತ್ರಪೂರ್ವದ ಒಂದು ಕಾಲದಲ್ಲಿ ಭತ್ತ, ಗೋಧಿ ಮುಂತಾದವು ಇನ್ನೂ ಗೃಹೀಕರಣಗೊಂಡಿರಲಿಲ್ಲ (domestication). ಅವುಗಳು ಕೇವಲ ಕಾಡು ಸಸ್ಯಗಳಾಗಿದ್ದುವು. ಅವುಗಳು ಯಾವುದೋ ಕಾಲದಲ್ಲಿ ತಳಿಸ್ಫೋಟಗೊಂಡು (mutation) ಅಹಾರಕ್ಕೆ ಯೋಗ್ಯವೆನಿಸಿದುವು. ಆಗಲೇ ಅವು ಗೃಹೀಕರಣಗೊಂಡುದು. ಇದೆಲ್ಲ ಎಲ್ಲಿ ಯಾವ ಕಾಲದಲ್ಲಿ ನಡೆದುವು, ಎಲ್ಲಿಂದ ಎಲ್ಲಿಗೆ ಹರಡಿದುವು ಎನ್ನುವುದು ಅತ್ಯಂತ ಕುತೂಹಲಕಾರಿ ವಿಷಯ. ಒಂದು ಕಾಲದಲ್ಲಿ ಗೋಧಿಗೆ ತುಂಬಾ ಮೀಸೆಯಿತ್ತಂತೆ—ಧಾನ್ಯವು ಗಾಳಿಗೆ ಹಾರಿಹೋಗಿ ಬೇರೆಡೆ ಪ್ರಸರಣಗೊಳ್ಳಲು ಅನುಕೂಲವಾಗಲಿ ಎಂದು. ಆಗ ಗೋಧಿ ವನ್ಯ ಸಸ್ಯವಾಗಿತ್ತು. ಆ ನಂತರ ಮೀಸೆ ಕಡಿಮೆಯಿರುವ ತಳಿಯೊಂದು ಮೂಡಿಬಂದಿರಬೇಕು; ಅದನ್ನೇ ಮನುಷ್ಯರು ಸಾಕು ಸಸ್ಯವಾಗಿ ಬೆಳೆಸಿದರು. ಯಾಕೆಂದರೆ ಅದೇ ಹೆಚ್ಚು ಅನುಕೂಲಕರವಾಗಿತ್ತು. ಆದ್ದರಿಂದ ನಮಗೀಗ ಪರಿಚಯ ಇರುವ ಗೋಧಿಗೆ ಮೀಸೆ ಕಡಿಮೆ. ಇಂದು ನನಗೆ ಆ ಇಂಗ್ಲಿಷ್ ಹುಡುಗಿ ಕಾಣಸಿಕ್ಕಿದ್ದರೆ ಅವಳ ಜತೆ ಮಾತಾಡಲು ಬಹಳಷ್ಟು ವಿಷಯಗಳಿರುತ್ತಿದ್ದುವು. ನಾವು ತಿಳದುಕೊಂಡಷ್ಟೂ ನಮ್ಮಲ್ಲಿ ಮತ್ತಷ್ಟು ಪ್ರಶ್ನೆಗಳು ಹುಟ್ಟುತ್ತವೆ. ಏನೂ ತಿಳಿಯದವನಿಗೆ ಪ್ರಶ್ನೆಗಳೇ ಇರುವುದಿಲ್ಲ.

ಒಂದು ಲೆಕ್ಕದ ಪ್ರಕಾರ ಈಚಿನ ತನಕ ಇಂಗ್ಲೆಂಡ್ ದೇಶದ ಮಣ್ಣಿನ ಶೇಕಡಾ 35 ಭಾಗವನ್ನು ಹುಲ್ಲು ಹೊದೆದಿತ್ತು; ಆದರೆ ವರ್ಷ ವರ್ಷವೂ ಈ ಅನುಪಾತದ ಪ್ರಮಾಣ ಕಡಿಮೆಯಾಗುತ್ತ ಇದೆ. ಇದೊಂದು ಆತಂಕದ ವಿಷಯ. ಕೇವಲ ಇಂಗ್ಲಿಷ್ ಜನರಿಗೇ ಅಲ್ಲ; ಲೋಕದ ಯಾವುದೇ ದೇಶದ ನಿಸರ್ಗ ಸಂಪತ್ತು ಕಡಿಮೆಯಾದರೂ ಅದು ಎಲ್ಲರನ್ನೂ ಬಾಧಿಸುವಂಥದು. ಇನ್ನು ಭಾರತದ ಮಣ್ಣಿನಲ್ಲಿ ಎಷ್ಟು ಭಾಗವನ್ನು ಹುಲ್ಲು ಹೊದೆದಿದೆ ಎಂದು ಗೊತ್ತಿಲ್ಲ. ಏನಿದ್ದರೂ ಸಾಮಾನ್ಯ ಜ್ಞಾನದ ಆಧಾರದ ಮೇಲೆ ಹೇಳುವುದಾದರೆ, ಹುಲ್ಲಿನ ಹೊದಿಕೆ ತೀವ್ರತರದಲ್ಲಿ ಕಡಿಮೆಯಾಗುತ್ತಿದೆ. ಮಣ್ಣನ್ನೇ ಕೊರೆಯುತ್ತ ಇದ್ದರೆ ಇನ್ನು ಹುಲ್ಲು ಬೆಳೆಯುವುದಾದರೂ ಎಲ್ಲಿ? ಹುಲ್ಲುಮಣ್ಣು ನಾಶವಾಗಿ ಸ್ಥಳಗಳು ಮರುಭೂಮಿಗಳಾದ ಉದಾಹರಣೆಗಳು ಭೂಗೋಲದ ಇತಿಹಾಸದಲ್ಲಿ ಸಾಕಷ್ಟು ಇವೆ. ಕೆಲವು ನೈಸರ್ಗಿಕವಾಗಿ ಹಾಗಾದರೆ, ಇನ್ನು ಕೆಲವು ಮಾನವ ಹಸ್ತಕ್ಷೇಪದಿಂದ ಹಾಗಾಗಿವೆ.

ಕೃಷಿಕರಿಗೆ ಮಾತ್ರವಲ್ಲ, ಕವಿಗಳಿಗೂ ಹುಲ್ಲುಗಳೆಂದರೆ ಇಷ್ಟ. ಚಿಕ್ಕ ಮಕ್ಕಳಿಗೂ ಹಾಗೆಯೇ. ಮುಂಜಾವದ ವೇಳೆ ಹುಲ್ಲಿನ ದಳಗಳ ಮೇಲೆ ಇಬ್ಬನಿ ಹನಿಗಳು ಸ್ಫಟಿಕದ ಮಣಿಗಳಂತೆ ಸೂರ್ಯನ ಬೆಳಕಿಗೆ ಹೊಳೆಯುವುದನ್ನು ನೋಡಲು ತುಂಬಾ ಖುಷಿ. ಕವಿಗಳು ವಿಚಿತ್ರ ಜೀವಿಗಳು. ಅವರು ಲೋಕದ ವಸ್ತುಗಳನ್ನು ಆಯಾ ವಸ್ತುಗಳಾಗಿಯೂ ಜತೆಗೇ ರೂಪಕಗಳಾಗಿಯೂ ಕಾಣುತ್ತಾರೆ. ಅಂತೆಯೇ ಅವರಿಗೆ ಹುಲ್ಲು, ಹುಲ್ಲೂ ಹೌದು, ರೂಪಕವೂ ಹೌದು. ವ್ಹಿಟ್ ಮನ್ ನ ಪ್ರಯರಿ ಪದ್ಯ ನೋಡಿ: ಈ ಪದ್ಯದಲ್ಲಿ (ಇದು ಅವನ 1855ರ Leaves of Grass ‘ಹುಲ್ಲಿನ ದಳಗಳು’ ಎಂಬ ಕವನಸಂಕಲನದಿಂದ ಎತ್ತಿಕೊಂಡದ್ದು), ಪ್ರಯರಿ ಹುಲ್ಲುಗಳು ವಾಸ್ತವವೇ: ಉದಾಹರಣೆಗೆ, ಅವುಗಳ ಮಧ್ಯೆ ದಾರಿ ಬಿಡಿಸುವಾಗಿನ ಗಂಧ; ಅವು ರೂಪಕಗಳೂ ಹೌದು: ಈ ಹುಲ್ಲುಗಳು ಪ್ರಸಿಡೆಂಟರನ್ನು, ಗವರ್ನರುಗಳನ್ನು ಲಕ್ಷ್ಯವಿಲ್ಲದೆ ಕೇಳುತ್ತವೆ: Who are you? ಎಷ್ಟೊಂದು ಅರ್ಥಗರ್ಭಿತವಾದ ಮಾತು! ಮಹಾ ಪ್ರಜಾಪ್ರಭುತ್ವವಾದಿ ವ್ಹಿಟ್ ಮನ್! ಇನ್ನೇನಿಲ್ಲದಿದ್ದರೂ ಹೀಗೆ ಕೇಳುವುದಕ್ಕಾದರೂ ಹುಲ್ಲುಗಳು ಇರಬೇಕು ಎನಿಸುತ್ತದೆ ಇದನ್ನೋದಿದರೆ.

I demand of it spiritual corresponding ಎನ್ನುತ್ತಾನೆ ವ್ಹಿಟ್ ಮನ್, ಈ ಪ್ರಯರಿ ದಾರಿಯ ಕುರಿತು. ಹುಲ್ಲಿನ ಜತೆ ಇಂಥ ಅತೀತವನ್ನು ಸಾಧಿಸಿದ ಇನ್ನೊಬ್ಬ ಕವಿ ವರ್ಡ್ಸ್ ವರ್ತ್. Intimations of ಕವಿತೆಯ ಹತ್ತನೇ ಭಾಗದಲ್ಲಿ ಅವನು ಹೀಗನ್ನುತ್ತಾನೆ:

What though the radiance which was once so bright
Be now for ever taken from my sight,
Though nothing can bring back the hour
Of splendour in the grass, of glory in the flower;
We will grieve not, rather find
Strength in what remains behind;
In the primal sympathy
Which having been must ever be;
In the soothing thoughts that spring
Out of human suffering;
In the faith that looks through death,
In years that bring the philosophic mind.
‘the hour/ Of splendour in the grass’! ಹುಲ್ಲಿನ ಮೇಲಣ, ಹೂವಿನ ಮೇಲಣ ದಿವ್ಯ ಗಳಿಗೆ!—ಕವಿ ಅನ್ನುವುದು ಬಾಲ್ಯದ ಜತೆ ಕಳೆದುಹೋಗುವ ದಿವ್ಯ ಕ್ಷಣಗಳ ಬಗ್ಗೆ–ಅದೀಗ ಕಳೆದು ಹೋದರೇನಾಯಿತು? ಆದಿಮ ಅನುಕಂಪವಿಲ್ಲವೇ, ಒಮ್ಮೆ ಇದ್ದುದು ಎಂದಿಗೂ ಇರುತ್ತದೆ ಎನ್ನುತ್ತಾನೆ ಕವಿ.

ಇರುತ್ತದೆಯೇ? ಭಾವಿಸಿದರೆ ಇರುತ್ತದೆ, ಇಲ್ಲದಿದ್ದರೆ ಇಲ್ಲ.