“ಗಿರಡ್ಡಿಯವರು ತಮಗೆ ಅನ್ನಿಸಿದ್ದನು ಹೇಳಲು ಹಿಂಜರಿದವರಲ್ಲ. ಅದು ಜನಪ್ರಿಯವಲ್ಲವೆಂದು, ಪೊಲಿಟಿಕಲಿ ಕರೆಕ್ಟ್ ಅಲ್ಲವೆಂದು ಸುಮ್ಮನೆ ಉಳಿಯುವವರೂ ಅಲ್ಲ. ಚೀರಿ ಹೇಳದೆ ಇರಬಹುದು, ಅಲಂಕಾರಗಳಲ್ಲಿ ಮುಳುಗಿ ತೇಲುವ ಭಾಷೆಯಲ್ಲಿ ಹೇಳದೆ ಇರಬಹುದು. ಆದರೂ ‘ತಾವು ಕಂಡ ಸತ್ಯ’ವನ್ನು ಮುಚ್ಚಿಡುವವರಲ್ಲ. ಆದ್ದರಿಂದಲೇ ಅವರಿಗೆ ಲೇಖಕಿಯರು, ಬಂಡಾಯದವರು ಇತ್ಯಾದಿ ‘ಗುಂಪು’ ಶತ್ರುಗಳಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಅಲ್ಲ. ಅವರು ಬರೆದಿರುವ ವಿಮರ್ಶೆಯ ತಾತ್ವಿಕತೆ ಮತ್ತು ಅನ್ವಯಗಳು ಗಂಭೀರವಾದ ಓದಿಗೆ ಅರ್ಹವಾಗಿವೆ”‘
ಇಂದು ಸಂಜೆ ಧಾರವಾಡದಲ್ಲಿ ನಿಧನರಾದ ಕನ್ನಡದ ಹಿರಿಯ ವಿಮರ್ಶಕ, ಕಥೆಗಾರ, ಅಧ್ಯಾಪಕ ಡಾ. ಗಿರಡ್ಡಿ ಗೋವಿಂದರಾಜ ಅವರ ಕುರಿತು ಕನ್ನಡದ ಇನ್ನೊಬ್ಬ ವಿಮರ್ಶಕ ಡಾ. ಎಚ್.ಎಸ್.ರಾಘವೇಂದ್ರರಾವ್ ಅವರು ಬರೆದಿದ್ದ ಸಾಲುಗಳು.

ವಿಮರ್ಶಕರೆಂದರೆ, ಸ್ವಂತ ಅನುಭವಲೋಕ ಮತ್ತು ಭಾವನೆಗಳಿಗೆ ಮುಖವಾಡ ಹಾಕಿದ ಮಂದಿ. ಅದರಲ್ಲೂ ‘ನವ್ಯವಿಮರ್ಶೆ’ಯ ಫರ್ಮಾನುಗಳಿಗೆ ಗಟ್ಟಿಯಾಗಿ ಅಂಟಿಕೊಂಡರಂತೂ ತೀರಿತು. ಗಿರಡ್ಡಿಯವರಂತೂ ಕಾಣಲೂ ಗಂಭೀರವಾಗಿಯೇ ಇರುವವರು. ಒಮ್ಮೆ ಲಂಕೇಶ್, ಅವರನ್ನು ‘ರಜೆಯಲ್ಲಿ ಮನೆಗೆ ಬಂದ ಸೈನಿಕನ ಹಾಗೆ ಕಾಣುವ ಗಿರಡ್ಡಿ’ ಎಂದು ವರ್ಣಿಸಿದ್ದರು. ಇದು ಖರೆಯಲ್ಲವೆನ್ನುವುದಕ್ಕೆ ಅವರ ಕವಿತೆಗಳು, ಕಥೆಗಳು ಮತ್ತು ಇತ್ತೀಚಿನ ಪ್ರಬಂಧಗಳು ಸಾಕ್ಷಿ. ಇಪ್ಪತ್ಮೂರು ವರ್ಷಗಳ ಹಿಂದೆ, ಗುಲ್ಬರ್ಗಾದ ಹೋಟೆಲಿನಲ್ಲಿ, ಇವರು ಮತ್ತು ಕುರ್ತಕೋಟಿಯವರು ಹರಟೆಯಲ್ಲಿಯೇ ರಾತ್ರಿ ಕಳೆದು, ಧಾರವಾಡದ ಅನೇಕ ಹಿರಿಯರ ವಿಕ್ಷಿಪ್ತತೆಗಳನ್ನು ಚರ್ಚಿಸುವಾಗಿನ ಗಹಗಹಗಹ ನಗು ಇನ್ನೂ ಮರೆತಿಲ್ಲ. ಅವರ ಸಂವೇದನಶೀಲವಾದ, ಅತಿಗೆ ಹೋಗದ, ಆರ್ದ್ರವಾದ ಮನಸ್ಸು ನನಗೆ ಚೆನ್ನಾಗಿ ಗೊತ್ತಿದೆ. ಒಮ್ಮೆ ಗೆಳೆಯ ಡಿ.ಆರ್. ಅವರಿಗೆ ಸಹಜವಾದ ಲಹರಿಯಲ್ಲಿ, ಇವರನ್ನು ಗೇಲಿ ಮಾಡಿದಾಗ, ಉತ್ತರ ಕೊಟ್ಟರೂ ಇವರ ಮುಖಭಾವ ಮುನಿಸಿಕೊಂಡ ಸೊಸೆಯದೇ ಆಗಿತ್ತು.

ಇದು ಹಾಗಿರಲಿ, ಗಿರಡ್ಡಿಯವರು ತಮಗೆ ಅನ್ನಿಸಿದ್ದನು ಹೇಳಲು ಹಿಂಜರಿದವರಲ್ಲ. ಅದು ಜನಪ್ರಿಯವಲ್ಲವೆಂದು, ಪೊಲಿಟಿಕಲಿ ಕರೆಕ್ಟ್ ಅಲ್ಲವೆಂದು ಸುಮ್ಮನೆ ಉಳಿಯುವವರೂ ಅಲ್ಲ. ಚೀರಿ ಹೇಳದೆ ಇರಬಹುದು, ಅಲಂಕಾರಗಳಲ್ಲಿ ಮುಳುಗಿ ತೇಲುವ ಭಾಷೆಯಲ್ಲಿ ಹೇಳದೆ ಇರಬಹುದು. ಆದರೂ ‘ತಾವು ಕಂಡ ಸತ್ಯ’ವನ್ನು ಮುಚ್ಚಿಡುವವರಲ್ಲ. ಆದ್ದರಿಂದಲೇ ಅವರಿಗೆ ಲೇಖಕಿಯರು, ಬಂಡಾಯದವರು ಇತ್ಯಾದಿ ‘ಗುಂಪು’ ಶತ್ರುಗಳಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಅಲ್ಲ. ಅವರು ಬರೆದಿರುವ ವಿಮರ್ಶೆಯ ತಾತ್ವಿಕತೆ ಮತ್ತು ಅನ್ವಯಗಳು ಗಂಭೀರವಾದ ಓದಿಗೆ ಅರ್ಹವಾಗಿವೆ. ನಮ್ಮ ಸಾಹಿತ್ಯ ಸಂಸ್ಕೃತಿಯ ಗ್ರಹಿಕೆಗೆ ಖಂಡಿತವಾಗಿಯೂ ನೆರವಾಗುತ್ತವೆ. ‘ಓದಿದರೆ, ಬೋರಾಗುವುದಲ್ಲ’ ಎಂದು ನಿಮಗೆ ತೋರಿದರೆ, ಅದು ನಿಮ್ಮ ಹಣೆಯ ಬರಹ. ಸಾಹಿತ್ಯವೆಂಬ ಹನುಮಪ್ಪನೇ ಹಗ್ಗ ತಿನ್ನುತ್ತಿರುವಾಗ ವಿಮರ್ಶಕನೆಂಬ ಪೂಜಾರಿಯನ್ನು ಕೇಳುವವರು ಯಾರು? ತೇಜಸ್ವಿಯವರಂತೂ ವಿಮರ್ಶಕರನ್ನು ಕಾಡುಪ್ರಾಣಿಗಳಂತೆ ಬೋನಿನಲ್ಲಿಟ್ಟು ಪ್ರದರ್ಶನ ಮಾಡಬೇಕೆಂದು ಹೇಳುತ್ತಿದ್ದರು. ಆದ್ದರಿಂದಲೇ ಇರಬೇಕು, ಚೆನ್ನಿಯವರು ಕೂಡ ಪಡ್ಡೆ ದಿನಗಳ ಕಥನದಲ್ಲಿ ಮುಖವಾಡವನ್ನು ತೆಗೆದಿಡುತ್ತಿದ್ದಾರೆ. ವಿಮರ್ಶಕರೆಲ್ಲರೂ ಮರೆಯಾಗುತ್ತಿದ್ದಾರೆ. ವಿಮರ್ಶೆಗೆ ಜಯವಾಗಲಿ.