ಕೇರಳದಿಂದ ಬರುವ ಈ ಚೂರಿಗಳ ಒಂದು ಬ್ರಾಂಡಿಗೆ ಹೆಚ್ಚಿನ ಬೇಡಿಕೆಯಿತ್ತು. ‘ಮುಂದಿನ ಸಲ ಬರುವಾಗ ನನಗೊಂದು ತಂದುಕೊಡಿ’ ಎನ್ನುತ್ತಿದ್ದರು. ಬಹುಶಃ ‘ತೋಟರ’ ಎನ್ನುವ ಬ್ರಾಂಡಿನದು. ಯಾಕೆ ಇಂಥ ಬೇಡಿಕೆಯೆಂದರೆ ನಮ್ಮೂರಿನ ತಯಾರಿಕೆಗಳಿಂತ ಇದು ಎಷ್ಟೋ ಮುಂದುವರಿದಿತ್ತು. ಇದಕ್ಕೆ ಬಳಸಿದ ಕಬ್ಬಿಣಕ್ಕೆ ಬೇಗ ತುಕ್ಕು ಹಿಡಿಯುತ್ತಿರಲಿಲ್ಲ. ಬಾಯಿ ಹರಿತವಾಗಿತ್ತು. ಅಲ್ಲದೆ ಇದರ ಹಿಡಿ ಉಳೆಕ್ಕೊಂಬಿನಿಂದ ಮಾಡಿದುದಾಗಿತ್ತು. ‘ಉಳೆಕ್ಕೊಂಬು’ ಎಂದರೆ ಜಿಂಕೆಯ ಕೊಂಬು. ಏನಿದರ ವಿಶೇಷ? ಒಂದು ರೀತಿಯಲ್ಲಿ ಆನೆಯ ದಂತದಷ್ಟೇ ಗಟ್ಟಿ, ಆದರೆ ಕಂದು ಬಣ್ಣದ್ದು. ಮುಖ್ಯವಾಗಿ ಇದರ ಮೈ ಹಿತವಾದ ದುಂಡು ಮೊನೆಗಳಂಥ ಏರುತಗ್ಗುಗಳಿಂದ ಕೂಡಿದ್ದು ಹಿಡಿಯಲು ಭದ್ರವಾಗಿತ್ತು.
ಕೆ.ವಿ. ತಿರುಮಲೇಶ್ ಬರಹ

 

ನಾನು ಚಿಕ್ಕವನಿದ್ದಾಗ (ಇಳಿವಯಸ್ಸಿನಲ್ಲಿ ಕಥನಗಳು ಹೀಗೇ ಮೊದಲಾಗುವುದಲ್ಲವೇ?!) ನಮ್ಮೂರಿಗೆ ನೈಲ್ ಕಟ್ಟರ್ ಎಂಬ ಅದ್ಭುತ ಸಾಧನವೊಂದು ಇನ್ನೂ ಪರಿಚಿತವಾಗಿರದ ಕಾಲದ ಬಗ್ಗೆ ಹೇಳುತ್ತಿದ್ದೇನೆ. ಕ್ಷಮಿಸಿ ನನಗೆ ಈ ಪುಟ್ಟ ಪುಟ್ಟ ತಾಂತ್ರಿಕ ಸಾಧನಗಳೆಲ್ಲವೂ ಅದ್ಭುತವಾಗಿಯೇ ಕಾಣುತ್ತವೆ – ಸೂಜಿಯಿಂದ ಹಿಡಿದು ಹೊಲಿಗೆ ಯಂತ್ರದ ವರೆಗೆ. ಅವು ಒಮ್ಮೆ ಆವಿಷ್ಕಾರಗೊಂಡು ದಿನ ಬಳಕೆಗೆ ಬಂದ ಮೇಲೆ ಜನರಿಗೆ ಸಾಮಾನ್ಯವಾಗಿ ಬಿಡುತ್ತವೆ. ಎಂದರೆ ಅವು ನಮ್ಮ ಮನೋವಲಯದ ಭಾಗವಾಗಿ ಬಿಡುತ್ತವೆ ಎಂದರ್ಥ.

ಆರ್ಜೆಂಟೀನಿಯನ್ ಕವಿ, ಕತೆಗಾರ ಬೋರ್ಹೆಸ್ “ಸರಳತೆ” ಎಂಬ ತನ್ನ ಕವಿತೆಯಲ್ಲಿ ಹೇಳುವಂತೆ ನಮ್ಮ ಪ್ರೀತಿಯ ಜಗತ್ತು ಗೇಟು ತೆರೆದು ಉದ್ಯಾನಕ್ಕೆ ಕಾಲಿಟ್ಟ ಹಾಗೆ ಇರುತ್ತದೆ. ನಾವಲ್ಲಿಗೆ ಹೋಗುತ್ತೇವೆ ಬರುತ್ತೇವೆ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ನಾವೇ ಅದರ ಭಾಗವಾಗಿಬಿಡುತ್ತೇವೆ, ಮತ್ತು ಅದು ನಮ್ಮ ಭಾಗವಾಗಿ. ಈ ಸೂಜಿಯನ್ನುನೋಡಿ: ಹೇಗೆ ನಮ್ಮದಾಗಿ (ಮತ್ತು ನಾವು ಅದರದಾಗಿ) ಬಿಟ್ಟಿದ್ದೇವೆ. ಮೆಣಸು ಜೀರಿಗೆ ತರಲು ಹೋದವನ ಅವಸ್ಥೆ ಏನಾಗುತ್ತದೆ? ಅವನು ಮೇಣ ಸೂಜಿ ತರುತ್ತಾನೆ! ‘ರೀಗೆ’ ಲೆಕ್ಕಕ್ಕಿಲ್ಲ. ಅವನ ಸ್ಮೃತಿಗೆ ಸೂಜಿ ಹತ್ತಿರ! ಹಾಗೆಂದು:

ಹರ್ ಹರ್ ಸೂಜಿ
ಘರ್ ಘರ್ ಸೂಜಿ

ಎಂದು ದಿನವೂ ಹೊಗಳೋದಕ್ಕೆ ಯಾರಿಗೆ ತಾನೆ ಸಮಯವಿದೆ? ಆದರೂ ಎಲ್ಲೋ ಇರಿಸಿ ಮರೆತು ಬಿಟ್ಟ ಒಂದು ‘ಯಃಕಶ್ಚಿತ್’ ಸೂಜಿಗಾಗಿ ಒಮ್ಮೆಯಾದರೂ ಪರದಾಡದೆ ಇದ್ದವರು ಯಾರಿದ್ದಾರೆ? ಆದರೆ ಅದು ‘ಯಃಕಶ್ಚಿತ್’ ಅಲ್ಲ! ಸುಲಭವಾಗಿ ಕಣ್ಣಿಗೆ ಬೀಳುವಂಥದಲ್ಲ, ಎಲ್ಲ ಅಂಗಡಿಗಳಲ್ಲಿ ಸಿಗುವಂಥದೂ ಅಲ್ಲ. ಸೂಜಿಯಿದೆಯೇ….? ಸೂಜಿಯಿದೆಯೇ…? ಎಂದು ಹುಡುಕಿಕೊಂಡು ಅಲೆದಾಡಬೇಕಾಗುತ್ತದೆ. ನಾಲ್ಕು ಕಾಸಿನ ಸೂಜಿಯನ್ನು ಮಾರಲು ತಮ್ಮಲ್ಲಿ ಇರಿಸಿಕೊಳ್ಳುವ ದೂಕಾನುದಾರರು ಎಲ್ಲಿದ್ದಾರೆ?

ಇದ್ದಾರೆ, ನಮ್ಮೂರ ಜಾತ್ರೆಯ ಸಂತೆಗಳಲ್ಲಿ. ನಾವು ಒಂದರ್ಧ ಡಜನು ದೊಡ್ಡ ಸಣ್ಣ ಸೂಜಿಗಳನ್ನು, ನೂಲಿನ ಉಂಡೆಗಳನ್ನು ಕೊಂಡುಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. 1980ರ ಸುಮಾರಿಗೆ ನಾನು ಇಂಗ್ಲೆಂಡಿಗೆ ಹೋದಾಗ ಚೀಲದಲ್ಲಿರಿಸಿಕೊಂಡ ಸಾಧನಗಳಲ್ಲಿ ಒಂದೆರಡು ಸೂಜಿಗಳು, ಕೆಲವು ಗುಬ್ಬಿಗಳು, ಸ್ವಲ್ಪ ನೂಲು ಇದ್ದುವು! ಇಂಗ್ಲೆಂಡಿನಲ್ಲಿ ರೆಡಿ ಮೇಡ್ ಅಂಗಿಗಳು ಎಲ್ಲೆಂದರಲ್ಲಿ ಸಿಗಬಹುದು, ಆದರೆ ಸೂಜಿ? ಗುಬ್ಬಿ? ಸೂಜಿ ಕಾಣೆ, ಗುಬ್ಬಿ ಮಾಯ!

ನೈಲ್ ಕಟ್ಟರ್ ಬರುವ ಶಕದ ಹಿಂದಿನ ಕಾಲವನ್ನು ಊಹಿಸಿಕೊಳ್ಳಿ. ನಾನು ಆ ಕಾಲದ ಮನುಷ್ಯ. ಉಗುರು ತೆಗೆಯುವ ಈ ಯಂತ್ರವನ್ನು ನಾನು ಮೊತ್ತ ಮೊದಲು ಕಂಡುದು ಕಾಲೇಜಿಗೆ ಹೋಗಲು ಸುರುಮಾಡಿದ ಮೇಲೆ. ಯಾಕೆಂದರೆ ಅದರ ಬಳಕೆ ನಗರ ಸಂಸ್ಕೃತಿಗೆ ಸೇರಿದ್ದಾಗಿತ್ತು. ನಾವು ಹಳ್ಳಿಗರು ಚೂರಿಯಿಂದ ಉಗುರು ತೆಗೆಯುತ್ತಿದ್ದೆವು. ಅದೊಂದು ಸುಲಭದ ಕೆಲಸವಲ್ಲ. ಸಾಧಾರಣ ಮನುಷ್ಯನೊಬ್ಬ ಮೂರು-ನಾಲ್ಕು ವಾರಗಳಿಗೊಮ್ಮೆಯಾದರೂ ಉಗುರು ತೆಗೆಯಬೇಕಾಗುತ್ತದೆ. ಕೈಯದ್ದು ಮತ್ತು ಕಾಲಿನದು. ಚೂರಿಯಿಂದ ಹೀಗೆ ತೆಗೆಯುವಾಗ ಅಪ್ಪಿ ತಪ್ಪಿ ಗಾಯವಾಗುವ ಸಂಭವ ಇದ್ದೇ ಇರುತ್ತದೆ.

ನಾವು ಹೆಚ್ಚಿನವರೂ ಬಲಗೈಯವರು, ಕೆಲವರು ಎಡಗೈಯವರು. ಸವ್ಯಸಾಚಿಗಳು ಕಡಿಮೆ. ಬಲಗೈಯವರು ಬಲಗೈಯ ಮತ್ತು ಎಡಗೈಯವರು ಎಡಗೈಯ ಉಗುರನ್ನು ಚೂರಿಯಿಂದ ಕತ್ತರಿಸುವುದು ತ್ರಾಸದಾಯಕವಾದ ಕೆಲಸವೇ ಸರಿ. ಇನ್ನು ಚಿಕ್ಕ ಮಕ್ಕಳ ಉಗುರನ್ನು ದೊಡ್ಡವರು ತೆಗೆಯುವ ಕೆಲಸವೂ ಹೀಗೆಯೇ. ಮೊದಲನೆಯದಾಗಿ, ಅವು ಕೂತಲ್ಲಿ ಕೂರುವುದಿಲ್ಲ. ಎರಡನೆಯದಾಗಿ ಉಗುರು ತೆಗೆಯಬೇಕು ಎನ್ನುವುದು ಅವಕ್ಕೆ ಗೊತ್ತಿರುವುದಿಲ್ಲ. ಎಲ್ಲಾದರೂ ಸ್ವಲ್ಪ ಗಾಯವಾದರೆ ಮಗುವಿಗೂ ನೋವು, ತಾಯಿಗೂ ಹಾಗೆಯೇ. ಇಪ್ಪತ್ತು ಬೆರಳುಗಳ ಉಗುರು ತೆಗೆಯುವಲ್ಲಿಗೆ ಒಂದು ಯುದ್ಧ ಮುಗಿದ ಹಾಗೆ….

ನಾನು ಹೇಳುತ್ತಿರುವುದು ಚೂರಿಯುಗದ ಕತೆ. ಚೂರಿಯ ಬಾಯಿ ಹರಿತವಾಗಿರಬೇಕು. ನಮ್ಮ ಊರಿನ ಚೂರಿಗಳು ಬಡ್ಡಾಗಿರುತ್ತಿದ್ದುವು: ‘ಹೊಕ್ಕುಳ ಬಳ್ಳಿ ಕತ್ತರಿಸಲೂ ಆಗುವಂತಿಲ್ಲ’ ಎಂಬ ಮಾತೊಂದು ಇತ್ತು. ಹರಿತ ಮಾಡುವುದಕ್ಕೆ ನಮ್ಮಲ್ಲೊಂದು ಕೌಶಲ್ಯವಿತ್ತು. ಮರದ ತುಂಡೊಂದರ (ಅಥವಾ ಅಡಿಕೆ ಮರದ ಸಲಿಕೆಯ) ಸಪಾಯಿ ಮೇಲ್ಮೈಗೆ ಬೆಂಗಲ್ಲಿನ (ಬೆಣಚು ಕಲ್ಲಿನ) ಪುಡಿಯನ್ನು ಹಾಕಿ ಕತ್ತಿಯನ್ನು (ಚೂರಿಯನ್ನು) ಅದರಲ್ಲಿ ಮಸೆಯುವುದು. ಹಾಗೆ ಮಾಡುವಾಗ ಕರ್ಕಶ ಸದ್ದಾಗುತ್ತದೆ, ಕೆಲವು ಬೆಂಕಿಯ ಕಿಡಿಗಳು ಹಾರಲೂಬಹುದು. ಒಂದು ಮಕ್ಕಳ ಕತೆಯಿದೆಯಲ್ಲ? ಕೆಲವು ಮಕ್ಕಳು ಅಜ್ಜಿಯ ಮನೆಗೆ ಹೊರಟಿರುತ್ತಾರೆ. ಅಜ್ಜಿ ಒಬ್ಬಳೇ ಕಾಡಿನ ಆಚೆ ವಾಸ ಮಾಡಿಕೊಂಡಿರುತ್ತಾಳೆ. ಮಕ್ಕಳು ಅಲ್ಲಿಗೆ ಹೋಗುವುದನ್ನು ತಿಳಿದುಕೊಂಡ ತೋಳ ಅಜ್ಜಿಯ ಮನೆಗೆ ಮುಂದಾಗಿ ಹೋಗಿ ಅಜ್ಜಿಯನ್ನು ಬಂಧಿಸಿಟ್ಟು ತಾನು ಅಜ್ಜಿಯ ವೇಷ ಹಾಕಿಕೊಂಡು ಅಲ್ಲಿ ಮಕ್ಕಳಿಗೋಸ್ಕರ ಕಾಯುತ್ತಿರುತ್ತದೆ. ರಾತ್ರಿಯೂಟದ ನಂತರ ಮಕ್ಕಳು ನಿದ್ರಿಸುತ್ತಿರುವಾಗ ಅವರನ್ನು ಕೊಂದು ತಿನ್ನುವುದು ತೋಳನ ಉದ್ದೇಶ. ಮಕ್ಕಳಿಗೆ ನಿದ್ದೆ ಬಂದಿರಬಹುದು ಎಂದುಕೊಂಡು ತೋಳ ಕತ್ತಲಲ್ಲಿ ಕತ್ತಿ ಮಸೆಯಲು ಸುರುಮಾಡುತ್ತದೆ. ಆದರೆ ಇನ್ನೂ ನಿದ್ರೆ ಬಂದಿರದ ಮಕ್ಕಳು:

ಜರ್ಕುಂ ಬುರ್ಕುಂ ಏನಜ್ಜೀ?
ಕತ್ತೀ ಮಸೆವುದು ಯಾರಜ್ಜೀ?

ಎಂದು ಕೇಳುತ್ತವೆ. ತೋಳ ಗುಟ್ಟು ಬಿಟ್ಟು ಕೊಡದೆ ಒಗಟು ಮಾತಿನಲ್ಲಿ ಏನೋ ಸಬೂಬು ಹೇಳುತ್ತದೆ. ಅಂತೂ ಕೊನೆಗೆ ತೋಳ ಸೋಲುತ್ತದೆ, ಮಕ್ಕಳು ಮತ್ತು ನಿಜವಾದ ಅಜ್ಜಿ ಬಚಾವಾಗುತ್ತಾರೆ. ಇಡೀ ಕತೆ ತುಂಬಾ ಚಂದ ಇದೆ. ಕತೆಯ ಎಲ್ಲಾ ವಿವರಗಳೂ ನನಗೀಗ ಈ ಇಳಿ ವಯಸ್ಸಿನಲ್ಲಿ ನೆನಪಿಲ್ಲ. ಆದರೆ, ‘ಜರ್ಕುಂ ಬುರ್ಕುಂ ಏನಜ್ಜೀ / ಕತ್ತೀ ಮಸೆವುದು ಯಾರಜ್ಜೀ?’ ಎನ್ನುವ ಪಲ್ಲವಿ ಇನ್ನೂ ನೆನಪಿದೆ ನೋಡಿ! ಬಹುಶಃ ಈ ಸಾಲುಗಳ ಲಾಲಿತ್ಯ, ಲಯ, ಅವಕ್ಕೆ ಸಂಬಂಧಿಸಿದ ನನ್ನ ಬಾಲ್ಯ ಜೀವನ ಇದಕ್ಕೆ ಕಾರಣವಿರಬೇಕು.

ನಮ್ಮ ಹಿರಿಯರು ದೇವಾಲಯಗಳ ಅರ್ಚಕರಾಗಿ ‘ತೆಂಕಲಾಗಿ’ (ಎಂದರೆ ಕೇರಳಕ್ಕೆ) ಹೋಗುತ್ತಿದ್ದರು. ಅಲ್ಲಿಂದ ಬರುವಾಗ ಏನಾದರೂ ವಿಶೇಷ ವಸ್ತುಗಳನ್ನು ತರುವುದು ವಾಡಿಕೆಯಾಗಿತ್ತು. ಹಾಗೆ ಅವರು ತರುತ್ತಿದ್ದ ವಸ್ತುಗಳಲ್ಲಿ ಒಂದು ಪೆನ್ ನೈಫ್ ಅಥವಾ ಪಾಕೆಟ್ ನೈಫ್ ಎಂದು ಇಂಗ್ಲಿಷ್ ನಲ್ಲಿ ಕರೆಯಲ್ಪಡುವ ಮಡಚುವ ಚೂರಿ. ಅದನ್ನು ನಾವು ‘ಪೀಶಾಕತ್ತಿ’ ಅಥವಾ ಚಿಕ್ಕದಾಗಿ ‘ಪಿಶಾತಿ’ ಎಂದು ಕರೆಯುತ್ತಿದ್ದೆವು. ಚಾಕು, ಚೂರಿ, ಕತ್ತಿ ಎಂದು ಮುಂತಾಗಿ ಅಲ್ಲ. ಈ ‘ಪೀಶಾಕತ್ತಿ’ಯ ವ್ಯುತ್ಪತ್ತಿ ಹೇಗೆಂದು ನನಗೆ ಗೊತ್ತಿಲ್ಲ. ಅದರ ಹ್ರಸ್ವ ರೂಪವೇ ‘ಪಿಶಾತಿ.’ ಪಿಶಾಚಿಗೂ ಅದಕ್ಕೂ ಸಂಬಂಧವಿಲ್ಲ. ಬಹುಶಃ ಮಲೆಯಾಳಿ ಭಾಷೆಯಿಂದ ನಮ್ಮ ಕಡೆಯ ಹವ್ಯಕವನ್ನು ಪ್ರವೇಶಿಸಿದುದು.

ಕೇರಳದಿಂದ ಬರುವ ಈ ಚೂರಿಗಳ ಒಂದು ಬ್ರಾಂಡಿಗೆ ಹೆಚ್ಚಿನ ಬೇಡಿಕೆಯಿತ್ತು. ‘ಮುಂದಿನ ಸಲ ಬರುವಾಗ ನನಗೊಂದು ತಂದುಕೊಡಿ’ ಎನ್ನುತ್ತಿದ್ದರು. ಬಹುಶಃ ‘ತೋಟರ’ ಎನ್ನುವ ಬ್ರಾಂಡಿನದು. ಯಾಕೆ ಇಂಥ ಬೇಡಿಕೆಯೆಂದರೆ ನಮ್ಮೂರಿನ ತಯಾರಿಕೆಗಳಿಂತ ಇದು ಎಷ್ಟೋ ಮುಂದುವರಿದಿತ್ತು. ಇದಕ್ಕೆ ಬಳಸಿದ ಕಬ್ಬಿಣಕ್ಕೆ ಬೇಗ ತುಕ್ಕು ಹಿಡಿಯುತ್ತಿರಲಿಲ್ಲ. ಬಾಯಿ ಹರಿತವಾಗಿತ್ತು. ಅಲ್ಲದೆ ಇದರ ಹಿಡಿ ಉಳೆಕ್ಕೊಂಬಿನಿಂದ ಮಾಡಿದುದಾಗಿತ್ತು. ‘ಉಳೆಕ್ಕೊಂಬು’ ಎಂದರೆ ಜಿಂಕೆಯ ಕೊಂಬು. ಏನಿದರ ವಿಶೇಷ? ಒಂದು ರೀತಿಯಲ್ಲಿ ಆನೆಯ ದಂತದಷ್ಟೇ ಗಟ್ಟಿ, ಆದರೆ ಕಂದು ಬಣ್ಣದ್ದು. ಮುಖ್ಯವಾಗಿ ಇದರ ಮೈ ಹಿತವಾದ ದುಂಡು ಮೊನೆಗಳಂಥ ಏರುತಗ್ಗುಗಳಿಂದ ಕೂಡಿದ್ದು ಹಿಡಿಯಲು ಭದ್ರವಾಗಿತ್ತು. ವಿವಿಧ ಸೈಜುಗಳಲ್ಲಿ ಈ ಪೀಶಾಕತ್ತಿ ದೊರಕುತಿತ್ತು. ತೋರು ಬೆರಳಷ್ಟು ಉದ್ದದ ಹಿಡಿ ಇರುವ ಮಧ್ಯಮ ದರ್ಜೆಯದು ಜನಪ್ರಿಯವಾಗಿತ್ತು. ಮನೆಯಲ್ಲೊಂದು ತೋಟರ ಪಿಶಾತಿ ಅರ್ಥಾತ್ ಪೀಶಾಕತ್ತಿಯಿದ್ದರೆ ಅದು ಸರ್ವೋಪಯೋಗಿ; ಆದರೆ ಅದು ಹೆಚ್ಚಾಗಿ ಬಳಕೆಯಾಗುತ್ತಿದ್ದುದು ಎಲೆಯಡಕೆ ತಟ್ಟೆಗಳಲ್ಲಿ, ಮತ್ತು, ಉಗುರು ಕತ್ತರಿಸುವುದಕ್ಕೆ!

ಚಿಕ್ಕ ಮಕ್ಕಳ ಉಗುರನ್ನು ದೊಡ್ಡವರು ತೆಗೆಯುವ ಕೆಲಸವೂ ಹೀಗೆಯೇ. ಮೊದಲನೆಯದಾಗಿ, ಅವು ಕೂತಲ್ಲಿ ಕೂರುವುದಿಲ್ಲ. ಎರಡನೆಯದಾಗಿ ಉಗುರು ತೆಗೆಯಬೇಕು ಎನ್ನುವುದು ಅವಕ್ಕೆ ಗೊತ್ತಿರುವುದಿಲ್ಲ. ಎಲ್ಲಾದರೂ ಸ್ವಲ್ಪ ಗಾಯವಾದರೆ ಮಗುವಿಗೂ ನೋವು, ತಾಯಿಗೂ ಹಾಗೆಯೇ. ಇಪ್ಪತ್ತು ಬೆರಳುಗಳ ಉಗುರು ತೆಗೆಯುವಲ್ಲಿಗೆ ಒಂದು ಯುದ್ಧ ಮುಗಿದ ಹಾಗೆ….

ಹವ್ಯಕದಲ್ಲಿ ಬರೇ ಕತ್ತಿ ಎಂದರೆ ಕುಡುಗೋಲು, ಕಮ್ಯೂನಿಸ್ಟ್ ಪತಾಕೆಯಲ್ಲಿರುವಂಥದು, ಕುಡುಗೋಲು ಅಥವಾ ಕುಯಿಲುಗೋಲು, ಹುಲ್ಲು ಕೆರೆಯುವುದಕ್ಕೆ ಸಣ್ಣ ಗಾತ್ರದ್ದು. ಸೊಪ್ಪು ಕೊಚ್ಚುವ ಕತ್ತಿಯೇ ಹಿರಿದು; ಅದಕ್ಕೆ ಕಡ್ಪಕತ್ತಿ ಎನ್ನುವರು. ಗೂಟದ ಮೇಲೆ ಒಂದು ಹಿಡಿ ಹಸಿರು ಸೊಪ್ಪನ್ನು ಇರಿಸಿ ಈ ಭಾರವಾದ ಕಡ್ಪ ಕತ್ತಿಯಿಂದ ನಾನು ಎಷ್ಟೋ ಬಾರಿ ಕೊಚ್ಚಿದ್ದೇನೆ. ಇದು ದನಗಳ ಹಟ್ಟಿಗೆ, ಅವಕ್ಕೆ ಬೆಡ್ಡು, ನಮಗೆ ಗೊಬ್ಬರ.

ಇದೇ ಸಂದರ್ಭದಲ್ಲಿ ಊರಿಗೆ ಇನ್ನೊಂದು ಆವಿಷ್ಕಾರ ಪ್ರವೇಶ ಕೊಟ್ಟಿತ್ತು. ಅದುವೇ ಸೇಫ್ಟಿ ರೇಝರ್. ಅದುವರೆಗೆ ಜನರು ಬಾಳಿನಿಂದ ಗಡ್ಡ ಮಾಡಿಸಿಕೊಳ್ಳುತ್ತಿದ್ದರು – ಊರ ಕ್ಷೌರಿಕನಿಂದ (ಆತ ಮನೆ ಮನೆಗೆ ಬರುತ್ತಿದ್ದ)– ಅಥವಾ ತಮಗೆ ತಾವೇ. ಈ ಬಾಳು ಎಂಬ ಸಾಧನ ಈಗಲೂ ಕ್ಷೌರದಂಗಡಿಗಳಲ್ಲಿ ಬಳಕೆಯಲ್ಲಿದೆ. ಹರಿತವಾದ ಬಾಯಿ (ಅಲಗು) ಇರುವ, ಒಳಗಡೆಗೆ ಮಡಚಿಕೊಳ್ಳಬಹುದಾದ ಹೆರೆಯುವ ಚಾಕು ಇದು. ಇದನ್ನು ಹರಿತಗೊಳಿಸುವುದು ಚರ್ಮದನಾಲಿಗೆ (ನೀಳವಾದ ಹಾಳೆ) ಮೇಲೆ. ನನ್ನ ಅಣ್ಣನ ಬಳಿ ಇಂಥದೊಂದು ಬಾಳು ಇತ್ತು, ಹಾಗೂ ಅವರು ತಮ್ಮ ಗಡ್ಡವನ್ನು ತಾವೇ ಹೆರೆದುಕೊಳ್ಳುತ್ತಿದ್ದರು. ಕನ್ನಡಿ ಮುಂದಿಟ್ಟುಕೊಂಡು, ಪಕ್ಕದಲ್ಲಿರಿಸಿದ ನೀರಿನ ಗ್ಲಾಸಿನಲ್ಲಿ ಸಾಬೂನು ಅದ್ದಿ ಮೋರೆಗೆ ಲೇಪಿಸಿ ಮೋರೆಯನ್ನು ವಿಕಾರವಾಗಿ ಮಾಡಿಕೊಂಡು ಬಾಳನ್ನು ಕೆನ್ನೆಗಿರಿಸಿ ನಡೆಸುವ ಈ ಕಾರ್ಯಕ್ರಮ ನೋಡಲು ಖುಷಿ, ಆದರೆ ಗಡ್ಡ ಹೆರೆಯುವವನಿಗೆ ಅಲ್ಲ. ಯಾಕೆಂದರೆ ಪ್ರತಿ ಬಾರಿಯೂ ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಸೋರದೆ ಇರುತ್ತಿರಲಿಲ್ಲ. ಆದ್ದರಿಂದ ಇದು ಪ್ರತಿ ದಿನ ನಡೆಸುವ ಕ್ರಿಯೆಯಾಗಿರಲಿಲ್ಲ; ಆದರೆ ಹಾಗೆಂದು ದೀರ್ಘ ಕಾಲ ಮುಂದೂಡುವ ಹಾಗೆಯೂ ಇಲ್ಲ, ಕಾರಣ ಗಡ್ಡ ಹೆಚ್ಚು ಬೆಳೆದರೆ ಅದನ್ನು ತೆಗೆಯಲು ಮತ್ತೆ ಕ್ಷೌರಿಕನೇ ಬೇಕು! ನಾನೆಂದೂ ಈ ಬಾಳು ಬಳಸುವ ಅಗತ್ಯ ಬರಲಿಲ್ಲ. ಯಾಕೆಂದರೆ ನಾನು ಬೆಳೆಯುತ್ತಿದ್ದಂತೆ ಸೇಫ್ಟಿ ರೇಝರ್ ಮಾರುಕಟ್ಟೆಗೆ ಬಂದಿತ್ತು.

ಇಂದಿನ ಓದುಗರಿಗೆ ಸೇಫ್ಟಿ ರೇಝರ್ ಚೆನ್ನಾಗಿ ಗೊತ್ತಿರುವ ಕಾರಣ ನಾನದನ್ನು ಇಲ್ಲಿ ವಿವರಿಸಬೇಕಾದ ಅವಶ್ಯಕತೆ ಇಲ್ಲ. ಈ ಸೇಫ್ಟಿ ರೇಝರ್, ಸೇಫ್ಟಿ ಮ್ಯಾಚಸ್ (ಬೆಂಕಿ ಪೆಟ್ಟಿಗೆ), ಸೇಫ್ಟಿ ಪಿನ್ ಕೂಡ ಇಂದು ನಮಗೆ ಚಿರ ಪರಿಚಿತವಾಗಿರುವ ಕಾರಣ ಇವುಗಳಿಲ್ಲದ ಕಾಲವನ್ನು ಊಹಿಸುವುದೂ ಕಷ್ಟ. ಈ ಎಲ್ಲಾ ‘ಸೇಫ್ಟಿ’ದಾರರಿಗೆ ನಾವು ಕೃತಜ್ಞರಾಗಿರಬೇಕು. ಹೆಸರಿಸಲು ಇಲ್ಲಿ ಜಾಗ ಸಾಲದಂಥ ಇಂಥ ಹಲವಾರು ಚಿಕ್ಕ ಪುಟ್ಟ ಆವಿಷ್ಕಾರಗಳಿವೆ. ಇವುಗಳ ಹಿಂದಿರುವ ಸೃಷ್ಟಿಕರ್ತರು ಇಂದು ನಮ್ಮ ಮಟ್ಟಿಗೆ ಬಹುತೇಕ ಅನಾಮಿಕರು. ಆದರೆ ಅಷ್ಟಕ್ಕೆ ಅವರ ಕೊಡುಗೆ ನಗಣ್ಯವಾಗುವುದಿಲ್ಲ. ಇವು ಯಾವುವೂ ಒಂದು ದಿನದಲ್ಲಿ ನಿರ್ಮಾಣವಾಗಲಿಲ್ಲ, ಒಬ್ಬ ವ್ಯಕ್ತಿಯಿಂದಲೂ ಅಲ್ಲ. ಇವುಗಳ ಹಿಂದೆ ಹಲವರ ಪರಿಶ್ರಮಗಳಿವೆ.

ಸೇಫ್ಟಿ ರೇಝರಿನಲ್ಲಿ ಉಕ್ಕಿನ ತೆಳು ಬ್ಲೇಡ್ ಇದೆ ತಾನೆ? ಇದು ಬಹಳ ಹರಿತವಾದುದು. ಕ್ಷೌರಿಕರು ಒಂದು ಬ್ಲೇಡನ್ನು ಎರಡಾಗಿ ಮುರಿದುಕೊಂಡು ಬಾಳಿನಂಥ ಫ್ರೇಮಿಗೆ ತಗಲಿಸಿ ಗಡ್ಡ ಹೆರೆಯುವ ತಾಂತ್ರಿಕತೆಯನ್ನು ಈಗ ರೂಢಿಸಿಕೊಂಡಿದ್ದಾರೆ. ಇದು ಪರವಾಯಿಲ್ಲ. ಪ್ರತಿ ಬಾರಿಯೂ ಬ್ಲೇಡಿನ ತುಂಡು ಹೊಸತಾಗಿರುವುದರಿಂದ ಕ್ಷೌರದ ಮೂಲಕ ಹರಡಬಹುದಾದ ಸೋಂಕಿನ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಬ್ಲೇಡನ್ನು ಕೆಲವರು ಉಗುರು ತೆಗೆಯಲು ಬಳಸುವುದಿದೆ. ನೈಲ್ ಕಟ್ಟರ್ ಬಂದ ಮೇಲೂ ಹೀಗೆ ಮಾಡುವುದರಲ್ಲಿ ಅರ್ಥವಿಲ್ಲ. ಬ್ಲೇಡಿನಿಂದ ಉಗುರು ತೆಗೆಯುವುದು ಬಹಳ ಅಪಾಯಕಾರಿ ಕೆಲಸ. ಎಲ್ಲಾದರೂ ಕೈ ಜಾರಿದರೆ ಗಾಯವಾಗುವ ಸಂಭವ ಜಾಸ್ತಿ. ಅಲ್ಲದೆ ಕಾಲಿನ ಉಗುರುಗಳು ಒರಟಾಗಿದ್ದು ಬ್ಲೇಡಿನ ನಾಜೂಕಿಗೆ ಹಿಡಿಸುವುದೂ ಇಲ್ಲ.

ನಾನು ‘ಸನಾ’ದಲ್ಲಿ ಕೆಲಸದಲ್ಲಿದ್ದಾಗ ನನ್ನ ಅಪಾರ್ಟ್ಮೆಂಟಿನ ಕೆಳಗಿನ ಅಪಾರ್ಟ್ಮೆಂಟಿನಲ್ಲಿ ಇರಾಕಿ ಪ್ರೊಫೆಸರ್ ಒಬ್ಬರು ವಾಸವಿದ್ದರು. ಅವರು ಏನು ಕಲಿಸುತ್ತಿದ್ದರೋ ತಿಳಿಯದು. ಆದರೆ ಯಾವಾಗಲೂ ತಮ್ಮ ಮನೆ ಮುಂದಿನ ವೆರಾಂಡದಲ್ಲಿ ನಿಂತುಕೊಂಡು ತಮ್ಮ ಜೇಬಿನಲ್ಲಿದ್ದ ಒಂದು ಹಿಡಿ ಪೆನ್ಸಿಲುಗಳನ್ನು ಒಂದೊಂದಾಗಿ ತೆಗೆದು ಮೊನೆ ಮಾಡುತ್ತಿದ್ದರು. ಅವರು ಹಾಗೆ ಮಾಡುತ್ತಿದ್ದುದು ಬ್ಲೇಡಿನಲ್ಲಿ. ಯಾಕೆ ಇಷ್ಟೊಂದು ಪೆನ್ಸಿಲುಗಳು, ಅದೂ ದಿನ ದಿನವೂ ಎನ್ನುವುದು ನನಗೆ ಅಚ್ಚರಿಯ ವಿಷಯವಾಗಿತ್ತು. ಏನೋ ಮಹಾ ಕಾದಂಬರಿಯೊಂದನ್ನು ಬರೆಯುತ್ತಿದ್ದರೇ? ಪೆನ್ಸಿಲ್ ನಲ್ಲಿ? ಆದರೂ ನಾನು ವಿಚಾರಿಸಲು ಹೋಗಲಿಲ್ಲ. ಅವರವರ ಚಟ ಅವರವರಿಗೆ. ನಾವು ಪರಸ್ಪರ ಕಂಡಾಗಲೆಲ್ಲ ನಸು ನಕ್ಕು ತಲೆಯಾಡಿಸುತ್ತಿದ್ದೆವು, ಅಷ್ಟೆ.

ಅವರ ಕುರಿತು ಯೋಚಿಸಿದಾಗಲೆಲ್ಲ ನನಗೆ ಚಾಲ್ರ್ಸ್ ಡಿಕೆನ್ಸ್ನ “ಡೇವಿಡ್ ಕಾಪರ್ ಫೋಲ್ಡ್” ಕಾದಂಬರಿಯಲ್ಲಿ ಬರುವ ಡಿಕ್ ಎಂಬ ಕಥಾಪಾತ್ರವೊಂದರ ನೆನಪಾಗುತ್ತದೆ. ಈ ಡಿಕ್ ತನ್ನ ಅಣ್ಣನ ಕೈಯಿಂದ ಸಾಕಷ್ಟು ದೌರ್ಜನ್ಯಕ್ಕೆ ಒಳಗಾಗಿ ಹುಚ್ಚಾಸ್ಪತ್ರೆ ಸೇರಿ ನಂತರ ಆಶ್ರಯದಾತೆಯೊಬ್ಬಳ ಮನೆಯಲ್ಲಿ ಇರುತ್ತಾನೆ. ಕಾಪರ್ ಫೀಲ್ಡ್ ನ ಗೆಳೆಯ ಅವನು, ದೈಹಿಕವಾಗಿ ಬೆಳೆದರೂ ಮಾನಸಿಕವಾಗಿ ಇನ್ನೂ ಮಗು, ಆದರೆ ಮಹಾ ಪರೋಪಕಾರಿ. ತನ್ನ ‘ಮೆಮ್ವಾ’ (ಜೀವನ ಸ್ಮೃತಿ) ಬರೆಯುವ ಯತ್ನ ನಡೆಸಿದ್ದಾನೆ. ‘ಮೆಮ್ವಾ’ವನ್ನು ಅವನು ತಪ್ಪಾಗಿ ಹೇಳುವುದು ‘ಮೆಮೋರಿಯಲ್’ (ಸ್ಮಾರಕ) ಎಂಬುದಾಗಿ! ಆದರೆ ಎಂದೂ ಈ ಯತ್ನ ಯಶಸ್ವಿಯಾಗುವುದಿಲ್ಲ. ಯಾಕೆಂದರೆ ಅವನು ಬರೆಯಲು ಕುಳಿತಾಗಲೆಲ್ಲಾ ಒಂದನೇ ಕಿಂಗ್ ಚಾಲ್ರ್ಸ್ನ ರುಂಡ ಅವನ ಲಕ್ಷ್ಯವನ್ನು ಭಂಗಪಡಿಸುತ್ತ ಇರುತ್ತದೆ! (ಇಂಗ್ಲೆಂಡಿನ ಒಂದನೇ ಕಿಂಗ್ ಚಾಲ್ರ್ಸ್ ವಧಾ ಶಿಕ್ಷೆಗೆ ಗುರಿಯಾದವ.)

ನನಗೆ ಇನ್ನೊಂದು ನೆನಪೂ ಬರುತ್ತದೆ. ಮಿಡ್ಲ್ ಸ್ಕೂಲಿನ ತನಕ ನಾವು ಬರೆಯಲು ಬಳಸುತ್ತಿದ್ದುದು ಪೆನ್ಸಿಲೇ. ಪೆನ್ಸಿಲ್ ಎಂದಮೇಲೆ ಅದನ್ನು ಮೊನೆ ಮಾಡುತ್ತ ಇರಬೇಕಲ್ಲ? ಅದಕ್ಕೆ ಪೀಶಾಕತ್ತಿಯನ್ನು ಬಳಸುತ್ತಿದ್ದೆವು. ಅದು ಸರಿಯಾಗುತ್ತಲೇ ಇರಲಿಲ್ಲ. ಬಡ್ಡು ಬಡ್ಡಾಗಿ ಇರುತ್ತಿತ್ತು. ಆದರೆ ಆಗ ಅದೃಷ್ಟವಶಾತ್ ‘ಪೆನ್ಸಿಲ್ ಮೊನೆ ಮಾಡುವ ಯಂತ್ರ’ವೊಂದು ಮಾರ್ಕೆಟಿಗೆ ಬಂತು. ನಮ್ಮ ಖುಷಿಗೆ ಪಾರವೇ ಇಲ್ಲ. ಅದರ ಇಂಗ್ಲಿಷ್ ಹೆಸರು ಪೆನ್ಸಿಲ್ ಶಾರ್ಪನರ್ ಎಂದಿದ್ದರೂ ನಾವು ಅದನ್ನು ಕರೆಯುತ್ತಿದ್ದುದು ಪೆನ್ಸಿಲ್ ಮೊನೆ ಮಾಡುವ ಯಂತ್ರ ಎಂದೇ. ಎಲ್ಲರ ಕೈಯಲ್ಲೂ ಅಂಥದೊಂದು ಯಂತ್ರ ಈಗ ಕಾಣಿಸಿಕೊಳ್ಳಲು ಸುರುವಾಯಿತು. ಸ್ಟೀಲಿನ ಮೈಯದು, ಪ್ಲಾಸ್ಟಿಕ್ ನ ಮೈಯದು. ಯಾವ ದೇವದೂತರು ನಮ್ಮ ಕಷ್ಟ ನೋಡಿ ಇದನ್ನು ಭೂಮಿಗೆ ಕಳಿಸಿದರು ಎಂದು ನಾವು ಯೋಚಿಸಿದವರಲ್ಲ. ಅಂತೂ ಅದು ಬಂತು. ಈಗ ಪೆನ್ಸಿಲ್ ಮೊನೆ ಮಾಡುವುದು ಎಷ್ಟೊಂದು ಸುಲಭವಾಯಿತು ಎಂದರೆ, ಪೆನ್ಸಿಲನ್ನು ಯಂತ್ರದ ತೂತಿಗೆ ಹಾಕಿ ತಿರುಗಿಸುತ್ತ ಅದರಿಂದ ಸುರುಳಿ ಸುರುಳಿಯಾಗಿ ಬೀಳುವ ಮರದ ಶೇವಿಂಗ್ಸನ್ನು ನೋಡುವುದು ನಮಗೊಂದು ಸಂತೋಷ ತರುತ್ತಿತ್ತು.

ಈ ಯಂತ್ರ ನಾಜೂಕಾದ ಮೊನೆಗಳನ್ನು ನೀಡುತ್ತಿದ್ದರೂ, ಅದರಿಂದ ಸ್ವಲ್ಪ ನಷ್ಟವೂ ಉಂಟಾಗುತ್ತಿತ್ತು ನಿಜ. ಎಂದರೆ ಸ್ವಲ್ಪ ಮೊನೆ ಅನಿವಾರ್ಯವಾಗಿ ಕೊರೆದು ಹೋಗುತ್ತಿತ್ತು. ಆದ್ದರಿಂದ ಪೀಶಾಕತ್ತಿಯಿಂದ ಮೊನೆ ಮಾಡುತ್ತಿದ್ದವರು ಈ ಯಂತ್ರವನ್ನು ಟೀಕಿಸುವುದಿತ್ತು. ಇಷ್ಟು ಸಾಕು ಎಂದು ಯಥಾಸ್ಥಿತಿವಾದಿಗಳು, ಇನ್ನೂ ಇದೆ ಎಂದು ಪ್ರಗತಿಶೀಲರು. ಹೀಗೆ ಯಥಾಸ್ಥಿತಿವಾದಿಗಳಿಗೂ ಪ್ರಗತಿಶೀಲರಿಗೂ ಸಂಘರ್ಷ ಯಾವತ್ತಿನಿಂದಲೂ, ಎಲ್ಲಾ ಕ್ಷೇತ್ರಗಳಲ್ಲೂ, ಇದ್ದದ್ದೇ!

ಈಗಲಾದರೆ ಮರದ ಮೈಯೇ ಇರದ, ಮೊನೆ ಮಾಡುವ ಯಂತ್ರವನ್ನು ಅನಗತ್ಯಗೊಳಿಸುವ, ಕೇವಲ ಸೀಸದ ಕಡ್ಡಿಯನ್ನು ಕೊಳವೆಗೆ ತುರುಕಿ ಬರೆಯುವ ಪೆನ್ಸಿಲುಗಳ ಆವಿಷ್ಕಾರವಾಗಿದೆ. ಆದರೆ ಇಂದಿಗೂ ಶಾಲಾ ಮಕ್ಕಳ ಮಟ್ಟಿಗೆ ಹೇಳುವುದಾದರೆ, ಮರದ ಉರುಟಿನ ಅಥವಾ ಷಟ್ಕೋನ ಮೈಯ ಪೆನ್ಸಿಲೇ ಮಾತೃಕೆ. ಅದರಲ್ಲಿ ಕೆಲವು ಒಳ ಭಿನ್ನತೆಗಳಿವೆ ನಿಜ: ರಬ್ಬರಿನ ಕಿರೀಟವಿರುವುದು, ಇಲ್ಲದಿರುವುದು, ಕೆಲವು ಸೀಸಗಳು ಹೆಚ್ಚು ಮಿದುವಾಗಿರುವುದು, ಇನ್ನು ಕೆಲವು ಹೆಚ್ಚು ಗಟ್ಟಿಯಾಗಿರುವುದು ಇತ್ಯಾದಿ. ಇದರ ಕ್ರಮಾಂಕಗಳನ್ನು ಎಚ್ (ಹಾರ್ಡ್ ‘ಗಟ್ಟಿ’) ಬಿ (ಬ್ಲ್ಯಾಕ್ ‘ಮಿದು’) ರೂಪದಲ್ಲಿ ಪೆನ್ಸಿಲ್ ಮೇಲೆಯೇ ಕೊಟ್ಟಿರುತ್ತದೆ.

ಶಾಲಾ ಮಕ್ಕಳು ಹೆಚ್ಚಾಗಿ ಬಳಸುವುದು ಮಧ್ಯಮ ತರದ ‘2 ಎಚ್ ಬಿ’ಯನ್ನು. ಇಂಥ ಮರದ ಮೈಯ ಪೆನ್ಸಿಲುಗಳು ಇರುವತನಕ ಮೊನೆ ಯಂತ್ರಗಳೂ ಇರುತ್ತವೆ. ಹಾಗೂ ಪೆನ್ಸಿಲ್ ಇರುವ ತನಕ ‘ರಬ್ಬರ್’ ಕೂಡ ಇರುತ್ತದೆ. ಘನಾಕೃತಿಗಳಿಗೆ (‘ಕ್ಯೂಬೋಯ್ಡ್’) ಹೇಳಿ ಮಾಡಿಸಿದ ಉದಾಹರಣೆಗಳು; ಕೆಲವಕ್ಕೆ ಪರಿಮಳ ಇರುತ್ತದೆ, ಕೆಲವು ನಿರ್ಗುಣಿಗಳು. ಪೆನ್ಸಿಲ್-ರಬ್ಬರ್ ಎಂದರೆ ಸೂಜಿ-ನೂಲಿನಂತೆ, ಟೂಥ್ ಬ್ರಶ್-ಟೂಥ್ ಪೇಸ್ಟಿನಂತೆ ಅವಳಿ-ಜವಳಿಗಳು. ಇನ್ನು ನನ್ನ ಫೇವರೇಟ್ ವಸ್ತುವಾದ ನೈಲ್ ಕಟ್ಟರ್ – ಅದರಲ್ಲಿ ಒಂದು ಅರವನ್ನೂ ಅಳವಡಿಸಿರುತ್ತದೆ. ಉಗುರು ಕತ್ತರಿಸಿದ ಮೇಲೆ ಅರ ಹಾಕಿ ಬೆರಳಿನ ತುದಿಯುಗುರನ್ನು ನಯಗೊಳಿಸುವುದಕ್ಕೆ. ಈ ದೃಷ್ಟಿಯಿಂದ ನೈಲ್ ಕಟ್ಟರ್ ಕೂಡ ಒಂದು ಯಮಳವೇ, ಹಾಗೂ ನೈಲ್ ಟ್ರಿಮ್ಮರ್ ಎಂಬ ಅದರ ಇನ್ನೊಂದು ಉಪಾಧಿ ಅದಕ್ಕೆ ಹೆಚ್ಚು ಒಪ್ಪುತ್ತದೆ. ಆದರೆ ಕನ್ನಡದಲ್ಲಿ ಉಗುರು ತೆಗೆಯುವ ಯಂತ್ರ ಯಂತ್ರವೇ. ನಾನಿದ್ದ ‘ಸನಾ’ದಲ್ಲಿ ಒಬ್ಬ ಇಲೆಕ್ಟ್ರೀಶಿಯನ್ ಕೂಡ ಎಂಜಿನೀಯರೇ.