ತರಕಾರಿಗಳಲ್ಲಿ ಕುಂಬಳದ ಕುರಿತು ನನಗೆ ಹೆಚ್ಚು ಮಮತೆ ಇದೆ. ಆದರೆ ಇದನ್ನು ಯಾಕೆ ದೇವರ ಪೂಜೆಯಿಂದ ನಿಷಿದ್ಧ ಮಾಡಿದ್ದಾರೋ ತಿಳಿಯದು. ಅಪರ ಕ್ರಿಯೆಗಳಿಗೆ, ಮಾಟಮಂತ್ರಗಳಿಗೆ ಮಾತ್ರ ಇದು ಸಲ್ಲುವಂಥದು. ಅಲ್ಲದೆ ಹೊಸ ಮನೆಗಳನ್ನು ಕಟ್ಟಿಸುವಾಗ ಎಲ್ಲರಿಗೂ ಕಾಣುವ ಹಾಗೆ ಎದುರಿಗೇ ಇದನ್ನು ತೂಗಿ ಹಾಕುವುದಿದೆ, ಜನರ ಕೆಟ್ಟ ದೃಷ್ಟಿ ತಾಕದಿರಲಿ ಎಂದು. ಕುಂಬಳದಲ್ಲೂ ಒಂದು ಚಿಕ್ಕ ಫಲ ಬಿಡುವ ತಳಿಯಿದೆ; ಕಾಶಿ ಕುಂಬಳವೆಂಬ ಹೆಸರಿನ ಇದು ತುಂಬಾ ಗಟ್ಟಿಯಾಗಿದ್ದು ಹೆಚ್ಚು ಜನಪ್ರಿಯವಲ್ಲ. ಇನ್ನು ನಮ್ಮೂರಿನ ಪಶ್ಚಿಮಕ್ಕಿರುವ ಪೇಟೆಯ ಹೆಸರು ಕುಂಬಳೆ; ಕುಂಬಳ ಕಾಯಿಗೂ ಇದಕ್ಕೂ ಸಂಬಂಧವಿರುವ ಹಾಗೆ ನನಗನಿಸುವುದಿಲ್ಲ.
ಕೆ.ವಿ. ತಿರುಮಲೇಶ್ ಬರೆದ ಲೇಖನ

 

ತರಕಾರಿ, ನೆಟ್ಟಿಕಾಯಿ (ಹವ್ಯಕ), ಕಾಯಿಪಲ್ಲೆ (ಉ. ಕನ್ನಡ), ಕಾಯಿ ಕಜಿಪ್ಪು(ತುಳು), ಪಚ್ಚಕ್ಕರಿ (ಮಲಯಾಳ), ಹಸಿರುವಾಣಿ. ಆಹಾ, ಅವುಗಳದೇ ಒಂದು ಅದ್ಭುತಲೋಕ! ಆ ಲೋಕದ ನನ್ನ ಸ್ಮೃತಿ ಚಿತ್ರಗಳ ಬಗ್ಗೆ ಬರೆಯುತ್ತಿದ್ದೇನೆ. ವಿಸ್ಮೃತಿಯನ್ನು ಸ್ಮೃತಿಗೆ ತರುವ ಪ್ರಯತ್ನದ ಒಂದು ಭಾಗ. ನನ್ನ ಬಾಲ್ಯಕಾಲದ ಒಂದು ಪ್ರಧಾನ ಭಾಗವೂ ಹೌದು.

ಅದು ಹೇಗೆ ನನಗೆ ಈ ‘ನೆಟ್ಟಿಕಾಯಿ’ ಬೆಳೆಯುವ ಹುಚ್ಚು ಹಿಡಿಯಿತೋ. ನಮ್ಮ ಪ್ರದೇಶದಲ್ಲಿ ಮಕ್ಕಳಾದಿಯಾಗಿ ಎಲ್ಲರೂ ತಂತಮ್ಮ ಮನೆಜಾಗದಲ್ಲಿ ಮಾಡುತ್ತಿದ್ದ ಕೆಲಸ ಈ ತರಕಾರಿ ಕೃಷಿ ಎಂದರೆ. ಅಂದು ಅದೊಂದು ಮರುಳಾಗಿ ಕಾಣಿಸಿಯೇ ಇರಲಿಲ್ಲ. ಚಿಕ್ಕಂದಿನಲ್ಲಿ ನನಗೆ ಅಕ್ಕ ಪಕ್ಕದಲ್ಲಿ ಗೆಳೆಯರು ಇರಲಿಲ್ಲ. ಆದ್ದರಿಂದ, ಸ್ವಲ್ಪ ತಡವಾಗಿ ದೂರದ ಸೋದರಮಾವ ಒಬ್ಬರ ಮನೆಯಲ್ಲಿ ನೆಲಸಿ, ಶಾಲೆ ಸೇರುವ ತನಕ ಚೆಂಡಾಟ. ತಲೆಮ, ಡೂಡು (ಕಬಡ್ಡಿ) ಇತ್ಯಾದಿ ಸಾಮೂಹಿಕ ಆಟಗಳು ನನಗೆ ಗೊತ್ತಿರಲಿಲ್ಲ. ಪ್ರಕೃತಿಯೇ ನನ್ನ ಆಡುಂಬೊಲವಾಗಿತ್ತು. ಈ ತರಕಾರಿ ಬೆಳೆಸುವ ಆಸಕ್ತಿ ಮಕ್ಕಳಾಟದ ಕುರಿತಾದ ನನ್ನ ಕೊರತೆಯ ಒಂದು ಪೂರಕ ರೂಪವಾಗಿತ್ತೇನೊ. ಚಿಕ್ಕಂದಿನಿಂದಲೆ ದೊಡ್ಡವರ ಜೊತೆ ನಾನು ನನ್ನ ಕೈಲಾದ ಸಹಾಯ ಮಾಡುತ್ತ ದುಡಿಯುತ್ತಿದ್ದೆ. ತರಕಾರಿ ಬೆಳೆಯಲ್ಲೂ ನಾನು ನನ್ನ ಶಕ್ತ್ಯನುಸಾರ ಭಾಗವಹಿಸುತ್ತಿದ್ದೆ; ಮುಖ್ಯವಾಗಿ ಹಿರಿಯರಿಗೆ ಚೇಲನಾಗಿ.

ಪರಂಪರಾಗತ ಕಾವ್ಯಗಳ ನನ್ನ ಪರಿಮಿತ ಓದಿನಲ್ಲೆಲ್ಲೂ ನಾನು ತರಕಾರಿಗಳ ಬಗ್ಗೆ ಓದಿದ ನೆನಪಿಲ್ಲ. ಎಲ್ಲೋ ಯಾರೋ ಹೇಳಿರಬಹುದು, ನನಗೆ ಕಾಣ ಸಿಕ್ಕಿಲ್ಲ. ಹಾಗೆ ನೋಡಿದರೆ ಜನಪದ ಜೀವನಕ್ಕೆ ಹತ್ತಿರವಾದ ಅವೆಷ್ಟೋ ಸಂಗತಿಗಳನ್ನು ಶಿಷ್ಟ ಕಾವ್ಯ ಹೊರಗಿಟ್ಟಿದೆ. ಜನಪದ ಕಾವ್ಯ ಮಾತ್ರ ಬೇರೆ. ಹದಿನಾರನೇ ಶತಮಾನದ ಕವಿ ರತ್ನಾಕರವರ್ಣಿ ತನ್ನ ಪ್ರಸಿದ್ಧ ಕಾವ್ಯ “ಭರತೇಶ ವೈಭವ”ದ ಮೊದಲ ಸಂಧಿಯಲ್ಲೇ (ಆಸ್ಥಾನ ಸಂಧಿ) ‘ಪುಸ್ತಕದ ಬದನೆ ಕಾಯಿ’ ಎಂಬ ನಾಣ್ಣುಡಿಯನ್ನು ತರುತ್ತಾನೆ.

ಸಕಲ ಲಕ್ಷಣವು ವಸ್ತುಕಕೆ, ವರ್ಣಕಕಿಷ್ಟು
ವಿಕಳವಾದರು ದೋಷವಿಲ್ಲ
ಸಕಲ ಲಕ್ಷಣಕಾಗಿ ಬಿರುಸು ಮಾಡಿದರೆ ಪು
ಸ್ತಕದ ಬದನೆಕಾಯಹುದು

ವಸ್ತುಕ ಎಂದರೆ ಚಂಪೂ ಕಂದ ವೃತ್ತ ಮುಂತಾದ ಮಾರ್ಗ ಕಾವ್ಯ, ವರ್ಣಕ ಎಂದರೆ ಷಟ್ಪದಿ, ರಗಳೆ ಸಾಂಗತ್ಯ ಮುಂತಾದ ದೇಸೀ ಕಾವ್ಯ. ರತ್ನಾಕರವರ್ಣಿ ಕನ್ನಡದಲ್ಲಿ ದೇಸೀ ಕಾವ್ಯ ಮುನ್ನಡಿಯಿಡುತ್ತಿರುವ ನಡುಗನ್ನಡ ಕಾಲಘಟ್ಟಕ್ಕೆ ಸೇರಿದವನು. “ಭರತೇಶ ವೈಭವ” ಬರೆಯಲು ಅವನು ಆರಿಸಿಕೊಂಡುದು ಸಾಂಗತ್ಯವನ್ನು; ಸಾಂಗತ್ಯ ಷಟ್ಪದಿಗಿಂತಲೂ ಹೆಚ್ಚು ದೇಸಿ (‘ಹಾಡುಗಬ್ಬ’) ಎಂದರೆ ಅದರಲ್ಲೇ ಮಹಾಕಾವ್ಯ ಕಲ್ಪಿಸಿದ ಅವನ ಧೈರ್ಯವನ್ನು ಮೆಚ್ಚಲೇಬೇಕು! ಇನ್ನು ಇದೇ ಸಂಧಿಯಲ್ಲಿ ಮಿಶ್ರಭಾಷೆಯನ್ನು ತಂದವನೂ ಅವನೇ:

ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚಿದಿಯನೆತೆಲುಗಾ
ಅಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು
ಮೈಯ್ಯುಬ್ಬಿ ಕೇಳಬೇಕಣ್ಣಾ

ಇಲ್ಲಿ ಕನ್ನಡದ ಜತೆಗೆ, ತೆಲುಗು, ತುಳು ಮಾತುಗಳು ಒಟ್ಟಿಗೇ ಬರುವುದನ್ನು ಗಮನಿಸಿ! ಅಂತೆಯೇ ಈ ಸೋದರ ಭಾಷಿಕರೂ ತನ್ನ ಕಾವ್ಯವನ್ನು ಕೇಳುವರು/ ಓದುವರು ಎಂಬ ಕವಿಯ ಭರವಸೆ ಕೂಡ ನಾವು ಮೆಚ್ಚುವಂಥದೇನನ್ನೋ (ಬಹುಶಃ ಭಾಷಾ ಬಾಂಧವ್ಯವನ್ನು) ಹೇಳುತ್ತದೆ ಅಲ್ಲವೇ? ಭೋಗವನ್ನೂ ತ್ಯಾಗವನ್ನೂ, ಐಹಿಕವನ್ನೂ ಅಧ್ಯಾತ್ಮವನ್ನೂ ಒಳಗೊಳ್ಳಬೇಕೆನ್ನುವ ಕವಿಗೆ ಬದನೆಕಾಯಿ ಅಥವಾ ಅದರ ಉಲ್ಲೇಖ ವರ್ಜ್ಯವಾಗುವುದು ಹೇಗೆ ಸಾಧ್ಯ?

ಕ್ಷಮಿಸಿ, ಈ ಲೇಖನ ರತ್ನಾಕರವರ್ಣಿಯ ಕುರಿತಾಗಲಿ, ಮಾರ್ಗ-ದೇಸಿ ಭಿನ್ನತೆಯ ಕುರಿತಾಗಲಿ ಅಲ್ಲ, ನನ್ನ ಬಾಲ್ಯದಲ್ಲಿ ನಾವು ಬೆಳೆಸುತ್ತಿದ್ದ ತರಕಾರಿಗಳ ಬಗ್ಗೆ. ಒಂದೊಂದು ಪ್ರದೇಶದ ಹವೆ ಮತ್ತು ಮಣ್ಣಿನ ಗುಣಕ್ಕೆ ತಕ್ಕುದಾಗಿ ಅಲ್ಲಿನ ತರಕಾರಿಗಳು ಇರುತ್ತವೆ; ಹೊಸ ಹೊಸ ತರಕಾರಿಗಳ ಪರಿಚಯ ಆಗಬಾರದು ಎಂದಿಲ್ಲ. ಅಂಥ ಸಾಧ್ಯತೆಗಳು ತೀರ ಕಡಿಮೆ. ನೀವೀಗ ಅವುಗಳನ್ನು ಪೇಟೆಯಿಂದ ಕೊಂಡು ತರಬಹುದು, ಪಲ್ಯ ಮಾಡಿ ತಿನ್ನಬಹುದು, ಆದರೆ ಊರಲ್ಲೇ ಬೆಳೆಯುವುದು ಸಾಧ್ಯವಾಗದೆ ಇರಬಹುದು: ಉದಾ. ಎಲೆಕೋಸು (ಕ್ಯಾಬೇಜು), ಹೂಕೋಸು (ಕಾಲಿಫ್ಲವರ್), ನವಿಲುಕೋಸು (ಬೆಂಗಳೂರು ಬದನೆ), ಕೆಂಪು ಮೂಲಂಗಿ, ಬಿಳಿ ಮೂಲಂಗಿ, ಬೀಟ್ರೂಟು, ಬೀನ್ಸ್, ಚೌಳಿಕೋಡು ಇತ್ಯಾದಿ. ನಾನಾದರೆ ಇವುಗಳನ್ನು ಕಂಡಿರಲಿಲ್ಲ, ಕೇಳಿರಲಿಲ್ಲ. ನಾನು ನನ್ನ ಹುಟ್ಟೂರಾದ ಕಾಸರಗೋಡು ಪ್ರದೇಶದ ಬಗ್ಗೆ ಹೇಳುತ್ತಿದ್ದೇನೆ. ಈ ಮಣ್ಣಿನಲ್ಲಿ ಮೇಲೆ ಹೇಳಿದ ಕೆಲವೊಂದು ತರಕಾರಿಗಳು ಬೆಳೆಯುವುದಿಲ್ಲ, ಇನ್ನು ಕೆಲವೊಂದರ ಅಭ್ಯಾಸ ನಮಗಿಲ್ಲ. ಹಳ್ಳಿಯ ಹಲಸಿನ ಕಾಯಿ ತಿಂದು ಬೆಳೆದವನು ನಾನು. ನನ್ನ ಬಾಲ್ಯವೆಂದರೆ ಇಂದಿಗೆ ಸುಮಾರು ಎಪ್ಪತ್ತು ವರ್ಷಗಳ ಹಿಂದಣ ಮಾತು; ಯಾತಾಯಾತಗಳೇ ಅಪರೂಪವಾಗಿದ್ದ ಕಾಲ ಅದು. ಚಿಕ್ಕವನಾದ ನಾನು ಬರಿಕೋಮಣ (ಕೌಪೀನ) ಮತ್ತು ಮುಟ್ಟಪ್ಪಾಳೆಯಲ್ಲಿ (ಅಡಿಕೆ ಹಾಳೆಯಿಂದ ಮಾಡಿದ ಸ್ಥಳೀಯ ಶಿರಸ್ತ್ರಾಣ) ಓಡಾಡಿಕೊಂಡಿರುತ್ತಿದ್ದ ಕಾಲ.

ನಾವು ಬೆಳೆಯುತ್ತಿದ್ದ ನಾಟಿ ತರಕಾರಿಗಳೆಲ್ಲ ನಮ್ಮೂರ ಸಸ್ಯಗಳಂತೆ ಹಳತು. ಆದರೂ ಬೆಳೆದರೆ ಅವೇ ನಮಗೆ ಬೇಕಷ್ಟು ಇದ್ದುವು. ಬೆಳೆಯುತ್ತಿದ್ದೆವು, ತಿನ್ನುತ್ತಿದ್ದೆವು, ಮಿಕ್ಕವನ್ನು ನೆರೆಯವರಿಗೂ ಕೊಡುತ್ತಿದ್ದೆವು. ಕೆಲವೊಂದು ತಳಿಗಳಿಗೆ ಜನ ಇತರರನ್ನು ಆಶ್ರಯಿಸಬೇಕಾಗುತ್ತಿತ್ತು. ಅದೊಂದು ಸಾಮೂಹಿಕ, ಸಾವಯವ ಜೀವನ, ಅದರೊಳಗಿನ ವೈರುಧ್ಯಗಳು ಎಷ್ಟೇ ಇದ್ದರೂ – ಉದಾ: ಚೋಮನ ದುಡಿ! ಅವನಿಗೆ ಜಮೀನೇ ಇರಲಿಲ್ಲ. ಹೇಗೆ ಮರೆಯಲಿ? ಹಾಗೆ ನೋಡಿದರೆ, ಒಂದು ನರತಂತು ಮಿಡುಕಿದಾಗ ಇಡೀ ದೇಹವೇ ಹೇಗೆ ಕಂಪಿಸುತ್ತದೆ. ಆದರೆ ನಾನೀಗ ನನ್ನ ತರಕಾರಿ ಬೆಳೆಯ ಕಥನವನ್ನು ಮುಂದರಿಸಬೇಕು. ನನಗೆ ಅರಿವು ಮೂಡಿದಾಗ ನಾವು ನಮ್ಮ ಪಡುವಣ ಸೀಮೆಯ ತರವಾಟಿನ ಆಸ್ತಿಪಾಸ್ತಿಗಳನ್ನೆಲ್ಲ ಕಳಕೊಂಡು (ಆದರೆ ನನ್ನ ಹೆಸರಿನ ಮುಂದಿನ ಇನಿಶಿಯಲ್ ‘ಕೆ ಫಾರ್ ಕಿಳಿಂಗಾರ್’ ಈಗಲೂ ಇದೆ, ಶಾಲೆಯಲ್ಲಿ ಸೇರಿಸಿದ್ದು) ಮೂಡಣ ಸೀಮೆಯಲ್ಲಿ, ಪನ್ನೆಪ್ಪಲ ಎಂಬಲ್ಲಿ (ಇದು ಕಾರಡ್ಕ ಗ್ರಾಮದಲ್ಲಿದೆ), ಗೇಣಿ ಒಕ್ಕಲಿಗರಾಗಿ ಇದ್ದೆವು. ನಾನು ಜನಿಸಿದ್ದು ಈ ಮೂಡಣ ಸೀಮೆಯಲ್ಲೇ. ನಾವು ಕೃಷಿಕ ಬ್ರಾಹ್ಮಣರು, ಬೆಳೆಯುತ್ತಿದ್ದುದು ಕಂಗು, ತೆಂಗು, ಬಾಳೆ, ಕರಿಮೆಣಸು, ಕಾಡುತ್ಪತ್ತಿಯಾಗಿ ಗೇರುಬೀಜ. ಭತ್ತ ಬೆಳೆಯುವ ಜಾಗ ಅದಲ್ಲ. ಪಡುವಣದ ನನ್ನ ಮಾವಂದಿರಿಗೆ ಗದ್ದೆಗಳಿದ್ದು ಅವರು ಪ್ರಧಾನವಾಗಿ ಭತ್ತ, ಕೆಲವೊಮ್ಮೆ ಪರ್ಯಾಯ ಬೆಳೆಯಾಗಿ ರಾಗಿ, ಉದ್ದು, ಕಡಲೆ ಬೆಳೆಯುತ್ತಿದ್ದರು. ಆಮೇಲೆ ಕಾಲಾಯ ತಸ್ಮೈ ನಮಃ ಎಂದು ಅವೆಲ್ಲ ಅಡಿಕೆ ತೋಟಗಳಾದುವು.

ನಮ್ಮ ಪನ್ನೆಪ್ಪಲ ಗೇಣಿ ಜಾಗದಲ್ಲಿ (ಕಾಲಾಂತರದಲ್ಲಿ ಅಣ್ಣ ಅದನ್ನು ಖರೀದಿಸಿದರು) ತರಕಾರಿ ಬೆಳೆಯುವುದಕ್ಕೆ ಯಥೇಷ್ಟ ಸ್ಥಳವಿತ್ತು, ಹಾಗೂ ನಾವು ಸಾಕಷ್ಟು ಬೆಳೆಯುತ್ತಲೂ ಇದ್ದೆವು – ಕೆಲವೊಮ್ಮೆ ಕೆಲವು ಎಂಬಂತೆ. ಬಾಳೆ ಕಾಯಿ, ಹಲಸಿನ ಗುಜ್ಜೆಯಂತೂ ಪೆರೆನಿಯಲ್; ಹಣ್ಣಾಗಲು ಬಿಟ್ಟರೆ ಹಣ್ಣು, ಹಸಿಯಲ್ಲೇ ಕೊಯ್ದರೆ ತರಕಾರಿ. ನಾನೀ ಕಥನವನ್ನು ಬಾಳೆ, ಹಲಸಿನಿಂದ ಪ್ರಾರಂಭಿಸಬಾರದು, ಯಾಕೆಂದರೆ ಅವು ಪ್ರೋಟೋಟಿಪಿಕಲ್ ತರಕಾರಿಗಳಲ್ಲ. ಒಂದು ಹಕ್ಕಿಯ ಹೆಸರೇಳಿ ಎಂದರೆ ಗುಬ್ಬಿ, ಕೋಗಿಲೆ ಎನ್ನುತ್ತೇವೆಯೇ ವಿನಾ ಗಿಡುಗ, ಹದ್ದು ಎನ್ನುವುದಿಲ್ಲ; ಇಲ್ಲಿಯೂ ಹಾಗೆಯೇ. ತರಕಾರಿ ಎಂದರೆ ತೊಂಡೆ, ಬೆಂಡೆ, ಬದನೆ – ಇನ್ನು ಹಾಗಲಕಾಯಿ, ಪಡವಲಕಾಯಿ, ಸೌತೆಕಾಯಿ ಇತ್ಯಾದಿ, ಅಲ್ಲದೆ ಬಾಳೆಕಾಯಿ, ಹಲಸಿನಕಾಯಿ, ಪಪ್ಪಾಯಿ (ಹವ್ಯಕ: ಬಪ್ಪಂಕಾಯಿ ಎನ್ನುವುದಿಲ್ಲ, ಇವುಗಳಿಂದಲೂ ಸೊಗಸಾದ ಪಲ್ಯಗಳನ್ನು ಮಾಡುವುದು ಸಾಧ್ಯವಿದ್ದರೂ)

ತೊಂಡೆ ಚಪ್ಪರದಿಂದ ಶುರು; ಅಂದಿನ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಹೆಚ್ಚಿನವರ ಮನೆ ಮುಂದೆ ಒಂದು ತೊಂಡೆ ಚಪ್ಪರ ಇರುತ್ತಿದ್ದುದು ಸಾಮಾನ್ಯವಾಗಿತ್ತು. ಯಾಕೆ ತೊಂಡೆ ಚಪ್ಪರ ಎಂದರೆ, ಅದೊಂದು ಇಡೀ ವರ್ಷ ಫಲ ಕೊಡುವ ತರಕಾರಿ ಬಳ್ಳಿ. ಅಲ್ಲದೆ ತೊಂಡೆಯಿಂದ ಪಲ್ಯ, ಅರೆದ ತೆಂಗಿನ ಕಾಯಿ ಮತ್ತು ಮಜ್ಜಿಗೆ ಹಾಕಿದ ಮೇಲೋಗರ (ಹವ್ಯಕ: ಮೇಲಾರ), ಹುಳಿಗೊಜ್ಜು ಮಾಡಬಹುದಾಗಿತ್ತು. ಮೇಲೋಗರಕ್ಕೆ ಸೌತೆಕಾಯಿ ಇದ್ದರೆ ಸರಿಯಾದ ಜತೆ. ನೀವು ತೊಂಡೆ ಬೆಳೆಸಬೇಕಾದರೆ ನೀವು ಅದರದೊಂದು ಹಸಿ ದಂಟನ್ನು ಸಂಪಾದಿಸಬೇಕು. ಯಾಕೆಂದರೆ ದಂಟಿನಿಂದಲೇ ಇದರ ಪ್ರಸರಣ. ಅದಕ್ಕೇ ನಾನು ಹೇಳಿದ್ದು ತರಕಾರಿ ಕೃಷಿ ಒಂದು ಸಾಮೂಹಿಕ, ಸಾವಯವ ಜೀವನ ಎಂದು. ತೊಂಡೆಕಾಯಿಗೆ ಬೀಜಗಳಿದ್ದರೂ ಅವು ಹುಸಿ ಬೀಜಗಳು. ಕಾಯಿ ಹೆಚ್ಚು ಬೆಳೆದರೆ ಪಲ್ಯಕ್ಕೂ ಬರುವುದಿಲ್ಲ. ಕೊಯ್ಯದೆ ಚಪ್ಪರದಲ್ಲೆ ಬಿಟ್ಟರೆ ಅಲ್ಲೇ ಹಣ್ಣಾಗಿ ಹಕ್ಕಿಗಳಿಗೆ ಆಹಾರವಾಗಿ ಬಿದ್ದು ಹೋಗುತ್ತವೆ.

ನೀವು ಊರುವ ದಂಟು ಒಂದಡಿಯಿಂದ ಐದು ಆರಡಿ, ಎಂದರೆ ಚಪ್ಪರದವರೆಗೆ ಇರಬಹುದು. ಚಿಕ್ಕದಿದ್ದರೆ ಅದು ಚಪ್ಪರದ ತನಕ ಬೆಳೆಯಲು ಕೋಲಿನ ಆಧಾರ ಕೊಡಬೇಕು. ತೊಂಡೆಕಾಯಿ ಟಿಪಿಕಲ್ ಚಪ್ಪರದ ಬೆಳೆ. ಚಪ್ಪರದಲ್ಲೆ ಅದರ ಎಗೆಗಳು, ಎಗೆಗಳಿಂದ ಎಗೆಗಳು ಹರಡಬೇಕು. ಹಟ್ಟಿ ಗೊಬ್ಬರ ಇದಕ್ಕೆ, ಹಾಗೂ ಇತರ ಎಲ್ಲ ತರಕಾರಿಗಳಿಗೂ ಈಟು. ತೊಂಡೆಯ ಎಗೆಗಳು ಹರಡುತ್ತಿರುವಂತೆ ಅವುಗಳಲ್ಲಿ ಎಲೆಗಳು ಹುಟ್ಟಿಕೊಳ್ಳುತ್ತವೆ, ಕ್ರಮೇಣ ಸೌಮ್ಯವಾದ ಬಿಳಿ ಹೂಗಳು ಕಾಣಿಸಿಕೊಳ್ಳುತ್ತವೆ. ಈ ಹೂಗಳ ಬುಡಗಳೇ ಕಾಯಿಗಳಾಗಿ ಬೆಳೆಯುವುದು. ಹೆಚ್ಚಾಗಿ ಎಲ್ಲಾ ಸಸ್ಯಗಳಲ್ಲೂ ಹಾಗೇ ತಾನೆ? ಇಲ್ಲಿ ಬೆಳೆಗಾರನಿಗೆ ಗೊತ್ತಿರುವ ಒಂದೆರಡು ಸೂಕ್ಷ್ಮಗಳನ್ನು ಹೇಳಬೇಕು. ಒಂದು: ಚಪ್ಪರದಲ್ಲಿ ಎಲೆಗಳು ಸೊಕ್ಕಲು ಬಿಡಬಾರದು, ಎಲೆಗಳು ಸೊಕ್ಕಿದರೆ ಹೂ ಬಿಡುವುದಿಲ್ಲ. ಎಲೆಗಳನ್ನು ಕಿತ್ತು ಸಸಿಯ ಬುಡಕ್ಕೆ ಹಾಕಿದರೆ ಸರಿ; ಹಾಗೆಂದು ಪೂರ್ತಿ ಕೀಳಲೂ ಬಾರದು. ವಿರಳವಾಗಿಸಿದರೆ ಸಾಕು.

ಇನ್ನೊಂದು ವಿಷಯ: ಇದು ತೊಂಡೆ ಸಸ್ಯವನ್ನು ಬಾಧಿಸುವ ಸಣ್ಣ ಕೀಟಗಳ ನಿಯಂತ್ರಣ ಹೇಗೆ ಎನ್ನುವುದು. ಈ ಕೀಟಗಳನ್ನು ಹಿಡಿದು ತಿನ್ನುವ ಇರುವೆಗಳ ಕುಲವೊಂದು ಇದೆ, ಕೆಂಪಿರುವೆ ಅಥವಾ ಹವ್ಯಕದ ಸೌಳಿ. ಇವುಗಳ ಕೊಟ್ಟೆಯೊಂದನ್ನು (ಎಂದರೆ, ಮರದ ಹಸಿರಲೆಗಳನ್ನೆ ಒಂದುಗೂಡಿಸಿ ಇರುವೆಗಳು ತಮಗೋಸ್ಕರ ಕಟ್ಟಿಕೊಂಡ ಗೂಡು) ಇರುವೆಗಳಿಗೆ ತಿಳಿಯದಂತೆ – ಯಾಕೆಂದರೆ ತಿಳಿದರೆ ಅವು ಕಚ್ಚಬಹುದು – ಜಾಗ್ರತೆಯಾಗಿ ಬುಡದಿಂದ ಕತ್ತರಿಸಿ ತಂದು ಚಪ್ಪರದಲ್ಲಿ ಬಿಟ್ಟು ಬಿಡುವುದು! ನೆನೆದರೆ ಅಯ್ಯೋ ಪಾಪ ಎನಿಸುತ್ತದೆ. ಆ ಗೂಡಿನ ನಿವಾಸಿಗಳಾದ ಎಷ್ಟೋ ಇರುವೆಗಳು ನಾವು ಗೂಡನ್ನು ಅಪಹರಿಸಿದಾಗ ಹೊರಗೆಲ್ಲೋ ಹೋಗಿರಬಹುದಲ್ಲ; ಅವು ಮರಳಿದಾಗ ಅಲ್ಲಿ ಮನೆಯಿಲ್ಲ, ಎಂದರೆ ಗೂಡಿಲ್ಲ! ಗೂಡಿನೊಳಗೆ ಹಾಯಾಗಿದ್ದು ಚಪ್ಪರಕ್ಕೆ ಸ್ಥಳಾಂತರಿಸಲ್ಪಟ್ಟ ಇರುವೆಗಳ ಪಾಡೇನು? ಅಲ್ಲಿ ಅವುಗಳಿಗೆ ತಿನ್ನುವುದಕ್ಕೇನೋ ಧಾರಾಳ ಸಿಗಬಹುದು, ಆದರೆ ಅವುಗಳಿಗೆ ಇದುವರೆಗೆ ರೂಢಿಯಾದ ಅವುಗಳದೇ ಆದ ಸಾಮಾಜಿಕ ಜೀವನದ ಗತಿಯೇನು?

ತರಕಾರಿ ಚಪ್ಪರದಲ್ಲಿ ಬೆಳೆಯುವುದೋ (ತೊಂಡೆ, ಹೀರೆ, ಪಡುವಲ, ಹಾಗಲ, ಕೆಲವೊಮ್ಮೆ ಸೋರೆ), ಗಿಡದಲ್ಲೋ (ಬದನೆ, ಬೆಂಡೆ, ಅವರೆ), ಬಳ್ಳಿಯಲ್ಲೋ (ಕುಂಬಳ, ಚೀನಿಕಾಯಿ ಅರ್ಥಾತ್ ಸಿಹಿಗುಂಬಳ, ಸೌತೆ, ಮುಳುಸೌತೆ, ಅಲಸಂಡೆ), ನೆಲದೊಳಗೋ (ಗೆಣಸು, ಸುವರ್ಣಗಡ್ಡೆ) ಎನ್ನುವುದನ್ನು ಹೊಂದಿಕೊಂಡು ಹಲವು ವರ್ಗಗಳಿವೆ. ತೊಂಡೆ ಮತ್ತು ಗೆಣಸನ್ನು ಉಳಿದಂತೆ ಇವೆಲ್ಲವೂ ಬಿತ್ತು ಯಾ ಗಡ್ಡೆ ಮುಖೇನ ಪ್ರಸರಣಗೊಳ್ಳುವಂಥವು. ಬೆಳೆಗಾರ ಬಿತ್ತು ನೋಡಿಯೆ ಇದು ಯಾತರದ್ದೆಂದು ಹೇಳಬಲ್ಲ. ತೊಂಡೆಯಂತೆ ಚಪ್ಪರವನ್ನು ಆಶ್ರಯಿಸುವ ಜನಪ್ರಿಯ ಬೆಳೆಗಳೆಂದರೆ ಮುಖ್ಯವಾಗಿ ಹೀರೆ (ದಾರಳೆ), ಪಡುವಲ (ಪಟಗಿಲ), ಹಾಗಲ.

ಹೀರೆ (ಹವ್ಯಕ: ದಾರಳೆ) ಮತ್ತು ಪಡುವಲವನ್ನು (ಹವ್ಯಕ: ಪಟಗಲ/ ಪಟಗಿಲ) ಒಂದೇ ಚಪ್ಪರದಲ್ಲಿ ಬೆಳೆಯುವುದಿದೆ, ಯಾಕೆಂದರೆ ಅವುಗಳನ್ನು ಒಟ್ಟಿಗೆ ಪಲ್ಯಮಾಡಿದರೆ ಪ್ರತ್ಯೇಕವಾಗಿ ಮಾಡಿದುದಕ್ಕಿಂತ ಹೆಚ್ಚು ರುಚಿ. ಚಪ್ಪರದಲ್ಲೂ ಅವುಗಳ ಫಲಗಳಲ್ಲಿ ಗೊಂದಲಕ್ಕೆ ಕಾರಣವಿಲ್ಲ: ಪಡುವಲ ಉದ್ದಕೆ ಹಾವಿನಂತೆ (ಅದಕ್ಕೇ ಅದು ಸ್ನೇಕ್ ಗೂರ್ಡ್) ಬೆಳೆದರೆ, ಹೀರೆ ಕುಳ್ಳಗೆ ದುಂಡಗೆ ಇರುತ್ತದೆ. ಇವುಗಳ ಬಿತ್ತುಗಳಲ್ಲಿಯಂತೂ ತುಂಬ ವ್ಯತ್ಯಾಸ. ಪಡುವಲದ ಬಿತ್ತು ಕರ್ರಗೆ, ಬಹಳ ಗಟ್ಟಿ, ಯಾವುದೋ ಯುನಿವರ್ಸಿಟಿ ಲಾಂಛನದ ಮಿನಿ ರೂಪದಂತೆ! ಹೀರೆ ಬಿತ್ತು ಬಿಳಿ, ಮೆತ್ತಗೆ, ಹಳೆಮಾದರಿಯ ಲೋಲಕದಂತೆ. ಹೀರೆ ಬಿತ್ತು ಮಡಿ ಸೇರಿದ ಒಂದು ವಾರದಲ್ಲೇ ಮೊಳಕೆಯೊಡೆದರೆ, ಪಡುವಲ ಇನ್ನಷ್ಟು ದಿನ ತೆಗೆದುಕೊಳ್ಳುತ್ತದೆ. ಮರೆತೇ ಹೋಯಿತೆ ಎನ್ನುವಷ್ಟರಲ್ಲಿ ಇದೋ ನಾನಿದ್ದೇನೆ ಎಂದು ಕಾಣಿಸಿಕೊಳ್ಳುತ್ತದೆ.

ಪಡುವಲ ಕಾಯಿಯ ಹೂ ಬಿಳಿ, ಹೀರೆಯದ್ದು ಬಹುಶಃ ಹಳದಿ. ಪಡುವಲ ಕಾಯಿ ಸುಮಾರು ಐದಡಿಯಷ್ಟು ಕೆಳಗಿಳಿದರೆ (ಇದರಲ್ಲಿ ಗಿಡ್ಡ ಹಾಗೂ ಉಬ್ಬು ಕಾಯಿಯ ಒಂದು ತಳಿಯೂ ಇದೆ), ಹೀರೆ ಕಾಯಿ ಒಂದೂವರೆ ಅಡಿಯಷ್ಟು ಇಳಿಯುತ್ತದೆ. ಈ ಹೀರೆಕಾಯಿಯ ಕುರಿತು ಇನ್ನಷ್ಟು ಹೇಳಬೇಕು. ಇದರ ತಿರುಳು ಪಲ್ಯಕ್ಕಾದರೆ ಓಳಿಗಳಿರುವ ಇದರ ಹೊರಮೈಯನ್ನು ಹೆರೆದು ತೆಗೆದು ಬೇಯಿಸಿ, ತೆಂಗಿನ ತುರಿ ಮತ್ತು ಮಸಾಲೆ ಪದಾರ್ಥಗಳೊಂದಿಗೆ ಅರೆದು ಪಚ್ಚಡಿ ಮಾಡುವುದಿದೆ! ಇನ್ನು ಕಾಯಿಗಳನ್ನು ಒಣಗಲು ಬಿಟ್ಟರೆ ಬಿತ್ತುಗಳು ಸಿಗುತ್ತವೆ. ಒಣ ಹೀರೆ ಕಾಯಿಯ ಸಿಪ್ಪೆ ಸುಲಿದು ತೆಗೆದರೆ ದೊರಕುವ ಗಟ್ಟಿ ನಾರುಗಳ ಚುಂಗನ್ನು ಪಾತ್ರೆ ತೊಳೆಯಲು ಬಳಸುವುದೂ ಇತ್ತು. ಪರಿಷ್ಕೃತ ಸಾಧನಗಳು ಇರದಿದ್ದ ಕಾಲ ಅದು.

ಚಪ್ಪರ ತರಕಾರಿಗಳಲ್ಲಿ ನನಗೆ ತುಂಬಾ ಇಷ್ಟವಾದುದೆಂದರೆ ಹಾಗಲಕಾಯಿ. ಇದು ಕಹಿಯಾನು ಕಹಿ! ವಿಷ ತಾಕಿದವರನ್ನು ಕಕ್ಕಿಸಲು ಇದರ ಹಸಿ ರಸವನ್ನು ಕೊಡುತ್ತಿದ್ದರು. ಹಾಗಲಕಾಯಿಯಲ್ಲಿ ಕಬ್ಬಿಣದ ಸತ್ವ ಇದೆಯಂತೆ. ಯಾವ ತರಕಾರಿಯಲ್ಲಿ ಏನಿದೆಯೆಂದು ನಮಗೇನು ಗೊತ್ತು? ಈ ತರಕಾರಿಗಳು, ಇವುಗಳನ್ನು ಅಡುಗೆಗೆ ಬಳಸುವ ವಿಧಾನ ನಮಗೆ ಹಿರಿಯರಿಂದ ಬಂದ ಜ್ಞಾನ. ಅದರಂತೆ ಮಾಡುತ್ತ ಬಂದಿದ್ದೇವೆ; ರುಚಿಗೋಸ್ಕರವಲ್ಲದೆ, ಆರೋಗ್ಯಕ್ಕೆ ಎಂದಲ್ಲ. ರುಚಿಕರವಾದುದು ಆರೋಗ್ಯಕರವೂ ಆಗಿದ್ದರೆ ಅತ್ಯಂತ ಸ್ವಾಗತಾರ್ಹ. ಕಡು ಕಹಿಯಾದ ಹಾಗಲಕಾಯಿಯಿಂದ ನಮ್ಮವರು ಪಲ್ಯ (ಹವ್ಯಕ: ‘ತಾಳು’, ಸಾಂಬಾರು, ಮೇಲೋಗರ, ‘ಮೆಣಸುಕಾಯಿ’ ಗೊಜ್ಜು (ಸುಟ್ಟು ಅಥವಾ ಬೇಯಿಸಿ)ಎಂದು ಮುಂತಾದ ಸ್ವಾದಿಷ್ಟ ಪದಾರ್ಥಗಳನ್ನು ಮಾಡುತ್ತಿರುವುದು ಒಂದು ಅನನ್ಯ ಕಲೆಯೇ ಸರಿ.

ಮಿಶ್ರ ತರಕಾರಿಯ ಅವಿಲಿಗೆ ಇನ್ನೇನಿಲ್ಲದಿದ್ದರೂ ಹಾಗಲಕಾಯಿ ಅನಿವಾರ್ಯ. ಹಸಿ ಹಾಗಲ ಕಾಯಿಯನ್ನು ಉರುಟುರುಟಾಗಿ ಕತ್ತರಿಸಿ ಉಪ್ಪು ಸೇರಿಸಿ ಹುಳಿ ಮಜ್ಜಿಗೆಯಲ್ಲಿ ಅದ್ದಿ ಬಿಸಿಲಿಗೆ ಒಣಗಿಸಿ, ಹುರಿದು ತಿನ್ನಲು ಬಾಳಕ ಮಾಡಿ ಇರಿಸಿಕೊಳ್ಳುವುದು ಇನ್ನೊಂದು ಕಲೆ. ಎಂಥ ಬುದ್ಧಿಜೀವಿ ಕೂಡ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾನೆ! ಈ ಹಾಗಲ ಬಳ್ಳಿಯಲ್ಲೂ ಸಣ್ಣ ಕಾಯಿಗಳನ್ನು ಬಿಡುವಂಥ ತಳಿಗಳಿವೆ. ಸಾಮಾನ್ಯ ಕಾಯಿಗಳು ಸುಮಾರು ಏಳೆಂಟು ಇಂಚುಗಳಿದ್ದರೆ, ಬರೇ ನಡುಬೆರಳಷ್ಟು ಉದ್ದದ ದಪ್ಪ ಕಾಯಿ ಬಿಡುವ ಒಂದು ತಳಿಯಿದೆ. ಇನ್ನೊಂದು ಕೇವಲ ಉಂಗುರ ಬೆರಳಷ್ಟು ಉದ್ದದ್ದು, ಹೆಚ್ಚು ದಪ್ಪವೂ ಇಲ್ಲ, ನಮ್ಮ ಊರಿನಲ್ಲಿ ನಾನಿದನ್ನು ನೋಡಿರಲಿಲ್ಲ, ಆದರೆ ಹೈದರಾಬಾದ್ ಸಂತೆಗಳಲ್ಲಿ ಸಿಗುತ್ತದೆ. ಇದನ್ನು ಉದ್ದಕೆ ಹೊಟ್ಟೆ ಸೀಳಿ, ಮಸಾಲೆ ತುಂಬಿಸಿ ಎಣ್ಣೆಯಲ್ಲಿ ಕರಿದು ತಿನ್ನುವುದು. (ತೊಂಡೆಕಾಯಿಯನ್ನೂ ಈ ಪ್ರಕ್ರಿಯೆಗೆ ಒಳಪಡಿಸಬಹುದು.)

ಗಿಡದಲ್ಲಿ ಬೆಳೆಯುವ ತರಕಾರಿಗಳಲ್ಲಿ ಬಹುಶಃ ಬೆಂಡೆ ತುಂಬ ಜನಪ್ರಿಯ. ಇದರ ಬಿತ್ತು ದೊಡ್ಡ ಉದ್ದಿನ ಕಾಳಿನ ತರದ್ದು. ಹೂವು ಅತ್ಯಂತ ಆಕರ್ಷಕ –ಹೂವಿನ ಎಸಳು ಕಡು ಹಳದಿ ಬಣ್ಣದ್ದು, ಒಳತಳದಲ್ಲಿ ನೇರಳೆ ಬಣ್ಣ. ಇದರ ಕಸ್ತ್ರವೂ ಒಂದು ಮಾದರಿಯದು. ನಮ್ಮೂರ ಬೆಂಡೆಕಾಯಿ ಸಾಕಷ್ಟು ದೊಡ್ಡದಿರುತ್ತದೆ, ಸುಮಾರು ಎಂಟು ಹತ್ತು ಇಂಚು ಉದ್ದ.

ಬೆಂಡೆಕಾಯಿಗೆ ಇಂಗ್ಲಿಷ್ ನಲ್ಲಿ ಓಕ್ರ ಅನ್ನುತ್ತಾರೆ, ಅದು ಮೂಲತಃ ಆಫ್ರಿಕನ್ ಶಬ್ದವಂತೆ, ಆದರೆ ಎಲ್ಲೆಡೆ ‘ಲೇಡೀಸ್ ಫಿಂಗರ್’ (ಮಹಿಳೆಯರ ಅಂಗುಲಿ) ಎನ್ನುವ ಅನ್ವರ್ಥಕ ನಾಮ (?) ಹೆಚ್ಚು ಜನಪ್ರಿಯ! ಇದೊಂದು ಪಂಚಕೋನಗಳಿರುವ (‘ಪೆಂಟಗಾನ್’), ಕೊನೆಯಲ್ಲಿ ಎಲ್ಲ ಕೋನಗಳು ಒಂದುಗೂಡುವ ಮನೋಹರ ಕಾಯಿ, ಅಡುಗೆಯಲ್ಲಿ ಇನ್ನು ಯಾವುದೇ ತರಕಾರಿಯ ಜತೆಗೂ ಸೇರುವುದಿಲ್ಲ. ಸಾಂಬಾರು, ಮೇಲೋಗರ, ಪಲ್ಯ, ಗೊಜ್ಜಿಗೆ ಉಪಯೋಗವಾಗುತ್ತದೆ.

ಈಗ ಬಂದೆವು ನೋಡಿ ನಮ್ಮ ಬದನೆಗೆ. ಪುಸ್ತಕದ ಬದನೆ ಕಾಯಿ ಎಂಬ ವಾಸ್ತವರಹಿತ ಜ್ಞಾನದ ಗೇಲಿಗೆ ಬದನೆಯೇ ಯಾಕೆ ಬಂತೋ ತಿಳಿಯದು, ಬೆಂಡೆಯೋ ಇನ್ನು ಯಾವುದೋ ಬರಬಹುದಿತ್ತು, ಬಂದಿಲ್ಲ, ಬದನೆಯೇ ಬಂತು. ಇದು ಬಹುಶಃ ಅದರ ಜನಪ್ರಿಯತೆಯನ್ನು ತೋರಿಸುತ್ತದೆ. ಬದನೆ ಕೊಟ್ಟು ಕೊದನೆ ಕೊಂಡ ಎನ್ನುವ ಇನ್ನೊಂದು ಗಾದೆಯೂ ಇದೆ: ಬದನೆ ಶ್ರೇಷ್ಠ, ಸುಮ್ಮನೆ ಬೆಳೆಯುವ ಕೊದನೆ (ಗೊಜ್ಜಿಗೆ ಉಪಯೋಗವಾದರೂ) ಪಡಪೋಶಿ, ಆದ್ದರಿಂದ ಬದನೆ ಕೊಟ್ಟು ಕೊದನೆ ಕೊಳ್ಳುವುದು ಮೂರ್ಖತನ ಎಂದು ಅರ್ಥ. ಅಲ್ಲದೆ ಉಡುಪಿ ಗುಳ್ಳ ಲೋಕಪ್ರಸಿದ್ಧ; ಮುನಿದ ಗಂಡನನ್ನು ಒಲಿಸಲು ಗುಳ್ಳನ ಗೊಜ್ಜು ಮಾಡಿದರೆ ಸಾಕಂತೆ! ಆದರೆ ಕನ್ನಡ ಜನಪದದಲ್ಲಿ ಬದನೆಯ ಅಪಮೌಲ್ಯವೂ ಆಗಿದೆ: ಹೇಳುವುದು ಶಾಸ್ತ್ರ, ತಿನ್ನುವುದು ಬದನೆಕಾಯಿ ಎಂಬ ಮಾತನ್ನು ನೋಡಿ! ಅದೇನಿದ್ದರೂ, ಕನ್ನಡ ನುಡಿಯಲ್ಲಿ ಇಂತು ಹರೆದಾಡುವ ಬದನೆ ಬಿತ್ತಿನಿಂದ ಪ್ರಸರಣಗೊಳ್ಳುವಂಥದು, ಗಿಡವಾಗಿ ಬೆಳೆಯುತ್ತದೆ. ಗಿಡದಿಂದ ಒಂದೆರಡು ವರ್ಷ ಬೆಳೆ ತೆಗೆಯಬಹುದು.

ಇದರಲ್ಲಿ ಉದ್ದ ಬದನೆ, ಗುಳ್ಳ ಬದನೆ ಎಂದು ಪ್ರಧಾನವಾಗಿ ಎರಡು ವಿಧ; ಇವುಗಳ ಬಣ್ಣ ಬಿಳಿ, ಹಸಿರು ಬಿಳಿ, ಇಲ್ಲವೇ ನೇರಳೆ ಇರಬಹುದು. ಬಿತ್ತಿನಿಂದ ಈ ತರಾವಳಿಯನ್ನು ಗುರುತಿಸುವುದು ಕಷ್ಟ, ನನಗಂತೂ ಸಾಧ್ಯವಿಲ್ಲ, ನಾನು ಅಷ್ಟೊಂದು ಪರಿಣತನಲ್ಲ. ಪರಿಣತರು ಇರಬಹುದು. ಇರಲಿ. ಅವರಿಗೆ ನಮಸ್ಕಾರ. ಈಗ ನಾನಿರುವ ಹೈದರಾಬಾದಿನಲ್ಲಿ ಕೆಲವು ವರ್ಷಗಳಿಂದ ನೇರಳೆ ಬಣ್ಣದ ಬೃಹತ್ತಾದ ಉರುಟು ಬದನೆಯನ್ನು ನಾನು ನೋಡುತ್ತ ಬಂದಿದ್ದೇನೆ. ಅದು ನೋಡಲು ಬಹಳ ಮುದ್ದಾಗಿರುತ್ತದೆ, ಪದಾರ್ಥಕ್ಕೂ ಚೆನ್ನಾಗಿರುತ್ತದೆ, ಆದರೆ ಎಳತಾಗಿರಬೇಕು. ಇಂಥಾ ಬೃಹತ್ ಬದನೆ ಬಹುಶಃ ಈಚಿನ ಆವಿಷ್ಕಾರವೆಂದು ತೋರುತ್ತದೆ. ಚಿಕ್ಕಂದಿನಲ್ಲಿ ನಮ್ಮ ಹಳ್ಳಿಯಲ್ಲಿ ಅದು ಇರಲಿಲ್ಲ. ಯಾವುದೇ ಬದನೆ ಸಾಧಾರಣವಾಗಿ ಎಲ್ಲಾ ಪದಾರ್ಥಗಳಿಗೂ ಬರುತ್ತದೆ. ಆದರೆ ಬದನೆ ನಂಜು ಎಂದು ಲೆಕ್ಕ. ಕೆಲವರಿಗೆ ಅದು ವರ್ಜ್ಯ. ಆದರೆ ನಾವು ಅಷ್ಟೊಂದು ಸೂಕ್ಷ್ಮ ಅಲ್ಲ. ತರಕಾರಿಯನ್ನು ಪದಾರ್ಥವೆಂದು ಅವುಗಳ ರುಚಿಗೆ ತಿನ್ನುತ್ತೇವೆಯೇ ವಿನಾ ಪ್ರಧಾನ ಆಹಾರವಾಗಿ ಅಲ್ಲ. ಜೀರ್ಣರಸಗಳ ಪ್ರಚೋದನೆಗೆ ರುಚಿ ಮುಖ್ಯ. ಸತ್ವ ದ್ವಿತೀಯ.

ಬದನೆಯನ್ನು ಸುಟ್ಟು ಗೊಜ್ಜು ಮಾಡುವುದಾದರೆ ಅದರ ಮೈಗೆ ಎಣ್ಣೆ ಹಚ್ಚಿ ಕೆಂಡದಲ್ಲಿ ಹಾಕಬೇಕು; ನಂತರ ಬಿಸಿ ಆರಿದ ಮೇಲೆ ಸಿಪ್ಪೆ ಸುಲಭವಾಗಿ ತೆಗೆಯಲು ಬರುತ್ತದೆ. ಆಮೇಲೆ ‘ಗುಳ’ವನ್ನು (ತಿರುಳನ್ನು ಚಚ್ಚುವುದು. ಈಗ ಸುಡುವ ಕೆಂಡವೂ ಇಲ್ಲ ಗೊಜ್ಜು ಮಾಡುವವರೂ ಇಲ್ಲ.

ಅಮರೆ (ಅವರೆ) ಕೋಡು (ಕೋಡಮರೆ) ಸಹಾ ಗಿಡದಲ್ಲಿ ಬೆಳೆಯುವುದು. ಒಂದು ಅಡಿ ಉದ್ದ, ಬೆಲ್ಟಿನಷ್ಟು ದಪ್ಪವಿರುವ ಅವರೆ ಕೋಡನ್ನು ಎಳತಿನಲ್ಲೇ ಉಪಯೋಗಿಸಬೇಕು, ಹೆಚ್ಚು ಬೆಳೆಯಲು ಬಿಟ್ಟರೆ ಅದರ ಒಳಗಿನ ಪೊರೆ ಪ್ಲಾಸ್ಟಿಕ್ ನಂತೆ ಪೆಡಸಾಗಿ ತಿನ್ನಲು ಕಿರಿಕಿರಿಯಾಗುತ್ತದೆ. ಅವರೆ ಕೋಡನ್ನು ನಾವು ಹೆಚ್ಚಾಗಿ ಪಲ್ಯಕ್ಕೆ ಮಾತ್ರ ಬಳಸುತ್ತಿದ್ದುದು. ಇದು ಬಿತ್ತಿನಿಂದ ಪ್ರಸರಣಗೊಳ್ಳುವುದು. (ನಾನಿಲ್ಲಿ ಬೀನ್ಸ್ ಮತ್ತು ಚೌಳಿಕೋಡುಗಳ ಬಗ್ಗೆ ಹೇಳುತ್ತಿಲ್ಲ, ಯಾಕೆಂದರೆ ನಮ್ಮ ಊರಲ್ಲಿ ಅವನ್ನು ಬೆಳೆಯುತ್ತಿರಲಿಲ್ಲ. ಪೇಟೆಯ ಸಂಪರ್ಕ ಹೊಂದುವವರೆಗೆ ನಮಗವುಗಳ ಪರಿಚಯವೂ ಇರಲಿಲ್ಲ. ನಾನು ಹೈದರಾಬಾದಿನಿಂದ ಒಮ್ಮೆ ಊರಿಗೆ ಚೌಳಿಕೋಡಿನ ಬಿತ್ತುಗಳನ್ನು ಒಯ್ದಿದ್ದೆ. ಅದು ಒಂದು ವರ್ಷ ಚೆನ್ನಾಗಿ ಬೆಳೆಯಿತು ಎಂದು ಕೇಳಿದ್ದೇನೆ.)

ಇದೇ ಸಂದರ್ಭದಲ್ಲಿ ನಾನು ನುಗ್ಗೆ ಗಿಡದ (ಹವ್ಯಕ: ನುಗ್ಗಿ ಗೆಡು) ಕುರಿತೂ ಹೇಳಬೇಕು. ಊರಲ್ಲಿ ಇದೊಂದು ಜನಪ್ರಿಯ ತರಕಾರಿ (ಕೊಂಬು). ಪಲ್ಯ, ಸಾಂಬಾರು, ಅವಿಲ್ ಗೆ ಬಳಕೆಯಾಗುತ್ತದೆ. ಜಗಿದಷ್ಟೂ ರಸ ಕೊಡುವ ಕಬ್ಬಿನಂಥ ಸಾಧನ. ಇಡಿಯಾಗಿ ಇದು ನಮ್ಮ ಶಾಲಾ ಮಾಸ್ತರರ ಬಳಿ ಇರುತ್ತಿದ್ದ ಬೆತ್ತವನ್ನು ಜ್ಞಾಪಿಸುವಂಥದು.

ಇಂಗ್ಲಿಷ್ನಲ್ಲಿ ‘ಡ್ರಮ್ ಸ್ಟಿಕ್’ (ಚೆಂಡೆ ಕೋಲು’!). ನುಗ್ಗೆಯ ಎಲೆಯನ್ನು, ಮುಖ್ಯವಾಗಿ ಹೂವನ್ನು ಕೂಡ ಸಾರಿಗೆ ಹಾಕಿ ಅಡುಗೆಗೆ ಬಳಸುತ್ತಾರೆ. ಬಹಳ ಪುಷ್ಟಿದಾಯಕ ಎಂದು ಕೇಳಿದ್ದೇನೆ. ನುಗ್ಗೆಯ ಸಮಸ್ಯೆ ಏನೆಂದರೆ ಗಿಡವಾಗಿ ಇರಲೋ ಮರವಾಗಿ ಬೆಳೆಯಲೋ ಎಂದು ಅದಿನ್ನೂ ತೀರ್ಮಾನಿಸದೆ ಇರುವುದು! ಬೆಳೆಯಲು ಬಿಟ್ಟರೆ ಇದು ಮರದಷ್ಟು ಬೆಳೆದರೂ, ಮರದ ಶಕ್ತಿಯಿಲ್ಲ ಇದಕ್ಕೆ. ಕೊಂಬುಗಳು ಗೊಂಚಲು ಗೊಂಚಲಾಗಿ ಇಳಿದರೂ ಅವನ್ನು ಕೊಯ್ಯಲು ದೋಟಿಯ ಸಹಾಯ ಬೇಕಾಗಬಹುದು. ಮರವೆಂದು ಮೇಲೆ ಹತ್ತಿದರೆ ಗೆಲ್ಲು ಹಿಸಿದು ಮನುಷ್ಯ ಕೆಳಬೀಳುವ ಅಪಾಯವಿದೆ.

ಇನ್ನೊಂದು ಸಮಸ್ಯೆಯೆಂದರೆ ಮರದಿಂದ ತಮ್ಮದೇ ನೂಲುಗಳಲ್ಲಿ ಪುಟ್ಟ ಮಕ್ಕಳಂತೆ ಕೆಳಕ್ಕೆ ನೇತಾಡುವ ಕಂಬಳಿ ಹುಳಗಳು. ಅವು ನುಗ್ಗೆ ಮರವನ್ನು ಹುಡುಕಿಕೊಂಡು ಬರುತ್ತವೆ. ಇದರ ಅರಿವಿಲ್ಲದ ಕೆಳಗೆ ಹೋಗುವ ಮನುಷ್ಯರ ತಲೆಮೇಲೆಈ ಹುಳಗಳು ಆಕಸ್ಮಿಕವಾಗಿ ಬೀಳಬಹುದು! ಬಿದ್ದರೆ ಬಿದ್ದ ಜಾಗದಲ್ಲಿ ತುರಿಕೆ ಖಂಡಿತ. ನುಗ್ಗೆ ಬಿತ್ತಿನಿಂದ ಹುಟ್ಟುವುದಿಲ್ಲ; ಕಾಂಡದಿಂದ ಪ್ರಸರಣಗೊಳ್ಳುತ್ತದೆ. ಇದಕ್ಕೆ ಹೆಚ್ಚೇನೂ ಆರೈಕೆ ಬೇಡವಾದ ಕಾರಣ ನುಗ್ಗೆ ಮರ ಅನಾಥವಾಗಿ ಒಂದೆಡೆ ನಿಂತುಕೊಂಡಿರುತ್ತದೆ; ಕಾಯಿ ಬಿಡುವಾಗಲೇ ಜನರು ಅದರ ಕಡೆ ನೋಡುವುದು! ಆಗ ಅದು ಎಲ್ಲರಿಗೂ ಬೇಕು, ನೆರೆಯವರಿಗೂ ಹೊರೆಯವರಿಗೂ.

ಎಲ್ಲ ತರಕಾರಿಗಳೂ ಒಂದೊಂದು ತರ, ಅಲಸಂಡೆಯದು (ಹವ್ಯಕ: ಅಳತ್ತೊಂಡೆ) ಇನ್ನೊಂದು ತರ. ಸುಮಾರು ಒಂದಡಿ ಉದ್ದದ ಆಚೀಚೆ ಇರುವ ಇದರ ಕೊಂಬು (ಕೋಡು) ತುಂಬ ಉದ್ದಕ್ಕೂ ಬಿಳಿಯಬಿತ್ತುಗಳು. ಒಣ ಬಿತ್ತುಗಳಿಂದಲೇ ಇದನ್ನು ಬೆಳೆಸುವುದು. ಇದರಲ್ಲಿ ದೊಡ್ಡ ತರದ್ದು, ಮಧ್ಯಮ ತರದ್ದು, ಚಿಕ್ಕ ತರದ್ದು ಎಂಬ ತಳಿಗಳಿವೆ. ಬಿಳಿ ಹಸಿರು ಬಣ್ಣ ಸಾಮಾನ್ಯ, ಆದರೆ ನೇರಳೆ ಬಣ್ಣದ್ದೂ ಇದೆ. ಇದನ್ನು ನೆಲದಲ್ಲೂ ಅಲ್ಲ, ಆಕಾಶದಲ್ಲೂ (ಚಪ್ಪರದಲ್ಲೂ) ಅಲ್ಲ ಎಂಬಂತೆ ಗೂಟಗಳನ್ನೂರಿ ಅವುಗಳ ಸುತ್ತ ಒಂದು ಪೊದೆಯಾಗಿ ಬೆಳೆಯುವಂತೆ ಮಾಡುತ್ತಾರೆ. ಅಲಸಂಡೆ ಕಂಡರೆ ಮಕ್ಕಳಿಗಿಷ್ಟ, ಸುಟ್ಟು ಸುಲಿದು ಅಥವಾ ಹಸಿಯಾಗಿ ಸುಲಿದು ಬಿತ್ತುಗಳನ್ನು ತಿಂದುಬಿಡುತ್ತಾರೆ.

ನೆಲದಲ್ಲೂ ಅಲ್ಲ, ಆಕಾಶದಲ್ಲೂ ಅಲ್ಲ, ಮಧ್ಯಮ ಸ್ಥಿತಿಯಲ್ಲಿ ಬೆಳೆಯುವ ಬೂದುಗುಂಬಳ, ಸಿಹಿಗುಂಬಳ (ಚೀನಿಕಾಯಿ, ಹವ್ಯಕ: ಕೆಮ್ಮುಂಡೆ), ಸೋರೆಕಾಯಿಗಳಿವೆ ಸೋರೆಗೆ (ಹವ್ಯಕ: ಸೊರೆಕ್ಕಾಯಿ) ಚಪ್ಪರ ಹಾಕುವುದೂ ಸಾಧ್ಯ. ಇವೆಲ್ಲವೂ ದೊಡ್ಡ ದೊಡ್ಡ ಕಾಯಿಗಳನ್ನು ಬಿಡುವ ಕಾರಣ ಚಪ್ಪರದಲ್ಲಿ ನಿಲ್ಲಲಾರವು. ಆದರೆ ನೆಲದಲ್ಲಿ ಯಾಕಿಲ್ಲ ಎಂದು ಕೇಳಬಹುದು. ಲತಾ ಮೂಲಗಳಾದ ಇವು ಬೀಜ ಟಿಸಿಲೊಡೆದು, ನಾಲ್ಕು ಮಾರು ನೆಲದಲ್ಲೆ ಬೆಳೆದೊಡನೆ, ಎಂದರೆ ವಯಸ್ಸಿಗೆ ಬಂದೊಡನೆ, ಇವುಗಳಿಗೆ ಅಡರುಗಳ ಆಧಾರ ಕೊಡಬೇಕು, ಹಾಗಿದ್ದರೇನೇ ಬಳ್ಳಿಗಳು ಹೂ ಬಿಟ್ಟು ಕಾಯಿಗಳಾಗುತ್ತವೆ. ಅಡರು ಕೊಡದಿದ್ದರೆ ಬಳ್ಳಿಗಳು ಮಣ್ಣಿನ ಸಂಪರ್ಕದಲ್ಲಿ ಗಂಟು ಗಂಟಿಗೆ ಬೇರು ಬಿಡುತ್ತ, ಬೇರು ಬಿಟ್ಟಲ್ಲೆಲ್ಲ ಎಳತಾಗಿಯೆ ಇದ್ದು ಬಳ್ಳಿಗಳು ಬಲಿಯದೆ ಹೂ ಬಿಡಲಾರವು.

ಮಣ್ಣಿನ ಸಾಲುಗಳಲ್ಲಿ ಬೆಳೆಸುವ ಸೌತೆ, ಮುಳುಸೌತೆಗಳಿಗೂ ಇದೇ ಕಾರಣಕ್ಕೆ ಅಡರಿನ ಆಧಾರ ಬೇಕು. ಇದನ್ನೆಲ್ಲ ನಮ್ಮ ಹಿರಿಯರು ಯಾರಿಂದ, ಎಷ್ಟು ಪ್ರಯೋಗಗಳ (ಸೋಲು ಮತ್ತು ಗೆಲುವುಗಳ) ನಂತರ ಕಲಿತುಕೊಂಡರು, ಒಬ್ಬರ ಜ್ಞಾನ ಹೇಗೆ ಇತರರಿಗೆ ಪ್ರಸರಣಗೊಂಡಿತು ಎಂದು ಯೋಚಿಸಿದರೆ ದಿಗ್ಭ್ರಮೆಯಾಗುತ್ತದೆ!

ಬೂದುಗುಂಬಳಗಾಯಿ! ಒಮ್ಮೆ ಹೇಳಿ ನೋಡೋಣ. ಬಾಯಿ ತುಂಬುತ್ತದೆ ಅಲ್ಲವೇ? ತರಕಾರಿಗಳಲ್ಲೆಲ್ಲ ಅತಿ ದೊಡ್ಡ ಕಾಯಿ ಇದು. ಪ್ರಾಣಿಗಳಲ್ಲಿ ಆನೆ ಇದ್ದ ಹಾಗೆ. ಆದ್ದರಿಂದ ‘ಬೂದುಗುಂಬಳಗಾಯಿ’ ಅನ್ವರ್ಥ ನಾಮ. ಕುಂಬಳ ಕಾಯಿ ಕದ್ದ ಎಂದರೆ ಬೆನ್ನು ಮುಟ್ಟಿ ನೋಡಿಕೊಂಡ ಎಂದು ಕನ್ನಡ ಜನ ಇದನ್ನು ಗಾದೆ ಮಾತಿನಲ್ಲಿ ಕೊಂಡಾಡಿದ್ದಾರೆ. ಇದರ ಮೈಯಲ್ಲಿ ಬೂದಿಯಂಥ ಪುಡಿ ಇದ್ದು, ಹೆಗಲಿಗೇರಿಸಿದರೆ ಹೆಗಲ ಮೇಲೆ ಬಿಳಿಬಣ್ಣ ಉಳಿಯುವುದು ಖಂಡಿತ. ಈ ಗಾದೆಯಿಂದ ನಮ್ಮ ಹಿಂದಣ ಕನ್ನಡ ಜನರ ಜೀವನದ ಬಗ್ಗೆ ಸಾಕಷ್ಟು ತಿಳಿಯುತ್ತದೆ ಅಲ್ಲವೇ? ಒಂದೇ ಕೈಯಿಂದ ಕುಂಬಳ ಕಾಯಿಯನ್ನು ಎತ್ತುವುದಕ್ಕೆ ಆಗುವುದಿಲ್ಲ ಎನ್ನುವ ಮಾತೂ ಇದೆ. ಇರಲಿ, ನಮಗೆ ಬೇಕಾದ್ದು ಕುಂಬಳ ಕಾಯಿ, ಸಾಂಬಾರಿಗೆ, ಹುಳಿ ಬೆಂದಿಗೆ, ಸಾಸಿವೆಗೆ, ಮೇಲೋಗರಕ್ಕೆ, ಹಲ್ವಕ್ಕೆ! ಕಾಯಿಯ ದಪ್ಪ ಸಿಪ್ಪೆಯನ್ನು (ಹವ್ಯಕ: ‘ಓಡು’) ಕತ್ತರಿಸಿ ಪಲ್ಯ ಕೂಡ ಮಾಡಬಹುದು. ನಮ್ಮ ಜನ ಯಾವುದನ್ನೂ ಪೋಲು ಮಾಡಲು ಬಿಡುವುದಿಲ್ಲ. ಕೂಷ್ಮಾಂಡ ಕಾಯಿ ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ. ನನಗೆ ಗೊತ್ತಿಲ್ಲ. ಅದನ್ನು ತಿಂದು ಬುದ್ಧಿವಂತನಾದವರನ್ನು ನಾನು ಕಂಡಿಲ್ಲ.

ತರಕಾರಿಗಳಲ್ಲಿ ಕುಂಬಳದ ಕುರಿತು ನನಗೆ ಹೆಚ್ಚು ಮಮತೆ ಇದೆ. ಆದರೆ ಇದನ್ನು ಯಾಕೆ ದೇವರ ಪೂಜೆಯಿಂದ ನಿಷಿದ್ಧ ಮಾಡಿದ್ದಾರೋ ತಿಳಿಯದು. ಅಪರ ಕ್ರಿಯೆಗಳಿಗೆ, ಮಾಟಮಂತ್ರಗಳಿಗೆ ಮಾತ್ರ ಇದು ಸಲ್ಲುವಂಥದು. ಅಲ್ಲದೆ ಹೊಸ ಮನೆಗಳನ್ನು ಕಟ್ಟಿಸುವಾಗ ಎಲ್ಲರಿಗೂ ಕಾಣುವ ಹಾಗೆ ಎದುರಿಗೇ ಇದನ್ನು ತೂಗಿ ಹಾಕುವುದಿದೆ, ಜನರ ಕೆಟ್ಟ ದೃಷ್ಟಿ ತಾಕದಿರಲಿ ಎಂದು. ಕುಂಬಳದಲ್ಲೂ ಒಂದು ಚಿಕ್ಕ ಫಲ ಬಿಡುವ ತಳಿಯಿದೆ; ಕಾಶಿ ಕುಂಬಳವೆಂಬ ಹೆಸರಿನ ಇದು ತುಂಬಾ ಗಟ್ಟಿಯಾಗಿದ್ದು ಹೆಚ್ಚು ಜನಪ್ರಿಯವಲ್ಲ. ಇನ್ನು ನಮ್ಮೂರಿನ ಪಶ್ಚಿಮಕ್ಕಿರುವ ಪೇಟೆಯ ಹೆಸರು ಕುಂಬಳೆ; ಕುಂಬಳ ಕಾಯಿಗೂ ಇದಕ್ಕೂ ಸಂಬಂಧವಿರುವ ಹಾಗೆ ನನಗನಿಸುವುದಿಲ್ಲ. ಜವುಗು ಮಣ್ಣಿನ ಈ ಪ್ರದೇಶದಲ್ಲಿ ಬೆಂಡೆ, ಬಚ್ಚಂಗಾಯಿ, ಕುಂಬಳ ಫಲವತ್ತಾಗಿ ಬೆಳೆಯುತ್ತವೆ ನಿಜ.

ನಾವು ಬೆಳೆಯುತ್ತಿದ್ದ ನಾಟಿ ತರಕಾರಿಗಳೆಲ್ಲ ನಮ್ಮೂರ ಸಸ್ಯಗಳಂತೆ ಹಳತು. ಆದರೂ ಬೆಳೆದರೆ ಅವೇ ನಮಗೆ ಬೇಕಷ್ಟು ಇದ್ದುವು. ಬೆಳೆಯುತ್ತಿದ್ದೆವು, ತಿನ್ನುತ್ತಿದ್ದೆವು, ಮಿಕ್ಕವನ್ನು ನೆರೆಯವರಿಗೂ ಕೊಡುತ್ತಿದ್ದೆವು. ಕೆಲವೊಂದು ತಳಿಗಳಿಗೆ ಜನ ಇತರರನ್ನು ಆಶ್ರಯಿಸಬೇಕಾಗುತ್ತಿತ್ತು.

ಕುಂಬಳ ಕಾಯಿ ಎಷ್ಟೇ ಬೆಳೆದರೂ ಒಳಗೆ ಬಿಳಿಯಾಗಿಯೇ ಇರುತ್ತದೆ. ಅದು ಹಣ್ಣಾಗುವುದು ಎಂದಿಲ್ಲ. ಆದರೆ ಇದರ ದಾಯಾದಿಯಂತಿರುವ ಚೀನಿಕಾಯಿ (ಸಿಹಿಗುಂಬಳ) ಹಾಗಲ್ಲ, ಅದು ಎಳವೆಯಲ್ಲಿ ಒಳಗೆ ಬಿಳಿಯಾಗಿರುತ್ತದೆ, ಬೆಳೆದಂತೆ ಕೆಂಪಾಗುತ್ತದೆ. ಬೆಳೆದ ಬೂದುಗುಂಬಳವನ್ನಾಗಲಿ, ಚೀನಿ ಕಾಯಿಯನ್ನಾಗಲಿ ಕೊಯ್ದು ಕೆಲವು ತಿಂಗಳ ತನಕ ಹಾಗೇ ಇಟ್ಟುಕೊಳ್ಳಬಹುದು. ಕುಂಬಳ ಕಾಯಿ ಕರೆಯುವ ತನಕ ಮಲಗಿರುತ್ತದೆ, ಚೀನಿ ಕಾಯಿ ಕೂತಿರುತ್ತದೆ! ಇನ್ನು ಚೀನಿ ಕಾಯಿಯನ್ನೂ ಎಳವೆಯಲ್ಲೇ ಕೊಯ್ದು ಸಿಹಿ ಬೆಂದಿ ಮಾಡಲು ಬಹುದು, ಒಂದಿಗೆ ನೆನೆ ಹಾಕಿದ ಬಿಳಿ ಹೆಸರು ಕಾಳುಗಳನ್ನು ಸೇರಿಸಿ ಬೇಯಿಸಿದರೆ ಉತ್ತಮ. ಬೆಳೆದು ಕೆಂಪಾದ ನಂತರ ಚೀನಿ ಕಾಯಿಯ ಸಾಂಬಾರು, ಕೊದಿಲು ಮಾಡುತ್ತಾರೆ – ತೊಗರಿ ಬೇಳೆ ಹಾಕಿದರೆ ಸಾಂಬಾರು, ಇಲ್ಲದಿದ್ದರೆ ಕೊದಿಲು.

ಕುಂಬಳ ಕಾಯಿಯ ಮಹಿಮೆಗಳು ಚೀನಿ ಕಾಯಿಗೆ ಇಲ್ಲ. ಆದರೆ ಅದರ ತೊಟ್ಟಿಗೆ ವಿಷಹಾರಿ ಗುಣವಿದೆಯೆಂದು ಕೇಳಿದ್ದೇನೆ; ಇದಕ್ಕೆ ವಿರುದ್ಧವಾಗಿ, ಕುಂಬಳ ಕಾಯಿ ವಿಷಪ್ರಚೋದಕ. ಅಲ್ಲದೆ ಕಾಯಾಗದ (ಕುಂಬಳದಲ್ಲಾಗಲಿ ಚೀನಿಯಲ್ಲಾಗಲಿ ಎಲ್ಲ ಹೂಗಳಲ್ಲೂ ಕಾಯಿ ಬಿಡುವುದಿಲ್ಲ) ಚೀನಿಯ ಕಡು ಅರಸಿನ ಬಣ್ಣದ ಹೂವನ್ನು ಕೊಯ್ದು ಬೇಯಿಸಿ ತೆಂಗಿನ ಕಾಯಿ ತುರಿಯೊಂದಿಗೆ ಅರೆದು ಪಚ್ಚಡಿ ಮಾಡುವುದಿದೆ. ಈ ಭಾಗ್ಯ ಕುಂಬಳ ಕಾಯಿಯ ಹೂವಿಗೆ ಇಲ್ಲ.

ಸೋರೆಕಾಯಿಯನ್ನು ಚಪ್ಪರದಲ್ಲಿ ಬೆಳೆಸಬಹುದಾದರೂ, ಅದು ಕೂಡ ಗಾತ್ರದಲ್ಲಿ ದೊಡ್ಡದಾದುದರಿಂದ ಅದನ್ನು ಕುಂಬಳ, ಚೀನೀ ಕಾಯಿಯಂತೆ ಅಡರಿನ ಮೇಲೆ ಬೆಳೆಸುವುದೇ ಕ್ಷೇಮ. ವಾಣಿಜ್ಯ ಮಟ್ಟದಲ್ಲಿ ಬೆಳೆಯುವವರು ಮಾತ್ರ ಬಹುಶಃ ಚಪ್ಪರ ಉಪಯೋಗಿಸಬಹುದು. ಇದರ ಜನಪ್ರಿಯ ತಳಿಯಲ್ಲಿ ಕಾಯಿ ಉದ್ದಕೆ ಒಂದೆರಡು ಅಡಿ ಬೆಳೆಯುತ್ತದೆ – ಪುರಾಮಾನವರು ಜಗಳಕ್ಕೆ ಬಳಸುವ ದೊಣ್ಣೆಯಂತೆ! ಇನ್ನೊಂದು ತಳಿಯಲ್ಲಿ ಕಾಯಿ ದುಂಡಗೆ ಸಿಹಿಗುಂಬಳದ ಗಾತ್ರದಲ್ಲಿ ಇರುತ್ತದೆ. ರುಚಿಯಲ್ಲಿ ಉದ್ದದ ಕಾಯಿಯೂ ದುಂಡನೆ ಕಾಯಿಯೂ ಒಂದೇ. ಸೋರೆಕಾಯಿಯನ್ನು ಪದಾರ್ಥಕ್ಕೆ ಉಪಯೋಗಿಸಲು ಎಳವೆಯಲ್ಲೇ ಕೊಯ್ಯಬೇಕು. ರುಬ್ಬಿದ ಅಕ್ಕಿ ಹಿಟ್ಟಿನೊಂದಿಗೆ ಇದರ ಚೂರುಗಳನ್ನು, ಹಾಗೂ ಎಳತಾಗಿದ್ದರೆ ಬಿತ್ತು ಸಮೇತ ಬೆರೆಸಿ ಸೆಕೆಗಿರಿಸಿ ಇಡ್ಲಿ ಮಾಡುವುದೂ ಇದೆ. ಮತ್ತು ಸೋರೆಕಾಯಿ ಪಾಯಸ ಕೂಡಾ ಬಹಳ ಸ್ವಾದಿಷ್ಟ.

ಸೋರೆಕಾಯಿಯ ಕುರಿತು ಹೇಳುವಾಗ ಅದರ ಉದ್ದ ಭಾಷೆಯ ಕಾಯಿಯಿಂದ ಸಿಗುವ ಬುರುಡೆಯ ಕುರಿತೂ ಹೇಳಬೇಕು. ಸೋರೆಯ ಬಿತ್ತು ತೆಗೆದಿಡಲು ಕಾಯಿಯನ್ನು ಬಳ್ಳಿಯಲ್ಲೆ ಒಣಗುವ ತನಕ ಬಿಡಬೇಕಾಗುತ್ತದೆ. ಆಗ ಕಾಯಿಯ ಮೈ ಒಣಗಿ ಗಟ್ಟಿಯಾಗುತ್ತದೆ. ಇದನ್ನೇ ಒಂದು ಬುರುಡೆಯಾಗಿ ಮಾಡುವುದು ಸಾಧ್ಯ. ಒಣಗಿದ ಕಾಯೊಳಗಿಂದ ಬಿತ್ತುಗಳನ್ನು ತೆಗೆದರೆ ಉಳಿಯುವುದೇ ಬುರುಡೆ. ಇದಕ್ಕೆ ಬಿರಡೆಯನ್ನೂ ಮಾಡಿ ಹಾಕಿಕೊಳ್ಳ ಬಹುದು. ಬಹುಶಃ ಒಂದು ಕಾಲದಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಶೇಖರಿಸಲು ಇದನ್ನು ಬಳಕೆ ಮಾಡುತ್ತಿದ್ದರು. ನನ್ನ ಬಾಲ್ಯದಲ್ಲಿ ನಾನಿದನ್ನು ಕಂಡುದು ನಮ್ಮ ತೋಟದಲ್ಲಿದ್ದ ಒಂದು ಎತ್ತರದ ತಾಳೆ ಮರದಿಂದ ಕಳ್ಳು ಭಟ್ಟಿಯಿಳಿಸಲು ಬರುತ್ತಿದ್ದ ಒಬ್ಬ ಮೂರ್ತೆದಾರನ ಸೊಂಟದಲ್ಲಿ. ಮರದ ಕೊಂಬೆಯಿಂದ ಕಳ್ಳು ತುಂಬಿಸಿ ತರಲು ಇದು ಆದರ್ಶ ಬುರುಡೆ! ಕೆಲವು ಸಲ ಅವನ ಬಳಿ ಇಂಥ ಎರಡೆರಡು ಬುರುಡೆಗಳಿರುತ್ತಿದ್ದುವು. ದೇವರೆ, ಅಪಾರ ನಿನ್ನ ಕರುಣೆ!

ಅಡರಿನ ಮೇಲೆ ಸಾಲು ಸಾಲಾಗಿ ಬೆಳೆಸುವ ಇನ್ನೆರಡು ತರಕಾರಿಗಳು ಸೌತೆ ಮತ್ತು ಮುಳುಸೌತೆ. ಎಳೆಯ ಸೌತೆಯನ್ನು ಕತ್ತರಿಸಿ, ಉಪ್ಪು ಬೆರೆಸಿ ಇರಿಸಿಕೊಂಡು ಆಮೇಲೆ ಬೇಕಾದಾಗ ಅದಕ್ಕೆ ಅರೆದ ಮೆಣಸಿನ ಮುದ್ದೆಯನ್ನು ಬೆರೆಸಿ ಉಪ್ಪಿನಕಾಯಿ ಮಾಡುವುದಿದೆ – ಬಹಳ ಸ್ವಾದಿಷ್ಟ, ಇದನ್ನು ಹಲ್ಲಿನಿಂದ ಜಗಿಯುವಾಗ ಆಗುವ ‘ಕರಕ್’ ಶಬ್ದ ಇದರ ಡೆಲಿಕೆಸಿಯ ಒಂದು ಭಾಗ! ಈಗ ಇಂಥ ಸಾಧನಗಳೆಲ್ಲ ಹಳ್ಳಿಗಳಿಂದ ಹೊರಟು ಹೋಗಿರುವುದರಿಂದ ಇದನ್ನು ಇಲ್ಲಿ ಕೊಡುತ್ತಿದ್ದೇನೆ. ಇನ್ನು ಸೌತೆ ಹಣ್ಣಾದ ಮೇಲೆಯೂ (ಹೊರಗೆ ಹಣ್ಣಿನಂತೆ ಕಂಡರೂ ಒಳಗೆ ಹಸಿಯಾಗಿಯೆ ಇರುತ್ತದೆ) ಉಪ್ಪಿನಕಾಯಿ ಮಾಡಬಹುದು (‘ದೋಸಕಾಯಿ’ ಉಪ್ಪಿನಕಾಯಿ ತೆಲುಗರಿಗೆ ತುಂಬ ಇಷ್ಟ), ಆದರೆ ತಾತ್ಕಾಲಿಕವಾಗಿ ಮಾತ್ರ, ಅವಧಿ ಕಳೆದರೆ ಅದು ಹಳಸುತ್ತದೆ. ಸೌತೆಕಾಯಿಯ ಪಲ್ಯ, ಸಾಂಬಾರು, ಮೇಲೋಗರ (ಹೆಚ್ಚಾಗಿ ತೊಂಡೆಕಾಯಿ ಜತೆ) ಮಾಡುತ್ತಾರೆ. ಪದಾರ್ಥದಲ್ಲಿ ಇದನ್ನು ‘ಚೋಲಿ’ (ಸಿಪ್ಪೆ) ಸಮೇತ ತಿನ್ನಬೇಕು ಎನ್ನುತ್ತಾರೆ: ಚೋಲಿ ಮತ್ತು ‘ಗುಳ’ದ ನಡುವೆ ಅಮೃತವಿದೆಯಂತೆ! ಅಡಗಿ ಕುಳಿತುಕೊಳ್ಳುವುದಕ್ಕೆ ಅಮೃತಕ್ಕೆ ಬೇರೆ ಜಾಗವಿಲ್ಲವೇ ಎಂದು ಕೇಳಿದರೆ ಅದು ಉದ್ಧಟತನವಾಗುತ್ತದೆ. ಬೇಕಾದರೆ ತಿನ್ನಿ, ಇಲ್ಲದಿದ್ದರೆ ಬಿಡಿ!

ವರ್ಷದಷ್ಟು ಬಾಳಿಕೆ ಬರುವ ಹಣ್ಣು ಸೌತೆಯನ್ನು ಮನೆಯಲ್ಲಿ ದಾಸ್ತಾನು ಮಾಡುವುದೂ ಒಂದು ಕಲೆ. ಕಂಭಗಳಿರುವ ಮನೆ ಮತ್ತು ಕೊಟ್ಟಿಗೆಗಳಲ್ಲಿ ಇವನ್ನು ಬಾಳೆ ನಾರುಗಳಲ್ಲಿ ಸುತ್ತಲೂ ತಾಯಿತದಂತೆ ಒಂದರ ಮೇಲೆ ಒಂದರಂತೆ ಕಟ್ಟಲಾಗುತ್ತದೆ. ಇದು ಬರೇ ಜಾಗ ಕಾಪಾಡುವ ದೃಷ್ಟಿಯಿಂದಲೇ ಅಲ್ಲ, ಇಲಿ ಹೆಗ್ಗಣಗಳಿಂದ ರಕ್ಷಿಸುವುದಕ್ಕೆ ಕೂಡ. ಇಲ್ಲಿ ಹೇಳಬೇಕಾದ ಇನ್ನೊಂದು ವಿಷಯ: ಬೇಸಿಗೆಯಲ್ಲಿ ಸೌತೆಯನ್ನು ನಡುವಿನಿಂದ ಕತ್ತರಿಸಿ, ತೆಂಗಿನ ಕಾಯಿಯಂತೆ ತುರಿದು, ಅದಕ್ಕೆ ಸ್ವಲ್ಪ ತೆಂಗಿನ ತುರಿಯನ್ನೂ ಬೆಲ್ಲವನ್ನೂ (ಬೇಕಿದ್ದರೆ ಚೂರು ಉಪ್ಪನ್ನೂ) ಸೇರಿಸಿ, ತುರಿದು ಖಾಲಿಯಾದ ಸೌತೆಯ ‘ಕಪ್ಪಿ’ನಿಂದಲೇ ತಿನ್ನುವುದು – ಕೆಳಗೆ ಶೇಖರವಾದ ರಸವನ್ನು ಹೀರುವುದು. ಇದು ಉಷ್ಣ ಪರಿಹಾರಕ ಎಂದು ಲೆಕ್ಕ, ರುಚಿಕರವಂತೂ ಹೌದು.

ಮುಳು ಸೌತೆ (ಮುಳ್ಳು ಸೌತೆ) ಸೌತೆ ಕಾಯಿಯ ತಮ್ಮ, ಮಿಡಿಯಾಗಿರುವಾಗ ಇದನ್ನು ‘ಕರುಗಳ ಮೆಡಿ’ ಎಂದು ಹವ್ಯಕದಲ್ಲಿ ಅನ್ನುವುದಿದೆ – ಪ್ರೀತಿಯಿಂದ. ತರಕಾರಿ ಭಕ್ಷಕರಾದ ಕುದುಕ (ನರಿ) ಗಳಿಗೆ ಇದು ಪಂಚಪ್ರಾಣ. ಸಾಲಿನಲ್ಲಿ ಬೆಳೆಯಲು ಬಿಟ್ಟರೆ ಅಣ್ಣ ಸೌತೆಗಿಂತ ಇದು ದೊಡ್ಡದಾಗುತ್ತದೆ. ಆದರೆ ಬಿಡಬೇಕಲ್ಲ! ಯಾಕೆಂದರೆ ಇದು ಎಳತಿನಲ್ಲೇ ಹಸಿಯಾಗಿ, ಬೇಕಿದ್ದರೆ ಹೋಳು ಮಾಡಿ ಸ್ವಲ್ಪ ಉಪ್ಪು ಸೇರಿಸಿ, ತಿನ್ನಲು ರುಚಿ, ಪಲ್ಯ ಮಾಡುವುದು ಅಪರೂಪ. ಬೆಳೆದ ಮುಳ್ಳು ಸೌತೆಯನ್ನು ಪಾಯಸ ಮಾಡುವುದೂ ಇದೆ. ಹಣ್ಣಾದ ಮುಳ್ಳು ಸೌತೆ ಐದಾರು ತಿಂಗಳು ಉಳಿಯಬಹುದು. ಎಳವೆಯಲ್ಲಿ ಇದರ ಮೈ ತುಂಬಾ ಗುಂಡು ಸೂಜಿಯ ಗುಂಡಿನಂಥ ಹುಸಿ ಮುಳ್ಳುಗಳಿರುವುದರಿಂದ ಇದರ ಹೆಸರಿಗೆ ಮುಳ್ಳು ಎಂಬ ಪದ ಅಂಟಿಕೊಂಡಿದೆ. ಇಂಥ ತರಕಾರಿಗಳನ್ನು ಮತ್ತು ನಿಂಬೆ, ಮುಸುಂಬಿ ಮುಂತಾದ ಹಣ್ಣುಗಳನ್ನು ಕತ್ತರಿಸಿದಾಗಲೆಲ್ಲ ನನಗೆ ಪ್ರಕೃತಿಯ ಅಚ್ಚುಕಟ್ಟಾದ ‘ಪ್ಯಾಕೇಜಿಂಗ್ ಸಿಸ್ಟಮ್’ ಕಂಡು ವಿಸ್ಮಯವಾಗುತ್ತದೆ!

ಯಾವ ಸ್ಥಳವನ್ನೂ ಪೋಲು ಮಾಡದೆ ಬಿತ್ತುಗಳನ್ನು / ಕೋಶಗಳನ್ನು ಒಂದಕ್ಕೆ ಒಂದು ಒತ್ತೊತ್ತಾಗಿ ಜೋಡಿಸಿ ಕಟ್ಟಿಡಲಾಗಿದೆ. ಹೇಗಾಯಿತು ಇದೆಲ್ಲ?! ಹೇಗೋ ಆಯಿತು ಎಂದಷ್ಟೆ ಹೇಳಬಹುದು. ಆದರೆ ಈ ಗೃಹೋಪಯೋಗಿ ತರಕಾರಿ ತಳಿಗಳ ಬೆಳವಣಿಗೆಯಲ್ಲಿ ಮನುಷ್ಯನ ಹಿತಾಸಕ್ತಿಯ ಕೈವಾಡವಿದೆ ಎನ್ನುವುದನ್ನು ಊಹಿಸಬಹುದು. ಹೆಚ್ಚಿನ ಜಾತಿಯಲ್ಲೂ ಮನುಷ್ಯರಿಗೆ ನಿರುಪಯುಕ್ತವಾದ ತಳಿಗಳು ನೈಸರ್ಗಿಕವಾಗಿ ಇನ್ನೂ ಬದುಕುಳಿದಿರುವುದನ್ನು ಕಾಣಬಹುದು. ಉದಾಹರಣೆಗೆ, ಸೌತೆ ಜಾತಿಯಲ್ಲಿ ಕಿರಿದಾದ ಫಲ ಬಿಡುವ, ಆದರೆ ಅತ್ಯಂತ ಕಹಿಯಾದ ಒಂದು ತಳಿಯಿದೆ. ನಾವು ಬೆಳೆಸುವ ಸೌತೆ ಯಾದೃಚ್ಛವಾಗಿ ಸ್ಫೋಟಗೊಂಡು ಕಹಿರಹಿತವಾಗಿದ್ದು ಮನುಷ್ಯರಿಂದ ಬೇಕೆನಿಸಿ ಸ್ವೀಕೃತವಾದ ತಳಿಯಾಗಿರಬೇಕು. ಆದರೆ ಈ ಕಾಡು ಮತ್ತು ನಾಡಿನ ತಳಿಗಳು ಒಂದೇ ಜಾತಿಗೆ ಸೇರಿದುವು ಎಂದು ಧಾರಾಳವಾಗಿ ಊಹಿಸಿಕೊಳ್ಳಬಹುದು. ಮೃಗಗಳಲ್ಲಿಯೂ ಇದೇ ವಿದ್ಯಮಾನವನ್ನು ನೋಡುತ್ತೇವೆ: ಊರ ನಾಯಿ, ಕಾಡು ನಾಯಿ, ನಾಟಿ ಕೋಳಿ, ಕಾಡು ಕೋಳಿ ಮುಂತಾಗಿ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಈ ಕಥನ ಇನ್ನೂ ಇದೆಯೇ ಎಂದರೆ ವಾಸ್ತವದಲ್ಲಿ ಇನ್ನೂ ಇದೆ. ಬಹಳ ಇದೆ: ಬಸಳೆ, ಹರಿವೆ, ಕೆಸವಿನೆಲೆ (‘ಪತ್ರಡೆ!’) ಮುಂತಾದ ಎಲೆಗಳ ಆಕರ್ಷಕ ಕ್ಷೇತ್ರವಿದೆ; ಕೆಸವಿನ ಗಡ್ಡೆ, ಮುಂಡಿ ಗಡ್ಡೆ, ಕೇನೆ ಗಡ್ಡೆ (ಸುವರ್ಣ ಗಡ್ಡೆ), ಕೂರ್ಕೆ, ಗೆಣಸು ಮುಂತಾದ ‘ಗಡ್ಡೆ ಗೆಣಸು’ಗಳ ವಿಭಾಗವಿದೆ; ಹಲಸು, ಮಾವು, ನೆಲ್ಲಿ, ದೀವಿ ಗುಜ್ಜೆ, ಬಾಳೆ ಕಾಯಿಗಳಿವೆ – ಬಾಳೆ ದಿಂಡನ್ನೂ, ಗೊನೆಯ ಕೊನೆಯಲ್ಲಿರುವ ‘ಕುಂಡಿಗೆ’ಯನ್ನೂ ಪದಾರ್ಥಗಳಿಗೆ ಬಳಸುತ್ತೇವೆ. ಆದರೆ ಕಟ್ಟುನಿಟ್ಟಾಗಿ ಹೇಳುವುದಿದ್ದರೆ ಹಲಸು, ಮಾವು, ನೆಲ್ಲಿ, ದೀವಿ, ಬಾಳೆ ಮುಂತಾದುವು ‘ನೆಟ್ಟಿಕಾಯಿ’ಗಳಲ್ಲ. ಆದರೆ ಹಾಗೆ ಬಳಸುತ್ತೇವೆ. ಇನ್ನು ಕೆಲವು ಕಾಡುತ್ಪತ್ತಿಯಂಥವು: ಮೈಯೆಲ್ಲ ಮಿದುವಾದ ಮುಳ್ಳುಗಳಿರುವ, ಒಂದು ಮುಷ್ಟಿಯೊಳಗೆ ಬರುವ, ಮುದ್ದಾದ ಪೀರೆ ಕಾಯಿ ಇದೆ (ಇದನ್ನು ಹೈದರಾಬಾದ್ ತರಕಾರಿ ಮಾರ್ಕೆಟ್ ನಲ್ಲೂ ನಾವು ಕಂಡಿದ್ದೇನೆ, ಕೊಂಡಿದ್ದೇವೆ). ಮಳೆಗಾಲದ ನೀರಿನ ತೋಡಿನ ಬದಿಗೆ ತಾನೇ ತಾನಾಗಿ ಹುಟ್ಟಿ, ಬದಿಯ ಮರಗಳಿಗೆ ಬಳ್ಳಿಯಾಗಿ ಹಬ್ಬಿ ನೆಲ್ಲಿ ಕಾಯಿ ಗಾತ್ರದ ಉರುಟು ಕಾಯಿಗಳನ್ನು ಬಿಡುವ ಕಾನಕಲ್ಲಟೆ ಕಾಯಿ – ಸೌತೆಯ ಜತೆ ಮೇಲೋಗರ ಮಾಡಿದರೆ ಅಂದಿನ ಸ್ಪೆಶಲ್ ಎಂದು ಲೆಕ್ಕ.

ಆದರೆ ಅತ್ಯಂತ ವಿಶಿಷ್ಟವಾದ ಹಾಗೂ ರುಚಿಕರವಾದ ಕಳಲೆ ಬಗ್ಗೆ ಹೇಗೆ ಹೇಳದಿರಲಿ? ಇದು ಶತ ಪ್ರತಿಶತ ಕಾಡುತ್ಪತ್ತಿ, ಯಾಕೆಂದರೆ ಬಿದಿರಿನಬುಡದಿಂದ ಹುಟ್ಟುವ ಚಿಗುರು (ಕುರುಳೆ) ಕಳಲೆ ಎಂದರೆ. ಇದನ್ನು ಬಾಳೆ ಕುಂಡಿಗೆಯಂತೆ ಕೊಚ್ಚಿ, ಬೇಕಿದ್ದರೆ ಹಲಸಿನ ಬೇಳೆ ಚೂರುಗಳನ್ನು ಸೇರಿಸಿ, ಪಲ್ಯ ಮಾಡಬಹುದು (ಆದರೆ ಅದಕ್ಕೆ ಮೊದಲು ಕೊಯ್ದ ಕಳಲೆಯನ್ನು ಒಮ್ಮೆ ಬೇಯಿಸಿ ನೀರು ಚೆಲ್ಲಿಬಿಡಬೇಕು), ಉಪ್ಪಿನ ಕಾಯಿ ಮಾಡಿದರೆ ಅದು ಡೆಲಿಕೆಸಿಗಳಲ್ಲಿ ಡೆಲಿಕೆಸಿ!
ಇದನ್ನೆಲ್ಲ ನಮಗೆ ಕಲಿಸಿಕೊಟ್ಟ ಹಿರಿಯರಿಗೆ ನಾವು ಕೃತಜ್ಞರಾಗಿರಬೇಕು; ಆದರೆ ನಮ್ಮ ಕಿರಿಯರಿಗೆ ನಾವಿದನ್ನೆಲ್ಲ ಕಲಿಸಿಕೊಟ್ಟಿಲ್ಲವಲ್ಲ?

*****

ಕೆಲವೇ ವರ್ಷಗಳಲ್ಲಿ ನಾನು ಶಾಲೆ ಕಲಿಯಲೆಂದು ಸ್ವಲ್ಪ ತಡ ವಯಸ್ಸಿನಲ್ಲೆ ಸೋದರ ಮಾವನ ಮನೆಗೆ ಸ್ಥಳಾಂತರಗೊಂಡ ನಂತರ ಅಲ್ಲಿಯೂ ಆರಂಭದ ಕೆಲ ಕಾಲ ನನ್ನ ತರಕಾರಿ ಆಸಕ್ತಿ ಮುಂದುವರಿಯಿತು; ತರಕಾರಿ ಬೆಳೆಸಲು ಅಲ್ಲಿ ಭತ್ತದ ಗದ್ದೆಗಳಿದ್ದುವು. ಅನತಿ ಕಾಲದಲ್ಲೇ ಈ ಭತ್ತ ಕೃಷಿಕರ ಒಲವು ವಾಣಿಜ್ಯ ಬೆಳೆಯಾದ ಅಡಿಕೆಯ ಕಡೆ ವಾಲಿದ್ದರಿಂದ ಜನರ ಲಕ್ಷ್ಯವೆಲ್ಲ ಎಲ್ಲೆಲ್ಲಿ ಜಾಗವಿದೆಯೋ ಅಲ್ಲೆಲ್ಲ ಅಡಿಕೆ ಸಸಿ ನಡುವ ನಿಟ್ಟಿನಲ್ಲಿ ಸರಿಯಿತು. ನಾನು ಹೇಳುವುದು ಈ ಬದಲಾವಣೆಯ ಮೊದಲಿನ ಕಾಲ. ಮಾವನ ಊರಿನಲ್ಲಿ ನೀರಾಶ್ರಯವನ್ನು ಹೊಂದಿಕೊಂಡು ಮೂರು ತರದ ಗದ್ದೆಗಳಿದ್ದುವು: ನೀರು ಬೇಕಷ್ಟಿದ್ದು ವರ್ಷಕ್ಕೆ ಮೂರು ಬೆಳೆ ತೆಗೆಯುವ ಕೊಳಕ್ಕೆ ಗದ್ದೆ, ನೀರು ತಕ್ಕಷ್ಟೆ ಇದ್ದು ಎರಡು ಬೆಳೆ ತೆಗೆಯುವ ಸುಗ್ಗಿ ಗದ್ದೆ, ಮಳೆ ನೀರನ್ನು ಮಾತ್ರ ಆಶ್ರಯಿಸಿದ (ಒಣ) ಬೆಟ್ಟು ಗದ್ದೆ. ಇಂಥ ಬೆಟ್ಟು ಗದ್ದೆಗಳನ್ನು ಅವುಗಳ ಒಡಮಸ್ಥರು ಸಾಮೂಹಿಕ ತರಕಾರಿ ಬೆಳೆಗಾಗಿ ನೆರೆಕರೆಯವರಿಗೆ ಬಿಟ್ಟು ಕೊಡುತ್ತಿದ್ದರು. ಇದರಿಂದ ಎರಡೂ ಪಾರ್ಟಿಯವರಿಗೆ ಅನುಕೂಲವಿರುತ್ತಿತ್ತು; ಸ್ವಂತ ಜಾಗವಿಲ್ಲದವರಿಗೆ ಜಾಗ, ಗದ್ದೆ ಮಾಲಿಕರಿಗೆ ಹೇಗೂ ‘ಹಡಿಲು’ ಬೀಳುವ ತಮ್ಮ ಗದ್ದೆಗೆ ಸಲ್ಪ ಈಟು ಬಿದ್ದು ಜಾಗ ಹಸನಾಗಿರುವುದು. ಹೀಗೆ ಜಾಗ ಕಡ ಪಡೆದ ನೆರೆಯವರು ಒಡಮಸ್ಥರಿಗೆ ಏನೂ ಕೊಡುವ ಅಗತ್ಯವಿರಲಿಲ್ಲ; ಬೆಳೆಸಿದ ತರಕಾರಿಯೆಲ್ಲ ಬೆಳೆಸಿದವರಿಗೇ.

ಇಂಥ ಕೃಷಿಕರಲ್ಲಿ ನಾನು ಅದೆಂಥ ಉತ್ಸಾಹವನ್ನು ನೋಡಿದ್ದೇನೆ! ಪ್ರತಿದಿನ ಸಂಜೆ ತಂತಮ್ಮ ಗಿಡಗಳಿಗೆ ಆರೈಕೆ ಮಾಡಲು, ನೀರು ಚೇಪಲು ಆಯಾ ಮನೆಯವರು ಹೆಣ್ಣು ಗಂಡು ಮಕ್ಕಳು ಎನ್ನುವ ಭೇದವಿಲ್ಲದೆ (‘ಕುಂಞ ಕುಟ್ಟಿ ಸಂಸಾರ’) ಅಲ್ಲಿ ಬಂದು ಸೇರಿ ಕೆಲಸ ಮಾಡುವುದನ್ನು ನೋಡಲು ಒಂದು ಖುಷಿ. ಯಾರೂ ಜಗಳಾಡುವುದನ್ನು ನಾನು ಕಂಡಿಲ್ಲ. ಬಿತ್ತುಗಳು ಮೊಳಕೆಯೊಡೆಯುತ್ತವೆ, ಚಿಗುರುತ್ತವೆ, ಅವಕ್ಕೆ ಆಶ್ರಯ ಕೊಡಲು ಅಡೆರುಗಳನ್ನು ಇಡುತ್ತಾರೆ, ದಂಟುಗಳನ್ನು ಊರುತ್ತಾರೆ, ಸಸಿಗಳ ಬುಡಕ್ಕೆ ಸಾವಯವ (ರಾಸಾಯನಿಕ ಗೊತ್ತೇ ಇರಲಿಲ್ಲ!) ಗೊಬ್ಬರ ಹಾಕುತ್ತಾರೆ. ಸೌತೆ, ಮುಳ್ಳುಸೌತೆ, ಗೆಣಸು, ಅಳಸಂಡೆ, ಹರಿವೆ, ಅಮರೆ, ಬೆಂಡೆ, ಬದನೆ– ಅವು ಹೂ ಬಿಡುವುದನ್ನು ನೋಡುವುದು ಒಂದು ಚಂದ, ಎಳೆ ಕಾಯಿಗಳು ರೂಪು ತಳೆಯುವುದನ್ನು ನೋಡುವುದು ಇನ್ನೊಂದು ಚಂದ. ಮಕ್ಕಳ ಕೈಗೆ ಎಳೆ ಮುಳ್ಳುಸೌತೆ ಸಿಕ್ಕರೆ ಮುಳ್ಳು ಸೌತೆಯ ಜೀವನ ಸಾರ್ಥಕ! ಆದರೆ ಕುದುಕ (ನರಿ) ಕೂಡ ಕಾಯ್ತ ಇರುತ್ತದೆ!

ಸಾಯಂಕಾಲ ನೀರು ಚಿಮುಕಿಸಿದ ಇಡೀ ತರಕಾರಿ ಬೆಳೆಯನ್ನು ನೋಡುವುದು ಕಣ್ಣಿಗೆ ಹಬ್ಬ. ನನ್ನ ಮನಸ್ಸಿಗೆ ಬರುವ ಇನ್ನೊಂದು ಸೋಜಿಗ: ಹೇಳದೆ ಬರುವ ಅತಿಥಿಯಂತೆ, ಯಾರೂ ಬಿತ್ತದೆ, ಬೆಳೆಯದೆ, ಇತರ ತರಕಾರಿ ಗಿಡಗಳ ನಡುವೆ ಕೆಲವೆಡೆ ಕಾಣಿಸಿಕೊಳ್ಳುವ ಒಂದು ಜೋಳದ ಕೊಂಬು ಇಲ್ಲವೇ ರಾಗಿಯ ತೆನೆ. ಯಾರೂ ಕಿತ್ತು ಬಿಸಾಡುವುದಿಲ್ಲ ಅವನ್ನು; ಅವು ಹೊಲಕ್ಕೊಂದು ಶೋಭೆ. ಅದೇ ರೀತಿ, ಅನಿರೀಕ್ಷಿತವಾಗಿ, ಸೌತೆ ಸಾಲಿನಲ್ಲಿ ಮೂಡಿ ಬರುವುದು ಖರ್ಬೂಜ – ಸೌತೆಯ ಹಿರಿಯಣ್ಣ. ದಪ್ಪ ದಪ್ಪವಾಗಿ, ಗಟ್ಟಿಯಾಗಿ ಬೆಳೆಯುವ ಇದು ಪಲ್ಯಕ್ಕೆ ಬರುತ್ತದೆ.

ಇದನ್ನೆಲ್ಲ ಬರೆಯುತ್ತಿರುವಾಗ ನನ್ನ ಮನಸ್ಸಿನಲ್ಲಿ ನಿಚ್ಚಳವಾಗಿ ಮೂಡಿ ಬರುತ್ತಿರುವುದು ನಾನು ಆಶ್ರಯ ಪಡೆದ ನನ್ನ ಮಾವನವರ ಬೆಟ್ಟುಗದ್ದೆಯೇ. ಅಲ್ಲಿ ನಾವೂ ನಮಗಾಗಿ ಇರಿಸಿಕೊಂಡ ಪ್ಲಾಟಿನಲ್ಲಿ ತರಕಾರಿ ಬೆಳೆಸುತ್ತಿದ್ದೆವು. ಗದ್ದೆಯ ಒಂದು ಬದಿಯಲ್ಲಿ ಬಾವಿ ಇತ್ತು. ಬೇಸಿಗೆಯಲ್ಲಿ ಕೃಷಿ ನೀರಾವರಿಗೆಂದೇ ತೋಡಿದ ಬಾವಿ ಇದು. ಸಾಕಷ್ಟು ಆಳವಿತ್ತು, ನೀರೂ ಇತ್ತು. ಇದರಿಂದ ನೀರು ಮೊಗೆಯಲು ಏತದ ಏರ್ಪಾಡಿತ್ತು. ಏತಕ್ಕೆ ನಮ್ಮ ಕಡೆ ‘ಜೊಟ್ಟೆ’ ಎನ್ನುತ್ತಾರೆ. ಜೊಟ್ಟೆ ಎಂದರೆ ಒಂದು ತೊಟ್ಟಿಯೂ ಹೌದು, ಅದನ್ನು ಒಳಗೊಂಡ ಒಂದು ಸಸ್ಥಾಪನೆಯೂ ಹೌದು. ಜೊಟ್ಟೆಯನ್ನು ತಾಳೆ ಮರದ ತಮ್ಮನ ಹಾಗಿರುವ ಈಂದು ಇಲ್ಲವೇ ಈಚಲ ಮರದ ಕಡು ಕಠಿಣವಾದ ಬುಡದ ಬೊಡ್ಡೆಯಿಂದ ಕೆತ್ತಿ ತಯಾರಿಸುತ್ತಿದ್ದರು. ಇದನ್ನು ಮಾಡುವುದು ಪರಿಣಿತರಿಗಷ್ಟೇ ಸಾಧ್ಯ.

ಇದನ್ನು ಮಾಡುವ ಕರ್ಮಚಾರಿಗಳು ನಮ್ಮೂರಲ್ಲಿ ಇದ್ದರು. ಇದರ ಅಗಲವಾದ ಬಾಯಿಗೆ ತೂತು ಕೊರೆದು, ಕೋಲು ಸಿಕ್ಕಿಸಿ, ಹಗ್ಗ ಕಟ್ಟಿರುತ್ತಿದ್ದರು. ಹಾಗೂ ಇದು (ಜೊಟ್ಟೆ)ಇಡಿಬಿದಿರಿನ ಗಳುವೊಂದಕ್ಕೆ ಜೋಡಿಸಿರುತ್ತಿತ್ತು. ನೀರಿಗೆ ಇಳಿಸುವುದು, ನೀರಿನಿಂದ ಎತ್ತುವುದು ಈ ಕೆಳಗಿನ ಭಾಗವನ್ನು; ಮೇಲಿನ ಭಾಗ ತೊಲೆಯೊಂದಕ್ಕೆ (‘ದಡೆ’) ಜೋಡಿಸಿರುತ್ತಿತ್ತು. ಹಾಗೂ ಆ ತೊಲೆಯ ಇನ್ನೊಂದು ಕೊನೆಗೆ ಭಾರದ ಕಲ್ಲೊಂದನ್ನು ಬ್ಯಾಲೆನ್ಸಿಗೆಂದು ಕಟ್ಟಿರುತ್ತಿತ್ತು. ಇನ್ನು ಬಾವಿಯ ಸಂಕದಲ್ಲಿ ನಿಂತು ಜೊಟ್ಟೆಯನ್ನು ಕೆಳಗಿಳಿಸುವುದು, ನೀರು ತುಂಬಿಸಿ ಮೇಲೆತ್ತಿ ಅಲ್ಲಿ ಹಾಕಿದ ಪಾತಿಗೆ ಮಗಚುವುದು ಪ್ರಜ್ಞಾವಂತರ ಕೆಲಸ. ಮಕ್ಕಳಾದ ನಮ್ಮ ಕೆಲಸವೇನು? ತೊಲೆಗೆ ಕಲ್ಲು ಕಟ್ಟಿದ ಭಾಗದಲ್ಲಿ ಹಾಕಿದ ಹಗ್ಗ ಹಿಡಿದು, ಅದಕ್ಕೆಂದೇ ತಯಾರಿಸಿದ ಪುಟ್ಟದೊಂದು ಹೊಂಡಕ್ಕೆ ಹಾರುವುದು. ಆಚೆ ಬದಿಯಲ್ಲಿ ನೀರು ತುಂಬಿದ ಜೊಟ್ಟೆ ಸುಲಭವಾಗಿ ಮೇಲೆ ಬರಲು ಸಹಾಯ ಮಾಡುವುದಕ್ಕೆ ಈ ಉಪಾಯ.

ಕೆಲವರು ಎಷ್ಟು ಜೊಟ್ಟೆ ನೀರು ಮೇಲೆ ಬಂತು ಎಂದು ಎಣಿಸುವುದಕ್ಕೆ ಒಮ್ಮೊಮ್ಮೆ ಜಿಗಿದಾಗಲೂ, ಒಂದೊಂದು ಕಲ್ಲು ಪಕ್ಕದ ಕಿಂಡಿಯಲ್ಲಿ ಇರಿಸಿಕೊಳ್ಳುತ್ತಿದ್ದರು. ಹೀಗೆ ನಾನೂ ಎಷ್ಟೋ ಸಲ ಹೊಂಡಕ್ಕೆ ಜಿಗಿದಿದ್ದೇನೆ – ಅಳಿಲ ಸೇವೆ! ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂಬಂತೆ ಈ ಕೆಲಸವನ್ನು ನಾನು ತುಂಬಾ ಆನಂದಿಸಿದ್ದೇನೆ. ಇದೆಂದೂ ಒಂದು ಹೊರೆಯೆಂದು ನನಗೆ ಅನಿಸಿಯೇ ಇರಲಿಲ್ಲ.

ಈ ಏತ ನೀರಾವರಿಯನ್ನು ಮೊದಲು ಯಾರು ಕಂಡುಹಿಡಿದರು, ಆಮೇಲೆ ಅದು ಹೇಗೆ ಹರಡಿತು ಎನ್ನುವುದು ಯಾರಿಗೂ ಗೊತ್ತಿಲ್ಲ. ಜನಪದ ಆ ಕುರಿತು ಯೋಚಿಸುವುದಿಲ್ಲ, ಅಂಥ ನೆನಪುಗಳನ್ನೂ ಅದು ಇಟ್ಟುಕೊಳ್ಳುವುದಿಲ್ಲ. ಆದರೆ ಏತ ಬಹಳ ಪುರಾತನವಾದುದು ಎಂಬುದರಲ್ಲಿ ಸಂದೇಹವಿಲ್ಲ. ಪುರಾತನ ಈಜಿಪ್ಟಿನಲ್ಲಿ ಫೇರೋಗಳ ಕಾಲದಲ್ಲೇ (ಕ್ರಿಸ್ತ ಪೂರ್ವ ಹಲವು ಶತಮಾನಗಳಷ್ಟು ಹಿಂದೆ) ನೈಲ್ ನದಿಯಿಂದ ದಂಡೆಗೆ ನೀರೆತ್ತಿ ಕೃಷಿ ಮಾಡಲು ಜನ ಈ ವಿಧಾನವನ್ನು ಉಪಯೋಗಿಸುತ್ತಿದ್ದರು ಎನ್ನುವುದು ಆ ಕಾಲದ ಭಿತ್ತಿ ಚಿತ್ರಗಳಿಂದ ತಿಳಿದು ಬರುತ್ತದೆ. ಏತವನ್ನು ಅವರು ‘ಶಾಡೂಫ್’ ಎಂದು ಕರೆಯುತ್ತಿದ್ದರು, ನಾವು ‘ಜೊಟ್ಟೆ’ ಎನ್ನುತ್ತೇವೆ. ನೀರು ಮೇಲೆತ್ತುವ ಯಾಂತ್ರಿಕ ಲಾಭ ಒಂದೇ. ಇದರ ಇನ್ನೊಂದು ರೂಪವೇ ರಾಟೆ, ಗೃಹ ಬಳಕೆಗೆ ಬಾವಿಯಿಂದ ನೀರೆತ್ತಲು ಬಳಸುವ, ಅಥವಾ ಇತ್ತೀಚಿನವರೆಗೆ ಬಳಸುತ್ತಿದ್ದ, ಇನ್ನೊಂದು ಅದ್ಭುತ ಶೋಧನೆ. (ಹಲವು ದೇವಾಲಯಗಳಲ್ಲಿ ಇಂಥ ಬಾವಿಗಳು ಇನ್ನೂ ಇವೆ—ದೇವರ ಪೂಜೆಗೆ ಬಾವಿ ನೀರೇ ಆಗಬೇಕು-ಬಹುಶಃ.)

ಇನ್ನು ತರಕಾರಿ ತೋಟವೆಂದ ಮೇಲೆ ಅಲ್ಲೊಂದು ಬೆರ್ಚಪ್ಪ ಇಲ್ಲದಿದ್ದರೆ ಹೇಗೆ? ಹಕ್ಕಿಗಳನ್ನು ಓಡಿಸುವುದಕ್ಕೆ ಬೆಂತರ, ದೃಷ್ಟಿ ನಿವಾಳಿಸುವುದಕ್ಕೆ ದೃಷ್ಟಿ ಬೊಟ್ಟು. ಈ ಬೆರ್ಚಪ್ಪ ಎನ್ನುವುದು ನನ್ನ ಪ್ರಜ್ಞಾಲೋಕದ ಒಂದು ಅವಿನಾ ಭಾವವೇ ಅಗಿದೆ, ನನ್ನ ಕತೆಗಳಲ್ಲಿ ಬರುತ್ತದೆ, ಕವಿತೆಗಳಲ್ಲಿ ಬರುತ್ತದೆ. ಈ ನನ್ನ ಬಾಲ್ಯಕಾಲದ ಸ್ನೇಹಿತನ ಕುರಿತು ನಾನು ಈಗಾಗಲೇ ಅನೇಕ ಕಡೆ ಬಣ್ಣಿಸಿರುತ್ತ ಮತ್ತೆ ಇಲ್ಲಿ ಆ ಕೆಲಸ ಮಾಡುವುದಿಲ್ಲ. ಬೆರ್ಚಪ್ಪ ನನ್ನನ್ನು ಕ್ಷಮಿಸಲಿ!

ನನ್ನ ತರಕಾರಿ ಬಾಂಧವ್ಯದ ಮೂರನೇ ಹಂತ ಹೈದರಾಬಾದಿನಲ್ಲಿ, ನಾವು (ನಾನು ಮತ್ತು ನಿರ್ಮಲ) ಅಲ್ಲಿಗೆ ಹೋಗಿ ನೆಲಸಿದ ಆರಂಭದ ಎರಡು ಮೂರು ವರ್ಷ. ಹೊಸ ಕ್ವಾರ್ಟರ್ಸ್, ಮನೆಯ ಮೂರೂ ಕಡೆ ಹೊಸ ಮಣ್ಣು, ಸಾಕಷ್ಟು ನೀರು, ಬಿಸಿಲು. ಏನಾದರೂ ಬೆಳೆಸಬೇಕೆನ್ನುವ ನಮ್ಮ ತಾರುಣ್ಯದ ಉತ್ಸಾಹ. ಹೂ ಬೆಳೆಸಿದೆವು, ತರಕಾರಿ ಬೆಳೆಸಿದೆವು, ಹುಲ್ಲು ಕೂಡ ಬೆಳೆಸಿದೆವು. ನಾವು ಬೆಳೆಸಿದ ಎಲ್ಲಾ ಹೂವುಗಳ ನೆನಪು ನನಗೀಗ ಇಲ್ಲ; ದಾಸವಾಳ, ಜರ್ಬರ, ಸೂರ್ಯಕಾಂತಿ, ಗುಲಾಬಿ, ಏಸ್ಟರ್, ಬಾಲ್ಸಮ್, ಮಲ್ಲಿಗೆ, ಕನಕಾಂಬರ, ಚೆಂಡು ಮಲ್ಲಿಗೆ, ಸೇವಂತಿಗೆ, ಶಂಖಪುಷ್ಪ, ಲಂಬನ, ಡೇಲಿಯ, ಹೋಲಿಹಾಕ್ಸ್ ಇದ್ದುವು.

ನಿರ್ಮಲ ಒಮ್ಮೆ ಊರಿನಿಂದ ಸುರುಳಿ ಹೂವಿನ (ವಾಟರ್ ಲಿಲಿ) ಗಡ್ಡೆಯನ್ನು ತಂದು ತಂಪಿನ ಜಾಗದಲ್ಲಿ ನಟ್ಟಿದ್ದಳು. ಅದು ಕೂಡ ಚಿಗುರಿ ಬೆಳೆದು ಸ್ವಲ್ಪ ಕಾಲ ಹೂ ಬಿಟ್ಟಿತು. ಅತ್ಯಂತ ಮಾರ್ದವದ, ಅಚ್ಚ ಬಿಳಿ ಎಸಳುಗಳ, ಸೌಮ್ಯ ಪರಿಮಳದ ಹೂವು ಇದು. ಹೈದರಾಬಾದಿನ ಸೆಕೆಗೆ ಉಳಿಸಿಕೊಳ್ಳುವುದು ಕಷ್ಟ. ನಮ್ಮ ಹೂಗಿಡಗಳ ಸಮೂಹದಲ್ಲಿ ರಜನೀಗಂಧ ಕೂಡ ಇತ್ತು. ಪಾರಿಜಾತದ ಗಿಡ ಬೆಳೆಸಬೇಕೆಂದಿತ್ತು, ಆದರೆ ಸಾಧ್ಯವಾಗಲಿಲ್ಲ.

ಹಾಗೇನೇ ಬಂದ ಮೊದಲಲ್ಲಿ ಒಂದೆರಡು ವರ್ಷ ತರಕಾರಿಗಳನ್ನೂ ಬೆಳೆಸಿದೆವು. ಇದಕ್ಕೆಲ್ಲ ಹಾರೆ, ಪಿಕಾಸು, ಕತ್ತಿ, ಕತ್ತರಿ, ಗಡಪಾರೆ, ಬುಟ್ಟಿ ಇತ್ಯಾದಿ ಸಲಕರಣೆಗಳು ಅಗತ್ಯ; ಬಿತ್ತುಗಳು, ಸಾರಗಳು ಎಲ್ಲಿ ಸಿಗುತ್ತವೆ ಎಂದು ಗೊತ್ತಿರಬೇಕು. ಆಗಿನ ಕಾಲದಲ್ಲಿ ಹೈದರಾಬಾದು ಇಷ್ಟೊಂದು ನಿಬಿಡವಾಗಿ ಇರಲಿಲ್ಲ. ಸಾಕಷ್ಟು ದೂರ ನಾನು ನಡೆದೇ ಹೋಗುತ್ತಿದ್ದೆ. ಸೈಕಲ್ ರಿಕ್ಷ, ಆಟೋರಿಕ್ಷಗಳ ಅನುಕೂಲತೆಯೂ ಇತ್ತು. ಹೂ ಮತ್ತು ತರಕಾರಿ ಬೀಜಗಳನ್ನು ಮಾರುವ ಒಂದು ಇಡೀ ರಸ್ತೆಯನ್ನು ಕಂಡುಹಿಡಿದೆ. ಇಲ್ಲಿನ ವ್ಯಾಪಾರಿಗಳು ತೋಟಗಾರಿಕೆಗೆ ಸಂಬಂಧಿಸಿದ ವಸ್ತುಗಳ ಸ್ಪೆಶಲಿಸ್ಟರಾಗಿದ್ದರು. ಸರಿ, ಇನ್ನು ನನ್ನನ್ನು ತಡೆಯುವವರು ಯಾರು? ನನಗೆ ಬೇಕಾದ್ದನ್ನೆಲ್ಲ ಅಲ್ಲಿಂದ ಕೊಂಡುಕೊಳ್ಳುತ್ತಿದ್ದೆ. ಗಡ್ಡೆಗಳಿಗೆ ಮತ್ತು ಬಳ್ಳಿಗಳಿಗೆ ಮಾತ್ರ ಸಾಮಾಜಿಕರನ್ನು ಹುಡುಕಿಕೊಂಡು ಹೋಗಬೇಕಾಗಿತ್ತು. ಆ ಮೂಲಕವೂ ನಾವು ನಮಗೆ ಬೇಕಾದುದನ್ನು ಪಡೆದುಕೊಂಡೆವು.

ಹಾಗೆಂದು ನಾವೇನೂ ಮಹತ್ವಾಕಾಂಕ್ಷಿಗಳಾಗಿರಲಿಲ್ಲ. ಬೇರೆ ಕೆಲಸಗಳಿದ್ದುವಲ್ಲ. ನಮ್ಮ ತೋಟಗಾರಿಕೆ ಪ್ರಯೋಜನಕ್ಕಿಂತಲೂ ಹೆಚ್ಚು ಪ್ರಾಯೋಗಿಕವಾಗಿತ್ತು. ಅಲ್ಲದೆ ಜಾಗ ಮತ್ತು ನೀರಿನ ಪರಿಮಿತಿಯೊಳಗೆ ನಾವು ವರ್ತಿಸಬೇಕಾಗಿತ್ತು. ಆದರೂ ಬೆಂಡೆ, ಬದನೆ, ಬಸಳೆ, ಹರಿವೆ, ಚೀನಿಕಾಯಿ, ಕೋಡಮರೆ ಮುಂತಾದ ಹಲವಾರು ತರಕಾರಿಗಳನ್ನು ನಾವು ಸಣ್ಣ ಪ್ರಮಾಣದಲ್ಲಿ ಬೆಳೆದೆವು. ಈ ಮಣ್ಣಿನಲ್ಲಿ ಬೆಂಡೆ, ಬದನೆ ಮುಂತಾದುವು ಗಾತ್ರದಲ್ಲಿ ಚಿಕ್ಕದಾಗಿ ಬೆಳೆಯುತ್ತಿದ್ದುದನ್ನು ಪ್ರತ್ಯಕ್ಷ ಕಂಡುಕೊಂಡೆವು; ಇದು ತಳಿ ವ್ಯತ್ಯಾಸದಿಂದಲ್ಲ, ಮಣ್ಣಿನ ಸ್ವಭಾವದಿಂದ ಎನಿಸುತ್ತದೆ. ಬಸಳೆ ಮತ್ತು ಹರಿವೆ ಕೂಡ ನಮ್ಮ ಊರಿನಷ್ಟು ಹುಲುಸಾಗಿ ಬೆಳೆಯುವುದಿಲ್ಲ. ಹುಟ್ಟೂರಿನ ಪಕ್ಷಪಾತದಿಂದ ನಾನೀ ಮಾತನ್ನು ಹೇಳುತ್ತಿಲ್ಲ! ನಿಜವಾಗಿ ಬೆಂಡೆಕಾಯಿಯನ್ನು ನೀವು ಕುಂಬಳೆಯ ಕಡೆಯಲ್ಲಿ ನೋಡಬೇಕು; ಸೀಮೆ ಬೆಂಡೆಕಾಯಿ ಇದರ ಅಣಕ.

ಅದೇ ರೀತಿ, ನಮ್ಮೂರ ಹಾಗಲಕಾಯಿಗಿಂತ ಎಷ್ಟೋ ಕಿರಿದಾದ, ಚೋಟುದ್ದದ ಮಾದರಿಯನ್ನು ನಾನು ಕಂಡುದು ಹೈದರಾಬಾದಿನಲ್ಲಿ. ಆದರೆ ಈ ಪುಟ್ಟ ಹಾಗಲಕ್ಕೆ ಒಂದು ವಿಶಿಷ್ಟವಾದ ಉಪಯೋಗವಿದೆ. ಇದನ್ನು ಉದ್ದಕೆ ಸೀಳಿ, ಒಳಗಿನ ಬಿತ್ತು ಇತ್ಯಾದಿಯನ್ನು ತೆಗೆದುಹಾಕಿ, ಆ ಜಾಗದಲ್ಲಿ ಮಸಾಲೆ ತುಂಬಿ ಮುಚ್ಚಿ ಲಘು ಎಣ್ಣೆಯಲ್ಲಿ ಹುರಿದು ತೆಗೆದರೆ ಊಟದಲ್ಲಿ ತಿನ್ನಲು ರುಚಿ.

ಚಿಕ್ಕಂದಿನಲ್ಲಿ ಹಳ್ಳಿಗಳಲ್ಲಿ ನಾನು ಕಂಡಿರದ ಕೇಳಿರದ ಟೊಮ್ಯಾಟೋವನ್ನು ಇಲ್ಲಿ ಬೆಳೆಸಿದೆವು. ಇದು ಬಹುಶಃ ತರಕಾರಿಗಳಲ್ಲೆಲ್ಲಾ ಅತ್ಯಂತ ಸುಲಭವಾಗಿ ಬೆಳೆಸಬಹುದಾದ ಕೃಷಿ. ಬಿತ್ತಿಗೆ ಎಲ್ಲಿಗೂ ಅಲೆಯಬೇಕಾಗಿಲ್ಲ, ಹಣ್ಣು ಟೊಮ್ಯಾಟೋದ ತುಂಬ ಬಿತ್ತುಗಳೇ. ಇಡೀ ಹಣ್ಣನ್ನೇ ಮಣ್ಣಿನಲ್ಲಿ ಹುಗಿದು ಹಾಕಿದರಾಯಿತು. ಕುಂಡಗಲ್ಲಿ ಕೂಡ ಟೊಮ್ಯಾಟೋವನ್ನು ಬೆಳೆಸಬಹುದು. ಬೇಗನೆ ಫಲ ಕೊಡುತ್ತದೆ. ಒಂದೇ ಸಮಸ್ಯೆಯೆಂದರೆ ಕೀಟಗಳ ಉಪದ್ರವ. ಬೆಳೆಸಲು ಸುಲಭವಾದ ಇನ್ನೊಂದು ಸಸ್ಯ ಹಸಿಮೆಣಸು – ಅದರದೂ ಒಂದು ಗಿಡ ಇತ್ತು.

ಹೈದರಾಬಾದಿನಲ್ಲಿ ಹೊಸತಾಗಿ ಬೆಳೆಸಿದ ಇನ್ನೊಂದು ತರಕಾರಿ ಚಪ್ಪರ ಅಮರೆ. ಊರಲ್ಲಿ ನನ್ನ ಚಿಕ್ಕಂದಿನಲ್ಲಿ ನಮಗಿದು ಪರಿಚಿತವಲ್ಲ. ಬಿತ್ತಿನಿಂದ ಮೊಳಕೆಯೊಡೆದು, ಬಳ್ಳಿಯಾಗಿ ಚಪ್ಪರದಲ್ಲಿ ಹರಡಿ, ಚತುಷ್ಕೋನ ಧಾರೆಯ ಗೊಂಚಲು ಗೊಂಚಲಾಗಿ ಇಳಿಯುವ ಬೆರಳುದ್ದದ ಮಿದುವಾದ ವಿಚಿತ್ರ ಹಸಿರು ತರಕಾರಿ ಇದು. ಎಳತಿನಲ್ಲೆ ಕೊಯ್ದು ಪಲ್ಯ ಮಾಡುವಂಥದು. ಇದು ಬಹಳ ಹುಲುಸಾಗಿ ಬೆಳೆಯಿತು. ಹೈದರಾಬಾದಿನಲ್ಲಿ ಜನಪ್ರಿಯವಾಗಿದ್ದು, ನಮಗೂ ಇಷ್ಟವಾಗಿದ್ದು, ನಾವು ಬೆಳೆಸದೆ ಹೋದ ಇನ್ನೊಂದು ತರಕಾರಿ ಚಿಕ್ಕುಡು ಕಾಯಿ (‘ಡಬ್ಲ್ ಬೀನ್ಸ್’) – ಇದೂ ಅಮರೆ ಜಾತಿಯದೇ. ಬೆಳೆಸಿದ ತರಕಾರಿಗಳಿಂತ ಬೆಳೆಸದದಿರುವುದೇ ಹೆಚ್ಚು!

ನಂತರ ನಾವು ಮನೆ ಬದಲಿಸಬೇಕಾಗಿ ಬಂತು. ಅಪಾರ್ಟ್ಮೆಂಟ್ ಒಂದರ ಮಹಡಿಗೆ ಬಂದೆವು. ಮಣ್ಣಿನ ಸಂಪರ್ಕ ಕಡಿಯಿತು. ನಂತರ ವಾರದ ಸಂತೆಗೆ ಹೋಗಿ ಅಲ್ಲಿ ಇದ್ದುದನ್ನು ಆರಿಸಿ ಖರೀದಿಸುತ್ತೇವೆ. ಈಗಲೂ ನನಗೆ ಮತ್ತು ನಿರ್ಮಲಳಿಗೆ ತರಕಾರಿ ಸಂತೆ ಸುತ್ತುವುದು ಒಂದು ಆಹ್ಲಾದಕರ ಅನುಭವವೇ.