‘ನಾವು ಯಾವಾಗಲೂ ಹಾಗೆಯೇ ಅಲ್ಲವಾ? ನಮಗೆ ಗೊತ್ತಿರುವ ಯಾವುದೋ ಎಳೆ, ಬೇರೆಯವರ ಮಾತುಗಳಲ್ಲಿ ಬಂದಾಗ ಮಾತ್ರ ಅವರ ಮೇಲಿನ ವಿಶ್ವಾಸಾರ್ಹತೆ ಮತ್ತು ನಂಬಿಕೆ ಹೆಚ್ಚುತ್ತದೆ. ಅಲ್ಲೂ ಹೀಗೆ ಆಯಿತು’ ಎನ್ನುತ್ತ ಪೀಜಿ ಹಾಸ್ಟೆಲ್ ರೂಮ್ ನಲ್ಲಿ ನಡೆದ ಭೇಟಿಯೊಂದರ ಕುರಿತು ಬರೆದಿದ್ದಾರೆ ಹೊಸ ತಲೆಮಾರಿನ ಕಥೆಗಾರ ದಾದಾಪೀರ್ ಜೈಮನ್. ತಮ್ಮ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಯ ಸಂದರ್ಭದಲ್ಲಿ ಹೀಗೆ ಭೇಟಿಯಾದ ವ್ಯಕ್ತಿಗಳ ಕುರಿತು, ಸನ್ನಿವೇಶಗಳ ಕುರಿತು ಅವರು ತಮ್ಮ ಹೊಸ ಅಂಕಣ’ಜಂಕ್ಷನ್ ಪಾಯಿಂಟ್’ ನಲ್ಲಿ ಹದಿನೈದು ದಿನಗಳಿಗೊಮ್ಮೆ ಬರೆಯಲಿದ್ದಾರೆ.  ಕಾವ್ಯ ಜುಗಲ್ ಬಂದಿಗೆ ಸಾಥ್ ನೀಡಿದ ಸ್ನೇಹಿತರ ಪ್ರಥಮ ಭೇಟಿಯ ಕುರಿತ ಬರಹ ಇಲ್ಲಿದೆ. 

 

ರೂಮಿನ ಬಾಗಿಲು ಬಡಿದ ಸದ್ದಾಯಿತು. ನಿದ್ದೆಗಣ್ಣಿನಲ್ಲಿಯೇ ಫೋನಿನ ಪರದೆಯನ್ನು ತೆರೆದರೆ ಸಮಯ ಬೆಳಗಿನ ಹತ್ತೂವರೆಯೆಂದು ತೋರಿಸಿತು. ರೂಮ್ ಕ್ಲೀನಿಂಗ್ ಆಯಾ ಬಂದಿರಬಹುದೆಂದು ಊಹಿಸಿ ‘ರೂಮ್ ಕ್ಲೀನಿದೆ ಆಂಟಿ. ನಾಳೆ ಬನ್ನಿ’ ಎಂದು ಕೂಗಿ ಮತ್ತೆ ಬ್ಲಾಂಕೆಟ್ ಹೊದ್ದು ಮಲಗಿದೆ. ಒಂದು ನಿಮಿಷದ ಅಂತರದಲ್ಲಿ ಬಾಗಿಲು ಧಡ್ ಧಡ್ ಎಂದು ಬಡಿದ ಸದ್ದು. ಭಾನುವಾರದ ಮುಂಜಾನೆಯ ಸವಿನಿದ್ರೆಯನ್ನು ಭಂಗಗೊಳಿಸಿದ ಆ ಬಾಗಿಲಾಚೆ ಇರುವವನನ್ನು ಬೈದುಕೊಳ್ಳುತ್ತಾ ಹೋಗಿ ಬಾಗಿಲು ತೆರೆದೆ. ತೆರೆಯುತ್ತಲೇ ಅತ್ತರಿನ ಗಾಢ ವಾಸನೆ ಮೂಗಿಗೆ ರಪ್ಪೆಂದು ಬಡಿಯಿತು. ಆ ಗಾಢತೆಗೆ ನಿದ್ರೆಯೆ ಹಾರಿಹೋಗಿತ್ತು. ಕಣ್ಣುಗಳು ಎದುರು ನಿಂತಿದ್ದ ಆಕೃತಿಯನ್ನು ನೋಡುತ್ತಲೇ ಬೆಚ್ಚಿಬಿದ್ದಿದ್ದವು. ಮದರಸಾಗಳಲ್ಲಿರುತ್ತಿದ್ದ ಮೌಲಾನಗಳ ಗಡ್ಡದಂತಹ ಉದ್ದ ಗಡ್ಡ ಇತ್ತು. ಪ್ಯಾಂಟು ಹಳೆಯಕಾಲದ ಬೆಲ್ ಬಾಟಮ್ ಹೋಲುತ್ತಿತ್ತು. ಹೊಟ್ಟೆಯ ಮೇಲೆ ಬೆಲ್ಟು ಸರಿಯಾಗಿ ಬಿಗಿದಿತ್ತು. ಬಾದಾಮಿ ಬಣ್ಣದ ತುಂಬು ತೋಳಿನ ಅಂಗಿಯನ್ನು ಮೊಣಕೈಯವರೆಗೂ ಮಡಚಿದ್ದರು. ಎಡಗೈಯಲ್ಲಿ ಒಂದು ಬಂಗಾರದ ವಾಚು ಮತ್ತು ಬಲಗೈಯಲ್ಲಿ ಒಂದು ಬಂಗಾರದ ಉಂಗುರವಿತ್ತು. ಕೂದಲು ಕೆಂಪು ಕೆಂಪಾಗಿತ್ತು. ಬಹುಶಃ ಅವರು ಹಿತ್ತಲ ಗಿಡದ ಮೆಹಂದಿ ಹಚ್ಚಿರಬೇಕು ಎಂದು ಊಹಿಸಿದೆ. ಇವಿಷ್ಟು ಮೊದಲ ನೋಟಕ್ಕೆ ಕಂಡ ವಿವರಗಳು. ನನ್ನ ನೋಡಿದ ಕೂಡಲೇ ಅವರು ಹಸ್ತಲಾಘವ ಮಾಡಲು ಕೈಮುಂದೆ ಚಾಚಿ ‘ಅಸ್ಸಲಾಮ್ ಅಲೈಕುಂ. ಮೇರಾ ನಾಮ್ ಇಮ್ರಾನ್’ ಎಂದು ತಡವರಿಸುತ್ತಾ ಪರಿಚಯಿಸಿಕೊಂಡರು. ನಾನು ಒಂದು ಭಯಮಿಶ್ರಿತ ಮುಗುಳ್ನಗೆಯನ್ನು ನನ್ನ ಮೇಲೆ ಆರೋಪಿಸಿಕೊಂಡು ನನ್ನನ್ನು ಪರಿಚಯಿಸಿಕೊಂಡೆ. ಕೂಡಲೇ ನನ್ನ ದೃಷ್ಟಿ ಅವರ ಲಗೇಜಿನ ಕಡೆಗೆ ಹರಿಯಿತು. ಕೆಳಗೆ ನೋಡಿದರೆ ಎರಡು ಬ್ಯಾಗು, ವಾಲ್ ಟೀವಿಯನ್ನು ಹೋಲುವ ಒಂದು ಕಂಪ್ಯೂಟರ್ ಮತ್ತು ಅದಕ್ಕೆ ಬೇಕಾಗುವ ಒಂದು ಕೀಬೋರ್ಡ್ ಕೂಡ ತಂದಿದ್ದರು. ಮೊದಲ ನೋಟದಲ್ಲಿಯೇ ಮನುಷ್ಯ ಸ್ವಲ್ಪ ವಿಚಿತ್ರ ಎಂದು ಯಾರಿಗಾದರೂ ಅನಿಸುವ ಹಾಗೆ ಇದ್ದರು. ನಾನು ಚೂರು ಹೆಚ್ಚೇ ಗಮನಿಸುತ್ತಿದ್ದೇನೆ ಮತ್ತು ನಾನು ಹಾಗೆ ಕೆಕ್ಕರಿಸುವುದನ್ನು ಅವರು ಗಮನಿಸುತ್ತಿದ್ದಾರೆ ಎನಿಸಿ ಅವರಿಗೆ ಒಳಗೆ ಬರಲು ಜಾಗಮಾಡಿಕೊಟ್ಟು ಹವಾಯಿ ಚಪ್ಪಲಿ ಮೆಟ್ಟಿಕೊಂಡು ಮೆಟ್ಟಿಲಿಳಿದು ಸೀದಾ ಕೆಳಗಿನ ಮಹಡಿಯಲ್ಲಿರುತ್ತಿದ್ದ ಪೀಜಿ ಮ್ಯಾನೇಜರ್ ಸತೀಶನ ಬಳಿ ಧುಮು ಧುಮು ಹೆಜ್ಜೆ ಹಾಕುತ್ತಾ ಕೋಪದಿಂದಲೇ ಹೊರಟೆ.

‘ಸತೀಶಣ್ಣ, ಯಾರದು? ಭಯಾನಕವಾಗಿದ್ದಾನೆ. ಅವನನ್ನ ತಂದು ಯಾಕೆ ನನ್ನ ರೂಮಲ್ಲಿ ಹಾಕಿಟ್ಟಿದ್ಯ? ಹೋಗ್ಲಿ, ಐಡಿ ಪ್ರೂಫ್ ಏನಾದ್ರೂ ಇಸ್ಕಂಡ್ಯ ಇಲ್ವಾ? ಅಥವಾ ಸ್ವಲ್ಪ ಜಾಸ್ತಿ ದುಡ್ಡು ಪೀಕಿ ಹಂಗೆ ಒಳಗ್ ಸೇರಿಸ್ಕಂಡ್ಯ?’ ಎಂದು ಒಂದೇ ಉಸಿರಿನಲ್ಲಿ ಕೇಳಿದೆ.

ಅದಕ್ಕವನು ‘ಹಿಹಿಹಿ’ ಎಂದು ಹಲ್ಲುಕಿರಿಯುತ್ತಾ ‘ಅವರು ನಿಮ್ಮದೇ ಮುಸಲ್ಮಾನ್ ಜನ. ನಿಮಗೆ ಸರಿ ಹೊಂದಿಕೆಯಾಗ್ತಾರೆ ಅಂತ ನಿಮ್ಮ ರೂಮಿಗೆ ಕಳಿಸಿದೆ. ಯುಪಿ ಕಡೆಯವರು. ಕೆಲಸ ಹುಡುಕ್ಕೊಂಡು ಬಂದಿದಾರೆ. ಸಿಕ್ಕ ಮೇಲೆ ಕಂಪನಿಗೆ ಹತ್ರ ಆಗೋಕಡೆ ಹೋಗ್ತಾರಂತೆ.’ ಎನ್ನುವ ಸಮಜಾಯಿಷಿ ಕೊಟ್ಟ. ನನಗೆ ಅವನ ಉತ್ತರ ಸಮಾಧಾನ ತಂದಿರಲಿಲ್ಲ.

‘ಏನೋಪಾ, ಈ ತರಹ ಅನುಮಾನ ಬರೊ ತರ ಜನ ಅನಿಸಿದರೆ ನೀನು ಕನಿಷ್ಠ ಐಡಿ ಪ್ರೂಫ್ ಆದ್ರೂ ಇಸ್ಕೊಬೇಕು ಸತೀಶಣ್ಣ. ನಿಂಗೆ ದುಡ್ಡು ಕೊಟ್ರೆ ಸಾಕು…’ ಎಂದು ಗೊಣಗಿಕೊಳ್ಳುತ್ತಲೇ ಮೆಟ್ಟಿಲೇರತೊಡಗಿದೆ.

ಅದು ಹೇಗೆ ನಾನು ಅವರು ಉಡುವ ಬಟ್ಟೆಯ ಆಯ್ಕೆಯಿಂದ ಅವನು ಅನುಮಾಸ್ಪದ ಎಂಬ ನಿರ್ಧಾರಕ್ಕೆ ಬಂದೆ? ಹಾಗೆ ನನ್ನನ್ನು ಯೋಚನೆ ಮಾಡುವಂತೆ ಮಾಡಿದ್ದು ಯಾವುದು? ನಾನೂ ಮುಸಲ್ಮಾನನಾದರೂ ಚೂರು ಆಧುನಿಕತೆ ರೂಢಿಸಿಕೊಂಡು ನನ್ನದೇ ಸಮುದಾಯದ ಮೇಲೆ ಆ ಪೂರ್ವಗ್ರಹ ಇಟ್ಟುಕೊಂಡಿದ್ದೆನೆ ಎಂಬುದನ್ನು ಈಗ ನೆನೆಸಿಕೊಂಡರೆ ನಾಚಿಕೆಯೆನಿಸುತ್ತದೆ.

ಎಡಗೈಯಲ್ಲಿ ಒಂದು ಬಂಗಾರದ ವಾಚು ಮತ್ತು ಬಲಗೈಯಲ್ಲಿ ಒಂದು ಬಂಗಾರದ ಉಂಗುರವಿತ್ತು. ಕೂದಲು ಕೆಂಪು ಕೆಂಪಾಗಿತ್ತು. ಬಹುಶಃ ಅವರು ಹಿತ್ತಲ ಗಿಡದ ಮೆಹಂದಿ ಹಚ್ಚಿರಬೇಕು ಎಂದು ಊಹಿಸಿದೆ. ಇವಿಷ್ಟು ಮೊದಲ ನೋಟಕ್ಕೆ ಕಂಡ ವಿವರಗಳು. ನನ್ನ ನೋಡಿದ ಕೂಡಲೇ ಅವರು ಹಸ್ತಲಾಘವ ಮಾಡಲು ಕೈಮುಂದೆ ಚಾಚಿ ‘ಅಸ್ಸಲಾಮ್ ಅಲೈಕುಂ. ಮೇರಾ ನಾಮ್ ಇಮ್ರಾನ್’ ಎಂದು ತಡವರಿಸುತ್ತಾ ಪರಿಚಯಿಸಿಕೊಂಡರು.

ಮುಂದಿನ ಕೆಲವು ದಿನಗಳಲ್ಲಿ ಅವರ ಮೇಲಿದ್ದ ನನ್ನ ಧೋರಣೆ ಬದಲಾಯಿತು. ಆದರೆ ಮೊದಲಿನ ಒಂದು ವಾರ ಅವರ ಬಳಿ ಎಷ್ಟು ಬೇಕೋ ಅಷ್ಟೇ ಮಾತು ಎನ್ನುವ ಹಾಗಿದ್ದೆ. ಸತೀಶಣ್ಣ ಹೇಳಿದ ಹಾಗೆ ಅವರು ಕೆಲಸ ಹುಡುಕಿಕೊಂಡು ಬಂದಿದ್ದರು. ಈ ಮಹಾನಗರವೇ ಅಂತಹುದು. ‘ಇಲ್ಲೇನೋ ಒಂದಾಗುತ್ತದೆ’ ಎಂದುಕೊಂಡು ಜನ ತಮ್ಮ ಬಟ್ಟೆ ಪ್ಯಾಕ್ ಮಾಡಿಕೊಂಡು ಶಹರದ ಮಡಿಲಿಗೆ ಬಂದು ಸೇರುತ್ತಾರೆ. ಇಲ್ಲಿ ಬಂದು ಕೆಲಸ ಹುಡುಕತೊಡಗುತ್ತಾರೆ. ಅವರ ವಯಸ್ಸು ಸುಮಾರು ೪೦ ರ ಆಸುಪಾಸಿನಲ್ಲಿದ್ದಿರಬೇಕು. ನಂತರದ ದಿನಗಳಲ್ಲಿ ನನಗೆ ಗೊತ್ತಾದ ಸತ್ಯವೆಂದರೆ ಇಲ್ಲಿಗೆ ಬಂದಾಗ ಅವರಿಗೆ ಮದುವೆಯಾಗಿ ಕೇವಲ ನಾಲ್ಕು ತಿಂಗಳು ಮಾತ್ರ ಆಗಿತ್ತು. ಅವರು ತಮ್ಮ ಊರಿನಲ್ಲಿ ಅಕ್ಕಪಕ್ಕದ ಮಕ್ಕಳಿಗೆ ಸಂಜೆ ಹೊತ್ತು ಮನೆಪಾಠ ಮಾಡುತ್ತಿದ್ದರು. ಅವರಿಗೆ ಒಬ್ಬ ಗಂಡ ಬಿಟ್ಟು ಹೋದ ತಾಯಿಯಿದ್ದರು.

‘ಊರಿನಲ್ಲಿಯೇ ಯಾವ ಕೆಲಸವೂ ಸಿಗಲೇ ಇಲ್ಲವೇ’ ಎಂದು ನಾನು ಹಲವು ಬಾರಿ ಯೋಚಿಸಿದ್ದಿದೆ. ಕೆಲಸ ಸಿಗದ್ದಕ್ಕೆ ಮುಖ್ಯ ಕಾರಣ; ಅವರ ಉಗ್ಗು. ಅವರು ಅಪರಿಚಿತ ವ್ಯಕ್ತಿಗಳ ಮುಂದೆ ಮಾತನಾಡುವಾಗ ಬಿಕ್ಕಳಿಸುತ್ತಿದ್ದರು. ಪ್ರತಿಬಾರಿ ಮಾತನಾಡುವಾಗಲೂ ಅವರ ಮುಂದೆ ಆ ಉಗ್ಗು ಬೆಟ್ಟದ ಹಾಗೆ ಬೆಳೆದುನಿಂತುಬಿಡುತ್ತಿತ್ತು. ಅದನ್ನು ದಾಟಲು ಅವರು ಹರಸಾಹಸ ಪಡಬೇಕಾಗುತ್ತಿತ್ತು. ನನ್ನೆದುರು ಮೊದಲ ಬಾರಿ ಪರಿಚಯಿಸಿಕೊಳ್ಳುವಾಗ ಅವರು ತಡವರಿಸಿದ್ದು ಕೂಡ ಅದೇ ಕಾರಣಕ್ಕಾಗಿತ್ತು. ಮನುಷ್ಯ ಮನುಷ್ಯರ ನಡುವಿನ ಸಹಜ ಸಂವಹನವೇ ಅಸಾಧ್ಯವಾಗಿ ಅವರು ತುಂಬಾ ಕಷ್ಟ ಪಡುತ್ತಿದ್ದರು. ಬಹುಶಃ ಅದೇ ಅವರನ್ನು ಕವಿಯಾಗಿಸಿರಲಿಕ್ಕೂ ಸಾಕು. ಅವರೇ ಸ್ವಯಂ ಪ್ರೇರಣೆಯಿಂದ ನನ್ನ ಸ್ನೇಹವನ್ನು ಗಳಿಸಲು ಮಾಡಿದ ಪ್ರಾಮಾಣಿಕ ಪ್ರಯತ್ನಕ್ಕೆ ಅದೂ ಕಾರಣವಿದ್ದಿರಬಹುದು. ನನ್ನ ಬೆಡ್ಡಿನ ಮೇಲೆ ಬಿದ್ದಿರುತ್ತಿದ್ದ ಕನ್ನಡ ಪುಸ್ತಕಗಳನ್ನು ನೋಡಿ, ಆಗಾಗ ನಾನು ಸ್ನೇಹಿತರೊಡನೆ ಫೋನಿನಲ್ಲಿ ಮಾತನಾಡುವಾಗ ಓದುವ ಕವಿತೆಗಳನ್ನು ಕೇಳಿಸಿಕೊಂಡ ಮೇಲೆ ತಾವೂ ಉರ್ದುವಿನಲ್ಲಿ ಶಾಯರಿಗಳನ್ನು ಬರೆಯುವುದಾಗಿಯೂ ಹೇಳಿಕೊಂಡರು. ಅದೇ ಕಾರಣಕ್ಕೆ ನನಗೆ ಅವರ ಮೇಲಿದ್ದ ಅಸಡ್ಡೆಯೆಲ್ಲಾ ಮಂಜಿನ ಬೆಟ್ಟದಂತೆ ಕರಗಿ ಹೋಯಿತು. ಅವರು ಹೆಸರಿಸಿದ ಒಂದೂ ಉರ್ದು ಕವಿಗಳ ಹೆಸರು ನನಗೆ ಗೊತ್ತಿರಲಿಲ್ಲ. ಕೊನೆಗೆ ಫೈಜ್ ಅಹಮದ್ ಫೈಜ್ ಮತ್ತು ಗುಲ್ಜಾರ್ ಹೆಸರು ಹೇಳಿ ಅವರ ಕವಿತೆಗಳು ನಾಲಗೆ ತುದಿಯಲ್ಲಿ ಇವೆಯೇನೋ ಎಂಬಂತೆ ಹೇಳಿದರು. ಆಗ ನನಗೆ ಅವರು ನಿಜ ಹೇಳುತ್ತಿದ್ದಾರೆ ಎನಿಸಿತು. ನಾವು ಯಾವಾಗಲೂ ಹಾಗೆಯೇ ಅಲ್ಲವಾ? ನಮಗೆ ಗೊತ್ತಿರುವ ಯಾವುದೋ ಎಳೆ, ಬೇರೆಯವರ ಮಾತುಗಳಲ್ಲಿ ಬಂದಾಗ ಮಾತ್ರ ಅವರ ಮೇಲಿನ ವಿಶ್ವಾಸಾರ್ಹತೆ ಮತ್ತು ನಂಬಿಕೆ ಹೆಚ್ಚುತ್ತದೆ. ಅಲ್ಲೂ ಹೀಗೆ ಆಯಿತು.

ಅವರು;
‘ಔರ್ ಭೀ ದುಃಖ್ ಹೈ ಝಮಾನೇ ಮೇ ಮೊಹಬ್ಬತ್ ಕೆ ಸಿವಾ
ರಾಹತೇ ಔರ್ ಭೀ ಹೈ ವಸ್ಲ್ ಕಿ ರಾಹತ್ ಕೆ ಸಿವಾ’

ಎಂದು ಹೇಳಿದರೆ;

ನಾನು
‘ನಾನು ಬಡವಿ ಆತ ಬಡವ
ಒಲವೇ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು’

ಎಂದುಹೇಳುತ್ತಿದ್ದೆ.

ಪೀಜಿಯಲ್ಲಿ ಊಟವಾದ ನಂತರದ ಅದೆಷ್ಟೋ ರಾತ್ರಿಗಳು ಕವಿತೆಗಳ ಜುಗಲ್ಬಂದಿಯಿಂದ ಕಳೆದುಹೋಗುತ್ತಿದ್ದವು.

***
ಅವರು ಬಿಡುವಿದ್ದಾಗ ರಾಮ್ ಪುನಿಯಾನಿಯ ಭಾಷಣಗಳನ್ನು ಯೂ ಟ್ಯೂಬಿನಲ್ಲಿ ಕೇಳುತ್ತಿದ್ದರು. ನನಗೂ ಕೇಳಲು ಒತ್ತಾಯಿಸುತ್ತಿದ್ದರು. ಅವರಿಗೆ ಕನ್ನಡ ಬರುತ್ತಿರಲಿಲ್ಲವಾದರೂ ನನ್ನ ಬಳಿ ಇದ್ದ ಪುಸ್ತಕವನ್ನು ಬಹಳ ಆಸೆಗಣ್ಣಿನಿಂದ ಅದರ ಮುಖಪುಟವನ್ನು ನೋಡಿ ಅದರ ನಡುವಿನ ಪುಟಗಳನ್ನೂ ಮೂಸಿ, ಅಲ್ಲೆಲ್ಲೋ ತುದಿ ಮಡಚಿದ ಪುಟಗಳನ್ನು ಮೃದುವಾಗಿ ತೆರೆದು ಮತ್ತೆ ಹಾಗೆಯೇ ಮೊದಲಿದ್ದಂತೆ ಮಡಚಿ ಎದೆಗೊತ್ತಿಕೊಂಡು ಮರಳಿ ಅಲ್ಲಿಯೇ ಇಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಅವರನ್ನು ಬಿಟ್ಟುಹೋದದ್ದಕ್ಕೆ ಅವರ ತಂದೆಯ ಮೇಲೆ ಕೋಪವಿತ್ತು. ತಾಯಿಯ ಬಗ್ಗೆ ಅತೀವ ಪ್ರೀತಿ. ಮದುವೆಯಾದ ಹೆಂಡತಿಯ ಬಗ್ಗೆ ದೈವಿಕ ಪ್ರೇಮ. ಕಾವ್ಯದ ಮೋಹ. ಎಲ್ಲವೂ ಅವರ ಮೇಲಿನ ಗೌರವವನ್ನು ಹೆಚ್ಚಿಸಿದ್ದವು.
ಅವರು ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರು. ಇಂಡೀಡ್ ಜಾಬ್ ಸರ್ಚ್, ಜಾಬ್ ಹಂಟ್ ಪೋರ್ಟಲ್ಲುಗಳಲ್ಲಿ ನೋಂದಾಯಿಸಿಕೊಂಡಿದ್ದರು. ಅವರ ಉಗ್ಗಿನ ಸಮಸ್ಯೆಯಿಂದಾಗಿ ಅವರಿಗೆ ಸರಿಯಾಗಿ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಹತ್ತಾರು ಕಡೆ ತಮ್ಮ ಸೀವಿ ಕಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಒಮ್ಮೆ ಅದೃಷ್ಟವೆಂಬಂತೆ ಒಂದು ಕಂಪನಿ ಸಂದರ್ಶನಕ್ಕಾಗಿ ಒಪ್ಪಿಕೊಂಡಿತು ಮತ್ತು ಮಧ್ಯಾಹ್ನದ ಹನ್ನೆರಡೂವರೆಗೆ ಸಂದರ್ಶನವೆಂದೂ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಆಫೀಸಿಗೆ ಬರಬೇಕೆಂದು ಹೇಳಿದರು. ಅಲ್ಲಿಯೂ ಕೆಲಸ ಸಿಗಲಿಲ್ಲ. ಸಂದರ್ಶನದ ಮಧ್ಯದಲ್ಲಿ ಅವರು ನಮಾಜ್ ಮಾಡುವುದಕ್ಕೆ ಸಮಯ ಕೇಳಿಕೊಂಡು ಅಲ್ಲಿಯೇ ನಮಾಜ್ ಮಾಡಿ ಮತ್ತೆ ಸಂದರ್ಶನಕ್ಕೆ ಕೂತೆ ಅಂದರು. ಅವರು ಅಂದು ಹಾಕಿಕೊಂಡು ಹೋದ ಅಂಗಿಗೆ ಇಸ್ತ್ರಿಯ ಹೊಳಪಿರಲಿಲ್ಲ. ಅವರಿಗೆ ಗುಟ್ಕಾ ತಿನ್ನುವ ಅಭ್ಯಾಸ ಇತ್ತು. ಬೀಡಿ ಸೇದುತ್ತಿದ್ದರು. ನನಗೆ ಮೊದಲ ದಿನದ ಅವರ ಬಗೆಗಿನ ಅಭಿಪ್ರಾಯ ಮತ್ತೆ ಸುಳಿಯಿತು. ಅದಾದ ಒಂದು ಹತ್ತು ದಿನದವರೆಗೂ ಮತ್ತೆ ಯಾವುದೇ ಸಂದರ್ಶನದ ಕರೆಯೂ ಬರಲಿಲ್ಲ. ಮತ್ತೆ ಅವರ ಇತಿಹಾಸ, ಕಾವ್ಯ, ದೂರದಲ್ಲೆಲ್ಲೋ ಇರುವ ತಾಯಿ, ಹೆಂಡತಿ, ಅಲ್ಲಿಯ ನೆನಪು, ಅವರ ಹಳೆಯ ಡೈರಿಯಲ್ಲಿ ಬರೆದ ಶಾಯರಿ, ಆಗಾಗ ಕೋಣೆ ತುಂಬಾ ತುಂಬುತ್ತಿದ್ದ ಬೀಡಿಯ ಹೊಗೆ, ದಿನಕ್ಕೆ ಐದು ಹೊತ್ತು ನಮಾಜ್, ಮೊದಲ ಸಂದರ್ಶನದಲ್ಲಿ ಅವರನ್ನು ನೋಡಿದ ಕಣ್ಣುಗಳಲ್ಲಿ ಇದ್ದಿರಬಹುದಾದ ಅಸಡ್ಡೆ ಎಲ್ಲದರ ಗುಂಗಿನಲ್ಲಿ ಕಳೆದರು. ಅದಾದ ಮೇಲೆ ಅವರಿಗೆ ಮತ್ತೊಂದು ಕಂಪನಿಯಿಂದ ಕರೆ ಬಂದಿತು. ಅವರದು ಈ ಬಾರಿ ಆನ್ಲೈನ್ ಸಂದರ್ಶನ ಮಧ್ಯಾಹ್ನ ಎಂದು ಫಿಕ್ಸ್ ಮಾಡಲಾಯಿತು. ಆಗ ಅಲ್ಲಿಯೇ ಅವರು ‘ಅದು ನನ್ನ ನಮಾಜ್ ಟೈಮ್. ಸಂದರ್ಶನವನ್ನು ಮುಂದೂಡಲಾಗುವುದೇ?’ ಎಂದು ಕೇಳಿಯೇಬಿಟ್ಟರು. ಆ ಕಡೆಯವರಿಗೆ ಏನನಿಸಿತೋ ನಾನು ಮತ್ತೊಮ್ಮೆ ಚೆಕ್ ಮಾಡಿ ಹೇಳುತ್ತೇನೆ ಎಂದವರು ಮತ್ತೆ ಕರೆ ಮಾಡಲಿಲ್ಲ. ಮತ್ತೆ ಅವರಿಗೆ ಯಾವ ಸಂದರ್ಶನಗಳೂ ಬರಲಿಲ್ಲ. ಅವರು ಓದಿದ್ದು ಬಿ. ಎಸ್ಸಿ ಆದರೂ ನಂತರ ಒಂದಿಷ್ಟು ಸಾಫ್ಟ್ವೇರ್ ಕೋರ್ಸು ಮುಗಿಸಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರು. ‘ನಾನು ಶಹರಕ್ಕೆ ಹೋಗುತ್ತೇನೆ. ಕೈತುಂಬಾ ದುಡಿಯುತ್ತೇನೆ. ದಂಡಿ ದಂಡಿ ದುಡ್ಡು ಕಳಿಸುತ್ತೇನೆ.’ ಎಂಬ ಏನೆಲ್ಲಾ ಕನಸು ಹೊತ್ತು ಬಂದಿದ್ದರು. ಕೊನೆಗೆ ಅವ್ಯಾವುವೂ ಕೈಗೂಡಲೇ ಇಲ್ಲ. ಮತ್ತೆ ಬಂದ ದಾರಿಗೆ ಸುಂಕವಿಲ್ಲವೆಂದು ಊರಿಗೆ ಮರಳಿದರು.
ನನಗೀಗಲೂ ಅನಿಸುವುದು; ಅವರ ವಿಷಯದಲ್ಲಿ ಕೆಲಸ ಮತ್ತು ಧರ್ಮದ ಆಚರಣೆ ಅಂತ ಬಂದಾಗ ಕೆಲಸವೇ ಮುಖ್ಯ ಆದ್ಯತೆಯನ್ನಾಗಿ ಅವರು ಮಾಡಿಕೊಳ್ಳಬೇಕಿತ್ತು. ಅದ್ಯಾಕೆ ಅವರು ಧರ್ಮದ ಆಚರಣೆಗಾಗಿ ಕೆಲಸವನ್ನೇ ಎರಡನೇ ಆದ್ಯತೆಯನ್ನಾಗಿ ಮಾಡಿಕೊಂಡರೋ?! ಎಂದು ತೀವ್ರವಾಗಿ ಕಾಡುತ್ತದೆ. ಅದು ಹೇಗೆ ನಮ್ಮನ್ನು ಧರ್ಮ ನಿಯಂತ್ರಿಸುತ್ತದೆ. ಒಮ್ಮೊಮ್ಮೆ ನಮ್ಮ ಬದುಕನ್ನೇ ನಮ್ಮಿಂದ ಕಸಿದುಕೊಳ್ಳುವಷ್ಟು! ಅಥವಾ ಅವರಿಗೆ ಮನೆಯ ನೆನೆಪು ಕಾಡಿ ಅವರೇ ತಮಗೆ ಕೆಲಸ ಸಿಗದಂತೆ ನೋಡಿಕೊಳ್ಳುತ್ತಿದ್ದಿರಬಹುದು.
***
ಅವರು ದೂರ ಹೋದರು. ಅಷ್ಟೇ ಅಲ್ಲವೇ?! ದೂರ ನಮ್ಮನ್ನು ದೂರವೇ ಮಾಡಿಬಿಡುತ್ತದೆ. ಅದು ಹೇಗೆಂದರೆ ಇದ್ದಾರೆ ಆದರೆ ನಿತ್ಯ ಮಾತನಾಡುವಷ್ಟು ಹತ್ತಿರವಿಲ್ಲ. ಆದರೆ ನಮ್ಮ ನೆನಪುಗಳಲ್ಲಿ ಅವರು ಸದಾ ಇರುತ್ತಾರೆ ಎನ್ನುವ ಹಾಗೆ. ತೀರಾ ಇತ್ತೀಚಿಗೆ ಒಂದು ಆರು ತಿಂಗಳ ಕೆಳಗೆ ನನ್ನ ಒಂದು ಕವಿತೆ ಯಾವುದೋ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದನ್ನು ಫೇಸ್ಬುಕ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದೆ.ಅದಕ್ಕವರು ಪ್ರತಿಕ್ರಿಯಿಸುತ್ತಾ ‘ನಾವಿಬ್ಬರೂ ಊಟ ಆದ ಮೇಲೆ ಕವಿತೆಗಳನ್ನು ಹಂಚಿಕೊಳ್ಳುತ್ತಿದ್ದುದು ನೆನಪಿದೆಯೇ?’ ಎಂಬ ಪುಟ್ಟ ಸಂದೇಶವೊಂದನ್ನು ಕಳಿಸಿದ್ದರು. ಆಗ ನನಗೆ ‘ಇಮ್ರಾನ್, ಹೇಗಿದ್ದೀರಿ? ಏನು ಕೆಲಸ ಮಾಡುತ್ತಿದ್ದೀರಿ?’ ಎಂದು ಬರೆದು ಪ್ರತಿಕ್ರಿಯಿಸೋಣ ಎನ್ನುವ ಆಲೋಚನೆ ಬಂದು ಇನ್ನೇನು ಟೈಪಿಸಲು ಬೆರಳುಗಳು ಸಿದ್ಧವಾಗಬೇಕೆನ್ನುವಷ್ಟರಲ್ಲಿ ನಿಂತೆ. ಮತ್ತೆ ಅನಿಸಿತು. ನಾನು ಅವರ ಉದ್ಯೋಗವನ್ನು ಕೇಳಬಾರದು. ‘ಅವರು ಎಲ್ಲೋ ಇದ್ದಾರೆ. ಏನೋ ಮಾಡಿಕೊಂಡಿದ್ದಾರೆ. ಆರಾಮವಾಗಿದ್ದಾರೆ. ನಾನು ಉದ್ಯೋಗವನ್ನು ಕೇಳಿ ಅವರನ್ನು ಒಂದು ಇಂಚು ಹೆಚ್ಚು ಅಥವಾ ಒಂದು ಇಂಚು ಕಡಿಮೆಯನ್ನಾಗಿ ನೋಡಲು ಹೋಗಬಾರದು’ ಎನಿಸಿತು. ಹಾಗೆ ಯೋಚಿಸಿದರೆ ನಾವು ಪರಸ್ಪರ ಸಿಕ್ಕಿದಾಗ ಅದು ‘ಏನು ಮಾಡಿಕೊಂಡಿದ್ದೀರಿ?’ ಎಂದು ಕೇಳುವ ಪ್ರಶ್ನೆಯಲ್ಲಿಯೇ ಅವರನ್ನು ಅಳೆಯುವ ಹುನ್ನಾರವಿರುತ್ತದೆ ಎನಿಸುತ್ತದೆ. ಹಾಗಾಗಿ ಇಬ್ಬರೂ ಕವಿತೆಗಳನ್ನು ಬರೆಯುವವರು. ಕಲೆಯನ್ನು ಗೌರವಿಸುವವರು ಬೇರೆ.
ನಿಗೂಢರಾಗಿಬಿಡುವುದರಲ್ಲೇ ಒಂದು ಸಂತಸವಿದೆ. ಇಬ್ಬರ ಘನತೆಗಳನ್ನು ಪೊರೆಯುವ ಸದುದ್ದೇಶವಿದೆ ಎನಿಸಿತು. ಅವರು ಕಳಿಸಿದ ಸಂದೇಶಕ್ಕೆ ಕೊನೆಗೆ ನಾನು ‘ನೆನಪಿದೆ. ಹೊಸದಾಗಿ ಏನು ಬರೆದಿರಿ? ಒಂದು ಕವಿತೆಯನ್ನು ಕಳಿಸಿ ಓದೋಣ.’ ಎಂದು ಪ್ರತಿಕ್ರಿಯಿಸಿ ಅವರ ಕವಿತೆಗಾಗಿ ಕಾಯುತ್ತಾ ಕುಳಿತೆ.