”ಮಾಳದಂತಹ, ಕುದುರೆಮುಖದಂತಹ ಕಾಡುಗಳಲ್ಲಿ ಪ್ರಕೃತಿ ಹೇಗೆ ಕಾಣಿಸುತ್ತದೆ? ಕಾಡು ಹೇಗೆ ನಗುತ್ತದೆ? ಹರಿಯುತ್ತಿರುವ ನದಿಯ ಸೊಗಸು ಎಂಥದ್ದು? ಎನ್ನುವುದನ್ನು ಯಾವ ಮಹಾ ಸಾಹಿತ್ಯಗಳೂ ಹಿಡಿದಿಡಲು ಸಾಧ್ಯವೇ ಇಲ್ಲ.ಬಿಸಿಲುಗಾಲ, ಮಳೆಗಾಲ, ಮಂಜಿನಗಾಲ ಎಲ್ಲವೂ ಜೊತೆಯಾಗಿ ಒಂದೇ ಸೀಟಿನಲ್ಲಿ ಕೂತು ಜಗತ್ತು ನೋಡುತ್ತಿರುವ ಆ ಕ್ಷಣವೇ ದಿವ್ಯ ಅನ್ನಿಸುತ್ತದೆ ನಂಗೆ.ಆ ದಿವ್ಯ ಕ್ಷಣವನ್ನು ನೋಡಲು ಮಾಳದಂತಹ ಕಾಡದಾರಿಯನ್ನು ಶ್ರಾವಣದ ಮಧ್ಯಾಹ್ನದ ವೇಳೆಗೆ ಹೊಕ್ಕಿಬಿಡಬೇಕು”
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಒಂಬತ್ತನೆಯ ಕಂತು.

 

ಮಾಳ ಕಾಡಿನ ಹಿರಿಯ ಜೀವ ಶಂಕರ ಜೋಶಿಯವರು ತೀರಿಕೊಂಡ ಬಳಿಕ ಮಾಳ ಕಾಡಿನತ್ತ ನಾವು ಹೋಗಿರಲಿಲ್ಲ. ಆಗಸ್ಟ್ ತಿಂಗಳ ಭಯಂಕರ ಮಳೆಗೆ ಅಲ್ಲಿಗೆ ಹೋದರೆ, ಊರಿಗೆ ಊರೇ ಆ ಮಳೆಯಲ್ಲಿಯೇ ಕರಗಿಹೋದಂತೆ ತೆಪ್ಪಗಿರುತ್ತಿತ್ತು, ಮಳೆಯ ದೊಡ್ಡ ದೊಡ್ಡ ಹನಿಗಳ ಸದ್ದು ಮಾತ್ರ ಕೇಳಿಸುತ್ತಿತ್ತು. ಹಾಗೇ ಮಳೆ ಯಾವ ರೀತಿಯಾದರೂ ಬೀಳುತ್ತಿರಲಿ, ಮರದ ಬುಡದಲ್ಲೋ, ಮುದಿ ಬಸ್ಸು ಸ್ಟಾಪಿನ ನೆರಳಲ್ಲೋ ನಿಂತು ಸುಮ್ಮನೇ ಮಾಳದ ಕಾಡಿನ ತುಂಬೆಲ್ಲಾ ಹುಯ್ಯುತ್ತಿರುವ ಮಳೆಯನ್ನೇ ಧ್ಯಾನಿಸುತ್ತ ನಿಂತುಬಿಟ್ಟರೆ, ಆ ಕುಂಬದ್ರೋಣ ಮಳೆಗೆ ಚಂಡಿಯಾಗಿ ಪಿಳಿ ಪಿಳಿ ಕಣ್ಣು ಬಿಡಲೂ ಆಗದೇ, ಅಮ್ಮ ದೀಪಾವಳಿಗೆ ಮೈಗೆಲ್ಲಾ ಎಣ್ಣೆ ಹಚ್ಚಿದಾಗ ಎಣ್ಣೆಯ ಪಸೆಗೆ ಕಣ್ಣು ಒಂಥರಾ ಮಬ್ಬು ಮಬ್ಬು ಆಗುತ್ತದಲ್ಲಾ ಹಾಗಾಗಿಬಿಡುತ್ತಿತ್ತು ಕುದುರೆಮುಖದ ಗಿರಿಶ್ರೇಣಿ. ಅದಕ್ಕೆಂದೇ ಒಮ್ಮೆ ಚೂರು ಮಳೆ ಬಿಡಲಿ ಆ ಬಳಿಕ ಹೋದರಾಯಿತು ಅಂತ ಕಾಯುತ್ತಿದ್ದೆ.

ಮೊನ್ನೆ ಮಾಳ ಕಾಡಿನ ದಾರಿ ಹಿಡಿದಾಗ, ಆಕಾಶದ ನೀಲಿ ಮೋಡದ ತುಂಡುಗಳು ಹಾರುತ್ತ, ಹಾರುತ್ತ ಸಹ್ಯಾದ್ರಿಯ ತುದಿಗೇರಿ ಅಲ್ಲೊಂದು ಹಣೆಬೊಟ್ಟಿನಂತೆ ಕೂತುಬಿಟ್ಟು, ಇಡೀ ಕಾಡಿನ ಅಂದ ನೋಡುತ್ತಿತ್ತು, ಇಷ್ಟು ದಿನ ಮಳೆಯಿಂದಲೇ ತೊಯ್ದು ತೊಪ್ಪೆಯಾಗಿದ್ದ ಮಾಳ ಕಾಡಿನ ಒಂದಷ್ಟು ಮರಗಳು ಮೈ ಮುರಿದುಕೊಂಡು, ಇನ್ನೊಂದಿಷ್ಟು ಮರಗಳು ಗಾಳಿ ಬೀಸಿಕೊಂಡು, ನೀಲ ಮೋಡಗಳ ಜೊತೆ ಮಾತಿಗಿಳಿಯಲು ತಯಾರಿ ಮಾಡಿತ್ತು. ಬೊಳ್ ಬೊಳ್ ಎಂದು ಸುರಿವ ಮಳೆಗಾಲಕ್ಕೆ ಯಾರು ಏನೇ ಬೈಯಬಹುದು, ಆದರೆ ಆ ಮಳೆ ಮಾತ್ರ ಚೆಂದವೇ ಬಿಡಿ. ಶ್ರಾವಣ ಎಲ್ಲಾ ಕಳೆದು, ಬಾನೆಲ್ಲಾ ತಿಳಿ ನೀಲಿ ಮೋಡಗಳಿಂದಲೇ ಹಿತವಾಗಿ ಕಾಣುತ್ತದಲ್ಲ, ಅದು ಎಷ್ಟು ಮುದ್ದು. ಆ ವರೆಗೆ “ಮಳೆರಾಯನ ಮುಂದೆ ನನ್ನದೆಂತ ಚೆಂದ ಕರ್ಮದ್ದು” ಅಂತ? ಕಕ್ಕುಲಾತಿಯಿಂದ ಎಷ್ಟು ಬೇಕೋ ಅಷ್ಟೇ ಅರಳಿಕೊಂಡಿರುತ್ತಿದ್ದ ದಾಸವಾಳ, ಶಂಖ ಪುಷ್ಪ, ಸುಗಂಧಿ ಹೂವುಗಳ ಮೇಲೆ ಈ ಶ್ರಾವಣ ಕಳೆದ ಹಗಲಿನಲ್ಲಿ ಮಳೆಗಾಲದ ಸೂರ್ಯ ನಯವಾಗಿ ಸೋಕಿದರೂ ಸಾಕು, ದಾಸವಾಳ ಪಾರಿವಾಳದಂತೆ ರೆಕ್ಕೆಬಡಿದುಕೊಳ್ಳುತ್ತದೆ, ಸುಗಂಧಿ ಹೂವು ಮತ್ತಷ್ಟು ಕಂಪು ಸೂಸಿ ಕಾಡದಾರಿಯಲ್ಲೆಲ್ಲಾ ಕಾಡುತ್ತದೆ, ಶಂಖ ಪುಷ್ಪ ಒಲವಿನ ಶಂಖ ಊದುತ್ತದೆ, ಏನೇ ಹೇಳಿ ಈ ಮಳೆಗಾಲದಲ್ಲಿಯೂ ಮೂಡುವ ಎಳೆ ಬಿಸಿಲಿಗೂ ಎಷ್ಟೊಂದು ಚೆಂದವಿದೆ.

ಮಳೆ ಪೂರ್ತಿ ಬಿಟ್ಟಿಲ್ಲ, ಚಳಿ, ಬಿಸಿಲು ಇನ್ನೂ ಪೂರ್ತಿ ಹಿಡಿದಿಲ್ಲ, ಎನ್ನುವ ಸ್ಥಿತಿಯಲ್ಲಿಯೇ ಪ್ರಕೃತಿ ಮೋಹಕವಾಗಿ ಕಾಣಿಸುತ್ತದೆ. ಅದೂ ಮಾಳದಂತಹ, ಕುದುರೆಮುಖದಂತಹ ಕಾಡುಗಳಲ್ಲಿ ಪ್ರಕೃತಿ ಹೇಗೆ ಕಾಣಿಸುತ್ತದೆ? ಕಾಡು ಹೇಗೆ ನಗುತ್ತದೆ? ಹರಿಯುತ್ತಿರುವ ನದಿಯ ಸೊಗಸು ಎಂಥದ್ದು? ಎನ್ನುವುದನ್ನು ಯಾವ ಮಹಾ ಸಾಹಿತ್ಯಗಳೂ ಹಿಡಿದಿಡಲು ಸಾಧ್ಯವೇ ಇಲ್ಲ. ಬಿಸಿಲುಗಾಲ, ಮಳೆಗಾಲ, ಮಂಜಿನಗಾಲ ಎಲ್ಲವೂ ಜೊತೆಯಾಗಿ ಒಂದೇ ಸೀಟಿನಲ್ಲಿ ಕೂತು ಜಗತ್ತು ನೋಡುತ್ತಿರುವ ಆ ಕ್ಷಣವೇ ದಿವ್ಯ ಅನ್ನಿಸುತ್ತದೆ ನಂಗೆ. ಆ ದಿವ್ಯ ಕ್ಷಣವನ್ನು ನೋಡಲು ಮಾಳದಂತಹ ಕಾಡದಾರಿಯನ್ನು ಶ್ರಾವಣದ ಮಧ್ಯಾಹ್ನದ ವೇಳೆಗೆ ಹೊಕ್ಕಿಬಿಡಬೇಕು.

ಶ್ರಾವಣ ಎಲ್ಲಾ ಕಳೆದು, ಬಾನೆಲ್ಲಾ ತಿಳಿ ನೀಲಿ ಮೋಡಗಳಿಂದಲೇ ಹಿತವಾಗಿ ಕಾಣುತ್ತದಲ್ಲ, ಅದು ಎಷ್ಟು ಮುದ್ದು. ಆವರೆಗೆ “ಮಳೆರಾಯನ ಮುಂದೆ ನನ್ನದೆಂತ ಚೆಂದ ಕರ್ಮದ್ದು” ಅಂತ? ಕಕ್ಕುಲಾತಿಯಿಂದ ಎಷ್ಟು ಬೇಕೋ ಅಷ್ಟೇ ಅರಳಿಕೊಂಡಿರುತ್ತಿದ್ದ ದಾಸವಾಳ, ಶಂಖ ಪುಷ್ಪ, ಸುಗಂಧಿ ಹೂವುಗಳ ಮೇಲೆ ಈ ಶ್ರಾವಣ ಕಳೆದ ಹಗಲಿನಲ್ಲಿ ಮಳೆಗಾಲದ ಸೂರ್ಯ ನಯವಾಗಿ ಸೋಕಿದರೂ ಸಾಕು, ದಾಸವಾಳ ಪಾರಿವಾಳದಂತೆ ರೆಕ್ಕೆಬಡಿದುಕೊಳ್ಳುತ್ತದೆ, ಸುಗಂಧಿ ಹೂವು ಮತ್ತಷ್ಟು ಕಂಪು ಸೂಸಿ ಕಾಡದಾರಿಯಲ್ಲೆಲ್ಲಾ ಕಾಡುತ್ತದೆ.

ಕುದುರೆಮುಖದ ಕೋಟೆಯಂತೆ ನಿಂತಿದ್ದ ಗಿರಿಶ್ರೇಣಿಗಳು ಕಣ್ಣಿಗೆ ಬಿದ್ದಾಗ, ಪೂರ್ತಿ ಮಧ್ಯಾಹ್ನವೂ ಅಲ್ಲದ, ಸಂಜೆಯೂ ಅಲ್ಲದ ಹೊತ್ತು. ಎಳೆ ಬಿಸಿಲು ಹಸಿರಿನ ಯಾವುದೋ ಬಂಡೆಯೊಂದಕ್ಕೆ ಬಡಿದು, ನೀರವ ಕಾಡಿನಲ್ಲಿ ಸಾವಿರ ಬೆಳಕಿನ ಪುಂಜ ಅದಾಗಲೇ ಹುಟ್ಟಿತ್ತು. ನಿಶ್ಕಲ್ಮಶ ಆಗಸದಲ್ಲಿ ಉದ್ದ ಕತ್ತಿನ ಬೆಳಕ್ಕಿಗಳ “ಕೀಂವ್ ಚೀಂವ್ ಹಾಡೊಂದು ಮೂಡಿ ಅವುಗಳ ಕುಟುಂಬದ ಸದಸ್ಯರೆಲ್ಲಾ ಕೈಕೈ ಹಿಡಿದುಕೊಂಡು ಮೋಡಗಳ ವರ್ಷಾವಧಿ ಜಾತ್ರೆಗೆ ಹೊರಟಂತಿತ್ತು, ಸ್ವರ್ಣ ನದಿ ಅವುಗಳ ಪ್ರತಿಬಿಂಬಗಳನ್ನು ಹಿಡಿದು, ಒಳಗೊಳಗೇ ಸುಖಿಸಿ ಹಾಗೇ ತಣ್ಣಗೇ ಹರಿದು ಸಹ್ಯಾದ್ರಿಯತ್ತ ಜಾರಲು ಅರಳುಗಣ್ಣುಬಿಡುತ್ತ ನೋಡುತ್ತಿದ್ದಳು. ಬದುಕಿನ ಆಗಸಕ್ಕೆ ಅನಂತದತ್ತ ಹಾರಿಸುವ ಎಷ್ಟೊಂದು ರೆಕ್ಕೆಗಳಿವೆಯಲ್ಲವಾ? ಎಷ್ಟೊಂದು ಬಣ್ಣಗಳಿವೆ ಅಲ್ಲವಾ ಅಂತ ಈ ಕಾಡಿಗೆ ಬಂದಾಗೆಲ್ಲ ಅನ್ನಿಸದೇ ಇರುತ್ತಿರಲಿಲ್ಲ. ಬದುಕು ಎಷ್ಟೊಂದು ಜೀವಂತ, ಇಲ್ಲಿ ಎಷ್ಟೊಂದು ನೋಟಗಳಿವೆ, ಎಷ್ಟೊಂದು ಸ್ವಚ್ಛಂದತೆ ಇದೆ, ಅಂತ ಅರೆಕ್ಷಣದಲ್ಲಿಯೇ ಹೇಳುವ ಶಕ್ತಿ, ಪುಟ್ಟ ಊರಿನ ಕಾಡಿಗೆ, ಮೌನಕ್ಕೆ, ಎಲ್ಲವನ್ನೂ ತಗೊಂಡು ಹರಿಯುತ್ತಿರುವ ಅಲ್ಲಿಯ ನದಿಗೆ, ಸಕಲ ಜೀವ ಬಳ್ಳಿಗೆ, ಅಲ್ಲೆಲ್ಲೋ ತೃಪ್ತಿಯ ನಿಟ್ಟುಸಿರಿಡುತ್ತ ಬದುಕುವ ಒಂದಷ್ಟು ಜೀವಗಳ ಕಣ್ಣಿನಲ್ಲಿಯೇ ಇದೆ ಅಂತನ್ನಿಸುವ ಕ್ಷಣಗಳಲ್ಲಿ ನಾನು ಕಾಡಿನಂತೆಯೇ ಹಸಿರಾಗಿ ಹೋಗುತ್ತೇನೆ.

ಮಾಳ ಪರಶುರಾಮ ದೇವಸ್ಥಾನಕ್ಕೂ ಮೊದಲು ಸಿಗುವ ಹಂಚಿನ ಹಳೆ ಮನೆ, ನಮ್ಮನ್ನು ಯಾವತ್ತೂ ಸೆಳೆಯುತ್ತಿತ್ತು. ಭೂಮಿಯಿಂದ ಎಷ್ಟೋ ಅಡಿಯಲ್ಲಿ ಇದೆ ಅಂತನ್ನಿಸುವ ಆ ಮನೆ ನಿಬಿಡವಾಗಿ ನಿಂತಿರುವ ಪಶ್ಚಿಮಘಟ್ಟದ ಕೆಳಗೆ ಆಗತಾನೇ ಪಚ್ಚೆ ಬಣ್ಣದ ರಗ್ಗು ಹೊದ್ದುಕೊಂಡಿರುವಂತಿದೆ. ಸುತ್ತಲೂ ಅಡಿಕೆ ತೋಟಗಳು ಗಾಳಿಗೂ ಮೈಯೊಡ್ಡಿಕೊಂಡು, ಬೆಟ್ಟದಿಂದ ಉದುರುವ ಮಳೆಯನ್ನು, ಜಿಗ್ ಅಂತ ಹೊಡೆಯುತ್ತಿರುವ ಬಿಸಿಲನ್ನು ತಿಂದುಕೊಂಡು, ಸುಖವಾಗಿ ಬದುಕುತ್ತಿರುವಂತೆ ಕಾಣಿಸುತ್ತಿತ್ತು. ಆ ದಾರಿಯಲ್ಲಿ ನಿಂತುಕೊಂಡು ಮೊಬೈಲು ತೆಗೆಯೋದಕ್ಕೆ, ಮಾತನಾಡುವುದಕ್ಕೆ, ಕಿರುಚುವುದಕ್ಕೆ ಯಾವುದಕ್ಕೂ ಮನಸ್ಸು ಬರುವುದಿಲ್ಲ. ಸುಮ್ಮನೇ ಅಲ್ಲಿ ನಿಂತುಕೊಂಡು ಕಣ್ಣಿಗೆ ಕಾಣುವ ಬೆಟ್ಟ, ಆ ಮನೆ, ಆ ತೋಟ ನೋಡುತ್ತಾ ನಿಂತರೆ, ಕಣ್ಣಿಗೆ, ಮನಸ್ಸಿಗೆ ಬರೀ ಅಷ್ಟೇ ಕಾಣಿಸುವುದಿಲ್ಲ. ನಾವಿನ್ನೂ ಕಂಡಿರದ ಅಗಾಧ ಮೌನ, ಶಾಂತಿ, ಈವರೆಗೂ ಕೇಳದ ಪ್ರಕೃತಿಯ ಪುಟ್ಟ ಪುಟ್ಟ ಸಲ್ಲಾಪಗಳು, ಗಾಳಿಯ ಆಲಾಪಗಳು, ಕಾಡು ತಮ್ಮಷ್ಟಕ್ಕೇ ಮಾಡುತ್ತಿರುವ ಕಲಾಪಗಳು ಕಾಣಿಸುತ್ತವೆ ಮತ್ತು ಕೇಳಿಸುತ್ತವೆ.

ಎಂದಿಗಿಂತಲೂ ಇವತ್ತೂ ಚೆಂದವಾಗಿ ಕಾಣುತ್ತಿದ್ದ ಆ ಮನೆಯನ್ನೂ, ಬೆಟ್ಟವನ್ನೂ ನಾವು ನೋಡುತ್ತ ನಿಂತಿರುವಾಗ ಕೆಳಗಿನ ಆ ಮನೆಯಲ್ಲಿ ಪುಟ್ಟ ಹುಡುಗಿಯೊಬ್ಬಳು ಆಟವಾಡುತ್ತಿದ್ದದ್ದು ಕಂಡಿತು. ಮೇಲೆ ನಿಂತಿದ್ದ ನಮ್ಮನ್ನು ನೋಡಿದ್ದೇ, ಆಟ ನಿಲ್ಲಿಸಿ ಸುಮ್ಮನೇ ನಕ್ಕಳು, ನನ್ನ ಕೈಯಲ್ಲಿದ್ದ ಕ್ಯಾಮರಾ ನೋಡಿ ಆ ಪುಟ್ಟಿಗೆ ಅವಳ ಫೋಟೋ ತೆಗೆಯುತ್ತಿದ್ದೇನೆ ಅನ್ನಿಸಿತೋ ಏನೋ? ಆಕೆ ಇನ್ನಷ್ಟು ಅಂದವಾದಳು, ನಕ್ಕಳು, ಎಲ್ಲವನ್ನೂ ನೋಡಿ ಸಹಜದಿಂದ ನಗುವ, ಸ್ಪಂದಿಸುವ ಮಕ್ಕಳ ಗುಣಕ್ಕೂ, ತನ್ನ ಪಾಡಿಗೇ ತಾನೇ ಹರಿಯುವ, ಮಿಂಚುವ ಸ್ವರ್ಣ ನದಿಗೂ ಎಷ್ಟೊಂದು ಹೋಲಿಕೆ. ಆ ಪುಟ್ಟಿಯ ಮನೆಯಲ್ಲಿಯೂ ಬದುಕಿನ ಸಹಜತೆ ಸಿಕ್ಕಬಹುದು, ಸಿಗದಿದ್ದರೂ ತೊಂದರೆಯಿಲ್ಲ, ಮನೆಗೆ ಯಾರಾದರೂ ಬಂದರೆ ಮಕ್ಕಳಷ್ಟು ಸಂಭ್ರಮಪಡುವವರು ಬೇರ್ಯಾರೂ ಇಲ್ಲ. ಅಷ್ಟು ಸಂಭ್ರಮವಾದರೂ ಆ ಪುಟ್ಟಿಯದ್ದಾಗಲಿ ಎಂದು ಯೋಚಿಸುತ್ತ ಆ ಮನೆಯತ್ತ ಇಳಿದೆವು. ಮನೆಯ ಗೇಟು ತೆರೆದರೆ ಇಳಿಜಾರಾಗಿದ್ದ ದಾರಿಯಲ್ಲಿ ಉದ್ದಕ್ಕೆ ಚೆಲ್ಲಿದ್ದ ಬಿಸಿಲ ತುಣುಕುಗಳ ನಡುವೆ ಹುಲ್ಲಿನ ಹಾಸು, ಅಷ್ಟೊತ್ತು ದೂರದಿಂದ ಒಂಥರಾ ಕಾಣುತ್ತಿದ್ದ ಆ ಮನೆ ಈಗ ಒಮ್ಮೆಲೇ ಮೈಗೆ ಒರಗಿ ಕೂತ ಹುಡುಗಿಯಂತೆ ಅನ್ನಿಸುತ್ತಿತ್ತು. ನಾವು ಅಂಗಳದತ್ತ ಬರುತ್ತಿರುವುದನ್ನೇ ಕುತೂಹಲದಿಂಧ ನೋಡುತ್ತಿದ್ದ ಆ ಪುಟ್ಟಿ, ಅವಳಮ್ಮನಿಗೆ ಸುದ್ದಿ ಮುಟ್ಟಿಸಿದಳು.

ಒಳಗಿನಿಂದ ಅರೆಕ್ಷಣದಲ್ಲೇ ವಯಸ್ಸಾದ ಅಜ್ಜಿ ಮತ್ತು ಈ ಕಾಲದವರಂತೆ ಕಾಣುತ್ತಿದ್ದ ಹೆಂಗಸು ಹೊರಕ್ಕೆ ಬಂದು, “ನಾವ್ಯಾರು” ಅಂತ ಕಣ್ಣಲ್ಲೇ ಪ್ರಶ್ನಿಸುತ್ತ ನಿಂತಿದ್ದರು. ನಮ್ಮ ಪರಿಚಯ ಹೇಳಿ, ನಾವು ಸುಮ್ಮನೇ ಸುತ್ತಲು ಬಂದದ್ದೆಂದೂ, ಈ ಮನೆ ತುಂಬಾ ದಿನದಿಂದ ನೋಡುತ್ತಿರುವೆವೆಂದೂ, ಇನ್ನಷ್ಟು ನೋಡುವ ಮನಸ್ಸಾಗಿ ಇತ್ತ ಬಂದೆವೆಂದೂ ಹೇಳಿದೆವು. ಅಷ್ಟೊತ್ತಿಗೆ ತುಸು ದೂರದಲ್ಲಿದ್ದ ಅಡಿಕೆ ಸಾಲುಗಳ ನಡುವಿನಿಂದ ಪರ ಪರ ಯಾರೋ ನಡೆದುಕೊಂಡು ಬರುವಂತೆ ಸದ್ದಾಗಿತು. ಕಾಡು ಕೋಣ ಏನಾದರೂ ಬಂತಾ? ಅಂತ ನಾನು ಅತ್ತ ದುರುದುರು ನೋಡುತ್ತಿದ್ದಾಗ, “ಅದು ನನ್ನ ಮಗ, ಈ ತೋಟ ನಮ್ಮದೇ, ಒಂದಷ್ಟು ಎಕ್ರೆ ತೋಟ ಉಂಟು ನಮ್ಗೆ, ಆದ್ರೆ ನೋಡಿ ಈ ಸಲ ಮಳೆ ಜಾಸ್ತಿಯಾಗಿ ಕೊಳೆ ರೋಗ ಬಂದು ಅಡಿಕೆ ಎಲ್ಲಾ ಕೊಚ್ಚಿ ಹೋಗಿದೆ” ಎಂದರು ಆ ಅಜ್ಜಿ. ಅಲ್ಲೇ ನಿಂತಿದ್ದ ಅವರ ಸೊಸೆ, ನಮ್ಮನ್ನು ಈ ಹಿಂದೆ ಮಾಳದಲ್ಲಿ ಸುತ್ತುತ್ತಿದ್ದಾಗ ನೋಡಿರುವುದಾಗಿಯೂ ಗುರುತು ಹಿಡಿದರು. ಅಷ್ಟೊತ್ತಿಗೆ ಅಡಿಕೆ ಮರದ ನಡುವಿನಿಂದ ಬರುತ್ತಿದ್ದ ಮನೆಯ ಯಜಮಾನ, ತಲೆಯಲ್ಲಿ ಹುಲ್ಲಿನ ದೊಡ್ಡ ಬುಟ್ಟಿ ಹೊತ್ತುಕೊಂಡು ಚೂರು ಕತ್ತು ವಾರೆ ಮಾಡಿ, ನಮ್ಮನ್ನು ನೋಡಿದಂತೆ ಮಾಡಿ, ಸೀದಾ ಹುಲ್ಲಿನ ಬುಟ್ಟಿಯನ್ನು ಒಲೆಯತ್ತ ರಾಶಿ ಹಾಕಿದರು.

ಮೇಲೆ ನಿಂತಿದ್ದ ನಮ್ಮನ್ನು ನೋಡಿದ್ದೇ, ಆಟ ನಿಲ್ಲಿಸಿ ಸುಮ್ಮನೇ ನಕ್ಕಳು, ನನ್ನ ಕೈಯಲ್ಲಿದ್ದ ಕ್ಯಾಮರಾ ನೋಡಿ ಆ ಪುಟ್ಟಿಗೆ ಅವಳ ಫೋಟೋ ತೆಗೆಯುತ್ತಿದ್ದೇನೆ ಅನ್ನಿಸಿತೋ ಏನೋ? ಆಕೆ ಇನ್ನಷ್ಟು ಅಂದವಾದಳು, ನಕ್ಕಳು, ಎಲ್ಲವನ್ನೂ ನೋಡಿ ಸಹಜದಿಂದ ನಗುವ, ಸ್ಪಂದಿಸುವ ಮಕ್ಕಳ ಗುಣಕ್ಕೂ, ತನ್ನ ಪಾಡಿಗೇ ತಾನೇ ಹರಿಯುವ, ಮಿಂಚುವ ಸ್ವರ್ಣ ನದಿಗೂ ಎಷ್ಟೊಂದು ಹೋಲಿಕೆ.

ಮನೆಯವರಿಂದ ನಮ್ಮ ಪರಿಚಯ ತಿಳಿದು, ಚೂರು ಚೂರೇ ನಕ್ಕು, ಅಡಿಕೆ ತೋಟದ ಪ್ರವರ ಹೇಳಿಕೊಂಡರು, “ಎಂತ ಮಾಡುದು ಹೇಳಿ? ಅಡಿಕೆ ನಂಬಿ ಕೂರೋದೇ ಕಷ್ಟ ಈ ಹಳ್ಳಿಯಲ್ಲಿ, ಆದ್ರೂ ಮಾಡಲೇಬೇಕು, ನನ್ನ ಪಾಡಿಗೇ ನಾನು ಮಾಡ್ಕೊಂಡು ಹೋಗೋದು ಅಷ್ಟೆ. ಕಾಳುಮೆಣಸು, ಬಾಳೆ, ತೆಂಗು ಒಂದಷ್ಟಿದೆ. ಹೇಗೋ ನಡಿಯುತ್ತದೆ” ಎಂದು ಗಂಭೀರವಾಗಿಯೇ ಹೇಳಿದರು. ತೋಟದಲ್ಲಿ ಸಹ್ಯಾದ್ರಿಯ ಗಾಳಿಗೆ ಅಡಿಕೆ ಮಡಲೊಂದು ಮಗು ಅಂಗಳದಲ್ಲಿ ಬಿದ್ದಾಗ ಸಣ್ಣದ್ದೊಂದು ಶಬ್ದವಾಗುವ ಹಾಗೆ ಬಿತ್ತು. ಮನೆ ಯಜಮಾನ ಕೆಲಸ ಮಾಡಿ ಸುಸ್ತಾಗಿದ್ದರೋ ಏನೋ? ಅವರ ಮುಖದಲ್ಲಿ ಶ್ರಮದ ಗುರುತಾಗಿ ಬೆವರ ಹನಿಗಳು ಮೀಯುತ್ತಿದ್ದವು. ಒಂದಷ್ಟು ಒಣಹುಲ್ಲುಗಳು ಮೈ ತುಂಬಾ ಚೆಲ್ಲಿದ್ದವು. ತೋಟ, ಕಾಡು, ಈ ಹಳೆ ಮನೆ ಇವೆಲ್ಲ ಅವರಿಗೆ ಸಹಜವಾಗಿದ್ದರಿಂದಲೋ ಏನೋ,ಅದರ ಬಗ್ಗೆ ಜಾಸ್ತಿ ಮಾತಾಡಲಿಲ್ಲ. “ಆದರೆ ತೋಟ ನಿಮಗೆಲ್ಲ ನೋಡಿಕೊಂಡು ಹೋಗಲು ಚೆಂದ, ಕಾಡಿಗೆ ಬಂದು ದೊಡ್ಡದಾಗಿ ಫೋಟೋ ತಕ್ಕೊಂಡು ಹೋಗಿಬಿಡ್ತೀರಾ ಅಷ್ಟೆ. ಆದರೆ ಇಲ್ಲಿ ತ್ರಾಸದಿಂದ ಬದುಕುವವರು ನಾವು, ಫೋಟೋದಲ್ಲಿರುವ ಚಂದ, ನಿಜವಾಗಿ ಇಲ್ಲಿ ಬದುಕುವಾಗ ಕ್ರೂರ ಅನ್ನಿಸುತ್ತೆ, ಭಾರ ಅನ್ನಿಸುತ್ತೆ, ಅಂತದ್ದೇನಿದೆ ಇಲ್ಲಿ?” ಅನ್ನೋ ಭಾವ ಅವರ ಆಡದ ಮಾತುಗಳಲ್ಲಿತ್ತೋ ಅಂತೆನಿಸಿ ತಣ್ಣಗಾದೆ. ಆದರೂ ಅವರು ನಮ್ಮ ಭಾವಗಳಿಗೆ ಸ್ಪಂದಿಸಿದರು. “ಮನೆಗೆ ಬನ್ನಿ” ಎಂದು ಮನೆ ತೋರಿಸಿದರು. ಅಲ್ಲೇ ನಿಂತಿದ್ದ ಅವರ ಹೆಂಡತಿಯ ಮುಖದಲ್ಲಿ ಒಂಥರಾ ಸ್ನೇಹಮಯ ಹೊಳಪಿತ್ತು. ಯಾರೋ ಮನೆಗೆ ಬಂದಿದ್ದಾರೆ ಅನ್ನುವ ಖುಷಿಯಿಂದಲೇ ಅವರು ಸ್ವಾಗತಿಸಿದರು.

ಸುತ್ತಮುತ್ತಲೂ ಜಗಲಿ ಇರುವ ದೊಡ್ಡ ಮನೆ, ಅಂಗಳದಲ್ಲೆಲ್ಲಾ ಹುಲ್ಲು ಹಾಸಿಗೆ, ಪುಟ್ಟ ಬಾಗಿಲು ನೂಕಿ, ಕತ್ತು ಗೋಡೆಗೆ ತಾಗದಂತೆ ಕತ್ತು ಬಗ್ಗಿಸಿ ಒಳಹೊಕ್ಕು, ಮತ್ತೆ ಕತ್ತೆತ್ತಿದರೆ ಮನೆ ಯಾವುದೋ ಪ್ರಾಚೀನ ಕಾಲದ ಅರಮನೆಯಂತೆ ಕಾಣುತ್ತಿತ್ತು. ಮನೆ ಮಧ್ಯದಲ್ಲಿದ್ದ ತುಳಸಿಕಟ್ಟೆಯ ಮೇಲೆ ಸಂಜೆ ಸೂರ್ಯನ ಕಟ್ಟೆಪೂಜೆ, ನಿಬಿಢ ಕಂಬಗಳ ಸಂದಿನಲ್ಲಿ ಯಾವುದೋ ಪುಟ್ಟ ಮಗು ಬಿಡಿಸಿದ ಚಂದದ್ದೊಂದು ಚಿತ್ರ, ಗೋಡೆಯ ಮೇಲೆ ಸಾಲು ಸಾಲಾಗಿ ಕೂತ ಹಿರಿಯರ ಚಿತ್ರಪಟಗಳು, ಮತ್ತೊಂದಿಷ್ಟು ಹಳೆ ಸರಕು, ಅರ್ಧದಲ್ಲೇ ಸುಲಿದಿಟ್ಟ ಅಡಿಕೆ ರಾಶಿ, ಗಂಟೆಗೊಮ್ಮೆ ದೊಡ್ಡದಾಗಿ ಮನೆ ಮಕ್ಕಳಂತೆ ಕೂಗುವ ಗೋಡೆಗಡಿಯಾರ, ಮೌನದಲ್ಲೇ ಸಹನೀಯವಾಗುವ ಆ ಹಳೆಯ ಮಹಡಿ, ಕಿಟಕಿಯ ಜಂತಿ, ಹೊಸ್ತಿಲು, ಒಳಬಾವಿ ಎಲ್ಲವೂ ಆ ಸಂಜೆ ನಮ್ಮ ಜೊತೆ ಆವರೆಗೂ ಯಾರೂ ಮಾತಾಡದೇ ಇದ್ದುದನ್ನು ಮೌನದಲ್ಲಿಯೇ ಹೇಳುತ್ತಿತ್ತು. ಆ ಮನೆ ಸೊಸೆ ನಗುಮೊಗದಿಂದಲೇ ಮಾತಾಡುತ್ತಿದ್ದರು. ಆದರೂ ಅವರ ಪಟಪಟ ಕನ್ನಡ ಕೇಳಿ “ಎಲ್ಲಿ ನಿಮ್ಮ ತವರೂರು”ಎಂದೆ. ಅವರು ನಗುತ್ತ ಮೈಸೂರೆಂದರು.

(ಚಿತ್ರಗಳು: ಪ್ರಸಾದ್ ಶೆಣೈ)

ಹಾಗೇ ಮಾತಾಗುತ್ತ ಮೈಸೂರಿನ ಮಳೆ, ಮಾಳದ ಮಳೆ, ದೊಡ್ಡ ಪಟ್ಟಣದ ಬದುಕು, ಮಾಳದ ಕಾಡಿನ ಬದುಕು ಅಂತೆಲ್ಲಾ ಮಾತಾಡಿದೆವು.”ನಂಗೆ ಮಾಳವೇ ಒಂಥರಾ ಇಷ್ಟವಾಗಿದೆ ಈಗೀಗ, ಮದುವೆಯಾದ ಹೊಸತರಲ್ಲಿ ಇಲ್ಲಿ ಬಂದಾಗ ಇಲ್ಲಿನ ದೊಡ್ಡ ಮಳೆ, ಕಾಡಿನ ಗವ್ವೆನ್ನುವ ಮೌನ, ಇವೆಲ್ಲ ವಿಚಿತ್ರ ಅನ್ನಿಸುತ್ತಿತ್ತು, ಆದರೆ ಕೆಲವೇ ದಿನ ಅಷ್ಟೆ, ಮತ್ತೆ ಇವೆಲ್ಲ ಆಪ್ತವಾಯ್ತು, ಮಾಳದ ಮೇಲೆ ಪ್ರೀತಿಯಾಯ್ತು” ಎಂದವರು ನಕ್ಕರು. ಮಾಳದ ಕಾಡೂ ನಕ್ಕಂತಾಯ್ತು. ಗಿಜಿಗಿಜಿ ಪೇಟೆಯಿಂದ ಬಂದು, ಅಷ್ಟೊಂದು ಮಾತೇ ಹುಟ್ಟದ ಮಾಳ ಅನ್ನೋ ಮೌನದ ಕೋಟೆಗೆ ಬಂದ ಆ ಹೆಣ್ಣುಮಗಳ ಮನಃಸ್ಥಿತಿ ಹೇಗಿದ್ದಿರಬಹುದು? ಅಂತ ಯೋಚಿಸಿದೆ. “ಕೆ.ಎಸ್.ನ” ಪದ್ಯದಂತೆ “ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತಾಗಿ…ನಾಲ್ಕನೆಯ ಹಗಲು ಹೆರಳಿನ ತುಂಬಾ ದಂಡೆ ಹೂವು ಮುಡಿದು ಆ ಬಳಿಕ ಈಗ ಸಹಜ ಖುಷಿಯಿಂದ ತುಂಬಿಕೊಂಡಿರಬಹುದು ಈ ಹೆಣ್ಣು ಮಗಳು ಅಂತ ಸುಮ್ಮನೇ ಯೋಚಿಸಿದೆ. ಈಗಿನ ಹುಡುಗಿಯರಿಗೆ ಪೇಟೆ ಮೋಹ ಜಾಸ್ತಿ ಹಳ್ಳಿಯೆಂದರೆ ಗೊತ್ತಿಲ್ಲ, ಹಳ್ಳಿಯಲ್ಲಿ ಅವರಿಗೆ ಏನೂ ಕಾಣಲ್ಲ” ಎಂದು ಅಂತಹ ಹುಡುಗಿಯರ ಬಗ್ಗೆ ಬೇಸರ ಪಡುತ್ತಿದ್ದ ನಂಗೀಗ ಈ ಕಾಲದ ಹೆಣ್ಣುಮಗಳು, ಇಂತಹ ಪುಟ್ಟ ಹಸಿರ ಊರಿನಲ್ಲಿ ಬದುಕುತ್ತಿರುವುದು ಖುಷಿ ಕೊಟ್ಟಿತು.

ಹೀಗೊಂದು ಕಾಡು, ಅಲ್ಲೊಬ್ಬಳು ಮಡದಿ, ಸಂತೃಪ್ತಿಯಿಂದ ಬದುಕುವ ಗಂಡ, ಪುಟ್ಟದ್ದೊಂದು ಮನೆ, ನದಿ ನಗುವಂತೆ ಮನೆಯಲ್ಲೊಂದು ಮಗುವಿನ ಕಿಲಕಿಲ ಅರಳುನಗು, ಒಟ್ಟಾಗಿ ಒಂದು ಇಡೀಯಾದ ಖುಷಿ ಬದುಕು, ಇಷ್ಟಿದ್ದರೆ ಎಷ್ಟು ಹಿತವಾಗಿರುತ್ತದಲ್ವಾ ಬದುಕು? ಹೀಗೊಂದು ಬದುಕು ಬದುಕಬೇಕು ಅಂತ ಯಾವತ್ತಿನಿಂದಲೋ ಅನ್ನಿಸುತ್ತಿದ್ದರೂ, ಈಗ ಈ ಹಳೆಮನೆಯಲ್ಲಿ ಕೂತ ಕ್ಷಣಕ್ಕೆ, ಅದು ಇನ್ನಷ್ಟು ಗಾಢವಾಗಿ ಅನ್ನಿಸಲು ಶುರುವಾಯಿತು. ಹೊರಗೆ ಬಾನು ಕಪ್ಪಾಗುತ್ತಿತ್ತು, ಬಿಸಿಲೆಲ್ಲಾ ಕಳೆದು ಸಹ್ಯಾದ್ರಿಯ ನೆತ್ತಿಯಲ್ಲಿ ಮೋಡಗಳು ಒಟ್ಟಾಗಿ, ಇನ್ನೇನು ಮಳೆ ಸುರಿಸಿಯೇ ಬಿಡುವೆವು ಎಂದು ನಿಂತಿದ್ದರಿಂದ, ನಾವೂ ಹಗುರನೇ ಆ ನಿಗೂಢ ಲೋಕದಂತಿದ್ದ ಮನೆಯಿಂದ ಹೊರಡಲು ಅನುವಾದೆವು. “ಇನ್ನೊಮ್ಮೆ ಬನ್ನಿ ಮನೆ ಎಲ್ಲಾ ನೋಡಿಯಾಗಿಲ್ಲ ಇವತ್ತು, ಹಗಲಲ್ಲೇ ಬಂದುಬಿಡಿ” ಎಂದು ನಿಶ್ಕಲ್ಮಶವಾಗಿ ನುಡಿದ ಆ ಮನೆಯ ಸೊಸೆಯ ಕಣ್ಣಲ್ಲಿ ಅಕ್ಕನಂತಹ ಅಕ್ಕರೆ ಉಕ್ಕುತ್ತಿತ್ತು. ಅವರ ಪುಟ್ಟ ಮಗಳಿಗೆ ಟಾಟಾ ಮಾಡುತ್ತ, ಅವರ ಗಂಡನನ್ನೂ ಅತ್ತೆಯನ್ನೂ ಬೀಳ್ಕೊಡುತ್ತ ಹೊರಟಾಗ, ಹರಡಿದ ನೀಲಾಗಸದ ನಡುವೆ ಒಂಟಿ ಹಕ್ಕಿಯೊಂದು ಅರ್ಧ ಚಂದ್ರನನ್ನು ಭೇಟಿಯಾಗಲು ಹೊರಟಂತೆ ಆಕಾಶದಲ್ಲಿ ಕರಗಿಯೇ ಹೋಗಿತ್ತು. ಕಾಡಿನ ವಿಸ್ತಾರದ ಹಸಿರಲ್ಲಿ ಇರುಳಾದರೂ, ಬೆಟ್ಟದ ಅಚಲ ಆಕಾರ ಮಾತ್ರ ಕತ್ತಲಲ್ಲಿಯೂ ಕಾಣುತ್ತಿತ್ತು.