ಸುಮ್ಮನೆ ಅಲ್ಲ

ಒಂದು ಇರುಳನ್ನು
ಮಲಗಿಸುವುದೆಂದರೆ
ಸುಮ್ಮನೆ ಅಲ್ಲ.

ಇನ್ನಿಲ್ಲದಂತೆ ಕಾದಾಡಿ
ಇವನ ಆಚೆಗಟ್ಟಬೇಕು

ಎದೆಗಿಷ್ಟು ದಿಗಿಲು ಹೊದ್ದು
ಮರಕ್ಕೆ ಹಕ್ಕಿಯಾಗುವ ಕನಸುಣಿಸಿ
ಗೆಜ್ಜೆಹುಳುವಿಗೆ ಹಾಡು ಅನ್ನಬೇಕು.

ಬೆಳದಿಂಗಳ ತೊಳೆದು ಹಾಸಿ
ತುದಿ ಚಿವುಟಿ ಚುಕ್ಕಿಗಳ ಚೆಲ್ಲಿ
ಮುಗಿಲಿಗೆ ಮೌನ ಹಚ್ಚಬೇಕು.

ಕೂಸೆಬ್ಬಿಸಿ ರಚ್ಚೆ ಹಿಡಿಸಿ
ಹಾಲುಕ್ಕುವ ಎದೆಯ ತುಟಿಗಿಟ್ಟು
ಜೀವವ ಗಾಡನಿದ್ದೆಗೆ ದೂಡಬೇಕು

ಒಂದು ಇರುಳನ್ನು ಮಲಗಿಸುವುದೆಂದರೆ
ಆ ಅಲ್ಲಿಯ ಅವನೂ
ಈ ಇಲ್ಲಿಯ ನಾನೂ
ಇಡೀ ರಾತ್ರಿ ಎಚ್ಚರಿದ್ದು
ಪಿಸುಗುಡಬೇಕು…

 

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.