ಕಡುನೋವಿನ ಕುರಿತು ಹಾಡೊಂದು ಬರೆಯಬಲ್ಲೆ ಈ ರಾತ್ರಿ..
ಖಾಲಿ ನಿಲ್ದಾಣದ ಕುರಿತು ಬರೆಯಬಲ್ಲೆ ಈ ರಾತ್ರಿ

ಹಾಡು ಹಕ್ಕಿಯ ರೆಕ್ಕೆ ಕತ್ತರಿಸುತಿದೆ ಹಾಳಾದ ಕಡು ಒಲವು
ವಲಸೆ ಹೊರಟವನ ಕುರಿತು ಬರೆಯಬಲ್ಲೆ ಈ ರಾತ್ರಿ

ಎದೆಯ ರುದ್ರಭೂಮಿಯಲ್ಲಿ ಮುಕ್ತಿ ಕಾಣದ ಎಷ್ಟೊಂದು
ಹೃದಯಗಳು..
ಹಚ್ಚಿಕೊಂಡ ನಂಬಿಕೆಯೊಂದು ಚುಚ್ಚಿ ನೋಯಿಸಿದ ಕುರಿತು ಬರೆಯಬಲ್ಲೆ ಈ ರಾತ್ರಿ

ಮಿಲನ ಮುಂಗಾರು, ಚುಂಬನದ ‘ಹನಿ’ಸೋನೆ
ಬೆದೆಗೆ ಬಯಲಾದ ಕಾಯ..
ಭರವಸೆಗಳೆಲ್ಲಾ ಬಸವಳಿದು ಬಳಲಿದ ಕುರಿತು ಬರೆಯಬಲ್ಲೆ ಈ ರಾತ್ರಿ..

 

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.